Thursday, February 24, 2011

ಕಾರುಗಳಿಂದ ಸೈಕಲೇ ಬಲು ದುಬಾರಿ




ಕಾರುಗಳ   ಮಾರಾಟಗಾರರ  ಚಾತುರ್ಯ  ಚಮತ್ಕಾರದಲ್ಲಿ     ಇಂದು  ಕಾರುಗಳು ಬದುಕಿನ ಅನಿವಾರ್ಯ ಅಂಗವಾಗಿಬಿಟ್ಟಿದೆ.  ಬೇಕುಗಳ ಪಟ್ಟಿಯಲ್ಲಿ  ಮೊದಲಸ್ಥಾನ  ಪಡೆದಿದೆ.  ಏಳಿಗೆಯ ಸಂಕೇತವೆಂದು ಸೂಚಿಸುವ   ಕಾರುಗಳಿಗಾಗಿ    ಕಾಡುಗಳ ಕಡಿಯುತ್ತೇವೆ. ರೈತರ  ಬೂಮಿ  ಅತಿಕ್ರಮಿಸುತ್ತೇವೆ.   ಹೀಗೆ    ಇರುವ  ಜಾಗವನ್ನೆಲ್ಲ   ರಸ್ತೆ ಹಾಗೂ   ಕಾರು ಪಾರ್ಕುಗಳು  ಅಕ್ರಮಿಸುತ್ತವೆ.    ಇವುಗಳ   ತಯಾರಿ  ಹಾಗೂ   ಉಪಯೋಗಕ್ಕೆ  ಸಮಾಜವು    ಸರಕಾರದ ಮೂಲಕ   ಅಪಾರ ರೀಯಾಯತಿ ಕಲ್ಪಿಸುತ್ತದೆ.  ದರ್ಮಾರ್ಥ  ಬೂಮಿ, ರಿಯಾಯತಿ ಸುಂಕಗಳು  ಸೂಕ್ಷ್ಮವಾಗಿ    ಗಮನಿಸಿದರೆ ಕಂಡರೂ   ಕಾರುಗಳಿಗೆ  ದೊರಕುವ  ಹಲವು  ಪೂರಕ  ಸಹಾಯ  ಅಗೋಚರವಾಗಿಯೇ  ಉಳಿದುಬಿಡುತ್ತದೆ.     ಇಂತಹ   ಜಾಹಿರಾತುಗಳು   ಮನಸ್ಸಿಗೆ    ಸೂಚನೆಗಳ ರವಾನಿಸಿ  ಇದು  ನಾವು  ಅನುಸರಿಸ ಬೇಕಾಗುವ    ಸರಿಯಾದ ದಾರಿ  ಎಂದು   ಓದುಗರ  ಸುಪ್ತ    ಮನಸ್ಸನ್ನು  ಒಪ್ಪಿಸುತ್ತದೆ.  ಬಂಟಿಯ  ಸ್ನೇಹಿತರ  ಸ್ಕೂಲಿಗೆ ಬಿಡಲು ನಾವು ತಯಾರಾಗುತ್ತೇವೆ. 



ಬರ್ಕ್ ಲಿ  ಎಂಬ ಊರಿನಲ್ಲಿನಲ್ಲಿ ಇರೋದು  ಅಮೇರಿಕದ   ಪ್ರಸಿದ್ದ   ವಿಶ್ವವಿದ್ಯಾಲಯ.  ಅಲ್ಲಿನ  ವಿದ್ಯಾರ್ಥಿಗಳು ರಸ್ತೆ ಬದಿ  railings ಗೆ  ಸೈಕಲು  ಬೀಗ ಹಾಕಿದುದರ ಪರಿಣಾಮ   ಸೈಕಲು ಮುಟ್ಟುಗೋಲು.  ಅದನ್ನು  ಬಿಡಿಸಿಕೊಳ್ಳಲು   ಕೇವಲ  ಇನ್ನೂರ ಇಪ್ಪತ್ತು ಡಾಲರ್  ಅಂದರೆ  ಸುಮಾರು ಹತ್ತು ಸಾವಿರ ರೂಪಾಯಿ   ದಂಡ.  ಸೈಕಲು  ನಿಲುಗಡೆ ಬರ್ತಿಯಾದ ಕಾರಣ  ಅನಿವಾರ್ಯವಾಗಿ  ರಸ್ತೆ ಬದಿ ನಿಲ್ಲಿಸಿದಕ್ಕಾಗಿ   ಈ  ದಂಡ.   ನಿಲ್ಲಿಸಲಾಗಲಿ ರಸ್ತೆಯಲ್ಲಿ ಓಡಿಸಲಾಗಲಿ    ಹೆಚ್ಚು ಜಾಗ  ಅಪೇಕ್ಷಿಸದ ಪರೀಸರ ಮಾಲಿನ್ಯ ಉಂಟುಮಾಡದ   ಸೈಕಲುಗಳಿಗೆ  ಇಷ್ಟು ದಂಡ  ಹಾಕುವ  ಅಲ್ಲಿನ ಪೋಲಿಸರು  ಕಾರುಗಳ  ಅಡಾದಿಡ್ಡಿ ನಿಲ್ಲಿಸಿದರೆ  ಬರೇ  ನಲುವತ್ತಾರು   ಡಾಲರ್  ದಂಡ ಹಾಕುತ್ತಾರೆ.  ಅಂದರೆ  ಸೈಕಲಿನ  ಮೇಲೆ  ಹಾಕುವ  ದಂಡ  ಕಾರಿನದಕಿಂತ  ನಾಲ್ಕುವರೆ  ಪಟ್ಟು   ಹೆಚ್ಚು. 

