Monday, July 27, 2009

ಗೊಡ್ಡು ಸಿದ್ದಾಂತದಡಿಯಲ್ಲಿ ಮುಲುಗುವ ಸಮಾಜಗಳು

ನಮ್ಮಲ್ಲಿ ಈಗ ಕೈತುಂಬಾ ಹಣ ಚೆಲ್ಲಿದರೆ ಎಲ್ಲ ಪಾಪವೂ ಪರಿಹಾರ ಕಾಣುತ್ತದೆ. ಇದು ಪರೋಕ್ಷವಾಗಿ ಅನ್ಯಾಯಕ್ಕೆ ಪ್ರೋತ್ಸಾಹ ಕೊಟ್ಟಂತಾಗುತ್ತದೆ. ನನ್ನ ಪ್ರಕಾರ ಅರಿತು ಮಾಡಿದ ತಪ್ಪು ನಗದಿಕರಿಸಿ ಪರಿಹಾರ ಎನ್ನುವುದೇ ಇರಬಾರದಾಗಿತ್ತು. ಹಿಂದೊಮ್ಮೆ ಒಬ್ಬರು ಜೋಯಿಸರು ನನ್ನಲ್ಲಿ ಹೇಳಿದ್ದರು. ಪುಡಿ ಕಳ್ಳರೆಲ್ಲ ದಾರ್ಮಿಕ ಕ್ಷೇತ್ರ ದಾಟುವಾಗ ವಾಪಾಸು ಬರುವಾಗ ಕಾಣುತ್ತೇನೆ ಅನ್ನುವ ಆಶ್ವಾಸನೆ ಕೊಟ್ಟು ಮುನ್ನಡೆಯುತ್ತಾರಂತೆ. ಅವರಿಗೆ ಕಾರ್ಯ ಸಾದನೆಗೆ ದೈವ ಬೆಂಬಲ ಇದೆಯೆನ್ನುವ ಬಾವನೆ ಉಂಟಾಗಿ ಹೆಚ್ಚಿನ ದೈರ್ಯ ಕೊಡುತ್ತದೆ. ಹಾಗೆ ವಾಪಾಸು ಬರುವಾಗ ತಪ್ಪದೆ ದಾಮಾಶಯ ಸಲ್ಲಿಸುವ ಪರಿಪಾಠ. ಈಗಂತೂ ಅನುಕೂಲಕ್ಕಾಗಿ ರಸ್ತೆ ಬದಿಯಲ್ಲಿಯೇ ಹುಂಡಿಗಳಿವೆ.

ಪ್ರೊಟೆಸ್ಟೆಂಟ್ ಚರ್ಚ್ ಯಾವ ರೀತಿ ಈ ಸಂಪ್ರದಾಯ ಎದುರಿಸಿತು ಮತ್ತು ನಾವು ಎಲ್ಲಿ ಎಡವುತ್ತಿದ್ದೇವೆ ಅನ್ನುವುದರ ಬಗೆಗೆ ಪ್ರತಾಪ ಸಿಂಹ ಶನಿವಾರದ ಅಂಕಣದಲ್ಲಿ ಚರ್ಚಿಸಿದ್ದಾರೆ. ನಾವೀಗ ದೇವರನ್ನೇ ಕಮಿಶನ್ ಎಜಂಟರನ್ನಾಗಿ ಮಾಡಿದ್ದೇವೆ ಎಂದು ನಾನು ಹಿಂದಿನ ದಿನ ಶುಕ್ರವಾರವಷ್ಟೇ ಬರೆದಿದ್ದೆ. ಮಾರ್ಟಿನ್ ಲೂಥರ್ ದೇವರ ಪರವಾಗಿ ರಶೀದಿ ಬರೆಯುವುದರನ್ನು ವಿರೋಧಿಸಿದ. ನಾವು ಇನ್ನೂ ರಶೀದಿ ಬರೆಸುತ್ತಲೇ ಇದ್ದೇವೆ. ರಶೀದಿ ಬರೆಸಲು ಹಲವು ಕಡೆಗಳಲ್ಲಿ ವ್ಯವಸ್ತೆ ಮಾಡಿಕೊಂಡಿದ್ದೇವೆ. ಸಂಪ್ರದಾಯ ಅನುಕೂಲಕ್ಕೆ ತಿರುಚುವುದು ನಮ್ಮ ಸಮಾಜಕ್ಕೆ ಸಿಮಿತವಲ್ಲ. ಕಿವಿಗೊಟ್ಟರೆ ಕೂಗು ಪಾಕಿಸ್ಥಾನದಿಂದಲೂ ಕೇಳಿಸುತ್ತಿದೆ.


ಕುರಾನ್ ಜನ ಸಾಮಾನ್ಯರ ಕೈಗೆ ಕೊಟ್ಟರೆ ಅನಾಹುತ ಎಂದು ಪಾಕಿಸ್ತಾನ್ ಚಾ ಅಂಗಡಿಯಲ್ಲಿ ನೋಟೀಸ್ ಅಂಟಿಸಿದ್ದಾರೆ. ಪ್ರಾಚೀನ ಗ್ರಂಥವಾದ ಕುರಾನ್ ಸಂದರ್ಬೋಚಿತವಾಗಿ ಅರ್ಥೈಸಲು ವಿದ್ವಾಂಸರಿಗೆ ಮಾತ್ರ ಸಾದ್ಯ. ಉಗ್ರಗಾಮಿಗಳು ತಮ್ಮ ಬೇಳೆ ಬೇಯಿಸಲು ನಿರ್ದಿಷ್ಟ ಸನ್ನಿವೇಶದಲ್ಲಿ ಅಲ್ಲಿ ಬರೆದಿರುವುದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಅರ್ಥೈಸುತ್ತಿದ್ದಾರೆ. ಪ್ರವಾದಿ ಮಹಮ್ಮದರ ಅಂದಿನ ದಿರಸು ಹಾಗೂ ಗಡ್ಡ ಯಥಾವತ್ತಾಗಿ ಅನುಕರಣೆ ನಡೆದರೂ ಆಲೋಚನೆ ತಿರುಳು ಸಂಪೂರ್ಣ ಮರೆಮಾಚಲ್ಪಟ್ಟಿದೆ. 

ಅಂಬೇಡ್ಕರ್ ಚಿಂತನೆ ಕು. ಮಾಯಾವತಿ ಕೈಯಲ್ಲಿ ನರಳುವಂತೆ ಕುರಾನ್ ಚಿಂತನೆ ಮುಲ್ಲಾಗಳ ಕೈಯಲ್ಲಿ ಬಹಳಷ್ಟು ತಿರುಚಲ್ಪಟ್ಟಿದೆ. ಅಂದು ಯುದ್ದಕಾಲದ ಸನ್ನಿವೇಶ ಪ್ರತಿಕೂಲ ಎನಿಸುವಾಗ ತನಗೆ ತಾನೆ ಅಂದುಕೊಂಡ ಸ್ವಗತ ಇಂದು ವೈರಿ ನಾಶಕ್ಕೆ ಒಪ್ಪಿಗೆ ಎಂದು ಬಿಂಬಿಸಲಾಗುತ್ತಿದೆ. ಎಲ್ಲವೂ ಅನುಕೂಲಸೂತ್ರ. ಅವರಲ್ಲೂ  ಒಬ್ಬ  ಮಾರ್ಟಿನ್ ಲೂಥರ್  ಜನಿಸಿದ್ದರೆ .....................

