Saturday, May 30, 2009

ಮಳೆ ಕೊಯಿಲಿಗೆ ಪೂರಕ ಚಿಕಾಗೊದ ಹಸಿರು ಓಣಿ

ಮಳೆಗಾಲ ಇನ್ನೇನು ಪ್ರಾರಂಬವಾಗಲಿದೆ. ಹಾಗೆ ಮಳೆನೀರಿನ ಸದುಪಯೋಗದ ಬಗೆಗೆ ಚಿಂತನೆ ಸಾಗಿದೆ. ದಿನ ಕಳೆದಂತೆ ನೀರಿನ ಪರೀಸ್ಥಿತಿ ಗಂಬೀರವಾಗುತ್ತಿದೆ. ಮಳೆ ಸಹಾ ಮುಂಚಿನಂತೆ ಮಳೆಗಾಲದ ಉದ್ದಕ್ಕೂ ಹಂಚಿ ಬೀಳದೆ ಒಮ್ಮೆಲೆ ಉದುರಿಸಿ ಮುಂದಕ್ಕೆ ನಡೆಯುತ್ತದೆ. ನೀರು ಬಿದ್ದಲ್ಲಿ ಇಂಗುವುದರ ಬದಲು ನೇರವಾಗಿ ಹರಿದು ಸಮುದ್ರ ಸೇರುತ್ತದೆ. ನೀರಿನ ಬೇಡಿಕೆ ಮಾತ್ರ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅದ್ದುದರಿಂದ ನೀರು ಇಂಗಿಸುವುದು ಹೆಚ್ಚೆಚ್ಚು ಅನಿವಾರ್ಯವೆನಿಸುತ್ತದೆ.

ಸುಸ್ಥಿರ ಜನಜೀವನಕ್ಕೆ ಪೂರಕವಾಗುವಂತಹ ಪಟ್ಟಣದಲ್ಲಿ ಮಳೆನೀರು ಕೊಯಿಲಿನ ಸುದ್ದಿ ಅಮೇರಿಕದಿಂದ ಬಂದಿದೆ. ಶಂಖದಿಂದ ಬೀಳುವುದೇ ತೀರ್ಥ ಎಂಬಂತೆ ನಮಗೆ ಹೊಸ ಚಿಂತನೆಗಳು ಅಮೇರಿಕದಿಂದಲೇ ಬರಬೇಕು. ಹೆಚ್ಚಿನ ದೊಡ್ಡ ಪಟ್ಟಣಗಳು ಇಂದು ಅಪಾರ ವಿದ್ಯುತ್ ಖರ್ಚು ಮಾಡಿ ಐವತ್ತರಿಂದ ನೂರು ಕಿಮಿ ದೂರದಿಂದ ನೀರನ್ನು ತರಿಸಿಕೊಳ್ಳುತ್ತಿವೆ. ಅದುದರಿಂದ ಪ್ರತಿಯೊಂದು ಜಲಮಟ್ಟ ಏರುವಂತಹ ಪ್ರಯತ್ನಗಳು ಖಂಡಿತ ಪ್ರಯೋಜನಕಾರಿ.

ಪ್ರಪಂಚದ ಅತಿ ದೊಡ್ಡ ಪಟ್ಟಣಗಳಲ್ಲಿ ಒಂದಾದ ಚಿಕಾಗೋ ಪಟ್ಟಣದ ಹಸಿರು ಓಣಿ ಯೋಜನೆ ಒಂದು ಹೊಸತಾದ ದಿಕ್ಕು ಸೂಚಕ ಎನ್ನಬಹುದು.
.

ಎರಡು ವರ್ಷ ಹಿಂದೆ ಪ್ರಾರಂಬವಾದ ಈ ಯೋಜನೆಯಲ್ಲಿ ಈಗಾಗಲೇ ಎಂಬತ್ತು ಗಲ್ಲಿಗಳು ಅಭಿವೃದ್ದಿ ಹೊದಿವೆಯಂತೆ. ಗಲ್ಲಿ ರಸ್ತೆಗಳಲ್ಲಿ ನೀರು ಇಂಗಿಸುವಂತಾದರೆ ಮಳೆಗಾಲದಲ್ಲಿ ಚರಂಡಿ ಉಕ್ಕಿ ಹರಿದು ನೆರೆ ಬರುವುದನ್ನು ತಡಗಟ್ಟಬಹುದು.

ಇಲ್ಲಿನ ಹಸಿರು ಚಿಂತನೆ ಹಲವು ವಿಚಾರಗಳ ಒಳಗೊಂಡಿದೆ. ಪಟ್ಟಣಗಳಲ್ಲಿ ಕತ್ತಲು ಓಡಿಸುವ ಪ್ರಯತ್ನದಲ್ಲಿ ಮೇಲ್ಮುಖ ಮಾಡಿದ ದೀಪಗಳಿಂದಾಗಿ ಆಕಾಶದಲ್ಲಿನ ನಕ್ಷತ್ರಗಳೇ ಅಗೋಚರ. ಈ ನಿಟ್ಟಿನಲ್ಲಿ ದಾರಿದೀಪದ ಬೆಳಕು ನೆಲಕ್ಕೆ ಸಿಮಿತವಾಗುವಂತೆ ಮೇಲೆ ಸಾಗದಂತೆ ಪ್ರಯತ್ನ ಮಾಡಲಾಗುತ್ತಿದೆ.   ಪಟ್ಟಣದಲ್ಲಿ ಕಾಂಕ್ರೀಟ್ ಹಾಗೂ ಟಾರ್ ಕವಚ ಶಾಖವನ್ನು ಹೀರಿ  ಶಾಖ ದ್ವೀಪಗಳಾಗುತ್ತವೆ.  ಜೀವನ ಹೆಚ್ಚು ಅಸಹನೀಯವಾಗುತ್ತದೆ. ಎಸಿ ಫಾನ್ ಉಪಯೋಗ ಹೆಚ್ಚುತ್ತದೆ. ಬದಲಾಗಿ ಭೂಮಿಯ ಮೇಲ್ಮೈ ಶಾಖ ಪ್ರತಿಫಲಿಸುವಂತಾದರೆ ಚೆನ್ನಾಗಿರುತ್ತದೆ. ಈ ನಿಟ್ಟಿನಲ್ಲೂ ಪ್ರಯತ್ನ ಸಾಗಿದೆ.