ಸುಂಕಗಳಲ್ಲಿ  ಎಕ್ಸೈಸ್ ಮತ್ತು  ಕಸ್ಟಂ ಅವಳಿ  ಸಹೋದರರಿದ್ದಂತೆ.   ಸರಕಾರದ  ಒಂದೇ  ಖಚೇರಿಯ  ವಿಬಾಗಗಳಾಗಿರುವ     ಇವುಗಳಲ್ಲಿ  ಪರದೇಶದಿಂದ ಅಮದಾಗುವ  ವಸ್ತುಗಳಿಗೆ ಕಸ್ಟಂ  ಮತ್ತು ನಮ್ಮ ದೇಶದಲ್ಲೇ  ತಯಾರಾಗಿ  ಕಾರ್ಖಾನೆಯಿಂದ  ಹೊರತರುವ ಮೊದಲೇ  ಹೇರುವ ಸುಂಕ ಎಕ್ಶೈಸ್. ನಾನೊ ಕಾರಿಗಿಂತ ಕಡಿಮೆ ಜಾಗ  ಆಕ್ರಮಿಸುವ ಒಂದು ಮೂರು ಚಕ್ರದ  ಸೈಕಲನ್ನು ನನ್ನ  ವೈಯುಕ್ತಿಕ  ಅಗತ್ಯಕ್ಕೆಂದು    ನಾನು ಪರದೇಶದಿಂದ ತರಿಸಿದೆ. 



ಸವೆಯದ  ದಾರಿಯಲ್ಲಿ  ಪಯಣಿಸಲು ಹೊರಟರೆ     ಆಗುವುದು  ಹೀಗೆಯೇ.  ಒಂದು ನಾನೊ ಕಾರಿಗೆ  ಸುಮಾರು  ಹತ್ತು ಸಾವಿರ  ರೂಪಾಯಿ   ಎಕ್ಸೈಸ್  ಸುಂಕ ಹಾಕುವ  ನಮ್ಮ   ದೆಹಲಿ ಸರಕಾರ  ನನ್ನ  ಟ್ರೈಸಿಕಲ್ಲಿಗೆ  ಅರುವತ್ತೆಂಟು  ಸಾವಿರ  ರೂಪಾಯಿ   ಸುಂಕ  ಹೇರಿತು.   ಉಪಯೋಗಿಸಲು   ಹೆಚ್ಚಿನ  ಖರ್ಚಾಗಲಿ, ರಸ್ತೆಯಲ್ಲಿ  ಹೆಚ್ಚು    ಜಾಗವಾಗಲಿ ಬೇಡದ   ಈ  ಟ್ರೈಸಿಕಲ್ಲು  ಆರು   ನಾನೊ ಕಾರಿಗೆ  ಸಮ  ಎಂದು  ಕೇಂದ್ರ  ಸರಕಾರದ  ತೀರ್ಮಾನ.   

ಸ್ವಾವಲಂಬನೆಯ  ಪ್ರತೀಕವೆನಿಸುವ   ಸೈಕಲಿಗೆ  ಪರದೇಶಿ ಇಂದನ  ದಹಿಸಿ   ಹೊಗೆ  ಚೆಲ್ಲುತ್ತಾ  ಸಾಗುವ  ಕಾರಿಗೆ ಸಿಗುವ ಮಾನ  ಎಲ್ಲಿಯೂ  ಸಿಗುತ್ತಿಲ್ಲ.  ನಿಜವಾಗಿ    ಸೈಕಲಿಗೆ ಬೆಂಬಲ  ದೊರಕಬೇಕಾಗಿತ್ತು.  ಒಂದು ಕಾರಿಗೆ ಹಾಕುವ ಸುಂಕ  ಹತ್ತು ಸೈಕಲುಗಳಿಗೆ ಸಮನಾಗಬೇಕಿತ್ತು.  ಆದರಿದು ಉಲ್ಟಾ  ಆಗಿದೆ.   ಹಾಗಾಗಿ    ಇದೊಂದು ದುರಂತ. 

Friday, February 18, 2011

ಉದಯವಾಣಿಯಲ್ಲೊಂದು ನನ್ನ ಸಂದರ್ಶನ



ಮೊನ್ನೆ  ಬಾನುವಾರ  ಬೆಂಬಲ ವಾಹನದಲ್ಲಿರುವ  ಗೆಳೆಯರೊಂದಿಗೆ   ಒಂದು  ತ್ರಿಚಕ್ರ  ಸವಾರಿ  ಕೈಗೊಂಡಿದ್ದೆ. ಗುರುವಾಯನಕೆರೆಯಿಂದ  ಮುಂದಿನ   ತಿರುವಿನಲ್ಲಿ  ತ್ರಿ ಚಕ್ರ ಹಾಗೂ  ನಾನೊ ಕಾರುಗಳ   ನಿಲ್ಲಿಸಿ      ನಾರಾವಿ ರಸ್ತೆಯೋ  ವೇಣೂರು  ರಸ್ತೆಯೋ  ಎಂದು     ಚರ್ಚಿಸುತ್ತಿದ್ದೆವು.   ನಮ್ಮ  ಬೆನ್ನಟ್ಟಿದ   ಟಿವಿ  ವರದಿಗಾರರೊಬ್ಬರು ಆಗ  ಮದ್ಯೆ ಬಾಯಿ ಹಾಕಿದರು – ಎರಡೂ  ಅಲ್ಲ.  ಮೊದಲು  ನನಗೊಂದು ಸಂದರ್ಶನ.   