Friday, July 24, 2009

ಸಮಯಸಾಧಕತನ, ನಮ್ಮ ಸಮಾಜದ ಹೆರಿಡಿಟರಿ ಡಿಫೆಕ್ಟ್

ನಾನು  ಸಂಬಂದಿಕರಿಂದ ಪರಿಚಿತರಿಂದ ಪುಟಗಟ್ಟಲೆ ಬರೆಯುವಷ್ಟು ವಿಶ್ವಾಸ ದ್ರೋಹ ಅನುಭವಿಸಿದ್ದೇನೆ. ಸಮಾನ ಅಂಶವೆಂದರೆ ಅವರೆಲ್ಲ ಧೈವ ಭಕ್ತರು.  He is is so holy that he uses holy water in toilet  ಅನ್ನುವ  ವರ್ಗಕ್ಕೆ  ಸೇರಿದವರು.   ವಿಶ್ವಾಸದ ಇನ್ನೊಂದು ಮುಖ ನೋಡುವುದಾದರೆ ಸಂಪೂರ್ಣ ಅಸಹಾಯಕರಾದರೂ ಒಂಟಿಯಾಗಿ ವಾಸಿಸುವ ಕುರುಡ ವೃದ್ದರನ್ನು ಅಮೇರಿಕದಲ್ಲಿ ಕಂಡಿದ್ದೇನೆ. ಇದು  ನಮ್ಮಲ್ಲೇಕೆ ಸಾದ್ಯವಾಗುವುದಿಲ್ಲ    ಎನ್ನುವುದು ಬಹು ದಿನಗಳಿಂದ ಮನಸ್ಸು ಕೊರೆಯುತಿತ್ತು.

ನಮ್ಮ ಜನರೆಲ್ಲ ಶುದ್ದ ಸಮಯಸಾದಕರು ಎನ್ನುವ ವಿಚಾರ ರಸ್ತೆಗಳಲ್ಲಿ ನಿಯಮಪಾಲಿಸುವುದರ ನೋಡುವಾಗಲೇ ತಿಳಿಯುತ್ತದೆ. ಮನಬಂದಂತೆ ಅನಾಗರಿಕರಂತೆ ನುಗ್ಗುವುದೇ ನಮ್ಮ ಅಬ್ಯಾಸ. ಮದುವೆ ಮನೆಗಳಲ್ಲಿ ಊಟಕ್ಕೆ ಕೂರುವುದು ಕೈತೊಳೆಯಲು ಓಡುವ ಗಡಿಬಿಡಿ ನೂಕುನುಗ್ಗಲು ನೋಡುವಾಗ ಬೇಸರವಾಗುತ್ತದೆ. ಸಮಾರಂಬಗಳಿಂದಲೇ ದೂರವಿರೋಣ ಅನ್ನಿಸುತ್ತದೆ.

ನಾವೀಗ ದೇವರನ್ನೇ ಕಮಿಶನ್ ಎಜಂಟರನ್ನಾಗಿ ಮಾಡಿದ್ದೇವೆ. ಇಷ್ಟು ಸಿಕ್ಕರೆ ನಿನಗಿಷ್ಟು ಎನ್ನುವ ಸೀದಾ ವ್ಯವಹಾರ. ಬೇಕಾದರೆ ಯಡ್ಡಿಯನ್ನೋ ರೆಡ್ಡಿಯನ್ನೋ ಕೇಳಬಹುದು. ನಾವು ಅನ್ಯಾಯಕ್ಕೆ ಪರಿಹಾರ ಸೂಚಿಸಲು ಅಪೇಕ್ಷಿಸುವ ದೈವಿಶಕ್ತಿಗಳೇ ಅನ್ಯಾಯಕ್ಕೆ ಮೂಲ ಅನಿಸುತ್ತದೆ. ಪಟ್ಟಣಗಳ ಗಲ್ಲಿ ಗಲ್ಲಿಯಲ್ಲಿ ಉದ್ಬವಿಸುವ ಸ್ವಯಂ ಘೋಷಿತ ಸ್ವಾಮಿಗಳು ಅಮ್ಮಾಗಳು ಸಾಕಷ್ಟು ಕಪ್ಪ ಸಂಗ್ರಹಿಸುತ್ತಾರೆ. ಅಪರಂಜಿ ಜನವರಿ ೨೦೦೯ರಲ್ಲಿ ಲೀಲಾ ಮಿರ್ಲೆಯವರು ಕಂಡ ಸ್ವಾಮಿಯೊಬ್ಬರು ಅದ್ಬುತ ಚಿಂತನೆ ತೋರ್ಪಡಿಸಿದ್ದಾರೆ. ನೆರೆದ ಸಬಿಕರೊಂದು ಪ್ರಶ್ನೆ ಎಸೆದರಂತೆ.

ಯದಾ ಯದಾ ಹಿ ದರ್ಮಸ್ಯ ಗ್ಲಾನಿರ್ಭವತಿ ಭಾರತ ಎನ್ನುವ ಶ್ಲೋಕದಲ್ಲಿ ಶ್ರಿಕೃಷ್ಣನು ಅಧರ್ಮ ಹೆಚ್ಚಾದಾಗ ದರ್ಮ ಸಂಸ್ಥಾಪನೆ ಮಾಡಲು ನಾನು ಅವತರಿಸುತ್ತೇನೆ ಎಂದಿದ್ದಾನೆ. ಈ ನಮ್ಮ ಕಲಿಯುಗದಲ್ಲಿ ಅನೇಕ ಸ್ವಾಮಿಗಳು ಅಧರ್ಮವನ್ನು ತಡೆಗಟ್ಟಲು ಹವಣಿಸುತ್ತಿರುವಾಗ ಯಾರು ಶ್ರೀಕೃಷ್ಣನ ಅವತಾರವೆಂದು ಹೇಗೆ ತಿಳಿಯುತ್ತದೆ .

ಸಹಜವಾದ ಪ್ರಶ್ನೆ ಇದು. ಈ ಪ್ರಶ್ನೆಗೆ ಉತ್ತರ ತೀರಾ ಸರಳ. ದ್ವಾಪರ ಯುಗದಲ್ಲಿ ಅನ್ಯಾಯವನ್ನು ಹದ್ದುಬಸ್ತಿಗೆ ತರಲು ಒಬ್ಬ ಕೃಷ್ಣ ಸಾಕಾಗಿದ್ದ. ಈಗ ಜಗತ್ತಿನಲ್ಲಿ ತುಂಬಿರುವ ದುಷ್ಕೃತ್ಯಗಳನ್ನು ತಡೆಗಟ್ಟಲು ಒಬ್ಬ ಕೃಷ್ಣ ಸಾಕೇ ? ಖಂಡಿತ ಸಾಲದು. ಹಾಗಾಗಿ ಜಗತ್ತಿನಲ್ಲಿ ನನ್ನಂತಹ ಹಲವರು ದೇವದೂತರ ಅವಶ್ಯಕಥೆ ಉಂಟಾಗಿ ನಾವಿಲ್ಲಿ ನಮ್ಮ ಸೇವೆಯಲ್ಲಿ ತೊಡಗಿದ್ದೇವೆ.

ಸುಧಾದ  ಆನಂದರು ಮೂರು ವಾರ ಯುರೋಪಿನಲ್ಲಿ ಪ್ರವಾಸ ಮಾಡಿದ ಕಥೆ ಕಳೆದ ವಾರ ಸುಧಾ ಪ್ರಕಟಿಸಿತ್ತು. ಅಲ್ಲಿ ಅವರು ಕಂಡ ಶಿಸ್ತು ಅಚ್ಚುಕಟ್ಟು ಕೆಲಸದಲ್ಲಿ ಪ್ರಾಮಾಣಿಕತೆ ರಸ್ತೆ ಪ್ರಜ್ನೆ ನಮ್ಮಲ್ಲಿ ಜಾರಿಗೆ ಬರಲು ಎಷ್ಟು ವರ್ಷ ಕಾಯಬೇಕೋ ಎಂದಿದ್ದಾರೆ.  ಲೇಖನದ   ನಂತರದ ಪುಟದ ಕೊಂಡಿಯೂ   ಇಲ್ಲಿದೆ.  