ಮಳೆಯ ಸ್ವರೂಪ ಬದಲಾಗುತ್ತಲೇ ಇದೆ. ನಮ್ಮಲ್ಲಿ ಮಳೆದಿನಗಳ ಸಂಖ್ಯೆ ಗಣನೀಯವಾಗಿ ಇಳಿದಿದೆ. ಮುಂಚೆ ಆರು ನೂರು ಘಂಟೆ ಮಳೆ ಬರುತ್ತಿದ್ದರೆ ಈಗ ಮುನ್ನೂರು ಘಂಟೆಗಳಲ್ಲೇ ಲೆಕ್ಕಾಚಾರದ ಮಳೆ ಸುರಿಯುತ್ತಿದೆ. ಮಳೆ ನೀರು ಇಂಗುವ ಸಾದ್ಯತೆಗಳು ಕಡಿಮೆಯಾಗಿ ನೇರವಾಗಿ ತೋಡುಗಳಿಗೆ ಹರಿಯುತ್ತವೆ. ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಕಡೆಗಳಲ್ಲಿ ಕುಂಭದ್ರೋಣ ಮಳೆಗಳ ಸುದ್ದಿ ಸಾಮಾನ್ಯ. ಕೆಲವು ಉದಾಹರಣೆಗಳೆಂದರೆ






ಜುಲೈ ೨೦೦೭ ಕೇರಳದಲ್ಲಿ ಸುರಿದ ಕುಂಭದ್ರೋಣ ಮಳೆ ೩೦೦೦೦ ಜನರನ್ನು ಸ್ಥಳಾಂತರಗೊಳಿಸಿತು. ಅದೇ ವರ್ಷ ಹಿಮಾಚಲ ಪ್ರದೇಶದಲ್ಲಿ ೧೫೦ ಕ್ಕೂ ಹೆಚ್ಚು ಜನ ಮಳೆಯಿಂದಾಗಿ ಮೃತ ಪಟ್ಟರು.

ನಮ್ಮ ಪಟ್ಟಣಗಳಲ್ಲಿ ಕಾಲುದಾರಿಗಳಿಗೆ ಸಿಮೆಂಟು ಇಟ್ಟಿಗೆ ಹಾಸುವುದು ಹೆಚ್ಚುತ್ತಲಿರುವಾಗ ಮಳೆನೀರು ಭೂಮಿಗಿಳಿಯುವುದು ಕಡಿಮೆಯಾಗುತ್ತಲಿದೆ. ಹೀಗಿರುವಾಗ   ಚಿಕಾಗೊದಲ್ಲಿಯಲ್ಲಿರುವಂತಹ  ಸುಸ್ಥಿರ   ಚಿಂತನೆ ನಮ್ಮಲ್ಲೂ ಬೇಗನೆ ಬರಲಿ. ಮುಂದಿನ  ದಿನಗಳಲ್ಲಿ ಹಾಸುಗಲ್ಲುಗಳು ಮಳೆನೀರು ಇಳಿಯಲು ಅವಕಾಶ ಮಾಡಿ ಕೊಟ್ಟು ಜಲಮಟ್ಟ ಹೆಚ್ಚಲು ಸಹಾಯಕವಾದರೆ ಚೆನ್ನ. ಕೆಳಗೆ ಕೊಟ್ಟಿರುವ  ಕೊಂಡಿಯಲ್ಲಿ ಲಭ್ಯವಾಗುವ  ಚಿಕಾಗೊ  ಬಗೆಗಿನ   ಕೈಪಿಡಿ  ಚೆನ್ನಾಗಿದೆ.  

http://egov.cityofchicago.org/webportal/COCWebPortal/COC_EDITORIAL/GreenAlleyHandbook.pdf

http://www.downtoearth.org.in/cover.asp?foldername=20090315&filename=news&sid=47&sec_id=9

Tuesday, May 26, 2009

ಮಕ್ಕಳ ಪ್ರಶ್ನೆ

ಮಕ್ಕಳಿಗೆ ಈಗ ಬೇಸಿಗೆ ರಜೆ ಮುಗಿದು ಶಾಲೆಗೆ ಹೊರಡಲು ತಯಾರಿ ನಡೆಸುವ ಕಾಲ. ರಜೆಯಲ್ಲಿ ಮಜವೋ ಮಜ. ದೊಡ್ಡವರಿಗೂ ಸಂಬಂದಿಕರ ಗೆಳೆಯರ ಮಕ್ಕಳೊಂದಿಗೆ ಮಾತನಾಡಲು ಅವಕಾಶ. ಹಾಗಿರುವಾಗ ಕೇಳಲೇ ಬೇಕಾದ ಕಂಪಲ್ಸರಿ ಪ್ರಶ್ನೆ - ಮಗೂ, ಮುಂದೆ ನೀನೇನು ಮಾಡುತ್ತಿಯ.


ಮೊನ್ನೆ ಮೊನ್ನೆ ವರೆಗೆ software  ಎಂದೇ  ಅರ್ಥ ಗೊತ್ತಿಲ್ಲವಾದರೂ  ಮಕ್ಕಳೂ ಉತ್ತರಿಸುತ್ತಿದ್ದರು. ಈಗ ಆರ್ಥಿಕ ಹಿನ್ನೆಡೆ. ಹಲವಾರು ಸಾಫ್ಟವೇರಿಗರನ್ನೂ ಮನೆಗೆ ಕಳುಹಿಸುತ್ತಿದ್ದಾರೆ. ಈಗ ಎಲ್ಲ ಪರೀಸ್ಥಿತಿ ಉಲ್ಟಾ ಹೊಡೆದಿದೆ. ಮೇಲಾಗಿ ಮಕ್ಕಳೂ ದೊಡ್ಡವರನ್ನೂ ಪ್ರಶ್ನಿಸುವ ಕಾಲ. ಕೆಲಸ ಇಲ್ಲ ಎಂದು ಮನೆಗೆ ಕಳುಹಿಸಿದರೆ ನೀನೇನು ಮಾಡುತ್ತಿ ? ಎಲ್ಲಿಯೋ ಸಿಕ್ಕ ಚಿತ್ರವನ್ನು ಕದ್ದು ತಂದು ನಿಮ್ಮ ಮುಂದಿಡುತ್ತಿದ್ದೇನೆ.

