Saturday, February 20, 2010

ನ್ಯೂ ಯೋರ್ಕಿನಲ್ಲೊಬ್ಬ ಅಪರೂಪದ ಫೊಟೊಗ್ರಾಫರ್

ಮೊದಲ ನೋಟದಲ್ಲಿ ಯಾವುದೋ ಪುರಾತನ ಕಾಲದ ಪೋಟೊ ಅನಿಸುತ್ತದೆ. ಹೌದು. ಶತಮಾನದಷ್ಟು ಹಳೆಯ ತಂತ್ರಜ್ನಾನ ಉಪಯೋಗಿಸುತ್ತಾರೆ ಮೈಕಲ್ ಬಯರ್ಡ್. ನ್ಯೂ ಯೋರ್ಕ್ ಪಟ್ಟಣದಲ್ಲಿ ರಸ್ತೆ ಬದಿಯಲ್ಲಿ ಫೋಟೊ ಮಾರುವ ಇವರು ಬಿಸಾಕುವಂತಹ ಚಿಕ್ಕ ಡಬ್ಬಗಳ ಉಪಯೋಗಿಸಿ ಕೆಮರ ತಯಾರಿಸಿಕೊಳ್ಳುತ್ತಾರೆ. ಅದರಲ್ಲಿ ಪಿಲ್ಮ್ ಕಾಗದ ಇಟ್ಟು ಪ್ರೇಕ್ಷಣೀಯ ಜಾಗಗಳಲ್ಲಿ ಕ್ಷಣ ಬೆಳಕು ಹಾಯಿಸುತ್ತಾರೆ. ಮನೆಯ ಕತ್ತಲು ಕೋಣೆಯಲ್ಲಿ ಸಂಸ್ಕರಿಸಿ ಕೊಂಟಾಕ್ಟ್ ಪ್ರಿಂಟ್ ಹಾಕಿ ಅದನ್ನು ಮಾರಲು ಸೈಕಲು ಏರಿ ಪಟ್ಟಣದ ಕೇಂದ್ರಬಾಗಕ್ಕೆ ಬರುತ್ತಾರೆ.  ಇವರ ದೊಡ್ಡ ಅಂಚೆ ಚೀಟಿ ಗಾತ್ರದ ಪೋಟೊ ಪ್ರವಾಸಿಗಳು ಕುತೂಹಲದಿಂದ ಇಪ್ಪತ್ತು ಡಾಲರ್ ತೆತ್ತು ಕೊಳ್ಳುತ್ತಾರೆ.  






ಸಿಕ್ಕ ಯಾವುದಾದರೂ ಡಬ್ಬದಲ್ಲಿ ಚೂರು ಪೋಟೊ ಕಾಗದ ಹಾಕಿ ತೂತಿನಲ್ಲಿ ಬೆಳಕಿಗೊಡ್ಡುತ್ತೇನೆ.   ಅದೊಂದು ಜಾದೂ ಎನಿಸುವಷ್ಟು ಸರಳ ಎನ್ನುತ್ತಾರೆ ಮೈಕಲ್ ಬಯರ್ಡ್. ಈ ಪೀಲ್ಮ್ ರೋಲ್ ಡಬ್ಬ ಒಳಬಾಗ ಉರುಟಾಗಿರುವ ಕಾರಣ ಈ ಪೋಟೊಗಳು ಸಹಾ ಅದನ್ನು ಪ್ರತಿಫಲಿಸುತ್ತವೆ. ಅವರ ಪೋಟೊಗಳು ತೀರಾ ಚಿಕ್ಕದು ಮತ್ತು ಸರಳವಾದುದು. ಪ್ರತಿಯೊಂದು ಪ್ರತ್ಯೇಕವಾಗಿ ಅವರ ಕತ್ತಲ ಕೋಣೆಯಲ್ಲಿ ಮುದ್ರಣಗೊಂಡಿರುತ್ತದೆ.






ಭೌತಶಾಸ್ತ್ರದ ಬೆಳಕಿನ ಬಗೆಗಿನ ಪ್ರಥಮ ಪಾಠದಲ್ಲಿ ಬರುವುದು ಪಿನ್ ಹೋಲ್ ಕೆಮರಾ. ಚಿಕ್ಕವನಾಗಿದ್ದಾಗಲೇ ಈ ಕಲೆಯ ಬಗೆಗೆ ಅಪಾರ ಆಸಕ್ತಿ ಹೊಂದಿದ ನನಗೆ ಉತ್ತಮ ಪಿನ್ ಹೊಲ್ ಕೆಮರಾ ಚಿತ್ರಗಳ ನೋಡಲು ಮೂವತ್ತೈದು ವರ್ಷ ಕಾಯಬೇಕಾಯಿತಲ್ಲ ಎನ್ನುವಾಗ ಬೇಸರವಾಗುತ್ತದೆ. ಅಂದು ತಿಳಿದಿದ್ದರೆ ಪ್ರಯೋಗ ಮಾಡಿ ಸಫಲನಾಗಲು ದಾರಾಳ ಅವಕಾಶಗಳಿದ್ದವು. ದ್ವಿತಿಯಾರ್ದ ಅಂದರೆ ಪೋಟೊ ಸಂಸ್ಕರಣೆ ತಿಳಿದ ಕಾರಣ ಯಶಸ್ಸಿಗೆ ಬಹಳ ಸಮೀಪದಲ್ಲಿಯೇ ಸಾಗಿದ್ದೆ. ಆದರೆ ಈಗ ಉಪಯೋಗಿಸುವಾಗ ಖರ್ಚಿಲ್ಲದ ಈ ಡಿಜಿಟಲ್ ಕೆಮರಗಳ ಉಪಯೋಗಿಸಿದ ನಂತರ ಈ ಫಿಲ್ಮ್ ಕೆಮರಗಳ ಉಪಯೋಗಿಸ ಹೊರಟರೆ ಉದ್ದಕ್ಕೂ ಒಂಟಿ ದಾರಿ. ನಮ್ಮ ಸ್ಟುಡಿಯೊದವರು ಸಂಸ್ಕರಣೆ ನಿಲ್ಲಿಸಿ ವರ್ಷಗಳಾದವು. ಇಂದು ಡೆವೆಲಪರ್, ಹೈಪೊ, ಪೋಟೊ ಮುದ್ರಣ ಕಾಗದ, ನೆಗೆಟಿವ್ ಹಾಳೆ ಎಲ್ಲವೂ ಹುಡುಕಾಡಲು ಸುಲಭವಲ್ಲ. ಮೊದಲು ನಮ್ಮೂರ ಸ್ಟುಡಿಯೊ ಗೆಳೆಯರಲ್ಲಿ ಈ ವಸ್ತುಗಳು ದಾರಾಳವಾಗಿ ಸಿಗುತಿತ್ತು.


