Wednesday, October 27, 2010

ನಾಯಿ ಹೇಲು ವಿಲೆವಾರಿಗೆ ಜಿಪಿಎಸ್ ಬಳಕೆ

ಇತ್ತೀಚಿಗೆ ಹಲವು ವಾರಗಳಿಂದ ಜಿಪಿಎಸ್ ಸಂಬಂದಿಸಿದ ವಿಚಾರಗಳೇ ನನ್ನ ತಲೆಯಲ್ಲಿ ಸುಳಿದಾಡುತ್ತಿದೆ. ಜಿಪಿಎಸ್ ಮಾಪಿನಿಂದ ಸಮಾಜಕ್ಕೆ ಹಲವು ಪ್ರಯೋಜನಗಳಿವೆ., ನಮ್ಮ ದೈನಂದಿನ ಬಳಕೆಗೆ ಮಾತ್ರವಲ್ಲ, ಪೋಲೀಸ್, ಅಗ್ನಿ ಶಾಮಕ ದಳ ಮತ್ತು ತುರ್ತು ವೈದ್ಯಕೀಯ ನೆರವು ದಾವಿಸಲು ಜಿಪಿಎಸ್ ನಕ್ಷೆಗಳು ಸಹಾಯಕವಾಗಬಹುದು ಎನ್ನುವ ವಿಚಾರ ಮನದಲ್ಲಿ ಸುಳಿದಾಡುತಿತ್ತು.     ಆದರೆ -

ಫ್ರಾನ್ಸಿನಲ್ಲಿ ಜಿಪಿಎಸ್ ಬಳಕೆಯಲ್ಲಿ ಹೊಸತನ ತೋರಿದ್ದಾರೆ. ಊರಳಗಿನ ರಸ್ತೆಗಳಿಗೆ ನಾಯಿ ಮಲ ಕೆಟ್ಟ ಹೆಸರು ತರುತಿತ್ತು. ಮುಂದಿನ ೨೦೧೨ರ ಒಲಂಪಿಕ್ ನಡೆಸುವ ಅವಕಾಶ ತಪ್ಪಿದ್ದು ಸಹಾ ನಾಯಿ ಹೇಲಿನಿಂದಾಗಿ ಎನ್ನುವ ಗುಮಾನಿ ದಟ್ಟವಾಗಿದೆ. ನಮ್ಮ ಎರ್ ಬಸ್ ವಿಮಾನ ಗೊತ್ತಲ್ಲ- ಅದು ಜೋಡಣೆಯಾಗುವ ಟೌಲೋಸ್ ಪಟ್ಟಣದಲ್ಲಿ ಇದು ಪ್ರಥಮವಾಗಿ ಜಾರಿಗೆ ಬಂದಿದೆ. ಪೊಲೀಸ್ ಹಾಗೂ ಪಟ್ಟಣದ ಅಧಿಕಾರಿಗಳಿಗೆ ಕೆಮರ ಮತ್ತು ಜಿಪಿಎಸ್ ಕೊಡಲ್ಪಟ್ಟಿತು. ಅವರು ನಾಯಿ ಮಲ ಕಂಡಾಗ ತುರ್ತಾಗಿ ಪೋಟೊ ಕ್ಲಿಕ್ಕಿಸಿ ಪೌರ ಕಾರ್ಮಿಕರಿಗೆ ರವಾನಿಸಬೇಕು. ಪೌರ ಕಾರ್ಮಿಕರು ತಕ್ಷಣ ವಾಹನದಲ್ಲಿ ಬಂದು ಅದನ್ನು ತೆಗೆದುಕೊಂಡು ಹೋಗುವ ವ್ಯವಸ್ಥೆ. ಈಗ ಪರೀಸ್ಥಿತಿ ಉತ್ತಮಗೊಂಡಿದೆ ಎನ್ನುತ್ತಾರೆ ಅಲ್ಲಿನ ವಕ್ತಾರರು.

ಹತ್ತು ದಿನ ಹಿಂದೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಗೆಗೊಂದು ಗೂಗಲ್ ಮಾಪಿನ ತಪ್ಪು ಬೊಟ್ಟುಮಾಡಿದ್ದೆ. ಅದೀಗ ಹೆಚ್ಚಿನಂಶ ಸ್ವಯಂಸೇವಕರೊಬ್ಬರಿಂದ ತಿದ್ದಲ್ಪಟ್ಟಿದೆ. ನನ್ನ ಬ್ಲೋಗ್ ಬರಹದ ಕಾರಣ ಇದ್ದರೂ ಇರಬಹುದು. ಅದರೆ ಗೂಗಲ್ ಸಂಸ್ಥೆಯ ಹಕ್ಕುಗೊಳಪಟ್ಟಿರುವ ಬೂಪಟಕ್ಕೆ ನಮ್ಮ ಸೇವೆ ಸಲ್ಲಿಸುವುದರ ಬದಲಿಗೆ ಸಮಾಜದ ಒಳಿತಿಗಾಗಿ ಸ್ಥಾಪನೆಗೊಂಡಿರುವ ಈ ಒಪನ್ ಸ್ಟ್ರೀಟ್ ಬೂಪಟಕ್ಕೆ ಕೈಜೋಡಿಸಿದರೆ ಉತ್ತಮ ಅನಿಸುತ್ತದೆ. ಗೂಗಲ್ ನಲ್ಲಿ ನಮ್ಮೂರಿನಲ್ಲಿಯೇ ಇನ್ನೂ ಸುಮಾರು ತಪ್ಪುಗಳು ಉಳಿದಿವೆ.

ತಿಂಗಳ ಹಿಂದೆ ಮಂಗಳೂರು ಪುತ್ತೂರು ರಸ್ತೆಗೆ ಸಿಮಿತವಾಗಿದ್ದ ಒಪನ್ ಸ್ಟ್ರೀಟ್ ನಕ್ಷೆಗೆ  ಹಲವಾರು ಉಪಯುಕ್ತ ಒಳರಸ್ತೆಗಳ ಸೇರಿಸಿದ್ದೇನೆ. ಪುತ್ತೂರಿಗೆ ಮಂಗಳೂರು ಹಾಸನ ರಸ್ತೆಯಿಂದ ಬಂದು ಸೇರುವುದು ಒಂದು ಪೆರ್ನೆ ಬನ್ನೂರು ಒಳರಸ್ತೆ. ಉಪ್ಪಿನಂಗಡಿಯಿಂದ ಪುತ್ತೂರು ಇನ್ನೂ ಸಂಪರ್ಕಿಸಿಲ್ಲ. ನಾನು ಎಲ್ಲ ರಸ್ತೆಗಳ ಜಿಪಿಎಸ್ ಟ್ರಾಕ್ ಸಂಗ್ರಹಿಸಿದ್ದು ಟ್ರೈಕ್ ಓಡಾಟದಲ್ಲಿಯೇ.


ಜರ್ಮನಿಯ ಸರಕಾರ ಹತ್ತಿರದ ಓಡಾಟಗಳಿಗೆ ಕಾಲ್ನಡುಗೆ ಮತ್ತು ಸೈಕಲ್ ಗಳನ್ನು ಪ್ರೋತ್ಸಾಹಿಸುತ್ತದೆ. ಬಿತ್ತಿಪತ್ರಗಳು ಸಿನೆಮಾ ಕ್ಲಿಪ್ ಗಳು ತಯಾರಾಗಿವೆ. ಸಿನೆಮಾತಾರೆಯರು ಕ್ರಿಡಾಪಟುಗಳು ಕೈಜೋಡಿಸಿದ್ದಾರೆ. ಜರ್ಮನ್ ಬಾಷೆಯಲ್ಲಿರುವ ಅವರ ಘೋಷವಾಕ್ಯ ಸಾಮಾನ್ಯವಾಗಿ Turn on your brain, turn off your motor , For zero CO2 on short trip ಅನ್ನುತ್ತದೆ. ಅದನ್ನು ಅರ್ಥ ಕೆಡದಂತೆ ಕನ್ನಡಕ್ಕೆ ಅನುವಾದಿಸುವುದು ನನ್ನ ಸಾಮರ್ಥ್ಯಕ್ಕೆ ಮೀರಿದ್ದು. ನನ್ನ ಗಮನಕ್ಕೆ ಬಂದ ಪುಟ್ಟ ಸಿನೆಮಾ ಕ್ಲಿಪ್ ಇಲ್ಲಿ ಅಂಟಿಸಿದ್ದೇನೆ.



ಕಾರಲ್ಲಿ  ಕೂತವನಿಗೆ ......

ಹೆಚ್ಚು  ಅಗಲವಿರುವ  ಮೇಲಿನ ಚಿತ್ರ ನೇರ ವೀಕ್ಷಿಸಲು  http://is.gd/gm4oL  ಕ್ಲಿಕ್ಕಿಸಿ

Friday, October 22, 2010

ಮೂರು ಚಕ್ರದಲ್ಲಿ ಮಂಗಳೂರಿಗೆ

ನಿನ್ನೆ ಮಂಗಳೂರಿಗೆ ಟ್ರೈಕಿನಲ್ಲಿ ಹೋಗಿದ್ದೆ. ೧೬ ಕಿಮಿ ದೂರದ ಬಿ ಸಿ ರೋಡ್ ೪೫ ನಿಮಿಷಗಳಲ್ಲಿ ದಾಟಿದರೆ (ಬಿಸಿ ರಸ್ತೆಯಲ್ಲ, ಬಂಟವಾಳ ಕ್ರಾಸ್ ರೋಡ್ ಅನ್ನುವ ನೇತ್ರಾವತಿ ತೀರದಲ್ಲಿರುವ ಊರು) ಮಂಗಳೂರು ಹೊರವಲಯ ಒಂದು ಘಂಟೆ ಮೂವತ್ತೇಳು ನಿಮಿಷಗಳ ಪ್ರಯತ್ನದಲ್ಲಿ ಒಂದು ಬಾಟರಿಯ ಶಕ್ತಿಯ ಸಹಾಯದಲ್ಲಿ ತಲಪಿದೆ.


ಆ ಬಾಟರಿಯನ್ನು ಅಶೋಕನ ಅಂಗಡಿಯಲ್ಲಿ ಚಾರ್ಜಿಗಿಟ್ಟು ಮಂಗಳೂರು  ಪಟ್ಟಣದೊಳಗಿನ ತಿರುಗಾಟ ಮಾಡಿದೆ. ಅಗತ್ಯವಿರುವಾಗ  ಸುಮಾರು ಇಪ್ಪತ್ತೈದು ಕಿಮಿ ವೇಗ ಸಾದ್ಯವಾಗುವ ಕಾರಣ ಊರೊಳಗಿನ ತಿರುಗಾಟಕ್ಕೆ ಸರಿಸುಮಾರು ಕಾರಿನಷ್ಟೇ ಸಮಯ ಬೇಕಾಗುತ್ತದೆ. ಒಂದು ಪುಟ್ಟ ವಿಡಿಯೊ ತೆಗೆಯಲು ಪ್ರಯತ್ನಿಸಿದ್ದೆ. ಆದರೆ ಕೆಮರಾ ಮತ್ತದರ ಮೌಂಟ್ ಹೊಂದಾಣಿಕೆಯಾಗದೆ ನನ್ನ ತಲೆಯೇ ಚಿತ್ರದ ಅರ್ದ ಬಾಗ ಆವರಿಸುತ್ತದೆ ಎಂದು ತಡವಾಗಿ ಅರಿವಾಯಿತು. ಮೊದಲು ಈ ಕೆಮರಾ ಜತೆಗೆ ಉಪಯೋಗಿಸಿದ ಮೌಂಟ್ ಬೀಜಾಪುರದಿಂದ ಬರುವಾಗ ಬಸ್ಸಿನ ಮೇಲಿನ ಪ್ರಯಾಣದಲ್ಲಿ ಹುಡಿಯಾಗಿತ್ತು. ಮೊದಲೇ ಅರಿವಾಗಿದ್ದರೆ ಮೌಂಟಿನ ಜಾಗ ಬದಲಾಯಿಸುತ್ತಿದ್ದೆ.

ಮದ್ಯಾಹ್ನ ಸುಮಾರು ಮೂರುವರೆಗೆ ಮಂಗಳೂರಿನಿಂದ ಹೊರಟೆ. ವಾಪಾಸು ಬರುವಾಗ ಸ್ವಲ್ಪ ಹೆಚ್ಚು ಅಂದರೆ ಒಂದು ಬಾಟರಿಯ ಪೂರ್ತಿ ಚಾರ್ಜು (೧೦ Ah)   ಉಪಯೋಗವಾಗಿತ್ತು. ಮಂಗಳೂರಿನೊಳಗೆ ಹದಿನೈದು ಕಿಮಿ ಓಡಿಸಿದ ಕಾರಣ (4 Ah)  ಕಲ್ಲಡ್ಕ ದಾಟುವಾಗ ೨೦ Ah ಅಂದರೆ ಎರಡು ಬಾಟರಿಯ ಚಾರ್ಜು ಮುಗಿಸಿದ್ದೆ. ಮನೆಗೆ ತಲಪುವಾಗ ೨೩ Ah ಮುಗಿದಿತ್ತು. ಅಂದರೆ ಮಂಗಳೂರಿನಲ್ಲಿ ಅಶೋಕನ ಅಂಗಡಿಯಲ್ಲಿ ಮಾಡಿದ ಚಾರ್ಜು ನನ್ನನ್ನು ಕಲ್ಲಡ್ಕದಿಂದ ಮನೆಗೆ ತಲಪಿಸಿತು ಅನ್ನಬಹುದು.

ಹಾಗಾದರೆ ಸಲೀಸಾಗಿ ಮಂಗಳೂರಿಗೆ ಒಂದೇ ಬಾಟರಿಯನ್ನು ಅವಲಂಬಿಸಿ ಹೋಗಿ ಅಲ್ಲಿ ಮೂರು ಘಂಟೆ ಚಾರ್ಜಿಗಿಟ್ಟರೆ ಆರಾಮವಾಗಿ ವಾಪಾಸು ಬರಬಹುದು ಅಂದಾಯಿತು. ನಿನ್ನೆ ಕೆಲವೊಮ್ಮೆ ವಿಳಂಬವಾಗಿ GPS on ಮಾಡಿದ ಕಾರಣ ಪೂರ್ತಿ ದೂರ ನಿಖರವಾಗಿ ದಾಖಲಾಗಲಿಲ್ಲ. ಅದುದರಿಂದ ೯೦ ಕಿಮಿ ಮಿಕ್ಕಿದ ದೂರ ಪ್ರಯಾಣ ಮಾಡಿರಬಹುದು ಅನಿಸುತ್ತದೆ.

ಒಟ್ಟು  ೮೫೦ ವಾಟ್ಸ್ ವಿದ್ಯುತ್ ಖರ್ಚು ಅಂದರೆ ಸುಮಾರು ನಾಲ್ಕು ರೂಪಾಯಿ ಬೆಲೆಯ ವಿದ್ಯುತ್ ಬೆಂಬಲ ನನ್ನ ಪ್ರಯಾಣಕ್ಕೆ ಸಾಕಾಯಿತು. ಮನೆ ತಲಪುವಾಗ ನಾಲ್ಕು ಘಂಟೆ ಮೂವತ್ತ ಮೂರು ನಿಮಿಷ ಟ್ರೈಕ್ ಚಾಲನೆ ಮಾಡಿದ್ದೆ. ನಾನು ಕಾರಿನಲ್ಲಿ ಈ ಪ್ರಯಾಣ ಮಾಡಿದರೂ ಸುಮಾರು ಮೂರು ಘಂಟೆ ಬೇಕಾಗುತಿತ್ತು. ಹಾಗಾಗಿ ಟ್ರೈಕ್ ಪ್ರಯಾಣದಿಂದಾಗಿ ಬೇಕಾದ ಹೆಚ್ಚಿನ ಸಮಯ ಸುಮಾರು ಒಂದೂವರೆ ಘಂಟೆ ಮಾತ್ರ. ಇಲ್ಲಿ ನಾನು ಹೇಳಲಿಚ್ಚಿಸುವುದು ಈ ವಿದ್ಯುತ್ ಬೆಂಬಲದ ಪ್ರಯಾಣ ನಮಗೆ ಪ್ರಾಯೋಗಿಕ.

ನಿನ್ನೆಯ ವಿಜಯ ಕರ್ನಾಟಕದಲ್ಲಿ ನನ್ನ ಟ್ರೈಕ್ ಪ್ರವಾಸದ ಬಗೆಗೊಂದು ಬರಹ ಪ್ರಕಟವಾಗಿದೆ.   ಇದಕ್ಕೆ   ಐವತ್- ಮೂರರವ ಮೂರು ಚಕ್ರದ ಮೇಲೆ ಕುಳಿತ ಕಥೆ ವಿಕ ಚೆನ್ನಾಗಿ ಕೊಟ್ಟಿದೆ ಎಂದು ಅಶೋಕವರ್ಧನರು ಪ್ರತಿಕ್ರಿಯಿಸಿದ್ದಾರೆ.  ಸಂಪರ್ಕ ಕೊಂಡಿಗಳು  ಇಲ್ಲಿ ಮತ್ತು   ಇಲ್ಲಿವೆ. 


ಆದರೆ ಬಹಳ ಮುಖ್ಯವಾದ ವಿದ್ಯುತ್ ಬೆಂಬಲದ ಚಾಲನೆಗೆ ಅಗತ್ಯ ಪ್ರಾಮುಖ್ಯತೆ ದೊರಕಲೇ ಇಲ್ಲ ಎನ್ನುವುದು ನನಗೆ ಬಹಳ ಬೇಸರದ ವಿಚಾರ. ಈ ಲೇಖನದಲ್ಲಿ ಅರ್ಥ ಬರುವಂತೆ ಇದೊಂದು ವಿದ್ಯುತ್ ಚಾಲಿತ ವೀಲ್ ಚೇರ್ ಅಲ್ಲ - ವಿದ್ಯುತ್ ಬೆಂಬಲಿತ ಪೆಡಲಿಸುವ ಸೈಕಲ್. ಪ್ರವಾಸದ ಉದ್ದಕ್ಕೂ ಸುಮಾರು ಶೇಕಡಾ ಐವತ್ತು ನೂಕು ಬಲ ನನ್ನ ಕಾಲಿನಿಂದಲೇ ರವಾನೆಯಾಗಿದೆ.

ಮುಂದೆ ಸಾಗಲು ಅಡ್ಡಿಯಾಗುವ ಗಾಳಿಯ ತಡೆಯನ್ನು ಕನಿಷ್ಟಗೊಳಿಸುವ ಆಕಾರ - ರಿಕಂಬಂಟ್ ಅರ್ಥವನ್ನು ಬಾಟರಿ ಚಾಲನೆ ಅಂದಿದ್ದಾರೆ. ನನ್ನ ಅಂಗವಿಕಲತೆಗೆ ಹೆಚ್ಚಿನ ಪ್ರಾಮುಖ್ಯತೆ ದೊರೆತಿದೆ. ಆದರೂ ಒಟ್ಟಿನಲ್ಲಿ ಒಂದು ಹೊಸ ಚಿಂತನೆಗೆ ಅವಕಾಶವನ್ನು ದೊರಕಿಸಿಕೊಡುತ್ತದೆ.

ನಮ್ಮ ನಿತ್ಯದ ಓಡಾಟಕ್ಕೆ ಪರ್ಯಾಯವಾಗಬಲ್ಲ ಮಾನವ ಶ್ರಮ ಮತ್ತು ವಿದ್ಯುತ್ ಬೆಂಬಲ ಸಮ್ಮೀಲನವಾಗುವ ವಾಹನ ಹೊರತು ಇದು ಮೂಸಿಯಂನಲ್ಲಿಡುವ ಯಂತ್ರವಲ್ಲ.    ನಾನು ಮಾಡುತ್ತಿದ್ದೇನೆ,  ಹಾಗಾಗಿ   ಅನುಸರಿಸಿ ಅನ್ನುವ ಅರ್ಥದಲ್ಲಿ ಯಾರಿಗೂ ಇದನ್ನು ಉಪದೇಶಿಸುತ್ತಿಲ್ಲ.     ಪೆಟ್ರೋಲ್ ಬಳಕೆಗೆ ಪರ್ಯಾಯವಾಗಬಲ್ಲ  ಕಾರಣ  ಈ ನಿಟ್ಟಿನಲ್ಲಿ ಚಿಂತಿಸಿ ಎಂದಷ್ಟೇ ವಿನಂತಿಸಿಕೊಳ್ಳುತ್ತೇನೆ. ವಿದ್ಯುತ್ ಬೆಂಬಲಿತ ಚಾಲನೆಯ ಈ ಪರ್ಯಾಯದ ಬಗೆಗೆ ಜನಸಾಮಾನ್ಯರಿಗೆ ಅರ್ಥೈಸಲು ಒಂದು ಉತ್ತಮ ಅವಕಾಶ ತಪ್ಪಿಹೋಯಿತು ಅನ್ನುವ ನಿರಾಶೆ ನನಗೆ.

Saturday, October 16, 2010

ಭೂಪಟಕ್ಕೆ ಮಾಹಿತಿ ಸಂಗ್ರಹ ಟ್ರೈಕ್ ಸವಾರಿಯಲ್ಲಿ

ಇತ್ತೀಚೆಗೆ ಟ್ರೈಕ್ ಪ್ರವಾಸದಿಂದ ವಾಪಾಸಾದ ನಂತರ ಒಮ್ಮೆ http://www.openstreetmap.org/?lat=12.755&lon=75.069&zoom=11&layers=Mಪುಟ ಬಿಡಿಸಿದೆ. ನನಗಾಗ ಕೇರಳದಲ್ಲಿ ಈ ಬಗೆಗೆ ಸಾಕಷ್ಟು ಕೆಲಸ ಆಗಿದೆ ಮತ್ತು ಕರ್ನಾಟಕದ ನಮ್ಮ ಪರೀಸರದಲ್ಲಿ ಶೂನ್ಯ ಸೆರ್ಪಡೆ ಅನ್ನುವಾಗ ಬಹಳ ಬೇಸರವಾಯಿತು. ಚುರುಕಾಗಲು ಪ್ರೇರಣೆ ದೊರಕಿತು.


ಹಾಗೆ ಅನಂತರದ ದಿನಗಳಲ್ಲಿ ನಾನು ಈ ಭೂಪಟದ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಭೂಪಟ ಎಂದರೆ ನನಗೆ ಚಿಕ್ಕಂದಿನಲ್ಲಿಯೇ ಬಹಳ ಅಭಿಮಾನ. ಸೈಕಲ್ ಯಾತ್ರೆ ಸಂಬಂದಿಸಿ ದೆಹಲಿಗೆ  ಹೋದಾಗ ನನಗೆ ಪಿಯುಸಿ ಕಲಿಯುವಾಗ ಸಹಪಾಠಿಯಾಗಿದ್ದ ಅಲ್ಲಿ   ಕಾಣ ಸಿಕ್ಕ ಹಾಗೂ ಅತಿಥೇಯನಾಗಿದ್ದ ಸತ್ಯಪ್ರಕಾಶ ಆಗಾಗಲೇ ಹಲವು ಭೂಪಟಗಳ ಒಟ್ಟುಹಾಕಿದ್ದ. ಮಡುಚುವುದು ಮೊದಲಿನಂತೆಯೇ ಆಗಬೇಕು. ಇಲ್ಲವಾದರೆ ಬೇಗ ಹರಿದುಹೋಗುತ್ತದೆ ಎನ್ನುವ ಕಿವಿಮಾತು ಹೇಳಿಕೊಟ್ಟಿದ್ದ.

ಅನಂತರದ ಸೈಕಲು ಪ್ರವಾಸದಲ್ಲಿ ಒಂದು ರಾಶಿ ಭೂಪಟಗಳ ನಾನೂ ಕಲೆಹಾಕಿದ್ದೆ. ಇಂದಿಗೂ ಹಲವು ದೇಶಗಳ ಭೂಪಟ ನನ್ನ ಹತ್ತಿರವಿದೆ. ಅವುಗಳ ತಿರುವಿಹಾಕುವಾಗ ಆ ಪ್ರದೇಶಗಳ ವಿಚಾರ ಮನಸ್ಸು ಅವರಿಸಿಕೊಳ್ಳುತ್ತದೆ. ಈ ಮದ್ಯೆ ಅಂತರ್ಜಾಲದಿಂದಾಗಿ ಕಾಗದ ಬೂಪಟಗಳು ತನ್ನ ಮಹತ್ವ ಕಳಕೊಂಡವು. ಗೂಗಲ್ ಅಂತರ್ಜಾಲದಲ್ಲಿ ಇಡೀ ಪ್ರಪಂಚದ ಉಪಗ್ರಹ ಬೂಪಟ ಹಾಕಿದ ನಂತರವಂತೂ ಸಮಸ್ಯೆ ಎಲ್ಲ ಪರಿಹಾರ ಎಂದು ಅಂದುಕೊಂಡೆವು.

ಆದರೆ ಗೂಗಲ್ ಹಲವು ಅನಾಹುತಗಳನ್ನೂ ತಂದಿಟ್ಟಿದೆ. ಹಲವು ಜನ ವಾಹನಗಳ ದಾರಿ ತಪ್ಪಿಸಿಕೊಂಡಿದ್ದಾರೆ, ಚೌಗು ಪ್ರದೇಶದ ಮದ್ಯಬಾಗಕ್ಕೆ,   ಪರ್ವತದ ತುದಿಗೆ ತಲಪಿದವರಿದ್ದಾರೆ.   ಮಾತ್ರವಲ್ಲ ಗೂಗಲ್ ಬೂಪಟ ಬಳಸಿ ಪರಲೋಕಕ್ಕೆ ಹೋದವರ ಸಂಖ್ಯೆ ನಗಣ್ಯವಲ್ಲ.       ಇದು copyright ಗೆ ಒಳಪಟ್ಟಿರುವುದರಿಂದ ನಮಗೆ ಸಿಮಿತ ಉಪಯೋಗ. ಅಮೇರಿಕದ ಗೂಗಲ್ ಕಂಪೇನಿಯ  ಅತಿಯಾದ ಅವಲಂಬನೆ ಸಮಾಜದ ಮಟ್ಟಿಗೆ  ಅಪಾಯಕಾರಿ ಬೆಳವಣಿಗೆ. ಎದುರಾಳಿಗಳ ನುಂಗುತ್ತಾ ಬಂದ ಈ ಸಂಸ್ಥೆ ಬವಿಷ್ಯದಲ್ಲಿ ಎಲ್ಲ ಮಾಹಿತಿಜಾಲದ ಮೇಲೆ ಬಿಗಿ ಹಿಡಿತ ಸಾಧಿಸುವ ಲಕ್ಷಣಗಳು ಈಗಾಗಲೇ ಸ್ಪಷ್ಟವಾಗಿ ಗೋಚರಿಸುತ್ತಿವೆ.

ಗೂಗಲ್ ಬಳಸಿದ ಉಪಗ್ರಹ ಚಿತ್ರಗಳು ನಿಜಕ್ಕೂ ಚೆನ್ನಾಗಿವೆ. ಆದರೆ ಅದನ್ನು ಉಪಯೋಗಿಸಿ ಗೀಟು ಎಳೆದ ಬೂಪಟಗಳಲ್ಲಿ ಬಹಳ ತಪ್ಪುಗಳನ್ನು ಕಾಣಬಹುದು. ಅದನ್ನು ನಂಬಿ ಕಾರು ಓಡಿಸಿದರೆ ನಮ್ಮೂರಲ್ಲಿಯೇ ತೋಡಿಗೆ ಇಳಿಯಬಹುದು, ಗುಡ್ಡ ಬೆಟ್ಟ ಹತ್ತಬಹುದು ಏಕೆಂದರೆ ಅದರಲ್ಲಿ ರಸ್ತೆ ಎಂದು ಸೂಚಿಸಿದಲ್ಲಿ ರಸ್ತೆಗಳಿಲ್ಲ. ಇದಕ್ಕೆ  ಉದಾಹರಣೆ ಮೊನ್ನೆ ನಾನು ಸಾಗಿದ ಮಾಣಿ ಉಪ್ಪಿನಂಗಡಿ ಮದ್ಯೆದ ರಾಷ್ಟ್ರೀಯ ಹೆದ್ದಾರಿಯ ಬಾಗ. http://www.everytrail.com/view_trip.php?trip_id=849082 


ಕೆಂಪು ಗೀಟು ಹೆದ್ದಾರಿಯಲ್ಲಿ ನಾನು ಸಾಗಿದ ದಾರಿ. ಹಳದಿ ಗೀಟು ಅವರನ್ನುವ ರಾಷ್ಟ್ರೀಯ ಹೆದ್ದಾರಿ. ಆದರೆ ಅವರು ತಪ್ಪಿ ಬಿದ್ದಿದ್ದಾರೆ ಎನ್ನಲು ಉಪಗ್ರಹ ಚಿತ್ರದಲ್ಲಿರುವ ರಸ್ತೆಗಳ ಗಮನಿಸಿದರೆ ಸಾಕು. ಇದರಲ್ಲಿ default ಆಗಿರುವ hybrid ಬಿಟ್ಟು map ನ್ನು ಕ್ಲಿಕ್ಕಿಸಿದರೆ ಮೇಲ್ಕಾಣಿಸಿದ ಚಿತ್ರ ಸಿಗುವುದು. ನಾನು ಅದರಲ್ಲಿ ಕಾಣಿಸದ ಗ್ರಾಮೀಣ ರಸ್ತೆಯಲ್ಲಿ ಬಂದು ಹೆದ್ದಾರಿ ಸೇರಿದ್ದೆ.


ಜನರೆಲ್ಲ ಕೈ ಜೋಡಿಸಿ ತಯಾರಿಸುವ ಈ ಹಕ್ಕು ಮುಕ್ತ ಬೂಪಟಗಳು ಖಂಡಿತ ನಮ್ಮ    ಸಮಾಜಕ್ಕೆ ಉತ್ತಮ. ನಾವು ತಿದ್ದುಪಡಿ ಮಾಡಬಹುದು ಮಾತ್ರವಲ್ಲ ಇಷ್ಟಬಂದಂತೆ ಬಳಸಿಕೊಳ್ಳಬಹುದು.   http://tools.geofabrik.de/mc/?mt0=mapnik&mt1=googlemap&lon=-0.13434&lat=51.51805&zoom=18 ವನ್ನು ಗಮನಿಸಿದರೆ ಊರವರು ಕೈಜೋಡಿಸಿ ತಯಾರಿಸಿದ ನಕ್ಷೆ ಗೂಗಲಿನಿಂದ ಮಿಗಿಲು ಎನ್ನುವ ವಿಚಾರ ಕಾಣಬಹುದು. ಅದುದರಿಂದ ಸಾರ್ವಜನಿಕರೇ ಸೇರಿ ರೂಪಿಸುವ ಈ ಭೂಪಟದ ಬಗೆಗೆ ಹೆಚ್ಚು ಆಸಕ್ತಿ ಉಂಟಾಯಿತು. ಮುಂದಿನ ದಿನಗಳಲ್ಲಿ ನಮಗೆ ಇದನ್ನು ಮೊಬೈಲ್ ಪೋನಿಗೂ ಇಳಿಸಿಕೊಳ್ಳಲು ಸಾದ್ಯ. ಸ್ವಲ್ಪ ಸಮಯ ಹಿಂದೆ  ವಿಟ್ಲದ  ಬೂಪಟದಲ್ಲಿ  ನಾನು ಸೆರ್ಪಡೆಗೊಳಿಸಿದ  ಮಾಹಿತಿ ಇಲ್ಲಿ  ಕಾಣಬಹುದು.    ಇನ್ನೂ ಅಪಾರ ಕೆಲಸ ಬಾಕಿ ಇರುತ್ತದೆ.  ಗಂಟೆಗಟ್ಟಲೆ  ಒರ್ಕುಟ್ ಮುಂತಾದ  ತಾಣಗಳಲ್ಲಿ  ಕಳೆಯುವ  ಯುವ  ಜನ  ಇಂತಹ  ಕಾರ್ಯದಲ್ಲಿ  ಮಗ್ನರಾದರೆ   ಭೂಗೋಳಶಾಸ್ತ್ರ, ರಚನಾತ್ಮಕ  ಕಂಪ್ಯುಟರ್ ಬಳಕೆ  ಮುಂತಾದ  ಉಪಯುಕ್ತ ವಿಚಾರ  ಅರಿಯಲು  ಸಾದ್ಯ.

ರೋಗಿ ಬಯಸಿದ್ದೂ ವೈದ್ಯರು ಹೇಳಿದ್ದೂ ಒಂದೇ ಎಂಬಂತೆ ಜಿಪಿಎಸ್ ಟ್ರಾಕ್ ಸಂಗ್ರಹ ನನ್ನ ಟ್ರೈಕ್ ಒಡಾಟವನ್ನು ಸದುಪಯೋಗಗೊಳಿಸುವ ದಾರಿ. ಹಾಗೆ ಈ ವಾರ ಗುರುವಾರ ೫೫ ಕಿಮಿ http://is.gd/g3e9i ಮತ್ತು ಶುಕ್ರವಾರ ೬೭ ಕಿಮಿ http://is.gd/g3dWN ಟ್ರೈಕ್ ಸವಾರಿ ಮಾಡಿ ಆ ರಸ್ತೆಗಳ ಜಿಪಿಎಸ್ ಟ್ರಾಕ್ ಸಂಗ್ರಹಿಸಿದ್ದೇನೆ. ಅವುಗಳ ಭೂಪಟಕ್ಕೆ ಸೇರಿಸುವುದು   ಇನ್ನೂ ಬಾಕಿ ಇರುತ್ತದೆ. ಅಂತೂ  ಕೆಲಸ  ಪ್ರಾರಂಬವಾಗಿದೆ. ಹೆಚ್ಚು ಜನ  ಕೈಜೋಡಿಸಿದರೆ  ಹೆಚ್ಚು  ಅರ್ಥಪೂರ್ಣವಾಗಿ  ಈ ಭೂಪಟ   ರೂಪಿಸಬಹುದು  

Saturday, October 09, 2010

ವಿದ್ಯುತ್ ಬೆಂಬಲಿತ ಟ್ರೈಕ್ ಪ್ರವಾಸ

ಇದೊಂದು ಪರಿಸರ ಪೂರಕವಾದ ಪ್ರವಾಸ. ಪ್ರಾಯುಶ: ಪ್ರಥಮ ಬಾರಿಗೆ ಇಷ್ಟೊಂದು ದೀರ್ಘ ಅಂದರೆ ಸಾವಿರದ ಐನೂರು ಕಿಮಿ ವಿದ್ಯುತ್ ಬೆಂಬಲದ ಪ್ರವಾಸ ಬಾರತದಲ್ಲಿಯೇ ಹೊಸ ದಾಖಲೆ ಇರಬಹುದು. ಅಂದಾಜು ಇಪ್ಪತ್ತು ಯುನಿಟ್ ವಿದ್ಯುತ್ ಉಪಯೋಗ. ಮುನ್ನಡೆಯಲು ಮಾನವ ಶ್ರಮ ಸೆರ್ಪಡೆ ಅವಕಾಶವನ್ನೀಯದ ವಿದ್ಯುತ್ ಕಾರುಗಳು ಕನಿಷ್ಟ ಇದರ ಹತ್ತರಿಂದ ಹದಿನೈದು ಪಾಲು ವಿದ್ಯುತ್ ಉಪಯೋಗಿಸುತ್ತದೆ. ಅದುದರಿಂದ ಶಕ್ತಿಯನ್ನು ಅತ್ಯಂತ ಸದುಪಯೋಗಗೊಳಿಸುವ ಸೈಕಲಿಗೆ ಅಳವಡಿಸಿರುವ ಈ ವಿದ್ಯುತ್ ಬೆಂಬಲ ಸಲಕರಣೆ / ವ್ಯವಸ್ತೆ ಕನಿಷ್ಟ ಶಕ್ತಿಯಲ್ಲಿ ಗರೀಷ್ಟ ದೂರ ಕ್ರಮಿಸಲು ಸಹಾಯಕ.

ಖಂಡಿತಾ ಬಾರತಕ್ಕೆ ಇದೊಂದು ಪ್ರಾಯೋಗಿಕ ಪರ್ಯಾಯ. ನಾನು ನನ್ನ ಅರೆ ಅಂಗವಿಕಲತೆಯನ್ನು ಬದಿಗಿರಿಸಿ ದಿನಕ್ಕೆ ನೂರು ಐವತ್ತು ಕಿಮಿ ಸೈಕಲಿಸಿದ್ದೇನೆ ಎಂದರೆ ಹೆಚ್ಚು ಕಮ್ಮಿ ಇದು ಎಲ್ಲರ ಕಾಲಿಗೆಟಕುವ ತಂತ್ರಜ್ನಾನ. ಇಪ್ಪತೈದು ವರ್ಷ ವಯಸ್ಸಿರುವಾಗ ಪ್ರಪಂಚಕ್ಕೊಂದು ಸುತ್ತು ಬರುವ ಕಾಲದಲ್ಲಿ ನೂರ ಐವತ್ತರಿಂದ ಇನ್ನೂರು ಕಿಮಿ ಸಲೀಸಾಗಿಯೇ ಕ್ರಮಿಸಿದ್ದೆ. ಆದರೆ ಈಗ ಕ್ರಮಿಸಲು ಸಾದ್ಯವಾದುದು ಈ ವಿದ್ಯುತ್ ಬೆಂಬಲದ ವ್ಯವಸ್ಥೆಯಿಂದಾಗಿ. ಸೈಕಲಿಗಾಗಿ ಅಭಿವೃದ್ದಿ ಹೊಂದಿದ ಈ ಬೆಂಬಲ ವ್ಯವಸ್ತೆಯನ್ನು ಪ್ರಪಂಚದಲ್ಲಿ ಎಲ್ಲೂ ಟ್ರೈಕಿಗೆ ಅಳವಡಿಸಿ ದೀರ್ಘ ಪ್ರವಾಸ ಕೈಗೊಂಡ ಬಗೆಗೆ ಸುಳಿವುಗಳು ದೊರಕುವುದಿಲ್ಲ. ವಿದ್ಯುತ್ ಬೆಂಬಲದ ಟ್ರೈಕ್ ಪ್ರವಾಸ ಇದುವೇ ಪ್ರಥಮ ಅನಿಸುತ್ತದೆ.

ಶಕ್ತಿಯ ಉಪಯೋಗಕ್ಕೆ ಅರ್ಥಾತ್ ಮೈಲೇಜ್ ಲೆಕ್ಕಾಚಾರಕ್ಕೆ ಅಂತರ ಮಾತ್ರ ಲೆಕ್ಕವಲ್ಲ. ಎದುರಿಸಬೇಕಾದ ಮಳೆ ಹಾಗೂ ಬಿಸಿಲು, ತಡೆಯುಂಟು ಮಾಡುವ ಗಾಳಿ ಮತ್ತು ರಸ್ತೆಯ ಏರಿಳಿತಗಳು ಇದರಲ್ಲಿ ಗಣನೀಯ ಪಾತ್ರ ವಹಿಸುತ್ತದೆ. ವಿಪರೀತ ಶಕ್ತಿಯುತ ಯಂತ್ರ ಹೊಂದಿದ ಹಡಗಿನಂತಹ ಕಾರುಗಳಲ್ಲಿ ಇವು ನಗಣ್ಯವಾಗಿರಬಹುದು. ಆದರೆ ನನ್ನ ಪ್ರವಾಸದಲ್ಲಿ ಇವು ಕೆಟ್ಟಿರುವ ರಸ್ತೆಗಳ ಜತೆ ಸೇರಿ ದೊಡ್ಡ ತಡೆಯನ್ನೇ ಉಂಟು ಮಾಡಿದ್ದವು. ಪರಿಣಾಮ ಸಂಜೆಗಾಗುವಾಗ ಕ್ರಮಿಸುವ ಅಂತರ ಯೋಜನೆಯಿಂದ ಹೆಚ್ಚು ಕಡಿಮೆ ಆಗುತ್ತಲಿತ್ತು. ಇವುಗಳ ಒಟ್ಟು ಪರಿಣಾಮದಿಂದಾಗಿ ವಸತಿಗೃಹವಿಲ್ಲದ ಕವಲಂದೆಯಲ್ಲಿ ಅರಕ್ಷಕ ಠಾಣೆಯ ಆಶ್ರಯ ಸಿಕ್ಕಿದ್ದು ನನ್ನ ಸೌಭಾಗ್ಯ. ಇಂತಹ ಅನಿರೀರ್ಕ್ಷಿತ ಸನ್ನಿವೇಶಗಳಿಗೆ ಸಾದ್ಯವಾದಷ್ಟು ತಯಾರಿಮಾಡಿಕೊಂಡ ಕಾರಣ ಮಲಗಿಕೊಳ್ಳುವ ಸುರುಳಿ ಚಾಪೆ ನನ್ನಲ್ಲಿಯೇ ಇತ್ತು.

ಓಡುವುದರಿಂದ ಹೆಚ್ಚಿನ ವೇಗದಲ್ಲಿ ಚಲಿಸುವಾಗ ಸೈಕಲು ಸೇರಿದಂತೆ ಎಲ್ಲವಾಹನಗಳಿಗೂ ಗಾಳಿ ತಡೆಒಡ್ಡುತ್ತದೆ. ಗಾಳಿ ಎದುರಿಸುವ x section ಕಡಿಮೆಯಾಗುವ ಕಾರಣ ಈ ರಿಕಂಬಂಟ್ ಸೈಕಲು ಯಾ ಟ್ರೈಸಿಕಲುಗಳು ಕಡಿಮೆ ಶಕ್ತಿಯಲ್ಲಿ ಹೆಚ್ಚು ವೇಗವಾಗಿ ಚಲಿಸುತ್ತದೆ. ಪೂರಕವಾಗುವಂತೆ ವಿದ್ಯುತ್ ಬೆಂಬಲ ಅಳವಡಿಸಿದರೆ [ ತುಳಿಯುವ ಮಟ್ಟಿಗೆ ] ಗುಡ್ಡ ಬೆಟ್ಟಗಳು ಸಮತಟ್ಟಾಗುತ್ತವೆ. ಮುಖದಲ್ಲಿ ಮುಗುಳ್ನಗೆ ಮಾಸಬೇಕಾಗಿಲ್ಲ. ಸೌರ ಫಲಕಗಳ ಅಳವಡಿಸುವ ಯೋಜನೆ ಇದ್ದರೂ ಪ್ರಾಯೋಗಿಕ ಕಾರಣಗಳಿಂದ ಅದನ್ನು ಕೈಬಿಟ್ಟೆ. ನನಗೆ ಕಳೆದ ಪ್ರವಾಸ ಕಾಲದಲ್ಲಿ ಮೋಡ ಕವಿದ ವಾತಾವರಣವೇ ಹೆಚ್ಚು ಸಿಕ್ಕ ಕಾರಣ ಗಣನೀಯ ವಿದ್ಯುತ್ ತಯಾರಿಯಾಗುತ್ತಿರಲಿಲ್ಲ. ಅದುದರಿಂದ ಉಂಟಾಗಬಹುದಾದ ಗಾಳಿಯ ತಡೆ ತಯಾರಾಗಬಹುದಾದ ವಿದ್ಯುತ್ತಿನಿಂದ ಹೆಚ್ಚಾಗುತಿತ್ತು. ಎರಡನೆಯ ಚಾರ್ಜಿಂಗ್ ಅವಕಾಶ ಎಂದರೆ ಇಳಿಜಾರಿನಲ್ಲಿ ಅಥವಾ ಬ್ರೇಕ್ ಹಾಕುವಾಗ ಸಹಾ ಹೆಚ್ಚು ತೂಕವಿಲ್ಲದ ಕಾರಣ ಡೈನೆಮೊ ಅಳವಡಿಕೆ ಹೆಚ್ಚಿನ ಪ್ರಯೋಜನ ಸಿಗುತ್ತಿರಲಿಲ್ಲ.

ಮದ್ಯಾಹ್ನದ ಊಟ, ಸ್ವಲ್ಪ ಜನಸಂಪರ್ಕ ಮತ್ತು ಬಾಟರಿ ಚಾರ್ಜ್ ಇವು ಮೂರನ್ನೂ ಜತೆಯಾಗಿ ಹೊಂದಿಸಿಕೊಳ್ಳುವುದು ನನ್ನ ಚಿಂತನೆಯಾಗಿತ್ತು. ಆದರೆ ಎಲ್ಲವೂ ನಾನೇ ಮಾಡಬೇಕಾದ ಕಾರಣ ಇವುಗಳ ಕಾರ್ಯಗತಗೊಳಿಸಲು ಸಾದ್ಯವಾಗಲಿಲ್ಲ. ಹಲವು ಬಾರಿ ಮದ್ಯಾಹ್ನದ ಚಾರ್ಜಿಗಾಗಿ ಊಟವನ್ನೂ ತ್ಯಜಿಸಬೇಕಾಯಿತು.

ಜನರಿಗೆ ಈ ಕಲ್ಪನೆ ತೀರಾ ಹೊಸದು. ಸೊಲಾರ್, ರಿಮೋಟ್, ಪೆಟ್ರೊಲ್ ಎಂದೆಲ್ಲ ಪ್ರಶ್ನಿಸುವ ಜನಕ್ಕೆ ನಾನು ತುಳಿಯುವುದೂ ಕಾಣುವುದಿಲ್ಲವೆನೋ ? ಮೇಲ್ನೋಟಕ್ಕೆ ವಿದ್ಯಾವಂತರು ಅನಿಸಿಕೊಂಡವರಿಂದ ಸಹಾ ಹಲವಾರು ಅರ್ಥಹೀನ ಪ್ರಶ್ನೆಗಳು ಕೇಳಲ್ಪಡುತ್ತಿದ್ದೆ. ಈ ಅಸಂಬದ್ದ ಪ್ರಶ್ನೆಗಳು ಚರ್ಚೆಯ ಹಳಿ ತಪ್ಪಿಸುತ್ತದೆ. ಅದುದರಿಂದ ಅರ್ಥಪೂರ್ಣ ಸಂವಾದಕ್ಕೆ ಅವಕಾಶ ಬಹಳ ಕಡಿಮೆಯಾಗಿತ್ತು. ಇವರಿಗೆ ಅರ್ಥೈಸುವುದು ಪ್ರವಾಹದ ವಿರುದ್ದ ಈಜಿನಂತೆ. ಕಣ್ಣಿಗೆ ಕಾಣದ ಪರೀಸರ ಮಲೀನತೆ, ಅಪಾರ ಹಣ ಖರ್ಚುಗಳು ಇವರ ಚಿಂತನೆಗೆ ನಿಲುಕುವುದಿಲ್ಲ. ಆಸಕ್ತರಿಗೆ ಹಂಚಲು ಪುಟ್ಟದೊಂದು ಕರಪತ್ರ ನನ್ನಲ್ಲಿತ್ತು. ಅನಾವಶ್ಯಕ ಚರ್ಚೆಯಲ್ಲಿ ಸಿಲುಕಿಕೊಳ್ಳದೆ ನನ್ನ ದ್ಯೇಯ ದೋರಣೆಗನುಸಾರವಾಗಿ ಉಪಯುಕ್ತವೆನಿಸುವ ಹಾದಿಯಲ್ಲಿ ಸಾಗುವುದು ನನ್ನ ಜಾಯಮಾನ. ಸವೆಯದ ಹಾದಿಯೆಂದರೆ ಟೀಕೆಗಳು ಸಾಮಾನ್ಯ. ಹಾಗೆ ಇಲ್ಲೂ ಜನರ ಸ್ಪಂದನೆ ಮತ್ತು ನನ್ನ ನಡುವಳಿಕೆ ಪರಸ್ಪರ ಹೊಂದಾಣಿಕೆಯಾಗುವುದಿಲ್ಲ.

ಎಲ್ಲೆಡೆಯಲ್ಲೂ (ತಮಿಳುನಾಡು , ಕರ್ನಾಟಕ ಹಾಗೂ ಮಹಾರಾಷ್ಟ್ರ ) ವಿದ್ಯುತ್ ಕಡಿತ ನನ್ನ ಸಾಧನೆಗೆ ಬಹು ದೊಡ್ಡ ಅಡ್ಡಿಯಾಗಿತ್ತು. ಕರ್ನಾಟಕದ ನಾಲ್ಕು ಕಡೆಗಳಲ್ಲಿ ಕನಿಷ್ಟ ಕಡಿತವಿರುವ ವಿದ್ಯುತ್ ಇಲಾಖೆ ಕಛೇರಿ ಹಾಗೂ ನಿಯಂತ್ರಣ ಕೇಂದ್ರಗಳಲ್ಲಿ ನನಗೆ ಚಾರ್ಜಿಂಗ್ ಸಹಾಯ ದೊರಕಿತ್ತು. ಹಲವು ಕಡೆ ದಿನದ ಮದ್ಯೆ ವಿದ್ಯುತ್ತಿಗಾಗಿ ಕಾಯುವ ಸನ್ನಿವೇಶದಿಂದ ಸಮಯ ಪೋಲು. ಇಂತಹ ವಾಹನದಲ್ಲಿ ಊರೊಳಗಿನ ಒಡಾಟಕ್ಕೆ ವಿದ್ಯುತ್ ನಿಲುಗಡೆ ಸಮಯದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದು. ಆದರೆ ಇಂತಹ ದೀರ್ಘ ಪ್ರವಾಸಕ್ಕಾಗುವಾಗ ಮುಂದಿನ ಊರಿನಲ್ಲಿ ವಿದ್ಯುತ್ ಇದೆಯೋ ಎನ್ನುವುದು ಗೊತ್ತಿಲ್ಲದೆ ಕಷ್ಟವಾಗುತ್ತದೆ.



ಬೀಜಾಪುರದಲ್ಲಿ ದೊರೆತಂತಹ ವಸತಿ ಗೃಹ ದೊರೆತರೆ ಕನಿಷ್ಟ ಒಂದು ಘಂಟೆಗೆ ಮಿಕ್ಕಿ ಉಳಿತಾಯ. ತಳಮಹಡಿಯಲ್ಲಿ ರೂಮು ಮತ್ತು ಪಕ್ಕದಲ್ಲಿಯೇ ಹೊಟೇಲು ನನ್ನ ಸಮಯ ಹಾಗೂ ಶ್ರಮ ಬಹಳಷ್ಟು ಉಳಿಸುತ್ತದೆ. ಹೆಚ್ಚಿನ ವಸತಿ ಗೃಹ ಎಂದರೆ ಉಪ್ಪರಿಗೆಯಲ್ಲಿ ರೂಮುಗಳು ಮಾತ್ರ. ತಮಿಳುನಾಡಿನ ಉದ್ದಕ್ಕೂ ಸಿಕ್ಕ ವಸತಿ ಗೃಹಗಳಲ್ಲಿ ನಾನು ಅಂದರೆ ನನ್ನ ದೇಹ ಬೆಳಗಿನ ಸ್ನಾನಕ್ಕೆ ಇಷ್ಟ ಪಡುವ ಬಿಸಿನೀರು ಒಮ್ಮೆಯೂ ದೊರಕಿರಲಿಲ್ಲ. ಪ್ರತಿ ರಾತ್ರಿ ಉಪ್ಪರಿಗೆಗೆ ನನ್ನ ಚೀಲಗಳ ಜತೆಗೆ ಬಾಟರಿ ಹೊರುವುದು ಹಾಗೂ ಆಹಾರ ಒದಗಿಸಿಕೊಳ್ಳುವುದು ಎಲ್ಲವೂ ನನ್ನ ದುರ್ಬಲ ದೇಹಕ್ಕೆ ಒತ್ತಡ ಉಂಟುಮಾಡುವಂತಹದಾಗಿತ್ತು.

ದಿನವೂ ಜಿಪಿಎಸ್ ಟ್ರಾಕ್ ನ್ನು ಅದರ ಪುಟಕ್ಕೆ ಹಾಕಲು ಮತ್ತು ಪುಟ್ಟ ವರದಿ ಹಾಗೂ ಚಿತ್ರಗಳ ಸಿದ್ದ ಪಡಿಸಿ ಅವುಗಳನ್ನು ಜಾಲತಾಣಕ್ಕೆ ಹಾಕಲು ಕನಿಷ್ಟ ಎರಡು ಘಂಟೆಗಳ ಕಾಲ ಬೇಕಾಗುತಿತ್ತು. ವಿಡಿಯೊ ಚಿತ್ರಗಳ ಸಂಕಲನ ಬಹಳ ಸಮಯ ಬೇಡುತ್ತದೆ. ಕೊನೆಗೆ ಆಯಲು ಸಿಗುವುದು ಅದರಲ್ಲಿ ಪುಟ್ಟ ತುಣುಕು ಮಾತ್ರ. ಅದರಿಂದಾಗಿ ನನ್ನ ನಿದ್ದೆಯ ಸಮಯಕ್ಕೆ ಕತ್ತರಿ ಬೀಳುತಿತ್ತು. ದಿನಗಳೆದಂತೆ ಈ ನಿದ್ದೆ ಸಾಲ ಹೆಚ್ಚುತ್ತಾ ಹೋಗಿ ದೇಹದ ಮೇಲೆ ದುಷ್ಪರಿಣಾಮ ಬೀಳುತ್ತದೆ.

ದಿನವೊಂದಕ್ಕೆ ಅತಿ ಹೆಚ್ಚು ದೂರ ಕ್ರಮಿಸಿದ್ದು ೧೫೫ ಕಿಮಿ. ಮರುದಿನ ಡಿಂಬಂ ಘಾಟಿ ಏರಲಿರುವುದರಿಂದ ಅದಕ್ಕೆ ಸಮೀಪದ ಪಟ್ಟಣ ಸತ್ಯಮಂಗಲದಲ್ಲಿಯೇ ಉಳಕೊಳ್ಳಲು ಮಳೆ ಬರುತ್ತಾ ಇದ್ದರೂ ಲೆಕ್ಕಿಸದೆ ಸಂಜೆ ಆರೂವರೆ ವರೆಗೆ ಪೆಡಲಿಸಿದ್ದೆ. ಉಳಿದ ದಿನಗಳಲ್ಲಿ ಸರಾಸರಿ ೧೨೦ ಕಿಮಿ ಎನ್ನಬಹುದು. ಕೊನೆಗೆ ಮಹಾರಾಷ್ಟ್ರದ ಗಡಿಯಾಚೆ ನನ್ನ ವಿದ್ಯುತ್ ನಿಯಂತ್ರಕ ತುಂಡಾಗಿ ಬಂದ ಕಾರಣ ಅನಿರೀಕ್ಷಿತವಾಗಿ ಪ್ರವಾಸ ಕೊನೆಗೊಳಿಸಬೇಕಾಯಿತು.

ಪ್ರವಾಸದ ಸಮಯದಲ್ಲಿ ಮಾದ್ಯಮಗಳಿಗೆ ಹೆಚ್ಚು ತೆರೆದುಕೊಳ್ಳದಿರಲು ಕಾರಣ ನನ್ನ ಟ್ರೈಕ್ ಲಕ್ಷಾಂತರ ರೂಪಾಯಿ ಬೆಲೆಬಾಳುವಂತದ್ದು ಎಂದು ತಿಳಿದರೆ ಉಪಕಾರದಿಂದ ತೊಂದರೆಯೇ ಹೆಚ್ಚು. ಹಾಗೆಂದು ಸಹಾಯ ಒದಗಿಸಿಕೊಳ್ಳುವ ಸಾದ್ಯತೆ ತೀರಾ ಕಡಿಮೆ. ಒಂದೆರಡು ಬಾರಿ ಸುತ್ತುವರಿದ ಮೂರ್ಖರ ಕೈಚಳಕ ನನ್ನ ಅಪಾಯಕರ ಸ್ಥಿತಿಗೆ ತಲಪಿಸಿದೆ. ಒಳ್ಳೆಯವರು ಪ್ರೇಕ್ಷಕರಾಗಿ ಉಳಿದರೆ ದುಷ್ಟರು ಚುರುಕಾಗುವ ಸಮಾಜ ನಮ್ಮದು. ನಿಜ, ಪಟ್ಟಣಗಳಲ್ಲಿ ವಸತಿ ಗೃಹ ನಿರ್ಣಯವಾದ ನಂತರ ಅವರು ನನಗೆ ಭದ್ರತೆ ಒದಗಿಸಿದ್ದಾರೆ ಅನ್ನುವುದು ಸಂತಸದ ವಿಚಾರ. ಆದರೆ ಅಪರಿಚಿತ ಪಟ್ಟಣಗಳಲ್ಲಿ ಸಂಜೆ ರಸ್ತೆಗಳಲ್ಲಿ ವಾಹನ ಜನದಟ್ಟಣೆ ಇರುವಾಗ ವಸತಿ ಗೃಹ ಹುಡುಕಾಡುವುದೂ ಕಷ್ಟದ ವಿಚಾರವಾಗುತಿತ್ತು.

ಹಲವಾರು ಕಡೆಗಳಲ್ಲಿ ಐವತ್ತು ಕಿಮಿ ವೇಗದಲ್ಲಿ ಇಳಿಜಾರಿನಲ್ಲಿ ಕೆಳ ಸಾಗುವಾಗ ಬಹಳ ರೋಮಾಂಚನಕಾರಿ ಅನುಭವ. ಅತಿ ದೊಡ್ಡ ಘಾಟಿ ರಸ್ತೆ ಸಿಕ್ಕಿದ್ದು – ಬನ್ನರಿ / ಡಿಂಬಂನಲ್ಲಿ. ವೈಜ್ನಾನಿಕವಾಗಿ ರೂಪಿಸಿದ ಅಗಲವಾದ ಮತ್ತು ಉತ್ತಮ ಪದರ ಹೊಂದಿದ್ದರಿಂದ ನನಗೆ ಅಷ್ಟೊಂದು ಶ್ರಮದಾಯಕ ಅನಿಸಿರಲಿಲ್ಲ. ಆದರೆ ಕರ್ನಾಟಕದಲ್ಲಿ ಅಲ್ಲಲ್ಲಿ ಕೃತಕವಾಗಿ ನಿರ್ಮಿಸಿದ ರಸ್ತೆ ಉಬ್ಬುಗಳು ಮತ್ತು ಗುಂಡಿ ಬಿದ್ದ ಹಾಳಾದ ರಸ್ತೆಗಳಲ್ಲಿ ವೇಗವನ್ನು ಪೂರ್ತಿ ಕಳಕೊಳ್ಳಬೇಕಾದ ಕಾರಣ ಶ್ರಮ ಹಾಗೂ ಸಮಯ ವಿಪರೀತ ಪೋಲಾಗುತ್ತಿತ್ತು. ಹೊಸಪೇಟೆ ಸಮೀಸುವಾಗ ಸಿಕ್ಕ ೧೫ ಕಿಮಿ ಸಂಪೂರ್ಣ ಕಿತ್ತು ಹೋದ ರಸ್ತೆಯಲ್ಲಿ ವಿರೂಪಗೊಂಡ ಅಕಾರದ ಮೈನು ಲಾರಿಗಳು ಸೃಷ್ಟಿಸುವ ಭಯಾನಕ ಸನ್ನಿವೇಶ ಮರೆಯಲಾಗದು. ನಾನು ಕೊನೆ ಘಳಿಗೆಯಲ್ಲಿ ನಿರ್ಣಯಿಸಿದಂತೆ ಕೇರಳದ ಬದಲು ತಮಿಳ್ನಾಡಿನಲ್ಲಿ ಉತ್ತರಕ್ಕೆ ಸಾಗಿದ್ದು ಒಳ್ಳೆಯದಾಗಿತ್ತು. ಅಲ್ಲಿನ ರಸ್ತೆಗಳು ಉದ್ದಕ್ಕೂ ತುಂಬಾ ಚೆನ್ನಾಗಿದ್ದವು.

ನನ್ನ ಕಾಲನ್ನು ಪೆಡಲಿಗೆ ಬಿಗಿಯಾಗಿ ಹಿಡಿದುಕೊಳ್ಳಲು ವ್ಯವಸ್ತೆಯಿತ್ತು. ಇದರಿಂದಾಗಿ ಪಕ್ಕನೆ ಎದ್ದು ಬರಲು ಸಾದ್ಯವಾಗದಂತಿದ್ದರೂ ಪೆಡಲಿನಿಂದ ಕಾಲು ಕಳಚಿಕೊಂಡರೆ ಗಾಯವಾಗುವ ಸಾದ್ಯತೆ ಬಹಳ ಕಡಿಮೆ. ಇದರಿಂದಾದ  ಒಂದು  ಸಮಸ್ಯೆ  ಎಂದರೆ  ಹೊಸ  ಊರುಗಳಲ್ಲಿ  ಅಪರಿಚಿತರಲ್ಲಿ    ಕೆಮರ ಕೊಟ್ಟು  ಪೋಟೊ  ತೆಗೆಯಪ್ಪಾ... ಎನ್ನಲು  ದೈರ್ಯ  ಸಾಲಲಿಲ್ಲ.     ಕಾಲಿನಿಂದ ಪೆಡಲ್ ತಳ್ಳುವಾಗಲೂ ಹಿಂದಕ್ಕೆ ಎಳೆಯುವಾಗಲೂ ನಮ್ಮ ಶಕ್ತಿ ವಾಹನವನ್ನು ಮುಂದಕ್ಕೆ ತಳ್ಳುವ ಕಾರಣ ಈ ವ್ಯವಸ್ತೆ ನಮ್ಮ ಶ್ರಮವನ್ನು ಹೆಚ್ಚು ಸದುಪಯೋಗಗೊಳಿಸುತ್ತದೆ. ಸಾಮಾನ್ಯವಾಗಿ ಪೆಡಲಿನ ಹಿಂದಿನ ಚಲನೆಯಲ್ಲಿ ಕಾಲು ತಪ್ಪದಂತೆ ಬಿಗಿಯಾಗಿ ಹಿಡಿದುಕೊಳ್ಳುವ ಮೂಲಕ ತಿರುಗುವ  ಪೆಡಲಿಗೆ   ನಾವೇ ತಡೆ ಉಂಟುಮಾಡುತ್ತೇವೆ.

ಸುಮಾರು ನೂರು ವರ್ಷ ಹಿಂದೆಯೇ ಏಳು ಯುನಿಟ್ ಬಾಟರಿ ಚಾರ್ಜಿನಲ್ಲಿ ನೂರು ಕಿಮಿ ಕಾರು ಚಲಿಸಿತ್ತು. ಇಂದಿನ ಕಾರುಗಳೂ ಹೆಚ್ಚು ಶಕ್ತಿದಾಯಕ ಯಂತ್ರಗಳು ಮತ್ತು ಹೆಚ್ಚಿರುವ ಬಾರದಿಂದಾಗಿ ನೂರು ಕಿಮಿಗೆ ಏಳು ಯುನಿಟ್ ಗಿಂತಲೂ ಹೆಚ್ಚು ಶಕ್ತಿ ಖರ್ಚು ಮಾಡುತ್ತದೆ. ಅರುವತ್ತು ಕಿಮಿ ವೇಗದ ನೂರು ಕಿಮಿ ಒಮ್ಮೆಗೆ ಕ್ರಮಿಸಲು ಸಾದ್ಯವಾಗುವ ಉತ್ತಮ ವಿದ್ಯುತ್ ವಾಹನಗಳ ಸ್ಪರ್ದಾತ್ಮಕ ಬೆಲೆಗೆ ಇಂದು ತಯಾರಿಸಲು ಸಾದ್ಯವಾಗುವುದಾದರೂ ಅವರ ಪೂರ್ವಾಗ್ರಹಗಳಿಗೆ ತರ್ಕಗಳಿಗೆ ತಯಾರಕರು ಜೋತು ಬಿದ್ದಿದ್ದಾರೆ. ಹಾಗೆಯೇ ಪ್ರತಿ ವರ್ಷ ವಿದ್ಯಾರ್ಥಿಗಳಿಂದ ಪ್ರೋಜೆಕ್ಟ್ ವರ್ಕ ಮಾಡಿಸುವ ತಾಂತ್ರಿಕ ಕಾಲೇಜುಗಳೂ ಇವುಗಳ ನಿರ್ಲಕ್ಷಿಸಿರುವುದು ಖೇದಕರ.

ಕಳೆದ ವರ್ಷ ಮಾದ್ಯಮದಲ್ಲಿ ಬಾರತಿಯ ವಿಜ್ನಾನಿಗಳು ರೂಪಿಸಿದ ಸೌರ ರಿಕ್ಷ ಬೆಳಕು ಕಂಡಿತ್ತು. ದೆಹಲಿಯ ಮಂತ್ರಿಗಳು ಅದರ ಜತೆ ಚಿತ್ರ ತೆಗಿಸಿಕೊಂಡದ್ದು ಮತ್ತು ಬಡ್ಜೇಟಿನಲ್ಲಿ ಉಲ್ಲೇಖವಷ್ಟೇ ಇದರ ಮಟ್ಟಿಗೆ ಸಾಧನೆ. ಯಾವುದೇ ಹೊಸತನವಿಲ್ಲದೆ ಓಬಿರಾಯನ ಕಾಲದ ಬಾಟರಿ ಮತ್ತು ಈಗಾಗಲೇ ಮಾರುಕಟ್ಟೆಯಲ್ಲಿರುವ ಮೋಟರುಗಳನ್ನು ಸೈಕಲ್ ರಿಕ್ಷಕ್ಕೆ ಹಾಕಿ ಚಿತ್ರಣದ ಪೂರ್ತಿ ಹೊರಗಿದ್ದು ಯಾವುದೇ ಸಂಬಂದವಿಲ್ಲದ ಸೌರ ವಿದ್ಯುತ್ [ನಾಮಕಾವಸ್ತೆ] ಹೆಸರಿಸಿದರು. ಮಾರುಕಟ್ಟೆ ಬೆಲೆ ಮೂವತ್ತೊಂದು ಸಾವಿರ ಎಂದರು. ಇದು ಬಾರತದ ವಿಜ್ನಾನಿಗಳು ಅದಿಕಾರಿಗಳು ರಾಜಕಾರಣಿಗಳು ಕೆಲಸ ಮಾಡುವ ವೈಖಿರಿ ಇದು ಬಿಂಬಿಸುತ್ತದೆ. ಬಾರತದ ತಂತ್ರಜ್ನಾನದ ಮಟ್ಟಿಗೆ ಇಂದಿನ ಹೀನ ಸ್ಥಿತಿಗೆ ಇವರೇ ಹೊಣೆಗಾರರು.

ಅತ್ಯಂತ ಬೇಸರದ ವಿಚಾರ ಎಂದರೆ ಪೆಟ್ರೋಲ್ ಕುಡಿಯುವ ನಾನೊ ಕಾರಿಗೆ ಎಂಟು ಸಾವಿರ ಸುಂಕ ಹಾಕುವ ಕೇಂದ್ರ ಸರಕಾರ ಈ ಪುಟ್ಟ ಟ್ರೈಕ್ ಹಾಗೂ ಮೋಟರುಗಳಿಗೆ ಅರುವತ್ತೆಂಟು ಸಾವಿರ ಕಸ್ಟಂ ಸುಂಕ ಹಾಕಿದ್ದು. ಚೀನಾ ಹಾಗೂ ಇಂಗ್ಲೇಂಡಿನಿಂದ ಸರಕು ತಂದ ಕೊರಿಯರ್ ಕಂಪೇನಿಗಳಿಗೆ ಮೊದಲೇ ಸಾಗಾಣಿಕೆ ವೆಚ್ಚ ಸಂದಾಯವಾದ ಕಾರಣವೋ ಎಂಬಂತೆ ಅವರೂ ಮತುವರ್ಜಿ ವಹಿಸಿರಲಿಲ್ಲ. ಈ ಬಗೆಗೆ ಕೇಂದ್ರ ಸರಕಾರವನ್ನು ಪುನಹ ಪರಿಶೀಲನೆಗೆ ಕೋರಿದಾಗ ಬಂದ ಎಲ್ಲ ಸರಿಯಾಗುಂಟು ಎನ್ನುವ ಸಮಜಾಯಶಿ ಸರಕಾರದ ಬಗೆಗೆ ಜುಗುಪ್ಸೆ ಮೂಡಿಸುತ್ತದೆ.

ಈ ವಿದ್ಯುತ್ ಬೆಂಬಲ ಕಷ್ಟವಾಗುವಾಗ ಬೆಂಬಲಕ್ಕೆ ಸಹಾಯವಿದೆ ಎನ್ನುವ ಚಿಂತನೆ ನಮ್ಮನ್ನು ಹೆಚ್ಚು ಶ್ರಮವಹಿಸಿ ಸೈಕಲ್ ತುಳಿಯಲು ಪ್ರೇರಣೆ ಸಿಗುತ್ತದೆ. ಹೆಚ್ಚು ಸಮಯ ಸೈಕಲ್ ತುಳಿಯುವುದು ಅಥವಾ ಹೆಚ್ಚು ಸಮಯ ಸೈಕಲಿನಲ್ಲಿ ಕಳೆಯುವುದು ಆರೋಗ್ಯಕ್ಕೂ ಉತ್ತಮ. ಪರದೇಶದಿಂದ ವಿದೇಶಿ ವಿನಿಮಯ ತೆತ್ತು ಅಮದಾಗುವ ಇಂದನವನ್ನು ಉಳಿಸಲು ಸಾದ್ಯ. ವಾತಾವರಣ ಮಲೀನತೆ ಮತ್ತು ರಸ್ತೆ ದಟ್ಟಣೆ, ಅಪಘಾತಗಳ ತಡೆಯುತ್ತದೆ.

ನನ್ನ ಹಣ ಹೆಚ್ಚಿನ ಬಾಗ ವಿನಿಯೋಗವಾದುದು ಟ್ರೈಕ್ ಖರೀದಿಗೆ. ಇಂದಿನಂತೆ ಅಲ್ಪ ಸಂಖ್ಯೆಯಲ್ಲಿ ತಯಾರಾಗುವ ಬದಲು ಟ್ರೈಕ್ ದೊಡ್ಡ ಸಂಖ್ಯೆಯಲ್ಲಿ ತಯಾರಾದರೆ ಅಗ್ಗವಾಗಲು ಸಾದ್ಯ. ಮಾರುತಿ ಕಾರ್ಖಾನೆಯಲ್ಲಿ ಒಬ್ಬ ಕೆಲಸಗಾರ ಹತ್ತು ಘಂಟೆ ಚಿಲ್ಲರೆ ಸಮಯದಲ್ಲಿ ಒಂದು ಕಾರನ್ನು ತಯಾರಿಸಿದರೆ ಈ ಟ್ರೈಕ್ ತಯಾರಿಸಲು ದುಬಾರಿ ಸಂಬಳದ ಮುಂದುವರಿದ ದೇಶಗಳಲ್ಲಿ ಎಪ್ಪತ್ತು ಮಾನವ ಘಂಟೆ ಬೇಕಾಗುತ್ತದೆ. ಸ್ವಾಭಾವಿಕವಾಗಿ ದುಭಾರಿಯಾಗುತ್ತದೆ.

ನನ್ನ ಊರೊಳಗಿನ ಓಡಾಟಕ್ಕೆ ಚಾರ್ಜೊಂದರ ನಲುವತ್ತು ಕಿಮಿ ಸಹಾಯಕೊಡುವ ಇಪ್ಪತ್ತು ಸಾವಿರ ರೂಪಾಯಿ ಬೆಲೆಯ ಒಂದು ಬಾಟರಿ ದಾರಾಳ ಸಾಕಾಗುತಿತ್ತು. ದೂರ ಪ್ರವಾಸ ಕೈಗೊಳ್ಳಲೆಂದು ಎರಡನೆಯ ಬಾಟರಿ ತರಿಸಿದ್ದೇನೆ. ಆದರೆ ಒಮ್ಮೆಗೆ ಹತ್ತು ಹದಿನೈದು ಕಿಮಿ ಓಡಾಡುವವರಿಗೆ ಇನ್ನೂ ಕಡಿಮೆ ಗಾತ್ರದ ಬಾಟರಿ ಸಾಕಾಗುತ್ತದೆ. ಅಂತಹ ಬಾಟರಿ ಅಬಿವೃದ್ದಿಗೆ ಹಾಗೂ ಅಲ್ಲಿ ಚಾರ್ಜಿಂಗ್ ವ್ಯವಸ್ತೆಗೆ ಪೂರಕವಾಗುವ ಸನ್ನಿವೇಶ ನಮ್ಮಲ್ಲಿ ನೀರ್ಮಾಣವಾಗಬೇಕಿದೆ.

ನನ್ನಲ್ಲಿ ಹಣ ಕೂಡಿದರೆ ಹಿಮಾಲಯ ಹತ್ತುತ್ತೇನೆ ಎನ್ನುವ ಬದಲು ಹಿಮಾಲಯ ಹತ್ತಲು ಈಗ ಹೊರಡುತ್ತೇನೆ, ನಾನು ಅದೃಷ್ಟಶಾಲಿಯಾದರೆ ಹಣ ಕೂಡುತ್ತದೆ ಎನ್ನುವ ದ್ಯೇಯ ನನ್ನದು. ಈ ಯೊಜನೆ ಸಾಕಷ್ಟು ಉಳಿತಾಯದ ಹಣ ವಿನಿಯೋಗಿಸಿದ್ದೇನೆ. ಮುಂದಿನ ದಾರಿಗೆ ಪ್ರಾಯೋಜಕರ ಸಹಾಯ ದೊರೆತರೆ ಉತ್ತಮವೆಂದು ಆಲೋಚಿಸುತ್ತೇನೆ. ಉತ್ತರ ಬಾರತವೆಂದರೆ ಸಹಾಯಕ್ಕೆ ಜತೆಗೊಬ್ಬರು ಬೇಕಿರುವುದರಿಂದ ಖರ್ಚು ಬಹು ಪಾಲು ಏರುತ್ತದೆ.