Sunday, May 24, 2009

ಮಳೆಗಾಲದಲ್ಲಿ ಊರುಗೋಲಾದ ಸದಾಸಂ

ಸಕಲದಾರಿ ಸಂಚಾರಿ, ಸದಾಸಂ ನಮ್ಮಲ್ಲಿಗೆ ಬಂದು ಈಗ ಎರಡು ವರ್ಷ  ಪೂರ್ತಿಯಾಗಲು  ಒಂದು ಮಳೆಗಾಲ ಮಾತ್ರ ಬಾಕಿ. ಮಳೆಗಾಲದಲ್ಲೂ ಬೇಸಿಗೆಯಲ್ಲೂ ಉಪಯೋಗದ ಮಟ್ಟಿಗೆ ಸಾಕಷ್ಟು ಅನುಭವಗಳಾದವು. ನಾನು ಚೀನಾದಿಂದ ಸದಾಸಂ ತರಿಸುವಾಗ ಆಗಸ್ಟ್ ಮೊದಲ ವಾರವಾಗಿತ್ತು. ಮಳೆಗಾಲದ ಅಬ್ಬರ ಕಡಿಮೆಯಾಗಲು ಸುರುವಾಗಿತ್ತು. ಅದುದರಿಂದ ಆ ವರ್ಷ ಸದಾಸಂನ ಮಳೆಗಾಲದ ಉಪಯೋಗದ ಬಗ್ಗೆ ಸಂಪೂರ್ಣ ಅನುಭವ ನನಗೆ ಸಿಕ್ಕಿರಲಿಲ್ಲ. ಉಪಕಾರ ಅನಿಸಿತ್ತು. ಅಷ್ಟೇ
.

ಇಲ್ಲಿ ಮಳೆಗಾಲವನ್ನು ಪ್ರತ್ಯೇಕಿಸಿ ಹೇಳುವ ಕಾರಣ ಕಳೆದ ಹಲವು ವರ್ಷಗಳಲ್ಲಿ ಮಳೆಗಾಲದಲ್ಲಿ ನಾನು ತೋಟಕ್ಕೆ ಹೋದದ್ದು ಬಹಳ ಕಡಿಮೆ.  ಬೇಸಿಗೆಯಲ್ಲಿ  ಓಡಾಟಕ್ಕೆ   ಸಹಾಯ  ಮಾಡುವ  ಮಾರುತಿ  ಒಮ್ನಿ  ಮಳೆಗಾಲದಲ್ಲಿ  ಹೂತುಹೋಗುವ  ಕಾರಣ   ಸೋಲುತ್ತದೆ.   ಮಳೆಗಾಲದಲ್ಲಿ ಬಾದಿಸುವ ಕೊಳೆ ರೋಗ ತಡೆಯಲು ಮುಂಜಾಗ್ರತೆ ಔಷದಿ ಸಿಂಪರಣೆ ಅಡಿಕೆ ಕೃಷಿಕನ ಮಟ್ಟಿಗೆ ಅತಿ ಮುಖ್ಯ ವಿಚಾರ. ಕೊಳೆರೋಗದ ಸಿಂಪರಣೆ ಬಗೆಗೆ ನನಗೆ ಕೆಲಸದಾಳುಗಳು ಹೇಳಿದ್ದೇ ಸುದ್ದಿ. ನಮ್ಮಲ್ಲಿ ಇದು ನಿರ್ಲಕ್ಷಿತವಾಗಿ ರೋಗಕ್ಕೆ ಅಲ್ಲಲ್ಲಿ ಅಡಿಕೆ ಮರಗಳು ಸತ್ತವು. ತೋಟದ ನೈಜ ಸ್ಥಿತಿ ಅರಿಯಲು ಸಂಪೂರ್ಣ ಪರಾವಲಂಬನೆಯಿಂದಾಗಿ ಅಸಮರ್ಪಕ ಸಿಂಪರಣೆಯಿಂದಾಗಿ ನಾನು ಸಾಕಷ್ಟು ಕಷ್ಟ ನಷ್ಟಗಳನ್ನು ಅನುಬವಿಸಿದೆ.

ಮಳೆಗಾಲದಲ್ಲಿ ಬೀಸುವ ಗಾಳಿಗೆ ಅಡಿಕೆ ಗೊನೆ ಭಾರಕ್ಕೆ ಮುರಿದುಬೀಳುವುದು ಮತ್ತು ಅಡಿಕೆ ಮೇಲಿನ ತೇವಾಂಶ ಒಣಗದೆ ಕೋಳೆರೋಗಕ್ಕೆ ತುತ್ತಾಗುವುದು ತೋಟದಲ್ಲಿರುವ ಅತ್ಯುತ್ತಮ ಮರಗಳೇ. ಈ ರೀತಿ ಅಂಗಚ್ಚೇದನವಾದ ತೋಟವನ್ನು ಇದ್ದು ಪ್ರಯೋಜನವಿಲ್ಲವೆಂದು ಒಂದಂಶವನ್ನು ಕಡಿಸಿದೆ.  ಕೃಷಿ  ಮುಂದುವರಿಸುವ  ಬಗೆಗೆ  ಗಂಬೀರ  ಚಿಂತನೆ  ನಡೆಸುವಂತಹ  ಸನ್ನಿವೇಶ  ನನ್ನ  ಮುಂದಿತ್ತು.

ಹಿನ್ನೆಲೆ ಹೀಗಿರುವಾಗ ನಾನು ಸದಾಸಂ ತರಿಸಿದ್ದೇ ಮಳೆಗಾಲದಲ್ಲಿ ತೋಟಕ್ಕೆ ಹೋಗಲು. ಅದುದರಿಂದ ಕಳೆದ ವರ್ಷ ಮಳೆ ಪ್ರಾರಂಬವಾಗಲು ಕಾಯುತ್ತಲಿದ್ದೆ. ಕಳೆದ ವರುಷ ಜೂನ್ ಸುರುವಿನ ವಾರ   ಕೋಳಿ ಜ್ವರ ಅನ್ನುವ ಮಾರಿ ಬಂದು ಮೊದಲೇ ದುರ್ಬಲನಾದ ನನ್ನನ್ನು ಸಾಕಷ್ಟು ಸೋಲಿಸಿತು. ಅದರೂ ಅಗತ್ಯಕ್ಕೆ ತಕ್ಕಷ್ಟು ಹೋಗಲು ಸಾದ್ಯವೂ ಆಯಿತೆನ್ನಿ.