ಇಂದಿಗೂ ಮಸೂರರಹಿತ ಪುಟ್ಟ ಕಿಂಡಿ ಕೆಮರಗಳ ತಯಾರಕರಿದ್ದಾರೆ. ಸಾಗುವಾನಿ ಮರದಲ್ಲಿ ಮಾಡಿದ ಗಾಜಿನ ಮಸೂರ ರಹಿತ ಚಿಕ್ಕ ತೂತಿನ ಕೆಮರಾ ಈಗ ಹಾಂಗ್ ಕಾಂಗಿನಲ್ಲಿ ತಯಾರಿಸಿ ಪ್ರಪಂಚಾದ್ಯಂತ ಮಾರಾಟ ಮಾಡುತ್ತಾರೆ. ಇಂದು ಇವರ ಗ್ರಾಹಕರಿರುವ ಇಪ್ಪತೇಳು ದೇಶಗಳ ಪಟ್ಟಿಯಲ್ಲಿ ಬಾರತದ ಹೆಸರಿಲ್ಲ. ನಾವು ಕಳಪೆ ಗುಣಮಟ್ಟದ ಡಿಜಿಟಲ್ ಕೆಮರಗಳಲ್ಲಿ ತೃಪ್ತರು.   ಈ ಅಧುನಿಕ ಕಿಂಡಿ ಕೆಮರಗಳ  ಮೇಲ್ಕಾಣಿಸಿರುವಂತಹ    ಚಿತ್ರಗಳನ್ನು ನೋಡಲು ಈ ತಾಣವ ಬೇಟಿ ಕೊಡಿ.

ಪಿನ್ ಹೋಲ್ ಕೆಮರಾ ಬಗೆಗಿನ ಕುತೂಹಲಕರ ಮಾಹಿತಿ ಈ ಕೊಂಡಿಯಲ್ಲೂ ನನಗೆ ದೊರೆತವು. ಅಂದು ಕಮುನಿಸ್ಟ್ ದೇಶಗಳಲ್ಲಿ ನೂರೆಂಟು ತಡೆಗಳಿದ್ದೂ ತಮ್ಮ ಕುತೂಹಲ ತಣಿಸಿಕೊಂಡ ಹಲವು ಹವ್ಯಾಸಿಗಳಿದ್ದಾರೆ. ಅಂತೆ ಈ ತಾಣದಲ್ಲೂ ಅದರ ಬಗೆಗೆ ಕಿರುನೋಟ ಸಿಗುತ್ತದೆ.

ಅತ್ಮೀಯ ಗೆಳೆಯ ರೋಹಿತ್ ಅವರಲ್ಲಿ ಕೆಮರಕ್ಕಿಂತ ದುಬಾರಿ ಮಸೂರಗಳಿವೆ. ಮುಂದೆ ಖರೀದಿಸುವ ಕೆಮರಗಳ ಜತೆಯೂ ಉಪಯೋಗಿಸಬಹುದು ಎನ್ನುತ್ತಾರೆ ರೋಹಿತ್. ಆದರೆ ಮಸೂರಗಳೇ ಇಲ್ಲದ ಕೆಮರಗಳು ಇನ್ನು ಮಾರಾಟವಾಗುತ್ತಿದೆ ಎನ್ನುವಾಗ ಅಶ್ಚರ್ಯ ಸಂತಸ ಎರಡೂ ಆಗುತ್ತದೆ. ಅದು ಕೆಲಸ ಮಾಡಲಾರದು ಎನ್ನುವ ಭಾವನೆ ಎಲ್ಲರಂತೆಯೇ ನನ್ನ ಮನದಲ್ಲಿ ಮನದಲ್ಲಿ ಮೂಡಿದ್ದು ಇರಬಹುದು. ಬಹಳ ಇಷ್ಟ ಪಟ್ಟು ಸಂಸ್ಕರಣೆ ಕಲಿತಿದ್ದೆ. ಎರವಲು ಪಡೆದ ಕೆಮರಗಳಲ್ಲಿ ಉತ್ತಮ ಚಿತ್ರ ಸೆರೆ ಹಿಡಿದಿದ್ದೆ. ಆದರೆ ಅದನ್ನು ಕಾಪಾಡಿಕೊಳ್ಳುವುದರ ಕಾಳಜಿ ಇಲ್ಲದೆ ಎಲ್ಲವೂ ಕಾಣೆಯಾಗಿವೆ.  ಎಷ್ಟು ಸಮೀಪದಲ್ಲಿ ಒಂದು ಅಧ್ಬುತ ಲೋಕ ತೆರೆದುಕೊಳ್ಳುವುದರ ತಪ್ಪಿಸಿಕೊಂಡಿದ್ದೇನೆ ಅಂತ ಯೋಚಿಸುವಾಗ ಬಹಳ ಬೇಸರವಾಗುತ್ತದೆ.

