Monday, April 27, 2009

ನಕಾರಾತ್ಮಕ ಮತದ ಬಗೆಗೆ ದಿಕ್ಕು ತಪ್ಪಿಸುವ ಪತ್ರಿಕಾ ವರದಿ


ಇಂದಿನ ವಿಜಯ ಕರ್ನಾಟಕದಲ್ಲಿ ನಕಾರಾತ್ಮಕ ಮತಗಳೂ ಗಣನೆಗೆ ಎಂದು ಓದಿ ತುಂಬಾ ಕುಶಿಯಾಯಿತು. ಎಲ್ಲವೂ ನನ್ನ ಅನಿಸಿಕೆಗೆ ಅನುಗುಣವಾಗಿಯೇ ಇದೆ. ರಾಜಕಾರಣಿಗಳಿಗೆ ಸ್ವಲ್ಪವಾದರೂ ಬಿಸಿ ಮುಟ್ಟಿಸಲು ಸಾದ್ಯ ಅಂದುಕೊಂಡೆ. ಓದುತ್ತಾ ಹೋದಂತೆ ಇವರೆಲ್ಲೋ ದಾರಿ ತಪ್ಪಿದ್ದಾರೆ ಅನ್ನುವ ವಿಚಾರ ಸ್ಪಷ್ಟವಾಯಿತು. ಆದರೂ ತಿರುಳೆಷ್ಟು ಅರಿಯಲು ಆಂಗ್ಲ ಪತ್ರಿಕೆ ಬಿಡಿಸಿದೆ. ಆಗ ನಿಜಕ್ಕೂ ಅಘಾತವಾಯಿತು. ಪತ್ರಿಕೆಯೊಂದರ ಬಾಷಾಂತರ ಇಷ್ಟೋಂದು ಕಳಪೆ ಮಟ್ಟದ್ದಾಗಿರಬಾರದು ಅನ್ನಿಸಿತು.
                                                                 

ದೆಹಲಿಗೆ ಸಿಮಿತವಾದ ರಾಜ್ಯ ಮಟ್ಟದ ಅಧಿಕಾರಿಗಳು ಕೊಟ್ಟ ಘೋಷಣೆಯನ್ನು  ಇಂದಿನ   ವಿಜಯ ಕರ್ನಾಟಕ ಇಡೀ ದೇಶಕ್ಕೆ ಅನ್ವಯ ಎನ್ನುವ  ಅರ್ಥದಲ್ಲಿ    ಪ್ರಕಟಿಸಿದೆ. ಕಳೆದ ಚುನಾವಣೆಯಲ್ಲಿ ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ಈ ಸಲ ಲೆಕ್ಕ ಮಾಡಿ ಘೋಷಿಸುತ್ತೇವೆ ಆದರೆ ಅದು ಫಲಿತಾಂಶದ ಮೇಲೆ ಯಾವುದೇ ಪ್ರಭಾವ ಬೀಳದೆಂದು ಸ್ಪಷ್ಟ ಪಡಿಸಿದ್ದಾರೆ. ಲಕ್ಷ ಮತದಾರರಲ್ಲಿ ಉಳಿದವರೆಲ್ಲರೂ ನಿರಾಕರಣ ಮತ ಹಾಕಿ ಹತ್ತು ಜನ ಮತದಾನ ಮಾಡಿದರೂ ಅವರಲ್ಲಿ ಹೆಚ್ಚು ಮತ ಪಡೆದ ಅಭ್ಯರ್ಥಿ ವಿಜಯಿ ಎಂದೇ ನಮ್ಮ ನಿಲುವು   ಎಂದಿದ್ದಾರೆ . ಬಾಷಾಂತರಗೊಳ್ಳುವಾಗ ವಿಷಯದ ಅರ್ಥವೇ ಬದಲಾಗಿದೆ.