ಆಗ  ನನಗೊಂದು  ಅಲೋಚನೆ ಹೊಳೆಯಿತು.  ರಂಜನ್ ರಾವ್  ಯೆರ್ಡೂರರ  ಮನೆ  ಪಕ್ಕದಲ್ಲಿಯೇ  ಇದೆ.  ಅವರನ್ನು    ಮಾತನಾಡಿಸಿ  ಇಪ್ಪತ್ತು  ವರ್ಷ  ದಾಟಿದೆ.     ಹಾಗೆ  ಅವರನ್ನು  ಮಾತನಾಡಿಸಿದಂತೆಯೂ  ಆಯಿತು.  ಇವರಿಗೊಂದು   ಸಂರ್ದರ್ಶನ   ಸಿಕ್ಕಂತೆಯೂ  ಆಯಿತು.  ಹಾಗೆ  ನನ್ನ  ಬಾಟರಿ ಸ್ವಲ್ಪ ಚಾರ್ಜು ತುಂಬಿಸಿಕೊಂಡಂತೆಯೂ   ಆಯಿತು.   ಹಾಗೆ ಸರ್ವಸಮ್ಮತವೆನಿಸುವ  ಸೂತ್ರ  ತಯಾರಾಯಿತು.  ಅಲ್ಲಿಯೇ  ಸಿಕ್ಕ ರಂಜನ  ರಾಯರ  ಜತೆ ಕೆಲಸ ಮಾಡುವರೊಬ್ಬರಲ್ಲಿ ವಿಚಾರಿಸಲು   ಸಂಜೆ  ಬೆಂಗಳೂರಿಗೆ ಹೋಗುತ್ತಾರೆ  ಎಂದು ಉತ್ತರ ಸಿಕ್ಕಿ   ನಮ್ಮ  ಮೆರವಣಿಗೆ  ಆ ಕಡೆಗೆ ತಿರುಗಿತು. 

ನಾವಲ್ಲಿಗೆ  ತಲಪುವಾಗ  ರಂಜನ್ ರಾವ್  ಬೆಂಗಳೂರ ದಾರಿಯಲ್ಲಿದ್ದರೂ  ನಮಗೆ  ತೊಂದರೆಯಾಗಲಿಲ್ಲ.     ಟವಿ   ವರದಿಗಾರರು   ಸಂಚಾರವಾಣಿಯಿಂದ  ರಿಂಗಿಸಿ  ಸ್ಥಳೀಯ   ಪತ್ರಿಕೆ ವರದಿಗಾರರನ್ನು ಕರೆಸಿದರು.  ಹಾಗೊಂದು  ಅನಿರೀಕ್ಷಿತ  ಸಂದರ್ಶನ ಲಕ್ಷ್ಮಿ  ಮಚ್ಚೀನರಿಂದ   ನಡೆಯಿತು. [ ಇವರೋ  ತಮ್ಮ ಹೆಸರಿನ  ಉತ್ತರ ಬಾಗದಲ್ಲಿರುವ  ಗಂಡು ಹೆಸರನ್ನು  ಮುಚ್ಚಿಟ್ಟು  ಅಪರಿಚತರಿಗೆ  ಗೊಂದಲ ಉಂಟುಮಾಡುತ್ತಾರೆ ]    ಅಪಘಾತಕ್ಕೆ ಸಿಲುಕಿ ಅವರ ಹೆಚ್ಚಿನ  ಕೈಬೆರಳುಗಳೂ   ಈಗ  ಬಂದನದಲ್ಲಿದ್ದರೂ   ಟೈಪಿಸಿ    ಈ  ಬರಹ ತಯಾರು ಮಾಡಿದ್ದಾರೆ.  ಅದುದರಿಂದ  ಇದರಲ್ಲಿರುವ   ಸಣ್ಣ ಪುಟ್ಟ    ತಪ್ಪುಗಳನ್ನೆಲ್ಲ  ಕ್ಷಮಿಸೋಣ.    