ನಮ್ಮವರೇಕೆ ವಿಶ್ವಾಸ ದ್ರೋಹಿಗಳು ? ಸಮಾಜಕ್ಕಂಟಿದ ಹೆರಿಡಿಟರಿ ಡಿಫೆಕ್ಟಾ ? ನಂಬಿಕೆಗಳು ಸಂಸ್ಕೃತಿ ರೂಪಿಸುವುದೋ ಅಥವಾ ಸಂಸ್ಕೃತಿ ನಂಬಿಕೆಗಳನ್ನೋ ? ನಮ್ಮಲ್ಲಿ ಬ್ರಹ್ಮ ನನ್ನೇಕೆ ಪೂಜಿಸುವುದಿಲ್ಲ ಎಂದು ಪ್ರಶ್ನಿಸುವ ಆಂಗ್ಲ ಬಾಷೆಯ ಬರಹ ನನ್ನ ಹಲವು ಮನದಾಳದ ನಂಬಿಕೆಗಳಿಗೆ ಉತ್ತರ ತೋರುತ್ತದೆ.  ನಮ್ಮ ವರ್ತನೆಗೆ ಅರ್ಥ ತೋರಿಸುತ್ತದೆ.

ಪರೀಸ್ತಿತಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಸಮಯಸಾದಕತನದ ಇನ್ನೊಂದು ಮುಖ. ಹಾಗಾಗಿ ನಮ್ಮವರು ಉಳಿದ ದೇಶಗಳಲ್ಲಿ ಮಿಂಚುತ್ತಿದ್ದಾರೆ. Spelling bee ತರಹದ ಸ್ಪರ್ದೆಗಳಲ್ಲಿ ಯಾಕೆ ಗೆಲ್ಲುತ್ತಾರೆಂದರೆ ನಾವು ಬಾಯಿ ಪಾಠ ಕಲಿಯುವುದು ಜ್ನಾನವೆಂದು ತಪ್ಪು ತಿಳಿದಿದ್ದೇವೆ. ಹೊಸತಾಗಿ ಸೃಷ್ಟಿಸುವುದರಲ್ಲಿ ನಮ್ಮ ಸಾಮರ್ಥ್ಯ ಕಡಿಮೆ ಎನ್ನುವ ಸುಳಿವು ಈ ಬರಹದಲ್ಲಿ ಕಂಡೆ.

೩ ಆಗಸ್ತ್ ೨೦೦೯ ರಂದು  ಸೇರಿಸಿದ್ದು.

ಪ್ರಜಾವಾಣಿ  ಆಗಸ್ತ್  ೨ರ  ಸಂಚಿಕೆಯಲ್ಲಿ  ರಘುನಾಥರು  ಬಿಲ್ ಗೇಟ್ಸ್  ಬಗೆಗೆ  ಬರೆದ  ಲೇಖನದಲ್ಲಿ  ಮೇಲೆ  ಉಲ್ಲೇಖಿಸಿದ  ಲೇಖನದ  ಹೋಲಿಕೆ  ಇರುವ  ಕಾರಣ  ಈಗ   ಅನಂತರ    ಸೇರಿಸುತ್ತಿದ್ದೇನೆ.  ಪಶ್ಚಿಮದ  ಉದ್ಯಮಿಗಳು  ಸಮಾಜಕ್ಕೆ  ಋಣ  ಸಲ್ಲಿಸುವುದಾದರೆ  ನಮ್ಮಲ್ಲಿ  ದೇವರಿಗೆ  ಸಾಲ  ತೀರಿಸುತ್ತಾರೆ

Wednesday, July 22, 2009

ಸಂಪ್ರದಾಯ ಎನ್ನುವ ಸರಪಳಿಗೆ ಹೊಸತೊಂದು ಮುತ್ತು

ಒಂದರ ಹಿಂದೊಂದರಂತೆ ಸರ್ಕಾರಿ ಕಾರುಗಳು ತಿರುವು ಮುರುವಿನ ಕಚ್ಚಾ ರಸ್ತೆಯಲ್ಲಿ …..ಬೆಳಗಿನ ಜಾವ 6.45 ಕ್ಕೆ ಬಂದು ನಿಂತಾಗ ಸುತ್ತಲ ಗ್ರಾಮಸ್ಥರು…… ಎನ್ನುತ್ತದೆ ಉಡುಪಿಯ ಆಚಾರರು ಮೊದಲ ಬಾರಿಗೆ ಸ್ವರ್ಣ ನದಿಗೆ ಬಾಗಿನ ಅರ್ಪಿಸಿದುದರ ಬಗೆಗೆ ಇಂದಿನ ಪ್ರಜಾವಾಣಿ ಪತ್ರಿಕೆ ಮುಖಪುಟ ವರದಿ. ನಮ್ಮಲ್ಲಿ ಬಾಗಿನ ಎಂದು ತಲೆಕೆರೆದುಕೊಳ್ಳುತ್ತಿರುವಾಗ ನೆನಪಾಯಿತು ಹಿಂದೆ ನಡೆದ ಒಂದು ಘಟನೆ.

ದೂರದ ಜರ್ಮನಿಯಲ್ಲಿ ಪರಿಚಯವಾದ ಯುವಗೆಳೆಯ ಕ್ರಿಶ್ಚನ್ ಒಂದು ದಿನ ಬೆನ್ನ ಚೀಲ ಸಮೇತ ನಮ್ಮಲ್ಲಿಗೆ ಬಂದರು. ಮರುದಿನ ನನ್ನ ಅಪ್ತ ವರ್ಗದಲ್ಲೊಂದು ಮದುವೆ. ಮದುವೆ ಮನೆಯವರ ಅನುಮತಿ ಪಡೆದು ಇವರನ್ನೂ ಕರೆದೊಯ್ದೆ. ಇಂಗ್ಲೀಶ್ ಸಲೀಸಾಗಿ ಮಾತನಾಡುತ್ತಿದ್ದ ಕಾರಣ ಕ್ರಿಶ್ಚನ್ ಅಲ್ಲಿ ಎಲ್ಲರೊಂದಿಗೆ ಬೆರೆತರು.  ಸಂಸ್ಕೃತ  ಶ್ಲೋಕ  ಹೇಳುವ  ಸಂಪ್ರದಾಯ  ಇರುವ    ಊಟದ ವೇಳೆಯಲ್ಲಿ  ಇವರು   ಜರ್ಮನ್ ಪದ್ಯ ಹೇಳಿ ಎಲ್ಲರನ್ನೂ ರಂಜಿಸಿದರು.

ಮದುವೆ ಮನೆಯಿಂದ ಹೊರಡುವ ಮುಂಚೆ  ಕ್ರಿಶ್ಚನ್ ನನ್ನನ್ನು ತರಾಟೆಗೆ ತೆಗೆದುಕೊಂಡರು. ನಿಮ್ಮಲ್ಲಿ good morning, good evening  ಇಲ್ಲ ಎಂದು ನೀನು ಹೇಳಿದೆ. ಅಂತಹ ಸಂಪ್ರದಾಯ ಇದೆ ಎಂದು ಇವರು ಹೇಳುತ್ತಾರೆ ಎನ್ನುತ್ತಾ  ಅಲ್ಲಿದ್ದ  ಬ್ರಹ್ಮಚಾರಿ ಬಜರಂಗಿಯೊಬ್ಬರನ್ನು ತೋರಿಸಿದರು. ನನಗೆ ಮೈ ಪರಚಿಕೊಳ್ಳುವ ಅನುಭವ. ಇವರಲ್ಲಿ ಕೇಳಿದೆ  ಮಹಾರಾಯರೇ, ನಮ್ಮಲ್ಲಿ ಆ ಸಂಪ್ರದಾಯ ಇಲ್ವಲ್ಲ.  ಆಗ ಚಡ್ಡಿ  ಸರದಾರರು   ಉತ್ತರಿಸಿದರು  ಯಾಕಿಲ್ಲ.  ಶುಭ್ ದಿನ್, ಶುಭ್ ರಾತ್ …………

ಯುರೋಪಿನಲ್ಲಿ ನನಗೆ ಸಿಕ್ಕ ಹಲವು ಮಿತ್ರರು ತಮ್ಮ ಪರಂಪರೆಗೆ ಅಮೇರಿಕದ ಪ್ರಭಾವದಿಂದ ಹಾಳಾಗುತ್ತಿದೆ ಎನ್ನುವ ಕಾಳಜಿ ಸ್ಪಷ್ಟವಾಗಿ ವ್ಯಕ್ತ ಪಡಿಸಿದ್ದರು. ಆದರೆ ನಾವು ನಮ್ಮ ಪರಂಪರೆಗಳ ಬಿಸಾಕಿ ಹೊಸತನಕ್ಕೆ ಹೊಂದಿಕೊಳ್ಳಲು ಯಾವಾಗಲೂ ತಯಾರು.