ಇನ್ನೊಂದು ಮಾತಿನಲ್ಲಿ   ಲಕ್ಷ   ಮತದಾರರಲ್ಲಿ     99,990 ನಿರಾಕರಣ ಮತ ಚಲಾಯಿಸಿದರೂ   ಮತದಾನವಾದ ಹತ್ತರಲ್ಲಿ ಆರು ಮತ ಪಡೆದವರನ್ನು ವಿಜೇತನೆಂದು ಘೋಷಿಸುತ್ತೇವೆ ಎಂದಿದ್ದಾರೆ.   ಅಭ್ಯರ್ಥಿಯ ಗೆಲುವಿನ ಅಂತರಕ್ಕಿಂತ ನಕಾರಾತ್ಮಕ ಮತಗಳ ಸಂಖ್ಯೆಯೇ ಹೆಚ್ಚಿದ್ದರೆ ಆ ಕ್ಷೇತ್ರಕ್ಕೆ ಮರುಮತದಾನ ನಡೆಯುವುದು. ಕಣದಲ್ಲಿದ್ದ ಯಾವ ಅಭ್ಯರ್ಥಿಯೂ ಪುನಹ ಸ್ಪರ್ಧಿಸುವಂತಿಲ್ಲ ಎನ್ನುವುದು ಸಂಪೂರ್ಣ ತಪ್ಪು ವರದಿ.  

ನಿರಾಕರಣ ಮತಕ್ಕೆ ಇನ್ನೂ    ಮೌಲ್ಯ ಬಂದಿಲ್ಲ ಎನ್ನುವುದು  ಬೇಸರದ ಸಂಗತಿ. ಮೌಲ್ಯ ಬರಲು ನಮ್ಮ ಜನಪ್ರತಿನಿಧಿಗಳು ಅವಕಾಶ ಕೊಡುವುದಿಲ್ಲ. ನಮ್ಮ ಮತವನ್ನು ಬೇರೆಯವರು ಚಲಾವಣೆ ಮಾಡುವುದರ ತಪ್ಪಿಸಲು ಹಾಗೂ ಒಂದು ಪ್ರತಿಭಟನಾ ಸಂದೇಶ ಕಳುಹಿಸಲು ಮಾತ್ರ ಈ ನಿರಾಕರಣ ಮತದಿಂದ ಸಾದ್ಯ.   ಮುಂದಿನ  ಚುನಾವಣೆಯಲ್ಲಾದರೂ   ಮೌಲ್ಯ ದೊರಕಲೆಂದು  ಹಾರೈಸೋಣ. 

http://www.vijaykarnatakaepaper.com/epaper/pdf/2009/04/27/20090427a_013101006.pdf

http://www.hindustantimes.com/StoryPage/StoryPage.aspx?id=77e7c054-4be3-4bba-ad99-0bb7295a8711

ಕೊನೆಯ ಮಾತು


ಇದರ ಪ್ರತಿಯನ್ನು ಸಂಪದದಲ್ಲೂ ಹಾಕಿದ್ದೆ. ಅಲ್ಲಿನ ಪ್ರತಿಕ್ರಿಯೆಗೆ ನಾನು ಕೊಟ್ಟ ಉತ್ತರವನ್ನು ಹಾಗೂ ಸಂಪರ್ಕ ಕೊಂಡಿಗಳ ಇಲ್ಲೂ ಕಾಣಿಸುತ್ತಿದ್ದೇನೆ.

ಲಕ್ಷ ಮತಗಳ ಉದಾಹರಣೆ ಈ ಕೊಂಡಿಯಲ್ಲಿ ಕಾಣಬಹುದು.