Tuesday, February 16, 2010

ಸಾಕು ಪ್ರಾಣಿಗಳಿಗೂ ಸರಕಾರಿ ವಕೀಲರು

ಸ್ವಿಜರ್ ಲಾಂಡ್ ಬರುವ ತಿಂಗಳು ಮಾರ್ಚ್ ಏಳರಂದು ಜನಾಭಿಮತ ಸಂಗ್ರಹಿಸಲು ಮತದಾನ ಮಾಡುತ್ತದೆ. ಈ ವಿಚಾರಕ್ಕೆ ಜನಬೆಂಬಲ ದೊರೆತರೆ ಪ್ರತಿ ಜಿಲ್ಲೆಯಲ್ಲೂ ಸಾಕು ಪ್ರಾಣಿ ಹಿತಕಾಯುವ ಸರಕಾರಿ ವಕೀಲರ ನೇಮಕಕ್ಕೆ ಕಾರಣವಾಗುತ್ತದೆ. ಇಂದು ನಾಯಿ ಬೆಕ್ಕುಗಳ ವಿಚಾರ ಮತದಾನಕ್ಕೆ ಹೊರಟಿರುವ ಸ್ವಿಜರ್ಲಾಂಡಿನಲ್ಲಿ ಹೆಂಗಸರಿಗೆ ಮತದಾನದ ಹಕ್ಕು ದೊರಕಿದ್ದೇ ೧೯೭೧ ರಲ್ಲಿ ಅಂದರೆ ಈಗ ಮತದಾನದ ಹಕ್ಕು ಸಿಕ್ಕಿ ಬರೇ ಮೂವತ್ತೊಂಬತ್ತು ವರ್ಷಗಳಾದವು.

ಈಗಾಗಲೇ ಸ್ವಿಜರ್ಲಾಂಡಿನಲ್ಲಿ ಮರ್ಯಾದೆಯಲ್ಲಿ ಜೀವಿಸುವ ಹಕ್ಕು ಮೀನ್ಮನೆಯಲ್ಲಿರುವ ಕೆಂಪು ಮೀನುಗಳಿಗೂ ಪೆಟ್ಟಿಗೆಯಲ್ಲಿರುವ ಗಿನಿ ಪಿಗ್ ಗಳಿಗೂ ಲಭಿಸಿದೆ. ಇಂದು ಜಾರಿಯಿರುವ ಕಾಯಿದೆ ಪ್ರಕಾರ ಸಂಘಜೀವಿಯಾದ, ಗುಂಪಿನಲ್ಲಿ ವಾಸಿಸುವ ಗೊಲ್ಡ್ ಫಿಶ್ ಗಳನ್ನು ಒಂಟಿಯಾಗಿರಿಸುವಂತಿಲ್ಲ. ಅವುಗಳ ಮೀನ್ಮನೆಗಳು ನಾಲ್ಕು ಬದಿಯೂ ಪಾರದರ್ಶಕವಾಗಿರುವಂತಿಲ್ಲ. ನಾಯಿ ಸಾಕಲಿಚ್ಚಿಸುವವರು ನಾಲ್ಕು ಘಂಟೆ ಪಾಠ ಹೇಳಿಸಿಕೊಂಡನಂತರ ಸಾಕಲು ಅನುಮತಿ ಪಡೆಯುತ್ತಾರೆ. ಬರುವ ತಿಂಗಳು ನಡೆಯುವ ಪ್ರಜಾನಿರ್ಧಾರದಲ್ಲಿ ಜನ ಬೆಂಬಲ ದೊರೆತರೆ ಪ್ರತಿ ಜಿಲ್ಲೆಯೂ ವಕೀಲರನ್ನು ನೇಮಿಸಬೇಕಾಗುತ್ತದೆ.

ಪ್ರಾಣಿ ದೌರ್ಜನ್ಯ ಅಪವಾದ ಎದುರಿಸುವ ಅಪರಾದಿಗಳು ವಕೀಲರನ್ನು ನೇಮಿಸಿಕೊಳ್ಳಬಹುದಾಗಿದೆ. ಆದರೆ ಪ್ರಾಣಿಗಳು ಇಂದಿನ ಪರೀಸ್ಥಿತಿಯಲ್ಲಿ ವಕೀಲರ ನೇಮಿಸಿಕೊಳ್ಳುವಂತಿಲ್ಲ. ಸುದ್ದಿ ಗೋಷ್ಟಿಯಲ್ಲಿ ಮಾತನಾಡುತ್ತಾ  ಅಂಟೋನ್  ಗೋತ್ಚಲ್  ಎನ್ನುವ ವಕೀಲರು ಅಂತಹ ಸಂದರ್ಭ ನನ್ನ ಪ್ರವೇಶವಾಗುವುದು ಎನ್ನುತ್ತಾರೆ. ಇವರು ಝೂರಿಚ್ ಜಿಲ್ಲೆಯ ಪ್ರಾಣಿಗಳ ವಕೀಲರಾಗಿ ೨೦೦೭ರಲ್ಲಿ ನೇಮಿಸಲ್ಪಟ್ಟರು. ತಮ್ಮ ವಾದ ಮಂಡಿಸಲು ಕೋರ್ಟಿಗೆ ಪ್ರಾಣಿಗಳು ಹಾಜರಾಗಬೇಕಾಗಿಲ್ಲ. ನಮ್ಮ ಗೋತ್ಚಲ್ ವಕೀಲರು ಅವುಗಳ ಪರವಾಗಿ ವಾದಿಸುತ್ತಾರೆ.ಈ ಪ್ರಯೋಗವನ್ನು ದೇಶಾದ್ಯಂತ ಹರಡಲು ಈಗಾಗಲೇ ಒಂದು ಲಕ್ಷಕ್ಕೂ ಮಿಕ್ಕಿ ಸಹಿ ಸಂಗ್ರಹಿಸಲಾಗಿದೆ.