Wednesday, February 16, 2011

ಬೆಂಬಲ ವಾಹನದೊಂದಿಗೆ ೧೩೫ ಕಿಮಿ ಸವಾರಿ

ದಿನಕ್ಕೆ  ನೂರ  ಐವತ್ತೈದು ಕಿಮಿ  ಸೈಕಲಿಸಿದ ನನಗೆ    ಇನ್ನೂರು  ಕಿಮಿ ದಾಟುವ  ಆಸಕ್ತಿ  ಮನದೊಳಗಿತ್ತು. ಸಮಯಕ್ಕೆ   ಸರಿಯಾಗಿ   ಅತ್ಮೀಯರಾದ ಶಂಕರಣ್ಣ   ಅವರ ನಾನೊ ಕಾರಿಗೊಂದು   inverter  ಅಳವಡಿಸಿ  ಬೆಂಬಲ  ವಾಹನವಾಗಿ     ಜತೆಗೂಡುವ   ಅಬಿಪ್ರಾಯ  ಮುಂದಿಟ್ಟರು.  ಹಾಗೆ   ನಮ್ಮ   ಪ್ರಯಾಣ  ತೀರ್ಮಾನವಾಗುವಾಗಲೇ  ತಮ್ಮ  ಮೋಹನ  ಬರುತ್ತಾನೋ  ಕೇಳುತ್ತೇನೆಂದು   ಅವರ  ಸಂಚಾರವಾಣಿಗೆ  ಕರೆ ಮಾಡಿದರು.

ಎಲುಬು  ನೋವಿನಿಂದಾಗಿ   ಚಳಿ  ಬಗ್ಗೆ  ಅಳಕುತ್ತಾ   ಬೆಳಗ್ಗೆ  ಆರು ಘಂಟೆಗೆ  ಮೂರು ಪದರ  ಬಟ್ಟೆ  ದರಿಸಿ ದೀಪ  ಉರಿಸಿಕೊಂಡು   ಮನೆಯಿಂದ ಹೊರಟೆ.  ಟ್ರೈಕಿಗೆ ಅಳವಡಿಸಿದ ಮಾಪಕ  ಮಳೆಗೆ  ಹಾಗೂ   ಚಳಿಗೆ  ತರಲೆ ಮಾಡುವ ಕಾರಣ   ಬಿಸಿಲೇರುವ ತನಕ ಅದರ ಸಂಪರ್ಕ ತಪ್ಪಿಸಿದೆ.  ಹಾಗೆ  ಮೊದಲ ಹತ್ತು ಕಿಮಿ ದೂರವನ್ನು    ಜಿಪಿಎಸ್   ಅಳೆದರೂ  ಅಲ್ಲಿ    ಉಪಯೋಗವಾದ   ಬಾಟರಿ  ಶಕ್ತಿ ಮಾಹಿತಿ  ಅಲಭ್ಯವಾಯಿತು.     ನೇರಲಕಟ್ಟೆ  ಬಳಿ ಹೆದ್ದಾರಿ  ಅಗೆದು ಹಾಕಿರುವುದರಿಂದ ಒಳ ರಸ್ತೆಯಲ್ಲಿ     ಬೆಂಗಳೂರು  ಹೆದ್ದಾರಿಗೆ  ಸೇರಿದೆ. 



ಉಪ್ಪಿನಂಗಡಿಗೆ   ಶಂಕರಣ್ಣ   ಮೋಹನರ  ತಂಡ  ತಲಪುವಾಗ  ನಾನು ತಿಂಡಿ ತಿಂದು  ಹೊಟೇಲಿನಿಂದ  ಹೊರಬರುತ್ತಿದ್ದೆ.   ಅಷ್ಟರ ವರೆಗೆ  ಉಪಯೋಗಿಸಿದ  ಬಾಟರಿ  ನಾನೊದಲ್ಲಿ ಚಾರ್ಜಿಗಿಟ್ಟು  ಅವರು ತಿಂಡಿಗೆಂದು    ಹೊಟೇಲಿಗೆ ಹೋದರೆ    ನಾನು  ತ್ರಿಚಕ್ರ ಏರಿ  ನೆಲ್ಯಾಡಿ ದಿಕ್ಕಿನಲ್ಲಿ ಸಾಗಿದೆ.  ಸ್ವಲ್ಪ  ದೂರದಲ್ಲಿ    ಸಿಕ್ಕಿದ ದಿನಕರ್  ನಮಗೆ   ದಾರಿ ಮಾರ್ಗದರ್ಶನ  ಮಾಡಿ ಕೊಕ್ಕಡದೆಡೆಗೆ  ಚಲಿಸಿದರೆ ನಾವು  ದರ್ಮಸ್ಥಳ  ದಾರಿ ಹಿಡಿದೆವು.  ದರ್ಮಸ್ಥಳ  ಸೇರುವ   ಸ್ವಲ್ಪ    ಮೊದಲು   ಶಂಕರಣ್ಣ   ಚಾರ್ಜರ್ ವೈರ್ ಬಿಸಿಯಾಗಿದೆ, ನಿರೀಕ್ಷಿತ  ಮಟ್ಟದಲ್ಲಿ  ಆಗುತ್ತಿಲ್ಲವೆಂದಾಗ   ನನಗೆ   ಲಕ್ಷಣ  ಚೆನ್ನಾಗಿಲ್ಲವೆನಿಸಿತು. 