http://timesofindia.indiatimes.com/articleshow/4421631.cms

ಅಭ್ಯರ್ಥಿಯ ಗೆಲುವಿನ ಅಂತರಕ್ಕಿಂತ ನಕಾರಾತ್ಮಕ ಮತಗಳ ಸಂಖ್ಯೆಯೇ ಹೆಚ್ಚಿದ್ದರೆ ಆ ಕ್ಷೇತ್ರಕ್ಕೆ ಮರುಮತದಾನ ನಡೆಯುವುದು. ಕಣದಲ್ಲಿದ್ದ ಯಾವ ಅಭ್ಯರ್ಥಿಯೂ ಪುನಹ ಸ್ಪರ್ಧಿಸುವಂತಲ್ಲ       ಅನ್ನುವ ವಿಚಾರ ಸಂಪೂರ್ಣ ಸುಳ್ಳು. ಜತೆಗೆ ಈ ಕೊಂಡಿಯಲ್ಲೂ ಈ ನಿರಾಕರಣ ಮತಗಳಿಗೆ ಮೌಲ್ಯವಿಲ್ಲ ಎನ್ನುವ ವಿಚಾರ ಸ್ಪಷ್ಟ ಪಡಿಸುತ್ತದೆ.

http://yourvoice2009.timesofindia.indiatimes.com/articleshow/4274845.cms

ಮರುದಿನದ ಅಂದರೆ ೨೮ ರ ವಿಜಯ ಕರ್ನಾಟಕ ಲೋಕೇಶ್ ಕಾಯರ್ಗ ಅವರ ಅಂಕಣದಲ್ಲಿ ಈ ೪೯ ಒ ಬಗೆಗೆ ಅಸಂಬದ್ದ ಇ ಮೈಲ್ ಹರಿದಾಡುವುದರ ಕೊನೆಯ ಕಾಲಂನಲ್ಲಿ ಪ್ರಸ್ತಾಪಿಸಿದ್ದಾರೆ. ಈ ಸುಳ್ಳು ಪ್ರಚಾರವನ್ನು ಪ್ರತಿಭಟಿಸಲೆಂದೇ ನಾನು ನಿನ್ನೆ ಸ್ಪಷ್ಟಿಕರಣ ಹಾಕಿದ್ದು.

http://www.vijaykarnatakaepaper.com/epaper/pdf/2009/04/28/20090428a_0071...

Sunday, April 26, 2009

ಗುಪ್ತ ಮತದಾನ ಹಾಗೂ ಮತ ನಿರಾಕರಣೆ

ಕಾಂಗ್ರೇಸ್ ಪಕ್ಷದ ದೋರಣೆ ಯಾವತ್ತೂ ವಿರೋದಾಬಾಸಗಳಿಂದ ಕೂಡಿರುತ್ತದೆ. ಕುಳಿತ ರೆಂಬೆಯನ್ನೇ  ಕಡಿಯುವುದರಲ್ಲಿ  ಅವರು  ಚುರುಕು.    ಗುಪ್ತ ಮತದಾನಕ್ಕೆ ಪೂರಕವಾಗಿ  ಚುನಾವಣಾ ಆಯೋಗ ಕಾನೂನು ೪೯ ಓ ಪ್ರಕಾರ ನಕಾರಾತ್ಮಕ ಮತ ಚಲಾವಣೆಗೆ ಮತಯಂತ್ರದಲ್ಲಿಯೇ ಅವಕಾಶ ಮಾಡಿಕೊಡುವ ಪ್ರಸ್ತಾಪ ಹಾಕಿತ್ತು. ಕೈ  ಮತ್ತು  ಕಮಲ    ಪಕ್ಷವೂ  ಸೇರಿದಂತೆ  ಎಲ್ಲ ಪಕ್ಷದವರೂ ಅದನ್ನು ವಿರೋದಿಸಿದರು. ಅದುದರಿಂದ ಗುಪ್ತ ಮತದಾನ ಎಂದರೆ ಜೋಕ್ ಎನ್ನುವಂತಾಗಿದೆ.

