Friday, July 25, 2008

ಚೆರ್ನೋಬಿಲ್ ಪಾಠ ನಮಗೆ ಪ್ರಸ್ತುತವೇ

ಮೊನ್ನೆ ನಮ್ಮ ನರೇಂದ್ರ ಪತ್ರಿಸಿದ ಅಣು ಸಂಬಂದದ ಬಗ್ಗೆ ನಿಮ್ಮ ಅಬಿಪ್ರಾಯವೇನು ? ಒಳ್ಳೆ ಗೊಂದಲವಾಯಿತಲ್ಲ. ಅಣು ಸಂಬಂದ ಬಗ್ಗೆ ಮಾತನಾಡಲು ನನಗೆ ಪರಿಣಿತಿಯಾಗಲಿ ಸ್ವಾರ್ಥವಾಗಲಿ ಇಲ್ಲದಿರುವಾಗ ನಾನು ಅದರ ಬಗೆಗೆ ಇದುವರೆಗೆ ಅಷ್ಟು ಗಂಬೀರವಾಗಿ ಚಿಂತಿಸಿರಲಿಲ್ಲ ಅದ್ಯಯನ ಮಾಡಿರಲಿಲ್ಲ. ನಾನೇನು ಬರೆಯಲಿ. ಆದರೆ ಈ ಪತ್ರ ಹಲವು ನೆನಪುಗಳ ಚುರುಕು ಮಾಡಿತು.

 ಇಪ್ಪತ್ತು ವರ್ಷ ಹಿಂದೆ ನಾನೊಂದು  ಅಣು ವಿರೋದಿ ಪ್ರತಿಬಟನೆಯಲ್ಲಿ ಬಾಗಿಯಾಗಿದ್ದೆ. ಜರ್ಮನಿಯಲ್ಲಿ ಒಂದು ಉದ್ದೇಶಿತ ಅಣು  ಸ್ಥಾವರದ ವಿರೋದ ಒಂದು ಪ್ರತಿಭಟನೆ ಎರ್ಪಡಿಸಲಾಗಿತ್ತು. ಆಗಷ್ಟೆ ಪರಿಚಿತನಾದ ಅಲ್ಲಿಗೆ ಹೋಗುವ ಗೆಳೆಯ ತೋಮಸ್ ನನ್ನನ್ನೂ ಕರೆದೊಯ್ದ. ಒಂದು ಸ್ಥಾವರದ ಹೊರವಲಯದ ವನದಲ್ಲಿ ಸಂಜೆ ಜನ ಸೇರಿದರು. ರಾತ್ರಿಯಿಡೀ  ಜಾನಪದ   ಸಂಗೀತ ಕಾರ್ಯಕ್ರಮ.  ನಿದ್ದೆ  ಬಂದವರು  ಅಲ್ಲಲ್ಲಿಯೇ  ನಿದ್ರಿಸಿದೆವು.   ಮರುದಿನ   ಬೆಳಗ್ಗೆ   ನಡೆದ ನಮ್ಮ  ಅಂತರಾಷ್ಟ್ರೀಯ   ಪ್ರತಿಬಟನೆಯನ್ನು ಪೋಲಿಸರ ನೀರ ಫಿರಂಗಿ ತೊಯಿಸಿತು.

ನಂತರದ ವಾರ ಎಂದರೆ ಚೆರ್ನೋಬಿಲ್ ದುರಂತದ ಮರುದಿನ ನಾನು ಜರ್ಮನಿಯಲ್ಲಿ ಒಂದು ಡೈರಿಯಲ್ಲಿ ರೈತ ಕುಟುಂಬದೊಂದಿಗೆ  ಬೆಳಗಿನ    ಉಪಹಾರಕ್ಕೆ ಕುಳಿತಿದ್ದೆ. ಆಗ ಆಗಮಿಸಿದ ಸರಕಾರಿ ಅಧಿಕಾರಿಗಳು ಅಣು ವಿಕಿರಣಕ್ಕೆ ಒಳಗಾದ   ಹುಲ್ಲು ಈಗ ದನಗಳು ತಿನ್ನುವುದು ಬೇಡ. ಅದುದರಿಂದ ಒಂದು ವಾರ ದನಗಳ ಹೊರಗೆ ಬಿಡಬೇಡವೆಂದು ವಿನಂತಿಸಿ ಸಾಕಷ್ಟು ಮೇವು ದಾಸ್ತನು ಇರುವುದನ್ನು ಖಚಿತ ಪಡಿಸಿ ಹೋಗಿದ್ದರು. ನಮ್ಮಲ್ಲೂ ದುರಂತಗಳಾಗುತ್ತವೆ. ಸರಕಾರಿ  ಪ್ರತಿಕ್ರಿಯೆ  ??