ಗುರುವಾಯನಕೆರೆ  ದಾಟುವಾಗ   ನನಗೆ  ಇಪ್ಪತ್ತು ವರ್ಷ  ಹಿಂದಿನ  ಪರಿಚಯದ   ರಂಜನ್ ರಾಯರ ನೆನಪು.  ಆಗ  ನಮ್ಮ ಬೆನ್ನಟ್ಟಿದ   ಟಿವಿ  ಚಿತ್ರಣದವರೊಬ್ಬರು   ಸಂದರ್ಶನ  ಅಪೇಕ್ಷಿಸಿದರು.   ರಂಜನ್ ಅವರು ಊರಲ್ಲಿದ್ದಾರೆಂಬುದು   ನಾನು  ತಪ್ಪು ಅರ್ಥ ಮಾಡಿಕೊಂಡರೂ   ಶ್ರೀಮತಿ ವಿದ್ಯಾ ನಾಯಕ್  ನನಗೆ  ಬಾಟರಿ  ಚಾರ್ಜ್  ವ್ಯವಸ್ಥೆಮಾಡಿಕೊಟ್ಟರು.  ಅಲ್ಲಿ      ಟಿವಿಯ  ಛಾಯಾಗ್ರಾಹಕರು  ತಮ್ಮ    ಪತ್ರಿಕಾ ವರದಿಗಾರ   ಮಿತ್ರರನ್ನು   ಕರೆಸಿ  ಒಂದು  ಸಂದರ್ಶನವನ್ನೂ   ಮಾಡಿಸಿದರು.  ಮಧ್ಯಾಹ್ನದೊಳಗೆ   ನಾವು ಸಾಕಷ್ಟು ಸಮಯ  ಕಳಕೊಂಡಿದ್ದು     ಇನ್ನೂರು  ಕಿಮಿ  ದಾಟುವ   ಗುರಿಯಿಂದ   ನಾವು  ಹಿಂದೆ ಸರಿಯುವುದು  ಅನಿವಾರ್ಯವಾಯಿತು.  ಅಷ್ಟರೊಳಗೆ     ಶಂಕರಣ್ಣ   ಸರಿಪಡಿಸಿದ  ಕಾರಿನಲ್ಲಿದ್ದ      ಇನ್ವರ್ಟರ್  ಬಾಟರಿ   ಚಾರ್ಜ್ ಮಾಡುತ್ತಿದ್ದರೂ   ನಾವು  ರಾತ್ರಿಯಾಗುವುದರ  ಮೊದಲು  ಗೂಡು  ಸೇರುವ  ತೀರ್ಮಾನ    ಮಾಡಿಯಾಗಿತ್ತು. 

ಈ  [ನಮ್ಮ ಟಿವಿ ]  ಚಿತ್ರಕರಣದವರು  ಬೈಕೇರಿ  ಕೆಲವು ಕಿಮಿ  ನಮ್ಮನ್ನು  ಹಿಂಬಾಲಿಸಿದ್ದರೆ  ಉಜ್ರೆಯಲ್ಲಿ  ಸ್ಟುಡಿಯೊದವರೊಬ್ಬರು  ಕೆಮರ  ಹಿಡಿದುಕೊಂಡು ಬಸ್ಸು  ಏರಿದ್ದರು.    ರೀತಿ  ಕುತೂಹಲದಿಂದ   ಹಿಂಬಾಲಿಸುವ  ವಿಚಾರ ನನಗೆ ಮಾಮೂಲಾಗಿ ಬಿಟ್ಟಿದೆ.  ಆದರೆ  ಗುರಿ ಮರೆಯುವಷ್ಟು  ಅವರಿಗೆ  ವಿವರಿಸುತ್ತಾ ಕೂರಬಾರದೆನ್ನುವ  ಎಚ್ಚರಿಕೆಯನ್ನೂ  ವಹಿಸುತ್ತೇನೆ.   
  

ಹಾಗೆ  ವೇಣೂರಲ್ಲಿ  ಊಟ / ಗೋಮಟೇಶ್ವರ  ಪ್ರತಿಮೆ    ಪಕ್ಕದ   ರಸ್ತೆಯಲ್ಲಿ  ತ್ರಿಚಕ್ರ ನಿಲ್ಲಿಸಿ  ಪೋಟೊ  ತೆಗೆದೆ.  ನಂತರ  ಮಣಿಹಳ್ಳ ರಸ್ತೆಯಾಗಿ  ಬಂಟ್ವಾಳ   ಮೂಲಕ  ಊರಿಗೆ.  ವೇಣೂರು  ಮಣಿಹಳ್ಳ  ರಸ್ತೆ ಸಪೂರವಾಗಿದ್ದು  ಕಡಿದಾದ  ಏರು ಇಳಿವಿನಿಂದ ಕೂಡಿದ್ದರೂ   ಟ್ರೈಕ್ ಚಾಲನೆ ಮಜವಾಗಿತ್ತು.    ಯಥಾಪ್ರಕಾರ ಕಲ್ಲಡ್ಕದ ಕೆಟಿ ಹೋಟೆಲಿನಲ್ಲೊಂದು  ಚಾ. 