ತನ್ನ ಅಭ್ಯರ್ಥಿ  ಇಲ್ಲವೆನ್ನುವ ನೆಲೆಯಲ್ಲಿ ೪೯ ಓ ಕ್ಕೆ ಸಾರ್ವಜನಿಕವಾಗಿ ಶರಣಾದ ಕಾಂಗ್ರೇಸ್ ಪಕ್ಷ ಸಾವಿರಾರು ಜನರಲ್ಲಿ ಗುಪ್ತತೆಗೆ ಲೋಪ ಉಂಟಾಗದಂತೆಯೇ ನಕಾರಾತ್ಮಕ ಮತ ಹಾಕಿಸಿತು. ಅದೇ   ಕ್ಷೇತ್ರದಲ್ಲಿ ಸುಷ್ಮ ಸ್ವರಾಜ್ ಮತ ಚಲಾವಣೆ ಕೆಮರಾ ಎದುರಾಗಿದ್ದ ಕಾರಣ  ಇದೊಂದು  ಅಪೂರ್ವ  ಘಟನೆ ಎಂದು  ಪರಿಗಣಿಸಿ   ತಕರಾರನ್ನು ಚುನಾವಣಾ ಆಯೋಗಕ್ಕೆ ಕೊಟ್ಟಿದೆ.  ಇಂದಿನ    ಕನ್ನಡ  ಪ್ರಭ  ಪತ್ರಿಕೆಯಲ್ಲಿ  ಈ   ಗುಪ್ತ ಮತದಾನದ   ಸುದ್ದಿ  ಓದಿದೆ.



ನಾನು ಈ ಸಲ ಮತಗಟ್ಟೆಯಿಂದಲೇ ದೂರವಿರಲೂ   ಬಹುದು. ಪುತ್ತೂರು ವಿಧಾನ ಸಭಾ ಕ್ಷೇತ್ರದ ಒಂದನೇಯ ಮತಗಟ್ಟೆಯಲ್ಲಿ ನಾನೊಬ್ಬ ಮತದಾರ. ಕಳೆದ ಬಾರಿ ೪೯ ಓ ಪ್ರಕಾರ ನಿರಾಕರಣ ಮತ ಚಲಾವಣೆ ಮಾಡಿದ್ದೆ. ಆರು ಕಿಲೋಮೀಟರ್ ವಾಹನ ಓಡಿಸಿ ಒಂದು ಘಂಟೆ  ಸಾಲಿನಲ್ಲಿ  ನಿಂತು    ಕೊನೆಗೆ ಅವರಿಗೆ ನಿರಾಕರಣ ಮತದ ಬಗೆಗೆ ಮನದಟ್ಟು ಮಾಡಿ ಸಹಿ ಹಾಕಿ ಬಂದೆ. ಅಲ್ಲಿ ಬೆಂಚಿನಲ್ಲಿ ಕೂತಿದ್ದ ಮರಿನಾಯಕರು ಇವನು  ನಮ್ಮವನಲ್ಲ   ಎಂದು   ಕೆಂಗಣ್ಣು ಬೀರಿದರು. ಕೊನೆಗೆ ನೋಡಿದರೆ ಲೆಕ್ಕಾಚಾರ ಹೀಗಿದೆ.

ಅನೆ                             15
ಕೈ                             314
ಕಮಲ                         598
ಸೈಕಲ್                         17
ಬಂಡಾಯದ ಕೈ              38
ತೆಂಗಿನ ಕಾಯಿ                82
ಒಟ್ಟು  ಚಲಾವಣೆ           1064


ಹಾಗಾದರೆ  ನನ್ನ  ಮತ  ಎಲ್ಲಿ  ಹೋಯಿತು ? ಹೀಗೆ ಮತಗಟ್ಟೆಯಿಂದ ಕೊನೆಯ ಫಲಿತಾಂಶ ಘೋಷಣೆ ಮಟ್ಟದ ವರೆಗೆ ಎಲ್ಲೂ ನಿರಾಕರಣ ಮತಗಳು ಲೆಕ್ಕಕ್ಕೆ ಸಿಗಲಿಲ್ಲ.. ಮೊದಲು ಕುಲಗೆಟ್ಟ ಮತಗಳು ಎನ್ನುವ ಪಂಗಡವಿತ್ತು. ಈಗ ಅದಕ್ಕೆ ಅವಕಾಶ ಇರುವುದಿಲ್ಲ. ಪ್ರತಿಯೊಂದು ಮತವೂ ಅಮೂಲ್ಯ ಎನ್ನುವಾಗ ಇದರನ್ನು ಪ್ರತಿ ಹಂತದಲ್ಲೂ ಲೆಕ್ಕಕ್ಕೆ ತೆಗೆದು ಕೊಳ್ಳುವುದರ ಬದಲಿಗೆ ಇವುಗಳ ಅಸ್ತಿತ್ವವನ್ನೇ ನಿರಾಕರಿಸಿದಂತಾಗಿದೆ.