ಸೈಕಲಿಗ ಗೆಳೆಯ ಫ್ರೆಡ್ ಫೊಲ್ ಅವರೊಂದಿಗೆ ಜರ್ಮನಿಯ ಗೊಟ್ಟಿಂಗನ್ ಪಟ್ಟಣದಲ್ಲಿ ಚರ್ಚಿಗೆ ಹೋಗಿದ್ದೆ. ಅದು ಚೆರ್ನೋಬಿಲ್ ಅಣು ಸ್ಥಾವರದಲ್ಲಿ ನಡೆದ ದುರಂತದ ನಂತರದ ವಾರ. ಅಂದು ಪಾದ್ರಿಗಳು ಜರ್ಮನ್ ಬಾಷೆಯಲ್ಲಿ ಬಹಳ ಚೆನ್ನಾಗಿ ಪ್ರವಚನ ನೀಡಿದರೆಂದು ಫ್ರೆಡ್ ಫೋಲ್ ಅವರು ಅನಂತರ ನನಗೆ ಹೇಳಿದರು. ಸಾವಿರಾರು ಕಿ.ಮಿ.  ಪ್ರವಹಿಸಿದ ಆದರೆ ಕಣ್ಣಿಗೆ ಕಾಣದ ಅಣು ವಿಕಿರಣಕ್ಕೆ ಪಾದ್ರಿಯವರು ನಮ್ಮೆದುರು ಕಾಣದ ದೇವರನ್ನು ಹೋಲಿಸಿದ್ದರಂತೆ.   ಉಪಕರಣಗಳಲ್ಲಿ ಗುರುತಿಸಲು ಸಾದ್ಯವಾದ ವಿಕಿರಣದ ಬಗ್ಗೆ ಅಂದು ಜರ್ಮನಿಯವರು   ತೆಗೆದುಕೊಂಡ ರಕ್ಷಣೋಪಾಯಗಳು ನಮ್ಮಲ್ಲಿ ಸಾದ್ಯವೇ ಇಲ್ಲ ಎಂದರೂ ತಪ್ಪಲ್ಲ.


ಈ ಅಣು ಸಂಬಂದ ಎಂದರೆ  ಒಂದು  ಶಾಶ್ವತ ಬಂದನ. ಈ ಸಂಬಂದದಲ್ಲಿ ಡೈವೋರ್ಸ್ ಎನ್ನುವ ಶಬ್ದವೇ ಇಲ್ಲ. ಅಣು ಸರಣಿ ಪ್ರತಿಕ್ರಿಯ ಮನುಷ್ಯನಿಂದ ಪ್ರಾರಂಬಿಸಲು ಮಾತ್ರ ಸಾದ್ಯ. ಅನಂತರ ಅದು ನಿರಂತರ ವರ್ಷಾನುಗಟ್ಟಲೆ ನಡೆಯುತ್ತಲೇ ವಿಕಿರಣ ಸೂಸುತ್ತಲೇ ಇರುತ್ತದೆ. ಇಂದು ಅಣು ಶಕ್ತಿ ಬಗ್ಗೆ ಮಾಹಿತಿ ದೇಶದ ಹಿತಾಸಕ್ತಿ ಎಂಬ ಪರದೆ ಮರೆಮಾಚಿರುವುದರಿಂದ ನಮ್ಮ ಮುಂದೆ ಸ್ಪಷ್ಟ ಮಾಹಿತಿ ಇರುವುದಿಲ್ಲ. ಇದಕ್ಕೆ ಮಾಡುವ ಖರ್ಚು ಮತ್ತು ವೈಫಲ್ಯಗಳು ನಮ್ಮ ಜನಪ್ರತಿನಿದಿಗಳ ತಿಳುವಳಿಕೆಗೂ ಬರುವುದಿಲ್ಲ. ಎಲ್ಲವೂ ಗುಪ್ತ ಕಡತಗಳಲ್ಲಿ ಹುದುಗಿರುತ್ತದೆ.