ಮೈಸೂರ ಅರಸರು ಮಾಡುತ್ತಿದ್ದ ಆಯುಧ ಪೂಜೆ ವಾಹನ ಗಾರೇಜುಗಳ ಬೆನ್ನೇರಿ ನಮ್ಮೂರಿಗೂ ಕಾಲಿಟ್ಟಿತು. ಮಹಾರಾಷ್ಟ್ರದಲ್ಲಿ ಮೊದಲು ಪ್ರಾರಂಬವಾಗಿ ನಮ್ಮಲ್ಲಿಗೆ ಕಾಲಿಟ್ಟ ಸತ್ಯನಾರಾಯಣ ಪೂಜೆಗೆ ಒಟ್ಟು ಇತಿಹಾಸ ನೂರು ವರ್ಷಗಳಷ್ಟು ಎಂದು ಶ್ರೀ ಸಂಜಯ ಹಾವನೂರರು ಸುಧಾದಲ್ಲಿ ಸಂಶೋಧನಾ ಬರಹ ಹಿಂದೊಮ್ಮೆ ಬರೆದಿದ್ದರು. ಮೊದಲಿಗೆ ನಮ್ಮಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ಏರ್ಪಡಿಸಿದವರು ಪರಿವಾರದವರೇ. ಕಾರಣಾಂತರಗಳಿಂದ ಮುಖ್ಯವಾಗಿ ಜಾತಿ ಮತ ಮೀರಿ ಎಲ್ಲರೂ ಪಾಲ್ಗೊಳ್ಳುವ ಅವಕಾಶ ಇರುವುದರಿಂದ ಅದು ವ್ಯಾಪಕ ಪ್ರಚಾರಕ್ಕೆ ಬಂತು.

 ಈಗ ಕರಾವಳಿ ಪ್ರದೇಶಕ್ಕೆ ಹೊಸತಾಗಿ ಸೆರ್ಪಡೆಯಾಗುತ್ತಿರುವ ಸಂಪ್ರದಾಯ ಹೊಳೆಗೆ ಬಾಗೀನ ಅರ್ಪಣೆ. ಉಡುಪಿಯ ಆಚಾರರು ಸ್ವರ್ಣ ನದಿಗೆ ಬಾಗಿನ ಅರ್ಪಿಸಿ ಮೇಲ್ಪಂಕ್ತಿ ಹಾಕಿ ಉಳಿದ ತುಂಡು ಪುಡಾರಿಗಳಿಗೆ ತೋಡು ಕಣಿಗಳಿಗೆ ಬಾಗಿನ ಅರ್ಪಿಸುವ ಅನಿವಾರ್ಯತೆ ಉಂಟು ಮಾಡಿದ್ದಾರೆ. ನಾವೊಂದು ಮಹತ್ವದ ಮಾದರಿ ಕಾರ್ಯಕ್ರಮ ನಡೆಸಿದ್ದೇವೆ. ಪ್ರತಿ ವರ್ಷ ಸರಕಾರ ಇದನ್ನು ನಡೆಸಿಕೊಂಡು ಬರಬೇಕೆಂದು ಶಾಸಕ ರಘುಪತಿ ಭಟ್ ಸುದ್ದಿಗೋಷ್ಟಿಯಲ್ಲಿ ಅಪ್ಪಣೆ  ಕೊಡಿಸಿದ್ದಾರೆ. ಅದೊಂದು ಮಹಾ ಸಾದನೆ ಎನ್ನುವಂತೆ ಅಚಾರರು ತಮ್ಮ ಬ್ಲೋಗಿನಲ್ಲೂ ಹಾಕಿಕೊಂಡಿದ್ದಾರೆ.  


Friday, July 10, 2009

ಗೂಗಲ್, ಕೂಗಲ್ ಮತ್ತು ಹಲಾಗಲ್

ಮದ್ಯಪೂರ್ವದ  ಮರಳುಕಾಡಿನಲ್ಲಿ ಹುಟ್ಟಿದ ಜನಾಂಗಗಳು ಮೂರು. ಅವರೊಳಗೆ ಹೆಚ್ಚಿನ ವಿಚಾರದಲ್ಲಿ ಸ್ಪರ್ಧಾತ್ಮಕ ಮನೋಭಾವ. ಇಸ್ರೇಲಿನಲ್ಲಿ ದರ್ಮಶಾಸ್ತ್ರ ಸಮ್ಮತಿಸುವಂತಹ ಅಂತರ್ಜಾಲ ಹುಡುಕಾಟಕ್ಕೆ ಕೂಗಲ್ ಎನ್ನುವ ಗೂಗ್ಲ್ ಪರ್ಯಾಯವನ್ನು ಯಹೂದಿಯರು ಹುಟ್ಟುಹಾಕಿದ್ದಾರೆ. ಈಗ ಯಹೂದಿಯರು ನಮ್ಮನ್ನು ಸೋಲಿಸಿಯೇ ಬಿಟ್ಟರಲ್ಲ ಎನ್ನುವ ಬಾವನೆ ಮೂಲಭೂತವಾದಿ ಮುಸ್ಲೀಮರಲ್ಲಿ ಆವರಿಸಿದೆ.



ಯಹೂದಿಯರ ದರ್ಮ ಒಪ್ಪುವ ಆಚರಣೆಗಳ ಆಹಾರಗಳ ಕೋಷರ್ ಎನ್ನುತ್ತಾರೆ. ಎಲ್ಲವೂ ಅಂತರ್ಜಾಲಮಯ ಎನ್ನುವ ಈ ದಿನಗಳಲ್ಲಿ ಅವರ ದಾರ್ಮಿಕ ಮುಖಂಡರು ಒಪ್ಪುವಂತಹ ತಾಣಗಳ ಮಾತ್ರ ಹುಡುಕಿ ಪ್ರದರ್ಶಿಸುವ ತಾಣ ಕೂಗಲ್  . ಕೊಶರ್ ಮತ್ತು ಗೂಗ್ಲ್ ಪದಗಳ ಜತೆ ಸೇರಿಸಿರುವ ಹಣೆಬರಹ ಹೊತ್ತಿರುವ ಈ ತಾಣದಲ್ಲಿ ದೇವರಿಗೆಂದು ಮೀಸಲಾದ ಶುಕ್ರವಾರ ಸೂರ್ಯಾಸ್ಥದಿಂದ ಶನಿವಾರ ಸೂರ್ಯೋದಯ ವರೆಗೆ ವ್ಯವಹಾರ ನಡೆಯುವುದಿಲ್ಲ



ಯಹೂದಿಯರಿಗೆ ಜಾತಿ ವಿರೋದಿ ನಡುವಳಿಕೆಯ ಅಂದರೆ ಅರೆ ಬತ್ತಲೆ ಹೆಂಗಸರ ಚಿತ್ರಗಳಂತಹ ವಸ್ತುಗಳು ಮತ್ತು ಸಂಪರ್ಕ ಕೊಂಡಿಗಳ ನೀವು ಆ ತಾಣದಲ್ಲಿ ಕಾಣಲು ಸಾದ್ಯವಿಲ್ಲ. ಟೆಲಿವಿಶನ್ ತರಹ ನಿರ್ಬಂದಿತ ವಸ್ತುಗಳಿಂದ ದೂರವಿರಲು ಪ್ರಯತ್ನಿಸಲಾಗುತ್ತದೆ. ಈಗಾಗಲೇ ತಿಂಗಳಿಗೆ ಲಕ್ಷ ಜನ ಬೇಟಿ ನೀಡುವರೆನ್ನುವುದು ಕಳೆದ ತಿಂಗಳ ವರದಿ.


ಕೋಶರ್ ಎಂದರೆ ನಮಗೆ ಪರಿಚಿತ ಮುಸ್ಲಿಮರ ಹಲಾಲ್ ಪದದ ಯಹೂದಿ ರೂಪ. ಹಲವು ಸಮಾನ ಆಚರಣೆಗಳು. ಮುಸ್ಲೀಮರು ಬಹು ಮಟ್ಟಿಗೆ ಕೋಷರ್ ಆಹಾರ ಹಲಾಲಿಗೆ ಸಮಾನವೆಂದು ಸಮ್ಮತಿಸುವುದಾದರೂ ಯಹೂದಿಯರಿಗೆ ಹಲಾಲ್ ಆಹಾರ ಅವರ ರಾಬ್ಬಿಗಳು ಅಂದರೆ ದರ್ಮ ಪಂಡಿತರು ಸಮ್ಮತಿಸುವುದಿಲ್ಲ. ಅವರ ಮಾನದಂಡಗಳು ಇನ್ನೂ ಕ್ಲಿಷ್ಟ.


ಈಗ ಯೋಜಿತ ಹಂತದಲ್ಲಿರುವ  ಹಲಾಗಲ್  ಹಲಾಲ್ + ಗೂಗಲ್   ಬಗೆಗೆ ಗಮನ ಹರಿಸೋಣ. ಹಲಾಲ್ ತಂತ್ರಜ್ನರ ಸಮಸ್ಯೆ ಅಷ್ಟು ಸರಳವಲ್ಲ. ಮುಸ್ಲಿಂ ಜನ ಹಲವಾರು ಪಂಗಡಗಳು ಹಾಗೂ ಆಚರಣೆಯೊಂದಿಗೆ ಪ್ರಪಂಚದಲ್ಲಿ ಹಂಚಿಹೋಗಿದ್ದಾರೆ. ಹೋಲಿಸಿದರೆ ಯುಹೂದಿಯರ ಸಂಖ್ಯೆ ಮತ್ತು ಪಂಗಡಗಳು ಎರಡೂ ಕಡಿಮೆ. ಅದುದರಿಂದ ನಿರ್ಬಂದಗಳು ಸಿಮಿತ. ಹೀಗೆ ಕೋಶರ್ ತಂತ್ರಜ್ನರು ಸುಲಭವಾಗಿ ಗೆದ್ದರು.

ಹೊಸ ಜಾಲದಲ್ಲಿ ಕಾಣುವ ಮಾಲುಗಳು ಸೇವೆಗಳು ಎಷ್ಟರ ಮಟ್ಟಿಗೆ ಹಲಾಲ್ ಎನ್ನುವ ಸುಳಿವು ತೋರಿಸುವ   ಪ್ರಯತ್ನ ಇದೆಯಂತೆ. ಹಸಿರು ಸೂಚನೆ ಪಕ್ಕಾ ಹಲಾಲ್,  ಕೇಸರಿ ಪರವಾಗಿಲ್ಲ ಕೆಂಪು ಮಾರ್ಕಿದ್ದರೆ ಹೆಚ್ಚು ಕಮ್ಮಿ ಹರಾಮ್ ಮಾಲು. ದೂರವಿಡಿ ಎನ್ನುವ ಎಚ್ಚರಿಕೆ.   ಮತ್ತೆ ನಿಮ್ಮಿಷ್ಟ ಎನ್ನುವ ಕೊನೆಯ ಮಾತು. ಹಲಾಲ್ ಮಾಂಸ, ಹಲಾಲ್ ತಿಂಡಿಗಳು, ಹಲಾಲ್ ಬಾಂಕು ಉಮ್ರಾ ಪ್ರವಾಸ ಇವುಗಳ ಜಾಹಿರಾತುಗಳು ಮಾತ್ರ ಪುಟಿದೇಳುವುದಂತೆ. ಮೆಕ್ಕಾಗೆ ಮುಖ ಮಾಡಿ ಪ್ರಾರ್ಥನೆ ಮಾಡುವ ಸಮಯದಲ್ಲಿ ಇದು ಸ್ಥಬ್ದ.

ಇನ್ನು ನಮ್ಮ ಬಜರಂಗಿಗಳು ಸುಮ್ಮನಿರುವುದಾದರು ಹೇಗೆ ? ಹಿಂದೂ ರಾಷ್ಟ್ರಕ್ಕೆ ಅನುಗುಣವಾಗಿ ಒಂದು ಜಾಲ ಸ್ಥಾಪಿಸುತ್ತಿದ್ದರು. ನಸೀಬು ಚೆನ್ನಾಗಿಲ್ಲದೆ ಇದನ್ನು ಬೆಂಬಲಿಸಬಹುದಾದ ಪಕ್ಷದವರು ಸೋತಿದ್ದಾರೆ.

Thursday, July 09, 2009

ಜಪಾನಿನಲ್ಲೊಂದು ಸ್ನಾನ.

ಬೇರೆ ದೇಶಗಳಲ್ಲಿ ಖಾಸಗಿ ಮನೆಗಳಿಗೆ ಬೇಟಿ ಇತ್ತರೆ ಕೆಲವೊಂದು ಅವರು ಆಚರಿಸುವ ಕಟ್ಟುಪಾಡುಗಳ ಅನುಸರಿಸಬೇಕಾಗುತ್ತದೆ. ಜಪಾನಿನ ಸ್ನಾನದ ಕ್ರಮದಲ್ಲಿ ನಮಗೆ ಮುಜುಗರವೆನಿಸುವ ಸಂಪದ್ರಾಯವನ್ನು ಕಂಡ ವಿಚಾರ ಹಂಚಿಕೊಳ್ಳುವೆ. ಈ ಇಪ್ಪತೈದು ವರ್ಷ ಹಿಂದಿನ ಅಸ್ಪಷ್ಟ ಅನುಭವ ನೆನಪಾಗಲು ಕಾರಣ ಚಳಿ ಜ್ವರದಿಂದ ಚೇತರಿಸಿಕೊಳ್ಳುತ್ತಿರುವ ನನಗೆ ಬಿಸಿನೀರಲ್ಲಿ ಕೂರಲು  ಕುಶಿಯಾಗುತ್ತದೆ. ದೈಹಿಕ ಸಮಸ್ಯೆಯಿಂದಾಗಿ ನನಗೆ ಚಳಿ ಎಂದರೆ ಎಲುಬು ಸೆಳಿತಕ್ಕೆ ಕಾರಣವಾಗುವ ಬೀಕರ ಶಿಕ್ಷೆ.

ನಮಗೆ ಸ್ನಾನದ ತೊಟ್ಟಿ ಎಂದರೆ ಮನಸಿನಲ್ಲಿ ಮೂಡುವುದು ಪಾಶ್ಚಾತ್ಯ ಮಾದರಿ. ಜಪಾನಿನದು ಅದಕ್ಕಿಂತ ಕಡಿಮೆ ಉದ್ದ ಮತ್ತು ಹೆಚ್ಚು ಎತ್ತರ. ಬಿಸಿ ನೀರನ್ನು ಕಾಪಾಡಲು ಅದಕ್ಕೊಂದು ಮುಚ್ಚಳ.  ಉಪಯೋಗಿಸುವ  ಕ್ರಮವೂ  ತೀರಾ ಬಿನ್ನ.

ಮೈಗೆ ಸಾಬೂನು ಹಚ್ಚಿಕೊಂಡು ಈ ತೊಟ್ಟಿಗೆ ಇಳಿಯುವಂತಿಲ್ಲ. ಹೊರಗೆ  ನಮ್ಮಲ್ಲಿ  ಇರುವಂತಹ  ಮೈತೊಳೆಯುವ ಜಾಗದಲ್ಲಿ    ಸಾಬೂನು ಸ್ನಾನ ಮುಗಿಸಿದ ನಂತರವೇ ಇದಕ್ಕೆ ಇಳಿಯುವುದು. ನಾವು ಉಪಯೋಗಿಸಿದ ನಂತರ ನೀರನ್ನು ಹೊರಬಿಡುವಂತಿಲ್ಲ. ಮನೆಯಲ್ಲಿ ಎಂಟು ಜನರಿದ್ದರೆ ಎಂಟು ಜನ ಬೆಚ್ಚಗೆ ಕೂತ ನಂತರವೇ ನೀರು ಖಾಲಿ ಮಾಡುವುದು. ಬೇರೆಯವರು ಕೂತೆದ್ದ ನೀರಿನಲ್ಲಿ ನಮಗೆ ಕೂರುವುದೆಂದರೂ ಹಾಗೂ  ನಮ್ಮ ದೇಹದ ಕೊಳೆ ಇರಬಹುದಾದ ನೀರಿನಲ್ಲಿ ಉಳಿದವರು ಕೂರುವುದೆಂದರೆ ಮುಜುಗರವೆನಿಸುತ್ತದೆ.

