Friday, August 22, 2008

ಇಂಗು ತಿಂದು ಮಂಗನಾದ ಜಾರ್ಜ್

ಈಗ ಅದುನಿಕ ತಂತ್ರಜ್ನಾನದಿಂದಾಗಿ ಪ್ರಪಂಚದಲ್ಲಿ ನಡೆಯುತ್ತಿರುವ ಎಲ್ಲವನ್ನೂ ಬಲ್ಲೆವು ಅನ್ನುವ ಭ್ರಮೆ ನಮ್ಮದು. ಎಷ್ಟೋ ವಿಚಾರಗಳು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಯುರೋಪಿನಲ್ಲಿರುವ ಜಾರ್ಜಿಯ ಎಂಬ ಪುಟ್ಟ ರಾಷ್ಟ್ರವನ್ನು ತನ್ನ ನೆರೆಯಲ್ಲಿರುವ ರಷ್ಯಾದ ವಿರುದ್ದ ಗುಟ್ಟಾಗಿ ಅಮೇರಿಕ ಹಾಗೂ   ಇಸ್ರೇಲ್  ಜತೆಗೂಡಿ   ಎತ್ತಿಕಟ್ಟುತ್ತಿದೆ.  ಇವೆರಡು ದೇಶಗಳು ಜಾರ್ಜಿಯಾ ಓಲೈಕೆಗೂ ಕಾರಣ ತೈಲ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಲ್ಲ. ಇವರೊಳಗಿನ  ಗೆಳೆತನ   ಎಲ್ಲಿನ ವರೆಗೆಂದರೆ ಇರಾಕಿನಲ್ಲೂ ಅಮೇರಿಕ ಮತ್ತು ಇಂಗ್ಲೇಡಿನ ನಂತರದ ದೊಡ್ಡ ಗಾತ್ರದ ಸೇನೆ ಈ  ಪುಟ್ಟ    ಜಾರ್ಜಿಯ  ದೇಶದ್ದು.

ಮೊನ್ನೆ ಚೀನಾದಲ್ಲಿ ಒಲಂಪಿಕ್ ಉದ್ಘಾಟನಾ ಸಮಾರಂಬವನ್ನು ಪ್ರಪಂಚವೇ ಮೈಮರೆತು ನೋಡುತ್ತಿದ್ದಾಗ ಜಾರ್ಜಿಯ ಒಂದು ಸೇನಾ ಕಾರ್ಯಾಚರಣೆ ನಡೆಸಿತು. ಬಹುತೇಕ ರಷ್ಯನ್ ಮೂಲದ ಜನರಿರುವ ಪ್ರದೇಶವನ್ನು  ಬಲತ್ಕಾರವಾಗಿ  ತನ್ನ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿತು. ಸಾವಿರಾರು   ಜನರನ್ನು ಕೊಂದಿತು. ಕೆಲವು ಸಾವಿರ ನಾಗರಿಕರು ಜೀವ ಉಳಿಸಿಕೊಳ್ಳಲು ರಷ್ಯಕ್ಕೆ ಓಡಿ ಹೋದರು. ಕೂಡಲೇ ಎಚ್ಚೆತ್ತ ರಷ್ಯ ತಮ್ಮವರ ಸಹಾಯಕ್ಕೆ ಪೂರ್ಣ  ಪ್ರಮಾಣದ  ಸೇನೆ ಕಳುಹಿಸಿತು.

ರಾಜ ಕುಮಾರ್ ಸತ್ತ ದಿನದ ಗಲಬೆಯಲ್ಲಿ ತಮ್ಮ ಕೈವಾಡವಿರಲು ತಾವು ಮನೆ ಹೊರಡಲೇ ಇಲ್ಲ ನಮ್ಮ ಡುಮ್ಮ ಸಿಂಗರು ಅಂದು ಹೇಳಿದರಲ್ಲ, ಹಾಗೆ ಈ ದಿನ ಜಾರ್ಜ್ ಬುಷ್ ನಿರಾತಂಕವಾಗಿ     ಚೀನಾದಲ್ಲಿದ್ದರು.   ಕೆಲವು ದಿನ ಅವರು ಮತ್ತು ಅವರ ಸಹಾಯಕರು ಈ   ಯುದ್ದ   ವಿಚಾರದಲ್ಲಿ ತೆಪ್ಪಗಿದ್ದರು. ಏನೂ ಹೆದರಿಕೊಬೇಡಿ ಜತೆಯಲ್ಲಿ ನಾನಿದ್ದೇನೆ ಎಂದು  ಮೊದಲು   ಅಲ್ಲಿನ  ಅದ್ಯಕ್ಷರಿಗೆ    ಮಿಲಿಟರಿ ಕಾರ್ಯಾಚರಣೆ  ಮಾಡಲು   ಹರಸಿದ ನಮ್ಮ ಜಾರ್ಜ್    ಆ  ವೇಳೆಗೆ


ವಾರ ಕಳೆದಾಗ ಜಾರ್ಜಿಯಾ ದೇಶದ ಅದ್ಯಕ್ಷನ ಪರೀಸ್ಥಿತಿ ಕೈಲಾಗದವ ಮೈ ಪರಚಿಸಿಕೊಂಡ ಎಂಬತಾಯಿತು. ಅಲ್ಲಿನ ಮಿಲಿಟರಿಯು ಪೂರ್ತಿ ಪುಡಿಯಾದ ನಂತರ ಸುಮ್ಮನಿರುವುದು ಸರಿಯಲ್ಲ ಅನ್ನಿಸಿದ ಅಮೇರಿಕದ ಜಾರ್ಜ್ ಅವರಿಂದ ರಷ್ಯದ ಪುಟಿನ್ ಅವರಿಗೆ ಫೋನ್. ಏನಯ್ಯಾ , ಒಂದು ಸ್ವತಂತ್ರ ಗಣರಾಜ್ಯವನ್ನು ಅತಿಕ್ರಮಿಸಿದರೆ ........ ಎನ್ನಲು ಆ ಕಡೆಯಿಂದ  ಹಾ ಹಾ      ಜೋಕ್ ಚೆನ್ನಾಗಿದೆ   ಜಾರ್ಜ್   ಎನ್ನುವ ಉತ್ತರ ಬಂತಂತೆ. ಇತ್ತೀಚೆಗೆ ವರೆಗೆ ಸ್ವತಂತ್ರ ದೇಶಗಳಾಗಿದ್ದ ಇರಾಕ್ ಹಾಗೂ ಅಫ್ಘಾನಿಸ್ಥಾನಿನಲ್ಲಿ ಇನ್ನೂ ಕಾರ್ಯಾಚರಣೆ ನಡೆಸುತ್ತಿರುವ ಆಮೇರಿಕಕ್ಕೆ ಹೇಳುವ ನೈತಿಕ ಹಕ್ಕು ??