ಅಣು ವಿಕಿರಣ ಮಾನವನ ಮೇಲೆ ಬೀರುವ ಪರಿಣಾಮವೇ ನಮಗಿನ್ನೊ ಪೂರ್ತಿ ತಿಳಿಯದು. ಏಡ್ಸ್ ಖಾಯಿಲೆಗೆ ಅಣು ಪ್ರಯೊಗವೇ ಮೂಲ ಎನ್ನುವ ವಾದ ಕಳೆದ ಇಪ್ಪತ್ತು ವರ್ಷಗಳಿಂದಲೂ ಚಾಲ್ತಿಯಲ್ಲಿದೆ. ಸ್ವಾರ್ಥ ಹಿತಾಸಕ್ತಿಗಳಿಗೆ ಇದು ಪ್ರತಿಕೂಲ. ಹಾಗಾಗಿ ಹೆಚ್ಚು ಚರ್ಚೆಗೆ ಪ್ರಚಾರಕ್ಕೆ ಅವಕಾಶವನ್ನೀಯಲಿಲ್ಲ. ಹುಳುಕು ಅರಿತವರೂ ಬಾಯಿ ಬಿಡುವಂತಿಲ್ಲ. ಸೋಲುತ್ತಿರುವ ಜಪಾನಿನ ಮೇಲೆ ಅಣು ಬಾಂಬು ಹಾಕಿದ ಅಮೇರಿಕ ಜನರ ಮೇಲೆ ವಿಕಿರಣದ ಪರಿಣಾಮ ಅರಿಯಲು ಹಲವು ಹಿಂದುಳಿದ ಪ್ರದೇಶಗಳಲ್ಲಿ ದ್ವೀಪಗಳಲ್ಲಿ ವಿಕಿರಣ ಸೂಸುವ ವಸ್ತುಗಳ ಹುದುಗಿಟ್ಟ ದಾಖಲೆಗಳಿವೆ. ಅಣು ವಿಕಿರಣಕ್ಕೆ ಒಳಗಾದ ಜೀವಕೋಶಗಳು ತಮ್ಮ ರೋಗ ನಿರೋದಕ ಶಕ್ತಿಯನ್ನು ಸಂಪೂರ್ಣ ಕಳಕೊಳ್ಳುತ್ತವೆ. ದಿಕ್ಕು ತಪ್ಪಿಸಲು ಏಡ್ಸ್ ಮಂಗನಿಂದ ಆಫ್ರಿಕದ ಮಾನವನಿಗೆ ಎಂಬ ಸೂತ್ರ ತೂರಿ ನಮ್ಮನ್ನೆಲ್ಲ ಮಂಗ ಮಾಡಿದರೋ ?

ಆಂಟಿಬಯಾಟಿಕ್ ಗಳ ಅತೀ ಬಳಕೆ ಸಹಾ ಆರೋಗ್ಯಕ್ಕೆ ಹಾನಿಕರ. ಇವು ದೇಹದೊಳಗೆ ಬಾಂಬು ಹಾಕಿದಂತೆ. ಇವುಗಳು ಉತ್ತಮ ಬ್ಯಾಕ್ಟಿರಿಯಾಗಳು, ಕೆಟ್ಟ ಬ್ಯಾಕ್ಟಿರಿಯಾಗಳೆಂದು ಭಿನ್ನವಿಲ್ಲದೇ ಎಲ್ಲಾ ಬ್ಯಾಕ್ಟಿರಿಯಾಗಳನ್ನು ಕೊಲ್ಲುತ್ತವೆ. ಕ್ರಮೇಣ ದೇಹದ ಸಹಜ ರೋಗನಿರೋಧಕ ಶಕ್ತಿ ಕುಗ್ಗುತ್ತ ಇಲ್ಲವಾಗಿಬಿಡುತ್ತದೆ ಹಾಗೂ ಏಡ್ಸಿಗೆ ಹೋಲುವ ಲಕ್ಷಣಗಳು ವೈದ್ಯಕೀಯವಾಗಿ ಕಾಣಲಾರಂಬಿಸುತ್ತದಂತೆ. ಹೀಗೆ ಏಡ್ಸ್ ರೋಗ  ಅಧುನಿಕ   ವಿಜ್ನಾನದ ಕೊಡುಗೆ ಎನ್ನುವುದನ್ನು ಸಂಪೂರ್ಣ ಅಲ್ಲಗಳೆಯಲು ಸಾದ್ಯವಿಲ್ಲ.  ಇವು ಯಾವುದೂ ನಮ್ಮ ಜನಪ್ರತಿನಿದಿಗಳಿಗೆ ಅರ್ಥವಾಗುವ ವಿಚಾರವಲ್ಲ. ಬಿಡಿ. ಅವರಿಗೆಲ್ಲ ತಮ್ಮದೇ ಆದ ಸ್ವಾರ್ಥ ಹಿತಾಸಕ್ತಿಗಳಿದ್ದು ಎಲ್ಲರೂ ಡೀಲುಗಳಲ್ಲಿ ತೊಡಗಿಸಿಕೊಂಡಿದ್ದರು. ಅದರ ಬೆಲೆಯನ್ನು ಮಾತ್ರ ದೇಶ ಮುಂದೆ ತೆರಬೇಕಾಗುತ್ತದೆ.