ಈ  ಭಾರಿ  ಕಮಲ ಪಕ್ಷದ ಅಬ್ಯರ್ಥಿ ನಾಗ್ಪುರದಿಂದ ಲಕೋಟೆಯಲ್ಲಿ ಬಂದವರು. ಕಾರ್ಯಕರ್ತರು ಕಳುಹಿಸಿದ ಪಟ್ಟಿಯಲ್ಲಿ ಇವರ ಹೆಸರೇ ಇರಲಿಲ್ಲವಂತೆ.   ಕೈ ಪಕ್ಷದವರು ದೇಶಕ್ಕಿಂತ ಪಕ್ಷ ಮುಖ್ಯ ಎನ್ನುವ ನಿಲುವಿನಲ್ಲಿ ಬಾಂಕುಗಳನ್ನು ಖಾಲಿ ಮಾಡಿದವರು. ಶ್ರೀ ರಾಮ ಭಟ್ಟರು ಯೋಗ್ಯವರಾದರೂ ಗೆಲ್ಲುವ ಸಾದ್ಯತೆ ಇಲ್ಲವೇ ಇಲ್ಲ. ಅದುದರಿಂದ ನಾನು ಮತಗಟ್ಟೆಗೆ ಹೋದರೂ ೪೯ ಓ ಮಂತ್ರ ಜಪಿಸುತ್ತೇನೆ.  ಹೋಗುವುದೇ  ವ್ಯರ್ಥ  ಅನ್ನುವ  ಅನಿಸಿಕೆಯೂ  ಉಂಟು. ಪ್ರಜಾವಾಣಿಯಲ್ಲಿರುವ    ವ್ಯಂಗ ಚಿತ್ರ ಹೇಳೋದು ಸರಿ ಅನ್ನಿಸುತ್ತೆ.

Saturday, April 25, 2009

ಅಡ್ವಾಣಿಯ ಬಿಲಿಯಕ್ಕೆ ಎಷ್ಟು ಸೊನ್ನೆಗಳು ?

ಈಗ ದಿನ ಬೆಳಗಾದರೆ ಪತ್ರಿಕೆಯಲ್ಲಿ ಬಿಲಿಯಗಟ್ಟಲೆ ಡಾಲರ್ ಸ್ವಿಸ್ ಬಾಂಕಿನಿಂದ ತರುವ ವಿಚಾರ ಕಾಣುವುದು. ಕಮಲ ಪಕ್ಷದ ಅಡ್ವಾಣಿ   ಪ್ರದಾನಿಯಾದರೆ ಹಣ ತರಲು ಮರುದಿನವೇ ವಿಮಾನ ಹತ್ತುತ್ತಾರೆ. ಮುಂದೊಂದು ದಿನ ಕೈ ಪಕ್ಷದ ವತಿಯಿಂದ ಪ್ರದಾನಿ ಆಗಲಿರುವ ರಾಹುಲರೂ ಈಗ ಅಡ್ವಾನಿ ಜತೆ ಈ ಸ್ವಿಸ್ ಹಣದ ಬಗ್ಗೆ ಪ್ರತಿಕ್ರಿಯಿಸುತ್ತಿದಾರೆ. ನನಗಂತೂ ಬಿಲಿಯಕ್ಕೆಷ್ಟು ಸೊನ್ನೆ ಎನ್ನುವುದು ಇತ್ತೀಚಿನ ವರೆಗೂ ಗೊತ್ತಿರಲಿಲ್ಲ. ಜತೆಗೊಂದು ಗೊಂದಲ.