ಮಾದ್ಯಮದ ಮೇಲಿನ ನಿಯಂತ್ರಣದಿಂದಾಗಿ ಅಮೇರಿಕದ ಹಲವಾರು ಕಿತಾಪತಿಗಳು ಅರ್ಧ ಸತ್ಯಗಳು ಬೆಳಕು ಕಾಣುವುದೇ ಇಲ್ಲ. ರಷ್ಯಾದ ಪ್ರವ್ಡಾ ಪತ್ರಿಕೆಯ ಈ ಜಾರ್ಜ್  ಬುಷ್ ಸಾಹೇಬನಿಗೆ   ಬರೆದ   ಕುಹಕ ಪತ್ರ ಓದಿ ನೋಡಿ.

Tuesday, August 19, 2008

ಫುಕುವೋಕರನ್ನು ನಾ ಕಂಡಂತೆ


ನಿನ್ನೆ ಬೆಳಗ್ಗೆ ನನ್ನ ಸಂಚಾರವಾಣಿಗೆ ಪೈಲೂರರಿಂದ ಒಂದು ಸುದ್ದಿ ಬಂತು. ೯೫ ವರ್ಷ ವಯಸ್ಸಾಗಿದ್ದ ಫುಕುವೋಕರು ಎರಡು ದಿನ ಹಿಂದೆ ಹೋಗಿ ಬಿಟ್ಟರಂತೆ. ಓದಿದ ತಕ್ಷಣ ನನ್ನ ಮನಸ್ಸು ಇಪ್ಪತ್ತೆರಡು ವರ್ಷ ಹಿಂದಕ್ಕೋಡಿತು.

ನಾನು ಫುಕುವೋಕರ ಒಂದು ಹುಲ್ಲಿನ ಕ್ರಾಂತಿ ಓದುವಾಗ ನನ್ನ ಸೈಕಲು ಯಾತ್ರೆಯ ತಯಾರಿಯಲ್ಲಿದ್ದೆ. ಪತ್ರಿಕೆಯಲ್ಲಿ ಪ್ರಕಟವಾದ ವಿಮರ್ಷೆ ಓದಿ ಅಂಚೆ ಮೂಲಕ ಪುಸ್ತಕವನ್ನು ತರಿಸಿ ಓದಿದೆ. ಬಹಳ ಪ್ರಬಾವಿತನಾದೆ ಎನ್ನಬಹುದು. ಆಗ ವರ್ಷದೊಳಗೆ ಅವರನ್ನು ಕಾಣುತ್ತೇನೆ ಎಂದು ಕನಿಸಿನಲ್ಲೂ ಯೋಚಿಸಿರಲಿಲ್ಲ. ಅಫ್ರಿಕಾ ಮೂಲಕ ಯೋರೋಪ್ ಮತ್ತು ವಾಪಾಸು ಎನ್ನುವುದು ನನ್ನ ಮೂಲ ಯೋಜನೆಯಾಗಿತ್ತು.

ಜಪಾನಿನ ಟೋಕಿಯೊದಲ್ಲಿ ಬಂದಿಳಿದಾಗ ಅವರ ಪುಸ್ತಕದಲ್ಲಿ ಹಿಂದೆ ಓದಿದ ಮತ್ಸುಯಾಮ ಪಟ್ಟಣದ ಸಮುದ್ರ ತೀರ ಎಂದಷ್ಟೆ ಸುಳಿವು. ಆದರೂ ಒಂಬೈನೂರು ಕಿಲೋಮೀಟರ್ ಸೈಕಲ್ ತುಳಿದು ಮತ್ಸುಯಾಮ ತಲಪಿ ವಿಚಾರಿದಾಗ ಅವರ ವಾಸ್ತವ್ಯ ಪಟ್ಟಣದ ಹೊರವಲಯದ ಇಯೋ ಎಂಬ ಊರೆಂದು ತಿಳಿಯಿತು. ಅಂತೂ ಹೋಗಿ ಬಾಗಿಲು ತಟ್ಟಿದೆ. ಎದುರಿಗೊಂಡರು.

ಹೆಚ್ಚೇನು ಮಾತುಕಥೆಯ ಮೊದಲೇ ತಮ್ಮ ಸೈಕಲು ಏರಿ ಹಿಂಬಾಲಿಸಲು ಹೇಳಿದರು. ಸುಮಾರು ಎರಡು ಕಿಮಿ ದೂರದ ಗುಡ್ಡದ ಬುಡದಲ್ಲಿ ಸೈಕಲನ್ನು ಗೋಡೆಗೆ ಒರಗಿಸಿದರು. ಮುಂದಿನದು ಕಾಲು ನಡುಗೆ. ಅಲ್ಲಿ ಹಲವು ಕುಟೀರಗಳು. ಆವಾಗ ಅವರ ಗುರುಕುಲ ಬರಿದಾಗಿತ್ತು. ಹಾಗಾಗಿ ನಾನು ಏಕಾಂಗಿಯಾಗಿ ವಾಸ್ತವ್ಯ.