ಡಾಬೋಲ್ ವಿದ್ಯುತ್ ಕೇಂದ್ರ ಪ್ರಕರಣದಲ್ಲಿ ಎಲ್ಲ ಪಕ್ಷಗಳೂ ರಾಷ್ಟ್ರೀಯ ಹಿತಾಸಕ್ತಿಯನ್ನು ಬಲಿಕೊಟ್ಟಿದ್ದವು. ಅಮೇರಿಕನರ ಈ ಯೋಜನೆಯಲ್ಲಿ ನಮ್ಮವರಿಗೆ ಅಂದರೆ ರಾಜಕಾರಣಿಗಳಿಗೆ ಮತ್ತು ಅದಿಕಾರಿಗಳಿಗೆ ಕಲಿಸಲೆಂದು (ಲಂಚ ಕೊಡಲೆಂದು) ಪ್ರತ್ಯೇಕ ಹಣ ತೆಗೆದಿರಿಸಿಲಾಗಿತ್ತು. ಜೇಬು ತುಂಬಿಸಿದ ನಂತರ ಸಿದ್ದಾಂತ, ನಿಷ್ಟೆ  ಎಲ್ಲವೂ ಗೌಣವಾಗುವಾಗ ನಮ್ಮ ದೇಶದಲ್ಲಿ ಅಣು ಸ್ಥಾವರ ಹೆಚ್ಚು ಅಪಾಯಕಾರಿ ಅಗಬಲ್ಲದು.


ಕಲ್ಲಿದ್ದಲು, ತೈಲ, ಅಣುಶಕ್ತಿ ಮುಂತಾದವುಗಳು ಪರಿಸರ ಹಾನಿಯುಂಟು ಮಾಡಿ ಪರೋಕ್ಷವಾಗಿ ಈ ಲೋಕದಲ್ಲಿ ಮಾನವನ ಉಳಿವನ್ನೇ ಪ್ರಶ್ನಾರ್ತಕವಾಗಿಡುವ ಶಕ್ತಿ ಮೂಲಗಳು. ಮಾನವ ಚಾಲಿತ ಹಾಗೂ ಸೌರ ಶಕ್ತಿಗಳಂತಹ ಮೂಲಗಳ ಬಗೆಗೆ ನನಗೆ ಹೆಚ್ಚು ಅಬಿಮಾನ.   ನಾನು  ಸಾದ್ಯವಾದಷ್ಟು  ಸೌರ  ಶಕ್ತಿಯನ್ನು  ಬಳಸಿ  ನನ್ನಿಂದಾಗುವ  ಮಾಲಿನ್ಯ  ಕನಿಷ್ಟಗೊಳಿಸಲು  ಪ್ರಯತ್ನಿಸುತ್ತೇನೆ.  ನನ್ನೊಂದಿಗೆ ಪ್ರಪಂಚವನ್ನು ಸುತ್ತಿದ ಸೈಕಲಿನ ಡೈನೆಮೊದಲ್ಲಿ ಅಂಟಿಸಿದ ಚಿತ್ರ ನನ್ನ ನಿಲುವನ್ನು ಹೇಳುತ್ತದೆ Atomic Energy, No thanks.

No comments: