Tuesday, April 26, 2011

ಅಮೇರಿಕದಲ್ಲೀಗ ನಾಯಿ ಬೆಕ್ಕುಗಳಿಗೂ ಸಕ್ಕರೆ ಖಾಯಿಲೆ.

ಮನುಷ್ಯನನ್ನು ದೇವರು ಸದಾ ಚಟುವಟಿಕೆಯಲ್ಲಿರುವಂತೆ ರೂಪಿಸಿದ್ದಾನೆ. ಜೀವನದ ಎರಡು ತುದಿಗಳಲ್ಲಿ ಅಂದರೆ ಹುಟ್ಟು ಸಾವಿನ ಆಸುಪಾಸು ಹೊರತು ಪಡಿಸಿದರೆ ಉಳಿದ ಸಮಯದಲ್ಲಿ ಸದಾ ತನ್ನ ಕಾಲಿನ ಮೇಲೆ ನಿಲ್ಲುವಂತೆ ಚಲಿಸುವಂತೆ ನಮ್ಮನ್ನು ವಿನ್ಯಾಸಗೊಳಿಸಲಾಗಿದೆ. ಆದರೆ ನಮಗೆ ಹೊರಿಸಿಕೊಳ್ಳುವುದೆಂದರೆ ಇಷ್ಟ. ನಡೆಯುವುದು ಕಷ್ಟ. ನಾಲ್ಕು ಹೆಜ್ಜೆ ಹೋಗಲೂ ವಾಹನವನ್ನೇ ಅವಲಂಬಿಸಲು ಇಷ್ಟ ಪಡುತ್ತೇವೆ. ಕಾಸಿಲ್ಲದವ ಮಾತ್ರ ನಡೆಯುವುದು ಎಂದು ನಮ್ಮವರ ಖಚಿತ ನಿಲುವು. ನಮಗೆ ಎಲ್ಲಕ್ಕೂ ಮಾದರಿಯಾದ ಅಮೇರಿಕದವರು ಶೌಚಾಲಯಕ್ಕೂ ಕಾರಲ್ಲಿ ಹೋಗುವರೊ ಅನ್ನುವ ಗುಮಾನಿ.

ಅಮೇರಿಕದಲ್ಲಿ ಚಲನಾತೀತ ಮನುಷ್ಯರಿಗೆ ಮಾತ್ರವಲ್ಲ ಅವರ ನಾಯಿ ಬೆಕ್ಕುಗಳಿಗೂ ಈಗ ಸಕ್ಕರೆ ಖಾಯಿಲೆ ಹಬ್ಬಲು ಪ್ರಾರಂಬಿಸಿದೆ. ಸಕ್ಕರೆ ಖಾಯಿಲೆ ಬಗೆಗೆ ನನಗೆ ನೆನಪಿಗೆ ಬರುವುದು ತೇಜಸ್ವಿ ಕಥೆಯೊಂದರ ಪಾತ್ರದಾರಿ. ಅವರು ತನಗೆ ಪರಂಗಿಯವರ ಸೀಕು ಉಂಟೆಂದು ಡಾಕ್ಟ್ರು ಹೇಳಿದರೆಂದು ಹೆಂಡತಿಯೊಂದಿಗೆ ಬಹಳ ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಸಕ್ಕರೆ ಖಾಯಿಲೆ ಸಾಕುನಾಯಿಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಶೇಕಡಾ ಮೂವತ್ತ ಮೂರರಷ್ಟು ಏರಿದರೆ ಬೆಕ್ಕುಗಳಲ್ಲಿ ಶೇಕಡಾ ಹದಿನಾರು. ಹೋಲಿಕೆಯಲ್ಲಿ ಆ ದೇಶದಲ್ಲಿ ಮನುಷ್ಯರಲ್ಲಿ ಬರೇ ಶೇಕಡಾ ಹತ್ತು ಹೆಚ್ಚುವರಿಯಾಗಿ ಸೀಕು ಗುರುತಿಸಲ್ಪಟ್ಟಿದೆ.

ಸಾಕುಪ್ರಾಣಿ ಆಸ್ಪತ್ರೆ ಜಾಲವೊಂದಕ್ಕೆ ನಲುವತ್ತ ಮೂರು ರಾಜ್ಯಗಳಲ್ಲಿ ೭೭೦ ಕ್ಲೀನಿಕುಗಳು. ಅಲ್ಲಿಗೆ ಚಿಕಿತ್ಸೆಗೆಂದು ಬಂದ ಇಪ್ಪತ್ತೈದು ಲಕ್ಷ ನಾಯಿ ಬೆಕ್ಕಿನ ರೋಗಮಾಹಿತಿಯಿಂದ ಲೆಕ್ಕಾಚಾರ ಕಂಡುಬರುತ್ತದೆ. ಬೆಳವಣಿಕೆಗೆ ಪ್ರಮುಖ ಕಾರಣ ಸಾಕು ಪ್ರಾಣಿಗಳಲ್ಲಿ ಬೊಜ್ಜು ಬೆಳೆಯುತ್ತಿರುವುದು. ಕಾರಣ - ತಿನ್ನುವುದು ಹೆಚ್ಚು ಮತ್ತು ಕಡಿಮೆ ವ್ಯಾಯಾಮ. ಗುರುತಿಸಿದ ನಂತರ ಚಿಕಿತ್ಸೆ ಸರಳ – ದಿನಕ್ಕೆರಡು ಬಾರಿ ಇನ್ಸುಲಿನ್ ಚುಚ್ಚುವುದು. ಈಗ ಲಕ್ಷಾಂತರ ಸಾಕುಪ್ರಾಣಿಗಳು ದಿನಾಲು ಹೀಗೆ ಚುಚ್ಚಿಸಿಕೊಳ್ಲುತ್ತಿವೆಯಂತೆ.

http://seattletimes.nwsource.com/html/health/2014823374_catdog22.html


ನಾನು ಸೈಕಲು ಅಥವಾ ಟ್ರೈಕ್ ಇಷ್ಟ ಪಡುವುದು ಬರೇ ಸೀಕುಗಳ ಹೆದರಿಕೆಯ ಕಾರಣ ಅಲ್ಲ. ಕರುಳಿಗೆ ಸಂಬಂದಿಸಿದ ವೈರಿಂಗ್ ಕೆಟ್ಟಿರುವ ಕಾರಣ ನನಗೆ ಉಳಿದವರಿಗಿಂತ ಸಮಸ್ಯೆ ಹೆಚ್ಚು. ತುಳಿಯುವ ಕಾಲಿನ ಚಲನೆ ಮಲ ಸರಾಗವಾಗಲು ಸಾಗಲು ನೆರವಾಗುವುದೋ ಆಸೆ. ಹೌದೆನ್ನುತ್ತಾರೆ ಲಂಡನಿನ ತಜ್ನ ವೈದ್ಯರೊಬ್ಬರು. ಅವರ ಮಾತಿನಲ್ಲಿಯೇ ಹೇಳುವುದಾದರೆ " Physical activity helps decrease the time it takes food to move through the large intestine, limiting the amount of water absorbed back into your body and leaving you with softer stools, which are easier to pass " explains Harley Street gastroenterologist Dr Ana Raimundo. ಹಾಗಾದರೆ ಮಲವು ಕರುಳು ದಾಟಲು ಮತ್ತು ನಮಗೆ ಊರು ದಾಟಲು ಎರಡಕ್ಕೂ ಸೈಕಲು ಸಹಾಯಕ ಎಂದಾಯಿತು.

http://www.ballymoneycyclingclub.com/Cycling-and-Health.html

ಇಂದು ಶೌಚಾಲಯದಲ್ಲಿ ಕೂರುವ ಹಾಗೂ ನಾಳೆ ಆಸ್ಪತ್ರೆಯಲ್ಲಿ ಮಲಗುವ ಸಮಯ ಕನಿಷ್ಟಗೊಳಿಸಲು ಸೈಕಲ್ ಬಳಸೋಣ. ಕೀಳರಿಮೆ ಬಿಸಾಕಿ ಹೆಚ್ಚು ನಡೆಯೋಣ. ಹೆಚ್ಚು ಸೈಕಲಿಸೋಣ. ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ದೇಹ ದಂಡನೆ ಹೆಚ್ಚಲಿ. ಇಲ್ಲವಾದರೆ ಅನಂತರ ಚಿಕಿತ್ಸೆಗೆಂದು ಹೆಚ್ಚು ದಂಡ ತೆರಬೇಕಾಗುತ್ತದೆ.

Thursday, April 21, 2011

ಕಾಸರಗೋಡಿನಲ್ಲಿ ವಂದನಾ ಶಿವ – ಎರಡೂವರೆ ಗಂಟೆ ಪ್ರಯಾಣ

ಶನಿವಾರ ಮದ್ಯಾಹ್ನ ಬಿ ಸಿ ರೋಡಿನ ಬಳಕೆದಾರರ ವೇದಿಕೆ ಕಾರ್ಯಕರ್ತರಾದ ಗೆಳೆಯ ಸುಂದರ ರಾಯರು ಸುಳಿವು ಕೊಟ್ಟರು - ನಾಳೆ ಕಾಸರಗೋಡಿನಲ್ಲಿ ಎಂಡೊಸಲ್ಫನ್ ಮೀಟಿಂಗ್ – ವಂದನಾ ಶಿವ ಅವರು ಬರುತ್ತಾರೆ. ತಕ್ಷಣ ಮನಸ್ಸು ಚುರುಕಾಯಿತು. ಸಾಮಾನ್ಯವಾಗಿ ನಾನು ಈ ಕಾರ್ಯಕ್ರಮಗಳಿಗೆ ಹೋಗುವುದು ಕಡಿಮೆ. ಕಿವಿ ಸಮಸ್ಯೆ ಇರುವುದರಿಂದ ಬಾಷಣ ಹೆಚ್ಚಿನ ಪಾಲು ಅರ್ಥವಾಗುವುದಿಲ್ಲ. ಆದರೆ ಅಪಾರ ಸಾಧನೆ ಮಾಡಿರುವ ಇವರನ್ನೊಮ್ಮೆ ನೋಡಬೇಕೆನ್ನುವ ಬಾಷಣ ಕೇಳಬೇಕೆನ್ನುವ ಆಸಕ್ತಿಯಲ್ಲಿ ಹೋಗುವ ತೀರ್ಮಾನ ಮಾಡಿದೆ.