ನಮ್ಮ ಉದ್ದೇಶಿತ   ೨೦೦ ಕಿಮಿ   ದೂರ  ಸಾದ್ಯವಾಗದಿದ್ದರೂ  ಮೋಹನರ  ಚಾಲನೆ ಸಮಯ  ಶಂಕರಣ್ಣ  ಕೆಮರದೊಂದಿಗೆ   ಕೂತಿದ್ದರಿಂದ   ವಿಡಿಯೊ   ಚಿತ್ರಗಳು  ಲಭ್ಯವಾದವು.  ಇಲ್ಲಿ  ಕ್ಲಿಕ್ಕಿಸಿದರೆ    ಐದು ವಿಡಿಯೋ ಚೂರುಗಳಿವೆ.     ದಿನವೂ  ದಾರಿಯಲ್ಲಿ  ಸಿಗುವ    ಹಲವಾರು ಜನ  ಅವರವರ    ಕೆಮರದಲ್ಲಿ  ಮೊಬೈಲಿನಲ್ಲಿ   ನನ್ನ    ಹಾಗೂ   ಟ್ರೈಕಿನ   ಚಿತ್ರಣ  ಮಾಡಿದರೂ  ನಮಗೆ  ಅದು  ದೊರಕುವುದಿಲ್ಲ.  ಇಂದಿನ  ಚಾಲನೆಯಲ್ಲಿ  ಅತಿ  ಹೆಚ್ಚು  ಚಿತ್ರಣ  ದೊರತದ್ದು   ಸಂತಸದ  ವಿಚಾರ.  ನಾನು  ಒಬ್ಬನೇ  ಹೋದಾಗ   ಟ್ರೈಕಿನಲ್ಲಿದ್ದುಕೊಂಡು ತೆಗೆದ ಚಿತ್ರಗಳು   ಕೆಮರ ಹಿಂದಿರುವ   ಟ್ರೈಕ್  ಹಾಗೂ   ನನ್ನನ್ನು ತೆರೆಮರೆಯಲ್ಲಿಯೇ  ಉಳಿಸುತ್ತದೆ.



ಆರು ಘಂಟೆ  ಸಮಯದಲ್ಲಿ   ನೂರ ಮೂವತ್ತೈದು ಕಿಮಿ  ಕ್ರಮಿಸಿದ್ದೇವೆ.   ಚಾರ್ಜಿಂಗ್ ಗೊಂದಲ ಒತ್ತಡದಿಂದಾಗಿ    ಒಂದೆಡೆ  [ ಬೆಳ್ತಂಗಡಿಯಲ್ಲಿ]  ಜಿಪಿಎಸ್  ಚಾಲನೆ ಮಾಡಲು    ಮರೆತಿದ್ದೆ.  ಸುಮಾರು  ಸಾವಿರದ  ಐದು ನೂರು  ವಾಟ್ಸ್  ಶಕ್ತಿ ಬಾಟರಿಯಿಂದ    ಬಳಕೆ.  ವೇಗವಾಗಿ  ಸಾಗಲು  ಮಾಡಿದ   ಪ್ರಯತ್ನ   ಹಾಗೂ  ಕಡಿದಾದ  ಏರು ರಸ್ತೆ    ಬಾಟರಿ ಬಳಕೆಯನ್ನು   ಹೆಚ್ಚಿಸಿತು.              

Thursday, February 10, 2011

ಮನುಷ್ಯನನ್ನು ಮೃಗವಾಗಿಸುವ ಕಾರು ಪ್ರೀತಿ

ಕಾರು  ಚಾಲನೆ  ಹೋಲಿಸಿ ನೋಡಿದರೆ  ನನ್ನ ತ್ರಿ ಚಕ್ರ ಸಿಂಹಾಸನದಲ್ಲಿ  ಪ್ರಯಾಣ   ಬಹಳ  ಕುಶಿಯಾಗುತ್ತದೆ.  Shock absorber  ಇಲ್ಲದ  ಕಾರಣ    ರಸ್ತೆಯ  ಗುದ್ದಾಟ  ನೇರವಾಗಿ ಬೆನ್ನಿಗೆ ತಲಪಿದರೂ   ಚಾಲನೆ  ಬಹಳ ಮಜವಾಗಿರುತ್ತದೆ.  ಜನರ  ನಗುಮುಖ  ಕೈಸನ್ನೆಗಳಿಗೆ  ಸ್ಪಂದಿಸಲು ಸಾದ್ಯವಾಗುತ್ತದೆ.    ಕೊಂಚ  ನಿಲ್ಲಿ, ನಾನು ಮೊದಲು ದಾಟುತ್ತೇನೆ ಎಂದು  ಕೈಸನ್ನೆ ಮಾಡಿದಾಗ  ವಾಹನ   ಚಾಲಕರು ನಗು ಮುಖದಿಂದಲೇ    ದಾರಿ ಬಿಡುತ್ತಾರೆ.  ನನ್ನ ಮತ್ತು ವಾಹನದ  ತೂಕ  ಒಟ್ಟು  ಕೂಡಿಸಿದರೂ    ನೂರು ಕಿಲೊ ಮೀರದ  ಕಾರಣ ನಾವು  ಯಾರಿಗೂ  ಮರಣಾಂತಿಕವಾಗಿರುವುದಿಲ್ಲ  ಅನ್ನುವುದೂ  ನನಗೆ   ಸಂತಸದ ವಿಚಾರ.   