ಈಗ ಮಳೆಗಾಲದಲ್ಲೂ ತೋಟದಲ್ಲಿ ಕೆಸರಿನಲ್ಲಿ ಹೂತು ಹೋಗಿ ಬಾಕಿಯಾದರೆ ಅನ್ನುವ ಅಂಜಿಕೆ ಇಲ್ಲವೇ ಇಲ್ಲ. ಎರಡೂ ಚಕ್ರಗಳು ಜತೆಯಾಗಿಯೇ ತಿರುಗುವ ಕಾರಣ ಎಂತಹ ಕೆಸರಿನಿಂದಲೂ ಎದ್ದು ಬರುತ್ತದೆ. ಹಾಗೆ ಅಗಾಗ ತೋಟಕ್ಕೆ ದೈರ್ಯದಿಂದ ಹೋಗಿ ಬರಲು ಸದಾಸಂ ಬಹಳ ಸಹಾಯ ಮಾಡುತ್ತಿದೆ. ನಮ್ಮ ತೋಟದಲ್ಲಾಗುವ ಕೆಲಸದ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತದೆ.

ನನ್ನಲ್ಲಿ ಹಲವರಿಂದ ಕೇಳಲ್ಪಡುವ ಪ್ರಶ್ನೆ ಈಗ ಸದಾಸಂ ಬಂದು ಅದರಿಂದ ಕೃಷಿ ನಿರ್ವಹಣೆ ಉತ್ತಮಗೊಂಡು ಲಾಬ ಎನಿಸುತ್ತದೋ ? ನನ್ನ ಮುಖ್ಯ ಬೆಳೆಯಾದ ಅಡಿಕೆ ಬಹುವಾರ್ಷಿಕ ಬೆಳೆ. ನಿರ್ವಹಣೆಯಲ್ಲಿಸೋತು ಸುಮಾರು ಅರ್ಧದಷ್ಟು ತೋಟವನ್ನು ಕಳಕೊಂಡದ್ದು ವಾಪಾಸು ಪಡಕೊಳ್ಳಲು ಅಸಾದ್ಯ. ನನಗನಿಸುವಂತೆ ಈಗ ಉಳಿದಿರುವುದನ್ನು ಉಳಿಸಿಕೊಳ್ಳಲು ನಂಬಲರ್ಹವಾದ ಊರುಗೋಲಾದ ಸದಾಸಂನಿಂದ ಖಂಡಿತ ಸಹಾಯವೆನಿಸುತ್ತದೆ.

Thursday, May 21, 2009

ಸ್ತ್ರೀ ಶಕ್ತಿ ಬಿಂಬಿಸುವ ಅಮೇರಿಕದ ಹಳೆಯ ಬಿತ್ತಿ ಚಿತ್ರ ಮತ್ತು ಸರ್ದಾರ್ಜಿ ಜೋಕು


ಇಂದಿನ ಕನ್ನಡ ಪ್ರಭದಲ್ಲೊಂದು ನಗೆಹನಿ   ನೋಡುವಾಗ ಅಮೇರಿಕದ ತೊಂಬತ್ತು ವರ್ಷ ಹಿಂದಿನ ಬಿತ್ತಿ ಚಿತ್ರ ನೆನಪಾಯಿತು.

ನಮ್ಮ ಸ್ತ್ರೀ ಶಕ್ತಿ ಮದ್ಯ ನಿರೋಧ ಅಂದೋಲನಕ್ಕೆ ಇದುವೇ  ಸ್ಪೂರ್ತಿ ಇರಬಹುದೋ ?

ಹಿಂದೊಮ್ಮೆ ಕನ್ನಡ ಲೇಖಕಿ ಸುನಂದಮ್ಮ ಕೃತಿ ಚೌರ್ಯ ಮಾಡಿದ್ದಾರೆ ಎಂದು ಅಪಾದಿಸಿದಾಗ ಅವರು ಪ್ರಪಂಚದಲ್ಲಿ ಇರೋದು ಬರೇ ಸಾವಿರ ಜೋಕುಗಳು. ಉಳಿದವೆಲ್ಲ ಅದರ ಕಾಪಿ ಎಂದಿದ್ದರು.

Monday, May 18, 2009

ರೇವ ಎಂಬ ಗಗನಕುಸುಮ


 ಇತ್ತೀಚೆಗೆ ಲಂಡನಿನ ಮೇಯರ್ ವಿದ್ಯುತ್ ವಾಹನಗಳ ಬಗೆಗೆ ೩೦ ಮಿಲಿಯ ಡಾಲರ್ ಯೋಜನೆಯನ್ನು ಅನಾವರಣಗೊಳಿಸಿದರು. ಆ ಪಟ್ಟಣದಲ್ಲಿ ಒಂದು ಲಕ್ಷ ವಿದ್ಯುತ್ ಕಾರುಗಳು ಮತ್ತು ೨೫೦೦೦ ಕಾರುಗಳ ಚಾರ್ಜ್ ಮಾಡುವ ವ್ಯವಸ್ಥೆಯನ್ನು ೨೦೧೫ರ ಮೊದಲು ಅನುಷ್ಟಾನಗೊಳಿಸುವ ಗುರಿ ಹೊಂದಿದ್ದಾರೆ. ನಂತರದ ವಾರದಲ್ಲಿ ಅಲ್ಲಿನ ಕೆಂದ್ರ ಸರಕಾರ ವಿದ್ಯುತ್ ಚಾಲನೆ ವಾಹನಗಳಿಗೆ ಮೂರುವರೆ ಲಕ್ಷ ರೂಪಾಯಿವರೆಗಿನ ಸಹಾಯದನವನ್ನು ಘೋಷಿಸಿತು. ಅದನ್ನು ಕಂಡ ನನಗೆ ತುಂಬಾ ಕುಶಿಯ ಜತೆ ನಮ್ಮ ಸರಕಾರಗಳ ನಿರ್ಲಕ್ಷತೆ ಬಗೆಗೆ ಬೇಸರ ಮೂಡಿತು.

ಹೆಚ್ಚಿನ ಗ್ರಾಹಕರು ವಾಹನ ಖರೀದಿ ಮಾಡುವಾಗ ಇಂದನದ ವೆಚ್ಚದ ಬಗೆಗೆ ಚಿಂತಿಸುತ್ತಾರೆ ಹೊರತು ಅದರಿಂದಾಗ ಬಹುದಾದ ಪರಿಸರ ಮಲೀನತೆ ಅಲ್ಲ ಎನ್ನುವುದು ನಮಗೆ ಅರಿವಿದೆ ಎನ್ನುತ್ತಾರೆ ಅಲ್ಲಿನ ಸಾರಿಗೆ ಮಂತ್ರಿ ಹೂನ್. ಈಗ ಸಮಯ ಹೋದಂತೆ ಹೆಚ್ಚು ಹೆಚ್ಚು ಗ್ರಾಹಕರು ಈ ಬಗೆಗೆ ಜಾಗ್ರತಿ ತೋರ್ಪಡಿಸುತ್ತಿದ್ದು ಅವರಿಗೆ ಸಹಾಯ ಹಸ್ತ ಚಾಚುವುದು ಸರಕಾರದ ಕರ್ತವ್ಯವೂ ಆಗಿರುತ್ತದೆ. ಆವು ಉಪಯೋಗಿಸುವ ವಿದ್ಯುತ್ ಸಹಾ ಪರಿಸರ ಸ್ನೇಹಿಯಾಗಿದ್ದರೆ ಉತ್ತಮ ಎಂದೂ  ಹೇಳುತ್ತಾರೆ.

ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಬರೇ ವಿದ್ಯುತ್ ಕಾರೆಂದರೆ ಪ್ರಯೋಜನವಿಲ್ಲ. ಆ ವಿದ್ಯುತ್ ಎಲ್ಲಿಂದ ಬರುತ್ತದೆ ಅನ್ನುವುದೂ ಮುಖ್ಯ. ಕಲ್ಲಿದ್ದಲು ಹೊತ್ತಿಸಿ ವಿದ್ಯುತ್ ತಯಾರಿಸಿ ಆ ವಿದ್ಯುತ್ ಉಪಯೋಗಿಸಿ ಕಾರು ಓಡಿಸಿದರೆ ಯಾವ ಪ್ರಯೋಜನವೂ ಇಲ್ಲ. ಬೆಂಗಳೂರಿನಲ್ಲಿ ಕಾರಿನ ಹೊಗೆ ನಳಿಗೆ ಉಗುಳುವ ಹೊಗೆಯನ್ನು ರಾಯಚೂರಿನಲ್ಲಿ ಉಗುಳಲಾಗುತ್ತದೆ ಅಷ್ಟೇ. ಈ  ಲೆಕ್ಕಾಚಾರ  ಒಟ್ಟಾರೆ  ಪರಿಸರಕ್ಕೆ  ಪೂರಕವಲ್ಲ.  ಅಲ್ಲದೆ ವಿದ್ಯುತ್ ಕೋಶಗಳ ತಯಾರಿ ಬಹಳ ಮಲೀನತೆಗೆ ಕಾರಣವಾಗಿರುತ್ತದೆ.

ವಿದ್ಯುತ್ ವಾಹನದ ಇತಿಹಾಸ ದೀರ್ಘವಾಗಿದ್ದರೂ ಅವಿಷ್ಕಾರ ನಿದಾನವಾಗಲು ಮುಖ್ಯ ಕಾರಣಗಳು ಮೂರು. ಅನುಕೂಲಕರವಾದ ಅಗ್ಗವಾಗಿರುವ ಇಂದನ ಪೆಟ್ರೋಲ್, ತಕ್ಕುದಾದ ವಿದ್ಯುತ್ ಕೋಶಗಳ ಕೊರತೆ ಮತ್ತು ಅಸಮರ್ಪಕ ಬಾಟರಿ ಚಾರ್ಜಿಂಗ್ ಜಾಲದಿಂದಾಗಿ ಬಾಟರಿ ವಾಹನಗಳು ಹೆಚ್ಚು ಜನಪ್ರಿಯವೆನಿಸಲು ತಡೆಯೊಡ್ಡಿದವು. ಈಗ ಪರಿಸರ ಕಾಳಜಿ ಎನ್ನುವ ಹೊಸ ವಿಚಾರ ಚಲಾವಣೆಗೆ ಬಂದಿದೆ.  ಹೊಸ  ಆಸಕ್ತಿ ಸುರುವಾಗಿದೆ.

ಅರುಣಾಚಲ ಪ್ರದೇಶದ ರಾಜ್ಯಪಾಲರು ರಾಜಭವನದಲ್ಲಿ ಬೆಂಗಳೂರಿನಲ್ಲಿ ತಯಾರಾಗುವ ಎರಡು ರೇವ ವಿದ್ಯುತ್ ಕಾರುಗಳನ್ನು ಇಟ್ಟುಕೊಂಡಿದ್ದಾರೆ. ಕಳೆದ ತಿಂಗಳು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅಲ್ಲಿಗೆ ಬೇಟಿ ಇತ್ತಾಗ ಅದರಲ್ಲಿ ಸಂಚರಿಸಿದ್ದರು.   ಅವರು  ಎಪ್ರಿಲ್ ತಿಂಗಳಲ್ಲಿ  ಬೆಂಗಳೂರಿಗೆ  ಬೇಟಿ  ಇತ್ತಾಗ  ಇದೇ  ಸಂಸ್ಥೆ  ತಯಾರಿಸುವ  ವಿದ್ಯುತ್   ಗಾಲ್ಫ್ ಗಾಡಿಯಲ್ಲಿ  ಇಂಫೋಸಿಸ್  ಸಂಸ್ಥೆಯಲ್ಲಿ  ಸುತ್ತಾಡಿದ್ದರು.  ಇದೀಗ  ಇಂತಹ  ಗಾಲ್ಫ್  ಗಾಡಿಗಳು  ಮಂತ್ರಿಗಳಿಗೆ  ವಿದಾನ ಸೌದದ  ಸುತ್ತಲಿರುವ  ಕಛೇರಿಗಳ  ನಡುವೆ  ಓಡಾಡಲು  ಉಪಯೋಗಿಸುವ  ಸುದ್ದಿ  ಇರುತ್ತದೆ.  