ಇನ್ನೇನು ಬೆಳಕು ಹರಿಯಿತು ಅನ್ನುವಾಗ ಬೆಳಗ್ಗೆ ಆರು ಘಂಟೆಗೆ ಮನೆಯಿಂದ ತ್ರಿಚಕ್ರದಲ್ಲಿ ಹೊರಟೆ. ಪಡುಬಾಗಿಲು ತಲಪುವಾಗ ಸೂರ್ಯದೇವನ ದರ್ಶನವಾಯಿತು. ಪಡುಬಾಗಿಲಿನಲ್ಲಿ ನಾನಿರುವಾಗ ಸೂರ್ಯ ಮೂಡು ದಿಕ್ಕಿನಲ್ಲಿ ಉದಯಿಸುತ್ತಿದ್ದಾನೆ ಅನ್ನುವ ವಿಚಾರ ತಮಾಷೆ ಅನ್ನಿಸಿತು. ಗಡಿಬಾಗದಲ್ಲಿ ವಾಸ್ತವ್ಯ ಇರುವ ಗೆಳೆಯ ನಾರಾಯಣ ಮೂರ್ತಿಯಲ್ಲಿ ಬೆಳಗ್ಗೆ ಕಾಫಿಗೆ ಮತ್ತು ಸ್ವಲ್ಪ ಚಾರ್ಜು ಬೇಕಾಗಬಹುದು, ಬರುತ್ತೇನೆ ಎಂದಿದ್ದೆ. ಹಾಗಲ್ಲಿ ಕಾಫಿಯಾಗಿ ಅಲ್ಲಿಂದ ಏಳೂಮುಕ್ಕಾಲಕ್ಕೆ ಹೊರಟೆ.




ಹಿಂದಿನ ದಿನ ಮೂರ್ತಿ ಹತ್ತಿರ ಗಡಿಯಾಚೆಗೆ ಕೇರಳದಲ್ಲಿ ಮಾರ್ಗ ಹೇಗಿದೆ ? ಅನ್ನುವುದರ ವಿಚಾರಿಸಲು ಹೇಳಿದ್ದೆ. ನಾನು ಹಿಂದೆ ನೋಡುವಾಗ ಜಲ್ಲಿ ಎದ್ದು ಹೋಗಲು ಸಾದ್ಯವೇ ಅಲ್ಲ ಅನ್ನುವಂತಿತ್ತು. ಮೂರ್ತಿಯ ವರದಿ ಒಕೆ ಎಂದಿದ್ದರೂ ನಾನು ಅಲ್ಲಿಗೆ ತಲಪುವ ವರೆಗೆ ಮನದೊಳಗೆ ಕಸಿವಿಸಿ ಇತ್ತು. ಯಾಕೆಂದರೆ ಜಲ್ಲಿ ರಸ್ತೆಯಾದರೆ ಚಕ್ರ ರಸ್ತೆಯನ್ನೂ ಕಾಲು ಪೆಡಲನ್ನೂ ಕಚ್ಚಿ ಹಿಡಿಯುವುದಿಲ್ಲವಾದುದರಿಂದ ಶ್ರಮ ಪೋಲಾಗುತ್ತದೆ. ಆಸಕ್ತಿ ಕಡಿಮೆಯಾಗುತ್ತದೆ. ಪುಣ್ಯಕ್ಕೆ ರಸ್ತೆ ಚೆನ್ನಾಗಿತ್ತು. ಸರಿಯಾಗಿ ಎರಡೂವರೆ ಗಂಟೆ ಚಾಲನೆಯಲ್ಲಿ ಐವತ್ತನಾಲ್ಕು ಕಿಮಿ ಸಾಗಿದ್ದೆ. ಉದ್ದಕ್ಕೂ ರಸ್ತೆ ಗುಡ್ಡ ಏರುವುದು ಕಣಿವೆಗೆ ಇಳಿಯುವುದಾದರೂ   ನನ್ನ ಬೆಂಬಲ ಸಹಾಯಕ ಚೆನ್ನಾಗಿ ಕೆಲಸ ಮಾಡಿ ನನಗೆ ಹೆಚ್ಚು  ಶ್ರಮವಾಗಲಿಲ್ಲ.  
 


ವಂದನಾ ಶಿವ ಅವರು ಸರಳ ಇಂಗ್ಲೀಷಿನಲ್ಲಿ ಮಾತನಾಡಿದರು. ಆದನ್ನು ಪ್ರತಿ ಸಾಲಿಗೊಮ್ಮೆ ಅನುವಾದಕರು ಮಲೆಯಾಳಕ್ಕೆ ಅನುವಾದಿಸಿದರು. ಅದು ನನಗೆ ಸರಿಯಾಗಿ ಅರ್ಥವಾಗುವುದಕ್ಕೆ ತಡೆಯಾಯ್ತು. ನನಗೆ ಕಿವಿ ಸಮಸ್ಯೆ ಇರುವುದರಿಂದ ಅರಿವು ಮೂರು ಹೆಜ್ಜೆಯಲ್ಲಿ ನಡೆಯುತ್ತದೆ ಅನಿಸುತ್ತದೆ. ಗ್ರಹಿಕೆ / ಸಂಸ್ಕರಣೆ ಮತ್ತು ಅರ್ಥೈಸುವಿಕೆ ಎನ್ನುವ ಮೂರು ಹೆಜ್ಜೆಯ ದಾಟುವಾಗ ಸಂಬಾಷಣೆ ಅಥವಾ ಬಾಷಣ ಮತ್ತೆರಡು ವಾಕ್ಯ ಮುಂದುವರಿದಿರುತ್ತದೆ. ಇಲ್ಲಿ ಕೇಳಿದ ಮುಂದಿನ ವಾಕ್ಯಗಳು ಮಲೆಯಾಳದಲ್ಲಿ ಆದುದರಿಂದ ಚಿಂತನಾ ಕೊಂಡಿಗಳು ಕಡಿದು ಗೊಂದಲ ಉಂಟಾಗುತ್ತದೆ. ಮದ್ಯಾಹ್ನ ವರೆಗೆ ಡಾ| ವಂದನಾ ಶಿವ ಅವರ ಮಾತು ಹೊರತು ಪಡಿಸಿದರೆ ಹೆಚ್ಚಿನ ಪಾಲು ಸಮಯ ರಾಜಕಾರಣಿಗಳಿಗೆ ಮೀಸಲು. ಅವರು ಮಲೆಯಾಳದಲ್ಲಿ ವೀರಾವೇಶದಿಂದ ಮಾತನಾದುವುದರ ನೋಡುವುದೇ ಸೊಗಸು.

ಮದ್ಯಾಹ್ನ ಮೊದಲ ಮಾತುಗಾರ ಖ್ಯಾತ ಬಳಕೆದಾರ ಚಳುವಳಿಗಾರ ಡಾ| ರವೀಂದ್ರನಾಥ ಶಾನುಬೋಗರು. ತುಂಬಾ ಚೆನ್ನಾಗಿ ಚಿತ್ರಗಳ ಸಮೇತ ವಿವರಣೆ ಕೊಟ್ಟರು. ರೈತರು ಅದನ್ನು ಬಳಸುವುದು, ಅದು ಬಾವಿ ನೀರಿಗೂ ಸೆರ್ಪಡೆಯಾಗಿ ಅದನ್ನೇ ರೈತರು ಕುಡಿಯುವಂತಹ ಒಂದು ವಿಶವರ್ತುಲ ಸೃಷ್ಟಿಸುವ ಬಗೆಗೆ ಚೆನ್ನಾಗಿ ವಿವರಿಸಿದರು. ಡಾ| ರವಿಂದ್ರನಾಥ ಶಾನುಬೋಗರ ಒಂದು ಮಾತು ಈಗಲೂ ಮನಸ್ಸಿಗೆ ಚುಚ್ಚುತ್ತಿದೆ - ಈಗ ವರ್ಷಕ್ಕೆ ಹದಿನಾಲ್ಕು ಸಾವಿರ ಟನ್ ಎಂಡೊಸಲ್ಫನ್ ತಯಾರಿ. ಈಗಲೇ ಇದಕ್ಕೆ ನಿರ್ಬಂದ ಹಾಕಿದರೂ ಆಪತ್ತಿನಿಂದ ಪೂರ್ಣ ಬಿಡುಗಡೆ ಅಲ್ಲ. ಯಾಕೆಂದರೆ ನಮ್ಮ ದೇಶದಲ್ಲಿ ಎಪ್ಪತ್ತೈದು ಸಾವಿರ ಟನ್ ದಾಸ್ತಾನು ಇದೆ. ಇದನ್ನು ಏನು ಮಾಡೋಣ ?





ನಮ್ಮ ಪಾಣೆಮಂಗಳೂರಿನಲ್ಲಿ ೧೯೧೪ರಲ್ಲಿ ಕಟ್ಟಿದ ಸೇತುವೆ ಸಪೂರ. ನಾನು ದಾಟುತ್ತಿರುವ ಮೇಲಿನ ಚಿತ್ರಣ ಇತ್ತೀಚೆಗೆ ಶಂಕರಣ್ಣ ಸೆರೆ ಹಿಡಿದದ್ದು. ಸೇತುವೆ ಮೇಲೆ ಎರಡು ದೊಡ್ಡ ವಾಹನ ಎದುರುಬದುರಾದರೆ ಒಂದು ಹಿಂದಕ್ಕೆ ಚಲಿಸಬೇಕಾಗುತ್ತದೆ. ಆದರೆ ಸಂಕ ಪ್ರವೇಶಿಸುವಾಗ ಇನ್ನೊಂದು ದೊಡ್ಡ ವಾಹನ ಕಂಡರೂ ಎರಡರಲ್ಲೊಂದು ಹಿಂದೆ ಸಾಗಬೇಕೆಂದು ಗೊತ್ತಿದ್ದರೂ ಹೆಚ್ಚಿನ ಚಾಲಕರು ನಿಲ್ಲುವ ಬದಲು ಮುನ್ನುಗ್ಗುತ್ತಾರೆ – ನಿರ್ಣಾಯಕ ನಡು ರೇಖೆ ದಾಟಿಬಿಡಲು. ಹಾಗೆ ಎಂಡೊಸಲ್ಫನ್ ಸಮಸ್ಯೆ ಇದೆಯೆಂದು ಗೊತ್ತಿದ್ದರೂ   ಭಾರಿ  ದಾಸ್ತಾನು ಮಾಡಿಕೊಂಡಿದ್ದಾರೆ.


ನಿನ್ನೆ  ತ್ರಿಚಕ್ರದಲ್ಲಿ ಸಾಗುತ್ತಿರುವಾಗ  ಮನಸ್ಸಿಗೆ ಬಂದ ವಿಚಾರ.  ನಮಗೆ   ಕೃಷಿಗೆ ಎಂಡೊಸಲ್ಫನ್ ಅಗತ್ಯವಿಲ್ಲ.  ಹಾಗೆಯೇ  ವೈಯುಕ್ತಿಕ  ಪ್ರಯಾಣಕ್ಕೆ  ತೈಲ ಅವಲಂಬನೆ ಅನಿವಾರ್ಯವಲ್ಲ.  ಬಹುಪಾಲು ನಮ್ಮ  ಪ್ರಯತ್ನದಿಂದಲೇ  ಮುಂದಕ್ಕೆ ಸಾಗಬಹುದು.  ಎರಡಕ್ಕೂ  ಅಡ್ಡಿ ಬರುವುದು  ಮಾನಸಿಕ ತಡೆಯೇ  ಮುಖ್ಯ ಕಾರಣ.   ನನಗೆ  ಈ ಕಾರ್ಯಕ್ರಮಕ್ಕೆ ಹೋಗಬೇಕೆನಿಸಿತು.  ಹಾಗೆ   ಪೆಟ್ರೋಲ್  ಕಾರು  ಅವಲಂಬಿಸುವ  ಬದಲಿಗೆ  ತುಳಿದೇ  ಸಾಗಲು  ಆಲೊಚಿಸಿದೆ.  ನಾವು ಹೋಗುತ್ತೇವೆ, ನಮ್ಮ ಜತೆ   ಬನ್ನಿ ಎನ್ನುವ  ಆಮಂತ್ರಣ ಸುಂದರ  ರಾಯರಿಂದ ಬಂದರೂ  ನಾನು ನಿರಾಕರಿಸಿದ್ದೆ.   



ಮೂವರು   ಸ್ಥಳೀಯ  ಹಾಗೂ    ತಳಮಟ್ಟದ  ಹೋರಾಟಗಾರರು ನಂತರ ಮಾತನಾಡುವವರಿದ್ದರು.  ಪತ್ರಕರ್ತರಾದ   ಶ್ರಿಪಡ್ರೆಯವರು   ಮತ್ತು  ಇಬ್ಬರು  ವೈದ್ಯರು –ಡಾ ಮೊಹನ್ ಕುಮಾರ್ ಮತ್ತು ಡಾ ಶ್ರೀಪತಿ  -  ಮೂವರ   ಮಾತು ಕೇಳಲು  ನನಗೆ   ಆಸಕ್ತಿ ಇತ್ತು.  ಆದರೆ    ನನಗೆ ರಾತ್ರಿಯಾಗುವ ಮೊದಲು ಗೂಡು ಸೇರುವುದು  ಅನಿವಾರ್ಯವಾದ  ಕಾರಣ  ಮೂರುವರೆಗೆ  ನಾನು  ತ್ರಿಚಕ್ರದಲ್ಲಿ  ಆಸೀನನಾದೆ.  ಮಳೆ ಅಂಜಿಕೆಯೂ  ನನ್ನ ಹೊರಡಿಸಿತು.  ವಾಪಾಸಾಗುವಾಗಲೂ  ಎರಡೂವರೆ  ಘಂಟೆ  ಪ್ರಯಾಣ.    ಇನ್ನೇನು  ಕತ್ತಲಾಯಿತು  ಅನ್ನುವಾಗ  ಮನೆ ತಲಪಿದ್ದೆ.  

Thursday, April 14, 2011

ಚಾರ್ಮಾಡಿ ಆರೋಹಣ ಶಿರಾಡಿ ಅವರೋಹಣ - ೨೩೦ ಕಿಮಿ

ಸೈಕಲಿನ ಮೇಲೆ  ಅಪಾರ  ಬರವಸೆ ಇಟ್ಟುಕೊಂಡಿರುವ  ನನಗೆ  ಅತಿ ಹೆಚ್ಚೆಂದರೆ  ದಿನಕ್ಕೆ  ಎಷ್ಟು ದೂರ  ತ್ರಿಚಕ್ರದಲ್ಲಿ ಹೋಗಬಹುದೆಂಬ  ವಿಚಾರ  ತಿಳಿಯುವ  ಕುತೂಹಲ.  ಇಪ್ಪತೈದು  ವರ್ಷ  ಹಿಂದೆ  ಮಾಮೂಲಿ  ಸೈಕಲಿನಲ್ಲಿ   ದಿನಕ್ಕೆ   ಇನ್ನೂರು  ಕಿಮಿ   ಹೋದದ್ದುಂಟು.  ಅದು  ಬೆನ್ನು  ಪುಡಿಯಾಗುವ   ಮೊದಲು.    ತ್ರಿಚಕ್ರದಲ್ಲೂ    ಇನ್ನೂರು  ಕಿಮಿ  ದಾಟುವ  ದೈರ್ಯವಿದ್ದರೂ  ಮಾಡಿ   ತೋರಿಸಿಲ್ಲವಲ್ಲ  ಒಂದೆಡೆ ವೇಗದ   ಗರಿಷ್ಟ ಮಿತಿ  ಇಪ್ಪತ್ತು  ಇಪ್ಪತ್ತೆರಡು   ಕಿಮಿ.  ಮತ್ತೊಂದೆಡೆ  ಭದ್ರತೆ ಕಾರಣಕ್ಕಾಗಿ  ಹೆಚ್ಚಾಗಿ   ಹಗಲಿನಲ್ಲಿಯೇ  ಪ್ರಯಾಣಿಸಬೇಕಾದ  ಅವಶ್ಯಕತೆ. 

ಹಿಂದಿನ  ಪ್ರಯತ್ನದಲ್ಲಿ   ಬೆನ್ನೆಲುಬಾಗಿದ್ದ    ಶಂಕರಣ್ಣ  ಮೊಹನರೂ   ಉತ್ಸಾಹ  ತೋರಿದರು.  ಹಾಗೆ  ದಾರಿ  ಬಗೆಗೆ    ಹುಡುಕಾಟ  ಪ್ರಾರಂಬಿಸಿದೆ.  ಮಕ್ಕಳಿಗೆ ರಜೆಯಾದ ಕಾರಣ   ಅವರೂ  ಜತೆ  ಸೇರಿದರು.   ಹಿಂದೂಮ್ಮೆ ಯೋಚಿಸಿದ್ದ  ಚಾರ್ಮಾಡಿ ಘಾಟಿ  ಏರುವುದೆಂದು  ತೀರ್ಮಾನಿಸಿದೆವು.   ಹೋದ ದಾರಿಯಲ್ಲಿಯೇ  ವಾಪಾಸು  ಬರುವ  ಬದಲಿಗೆ  ಸಮಯ  ಸಾಕಷ್ಟು  ಇದ್ದರೆ    ಶಿರಾಡಿಯಲ್ಲಿ  ಇಳಿಯುವುದೆಂದೂ  ಸೂಚಿಸಿದೆ. 

ಒಂದು ಘಾಟಿಯಿಂದ  ಇನ್ನೊಂದರ  ಮದ್ಯೆ  ಸುಮಾರು   ನಲುವತ್ತು    ಕಿಮಿ  ದೂರ  ಇರುವುದೂ  ನಮಗೊಂದು  ಸವಾಲಾಗಿತ್ತು.  ಹಿಂದಿನ  ದಿನ  ಮದ್ಯಾಹ್ನ    ಹದಿನೈದು  ವರ್ಷಗಳಿಂದ  ಬೇಟಿ   ಮಾಡದ  ಆತ್ಮೀಯ  ಸಹಪಾಠಿ ಮಿತ್ರ   ರವಿಗೆ    ರಿಂಗಿಸಿದೆ.  ಅಲ್ಲಿಂದ  ಬಂದ ಸುದ್ದಿ   ಉತ್ಸಾಹಕ್ಕೆ  ತಣ್ಣೀರು  ಎರಚುವಂತದ್ದು.   ಈಗ  ಮದ್ಯಾಹ್ನ  ಮಳೆ ಬರುತ್ತಿದೆ  ಮತ್ತು   ಮೂಡಿಗೆರೆ  ಸಕಲೇಶಪುರ  ರಸ್ತೆ  ಚೆನ್ನಾಗಿಲ್ಲ    ಎರಡೂ  ನನಗೆ  ಪೂರಕವೆನಿಸುವ   ಸುದ್ದಿಯಲ್ಲ.  ಆದರೂ    ಮಳೆ  ಬಂದರೆ   ಮಳೆ ಕೋಟು ಇದೆಯಲ್ಲ.      ಮುಂದಿರುವುದು  ಮಳೆಗಾಲ  ಹಾಗೂ  ತಂಡದವರಿಗೆ   ಇನ್ನೊಮ್ಮೆ   ಅನುಕೂಲಕರ    ಬಿಡುವು ಸಿಗುವುದು  ಖಚಿತವಲ್ಲ.     ಹೇಗಾದರೂ    ಸುದಾರಿಸುವ  ದೈರ್ಯದಲ್ಲಿ  ಯೋಜನೆ  ಮುಂದುವರಿಸಿದೆ.  

ಮೊದಲೇ  ಯೋಜನೆ    ಹಾಕಿದಂತೆ   ಐದು  ಘಂಟೆಗೆ  ಸರಿಯಾಗಿ  ಮನೆಯಿಂದ ಹೊರಟೆ. 
ಯಾವಗಲೂ  ನನ್ನ  ಬೆನ್ನಟ್ಟುವ  ನಮ್ಮೂರ ನಾಯಿಗಳು  ಇನ್ನೂ  ನಿದ್ದೆಯಲ್ಲಿದ್ದ ಕಾರಣ    ಪ್ರಶಾಂತ  ವಾತಾವರಣ.  ಮುಖ್ಯರಸ್ತೆಗೆ  ತಲಪುವಾಗ  ಇನ್ನೂ  ಕತ್ತಲು.  ಹೊಂಡಗುಂಡಿಗಳಿಂದ  ಕೂಡಿದ  ಹೆದ್ದಾರಿಯಲ್ಲೇ  ಮಾಣಿ ಕಡೆಗೆ  ಹೋದೆ. ಅನಂತರ  ರಸ್ತೆ   ಚೆನ್ನಾಗಿತ್ತು.  ಬೆಂಗಳೂರಿಂದ  ಬರುವ  ವಾಯುವೇಗದಿಂದ ಸಾಗುವ ರಾತ್ರಿ ಬಸ್ಸುಗಳು  ಕೆಲವೊಮ್ಮೆ   ನನ್ನ ಕಣ್ಣುಕುಕ್ಕಿದರೂ   ಪರಿಚಿತ  ರಸ್ತೆಯಾದ  ಕಾರಣ  ಸಮಸ್ಯೆಯಾಗಲಿಲ್ಲ.  ಆರು ಘಂಟೆಗೆ ಸುಮಾರು  ಇಪ್ಪತ್ತು ಕಿಮಿ   ದೂರದ ಉಪ್ಪಿನಂಗಡಿಯಲ್ಲಿ  ತಂಡದ  ಉಳಿದವರು   ಎಲ್ಲಿದ್ದಾರೆ  ಎಂದು  ಸಂಚಾರವಾಣಿಗೆ  ಕಿವಿಗೊಟ್ಟೆ.



ಉಪ್ಪಿನಂಗಡಿಯಲ್ಲಿ  ಎರಡು  ಸಾದ್ಯತೆಗಳು   ನಮ್ಮ ಮುಂದಿದ್ದವು.   ಗುರುವಾಯನಕೆರೆ ಮೂಲಕ  ಸಾಗುವ  ರಿಪೇರಿಯಲ್ಲಿರುವ  ಮಾಮೂಲಿ ರಸ್ತೆ ಮತ್ತು   ಕಡಿದಾದ  ಏರುಗಳಿರುವ            ಬೇಳಾಲು  ಮೂಲಕದ ಹೊಸ ರಸ್ತೆ.  ಶಂಕರಣ್ಣನ ಮತ  ಬೆಳಾಲು ರಸ್ತೆಗೆ.  ಅದನ್ನು    ಸಮ್ಮತಿಸಿ  ನಾನು  ಆ  ಪ್ರಕಾರ ತಿರುಗಿದೆ.   ರಸ್ತೆ  ಚೆನ್ನಾಗಿದೆ, ಅಗಲವೂ  ಇದೆ.  ಆದರೆ    ಕೆಲವು ಮುಖ್ಯವಾಗಿ  ಹೊಳೆಯಿಂದಲೇ  ಏರುವ  ಚಡಾವು  ಬಹಳ ಕಡಿದಾಗಿತ್ತು. ನಾನು ಹಿಂದಿನ ದಿನ  ಬಾಟರಿ   ಬಾಳ್ವಿಕೆ ಹೆಚ್ಚಿಸಲು  ಸಹಾಯ  ಮಟ್ಟವನ್ನು  ಇಪ್ಪತ್ತೆರಡು Ah ನಿಂದ  ಹದಿನೆಂಟಕ್ಕೆ ಇಳಿಸಿದ್ದೆ.   ಪರಿಣಾಮವಾಗಿ   ನನ್ನ  ಕಾಲಿನ  ಮಾಂಸಖಂಡಗಳಿಗೆ   ಸಾಕಷ್ಟು  ಒತ್ತಡ  ಹಾಕಿತು.   ಅರ್ದ ದಾರಿ  ತಲಪುವಾಗ  ಉಳಿದವರು  ನಾನಿರುವಲ್ಲಿಗೆ  ಬಂದು  ತಲಪಿದರು.  ಎರಡರಲ್ಲಿ  ಹೆಚ್ಚು    ನಿಶಕ್ತಿಯಾಗಿದ್ದ    ಬಾಟರಿಯನ್ನು   ಕಾರಿನಲ್ಲಿ   ಚಾರ್ಜಿಗಿಟ್ಟೆವು.

ಉಜ್ರೆಯಲ್ಲಿ  ಹಿಂದಿನ ದಿನವೇ  ಅಗತ್ಯವಾದರೆ ದಿನಕರರ ಸಂಬಂದಿಕರ ಮನೆಯಲ್ಲಿ ಚಾರ್ಜು  ಸಹಾಯ  ಕೋರಿದ್ದೆ.  ಶಂಕರಣ್ಣ  ಯಾರ ಮನೆಗೂ ಹೋಗುವುದು  ಬೇಡ  ಮಾತಾಡುತ್ತಾ  ತಡವಾಗುತ್ತದೆ  ಎಂದರು.  ನನಗೆ ಪೂರ್ತಿ  ಕಾರಿನಲ್ಲಿಯೇ  ಚಾರ್ಜಾಗುವುದು ಸಾಕೋ ? ಗೊಂದಲ.   ಜತೆಗೆ ಬಳಲಿದ  ನನ್ನ  ಕಾಲಗಂಟುಗಳಿಗೆಲ್ಲ  ಸ್ವಲ್ಪ ವಿರಾಮ  ಸಿಕ್ಕರೆ ಒಳ್ಳೆಯದು  ಅನಿಸುತಿತ್ತು.  ಹಾಗೆ  ಹೋಟೇಲಿನಲ್ಲಿ ತಿಂಡಿ ತಿನ್ನುವ ಹೊತ್ತಿಗೆ  ಅಲ್ಲಿ  ಚಾರ್ಜ್  ಆಗಲೆಂದು  ಒತ್ತಾಯಿಸಿದೆ.  ಹಾಗೆ  ಉಜ್ರೆಯಲ್ಲಿ  ಸುಮಾರು ಒಂದೂ ಕಾಲು  ಘಂಟೆ  ತಿಂಡಿ ಹಾಗೂ  ಚಾರ್ಜಿಗೆಂದು   ವಿರಾಮ.

ಒಂಬತ್ತೂ ಮುಕ್ಕಾಲಕ್ಕೆ ಉಜ್ರೆ ಬಿಟ್ಟೆವು.    ಚಾರ್ಮಾಡಿ  ಅನಂತರ  ಸುಮಾರು  ಮೂರು ಸಾವಿರ ಅಡಿ ಏರುವ ಘಾಟಿ  ರಸ್ತೆ.  ಬುಡದಲ್ಲಿ   ಚಾರ್ಜ್   ತುಂಬಿದ  ಬಾಟರಿ  ಅಳವಡಿಸಿದೆವು.    ಅನಂತರ  ಸುನಿಲ  ಬಾಟರಿ  ಬದಲಾವಣೆ  ಪರಿಚಾರಕನಾಗಿ    ನೇಮಕಗೊಂಡ.      ರಸ್ತೆ ಗುಣಮಟ್ಟ  ಮತ್ತು  ಇತರ ವಾಹನಗಳ  ವರ್ತನೆ ಪ್ರೋತ್ಸಾಹದಾಯಕವಾಗಿತ್ತು.  ಹಲವರು ನಿದಾನಿಸಿ  ಪ್ರೋತ್ಸಾಹಿಸುವ   ಚಿಹ್ನೆಯಾಗಿ   ಹೆಬ್ಬೆಟ್ಟು  ತೋರಿಸುತ್ತಾ  ಇದ್ದರು.   ಉತ್ತರಿಸೋಣ ಅಂದರೆ  ನನ್ನ  ಹೆಬ್ಬೆಟ್ಟು ಜಪಾನಿನಲ್ಲಿ  ಆದ ಅಪಘಾತವೊಂದರಿಂದಾಗಿ   ಮುಕ್ಕಾಲು  ಇಂಚು  ಕಿರಿದಾಗಿದೆ.  ಘಾಟಿ  ರಸ್ತೆ  ತುಂಬಾ  ಚೆನ್ನಾಗಿತ್ತು. ಬಾಟರಿ ಸಹಾಯಕ  ಚೆನ್ನಾಗಿ ಬೆಂಬಲ ಕೊಟ್ಟಿತು.  ಒಂದೇ ಮಟ್ಟದಲ್ಲಿ  ಶ್ರಮ ಹಾಕುತ್ತಿದ್ದು  ಸಲೀಸಾಗಿ  ಮೇಲೇರುತ್ತಿರುವುದು  ಮತ್ತೂ  ತುಳಿಯಲು  ಕುಶಿ  ಕೊಡುತ್ತಾ  ಇತ್ತು. 

ಮದ್ಯಾಹ್ನ  ಹನ್ನೆರಡೂ ಕಾಲಕ್ಕೆ  ಕೊಟ್ಟಿಗೆಹಾರ  ತಲಪಿದೆವು.   ಘಾಟಿರಸ್ತೆಯಲ್ಲಿ ಒಮ್ಮೆ  ಸಂಚಾರವಾಣಿಗೆ  ಸಿಗ್ನಲ್    ಎಟಕಿದಾಗ   ಗೆಳೆಯ   ರವಿಗೆ  ಸಂದೇಶ  ಕಳುಹಿಸಿದ್ದೆ – ಕೊಟ್ಟಿಗೆಹಾರಕ್ಕೆ  ಹದಿನೆಂಟು ಕಿಮಿ  ಉಂಟು.   ಒಂದೂಕಾಲು ಘಂಟೆಯಲ್ಲಿ ತಲಪುತ್ತೇವೆ.  ಹಾಗೆ  ಸಮಯಕ್ಕೆ ಸರಿಯಾಗಿ  ತಲಪಿಯೂ  ಇದ್ದೆವು.  ಒಂಬತ್ತೂ  ಮುಕ್ಕಾಲಕ್ಕೆ ಉಜ್ರೆಯಿಂದ ಹೊರಟು  ಅಲ್ಲಿಂದ   ಮೂರು ಸಾವಿರ  ಅಡಿ ಎತ್ತರ  ಹಾಗೂ    ಮೂವತ್ತೆಂಟು ಕಿಮಿ  ದೂರದಲ್ಲಿರುವ  ಕೊಟ್ಟಿಗೆಹಾರಕ್ಕೆ  ಎರಡೂವರೆ  ಘಂಟೆ  ಪ್ರಯತ್ನದಲ್ಲಿ ಸಾಗಿದ್ದೆ.  ಶಕ್ತಿಯ  ಬಳಕೆ  ನನ್ನ  ನಿರೀಕ್ಷೆಯೊಳಗಿತ್ತು  ಎನ್ನುವುದರಿಂದಲೂ  ನನ್ನ  ಪ್ರಯತ್ನಕ್ಕೆ  ಭಾರಿ  ಸಮದಾನ  ತಂದಿದೆ  ಎನ್ನಬಹುದು.  


ಮುಂದಿನ  ದಾರಿ ಹಾಗೂ  ಊಟದ  ಬಗೆಗೆ   ರವಿ ಹತ್ತಿರ    ಕೊಟ್ಟಿಗೆಹಾರದಲ್ಲಿ    ವಿಚಾರಿಸಲು  ಮುಂದೆ    ಮೂಡಿಗೆರೆಯ  ಪಕ್ಕದಲ್ಲಿ ಮುಂದಿನ ರಸ್ತೆ ತಿರುವು.  ಹಾಗೆ  ಮೂಡಿಗೆರೆಯಲ್ಲಿಯೇ  ಊಟ ಮಾಡೋಣ. ಇಲ್ಲಿ  ಚೆನ್ನಾಗಿಲ್ಲ  ಎಂದ  ರವಿ.  ಹಾಗೆ  ಒಂದು   ಘಂಟೆಗೆ   ಮೂಡಿಗೆರೆ  ಹೊರವಲಯದ    ರಸ್ತೆ   ಬದಿಯ ಗಾರೇಜಿನಲ್ಲಿ  ಟ್ರೈಕ್ ಬಾಟರಿ  ಚಾರ್ಜಿಗಿಟ್ಟು  ನಾನು  ಅವರ  ಕಾರು ಹತ್ತಿದೆ.    ಅವರು   ಮುಂಚಿನ ದಿನ  ಮಳೆ ಬಂದಿತ್ತು. ಇಂದು ಬರಲೂ  ಬಹುದು ಎಂದರೂ  ನಮಗೆ  ಮಳೆ ತಡೆಯುಂಟು ಮಾಡಲಿಲ್ಲ.

ಮೂಡಿಗೆರೆಯಿಂದ ಜನ್ನಾಪುರ ಮೂಲಕ  ಹನಬಾಳ ವರೆಗಿನ  ರಸ್ತೆ ಪೂರಾ ಹಾಳು.  ಕೆಲವು ಕಡೆಗಳಲ್ಲಿ  ರಸ್ತೆಯೇ  ಇರಲಿಲ್ಲ.  ತುಂಬಾ ಹೊಂಡಗುಂಡಿಗಳು.    ಹನಬಾಳಿನಲ್ಲಿ ನನ್ನ  ತಂಡದವರಲ್ಲಿ ಹೇಳಿದೆ  - ನನ್ನ ಹಾಗೂ  ತ್ರಿಚಕ್ರದ ನಟ್ ಬೋಲ್ಟ್ ಎಲ್ಲ  ಪರೀಕ್ಷೆ  ನಡೆಸಿದಂತಾಯಿತು.  ಹನಬಾಳ ಸಕಲೇಶಪುರ ರಸ್ತೆ   ತೃಪ್ತಿಕರವಾಗಿದ್ದು  ನಾಲ್ಕೂ  ಕಾಲಕ್ಕೆ  ಸರಿಯಾಗಿ  ಮಂಗಳೂರ ಹೆದ್ದಾರಿ  ತಲಪಿದೆವು. 


ಘಾಟಿ  ಇಳಿಯುವುದು  ರೊಮಾಂಚನ ಅನುಭವವಾದರೂ  ನಾನು ವೇಗಕ್ಕೆ  ನಿಗಾ ವಹಿಸಬೇಕಾದುದು ಅನಿವಾರ್ಯ – ನನ್ನ ತ್ರಿಚಕ್ರಕ್ಕೆ  ಬ್ರೇಕಿರುವುದು ಮುಂದಿನ ಎರಡು ಚಕ್ರಕ್ಕೆ ಮಾತ್ರ.  ಎರಡನ್ನೂ  ಒಟ್ಟಿಗೆ ಅದುಮದಿದ್ದರೂ  ಜಾರುವ  ಸಾದ್ಯತೆ  ದಾರಾಳ.  ಮಳೆಯ ಲಕ್ಷಣಗಳು  ಇದ್ದರೂ  ನಮಗೆ ತೊಂದರೆಯಾಗಲಿಲ್ಲ.   ಸರಿಸುಮಾರು  ಮೂವತ್ತೈದು   ಕಿಮಿ ವೇಗದಲ್ಲಿ  ಚಾಲನೆ.      ತಿರುವುಗಳಗಲ್ಲಿ  ನುಣುಪಾದ  ಅಲ್ಲಲ್ಲಿ  ಜಲ್ಲಿ  ಹುಗಿದ   ಹೊಸದಾಗಿ ಹಾಸಿದ    ಡಾಮರು  ಪದರ.   ಜಾರುವುದೋ  ?    ಅದರ  ಬಗೆಗೆ  ಸ್ವಲ್ಪ   ಗೊಂದಲ.   ಕತ್ತಲಾಯಿತು ಎನ್ನುವಾಗ  ಘಾಟಿ  ರಸ್ತೆ  ಮುಗಿಸಿ   ಶಿರಾಡಿ  ತಲಪಿದ್ದೆವು. 

ಸುಮಾರು  ದೂರ  ಇಳಿಜಾರು  ರಸ್ತೆಯಲ್ಲಿ  ಶೀತ  ಹವೆಯಲ್ಲಿ  ಕಾಲುಗಳ  ಸುಮ್ಮನೆ  ಪೆಡಲ್ ಮೇಲಿಟ್ಟ  ಕಾರಣ  ಕಾಲುಗಳು  ಮರಗಟ್ಟಿದ್ದವು.  ಅದು  ಸರಿಯಾಗಲು  ನನ್ನ   ನಿಯಂತ್ರಣಕ್ಕೆ   ಬರಲು   ಸ್ವಲ್ಪ  ಸಮಯ  ಹಾಗೂ  ದೂರ  ಬೇಕಾಯಿತು.  ನನ್ನ  ಮಾಪಕಕ್ಕೆ ಚಳಿ  ಹಿಡಿದು  ಅದು ನಿರ್ವಹಣೆಯಲ್ಲಿ ವಿಫಲವಾಯಿತು.   ಅದರ  ಸಂಪರ್ಕ  ಕಿತ್ತು ಹಾಕಿದೆ.    ರಸ್ತೆ  ಹೊಂಡಗಳಿಲ್ಲದೆ    ಉತ್ತಮವಾಗಿ  ಇದ್ದುದೂ  ನನಗೆ ಸಹಾಯಕವಾಯಿತು. 

ನೆಲ್ಯಾಡಿ  ಮುಟ್ಟುವಾಗ  ಸರಿಯಾಗಿ ಕತ್ತಲು.  ತುಂತುರು ಮಳೆ ಪ್ರಾರಂಬ.  ಆದರೂ  ಮುಂದುವರಿಸಿದೆ.   ಇಲ್ಲಿಯೇ   ಎಲ್ಲಾದರು ಪರಿಚಿತರಲ್ಲಿ  ತ್ರಿಚಕ್ರ  ಇಟ್ಟು  ಹೊಗೋಣ  ಎಂದು ಅನಿಲನ ಸಲಹೆ.   ಟ್ರೈಕ್ ಹಾಗೂ  ನಾನು ಕಾಣುವುದೇ ಇಲ್ಲ.     ಮಳೆ  ಹಾಗೂ  ಕತ್ತಲಿನಲ್ಲಿ ಮುಂದುವರಿಯುವಾಗ    ಅಗೋಚರವಾಗಿರುವ ನನ್ನ   ಬಗೆಗೆ ಶಂಕರಣ್ಣನಿಗೆ  ಆತಂಕ.      ವಾಹನ ಚಾಲಕರು  ಪಕ್ಕನೆ   ಕಲ್ಪಿಸ್ಕೊಳ್ಳಲು  ಸಾದ್ಯವಾಗದೆ  ಹೊಂಡಕ್ಕೋ  ಇತರ ವಾಹನಗಳ ಮೇಲೆಯೊ   ಅಥವಾ  ನನ್ನ ಮೇಲೆ   ಅವರ   ವಾಹನ  ನುಗ್ಗಿಸಬಹುದು.   ಸ್ವಲ್ಪ   ಅಮಲಿನಲ್ಲಿದ್ದ  ಚಾಲಕನಾದರೆ ಟ್ರೈಕ್  ಅಡಿಗೆ  ಹಾಕಿದ್ದೂ   ಗೊತ್ತಾಗದಿರಬಹುದು -   ತೀರಾ  ಅಪಾಯಕರ ಸನ್ನಿವೇಶ.    ನನಗಿದು  ಸನ್ನಿವೇಶ   ಸವಾಲೆನಿಸಿ  ಬಹಳ    ಹಠ ಕಟ್ಟಿ ತುಳಿದೆ.  ಗೋಳಿತೊಟ್ಟು ಉಪ್ಪಿನಂಗಡಿ ಮದ್ಯೆ ಕನಿಷ್ಟ  ಹತ್ತು ಬಾರಿಯಾದರೂ  ಸೈಕಲಿಸಿರುವ  ನಾನು  ಖಂಡಿತ  ಅಂದು  ನನ್ನ  ಮಟ್ಟಿಗೆ  ಹೊಸ  ದಾಖಲೆ  ಸ್ಥಾಪಿಸಿರುತ್ತೇನೆ.  ಮೋಹನರು   ನಾನೊ ಚಾಲನೆಯೊಂದಿಗೆ   ನನ್ನ  ದಾರಿಗೆ  ಸಾದ್ಯವಾದಷ್ಟು    ಬೆಳಕೂ  ಬೀರಿದರು.

ಮುಂದೆ ಗೋಳಿತೊಟ್ಟಿನಲ್ಲಿ  ರಸ್ತೆಬದಿಯಲ್ಲಿದ್ದ  ಮಣ್ಣು ರಾಶಿ   ಕರಗಿ   ಇಳಿಜಾರು   ರಸ್ತೆಯಲ್ಲಿ   ಸುಮಾರು  ದೂರ   ಕೆಸರು  ಪದರವಿದ್ದಲ್ಲಿ  ಕಾರುಗಳೆರಡು  ಗುದ್ದಿಕೊಂಡದ್ದು   ನೋಡಿ  ಶಂಕರಣ್ಣ    ಮತ್ತೂ  ಕಂಗಾಲು.   ವೈದ್ಯರು  ಸದಾ ರೋಗಿಗಳ  ಮದ್ಯೆ ಇರುವಂತೆ ಇವರಿಗೆ  ಅಪಘಾತ  ಹಾಗೂ  ಪೆಟ್ಟಾದ  ವಾಹನಗಳ  ಸುದ್ದಿ  ಚಿರಪರಿಚಿತ.     ಉಪ್ಪಿನಂಗಡಿ  ತಲಪುವಾಗ  ಅವರೂ  ತ್ರಿಚಕ್ರವನ್ನು   ಇಲ್ಲೆ ಹೋಟೆಲ್ ಪಕ್ಕ ಇಟ್ಟು ಹೋಗುವ, ನಾನು ಮಾತಾಡುತ್ತೇನೆ  ಎಂದರು.    

ಮುಂದಿನ    ಪುತ್ತೂರು ರಸ್ತೆಯಲ್ಲಿ  ವಾಹನದಟ್ಟಣೆ   ಕಡಿಮೆ.   ಹಾಗೆ ಮುಂದಿವರಿಯುವ  ಮತ್ತು   ನಿಮ್ಮ  ಕಾರ್ಯಗಾರದಲ್ಲಿ   ತ್ರಿಚಕ್ರವನ್ನು  ಇಡುವ  ಎಂದು ಅವರನ್ನು ಒಪ್ಪಿಸಿದೆ.    ವಾಹನ ವಿರಳವಾದ ದಾರಿಯಾದ ಕಾರಣ  ನನಗೆ  ಅನುಕೂಲವಾಯಿತು.  ಏರಿಳಿತ ತಿರುವುಗಳು  ಹೆಚ್ಚಿದ್ದ  ಕಾರಣ  ಕೆಲವೊಮ್ಮೆ  ನನ್ನ  ಮಿಣುಕು ದೀಪದಲ್ಲಿಯೇ  ಮುಂದುವರಿಯ  ಬೇಕಾಯಿತು.  ಬೊಳುವಾರು  ವೃತ್ತ  ತಲಪುವಾಗ  ಜಾತ್ರೆ   ಪ್ರಯುಕ್ತ ಪುತ್ತೂರ  ಮಹಾಲಿಂಗೇಶ್ವರ    ಸವಾರಿ  ಹೊರಟಿದ್ದರು.  ಮೆರವಣಿಗೆ    ಮುಂದಿನ  ತುದಿ  ಮಾತ್ರ  ಅಲ್ಲಿಗೆ ತಲಪಿದ ಕಾರಣ  ನಮಗೆ   ವಿಳಂಬವಾಗಲಿಲ್ಲ.  ರಾತ್ರೆ  ಎಂಟೂವರೆಗೆ  ಟ್ರೈಕಿನಿಂದಿಳಿದು  ಕೈಕಾಲು  ಬೆನ್ನುಗಳ  ಸರಿಮಾಡಿಕೊಂಡೆ.     

ಹನ್ನೊಂದು ಕಾಲು  ಘಂಟೆಯಲ್ಲಿ  ೨೩೦ ಕಿಮಿ  ಚಾಲನೆ ಮಾಡಿದ್ದೆ.   ಸರಾಸರಿ  ವೇಗ   ಘಂಟೆಗೆ ೨೦.೪ ಕಿಮಿ.  ಇಲ್ಲಿ  ಕ್ಲಿಕ್ಕಿಸಿದರೆ   ನಾನು  ಸಾಗಿದ  ದಾರಿ  ನಕ್ಷೆ  ತೆರೆದುಕೊಳ್ಳುತ್ತದೆ.      


ಮರುದಿನ  ಒಮ್ನಿಯಲ್ಲಿ  ಪುತ್ತೂರಿಗೆ  ಹೋಗಬೇಕಾಯಿತು.  ಅಲ್ಲಿ ನೋಡುವಾಗ  ನನಗೆ ಗಾಬರಿ -  ಹಿಂದಿನ ಚಕ್ರ  ಗಾಳಿ ಖಾಲಿಯಾಗಿ  ಕೂತಿದೆ.   ಹಿಂದಿನ ಚಕ್ರ ಬಿಡಿಸಲು ಬದಲಾಯಿಸಲು  ಸುಲಭವಲ್ಲ.    ಗೇರ್,  ಚೈನ್  ಮತ್ತು  ನನ್ನ  ಚೀಲ   ಸುಲಭವಾಗಿ  ಕೆಲಸ ಮಾಡದಂತೆ  ಅಡ್ಡಗಟ್ಟುತ್ತದೆ.    ಹಾಗೆ  ಒಮ್ನಿಯಲ್ಲಿ ಹಾಕಿ  ತ್ರಿ ಚಕ್ರ  ಮನೆಗೆ  ತಂದೆ. ಬಿಡಿಸಿ ನೋಡುವಾಗ  ಒಂದು  ಬಹು ಸಣ್ಣ ತೂತು ಕಂಡಿತು.  ಆಗಾಗ  ಗಾಳಿ ಹಾಕಿ  ಮುಂದೆ ಸಾಗ ಬಹುದಾಗಿದ್ದ  ಪರೀಸ್ಥಿತಿ.  ಆದರೆ  ದಾರಿಯಲ್ಲಿ  ಸಮಸ್ಯೆಯಾಗದಿರುವುದು  ಒಳ್ಳೆಯದಾಯಿತು  ಅನ್ನೋಣ.  

ಕತ್ತಲ ದಾರಿ, ಮಳೆ  ಹಾಗೂ  ವಾಹನ ದಟ್ಟಣೆ ಇರುವ  ಹೆದ್ದಾರಿ – ಮೂರೂ  ಸೇರಿರುವ  ಸನ್ನಿವೇಶ  ಇನ್ನು  ಮುಂದೆ  ತ್ರಿಚಕ್ರ ಚಾಲನೆ  ಇಲ್ಲವೇ  ಇಲ್ಲ.  ಇದು  ಪ್ರಯತ್ನ  ಸಾಹಸ  ಎನ್ನುವ ಬದಲು  ಮೂರ್ಖತನವಾಗುತ್ತದೆ.  ಇದು  ಈ  ಪ್ರವಾಸದ  ಪ್ರಮುಖ ಪಾಠ.  ಜತೆಯಲ್ಲಿ  ಬೆಂಬಲ ವಾಹನವಿದ್ದರೆ  ನಮಗೆ  ಬರೇ   ಚಾರ್ಜಿಗಾಗಿ  ಎಲ್ಲೂ    ನಿಲ್ಲಬೇಕಾಗಿಲ್ಲ.       

     

Monday, April 04, 2011

ಅಣು ವಿದ್ಯುತ್ ಸುತ್ತಲಿನ ಸುಳ್ಳುಗಳೂ ಹಾಗೂ ವಿಕಿರಣದಿಂದ ಮಲೀನಗೊಂಡ ಕಾಡು ಹಂದಿ ಮಾಂಸ



ಚೆರ್ನೋಬಿಲ ಅಣು ಶಕ್ತಿ ದುರಂತದ ಸಮಯ  ನಾನು  ಜರ್ಮನಿಯಲ್ಲಿದ್ದೆ.  ಅಂದು  ದುರಂತ  ಸಂಬವಿಸಿದ್ದು  ಸಾವಿರಾರು  ಮೈಲು ದೂರವಾದರೂ  ತಕ್ಷಣ  ಅದಿಕಾರಿಗಳು  ಕಾರ್ಯಪ್ರವೃತ್ತರಾಗಿದ್ದರು.  ವಿಕಿರಣ  ಬಾದಿಸಿದ  ಸಾಮುಗ್ರಿಗಳ  ಆಹಾರ   ಜಾಲದಿಂದ ಹೊರಗಿಡಲು  ಕ್ರಮ ಕೈಗೊಂಡಿದ್ದರು.  ಅದು ನಡೆದು  ಈಗ ಇಪ್ಪತೈದು ವರ್ಷ.  ಆದರೂ  ಅಲ್ಲಿನ  ಅದಿಕಾರಿಗಳು  ವಿರಮಿಸಿಲ್ಲ.    ಜರ್ಮನಿಯವರ   ಅನುಭವ  ಇಂದು ಜಪಾನಿಗೂ  ಮಾತ್ರವಲ್ಲ   ಅಣು ವಿದ್ಯುತ್  ಎಂಬ  ಭೂತದ    ಬೆನ್ನಟ್ಟಿರುವ   ನಮಗೂ    ಪ್ರಸ್ತುತ. 

ಜರ್ಮನಿಯಲ್ಲಿರುವ    ಕಾಡು ಹಂದಿಗಳು  ಚರ್ನೋಬಿಲಿನಿಂದ  ೧೫೦೦ ಕಿಮಿ ದೂರದಲ್ಲಿ ಒಡಾಡುತ್ತವೆ.  ಆದರೂ  ಸಿಸಿಯಂ -೧೩೭ ಎಂಬ  ಅಣು ದಾತುವಿನ  ಅಂಶ ಅವುಗಳ  ಮಾಂಸದಲ್ಲಿ  ಇಂದಿಗೂ    ಅಪಾಯಕಾರಿ ಮಟ್ಟದಲ್ಲಿಯೇ  ಇರುತ್ತದೆ.   ಈ ಅಣುದಾತುವಿನ  ವಿಕಿರಣ  ಅರೆವಾಶಿಯಾಗುವುದು  ೩೦ ವರ್ಷಗಳಾದರೂ  ಇನ್ನೂ  ಹಲವಾರು ವರ್ಷ   ಇವುಗಳ  ಸಮಸ್ಯೆ ಮುಂದುವರಿಯುತ್ತದೆ.  ಆ ಬಾಗದ  ಜನ  ಬೇಟೆಯಾಡಿ ಕೊಂದ   ಕಾಡುಪ್ರಾಣಿಯ  ದೇಹ  ಸರಕಾರದ  ವತಿಯಿಂದ   ಪರಿಶೀಲನೆ ನಡೆಯುತ್ತದೆ.  ಕಳೆದ ಹನ್ನೆರಡು ತಿಂಗಳುಗಳಲ್ಲಿ  ಸುಮಾರು ಎರಡು ಕೋಟಿ ಎಪ್ಪತ್ತಾರು ಲಕ್ಷ ರೂಪಾಯಿಯಷ್ಟು   ಪರಿಹಾರ ಕೊಟ್ಟು   ಸರಕಾರ  ಆ ಮಲೀನಗೊಂಡ  ಹಂದಿ ದೇಹಗಳ  ದ್ವಂಸಮಾಡಿದೆ.  ಮುಂದಿನ  ಹದಿನೈದು  ವರ್ಷಗಳಲ್ಲಿ ಇದರ ಪ್ರಮಾಣ ಕಡಿಮೆಯಾದರೂ  ಮಕ್ಕಳ ಮೊಮ್ಮಕ್ಕಳ  ಕಾಲದವರೆಗೂ  ಸಮಸ್ಯೆ  ಗಮನಾರ್ಹವಾಗಿಯೇ  ಉಳಿಯುತ್ತದೆ  ಎನ್ನುವರು ಅಲ್ಲಿನ ಅಧಿಕಾರಿಗಳು.   
ಜಪಾನಿನ    ತಜ್ನರೊಬ್ಬರು  ೨೦೦೭ ರಲ್ಲಿಯೇ    ಒಂದು   ಹೇಳಿಕೆ ಇತ್ತಿದ್ದರು.   ಕಳೆದ  ನಲುವತ್ತು  ವರ್ಷಗಳಲ್ಲಿ  ಜಪಾನು  ಅಣು ವಿದ್ಯುತ್  ಕೇಂದ್ರಗಳ  ಕಟ್ಟುತ್ತಿರುವುದೇನೋ  ಹೌದು.    ಕಾಲದಲ್ಲಿ   ಭೂಕಂಪಗಳು   ಜರಗಲಿಲ್ಲ.  ಅದುದರಿಂದ  ಸರಕಾರ,  ಅಣು ತಜ್ನರು  ಮತ್ತು  ಅಣು ಕೈಗಾರಿಕೆ   ಭೂಕಂಪಗಳಿಂದ  ಆಗಬಹುದಾದ  ಹಾನಿಯ ಬಗೆಗೆ   ನಿರ್ಲಕ್ಷ  ವಹಿಸಿತು.   ಆದರೆ  ಕೋಬೆಯಲ್ಲಿ ಜರಗಿದ  ದೊಡ್ಡ  ಅಭೂಕಂಪದ  ಅನಂತರ  ನೆಲದಡಿಯಲ್ಲಿ ಚಟುವಟಿಕೆ  ಪ್ರಾರಂಬವಾಗಿದೆ.  ಇಡೀ ಜಪಾನು  ಕಂಪನ  ಅಪಾಯಕ್ಕೆ ಒಳಗಾಗಿದೆ.   ಹೀಗೆಲ್ಲ  ಅವಲಕ್ಷಣ  ಮಾತಾಡುವುದುಂತ  ಉಂಟಾ ?   ಜಪಾನು  ಸರಕಾರದ   ಅಣು ವಿದ್ಯುತ್  ಸಲಹಾ  ಸಮಿತಿಯಿಂದ  ರಾಜಿನಾಮೆ ಕೊಟ್ಟು  ಇಷಿಬಾಷಿ  ಹೊರನಡೆದರು. 
ಜಪಾನಿನ  ಅಣು ವಿದ್ಯುತ್  ನಡೆದು ಬಂದ ದಾರಿಯುದ್ದಕ್ಕೂ    ಹಲವಾರು  ಕೊರತೆಗಳು  ಮೇಲುನೋಟಕ್ಕೆ ಗೋಚರವಾಗುತ್ತದೆ.  ೨೦೦೨ರಲ್ಲಿ  ತಪ್ಪು ಸುರಕ್ಷಾ  ವರದಿ   ಕೊಟ್ಟ  ಕಾರಣ   ಸರಕಾರ ಫುಕುಶಿಮವೂ  ಸೇರಿದಂತೆ   ಒಟ್ಟು ಹದಿನೇಳು  ಕೇಂದ್ರಗಳ  ತಪಾಸಣೆಗೆ  ನಿಲ್ಲಿಸಿತ್ತು.  ಈಗಲೂ  ಅಪಘಾತಕ್ಕೆ   ಹತ್ತು ದಿನ ಮೊದಲು  ತಾನು  ೩೩  ಜಾಗದಲ್ಲಿ ತಪಾಸಣೆ ನಡೆಸಿಲ್ಲ  ಎಂದು  ಕಂಪೇನಿ   ಒಪ್ಪಿಕೊಂಡಿತ್ತು.   ಅದನ್ನು  ಸರಿಪಡಿಸಲು  ಸರಕಾರ  ಮೂರು ತಿಂಗಳ   ಗಡುವು  ವಿದಿಸಿತ್ತು.    ಆದರೆ  ಜೂನ್ ತಿಂಗಳ ವರೆಗೆ  ಪರೀಸ್ಥಿತಿ  ಮುಂದುವರಿಯಲಿಲ್ಲ.   ಜಪಾನಿನಲ್ಲಿಯೇ  ಹೀಗಾದರೆ  ನಮ್ಮಲ್ಲಿ  ?? 


ಅಣು ವ್ಯವಹಾರ ಯಾವತ್ತೂ  ಗುಪ್ತ  ಚಟುವಟಿಕೆ.   ೧೯೫೭ರಲ್ಲಿ  ರಷ್ಯದಲ್ಲೊಂದು  Kyshtm   ಅಣುಶಕ್ತಿ ಕೇಂದ್ರ ಅಪಘಾತವಾಗಿತ್ತು.  ರಷ್ಯದ ಸರಕಾರ   ಅಲ್ಲಿ   ನೈಸರ್ಗಿಕ ವಲಯವೆಂದು  ಘೋಷಿಸಿ  ಆ  ಮಲೀನತೆ  ಬಾದಿಸಿದ  ಭೂಮಿಯಿಂದ  ಜನರನ್ನು  ಹೊರಗಿಟ್ಟಿತು.  ಭದ್ದ  ವೈರಿಯಾದ  ಅಮೇರಿಕದ    ಗುಪ್ತಚರ ಸಂಸ್ಥೆ  ಸಿಐಎ ಇದರ ಅರಿವಿದ್ದರೂ  ವರ್ದಿಸುತ್ತಿರುವ  ತಮ್ಮ  ದೇಶದ    ಅಣು ಕೈಗಾರಿಕಾ  ಹಿತಾಸಕ್ತಿಗೆ  ಮಾರಕವಾಗುವುದು  ಬೇಡ ಎಂದು  ಗುಟ್ಟಾಗಿರಿಸಿತು.     ಕೊನೆಗೂ  ಇದು ಬೆಳಕಿಗೆ  ಬಂದದ್ದು  ರಷ್ಯದಿಂದ   ಹೊರಬಂದಿದ್ದ   ಒಬ್ಬ    ವಿಜ್ನಾನಿಯು    ಇಪ್ಪತ್ತು  ವರ್ಷ  ಅನಂತರ  ಪ್ರಕಟಿಸಿದ ಪುಸ್ತಕದಿಂದಾಗಿ.     ಅನಂತರ ನಡೆದ  ಅಸಂಖ್ಯ  ಅಪಘಾತಗಳು  ಜನರ ತಿಳುವಳಿಕೆಗೆ ಬರಲೇ  ಇಲ್ಲ. ಜನರ ಅರಿವಿಗೆ ಬಂದದ್ದು  ಕೆಲವು ಮಾತ್ರ.  ಚೆರ್ನೋಬಿಲ್  ಸಹಾ   ಬೆಳಕಿಗೆ  ಬಂದದ್ದು   ಸ್ವೇಡನಿನ  ಅಣು ಶಕ್ತಿ ಕೇಂದ್ರ  ವಿಕಿರಣ  ಗುರುತಿಸಿದ ಕಾರಣ. ಅನಂತರವಷ್ಟೇ    ರಷ್ಯ  ದುರ್ಘಟನೆ ನಡೆದುದಾಗಿ  ಒಪ್ಪಿಕೊಂಡಿತು    ಇದರಲ್ಲಿ  ನಮಗೆ  ಸ್ಪಷ್ಟವಾಗುವ   ವಿಚಾರ  ಎಂದರೆ   ಸಮಸ್ಯೆಗಳ  ಮುಚ್ಚಿ  ಹಾಕುವುದರಲ್ಲಿ  ಎಲ್ಲ ಸರಕಾರಗಲೂ  ಒಂದೇ. ನಮ್ಮ   ಶಾಸಕರು  ತಮ್ಮ  ಸಂಬಳ  ಏರಿಸಲು  ಪಕ್ಷ ಬೇದ ಮರೆತು  ಕೈ ಎತ್ತಿದಂತೆ. 


ಆಸಕ್ತ    ಕು-ತಂತ್ರಿಗಳು  ನಮ್ಮೆಡೆಗೆ   ಅಣುಶಕ್ತಿ ಬಗೆಗೆ   ಹಲವಾರು  ಅರ್ಧ ಸತ್ಯಗಳ ಬಿಸಾಕುತ್ತಲೇ  ಇರುತ್ತಾರೆ.  ಅದರಲ್ಲೊಂದು  ಅಣು  ವಿಕಿರಣ  ಸೂಸುವ  ನೀರು  ಹೊರಬರಲು ಸಾದ್ಯವೇ  ಇಲ್ಲ ಎನ್ನುವುದು.   ಅಣು ಶಕ್ತಿ ಕೇಂದ್ರದಲ್ಲಿ  ಎರಡು ನೀರಿನ   ಚಲಾವಣ   ಚಕ್ರ ಇರುತ್ತದೆ  ಅನ್ನುವುದು  ನಿಜ.  ಮೊದಲನೆಯದು   ಅಲ್ಲಿಯೇ  ಸುತ್ತಾಡುತ್ತಿರುವುದಲ್ಲದೆ  ಹೊರ ಬರುವುದೇ  ಇಲ್ಲ.     ಎರಡನೆಯದು  ಸಮೀಪದಲ್ಲಿರುವ  ನೀರಿನ  ಮೂಲದಿಂದ  ಹೊರಟು  ಉಗಿಯಾಗಿ ಮಾರ್ಪಟ್ಟು   ಟರ್ಬೈನ್   ಯಂತ್ರಗಳ  ತಿರುಗಿಸಿ  ತಣ್ಣಗಾದ ನಂತರ  ಹೊರಟ  ನೀರಿನ ಮೂಲಕ್ಕೆ  ಸೇರುತ್ತವೆ.  ಇವೆರಡೂ ನೀರುಗಳ ಮದ್ಯೆ ಪರಸ್ಪರ ಸಂಬಂದ ಇಲ್ಲ. ಕಾರಿನ  ರೆಡಿಯೇಟರ್ ನೀರು ಮತ್ತು  ಯಂತ್ರ ಸವೆತ  ತಡೆಯುವ ಎಣ್ಣೆ ಪರಸ್ಪರ ಸಂಬಂದಿಸದ ಹಾಗೆ.  ರೆಡಿಯೇಟರ್  ತರಹದಲ್ಲಿಯೇ  ಒಳಗಿನ ನೀರು ಮತ್ತು ಹೊರಗಿನ ನೀರಿನ ಮದ್ಯೆ    ಶಾಖ    ವಿನಿಮಯ.     ಆದರೆ ಇಲ್ಲಿ ಮದ್ಯೆ ಇರುವ  ವಾಶರ್ ಹಾಳಾದರೆ ?  ಇದನ್ನು  ಅಲ್ಲಗಳೆಯುವಂತೆ  ಇಲ್ಲ.   ನಾನೊಬ್ಬ  ಕೃಷಿಕ.  ಪಂಪಿನ  ವಾಶರ್ ಹಾಳಾಗಿ  ನೀರು ಸೋರುವುದರ ಕಂಡವ.  ಅಲ್ಲದೆ  ಸೆಖೆಗಾಲದಲ್ಲಿ ಅಪಾರ  ವಿದ್ಯುತ್  ಬೇಡಿಕೆಯಿರುವಲ್ಲಿ  ಇದಕ್ಕೆ ನೀರನ್ನು ಎಲ್ಲಿಂದ  ತರೋಣ ?
ಉಪಯೋಗಿಸಿದ  ಅಣು  ಇಂದನವನ್ನು  ಏನು ಮಾಡುವುದೆಂದು  ಇನ್ನೂ  ಯಾವ  ದೇಶದ  ವಿಜ್ನಾನಿಗಳಿಗೂ     ತಿಳಿದಿಲ್ಲ.    ಜಪಾನಿನ   ಫುಕುಷಿಮದಲ್ಲೂ  ನಲುವತ್ತು  ವರ್ಷಗಳಿಂದ  ದಾಸ್ತಾನು  ಹೆಚ್ಚುತ್ತಲೇ  ಇದ್ದ  ಇಂದನ   ತ್ಯಾಜ್ಯ  ಈಗ  ಅಪಾಯಕಾರಿಯಾಗಿ  ವಿಕಿರಣ  ಹೊರಹಾಕುತ್ತಿರುವುದು.     ಅಮೇರಿಕದ    ನೂರಕ್ಕೂ  ಹೆಚ್ಚು  ಕೆಂದ್ರಗಳಲ್ಲಿ  ಸುಮಾರು  ಎಪ್ಪತ್ತು  ಸಾವಿರ ಟನ್  ಈ  ಕಲ್ಮಶ   ದಾಸ್ತಾನು ಇರುತ್ತದೆ.  ಬಿಲಿಯಗಟ್ಟಲೆ  ಡಾಲರ್  ಇವುಗಳ  ಭದ್ರತೆಗೆ  ಖರ್ಚು ಮಾಡಲಾಗುತ್ತಿದೆ.      ಈ  ಅಣು ಇಂದನ ನಿರಪಾಯವಾಗಲು ಬೇಕಾಗುವ  ಸಮಯ  ಸುಮಾರು ಹತ್ತು ವರ್ಷದಿಂದ  ಇಪ್ಪತ್ತು  ಸಾವಿರ ವರ್ಷಗಳೆಂದು  ಅಂದಾಜಿಸಲಾಗಿದೆ.  ಅಂದರೆ  ಮುಂದಿನ  ಹತ್ತು    ಸಾವಿರ ವರ್ಷಗಳಿಗೆ   ಭದ್ರತೆ ಬಗೆಗೆ  ನಾವು ತಯಾರಿರಬೇಕಾಗುತ್ತದೆ.  ಕಟ್ಟಲು  ಹತ್ತಾರು  ವರ್ಷ  ಹಾಗೂ  ಅಪಾರ  ಸಾಮುಗ್ರಿ    ಬೇಕಾಗುವ  ಈ  ಅಣುವಿದ್ಯುತ್ ಕೇಂದ್ರಗಳು  ಮಾನವನಿಗೊಂದು  ಶಾಪವೇ  ಸರಿ.  ಅಪಾಯರಹಿತವಾದ  ಅಣುಶಕ್ತಿ  ತಯಾರಕ  ತೊಂಬತ್ತ ಮೂರು ಮಿಲಿಯ  ಮೈಲು ದೂರದಲ್ಲಿರುವ  ಭಗವಾನ್   ಸೂರ್ಯದೇವ  ಮಾತ್ರ.  

Saturday, April 02, 2011

ಕುದಿಯುತ್ತಿರುವ ಪಾತ್ರೆಯಲ್ಲಿ ಕಪ್ಪೆಗಳು ನಾವು

ನಮ್ಮಲ್ಲೀಗ    ಪರೀಸರ  ಮಲೀನತೆ  ಹೆಚ್ಚುತ್ತಿದೆ.  ಭೂಮಿಯ  ವಾತಾವರಣದಲ್ಲಿರುವ   ಇಂಗಾರಾಮ್ಲ  ಪ್ರಮಾಣ  ಹೆಚ್ಚಾಗಿ  ಅಲ್ಲೋಲ ಕಲ್ಲೋಲ ವಾಗುತ್ತಿದೆ.  ಜನ ಮಾತ್ರ   ನಮ್ಮ  ಸ್ವಾರ್ಥ ಸಾಧನೆಯಲ್ಲಿ ನಿರತರಾಗಿ  ಸಮಾಜದ  ಉಳಿವಿನ  ಬಗೆಗೆ  ನಿರ್ಲಪ್ತರಾಗಿದ್ದಾರೆ.  ಕಾರಣ  ಈ  ಬದಲಾವಣೆಗಳು  ನಮ್ಮ ಗಮನಕ್ಕೆ ಬಾರದಷ್ಟು  ನಿದಾನವಾಗಿ  ಸಾಗುತ್ತಿದೆಯೋ ?  ವರ್ಷವೊಂದರಲ್ಲಿ  ಮಿಲಿಯದಲ್ಲಿ   ಎರಡು ಅಂಶ  ಮಾತ್ರ  ಹೆಚ್ಚಿದ್ದಲ್ಲವೇ.  ಅದುದರಿಂದ  ನಮ್ಮ ಜೀವನಾವದಿಯಲ್ಲಿ ಏನೂ  ಆಗುವುದಿಲ್ಲ ಎಂಬ  ಸ್ವಾರ್ಥವೋ ?   



Atmospheric CO2 data

ಇದನ್ನು  ನೋಡುವಾಗ  ನೆನಪಾಗುವುದು   ಈ  ಕಟ್ಟುಕತೆ   [ ವಾಸ್ತವಿಕವಲ್ಲ ].  ಕಪ್ಪೆಯೊಂದನ್ನು  ಕುದಿಯುವ  ನೀರಿಗೆ  ಹಾಕಿದರೆ  ಅದಕ್ಕೆ  ತಕ್ಷಣ  ಬಿಸಿ  ಅರಿವಾಗಿ  ಹೊರಗೆ  ಹಾರುತ್ತದೆ.  ಅದರ ಬದಲಿಗೆ  ತಣ್ಣಿರಿನಲ್ಲಿ  ಕಪ್ಪೆಯಿರಿಸಿ   ನಿದಾನವಾಗಿ  ಉರಿ ಹೆಚ್ಚು ಮಾಡಿದರೆ  ಅದಕ್ಕೆ  ಹೊಂದಿಕೊಳ್ಳುತ್ತಾ   ಹೋಗುವ  ಕಪ್ಪೆ  ಬೆಂದು ಹೋಗುವ  ತನಕ  ಕುಶಿಯಿಂದಲೇ  ಇರುತ್ತದೆ.  ಹಾಗೆ  ಭೂಮಿ  ಬಿಸಿಯೇರುವ  ಲಕ್ಷಣಗಳನ್ನೆಲ್ಲ    ನಿರಾಕರಿಸಿ  ನಾವೂ  ಆರಾಮವಾಗಿದ್ದೇವೆ.  ಕಾಳಜಿ ವ್ಯಕ್ತ ಪಡಿಸುವ ವ್ಯಕ್ತಿ ಉಳಿದವರಿಂದ ಉಗಿಸಿಕೊಳ್ಳುತ್ತಾನೆ.