ಕುತ್ತಿಗೆ ವರೆಗೆ ಬಿಸಿನೀರು ಅನುಭವಿಸುವ ಈ ಸ್ನಾನ ಹಿಂದಿನ ಕಾಲದ ಚಳಿಗಾಲದಲ್ಲಿ ಹೆಚ್ಚು ಅನಿವಾರ್ಯವಾಗಿರಬಹುದು. ಮನೆಗಳಲ್ಲಿ   ಇತರ  ಜಾಗಗಳಲ್ಲಿ   ವಿಪರೀತ ಚಳಿಯಿರುವ ಕಾರಣ ಸ್ವಲ್ಪ ಹೊತ್ತು ಈ ತೊಟ್ಟಿಯಲ್ಲಿ ಕುಳಿತು ಬೆಚ್ಚಗಾಗುವ  ಸನ್ನಿವೇಶ.  ಅನಂತರ  ಸುಖ ನಿದ್ರೆ.

ಅಲ್ಲಿಗೆ ಹೋದಾಗ ಪಾಯಿಖಾನೆಗೂ ಹೋಗಬೇಕಲ್ಲಾ, ಸಂಬಂದ ಪಟ್ಟ  ಒಂದು  ಕಿವಿ ಮಾತು. ಅಲ್ಲಿನ ಪಾಯಿಖಾನೆಗಳ ಹೊರಗೆ ಹವಾಯಿ ಚಪ್ಪಲಿಗಳಿಟ್ಟಿರುತ್ತಾರೆ. ಅದನ್ನು ಹಾಕಿಕೊಂಡು ಒಳಹೋಗಬೇಕು. ಹೆಚ್ಚಿನ ಪಾಯಿಖಾನೆಗಳು ನಮ್ಮಲ್ಲಿರುವಂತೆ ಕುಕ್ಕರಗಾಲಿನಲ್ಲಿ ಕೂರುವಂತದ್ದು. ಪಾಶ್ಚಾತ್ಯ ಸಿಂಹಾಸನ ಮಾದರಿ ಅಲ್ಲ.

Saturday, July 04, 2009

ಕ್ಷಮಿಸಿ, ಎತ್ತಿನ ಗಾಡಿಗೆ ಪ್ರವೇಶವಿಲ್ಲ



ಎತ್ತಿನ ಗಾಡಿಗೆ ಪ್ರವೇಶವಿಲ್ಲ ಎಂದು ಘೋಷಿಸುವ ಪ್ರಪಂಚದ ಏಕಮಾತ್ರ ಸಮುದ್ರ ಸೇತುವೆ ನಮ್ಮ ಮುಂಬಯಿಯಲ್ಲಿದೆ ಎನ್ನುವುದು ನಮಗೆಲ್ಲ ಬಹಳ ಹೆಮ್ಮೆಯ ವಿಚಾರ. ಪ್ರಜೆಗಳ ತೇರಿಗೆ ಹಣದಿಂದ ಕಟ್ಟಲ್ಪಟ್ಟ ಇದು ಮೊನ್ನೆ ಸೋನಿಯಾ ಗಾಂಧಿ ಎಂಬವರಿಂದ ದೇಶಕ್ಕೆ ಸಮರ್ಪಿಸಲ್ಪಟ್ಟಿತು.

ಸಮುದ್ರ ಸೇತುವೆ ಮೇಲಿರುವ digital signboard ಉದ್ಗಾಟನೆಯಾಗಿ ದಿನ ಕಳೆದರೂ ಸೋನಿಯಾಜಿ ನಿನಗೆ ಸ್ವಾಗತ ಎನ್ನುತ್ತಿವೆಯಂತೆ. ಕ್ಷಣಮಾತ್ರದಲ್ಲಿ ಸಂದೇಶ ಬದಲಿಸಲು ಸಾದ್ಯವಾಗುವಂತಹ ಈ ಸೂಚನಾ   ಫಲಕಗಳು
ಇನ್ನೂ ಮಹಾರಾಣಿಯ ಗುಂಗಿನಲ್ಲಿದ್ದು   ಇದರ ಸಂದೇಶ ಬದಲಿಸಲು ಇನ್ನೂ ಹುಕುಂ ಆಗಲಿಲ್ಲ.   ಮೇಲು ನೋಟಕ್ಕೆ ಕಾಣುವ ಮಟ್ಟಿಗೆ ಈ ಸೇತುವೆ ನಿಷ್ಪ್ರಯೊಜಕ.

ಅತಿ ದಟ್ಟಣೆ ಇರುವ Worli-Nariman Point ಸಂಪರ್ಕ ಸಮುದ್ರ ಸೇತುವೆ ಇದ್ದರೆ ಮಾತ್ರ ಈ ಸಮುದ್ರ ಸೇತುವೆ ಉಪಯುಕ್ತ ಎಂದು ಮಾಜಿ ಮುನ್ಸಿಪಲ್ ಕಮಿಷನರ್ Jamsheed Kanga ಹೇಳುತ್ತಾರೆ. ಇಲ್ಲವಾದರೆ ಪಾಂಟಿನ ಒಂದು ಕಾಲಿಗೆ ಮಾತ್ರ ಹೊಲಿಗೆ ಹಾಕಿದಂತೆ. ಎರಡನೇಯ ಕಾಲಿಗೆ ಹೊಲಿಗೆ ಇಲ್ಲವಾದರೆ ……………….[ ನಿರುಪಯುಕ್ತ ತಿಡಿಗೇಡಿ ವ್ಯವಹಾರ.]

ಮುಂಬಯಿಯ ಅಧಿಕಾರಿಗಳು ಹೇಳುವಂತೆ ಇನ್ನೊಂದು ಸೇತುವೆ ಅನಿವಾರ್ಯ. ಇದಕ್ಕೆ ರಾಜೀವನ ಹೆಸರಿಟ್ಟರೆ ಅದಕ್ಕೆ ಸೋನಿಯಾಳ ಹೆಸರೇ ಇಡಬಹುದು.

ಸಮೀಪಿಸುವ ದಾರಿಗಳ ಅವ್ಯವಸ್ಥೆಯಿಂದಾಗಿ ಈ ರಸ್ತೆ ಉಪಯೋಗಿಸಿದವರು ಹತ್ತು ನಿಮಿಷ ಉಳಿದರೆ ವಿಶೇಷ. ನಿನ್ನೆ ರಾತ್ರಿ ಹನ್ನೊಂದು ಘಂಟೆಗೆ ಸಹಾ ಕಾರಿನಲ್ಲಿ ಈ ಸೇತುವೆಯ ಮೇಲಿರುವ 4.7 ಕಿಮಿ ದೂರದ ರಸ್ತೆ ದಾಟಲು  ಯೋಜನೆ  ಪ್ರಕಾರದ  ಏಳು   ನಿಮಿಷಕ್ಕೆ  ಬದಲಾಗಿ  ಇಪ್ಪತ್ತೈದು ನಿಮಿಷ ಬೇಕಾದರೆ ಇದರೆ ಉಪಯುಕ್ತತೆ ಸಂಶಯಾಸ್ಪದವಾಗುತ್ತಲಿದೆ.


ಎಂಟು ಪಥಗಳು ಎನ್ನಲಾದ    ಈ ಸೇತುವೆಯಲ್ಲಿ ನಮಗೆ ಕಾಣುವುದು ನಾಲ್ಕೇ  ದಾರಿಗಳು.   ದ್ವಿಚಕ್ರ ವಾಹನ ಮತ್ತು ಬಸ್ಸುಗಳಿಗೂ ಪ್ರವೇಶವಿಲ್ಲ. ಶೇಕಡ ಎಂಬತ್ತ ಎಂಟು ಮುಂಬಯಿ ನಾಗರಿಕರು  ಬಸ್    ಮತ್ತು  ರೈಲು ಉಪಯೋಗಿಸುವರಂತೆ.     ಸ್ವಂತ  ವಾಹನ  ಉಪಯೋಗಿಸುವ  ಶೇಕಡಾ ಹನ್ನೆರಡು  ನಾಗರಿಕರಲ್ಲಿ   ದ್ವಿ ಚಕ್ರಿಗಳೂ  ಸೇರಿದ್ದಾರೆ.  ಅದುದರಿಂದ  ಬಹು  ಸಣ್ಣ  ಸಂಖ್ಯೆ ಕಾರು  ಉಪಯೋಗಿಸುವವರಿಗಾಗಿ  ಇದೊಂದು  ದುಬಾರಿ  ಯೋಜನೆ.

 ನಮ್ಮವರೂ   ಸಾಮಾನ್ಯರಲ್ಲ.  ಮೇಲು ಸೇತುವೆ ವಿನ್ಯಾಸದಲ್ಲಿ ಎಡವಟ್ಟಾಗಿ ಅದರ ಮೇಲೆ ಪೋಲಿಸಪ್ಪನನ್ನು ನಿಲ್ಲಿಸುವ ಹೆಗ್ಗಳಿಕೆ ನಮ್ಮ ಬೆಂಗಳೂರಿನದಂತೆ.  

Thursday, July 02, 2009

ವಿದ್ಯುತ್ ಗರೀಷ್ಟ ಬೇಡಿಕೆ ನಿಬಾಯಿಸುವ ಬಗ್ಗೆ ಚಿಂತನೆ

 

ದೆಹಲಿಯಲ್ಲಿ ಎರಡರಿಂದ ಹನ್ನೆರಡು ಘಂಟೆ ವಿದ್ಯುತ್ ಕಡಿತ ಜನರ ಪ್ರತಿಭಟನೆ ಎಂದು ನಿತ್ಯವೂ ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ನೀರು ಮತ್ತು ವಿದ್ಯುತ್ ಪರಸ್ಪರ ಅವಲಂಬಿತವಾಗಿ ಪರೀಸ್ಥಿತಿ ಇನ್ನೂ ಕಠೀಣ. ಉತ್ತರ ಪ್ರದೇಶದಲ್ಲಿ ಬೆಳಗ್ಗಿನಿಂದ ರಾತ್ರಿ ವರೆಗೆ ಹವಾ ನಿಯಂತ್ರಣ ಉಪಯೋಗಿಸಲು ನಿರ್ಬಂದ ಸಂಭವ ಪತ್ರಿಕೆಯಲ್ಲಿ ಓದುತ್ತಿದ್ದೇವೆ. ಈ ಅವ್ಯವಸ್ಥೆ ನಿರ್ವಹಿಸಲು ಇಲ್ಲೊಂದು ಉತ್ತಮ ಪರ್ಯಾಯ ಇದ್ದಂತಿದೆ.

ನಾಳೆಗೆ ತಿಂಡಿಯ ಈಗಲೆ ಹುಡುಕುವ ಆಗದೆ ಅಂದಿತು ಮರಿಕಪಿಯೊಂದು ಎನ್ನುವಂತಿರುವ ಈ ಯೋಜನೆಯಲ್ಲಿ ಹಿಂದಿನ ರಾತ್ರಿ ಕಡಿಮೆ ಬೆಲೆಯ ವಿದ್ಯುತ್ ಉಪಯೋಗಿಸಿ ಹಿತ್ತಾಳೆ ಕೊಳವೆಗಳ ಸುತ್ತಲೂ ಐಸ್ ತಯಾರಿಸಿಟ್ಟರೆ ಮರುದಿನ ಅದನ್ನು ಉಪಯೋಗಿಸಲು ಸಾದ್ಯವಂತೆ. ಹಿಂದಿನ ದಿನದ ಬಿಸಿಲು ನಮ್ಮ ಮರುದಿನದ ಬೆಳಗಿನ ಸ್ನಾನಕ್ಕೆ ಬಿಸಿನೀರು ಒದಗಿಸುವಂತೆ. ಆಗ ಮದ್ಯಾಹ್ನ ಹವಾನಿಯಂತ್ರಣ ಯಂತ್ರ ಉಪಯೋಗಿಸುವ ವಿದ್ಯುತ್ ಶೇಕಡಾ ೯೫ ಕಡಿಮೆ ಎಂದವರು ಹೇಳುತ್ತಾರೆ. ಇದನ್ನು ಅಳವಡಿಸಲು ಗ್ರಾಹಕರ ಮೇಲೆ ಒತ್ತಡ ಹೇರಬೇಕಾದರೆ ಹಗಲು ಬಳಸುವ ವಿದ್ಯುತ್ ಹೆಚ್ಚು ದುಬಾರಿಯಾಗಬೇಕು.

ದೆಹಲಿಯಲ್ಲಿ ಉಪಯೋಗಿಸುವ ಹೊತ್ತು ಅವಲಂಬಿಸಿ ವಿದ್ಯುತ್ ದರ ಎನ್ನುವ ಹೊಸ ವಿದಾನ ಜಾರಿಗೆ ತರಲು ಉದ್ದೇಶಿಸಲಾಗಿತ್ತು. ಆಗ ಅತಿ ಹೆಚ್ಚು ಬೇಡಿಕೆಯ ಸಮಯದಿಂದ ಕಮ್ಮಿ ಬೇಡಿಕೆಯ ಸಮಯಕ್ಕೆ ಬಳಕೆಯನ್ನು ವರ್ಗಾಯಿಸಿ ಜಾಲದ ಮೇಲಿರುವ ಒತ್ತಡ ಕಡಿಮೆ ಮಾಡಲು ಉದ್ದೇಶಿಸಲಾಗಿತ್ತು. ಸಂಜೆ ಆರೂವರೆಯಿಂದ ಹತ್ತೂವರೆ ವರೆಗೆ ಅತಿ ಹೆಚ್ಚು ಅಂದರೆ  ೬.೪೦ರಂತೆ   ದರ ವಿದಿಸಿ ಅನಂತರ ಬೆಳಗ್ಗೆ ಆರುವರೆ ವರೆಗೆ ೧.೬೦ ಪೈಸೆ ದರ ವಿಧಿಸುವ ಉದ್ದೇಶವಿತ್ತು. ಆಗ ಗೃಹ ಬಳಕೆದಾರರ ಸಂಘಟನೆ ಆಕ್ಷೇಪಣೆ ವ್ಯಕ್ತ ಪಡಿಸಿತ್ತು. ಆಗ ಮೋಬೈಲ್ ಚಾರ್ಜ್ ಮಾಡಿದರೂ ದುಬಾರಿ ಅನ್ನುವ ಅತಂಕ ಹೇಳಿಕೊಂಡಿದ್ದರು. ಹವಾ ನಿಯಂತ್ರಣದ ಉಪಯೋಗಕ್ಕೆ ಖಂಡಿತ ಹೆಚ್ಚಿನ ದರ ವಿದಿಸಬಹುದು.