ಸರಕಾರಕ್ಕೆ ವಿದ್ಯುತ್ ಕಾರುಗಳ ಬಗೆಗೆ ಅರಿವಿಲ್ಲ ಎನ್ನುವಂತಿಲ್ಲ. ಕೇಂದ್ರ ತಂತ್ರ ಜ್ನಾನ ಮಂತ್ರಿ ಕಪಿಲ್ ಸಿಬಾಲ್ ದೆಹಲಿಯ ಮುಖ್ಯ ಮಂತ್ರಿಣಿ ಶೀಲಾ ದೀಕ್ಷಿತ್ ಇವರೆಲ್ಲ ರೇವ ಕಾರು ಬಳಸುವವರೇ. ಸರಕಾರಿ ಖರೀದಿಗೆ ಕೇಂದ್ರದ ಅಸಂಪ್ರದಾಯಿಕ ಇಂದನ ಖಾತೆ ಸಹಾಯ ಮಾಡುತ್ತದೆ. ಕೆಲವು ರಾಜ್ಯ ಸರಕಾರಗಳು ಚಿಲ್ಲರೆ ರಿಯಾಯತಿ ತೋರಿಸುತ್ತವೆ. ಸರಕಾರ ಮಾರುತಿ ಕಾರಿಗೆ,  ಟಾಟ ನ್ಯಾನೊವಿಗೆ ಕೊಟ್ಟ ಬೆಂಬಲದ ಸಣ್ಣ ಪಾಲು ಈ ವಾಹನಕ್ಕೆ ಕೊಟ್ಟರೆ ನಮ್ಮಲ್ಲಿ ಸಾವಿರಾರು   ವಾಹನಗಳು    ಮಾರಾಟವಾಗುತಿತ್ತು. ಇಂದಿಗೂ ಬೆಂಗಳೂರಿನಲ್ಲಿ ತಯಾರಾಗುವ ರೇವ ಕಾರಿಗೆ ಅತ್ಯದಿಕ ಬೆಂಬಲ ದೊರಕುತ್ತಿವುದು   ಯುರೋಪಿನಲ್ಲಿ. ಅಲ್ಲಿ   ಈ  ಬೆಂಬಲ ವಾರದಿಂದ ವಾರಕ್ಕೆ ಎಂಬಂತೆ ಹೆಚ್ಚುತ್ತಿದಯಂತೆ. ಮೇಲಿನ  ಎರಡೂ ಚಿತ್ರಗಳಲ್ಲಿ  ಕಾಣಿಸುವ  ಕಾರು  ಬೆಂಗಳೂರಿನಲ್ಲಿ ತಯಾರಾಗುವ ರೇವ.  ಇಂಗ್ಲೇಂಡಿನಲ್ಲಿ  G-Wiz ಅನ್ನುವ  ಹೆಸರಿನಲ್ಲಿ  ಮಾರುತ್ತಾರೆ. 

ಹತ್ತು ವರ್ಷ ಹಿಂದೆ ವರುಷಕ್ಕೆ ನಲುವತ್ತು ಸಾವಿರ ವಿದ್ಯುತ್ ಸ್ಕೂಟರ್ ಮಾರಿದ ಚೀನದಲ್ಲಿ ಕಳೆದ ವರ್ಷ ಮಾರಾಟವಾದ ಸ್ಕೂಟರ್ ಗಳ ಸಂಖ್ಯೆ ಒಂದೂವರೆ ಕೋಟಿ ಮೀರಿತ್ತು. ನಮ್ಮಲ್ಲೂ ಈಗ ಹೆಚ್ಚೇನು ಸರಕಾರದ ಬೆಂಬಲವಿಲ್ಲದೆಯೇ ವಿದ್ಯುತ್ ಸ್ಕೂಟರುಗಳು        ಜನಪ್ರಿಯವಾಗುತ್ತಿರುವುದು ಸಂತಸದ ಸಂಗತಿ.  ದೈಹಿಕ  ಸಮಸ್ಯೆಯಿಂದಾಗಿ  ನನಗೆ ದ್ವಿಚಕ್ರ ಚಲಾಯಿಸಲು  ಸಾದ್ಯವಾಗುವುದಿಲ್ಲ.

ವರ್ಷಕ್ಕೆ ಸುಮಾರು ಹನ್ನೆರಡು ಸಾವಿರ ಕಿಮಿ ವಾಹನ ಚಲಾಯಿಸುವ ನಾನು ಬಹಳ ಸಮಯದಿಂದ ಈ ಬಗೆಗೆ ಚಿಂತಿಸುತ್ತಿದ್ದೇನೆ. ಪ್ರಯಾಣದ    ಅರ್ಧದಷ್ಟು    ದೂರ  ವಾಹನದಲ್ಲಿ   ಒಬ್ಬನೇ ಇರುತ್ತೇನೆ. ಮಕ್ಕಳಿಬ್ಬರನ್ನು ಒಮ್ಮೊಮ್ಮೆ ಶಾಲೆಗೆ ಬಿಡುವ ಕಾರಣ ಸುಮಾರು   ನಾಲ್ಕು ಸಾವಿರ ಕಿಮಿ ಮಕ್ಕಳೂ ಸೇರಿದಂತೆ ಮೂವರ ಪ್ರಯಾಣ. ಅಂತೂ ದಿನಕ್ಕೆ ನಲುವತ್ತು   ಮೀರುವುದು   ಅಪರೂಪ. ದಿನವಿಡೀ ಮನೆಯಲ್ಲಿರುವ ಕಾರಣ ಸೌರ ವಿದ್ಯುತ್ ತುಂಬಿಸಲು ಪೂರಕವಾಗಿರುತ್ತದೆ. ಅವಶ್ಯಕತೆಗಿಂತ ಹೆಚ್ಚು ಸೌರ ವಿದ್ಯುತ್ ಕೋಶಗಳು ನನ್ನಲ್ಲಿದ್ದು ಮಲೀನತೆ ಉಂಟಾಗದೆ ಪ್ರಯಾಣ ಸಾದ್ಯವಾಗುತಿತ್ತು. ಈ ಬಗೆಗೆ  ಉತ್ತಮ ಪ್ರಯೋಗವಾಗುತಿತ್ತು.