ಅಲ್ಲಿ ಇದು ಕಾನೂನಾಗಿ ಜಾರಿಗೆ ಬಂದರೆ ಯುರೋಪ್ ಅಮೇರಿಕವನ್ನು ಕುರಿಮಂದೆಯಂತೆ ಹಿಂಬಾಲಿಸುವ ನಮ್ಮ ದೇಶವೂ ಅನುಸರಿಸಬಹುದಾಗಿದೆ. ನಮ್ಮ ಜನಪ್ರತಿನಿಧಿಗಳು ಅನುಮೋದಿಸುವ ವಿಚಾರದಲ್ಲಿ ಖಂಡಿತ ಕೈ ಎತ್ತುತ್ತಾರೆ. ಹೆಮ್ಮೆಯಿಂದ ನನ್ನ ಮಗ ನಾಯಿಬೆಕ್ಕುಗಳ ಡಾಕ್ಟ್ರು ಎನ್ನುವ ದಾಟಿಯಲ್ಲಿಯೇ ಆಗ ನಮ್ಮ ಹುಡುಗ ನಾಯಿ ವಕೀಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಕಾಲ ಬರಬಹುದು. ಪಶು ವೈದ್ಯ ಮನೋಹರ ಉಪಾದ್ಯರ ಚಿಕಿತ್ಸಾಲಯ ಪಕ್ಕದಲ್ಲಿ ನಾಯಿ ವಕೀಲರ ಕಛೇರಿ ಇದ್ದರೆ ಸುಲಭ. ಒಂದು ಕಡೆ ಹೋದರೆ ಎರಡು ಕೆಲಸವೂ ಆದಂತೆ.

ಒಮ್ಮೆ ಸಾಕು ಪ್ರಾಣಿಗಳಿಗೆ ವಕೀಲರ ನೇಮಿಸುವ ಹಕ್ಕುಗಳು ಲಬಿಸಿದರೆ ಅನಂತರ ಹೊಸ ತರದ ವ್ಯಾಜ್ಯಗಳು ಸುರುವಾಗಬಹುದು. ಹತ್ತು ವರ್ಷ ವಿದೇಯನಾಗಿ ಯಜಮಾನನ ಸೇವೆ ಮಾಡಿದ ನಾಯಿ ಎಂಟು ವರ್ಷ ಯಜಮಾನತಿಗೆ ಸಂಗಾತಿಯಾಗಿದ್ದ ಬೆಕ್ಕುಗಳು ಆಸ್ತಿ ಪಾಲಿಗಾಗಿ ಕೋರ್ಟ್ ಬಾಗಿಲು ತಟ್ಟಬಹುದು. ಅನಿಲ ಬಾವಿ ಮೇಲೆ ಕಣ್ಣಿಟ್ಟಿರುವ ಅಂಬಾನಿ ಕುಟುಂಬದ ನಾಯಿಗಂತೂ ಜೆತ್ಮಲಾನಿ ( ಬದುಕಿದ್ದರೆ ) ವಕೀಲರಾಗಲು ಸಿದ್ದವಾಗುವುದು ಖಚಿತ.

Saturday, February 06, 2010

ನಾವ್ಯಾಕೆ ಇಟಲಿಯ ಪೀಡಿಬಸ್ ಮಾದರಿ ಅನುಸರಿಸಬಾರದು ?

ಇತ್ತೀಚಿನ ದಿನಗಳಲ್ಲಿ ಇಟಲಿಯಲ್ಲಿ ಜನಪ್ರಿಯವಾಗುತ್ತಿರುವ ಶಾಲಾ ವಾಹನ ಎಂದರೆ ಪೀಡಿ ಬಸ್. ಈ ಆಂದೋಲನ ಪ್ರಾರಂಬವಾದ ಲೆಕ್ಕೊ ಪಟ್ಟಣದಲ್ಲಿ ಪ್ರತಿದಿನ ಬೆಳಗ್ಗೆ ಹತ್ತು ಬೇರೆ ಬೇರೆ ಪ್ರಾಥಮಿಕ ಶಾಲೆಗಳಿಗೆ ಸಾಗುವ ಆರು ನೂರು ಮಕ್ಕಳು ಹದಿನೇಳು ಪೀಡಿಬಸ್ ಏರುತ್ತಾರೆ. ಪೀಡಿಬಸ್ ಎಂದರೆ ಹೊಗೆ ಉಗುಳುವ ಬಸ್ಸಲ್ಲ, ಮಕ್ಕಳು ಕುಣಿಯುತ್ತಾ ನಡೆಯುತ್ತಾ ಶಾಲೆಗೆ ಸಾಗುವ ವ್ಯವಸ್ಥೆ. ನಿತ್ಯವೂ ನಡೆಯುವ ಇದೊಂದು ರೀತಿಯಲ್ಲಿ ನಮ್ಮ ಉತ್ಸವದ ಮೆರವಣಿಗೆಯಂತಿದೆ. [ಪೀಡಿಬಸ್ ಎಂದರೆ ಇಟಾಲಿಯನ್ ಬಾಷೆಯಲ್ಲಿ ಕಾಲು- ಬಸ್ಸು ಅನ್ನುವರ್ಥ. ಆದರೆ ನಮ್ಮೂರ ಆಡುಬಾಷೆ ತುಳುವಿನಲ್ಲಿ ಕಾರು ಎಂದರೆ ಕಾಲು ಎನ್ನುವ ಅರ್ಥ. ಅದುದರಿಂದ ನನ್ನ ಈ ಬರಹದಲ್ಲಿ ಮುಂದೆ ಇಟಲಿಯ ಪೀಡಿಬಸ್ ನಮ್ಮೂರ ಕಾರ್ ಬಸ್ಸಾಗುತ್ತದೆ ]