ಇತ್ತೀಚಿನ  ವರ್ಷಗಳಲ್ಲಿ  ನಾನು ವಾಹನ  ಚಾಲನೆ  ಕಡಿಮೆ ಮಾಡುತ್ತಾ  ಬಂದಿದ್ದೇನೆ.  ಮೊದಲನೆಯದಾಗಿ  ನನ್ನ ಪರಿಸರಾಸಕ್ತಿಯಿಂದಾಗಿ  ಇಂದನ  ದಹನ  ನನಗೆ   ಒಗ್ಗುವುದಿಲ್ಲ. ಎರಡನೆಯದಾಗಿ  ದೈಹಿಕವಾಗಿ  ಸೋಲುತ್ತಾ ಬಂದಂತೆ  ನನ್ನ  ವಾಹನ  ಮೇಲಿನ   ನಿಯಂತ್ರಣ  ಕಳಪೆಯಾಗುತ್ತಾ ಹೋಗುತ್ತಿದೆ.  ಮೂರನೆಯದಾಗಿ     ಸದಾ ಬಾದಿಸುವ  ನನ್ನ ದೈಹಿಕ  ನೋವು  ಜತೆ  ಸೇರುವ  ಮಾನಸಿಕ  ಒತ್ತಡ   ಪ್ರಯಾಣವನ್ನು     ಅಸಹನೀಯವನ್ನಾಗಿ ಮಾಡುತ್ತದೆ.    ಎಲ್ಲ  ಕಾರಣಗಳಿಂದಲೂ    ನಾನು     ಮಾನಸಿಕವಾಗಿ ಹಿಂಸೆ ಪಡುತ್ತೇನೆ.  ಆದರೆ  ಗ್ರಾಮಾಂತರ  ಪ್ರದೇಶದ  ವಾಸ್ತವ್ಯ  ಮತ್ತು    ಮಕ್ಕಳ  ಶಾಲೆ  ಅನ್ನುವ  ಅನಿವಾರ್ಯ   ಕಾರಣಗಳಿಂದಾಗಿ  ನಾನು    ವಾಹನ ಚಾಲನೆಯನ್ನು  ಪೂರ್ತಿಯಾಗಿ  ಕೊನೆಗೊಳಿಸಲಿಲ್ಲ.





ವಾಹನ ಚಾಲನೆ  ಜನರನ್ನು  ಎಷ್ಟರ   ಮಟ್ಟಿಗೆ  ಪರಿವರ್ತಿಸುತ್ತದೆ  ಎನ್ನುವುದನ್ನು  ಈ ಅರುವತ್ತು  ವರ್ಷ ಹಿಂದಿನ  cartoon  ಚಿತ್ರ  ಬಹಳ ಚೆನ್ನಾಗಿ  ವಿವರಿಸುತ್ತದೆ.  ವಾಹನ ಚಾಲನೆಗೆ ಕೂತ  ಸರ್ವಶಕ್ತನೆಂಬ  ಭ್ರಮೆ ಹೊತ್ತಿರುವ  ಚಾಲಕನಿಗೆ  ಎಲ್ಲವೂ  ತಡೆ ಎನಿಸಲು ಪ್ರಾರಂಬವಾಗುತ್ತದೆ.  ಅಸಹನೆ ಉಂಟಾಗುತ್ತದೆ.  ಈ ರೀತಿ ಪರಿವರ್ತನೆಯಾಗುವ ಬದಲಿಗೆ  ನಾನು  ವಾಹನ ಚಾಲನೆಯಿಂದಲೇ   ದೂರವಿರ ಬಯಸುತ್ತೇನೆ.   ಇದರಲ್ಲಿ  ನಿಮಗೂ  ಸಂದೇಶವಿದೆಯೆಂದು ಅನಿಸಿದರೆ  ನನಗದು  ಕುಶಿಯಾಗುವ  ವಿಚಾರ.   

Monday, January 31, 2011

ವೈಯುಕ್ತಿಕ ಓಡಾಟಕ್ಕೆ ಟ್ರೈಕ್ ಬಳಕೆ

ಇತ್ತೀಚಿನ ದಿನಗಳಲ್ಲಿ ನಾನು ನಿತ್ಯವೂ ವೈಯುಕ್ತಿಕ ಓಡಾಟಗಳಿಗೆಲ್ಲ ಬಳಸುವುದು ನನ್ನ ಮೂರು ಚಕ್ರದ ರಥವನ್ನೇ. ದಿನವೂ ಸರಾಸರಿ ಹದಿನೈದು ಕಿಮಿ ಬಳಸುತ್ತೇನೆ. ನಿನ್ನೆ ಗೆಳೆಯರನ್ನು ಕಾಣಲು ಮಂಗಳೂರಿಗೆ ಹೋಗಿದ್ದೆ. ವಾರದ ಹಿಂದೆ ಬೆಂಗಳೂರಿನಲ್ಲಿ ಕೆಲಸವಿದ್ದಾಗ ರೈಲಿನಲ್ಲಿ ಅದನ್ನೂ ಕೊಂಡು ಹೋಗಿ ಅಲ್ಲಿಯೂ ಬಳಸಿದ್ದೆ. ಈ ಪ್ರವಾಸದ  ವರದಿಯನ್ನು ಓದಲು   ಇಲ್ಲಿ ಕ್ಲಿಕ್ಕಿಸಿ. ಈ ಬಳಕೆಗಳು   ನನಗೆ ಇದು ಹೊಗೆ ಉಗುಳುವ ವಾಹನಗಳಿಗೊಂದು ಪರ್ಯಾಯ ಎಂದು ಖಚಿತವಾಗಿ ಹೇಳುವ ದೈರ್ಯವನ್ನು ಕೊಟ್ಟಿದೆ.