ನಾನ್ನೊಬ್ಬ ಕೃಷಿಕ. ಆದಾಯ ತೇರಿಗೆ ಪಟ್ಟಿಯಲ್ಲಿರುವವರಿಗೆ ಸವಕಳಿ ಎಂಬ ತೇರಿಗೆ ರಿಯಾಯತಿ ಅಂಶ ಖರೀದಿಗೆ ಸಹಾಯ ಮಾಡುತ್ತದೆ. ಕೊನೆಗೂ ಲೆಕ್ಕ ಮಾಡಿದರೆ ನಾನು ಉಳಿಸುವುದು ಪರಮಾವಧಿ ಒಂದೂವರೆ ಸಾವಿರ ಯುನಿಟ್ ಅಂದರೆ ಏಳೆಂಟು ಸಾವಿರ ರೂಪಾಯಿ. ಅದಕ್ಕಾಗಿ ನಾಲ್ಕು ಲಕ್ಷ ಚಿಲ್ಲರೆ ಖರ್ಚು ಮಾಡುವುದು ಬುದ್ದಿವಂತಿಕೆ ಅನಿಸದು. ಜತೆಯಲ್ಲಿ ನಾಲ್ಕನೇಯ ವರ್ಷ ಕಾರಿನಲ್ಲಿರುವ ವಿದ್ಯುತ್ ಕೋಶ ಬದಲಾಯಿಸಬೇಕಾಗ ಬಹುದು. ನನ್ನ ಇ ಪತ್ರಕ್ಕೆ ದೂರವಾಣಿ ಸಂಬಾಷಣೆಗೆ ಈ ಕಂಪೇನಿಯಿಂದ ಸಕಾರಾತ್ಮಕವಾದ ಉತ್ತರವೂ ನನಗೆ ಲಬಿಸಿರಲಿಲ್ಲ.

ಸೌರ ವಿದ್ಯುತ್ ಲಾಭ ಎನ್ನುವಂತಿಲ್ಲ.   ಇಲ್ಲೊಂದು  ಸ್ವಂತ   ಅನುಭವ. ನಾನು ಮೂರು ವರ್ಷ ಹಿಂದೆ ಮನೆಯ ಉಪಯೋಗಕ್ಕಾಗಿ ವಿದ್ಯುತ್ ಕೋಶಗಳು ಹಾಗೂ ವ್ಯವಸ್ಥೆಗಾಗಿ ಮೂವತ್ತು ಸಾವಿರ ರೂಪಾಯಿ ಖರ್ಚು ಮಾಡಿದೆ. ಈಗ ವಿದ್ಯುತ್ ಬಿಲ್ಲಿನಲ್ಲಿ ತಿಂಗಳಿಗೆ ನಾಲ್ಕು ನೂರರಿಂದ ಐನೂರು ರೂಪಾಯಿ ವರೆಗೆ ಉಳಿತಾಯ. ದಿನವಿಡೀ ವಿದ್ಯುತ್  ಇಲ್ಲವಾದರೂ  ನಮಗೆ  ಸಮಸ್ಯೆಯಾಗುವುದಿಲ್ಲ  ಎನ್ನುವುದು  ಗುಣಾತ್ಮಕ ವಿಚಾರ. ಈ  ವಾಕ್ಯ  ಕುಟ್ಟುವಾಗಲೂ  ವಿದ್ಯುತ್ ಕಡಿತವಿರುವ  ಕಾರಣ ಸೂರ್ಯದೇವನಿಗೆ  ನಮೋ ನಮಹ.  ಈ ಮೂವತ್ತು ಸಾವಿರ ತುಂಬಲು ಐದು ವರ್ಷ ಬೇಕು. ಅಷ್ಟರೊಳಗೆ ನನ್ನ ವಿದ್ಯುತ್ ಕೋಶಗಳ ಹೆಚ್ಚಿನ ಆಯುಷ್ಯ ಮುಗಿದಿರುತ್ತದೆ.  ಪುನಹ ಮೂವತ್ತು ಸಾವಿರ.......

ಯಾರಲ್ಲೂ  ಸೌರ  ಫಲಕಗಳೂಗಳೂ  ವಿದ್ಯುತ್ ಕಾರು  ಎರಡೂ  ಇದ್ದಂತಿಲ್ಲ.  ಇರುವುದಾದರೆ  ಈ ಪರ್ಯಾಯದ  ಮೌಲ್ಯಮಾಪನೆ  ಸಾದ್ಯವಾಗುತಿತ್ತು.  ಹೊಸ ರೇವಾ  ಕಾರು  ಖರೀದಿಸುವ  ಚೈತನ್ಯ  ನನಗಿಲ್ಲವಾದುದರಿಂದ  ಸದ್ಯಕ್ಕೆ ವಿದ್ಯುತ್ ಕಾರಿನ ಬಗೆಗೆ ಕನಸು ಕಾಣುವುದೊಂದೇ ನನಗಿರುವ ದಾರಿ.

Tuesday, May 05, 2009

ರೈತರು ಉರಿಸುವ ಬೆಳೆ ತ್ಯಾಜ್ಯ ಬಾರತದ ಮೇಲೊಂದು ಬೊಕ್ಕೆ

ಇದೇನು ಬಾರತದ ಭೂಪಟದಲ್ಲಿ ಬೊಕ್ಕೆ ಎದ್ದಂತಿದೆಯಲ್ಲ ಎಂದು ಕೊಂಡೆ. ಮುಂದಕ್ಕೆ ಓದುವಾಗ ತಿಳಿದ ವಿಚಾರ, ಇವು ಪಂಜಾಬಿನ ರೈತರು ಬೆಳೆ ಕೊಯಿಲಾದ ನಂತರ ಗದ್ದೆಗೆ ಬೆಂಕಿ ಹಾಕಿರುವುದನ್ನು ಅಮೇರಿಕದ ನಾಸಾ ಬಿಡುಗಡೆ ಮಾಡಿದ ಈ ಚಿತ್ರದಲ್ಲಿ ಕೆಂಪು ಚುಕ್ಕಿಯಿಂದ ಗುರುತಿಸಲಾಗಿದೆ. ನಮ್ಮಲ್ಲಿ ಇಂತಹ ಪದ್ದತಿಯೊಂದು ಚಾಲ್ತಿಯಲ್ಲಿದ್ದು ಈಗ ಕಣ್ಮರೆಯಾಗಿದೆ. ಪಂಜಾಬಿನಿಂದ ದಕ್ಷಿಣ ಪೂರ್ವಕ್ಕೆ ಮಂಜು ಮುಸುಕಿದಂತಿದ್ದು ಗಂಗಾ ನದಿಯೇ ಮರೆಯಾಗಿದೆ. ಹೊಗೆ ಮತ್ತು ಡೀಸೆಲ್ ವಾಹನವೂ ಸೇರಿದಂತೆ ನಗರ ಪ್ರದೇಶದ ಮಲೀನತೆ ಈ ಬಿಳಿ ಹೊಗೆಗೆ ಕಾರಣವಿರಬಹುದು.