ಕಾರುಗಳು ಉಗುಳುವ ಹೊಗೆಯಿಂದ ಉಂಟಾಗುವ ವಾಯು ಮಲೀನತೆ, ಊರಿನಲ್ಲಿ ವಾಹನಗಳ ದಟ್ಟಣೆ ಮತ್ತು ಮಕ್ಕಳ ಬೊಜ್ಜು ಸಮಸ್ಯೆ - ಈ ಮೂರು ಉದ್ದೇಶಗಳ ಹೊಂದಿ ಏಳು ವರ್ಷ ಹಿಂದೆ ಲೆಕ್ಕೊ ಊರಿನಲ್ಲಿ ಕಾರ್ ಬಸ್ಸಿಗೆ ಚಾಲನೆ ನೀಡಲಾಯಿತು. ಪ್ರತಿ ವರ್ಷ ಜಗತ್ತಿನ ಮೂವತ್ತಾರು ಬಾಷೆಯಲ್ಲಿ ಜಾಗತಿಕ ಪರಿಸರ ಚಿತ್ರಣ ಸೂಚಿಸುವ ವರ್ಲ್ಡ್ ವಾಚ್ ನ ಕಳೆದ ತಿಂಗಳು ಬಿಡುಗಡೆಯಾದ ವಾರ್ಷಿಕ ವರದಿಯಲ್ಲಿ ಕಾರು ಬಸ್ಸಿನ ಪ್ರಥಮವಾಗಿ ಜಾರಿಗೆ ತಂದ ಲೆಕ್ಕೊ ಊರಿನ ಉಲ್ಲೇಖವಿದೆ. ಇದೊಂದು ಅವರಿಗೆ ಬಹಳ ಹೆಮ್ಮೆ ಪಡುವಂತಹ ವಿಚಾರ.



ಬಸ್ಸು ವಿವಿದ ನಿಲ್ದಾಣಗಳಿಗೆ ನಿಗದಿತ ಸಮಯಕ್ಕೆ ತಲಪುತ್ತದೆ. ನಿಗದಿತ ಬಸ್ಸು ನಿಲ್ದಾಣಕ್ಕೆ ಸರಿಯಾದ ಸಮಯಕ್ಕೆ ಮಕ್ಕಳ ತಲಪಿಸಿದರಾಯಿತು. ಕರಕೊಂಡು ಹೋಗುತ್ತಾರೆ. ಬಸ್ಸು ಚಾಲಕ ಬೊಮ್ಮನಹಳ್ಳಿಯ ಕಿಂದರಿಜೋಗಿ ಮುನ್ನಡೆಸುತ್ತಾನೆ. ಕೊನೆಯಲ್ಲಿ ನಿರ್ವಾಹಕನೂ ಇರುತ್ತಾನೆ. ಪ್ರತಿ ದಿನ ಬೆಳಗ್ಗೆ ನೌಕರರು ಹಾಗೂ ಮಕ್ಕಳ ಪೋಷಕರು ಸ್ವಯಂ ಸೇವಕರು ಮಿನುಗುವ ಅರಿಶಿನ ಬಣ್ಣ ಮೇಲಂಗಿ ದರಿಸಿ ಮಕ್ಕಳ ಸಾಲು ಪ್ರಕಾರ ಮುನ್ನಡೆಸುತ್ತಾರೆ. ಈ ಬಸ್ಸು ಸಾಗಲು ಇತರ ವಾಹನಗಳ ತಡೆಯುತ್ತಾರೆ. ಕೆಲವು ಅಜ್ಜ ಅಜ್ಜಿಯರೂ ಸ್ವಯಂ ಸೇವೆಗೆ ಸಿದ್ದವಾಗಿರುವಂತೆ ಚಿತ್ರ ನೋಡುವಾಗ ಸಂಶಯ ಬರುತ್ತದೆ.
 
ಶಾಲೆ ಮುಗಿದ ನಂತರ ಬಸ್ಸು ವಾಪಾಸು ತಂದು ಬಿಡುತ್ತದೆ. ಎಲ್ಲ ಬಸ್ಸು ದಾರಿಗಳಿಗೂ ಅರ್ಥಪೂರ್ಣಹೆಸರುಗಳಿವೆ. ದಿನಾಲು ಮಕ್ಕಳ ಹಾಜರಿ ದಾಖಲಾಗುತ್ತದೆ. ಊರಿನ ಆಡಳಿತ ಈ ವ್ಯವಸ್ಥೆಗೆ ವರ್ಷಕ್ಕೆ ಒಂಬತ್ತು ಲಕ್ಷ ರೂಪಾಯಿ ಖರ್ಚು ಮಾಡುತ್ತದೆ. ಮಕ್ಕಳೂ ಸಮಾಜದ ಬಗೆಗೆ ಕಾಳಜಿ ವ್ಯಕ್ತ ಪಡಿಸುತ್ತಾರೆ. ಎಲ್ಲಾದರೂ ಅಡ್ಡಾ ದಿಡ್ಡಿ ವಾಹನ ನಿಲ್ಲಿಸಿರುವುದು ಕಂಡರೆ ಎಚ್ಚರಿಸುತ್ತಾರೆ. ದಾರಿಯಲ್ಲಿ ಗಲೀಜು ಮಾಡುವ ನಾಯಿಗಳ ಯಜಮಾನರನ್ನು ಛೇಡಿಸುತ್ತಾರೆ.