ಒಮ್ಮೆ ಒಬ್ಬ ಅಮೇರಿಕದ ಬಹು ದೊಡ್ಡ ಶ್ರೀಮಂತ ಸ್ವಿಸ್ ಬಾಂಕಿಗೆ ಹೋಗಿ ಒಂದು ಬಿಲಿಯ ಸ್ವಿಸ್ ಫ್ರಾಂಕ್ ಕೊಡಿ ಎಂದನಂತೆ. ದಾಖಲೆಗಳ ಪರಿಶೀಲಿಸಿ ನಿಮ್ಮ ಖಾತೆಯಲ್ಲಿ ಅಷ್ಟು ಹಣವಿಲ್ಲ, ಕ್ಷಮಿಸಿ ಎಂದು ಕಾರಕೂನ ಹೇಳಲು ಅದು ಹೇಗೆ ಸಾದ್ಯ ಕೆಲವು ಬಿಲಿಯ ಉಂಟೆಂದು ನನ್ನ ಖಾತೆ ಪುಸ್ತಕ ಹೇಳುತ್ತದೆ ಎಂದನಂತೆ. ಇಬ್ಬರೂ ಹೇಳಿದ್ದು ಸರಿ. ಕಾರಣ ಈ ಬರಹದ ಕೊನೆಯಲ್ಲಿದೆ.

1400 ಬಿಲಿಯ ಡಾಲರ್ ಹಣ ಸ್ವಿಸ್ ಬಾಂಕಿನಲ್ಲಿರುವ ಕಾರಣ ನಾವು ಇನ್ನು    ಅಡ್ವಾಣಿಯವರ ರಾಮ ರಾಜ್ಯದಲ್ಲಿ ಹೊಸ ತೇರಿಗೆ ಕಟ್ಟಬೇಕಾಗಿಯೇ ಇರುವುದಿಲ್ಲ. 40 ವರ್ಷ ಸರಕಾರ ನಡೆಸುವಷ್ಟು ಹಣ ಅಲ್ಲಿ ಕೊಳೆಯುತ್ತಿದೆಯಂತೆ ಎನ್ನುವಂತಹ ರಂಗು ರಂಗಿನ ಮಾತು ಕೇಳುತ್ತೇವೆ. ಒಂದು ಅವಧಿ ಪೂರ್ತಿ ಉಪ ಪ್ರದಾನಿಯಾಗಿದ್ದ ಅಡ್ವಾಣಿಗೆ ಅರುವತ್ತು ನಾಲ್ಕು ಕೋಟಿ ಬೋಫೋರ್ಸ್ ಲಂಚದ ಹಣದ ಜಾಡು ಹಿಡಿಯುವುದು ಸಾದ್ಯವಾಗಲಿಲ್ಲ ಎನ್ನುವ ವಿಚಾರ ಈಗ ನೆನಪಿಸಿಕೊಳ್ಳಲು ಈಗ ಸಕಾಲ.

ಗೆದ್ದರೂ ಚುನಾವಣೆ ಮುಗಿದ ನಂತರ ಅಡ್ವಾಣಿಗೆ ಆಶ್ವಾಸನೆ ಮರೆಯುವ ಸಾದ್ಯತೆ ಹೆಚ್ಚು.ನೆನಪಾದರೂ ಕೈಗೂಡುವುದು ಸಂಶಯ. ಅದುದರಿಂದ ಚುನಾವಣೆಯ ಅನುಕೂಲಕ್ಕಾಗಿ ಜನರನ್ನು ಉದ್ರೇಕಿಸಲು ಗೊಂದಲಕ್ಕೀಡು ಮಾಡಲು ಈ ವಿಚಾರ ಎತ್ತಬಾರದಿತ್ತು ಎಂದು ನನ್ನ ಅನಿಸಿಕೆ.  ಇವರು  ಹಣ  ತರಲು ಹೊರಟರೆ  ಅಲ್ಲಿನ  ಬಾಂಕ್  ಬಾಗಿಲು ಹಾಕುತ್ತದೆ  ಎನ್ನುತ್ತಾರೆ  ವ್ಯಂಗಚಿತ್ರಕಾರ  ಶ್ರಿ  ಸತೀಷ್  ಆಚಾರ್ಯ


ಅಂದ ಹಾಗೆ ಕಾಂಗ್ರೇಸಿನ ಯುವರಾಜ ರಾಹುಲ್ ಅಮೇರಿಕದ ಬೊಸ್ಟೊನ್ ವಿಮಾನ ನಿಲ್ದಾಣದಲ್ಲಿ ಸೆಪ್ಟೆಂಬರ್ 2001 ರಲ್ಲಿ ಎರಡು ಲಕ್ಷ ಡಾಲರ್ ನಗದು ಹಣ ತುಂಬಿದ ಸೂಟುಕೇಸು ಜತೆ ಸಿಕ್ಕಬಿದ್ದ ಬಗೆಗೆ ವದಂತಿ ಇರುತ್ತದೆ. ವರ್ಲ್ಡ್ ಟ್ರೇಡ್ ಸೆಂಟರಿಗೆ ವಿಮಾನ ಡಿಕ್ಕಿ ಹೊಡೆದ ನಂತರದ ಅಮೇರಿಕನರು ಕಠೀಣ ತನಿಖೆ ಕೈಗೊಳ್ಳುತ್ತಿದ್ದ ಕಾಲ. ತೆರೆಮರೆಯ ಕೈವಾಡದಿಂದ ಬಿಟ್ಟರೋ ಸುದ್ದಿ ಸುಳ್ಳೋ ಅನ್ನುವುದು ಅಸ್ಪಷ್ಟ.

ಗುಟ್ಟಾಗಿ ಹಣ ಇಡಲು ಸ್ವಿಸ್ ಬಾಂಕ್ ಆಗಬೇಕೆಂದು ಇಲ್ಲ. ಪ್ರಪಂಚದ ಹಲವು ಪುಟ್ಟ ದೇಶಗಳು ಈ ಸೌಕರ್ಯ ಒದಗಿಸುತ್ತದೆ. ಕಾಂಗ್ರೇಸಿನ ಯಜಮಾನತಿ ಸೋನಿಯಾ ಇಟಲಿಯ ವಟಿಕನ್ ಬಾಂಕಿನ ಉಪಯೋಗಿಸುವ ಸಾದ್ಯತೆಗಳೂ ದಾರಾಳ. ರಾಜೀವನ ಕಾಲದಿಂದಲೂ ಕುಟುಂಬಕ್ಕೆ ವಟಿಕನ್ ಹತ್ತಿರ. ಹಣದ ಬಣ್ಣವನ್ನು ನೋಡದ ಈ ಬಾಂಕ್ ಹಲವರು ದುಷ್ಟರ ಹಣ ಇಟ್ಟುಕೊಂಡ ದಾಖಲೆಗಳಿವೆ. ವಟಿಕನ್ ರಾಯಬಾರಿ ಕಛೇರಿಯ ಅಂಗವಾದ ಈ ಬಾಂಕಿನ ಟಪಾಲು ಸಾಗಾಟದಲ್ಲಿ ಬಾರತ ಹಾಗೂ ಇಟಲಿಯ ತನಿಖೆಗೆ ಒಳಪಡುವುದಿಲ್ಲ.