                                                                
ನಮ್ಮ ಕರಾವಳಿ ಪ್ರದೇಶದಲ್ಲಿ ಮೊದಲು ಮೇವಿಗಾಗಿ ಹುಲ್ಲು ಬೆಳೆಸುವ ಪರಿಪಾಠ ಇರಲಿಲ್ಲ. ಆಗ ಗುಡ್ಡದಲ್ಲಿ ತನಷ್ಟಕೆ ತಾನೆ ಬೆಳೆಯುವ ಮುಳಿ ಹುಲ್ಲು ಕೆಲವು ತಿಂಗಳ ಮೇವಿನ ಅವಶ್ಯಕಥೆ ಪೂರೈಸುತಿತ್ತು. ಮುಳಿ ಹುಲ್ಲು ಹುಲ್ಲು ಕತ್ತರಿಸಿದ ನಂತರ ಗುಡ್ಡಕ್ಕೆ ಬೆಂಕಿ ಹಾಕುವ ಸಂಪ್ರದಾಯ. ಉಳಿಕೆ ಬೇರು ಕಸವೆಲ್ಲ ಸುಟ್ಟು ಮುಂದಿನ ವರ್ಷ ಚಿಗುರಲು ಸಹಾಯಕ ಎನ್ನುವ ಚಿಂತನೆಯಿಂದ ಈ ಪರಿಪಾಠ ನಡೆದು ಬಂದಿತ್ತು. ಈಗ ಕೆಲಸದಾಳುಗಳ ಅಲಭ್ಯತೆ, ಗುಡ್ಡದಲ್ಲಿ ಕೃಷಿ ಮಾಡಿರುವ ಕಾರಣ ಈ ಸಂಪ್ರದಾಯ ಇತಿಹಾಸಕ್ಕೆ ಸೇರಿದೆ.


ಆಂದು ಮುಳಿ ಹುಲ್ಲು ಬಹಳ ಅಮೂಲ್ಯ ಮೇವಾಗಿತ್ತು. ಒಮ್ಮೆ ನಮ್ಮ ಅಜ್ಜ ಹೊರಗೆ ಹೋಗಿದ್ದವರು ಸಂಜೆ ತಡವಾಗಿ ಮನೆಗೆ ಬಂದವರೇ ಯಾರೋ @$&% ಮಕ್ಕಳು ಮುಳಿ ಗುಡ್ಡಕ್ಕೆ      ಬೆಂಕಿ ಹಾಕಿದ್ದಾರೆ ಎಂದು ಬೈದು ನಂತರ ಈ ವರ್ಷದಲ್ಲಿ ಮೇವಿನ ಕೊರತೆ ಉಂಟಾಗುತ್ತದೆ ಎಂದು ಪೇಚಾಡಿಕೊಂಡರಂತೆ. ರಾತ್ರಿ ಊಟದ ಸಮಯಕ್ಕಾಗುವಾಗಲೂ ಮನೆಯ ಮಕ್ಕಳು ನಾಪತ್ತೆ. ಹುಡುಕಾಡುವಾಗ ಮನೆಯ ಮೂಲೆಯಲ್ಲಿ ಅಡಗಿ ಕುಳಿತ ಮಕ್ಕಳು ನಾವು ಚಂದ ನೋಡಲು ಮುಳಿ ಹುಲ್ಲಿಗೆ ಬೆಂಕಿ ಹಾಕಿದ್ದು, ನಂತರ ನಂದಿಸಲು ಪ್ರಯತ್ನಿಸಿದರೂ ಸಾದ್ಯವಾಗಲಿಲ್ಲ ಎನ್ನುತ್ತಾ ಅಡಗಿಕೂತಲ್ಲಿಂದ ಹೊರಬಂದರಂತೆ.

ಬಾರತದ ಕೆಲವು ಪ್ರದೇಶದಲ್ಲಿ ಇಂದಿಗೂ ಬೆಳೆ ಕೊಯಿಲಾದ ನಂತರ ಹೊಲಕ್ಕೆ ಬೆಂಕಿ ಇಡುವ ಸಂಪ್ರದಾಯ. ಶಿವಮೊಗ್ಗದ ಪ್ರಫುಲ್ಲಚಂದ್ರರಂತಹ ಅನುಭವಸ್ಥ ರೈತರು ಇದರಿಂದ ನಷ್ಟವೇ ಹೊರತು ಲಾಭವಿಲ್ಲ ಎಂದರೂ ಈ ಪದ್ದತಿ ಮಾಸಿಲ್ಲ. ಪರೀಸರ ಮಾಲಿನ್ಯ, ಹವಾಮಾನ ವ್ಯತ್ಯಾಸ ಮತ್ತು ಸಂಪನ್ಮೂಲಗಳ ದ್ವಂಸವಾಗುವ ಕೃತ್ಯ ನಮ್ಮ ರೈತರು ಬಿಡುವುದು ಉತ್ತಮ.

ಈ ಸುಳಿವಿನ ಮೂಲ ವ್ಯಾಪಾರಿ ಹಡಗು ಕಾಪ್ಟನ್ ವೇಲು ಎಂಬವರ ಬ್ಲೋಗ್ ಬರಹ. ಹಲವು ವಿಚಾರಗಳ ಬಗೆಗೆ ವೇಲು ಚೆನ್ನಾಗಿ ಬರೆಯುತ್ತಾರೆ. ಹುಡುಕುತ್ತ ಹೋದಂತೆ ಇದರ ಮೂಲ ಪುಟವೂ ಸಿಕ್ಕಿತು.