ಕಾರ್ಡೂಸಿ ಶಾಲೆಗೆ ನೂರು ಮಕ್ಕಳು ಅಂದರೆ ಶಾಲೆಯ ಅರೆವಾಶಿ ಸಂಖ್ಯೆ ಇಂದು ಕಾರ್ ಬಸ್ಸಲ್ಲಿ ಬರುತ್ತಾರೆ. ಇವರಲ್ಲಿ ಹಲವರು ಹಿಂದೆ ಕಾರಲ್ಲಿ ಬರುತ್ತಿದ್ದರು. ಹೆಚ್ಚಿನ ಕಾರ್-ಬಸ್ ಪ್ರಯಾಣ ಒಂದು ಮೈಲು ಮಿಗದೆ ಇದ್ದರೂ ಒಟ್ಟಿನಲ್ಲಿ ಒಂದು ಲಕ್ಷ ಮೈಲು ಕಾರು ಓಡುವುದು ನಿವಾರಿಸಿದೆ ಎಂದು ಲೆಕ್ಕೊ ಪಟ್ಟಣದ ಶಾನುಬೋಗರು ಅಬಿಪ್ರಾಯ ಪಡುತ್ತಾರೆ. ದಿನಾಲೂ ನೂರ ನಲುವತ್ತನಾಲ್ಕು ಕಾರುಗಳು ಊರಿನ ಶಾಲೆಗಳಿಗೆ ಬರುವುದನ್ನು ಈ ವ್ಯವಸ್ಥೆ ತಡೆದಿದೆ.

ನನ್ನ ಇಬ್ಬರು ಮಕ್ಕಳು ಬೇರೆ ಬೇರೆ ಶಾಲೆಗೆ ಹೋಗುತ್ತಾರೆ. ಅವರ ಬೆನ್ನು ಚೀಲ ಬಾರವಾಗಿರುತ್ತದೆ ಎಂದು ಒಬ್ಬ ಮಾತೆ ಮಕ್ಕಳು ಹದಿನೈದು ನಿಮಿಷ ನಡೆಯುವುದರ ಬದಲಿಗೆ ಕಾರಿನಲ್ಲಿ ಕರೆ ತಂದುದಕ್ಕೆ ಸಮಜಾಯಶಿ ಕೊಡುತ್ತಾರೆ. ಕೆಲವರು ಈ ಕಾರು ಬಸ್ಸಿನ ದಾರಿಗಿಂತ ದೂರದಲ್ಲಿರುತ್ತಾರೆ. ಅಂತಹವರಿಗೆ ಊರ ಗಡಿಯಲ್ಲಿ ಕಾರು ಬಸ್ಸಿನ ನಿಲುಗಡೆಯಿದೆ ಎಂದು ಅದರ ವ್ಯವಸ್ಥಾಪಕರು ಹೇಳುತ್ತಾರೆ.

ಕಳೆದ ವರ್ಷದಲ್ಲಿ ಇಂಗ್ಲೇಂಡಿನಲ್ಲಿ ಶಾಲೆಗೆ ಮಕ್ಕಳ ಸಾಗಿಸಲು ಶೇಕಡ ಹದಿನೆಂಟು ಕಾರು ಓಡಾಟ ಎಂದು ಲೆಕ್ಕ ಹಾಕಿದ್ದಾರೆ ಮತ್ತು ಇದು ಹೆಚ್ಚಿನ ದೇಶಗಳಲ್ಲಿ ಹೆಚ್ಚುತ್ತಲೇ ಇದೆ. ಇಂದು ಪರದೇಶಗಳಿಂದ ಅಹಾರ ಅಮದು ಮಾಡುವುದು ಮತ್ತು ಅಗ್ಗದ ವಿಮಾನ ಪ್ರಯಾಣದ ಜತೆಗೆ ಶಾಲೆಗೆ ಕಾರು ಓಡಿಸುವುದು ಪರಿಸರದ ಮೇಲೆ ಅಪಾರ ದುಷ್ಪರಿಣಾಮ ಬೀಳುವುದೆಂದು ಯುರೋಪಿನ ಪರಿಸರ ಸಂಸ್ಥೆ ಕಳೆದ ವರ್ಷ ಎಚ್ಚರಿಸಿದೆ. ಈ ನಡೆಯುವ ಬಸ್ಸು ಕಾರುಗಳ ಅವಲಂಬನೆ ಕಡಿಮೆ ಮಾಡುವ ಉದ್ದೇಶ ಮಾತ್ರವಲ್ಲ, ಮಕ್ಕಳ ಬೊಜ್ಜು ಕರಗಿಸುವುದೂ ಹೌದು. ಹಲವಾರು ದೇಶಗಳಲ್ಲಿ ಮಕ್ಕಳ ಬೊಜ್ಜು ಗಂಬೀರ ಸಮಸ್ಯೆ.


ಇಟಲಿಯಲ್ಲಿ ಈ ವರ್ಷ ಜನವರಿಯಲ್ಲಿ ಕಾರ್ ಬಸ್ಸು ವಿಚಾರದಲ್ಲಿ ಎರಡು ಹೊಸ ಬೆಳವಣಿಕೆಗಳು. ಅಮೇರಿಕದ ವರ್ಲ್ಡ್ ವಾಚ್ ಸಂಸ್ಥೆ ಈ ವರ್ಷ ಲಿಕ್ಕೊ ಪಟ್ಟಣದ ಈ ಕಾರ್ ಬಸ್ಸಿನ ಕೊಡುಗೆ ಗುರುತಿಸಿದೆ. ಜನವರಿ ಇಪ್ಪತ್ತನಾಲ್ಕರಂದು ಇನ್ನೊಂದು ಊರು ಕಾರ್ ಬಸ್ಸ್ ಪಟ್ಟಿಗೆ ಸೆರ್ಪಡೆಯಾಗಿದೆ. ಅದು ಸಾಗುವ ದಾರಿ ಮತ್ತು ವೇಳಾಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ.

ಇದನ್ನು ನಡೆಸಲು ಬಹಳ ಪ್ರಯತ್ನ ಅವಶ್ಯ. ಮಕ್ಕಳನ್ನು ಕಾರಿನಲ್ಲಿ ತುಂಬಿ ಶಾಲೆಗೆ ಬಿಡುವುದು ಸುಲಭದ ದಾರಿ. ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಕಾರುಗಳಿರುವಾಗ ಅವುಗಳ ಉಪಯೋಗಿಸದೆ ಇರುವುದೂ ಕಷ್ಟ. ಮಳೆ ಬಂದ ದಿನ ಹಾಜರಾತಿ ಕಡಿಮೆಯಿರುತ್ತದೆ. ಹಿಮ ಬೀಳುವಾಗ ಪೂರಾ ಮಕ್ಕಳು ಹಾಜರ್. ಆಟವಾಡಿಕೊಂಡು ಶಾಲೆಗೆ ಹೋಗಬಹುದಲ್ಲಾ.

ಹಳ್ಳಿಯೊಂದರ ಮೂಲೆಯಲ್ಲಿ ವಾಸವಾಗಿರುವ ನಾನು ಮಕ್ಕಳ ಶಾಲಾ ಬಾಬ್ತು ಸುಮಾರು ಹತ್ತು ವರ್ಷ ದಿನಕ್ಕೆ ಮೂವತ್ತೆರಡು ಕಿಮಿ ವಾಹನ ಓಡಿಸಿದ್ದೇನೆ. ಈ ರೀತಿಯ ಯಾವುದೇ ಪರ್ಯಾಯ ವ್ಯವಸ್ಥೆ ಇದ್ದರೆ ಶಾಲೆಯ ಬುಡದಲ್ಲಿ ಬಿಡುವ ಬದಲು ಊರ ಗಡಿಯಲ್ಲಿ ಬಿಡುತ್ತಿದ್ದೆ. ಶಾಲೆ ಸಮೀಪಿಸಿದಂತೆ ಹೆಚ್ಚಿನ ಮಕ್ಕಳು ಮತ್ತು ಗುರುಗಳು ನಡೆದುಕೊಂಡು ಹೋಗುವಾಗ ನಾವು ವಾಹನದಲ್ಲಿ ಬಂದಿಯಾಗಿರುವುದು ನಿಜಕ್ಕೂ ಮುಜುಗರ ಹಿಂಸೆಯಾಗುತ್ತಿತ್ತು. ಅದುದರಿಂದ ಮಕ್ಕಳು ಸ್ವಲ್ಪ ದೊಡ್ಡವರಾದ ಮೇಲೆ ಅರ್ಧ ಕಿಮಿ ದೂರದಲ್ಲಿ  ಬಿಡುತ್ತಿದ್ದೆ.

Tuesday, February 02, 2010

ಮರಗಳನ್ನೇ ಕಲಾಕೃತಿಯನ್ನಾಗಿಸುವ ಆಸ್ಟ್ರೇಲಿಯದ ಪೀಟರ್

ಈ ಚಿತ್ರ ನೋಡುವಾಗ ಮೊದಲು ಹೆಚ್ಚೇನು ಅಚ್ಚರಿಯಾಗಲಿಲ್ಲ. ಹಲವು ಪಾರ್ಕುಗಳಲ್ಲಿರುವ ಇಂತಹ ಆಕೃತಿಯನ್ನು ಯಾವ ಯಂತ್ರಶಿಲ್ಪಿಯೂ ತಯಾರಿಸಬಲ್ಲ ಅನಿಸಿತು. ಆದರೆ ಇದು ತಯಾರಾದದ್ದು ಕಬ್ಬಿಣದಿಂದಲ್ಲ ಮತ್ತು ಎಚ್ಚರಿಕೆ ವಹಿಸಿ ರೂಪಿಸಿದ ಸಜೀವ ಮರ ಎನ್ನುವಾಗ ಅದ್ಬುತ ಅನಿಸಿತು.



ಆಭರಣಗಳ ಕೆಲಸ ಮಾಡುವ ಪೀಟರ್ ಅವರಿಗೆ ಈ ಅಲೋಚನೆ ಮೂಡಿ ಹಲವು ವರ್ಷಗಳ ಅನಂತರ ಬೆಕ್ಕಿ ಅವರ ಜತೆ ಜತೆಗಾರಿಕೆಯಲ್ಲಿ ಈ ಮರಗಳ ರೂಪಿಸುವುದಕ್ಕೆ ಕೈ ಹಾಕಿದರಂತೆ. ಇಂದು ಅವರ ಇಬ್ಬರು ಮಕ್ಕಳು  ಆಟವಾಡುವುದು ಕುಣಿದಾಡುವುದು  ಈ ಜೀವಂತ ಪಾರ್ಕಿನಲ್ಲಿ. ಆಸ್ಟ್ರೇಲಿಯದಲ್ಲಿರುವ ಇವರ ತೋಟದಲ್ಲಿ ಕರಾರುವಕ್ಕಾಗಿ ಬೆಳೆಸಿದ ಕೆಲವು ಮರಗಳು ಉತ್ತಮ ತರಗತಿಯ ಪೀಠೋಪಕರಣವಾದರೆ ಉಳಿದವುಗಳು ಜೀವಂತ ಕಲಾಕೃತಿಯಾಗಿ ಉಳಿಯುವುದಂತೆ.  ಇದರಲ್ಲಿ  ನಮಗೊಂದು  ಮಾದರಿ  ಇದೆಯೋ ?


ವರ್ಷಗಳ ಹಿಂದೆ ಆತ್ಮೀಯ ಗೆಳೆಯ ಅಶ್ವಿನ್ ಜೂಜುಗಾರರ ಸ್ವರ್ಗ ಮರುಭೂಮಿ  ಮಧ್ಯೆ ಇರುವ    ಲಾಸ್ ವೆಗಾಸಿಗೆ ಕರೆದೊಯ್ದಿದ್ದ. ಆಗ ಹೋಟೆಲ್ ಕಿಟಿಕಿಯಲ್ಲಿ ಹೊರ ನೋಡುವಾಗ ನನಗೆ ದೂರದಲ್ಲಿ ಒಂದು ಈಚಲಿನಂತಹ ಮರದ ಮರುನಾಟಿ ಕಂಡಿತ್ತು. ನಮ್ಮ ಅಡಿಕೆ ಕೃಷಿಗೆ ಪರ್ಯಾಯ ಉದ್ಯೋಗವಾಗಿ ಈ ರೀತಿ ವಿವಿದ ಮರಗಳ ನಾಲ್ಕಾರು ವರ್ಷ ಬೆಳೆಸಿ ಮಾರಬಹುದೋ ? ಎಂದು ಚಿಂತಿಸಿದ್ದೆ. ವಾಪಾಸಾದ ನಂತರ ಸಮಸ್ಯೆಗಳ ಕೊಚ್ಚೆಯಲ್ಲಿ ಸಿಲುಕಿದಾಗ ಈ ಆಲೋಚನೆ ಮನದಿಂದ ಜಾರಿತ್ತು.  ಮೇಲಾಗಿ   ಸುತ್ತಲಿರುವವರೆಲ್ಲರೂ  ನನ್ನ  ಹುಚ್ಚಾಟ  ವಿರೋದಿಸುವವರೇ.

ಬೆಂಗಳೂರಿನ ನರ್ಸರಿಗಳಿಗೆ ಕೆಲವು ಅಡಿಕೆ ಕೃಷಿಕರು ತೋಟದೆಡೆಯಲ್ಲಿ ಹೂವಿನ  ಗಿಡಗಳ   ತಯಾರಿಸಿ ಮಾರುವುದರ ಅಡಿಕೆ ಪತ್ರಿಕೆ ಬೊಟ್ಟು ಮಾಡಿತ್ತು. ಆಗ ಪುನಹ ಮೇಲಿನ ಅಲೋಚನೆ ಮಿಂಚಿ ಮಾಯವಾಗಿತ್ತು.  ಮರದ ಕಾಂಡದ ಸುತ್ತಳತೆ ಹೆಚ್ಚಿಸಲು ಅಕ್ಕಪಕ್ಕದಲ್ಲಿ ಒಂದೇ  ಜಾತಿಯ  ಸಸಿ ನೆಟ್ಟು ಅವುಗಳ ಮದ್ಯಬಾಗದಲ್ಲಿ ಕಸಿ ಕಟ್ಟುವುದೂ ಎಲ್ಲಿಂದಲೋ ಹೆಕ್ಕಿದ ಮಾಹಿತಿ ಅಡಿಕೆ ಪತ್ರಿಕೆ ಬಹು ಹಿಂದೆ ಪ್ರಕಟಿಸಿದೆ.   ಹಾಗೆ ಘಟ್ಟವೇರುವಾಗ ಕಾಫಿ ಗಿಡಗಳ ಉಪಯೋಗಿಸಿ ಮಾಡಿದ ಕಲಾತ್ಮಕ ಆಕೃತಿಗಳು ಮನಸೆಳೆದರೂ ಅವೆಲ್ಲ ಸತ್ತ ಗಿಡಗಳಿಗೆ ರೂಪ ಕೊಡುವ ಪ್ರಯತ್ನ.

ಈ ಚಿತ್ರಗಳ ನೋಡುವಾಗ ಮನಸ್ಸು ಚುರುಕಾಯಿತು. ಬೆಂಗಳೂರಿಗರ ಹುಲ್ಲುಹಾಸಿನ ಮದ್ಯೆ ನೆಡಲು ಐದು ವರ್ಷದ ಜೀವಂತ ಕುರ್ಚಿ............. ಇದರಲ್ಲಿ ಕತ್ತರಿಸುವುದು, ಬಗ್ಗಿಸುವುದು ಮತ್ತು ಕಸಿ ಕಟ್ಟುವ ಕೆಲಸ ತುಂಬಾ ಉಂಟು. ಲಾಭಕಲ್ಲವಾದರೂ ಹವ್ಯಾಸಕ್ಕೆ ಖಂಡಿತ ಮಾಡಬಹುದಾದ ಕೆಲಸ. ಕಿಸೆ ತುಂಬಿದರೆ ಬೋನಸ್ ಅಂದುಕೊಳ್ಳಬೇಕು. ಬೆಳೆಸುವುದರಲ್ಲಿ ಕುಶಿ ಖಂಡಿತಾ ಸಿಕ್ಕಿತು.  ಇಂತಹ ಕಲಾಕೃತಿ ರಚಿಸುವ ಇತರರ ಬಗೆಗೆ ವಿಕಿಪೇಡಿಯದಲ್ಲಿ ವಿವರಗಳಿವೆ