ಕೆಟ್ಟ ರಸ್ತೆಗಳಲ್ಲಿ ಟ್ರೈಕಿನ ಪ್ರಯಾಣಕ್ಕೆ ಮೂರು ಚಕ್ರ ಮತ್ತು ಹೆಚ್ಚು ಅಗಲವಿರುವ ಕಾರಣ ಸೈಕಲುಗಳಿಂದ ಸ್ವಲ್ಪ ಹೆಚ್ಚು ಸಮಯ ಹಾಗೂ ಶ್ರಮ ಬೇಕಾಗುತ್ತದೆ. ನನಗೆ ಏಳು ಕಿಮಿ ದೂರದ ವಿಟ್ಲ ಪ್ರಯಾಣಕ್ಕೆ ಸರಾಸರಿ ಇಪ್ಪೆತ್ತರಡು ನಿಮಿಷ, ಹದಿನಾರು  ಕಿಮಿ ದೂರದ ಪುತ್ತೂರು ನಲುವತ್ತೈದು ನಿಮಿಷ ಮತ್ತು ನಲುವತ್ತು ಕಿಮಿ ದೂರದ ಮಂಗಳೂರು ಅಂದಾಜು ಒಂದು ಮುಕ್ಕಾಲು ಗಂಟೆ ಚಾಲನಾ ಸಮಯ ಎನ್ನಬಹುದು.

30 Jan to Mangalore by trike at EveryTrail



ನನ್ನ ಪರಮಾವದಿ (ಹನ್ನೊಂದು ವರ್ಷಗಳಿಂದ  ಬಳಸುವ    ಒಮ್ನಿ ) ಕಾರಿನ ವಾರ್ಷಿಕ ಉಪಯೋಗ ಸುಮಾರು ಎಂಟು ಸಾವಿರ ಕಿಮಿ. ಇದಕ್ಕಾಗಿ ಇಂದನ, ತೇರಿಗೆ, ದಂಡ ಮತ್ತು ಸವಕಳಿ ಲೆಕ್ಕ ಹಾಕಿದರೆ ಕನಿಷ್ಟವೆಂದರೂ ಸುಮಾರು ನಲುವತ್ತು ಸಾವಿರ ಖರ್ಚು. ಈ ನಲುವತ್ತು ಸಾವಿರ ಎಂದರೆ [ಉತ್ತಮ ಬೆಳೆ ದೊರೆತ ವರ್ಷ] ನನ್ನ ವಾರ್ಷಿಕ ಆದಾಯದ ಮೂರನೇಯ ಒಂದು ಬಾಗ. ಅಂದರೆ ದಿನಕ್ಕೆ ಮೂರು ಘಂಟೆ ಕೆಲಸ ಮಾಡುವುದು ಕಾರಿನ ಖರ್ಚಿಗಾಗಿ ಎಂದಾಯಿತು. ನಾನು ಅಪರೂಪಕ್ಕೆ ೪೦ ಕಿಮಿ ದೂರದ ಮಂಗಳೂರಿಗೆ ಟ್ರೈಕಿನಲ್ಲಿ ಹೋದರೂ ಒಟ್ಟು ಬೇಕಾಗುವುದು   ಒಂದೂವರೆ ಘಂಟೆ ಅಧಿಕ ಸಮಯ. ಖರ್ಚು ಬರೇ  ನಾಲ್ಕು ರೂಪಾಯಿ ಬೆಲೆಯ  ಒಂದು ಯುನಿಟ್  ವಿದ್ಯುತ್.  ಮನೆಯಲ್ಲಾದರೆ  ಅದೂ  ಸೌರ ಫಲಕಗಳಿಂದ ದೊರೆಯುತ್ತದೆ.   ಉಳಿದ ದಿನದ ಓಡಾಟದಲ್ಲಿ    ಹೆಚ್ಚುವರಿ  ಸಮಯದ   ಅಗತ್ಯ   ಒಂದು ಘಂಟೆಗಿಂತಲೂ ಕಡಿಮೆ.



ಐವತ್ತು ಕಿಲೊ ತೂಕದ ಜನಕ್ಕಾಗಿ ಸಾವಿರ ಕಿಲೊದ ಕಾರು ಓಡುವುದು ನನಗೆ ಸಮಂಜಸ ಎನಿಸುವುದಿಲ್ಲ. ನೂರಾರು ರೂಪಾಯಿ ಇಂದನ ಖರ್ಚು ಮಾಡಿ ವಾತಾವರಣ ಮಲೀನಗೊಳಿಸಿ ಪ್ರಯಾಣಿಸುವ ನಾವು ಉಳಿಸುವ ಸಮಯವನ್ನು ಸಕಾರಾತ್ಮಕವಾಗಿ ಬಳಸುತ್ತೇವೆಯೋ ? ಅನ್ನುವ ಪ್ರಶ್ನೆಗೆ ನಿರಾಶಾದಾಯಕ ಉತ್ತರ ಕೊಡಬೇಕಾಗುತ್ತದೆ. ಹಾಗೆಯೇ ಕಾರು ಬಳಸದಿರುವುದೂ ಪ್ರವಾಹದ ವಿರುದ್ದ ಈಜಿದಂತೆ. ಈಗ ಜನರು ಕನಿಕರ ತೋರುವ ಪರೀಸ್ಥಿತಿ ಉಂಟಾಗುತ್ತಿದೆ.