ಒಂದು ಸಣ್ಣ ಎಸಿ ಬಳಸುವ ವಿದ್ಯುತ್ತಿನಲ್ಲಿ ಮೂವತ್ತರಿಂದ ನಲುವತ್ತು ಫಾನುಗಳು ತಿರುಗಲು ಸಾದ್ಯ. ಅದರೆ ಹವಾ ನಿಯಂತ್ರಣ ವ್ಯವಸ್ಥೆ ಹಾಕಿಸಿಕೊಂಡವರು ಬೇಸಿಗೆಯ ದಿನಗಳಲ್ಲಿ ಮದ್ಯಾಹ್ನ ಅದನ್ನು ಬಳಸಬೇಡಿ ಎಂದರೆ ಒಪ್ಪುವುದು ಅಸಂಬವ. ಆದರೆ ಅವರಿಗೆ ಸೌರ ಫಲಕಗಳ ಹಾಕಿಸಿಕೊಳ್ಳಲು ಒತ್ತಡ ಹಾಕುವುದು ಉತ್ತಮ ವಿಧಾನ. ಹೆಚ್ಚಾದ ವಿದ್ಯುತ್ ಜಾಲಕ್ಕೆ ಪೊರೈಸಬಹುದು. ಲಬ್ಯವಿರುವ ವಿದ್ಯುತ್ ಹೆಚ್ಚು ವಿದ್ಯುತ್ ಬೇಡುವ ಹವಾ ನಿಯಂತ್ರಣಕ್ಕೆ ಉಪಯೋಗವಾಗದಿದ್ದರೆ ಸಮಸ್ಯೆ ಸ್ವಲ್ಪ ಮಟ್ಟಿಗೆ ಪರಿಹಾರವಾಗಬಹುದು. ಈ ಮಾತು ನಮ್ಮ ಪಟ್ಟಣಗಳಿಗೂ ಅನ್ವಯ.

Wednesday, July 01, 2009

ತಾಜ ಮಹಲಿಗೆ ಕವಚವೆನಿಸುವ ತುಳಸಿ ಸಸಿ

ಇತ್ತೀಚೆಗೆ ಈ ವರ್ಷ ಮಳೆಗಾಲದಲ್ಲಿ ಯಾವ್ಯಾವ ಗಿಡ ನೆಡುವುದೆನ್ನುವ ಚಿಂತನೆಯಲ್ಲಿ ಮುಳುಗಿದ್ದೆ. ಮುಖ್ಯವಾಗಿ ಕೂಲಿಯಾಳುಗಳ ಹೊಂದಾಣಿಕೆ ಮಾಡುವಲ್ಲಿ ಸೋತು ಅಪಾರ ಹಣದ ಸಸಿ ಇತ್ತೀಚಿನ ವರ್ಷಗಳಲ್ಲಿ ಹಾಳು ಮಾಡಿದ್ದೇನೆ. ಮನಸ್ಥಿತಿ ಹಾಗಿರುವಾಗ ಮತ್ತು ಏನನ್ನೋ ಹುಡುಕುವಾಗ ಕಂಡ ಪತ್ರಿಕಾ ಪ್ರಕಟಣೆ ನನಗೆ ಅದ್ಬುತ ಎನಿಸಿತು. ಪುಣ್ಯಕ್ಕೆ ಯುರೆಕಾ ಎಂದು ಬತ್ತಲೆ ಓಡಲಿಲ್ಲ.

ತಾಜ್ ಮಹಲ್ ಸುತ್ತಲೂ ಹತ್ತು ಲಕ್ಷ ತುಳಸಿ ಸಸಿ ನೆಡುವ ಕಾರ್ಯ ಪ್ರಾರಂಬವಾಗಿದೆ ಎನ್ನುವುದು ಪ್ರಕಟಣೆಯ ಸಾರಾಂಶ. ತುಳಸಿಗೆ ಗಾಳಿಯನ್ನು ಶುದ್ದಿಕರಿಸುವ ಹೆಚ್ಚು ಅಮ್ಲಜನಕ ಬಿಡುಗಡೆ ಮಾಡುವ ಗುಣವಿದೆಯಂತೆ. ಅದುದರಿಂದ ಸುತ್ತಲೂ ತುಳಸಿ ನೆಡಿಸಿದರೆ ತಾಜ್ ಮಹಲ್ ಕವಚ ತೊಟ್ಟಂತೆ ಅನ್ನುವುದು ಸ(ತ)ರಕಾರಿ  ವಿ(ಅ)ಜ್ನಾನಿಗಳ  (ಕು)ತರ್ಕ.

ಸುಮಾರು ಮೂವತ್ತು ವರ್ಷ ಹಿಂದೆ ಕೊ.ಲ.ಕಾರಂತರು [ಶಿವರಾಮ ಕಾರಂತರ ಅಣ್ಣ ಕೋಟ ಲಕ್ಷ್ಮಿನಾರಾಯಣ ಕಾರಂತರು ] ಉದಯವಾಣಿಯಲ್ಲೊಂದು ಇದಕ್ಕೆ ಹೋಲುವಂತೆ ಲೇಖನ ಬರೆದಿದ್ದರು. ಇರುವ ಮರಗಳನ್ನೆಲ್ಲ ಕಡಿದು ಪಾಪ ಪರಿಹಾರಾರ್ಥ ಮನೆ ಮುಂದೆ ತುಳಸಿ ನೆಟ್ಟರೆ ಆ ತುಳಸಿ ಸಸಿ ಶುದ್ದಿಕರಿಸಿದ ಗಾಳಿ ನೇರವಾಗಿ ನಮ್ಮ ಮೂಗಿಗೆ ಹೋಗುವುದಿಲ್ಲ. ಎನ್ನುವ ಸಂದೇಶ ಆ ಲೇಖನದ ಸಾರಾಂಶ.

ಸರಕಾರಿ ಇಲಾಖೆ ಮತ್ತು ಖಾಸಗಿ ಸಂಸ್ಥೆ ಜತೆಗೂಡಿ ಕೈಗೊಳ್ಳುವ ಈ ಕಾರ್ಯದಿಂದ ತುಳಸಿ ಗಿಡಗಳು ಶುದ್ದ ಆಮ್ಲಜನಕ ಬಿಡುಗಡೆ ಮಾಡುವುದೆಂದು ಅವರು ಹೇಳಿಕೊಂಡಿದ್ದಾರೆ. ಇದರಿಂದಾಗಿ ತಾಜಮಹಲ್ ಮೇಲಾಗುವ ಕೈಗಾರಿಕಾ ಮಾಲಿನ್ಯದ ದುಷ್ಪರಿಮಾಣವನ್ನು ತಡೆಗಟ್ಟುವುದೆಂದು ಅವರ ಆಲೋಚನೆ. ಉಳಿದ ಪರಿಣಾಮ ಅಸ್ಪಷ್ಟವಾದರೂ ಅದಿಕಾರಿಗಳು ಮತ್ತು ಖಾಸಗಿ ಸಂಸ್ಥೆ ಉದ್ದಾರವಾಗುವುದು ಖಂಡಿತ.

ಆ ದಾಟಿಯಲ್ಲಿಯೇ ಚಿಂತನೆ ಮುಂದುವರಿಸುವಾಗ ಪ್ರಪಂಚದಲ್ಲಿ ಈಗ ಬಾದಿಸುತ್ತಿರುವ ಬೂಮಿ ಬಿಸಿಯಾಗುವಿಕೆ, ಪರಿಸರ ಮಾಲಿನ್ಯ ಎಲ್ಲ ಸಮಸ್ಯೆಗಳಿಗೂ ನಮ್ಮ ತುಳಸಿ ಪರಿಹಾರ ಒದಗಿಸಬಲ್ಲದು. ಎಲ್ಲರೂ ಸೇರಿ ಕೋಟ್ಯಾಂತರ ಬಿಲಿಯಾಂತರ ತುಳಿಸಿ ನೆಟ್ಟರಾಯಿತು. ನಮ್ಮ ಪ್ರಾಚೀನ ಪರಂಪರೆಯಲ್ಲಿ ಎಲ್ಲಕ್ಕೂ ಉತ್ತರವಿದೆ. ಬೇರೆ ಹುಡುಕಾಟ ಅನಗತ್ಯ. ಈ ಸಂಶೋಧನೆಗೆ ನೋಬಲ್ ಅಥವಾ ಇಗ್-ನೋಬಲ್ ಪ್ರಶಸ್ತಿ ಸಿಕ್ಕರೂ ಸಿಗಬಹುದು.

http://www.hindu.com/2009/02/05/stories/2009020561482000.htm