ಆ ವರ್ಷ ಅವರು ಬತ್ತ ಬಿತ್ತನೆ ಅನಂತರ ಅಮೇರಿಕಕ್ಕೆ ಹೋಗಿದ್ದರಂತೆ. ಹಾಗಾಗಿ ನಿರ್ವಹಣೆ ಇಲ್ಲದೆ ಗದ್ದೆ ತುಂಬಾ ಕಳೆಗಳಿದ್ದವು. ಫಸಲು ನಿರ್ಣಯಿಸಲು ಕಷ್ಟ ಎನ್ನುವಂತಿತ್ತು. ಗುಡ್ಡದಲ್ಲಿ ಮಾತ್ರ ಕಿತ್ತಳೆ ಮರಗಳ ನಡುವೆ ನಾವು ಅಗೆದಲ್ಲೆಲ್ಲ ಮೂಲಂಗಿ ಲಬಿಸುತ್ತಿದ್ದವು. ಪಾತ್ರೆ ತೊಳೆಯುವಲ್ಲಿ ನೀರು ನಿಲ್ಲುವುದರ ತಪ್ಪಿಸಲು ಕಾಲುವೆ ಮಾಡಿದಾಗ ಅಡುಗೆಗೆ ದಾರಾಳ ಮೂಲಂಗಿ ಲಬಿಸಿತು.  ಅವರ  ಮಿಶ್ರ   ಕೃಷಿಯಲ್ಲಿ   ಒಟ್ಟು   ಬೆಳೆ  ಖಂಡಿತ  ಹೆಚ್ಚು.        ಆಗ ಜತೆಗೆ ಒಬ್ಬ ಇಂಗ್ಲೀಷ್ ಬಲ್ಲ ಜಪಾನಿನ ಯುವಕನಿದ್ದನೆಂದು ನೆನಪು.

ದೀಪದ ಅಡಿಯಲ್ಲಿ ಕತ್ತಲೆ ಎನ್ನುವಂತೆ ಮಗ ಮಸಾತೊ ಆಗ ದಾರಾಳ ರಸಾಯನಿಕಗಳನ್ನು ಬಳಸುತ್ತಿದ್ದ. ಇನ್ನು ರಸಾಯನಿಕಕ್ಕೆ ವಿದಾಯ ಎಂದು ಇಂದು ಆಶ್ವಾಸನೆ ಕೊಟ್ಟಿದ್ದಾನೆ ಎಂದು ಫುಕುವೋಕರು ಅಲ್ಲಿಗೆ ಬಂದ ಮಹಿಳೆಯೊಬ್ಬರಲ್ಲಿ ಹೇಳಿಕೊಂಡಿದ್ದರು. ಆ ಬಗ್ಗೆ ಅವರಿಗೆ ನೋವಿದ್ದಂತೆ ಕಂಡಿತು.

ಪ್ರತ್ಯೇಕವಾಗಿ ಕೃಷಿ ಮಾಡುತ್ತಿದ್ದ ಅವರ ಮಗ ಮಸಾತೋ ಅವರ ಜತೆ ಅವರ ತೋಟಕ್ಕೆ ಹೋಗಿದ್ದೆ. ಅಲ್ಲಿ ಖಾಲಿ ಇದ್ದ ಯಂತ್ರ ಚಲಾಯಿಸಿ ಬಲಗೈ ಹೆಬ್ಬೆರಳು ತುಂಡಾಗಿ ಏಕಲವ್ಯ ಗುರುದಕ್ಷಿಣೆ ಸಲ್ಲಿಸಿದಂತಾಯಿತು ನನ್ನ ಕಥೆ. ಯಂತ್ರ ಚಾಲಿತ ಗರಗಸದಲ್ಲಿ ಪುಟ್ಟದೊಂದು ಅಪಘಾತವಾಗಿ ಆ ಬೆರಳಿನ ಹೊಲಿಗೆ ತೆಗೆಯುವ ವರೆಗೆ ನಾನು ಅಲ್ಲಿರಬೇಕಾಯಿತು.

ಅವರ ಹೆಚ್ಚಿನ ಅಲೋಚನೆಗಳಿಗೆ ನಾನು ಒಪ್ಪಿದರೂ ಪಶು ಸಂಗೋಪನೆ ಅಂದರೆ ಕೋಳಿ ಹಸುಗಳಿಗೆ ಮೇವು ಕೊಡುವುದರ ವಿರೋದಿಸುವ ಅವರ ವಾದ ಒಪ್ಪಲು ಸಾದ್ಯವಿಲ್ಲ. ದನ ಸಾಕಿದುದರಿಂದ ಬಾರತ ಮರುಬೂಮಿಯಾಯಿತು ಎಂದು ಬರೆದ ಅವರೊಡನೆ ಈ ಬಗ್ಗೆ ಚರ್ಚಿಸಲು ಆಸಕ್ತಿಯಿದ್ದರೂ ಸಾದ್ಯವಾಗಿರಲಿಲ್ಲ.

ಬಾರತಕ್ಕೆ ಬೇಟಿ ಕೊಡಲೂ ಅವರಿಗೆ ಬಹಳ ಆಸಕ್ತಿ ಇತ್ತು. ಈ ವಿಚಾರ ನಾನು ಬಾರತದಲ್ಲಿ ಅವರ ಪುಸ್ತಕ ಪ್ರಕಟಿಸಿದವರನ್ನೂ ಸೇರಿದಂತೆ ಹಲವರಲ್ಲಿ ಪ್ರಸ್ತಾಪಿಸಿದ್ದೆ. ಕೊನೆಗೆ ಅವರನ್ನು ಬಾರತಕ್ಕೆ ಬರಮಾಡಿಕೊಂಡದ್ದು ಸಾವಯುವ ವಲಯದಲ್ಲಿ ಹೆಚ್ಚು ಗುರುತಿಸಿಕೊಳ್ಳದ ಕಲಕತ್ತಾ ಮೂಲದವರಾದುದರಿಂದ ನನಗೆ ಮಾಹಿತಿ ದೊರಕುವಾಗ ಬಹಳ ತಡವಾಗಿತ್ತು. ಬೆಂಗಳೂರಿಗೆ  ಬಂದ  ಅವರನ್ನು   ಬೇಟಿಯಾಗುವ ಅವಕಾಶ ತಪ್ಪಿ ಹೋಗಿತ್ತು.

ಅವರು ಬರೇ ಕೃಷಿ ಚಿಂತಕರಲ್ಲ   ಅವರೊಂದು ಬಹುಮುಖ ಪ್ರತಿಭೆ.   ಕೃಷಿ ಬಗೆಗೆ ಮಾತ್ರವಲ್ಲ ತತ್ವಜ್ನಾನದ ಪುಸ್ತಕಗಳನ್ನೂ ಬರೆದಿದ್ದರು. . ಜಪಾನಿ ಬಾಷೆಯಲ್ಲಿ ಅವರು ಬರೆದ ತತ್ವಶಾಸ್ತ್ರ ಪುಸ್ತಕ  ಅಲ್ಲಿನ   ಪದವಿ ತರಗತಿಗೆ ಪಠ್ಯ ಪುಸ್ತಕವಾಗಿತ್ತಂತೆ. ಅದರ ಇಂಗ್ಲೀಷ್ ಪ್ರಕಟನೆಗೆ ಅವರು ಉತ್ಸುಕರಾಗಿದ್ದರೂ ಅವರ ಇಂಗ್ಲೀಷ್ ಪ್ರಕಾಶಕರಿಗೆ ಅದು ಮಾರಾಟವಾಗುವ ದೈರ್ಯ ಇದ್ದಂತಿರಲಿಲ್ಲ.    ಬಿಡುವಿನಲ್ಲಿ ನಮ್ಮ ಚುಟುಕಿನ ಜಪಾನಿ ರೂಪವಾದ ಹೈಕು ಬರೆಯುತ್ತಿದ್ದರು. ನಾನು ನಾವು ಕೊಳೆರೋಗಕ್ಕೆ ಬೊರ್ಡೋ ದ್ರಾವಣ ಸಿಂಪಡಿವುದಾಗಿ ಹೇಳಿದಾಗ ಪರವಾಗಿಲ್ಲ ಎಂದಿದ್ದರು.

ನನ್ನ ಪ್ರವಾಸದಲ್ಲೊಂದು ಕೊಂಡಿಯಾದ ಮತ್ತು ನಂತರದ ಹಲವು ಪ್ರಯೋಗಗಳಿಗೆ ಸ್ಪೂರ್ತಿಯಾದ ಅಗಲಿದ ಈ ಹಿರಿಯ ಚೇತನಕ್ಕೆ ನನ್ನ ನಮನಗಳು.

Tuesday, August 12, 2008

ಸುಧಾ ಹೇಳಿದ ನನ್ನ ಪ್ರವಾಸ ಕಥನ

                                                                           
ಸೈಕಲ್  ಒಂದು  ಸ್ವಾವಲಂಬನೆಯ  ಪ್ರತೀಕ.   ಸೈಕಲ್ ಸವಾರನಾದ     ನನಗೆ ಸಾದ್ಯವಾದಷ್ಟು ಸ್ವಾವಲಂಬನೆಯ ಹಂಬಲ.     ಹಿಂದೆ ಹಲವಾರು ಜನ ಪರದೇಶದ ಯಾತ್ರಿಕರು ಅವರ ಪ್ರವಾಸದ ಖರ್ಚನ್ನು ವಿವಿದ ರೀತಿಯಲ್ಲಿ ಸಂಪಾದಿಸಿಕೊಂಡ ವಿಚಾರ ಪುಸ್ತಕಗಳಲ್ಲಿ ಪತ್ರಿಕೆಗಳಲ್ಲಿ ಓದಿದ್ದೆ. ಪತ್ರಿಕೆಗಳಿಗೆ ಪ್ರವಾಸ ಕಥನ ಬರೆದು ಆ ಹಣದಲ್ಲೇ ಪ್ರವಾಸದ ಖರ್ಚು ಸುದಾರಿಸಿದವರು ಇದ್ದಾರೆ. ಯಾರಾದರೂ ಕೈಗಾರಿಕೆಗಳೋ ವ್ಯಾಪಾರಸ್ಥರೋ ಪ್ರಾಯೋಜಕರು ಸಿಕ್ಕರೆ ಅವರು ಪ್ರವಾಸದ ಒಂದಂಶ ಖರ್ಚು ಬರಿಸುವುದೂ ಉಂಟು.  ಆದರೆ ಯಾರೂ ತಮಗೆ ಪ್ರಯೋಜನ ಇಲ್ಲದೆ ಸಹಾಯ ಮಾಡುವುದಿಲ್ಲವೆಂದು ಮನಗಂಡಿದ್ದೆ. ಆಗ ನಮ್ಮಲ್ಲಿ ವಿದೇಶಿ ವಿನಿಮಯ ಕಾನೂನುಗಳು ಕಠೀಣವಾಗಿದ್ದ ಕಾಲ. ಹಾಗಾಗಿ ಇಲ್ಲಿಂದ ಹಣದ ವ್ಯವಸ್ಥೆ ಕಷ್ಟವೆಂದು ಕ್ರಮೇಣ ನನಗೆ ಅರ್ಥವಾಯಿತು.
                                                                             

ನನ್ನ ಪ್ರವಾಸದ ಖರ್ಚು ಯಾವ್ಯಾವ ರೀತಿಯಲ್ಲಿ ಉಳಿಸಬಹುದು ಅಥವಾ ಸಂಪಾದಿಸಬಹುದೆಂಬ ಆಲೋಚನೆಯಲ್ಲಿ ಮುಳುಗಿದ್ದೆ. ಆ ಸಮಯದಲ್ಲಿ ಶ್ರೀ ಪಡ್ರೆಯವರನ್ನು ಸಂಪರ್ಕಿಸಿ ಪ್ರವಾಸ ಕಥೆಯನ್ನು ವಾರಪತ್ರಿಕೆಗಳಿಗೆ ಮಾರಿ ಹಣ ಸಂಪಾದಿಸುವ ಸಾದ್ಯತೆಗಳ ಬಗ್ಗೆ ಚರ್ಚಿಸಿದ್ದೆ.  ನಾನು ಲೇಖನ ಹಾಗೂ ಚಿತ್ರಗಳ ಕಳುಹಿಸಿದರೂ ಪತ್ರಿಕೆಯವರು ಹಣವನ್ನು ನೇರವಾಗಿ ಪರದೇಶದಲ್ಲಿ ಪ್ರಯಾಣಿಸುತ್ತಿರುವ ನನಗೆ ಕಳುಹಿಸುವ ಸಾದ್ಯತೆ ಇಲ್ಲ. ಮೇಲಾಗಿ ನಮ್ಮ ಪತ್ರಿಕೆಗಳು ಕೊಡುವ ಚಿಲ್ಲರೆ ಸಂಬಾವನೆಗೋಸ್ಕರ ಅವರ ಹಿಂದೆ ಹೋಗುವುದು ವ್ಯರ್ಥ ಎಂದು ಕೊನೆಗೆ ತೀರ್ಮಾನಿಸಿದೆ. ಪರದೇಶದಲ್ಲಿರುವಾಗ ನನ್ನಲಿರುವ ಪ್ರತಿ ರೂಪಾಯಿಯೂ ಅಮೂಲ್ಯ ಆಗಿರುವಾಗ  ಪತ್ರಿಕೆಗಳಿಗೋಸ್ಕರ ಶ್ರಮ ಮತ್ತು ಹಣ ಎರಡೂ ಖರ್ಚು ಮಾಡುವುದರಲ್ಲಿ ಪ್ರಯೋಜನವಿಲ್ಲವೆಂದು ಅನ್ನಿಸಿತು.
                                                                                       
ಅನಂತರದ  ಒಂದು ವರುಷದ ಪ್ರವಾಸ ಮುಗಿಸಿ ಊರಿಗೆ ಬಂದ ನಾನು ನನ್ನ ಪಾಡಿಗೆ ಓಡಾಡಿಕೊಂಡಿದ್ದೆ. . ನಾನು ವಾಪಾಸಾದ ಸುಳಿವು ಸಿಕ್ಕ ಶ್ರೀ ಪಡ್ರೆಯವರು ನಮ್ಮಲ್ಲಿಗೆ ಬಂದು ಈ ಲೇಖನ ಬರೆದು ಸುಧಾಕ್ಕೆ ಕಳುಹಿಸಿದರು. ನನಗೆ ಆಗ ಬಾಯಿ ತೆರೆಯಲೂ ಅಳುಕು. ಕಾರಣ  ಹಲವಾರು ಜನ ದಕ್ಷಿಣ ಬಾರತದ ಅದರಲ್ಲೂ ಕರ್ನಾಟಕದ ಹುಡುಗರು ಸೈಕಲು ಪ್ರವಾಸದ ನೆಪದಲ್ಲಿ ಯುರೋಪ್ ಅಮೇರಿಕಕ್ಕೆ ಹೋಗಿ ಅಲ್ಲಿ ಉಳಕೊಂಡ ಉದಾಹರಣೆ ಕೇಳಿದ್ದೆ ಹಾಗೂ ಕುರುಹುಗಳ ಕಂಡಿದ್ದೆ. ಅದರಿಂದಾಗಿ ಅನಂತರ ನನ್ನಂತಹವರು ಹೋದಲ್ಲೆಲ್ಲ ಸಂಶಯ ದೃಷ್ಟಿ ಎದುರಿಸಬೇಕಾಗುತ್ತದೆ. ನಾನು ವಾಪಾಸು ಬಾರತಕ್ಕೆ ಹೋಗುವವ ಎಂದರೆ ಯಾರೂ ನಂಬದ ಪರೀಸ್ಥಿತಿಯನ್ನು  ಅವರು  ಉಂಟುಮಾಡಿದ್ದರು. ಹಾಗಾಗಿ ನನ್ನ ಹೆಜ್ಜೆ ಅನುಸರಿಸಿ ಇನ್ನಷ್ಟು ಜನ ಉತ್ತಮ ಬವಿಷ್ಯ ಅರಸಿಕೊಂಡು ಹೋಗುವವರು ಸೈಕಲ್ ನೆಪವಾಗಿಸುವುದು ನನಗೆ ನಿಜಕ್ಕೂ ಬೇಡವಾಗಿತ್ತು.
ಹೋದಲ್ಲೆಲ್ಲ ಅಲ್ಲಿನ ಜನ ಅಪರಿಚಿತನಾದ ನನಗೆ ಕೊಟ್ಟ ಅತಿಥಿ ಸತ್ಕಾರದಿಂದಾಗಿ
ಪ್ರಪಂಚದಲ್ಲಿ ಎಲ್ಲೆಡೆ ನಮಗಿನ್ನೂ ಪರಿಚಯವಾಗದ ಗೆಳೆಯರಿದ್ದಾರೆ
ಎನ್ನುವ ಮಾತನ್ನು  ಒಬ್ಬ  ಬಾರತೀಯನಾಗಿ   ಕನ್ನಡಿಗನಾಗಿ   ನಮ್ಮವರ ಎದುರು ಹೇಳುವ ಕರ್ತವ್ಯ ನನಗಿದೆಯೆಂದೂ ಅನಿಸುತಿತ್ತು.   ಹೀಗೆ   ಸುಧಾ ನನ್ನ ಪ್ರವಾಸದ ಬಗೆಗೊಂದು ಶ್ರೀಪಡ್ರೆಯವರ ಸಚಿತ್ರ ಲೇಖನ ಪ್ರಕಟಿಸಿತು.
                                                                                
ಈ    ಲೇಖನದಿಂದಾಗಿ  ಊರ ಪರವೂರ ಹಲವಾರು ಜನ ನನ್ನ ಗುರುತಿಸಿದರು. 6ನೇಯ ತರಗತಿಯ ಗಣಿತ ಪಠ್ಯಪುಸ್ತಕದಲ್ಲಿ ಸರಾಸರಿಗೆ ಉದಾಹರಣೆ ಕೊಡುವಾಗ ಗೋವಿಂದ ಬಟ್ ಸೈಕಲಿಸಿದ್ದು ದಿನಕ್ಕೆ ಸರಾಸರಿ 80 ಕಿಲೋಮೀಟರ್ ಎಂದಿತು. ಬಲಗೈ ಹಬ್ಬೆರಳಿನ ತುದಿ ಅಂಶ ಜಪಾನಿನಲ್ಲಿ ತುಂಡಾಗಿ ಉಳಿದ ಸುದ್ದಿ ನಾನು ನೈಸರ್ಗಿಕ ಕೃಷಿಕ ಫುಕೋಕರನ್ನು ಕಂಡು ಬಂದಿರುವುದನ್ನು ಸಾರಿತು. ಜನರ ಗಮನ ನನ್ನ ಮೇಲೆ ಬಿದ್ದು ಸಾಕಷ್ಟು ತೊಂದರೆಯನ್ನೂ ಅನುಬವಿಸಿದ್ದೇನೆ. ನೋಡಲೆಂದು ಪಡಕೊಂಡ ಫೋಟೊಗಳನ್ನು ಕೈಚಳಕದಲ್ಲಿ ಎದುರೆದುರೇ ಜೇಬಿಗಿಳಿಸಿದವರಿದ್ದಾರೆ. . ಓದಲೆಂದು ಕೊಂಡುಹೋದ ಸಾವಯುವ ಕೃಷಿ ಪುಸ್ತಕಗಳ  ನಾನು ಪುನ: ಕಂಡಿಲ್ಲ.  ಈ  ಪ್ರವಾಸದಿಂದ  ನನ್ನ    ದೃಷ್ಟಿಕೋನ  ವಿಶಾಲವಾಯಿತು  ಮತ್ತು    ನಾನು  ಈಗ  ಪ್ರಪಂಚದ ಹಲವು  ಮೂಲೆಗಳಲ್ಲಿ  ವೈಯುಕ್ತಿಕವಾಗಿ  ಬಲ್ಲ  ಗೆಳೆಯರಿದ್ದಾರೆ  ಎನ್ನಬಹುದು. 

Saturday, August 09, 2008

ಕೈದಿಗಳ ಗೂಡಿನಲ್ಲಿ ಕೂಡಿಡುವ ಅಮೇರಿಕದ ಸೇನೆ

ಹಲವಾರು ಡೈರಿ ಪಾರ್ಮ್ ಗಳನ್ನು ಯುರೋಪಿನಲ್ಲಿ ಸಂದರ್ಶಿಸಿದ ನನಗೆ ಗಂಡು ಕರುಗಳ ವಿಧಿ ಬಗ್ಗೆ ಕುತೂಹಲ. ಅವರಲ್ಲಿ ಪ್ರಶ್ನಿಸಲು ಅದನ್ನು ವಾರಕ್ಕೊಮ್ಮೆ ಬರುವ ಗಂಡುಕರು ಸಾಕುವವರಿಗೆ   ಆ  ವಾರ  ಹುಟ್ಟಿದ   ಕೊಡುತ್ತೇವೆ ಎನ್ನುವ ಉತ್ತರ ಸಿಗುತಿತ್ತು. ಕೊನೆಗೆ ನೆದರ್ ಲಾಂಡ್ ನಲ್ಲಿ ಈ ಗಂಡು ಕರುಗಳ ಉಳಿಕೆ ಜೀವನ ಕಣ್ಣಾರೆ ಕಾಣುವ ಅವಕಾಶ ದೊರಕಿತು.

ಅದು ನಿಜಕ್ಕೂ ಘೋರವಾದ ಚಿತ್ರ. ಅವುಗಳನ್ನು ಅಲುಗಾಡಲೂ ಸಾದ್ಯವಿಲ್ಲದ ಪೆಟ್ಟಿಗೆಗಳಲ್ಲಿ ಕೂಡಿಡುತ್ತಾರೆ. ಅನಾವಶ್ಯಕ ಕಾಲಾಡಿಸಿ ಕೊಬ್ಬು ಕರಗಿಸುವುದು ಬೇಡವೆಂದು ಸಾಕುವವರ ಉದ್ದೇಶ. ಕೋಳಿ ಸಾಕಣೆಯಲ್ಲೂ ಇದೇ ಚಿತ್ರ ಕಂಡರೂ ಕೋಳಿಗಳೊಂದಿಗೆ ಬಾವನಾತ್ಮಕ ಸಂಬಂದ ನಮಗೆ ಇರುವುದಿಲ್ಲ. ಕರುಗಳ ಉಳಿಕೆ ಜೀವನ ಇಂತಹ ಗೂಡಿನಲ್ಲಿ ನಿಂತುಕೊಂಡು ತಿನ್ನುವುದು ಸಗಣಿ ಹಾಕುವುದಷ್ಟೇ ಕೆಲಸ.     ಕರುಗಳ  ಕಣ್ಣಲ್ಲಿ  ಕಾಣುವ  ನೋವು, ಕೆಲವು ಕ್ಷಣ ಕೇಳಿದ  ರೋದನೆ ತಿಂಗಳುಗಟ್ಟಲೆ ಮನಸ್ಸಿನಿಂದ ಮಾಸದು.

ಇರಾಕಿನಲ್ಲಿ ಅಮೇರಿಕದ ಸೇನೆಯೂ ಕೈದಿಗಳನ್ನು ಇಂತಹ ಮೂರಡಿ ಉದ್ದ ಮೂರಡಿ ಅಗಲದ  ಹಾಗೂ   ಆರಡಿ  ಎತ್ತರದ    ಅಲುಗಾಡಲೂ ಸಾದ್ಯವಿಲ್ಲದಂತಹ ಚಿಕ್ಕ ಗೂಡಿನಲ್ಲಿ ನಿಲ್ಲಿಸುವ ಕ್ರೂರ ಸುದ್ದಿ ಇದೀಗ ಬೆಳಕಿಗೆ ಬಂದಿದೆ. ಸುದ್ದಿ ಬೆಳಕಿಗೆ ಬಂದ ನಂತರ ಸಂದರ್ಶನವೊಂದರಲ್ಲಿ ಅಂತಹ ಕ್ರೂರ ಸನ್ನಿವೇಷ ಎನಿಲ್ಲ, ಹೆಚ್ಚೆಂದರೆ ಒಮ್ಮೆಗೆ ಹನ್ನೆರಡು ಘಂಟೆ ನಿಲ್ಲಿಸಲಾಗುತ್ತದೆ ಹಾಗೂ ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಈ ಪಂಜರಗಳ ಗಮನಿಸಲಾಗುತ್ತದೆ ಎನ್ನುವ ಸಮರ್ಥನೆ ನೀಡಲಾಗಿದೆ.

ಅಮೇರಿಕದವರೊಬ್ಬರು ಮಾಹಿತಿ ಹಕ್ಕಿನಲ್ಲಿ ಕೋರಿದ ಪ್ರಕಾರ ಸೇನೆ ಅಂತಹ ಆದರೆ ಅದಕ್ಕಿಂತ ದೊಡ್ಡ ಪೆಟ್ಟಿಗೆಗಳ ಕೆಲವು ಅಸ್ಪಷ್ಟ ಬಾವಚಿತ್ರಗಳ ಇತ್ತೀಚೆಗೆ ಕಳುಹಿಸಿಕೊಟ್ಟಿದೆ.  ಅಮೇರಿಕದ  ಈ  ಕೃತ್ಯ  ಖಂಡನೀಯ.  ಆದರೆ  ಈ  ಕೈದಿಗಳ  ಪರೀಸ್ಥಿತಿ  ಪಶ್ಚಿಮದ  ದೇಶದಲ್ಲಿ    ಜನಿಸುವ     ಗಂಡುಕರುಗಳಿಗೆ   ಬಿನ್ನವಲ್ಲ    ಅನ್ನಿಸುತ್ತದೆ.   .

Tuesday, August 05, 2008

ವಿದ್ಯುತ್ ಬಳಕೆಯ ಗಮನಿಸಲು

ನಾವು ವಾಹನಕ್ಕೆ ಮೀಟರ್ ಅಳವಡಿಸುತ್ತೇವೆ. ಪ್ರಯಾಣಿಸುವಾಗ ಆಗಾಗ ಅದರ ಮೇಲೆ ಗಮನಿಸುತ್ತೇವೆ. ವೇಗ ಹೆಚ್ಚಾಯಿತು ಎನ್ನಿಸುವಾಗ ನಿದಾನಿಸುತ್ತೇವೆ. ಪೆಟ್ರೊಲ್ ಮೈಲೇಜಿನ ಬಗೆಗೆ ಕಣ್ಣಿಡುತ್ತೇವೆ.


ಇದೇ ರೀತಿಯ ಕಾಳಜಿ ನಮ್ಮ ವಿದ್ಯುತ್ ಉಪಯೋಗದ ಬಗೆಗೆ ನಾವು ತೋರಿಸುವುದಿಲ್ಲ. ತೋರಿಸಲು ಸಾದ್ಯವಾಗುವುದೂ ಇಲ್ಲ. ವಿದ್ಯುತ್ ಅಳೆಯುವ ಹತ್ಯಾರುಗಳೂ ನಮ್ಮಲ್ಲಿ ಹುಡುಕುವುದೇ ಕಷ್ಟ.   ಬಳಕೆ ಬಗೆಗೆ ನಮಗೆ ಈಗ ಚಿತ್ರಣ ಸಿಗುವುದು ವಿದ್ಯುತ್ ಮಾಪಕ ಓದುವವರು ಬಂದು ಬಿಲ್ ಕೊಡುವಾಗಲೇ. ಬದಲಾಗಿ  ಉಪಯೋಗದ  ಬಗ್ಗೆ  ಕ್ಷಣ ಕ್ಷಣಕ್ಕೂ ಚಿತ್ರಣ ಸಿಕ್ಕರೆ ಖಂಡಿತ ಉಳಿತಾಯ ಸಾದ್ಯ.

ಈ ಮದ್ಯೆ ನಾನು ಅಮೇರಿಕದಲ್ಲಿ ಸಿಗುವ ಒಂದು ಮೀಟರ್ ಬಗ್ಗೆ ಕುಶಿ ಪಟ್ಟು ವಿಚಾರವನ್ನು ಹಂಚಿಕೊಳ್ಳುತ್ತಿದ್ದೇನೆ. ಇದು ಎರಡು ಹಂತದಲ್ಲಿ ಅಬಿವೃದ್ದಿ ಹೊಂದಿದ ಸಲಕರಣೆ ಎನ್ನಬಹುದು. ಮೊದಲಿಗೆ ನೇರವಾಗಿ ಲೈನಿಗೆ ಸಿಕ್ಕಿಸುವ ಒಂದು ಮೀಟರ್ ಬಂತು. ಅದು ಹೆಚ್ಚು ಸುದಾರಣೆಗೊಂಡ ನಮ್ಮಲ್ಲಿರುವ ಅಂಪ್ಸ್-ಮೀಟರಿಗೆ ಹೋಲಿಸಬಹುದು.

ಎರಡನೇಯ ತಲೆಮಾರಿನ ಸುದಾರಣೆಯಲ್ಲಿ  ಮೇಲಿನ ಚಿತ್ರದಲ್ಲಿರುವಂತೆ  ನಿಮ್ಮ ಮೀಟರ್ ಮೇಲೆ    ಒಂದು ಚಿಕ್ಕ ಮಾಹಿತಿ ಸಂಗ್ರಾಹಕ ಮತ್ತು ಮನೆಯಲ್ಲಿ ಅನುಕೂಲವಿರುವಲ್ಲಿ ಅಳವಡಿಸುವ ಕೆಳಗಿನ  ಚಿತ್ರದಲ್ಲಿರುವಂತಹ   ಡಿಸ್ ಪ್ಲೆ.   ಕಾರ್ಡ್ ಲೆಸ್ ಪೋನ್ ಕೆಲಸ ಮಾಡುವಂತೆ ಸಂಗ್ರಾಹಕದಿಂದ ಮಾಹಿತಿ ನಿರಂತರವಾಗಿ ಹರಿದು ಬರುತ್ತದೆ. ಇದನ್ನು ನಮಗೆ ಅನುಕೂಲವಾಗುವ ಗೋಡೆಯಲ್ಲಿ ಅಳವಡಿಸಬಹುದು, ಮೇಜಿನ ಮೇಲೆ ಇಡಬಹುದು.  ಒಮ್ಮೆ ಇದನ್ನು ನೋಡಲು ನಾವು ಆ ಕ್ಷಣ ಉಪಯೋಗಿಸುವ ವಿದ್ಯುತ್ ಘಂಟೆಗೆ ಎಷ್ಟು ಹಣವಾಗುತ್ತದೆ ಎನ್ನುವುದನ್ನೊ ಅದು ಸ್ಪಷ್ಟವಾಗಿ ತೋರಿಸುತ್ತದೆ. ಸ್ವಾಬಾವಿಕವಾಗಿ   ಪೋಲಾಗುವಲ್ಲಿ   ಬ್ರೇಕ್  ಹಾಕಲು  ಅರಿವು ಹಾಗೂ   ಪ್ರೇರಣೆ  ದೊರಕುತ್ತದೆ. 

ಅಮೇರಿಕದಲ್ಲಿ ಇದರ ಬೆಲೆ ಸುಮಾರು ಐದು ಮುಕ್ಕಾಲು ಸಾವಿರ ರೂಪಾಯಿ ಅನ್ನಬಹುದು ( USD 135) ಅಲ್ಲಾದರೆ ಉಳಿತಾಯವೇ ಈ ಹಣವನ್ನು ದುಡಿದುಕೊಡುತ್ತದಂತೆ.  ನಮ್ಮಲ್ಲೂ   ಇದು  ಕೈಗೆಟಕುವ  ಬೆಲೆಗೆ   ಬೇಗನೆ  ಸಿಗುವಂತಾಗಲಿ. 

ವಿವರಗಳಿಗೆ : http://fivepercent.us/2008/07/28/cent-a-meter-centometer-or-power-cost-meter-pays-for-itself/

Saturday, August 02, 2008

ರಾಮರ ಸೇತುವೆಯೋ, ಅಲ್ಲಲ್ಲ

ಚಿತ್ರದಲ್ಲಿ ಕಾಣುವುದು ಶ್ರಿ ರಾಮಚಂದ್ರನೂ ವಾನರ ಸೇನೆಯೂ ಕಟ್ಟಿದ ರಾಮರ ಸೇತುವೆಯೋ ? ದೂರದಲ್ಲಿ ಕಾಣುವುದು ಶ್ರಿ ಲಂಕೆಯೋ ? ಸೇತುವೆ ಮೇಲಿರುವುದು ಪಿರಬಾಕರನ ಅನುಯಾಯಿ ತಮಿಳು ಹುಲಿಗಳೋ ? ಸುಗ್ರೀವನ ವಾನರ ಸೇನೆಯೋ ? ಪ್ರಶ್ನೆಗಳೆಲ್ಲ ನಿಮ್ಮ ಮನಸಿನಲ್ಲಿ ಮೂಡಿರಬಹುದು. ಕಾಂಗ್ರೇಸಿನವರು ಇದು ಸತ್ಯ ಚಿತ್ರವಲ್ಲ, ಹಿಂದುತ್ವದವರ ಪಿತೂರಿ ಅಂಶ ಎನ್ನಬಹುದು.   ಈಗ ರಾಮರ ಸೇತುವೆ ವಿವಾದ ಸುಪ್ರಿಮ್ ಕೋರ್ಟ್ನನಲ್ಲಿದ್ದು ಕೆಂದ್ರ ಸರಕಾರ ದಿನಕ್ಕೊಂದು ನಮೂನೆಯ ವಾದ ಮಂಡಿಸುತ್ತಿದೆ. ಸಂಪೂರ್ಣ ಗೊಂದಲಮಯವಾದ ಈ ವಿವಾದದ ಮದ್ಯೆ ಈ ವಿಷಯಕ್ಕೆ ಹೋಲಿಕೆಯ ನನಗೆ ಕಂಡ  ಒಂದು ನೈಸರ್ಗಿಕ ಉದಾಹರಣೆ.

ಇದು ದಕ್ಷಿಣ ಕೊರಿಯಾದ ಜಿಂಡೊ ಎಂಬಲ್ಲಿ ಕಂಡು ಬರುವ ನೈಸರ್ಗಿಕ ಮರಳ ದಾರಿ.  ಸುಮಾರು ಎರಡು ಮುಕ್ಕಾಲು ಕಿಲೋಮೀಟರ್ ಉದ್ದದ ಈ ಸೇತುವೆ  ದಾರಿ   ವರುಷಕ್ಕೆ ಒಂದೆರಡು ಬಾರಿ ಸಮುದ್ರದಿಂದ ಮೇಲೇಳುತ್ತದೆ.   ಜ್ಯೋತಿಷಿಗಳೂ   ವಿಜ್ನಾನಿಗಳೂ    ಸಮುದ್ರದ  ಇಳಿತವನ್ನು   ಮೊದಲೇ      ನಿರ್ಣಯಿಸುತ್ತಾರಂತೆ.    ಅಲೆಗಳ ಮಟ್ಟ ಕೆಳಗಿರುವ ಸುಮಾರು ಒಂದು ಘಂಟೆ ಸಮಯ ಈ ದಾರಿಯಲ್ಲಿ ನಡೆಯುತ್ತಾ ಆಚೆ ದಡ ತಲಪಬಹುದು.   ಇದೊಂದು ಹಬ್ಬವನ್ನಾಗಿ   ಅವರೀಗ    ಆಚರಿಸುತ್ತಾರೆ.  ಮೊಸೆಸ್ ಪವಾಡ ಎಂದು ಕರೆಯಲ್ಪಡುವ ಈ  ವರ್ಷ   ಎಪ್ರಿಲ್   17 ಕ್ಕೆ  ನಡೆದ   ಈ   ಹಬ್ಬಕ್ಕೆ ಪ್ರಪಂಚದ ಹಲವು ಮೂಲೆಗಳಿಂದ ಜನ ದಾವಿಸಿ ಬರುವರಂತೆ.

ಇಂದು  ಕಾಣಸಿಗುವ  ಕುರುಹುಗಳ    ಗಮನಿಸಿದರೆ ಎರಡು ಮೂರು ಶತಮಾನಗಳ ಹಿಂದೆ ಬಾರತ ಮತ್ತು ಲಂಕೆಯ ಮದ್ಯೆ ಈ  ರೀತಿಯ ದಾರಿ   ಖಂಡಿತ    ಇದ್ದಿರಬಹುದು. ನಮ್ಮ  ಪೂರ್ವಿಕರು  ನಡೆದು  ಶ್ರಿಲಂಕೆಗೆ  ಹೋದರು  ಎಂದು  ಇತಿಹಾಸದ ಪುಟ  ತೆರೆದಿಡುವ  ತಮಿಳರಿದ್ದಾರಂತೆ.     ಕ್ರಮೇಣ    ಪ್ರಕೃತಿಕ ಕಾರಣಗಳಿಗೆ ಈ  ಬಾರತಕ್ಕೆ  ಶ್ರಿಲಂಕವನ್ನು  ಲಿಂಕಿಸುವ  ಈ    ಶ್ರಿ ರಾಮಚಂದ್ರ ರಾಜ ರಸ್ತೆ ಸಮುದ್ರ ಪಾಲಾಗಿರಬಹುದು.    ರಾಜಕೀಯ ಕಾರಣಗಳಿಂದ ವಿಷಯ ಎಷ್ಟು ಗೊಜಲಾಗಿದೆ ಎಂದರೆ  ಎಲ್ಲರೂ  ಒಪ್ಪುವಂತಹ    ಸತ್ಯ ಸಂಗತಿ ಮುಂದಿನ ದಿನಗಳಲ್ಲಿ ಹೊರಬರಲು ಸಾದ್ಯವೇ ಇಲ್ಲ  ಎನ್ನುವುದು  ಖಚಿತ.  .