ಬಿಲಿಯ ಅಂದರೆ ಎಷ್ಟು ಎನ್ನುವ ಪ್ರಶ್ನೆ ಯಾರ ಜತೆ ಸಂಬಾಷಣೆ ಅನ್ನುವುದರ ಅವಲಂಬಿಸುತ್ತದೆ. . ಅಮೇರಿಕನರನ್ನು ಕೇಳಿದರೆ ಸಾವಿರ ಮಿಲಿಯ ಅಥವಾ ಒಂದರ ಹಿಂದೆ ಒಂಬತ್ತು ಸೊನ್ನೆಗಳು. ಆದರೆ ಯುರೋಪಿನವರ ಪ್ರಕಾರ ಬಿಲಿಯ ಎಂದರೆ ಒಂದರನ್ನು ಹನ್ನೆರಡು ಸೊನ್ನೆಗಳು ಹಿಂಬಾಲಿಸುತ್ತವೆ.

ಅಮೇರಿಕದ ಶ್ರೀಮಂತ ಪಡಕೊಳ್ಳಲು ಹೊರಟ ಬಿಲಿಯ ಎಂದರೆ 1,000,000,000 ಸ್ವಿಸ್ ಫ್ರಾಂಕ್ ಗಳು. ಆದರೆ ಯುರೋಪಿನ ಬಿಲಿಯ ಎಂದರೆ ಅಮೇರಿಕದವರು ಟ್ರಿಲಿಯನ್ ಎನ್ನುವ 1,000,000,000,000. ಮೂರು ಸೊನ್ನೆಗಳು ಜಾಸ್ತಿ. ಈಗ ರಾಜಕಾರಣಿಗಳು ಅನುಕೂಲಕ್ಕೆ ತಕ್ಕಂತೆ ಈ ಬಿಲಿಯ ಶಬ್ದ ಉಪಯೋಗಿಸುತ್ತಿದ್ದಾರೆ. ಸೊನ್ನೆಗಳ ಸಂಖ್ಯೆ ಯಾರಿಗೂ ಗೊತ್ತಿಲ್ಲ.



http://online.wsj.com/public/article/SB114364857897711253.html?mod=2_1125_1

Saturday, April 18, 2009

ಲೋನ್ ಮೇಳ ಪೂಜಾರಿ ಸಾಲ ಕೊಡಿಸ್ತೀನಿ ಅಂದಿದ್ದರು


ಈ ಸಲ ನಮ್ಮಲ್ಲಿ ಕೈ ಪಕ್ಷದ ಅಬ್ಯರ್ಥಿಯಾಗಿರುವ ಜನಾರ್ಧನ ಪೂಜಾರಿಯವರನ್ನು ನಾನು ಒಮ್ಮೆ ಬೇಟಿ ಮಾಡಿದ್ದೆ. ಅವರಾಗ ಕೇಂದ್ರ   ಸರಕಾರದಲ್ಲಿ ಮಂತ್ರಿಯಾಗಿದ್ದು ಸಾಲಮೇಳಗಳ ಅಬ್ಬರದ ಕಾಲ.   ಹೋದವರಿಗೆ  ಬಂದವರಿಗೆಲ್ಲ  ಕೈ ಚಾಚಿ ಸಾಲ   ವಿತರಣೆಯಾಗುತಿತ್ತು.

ನಾನು   ಸೈಕಲು ಪ್ರವಾಸದ ತಯಾರಿ ಜತೆಗೆ ವೀಸಾ ಬೇಟೆಯಲ್ಲಿ ನಿರತನಾಗಿದ್ದೆ. ಒಂದು ಪ್ರದೇಶದ   ಮೊದಲ ವೀಸಾ ಪಡಕೊಳ್ಳುವುದು ಬಹಳ ಕಷ್ಟ. ನಂತರ  ಸುತ್ತುಮುತ್ತಲಿನ    ದೇಶಗಳ ಅರ್ಜಿಯೊಂದಿಗೆ ಅವರು ಕೊಟ್ಟಿದ್ದಾರೆ ನೀವೂ ಕೊಡಿ ಎನ್ನಬಹುದು. ಹಾಗೆ ಮಂತ್ರಿಗಳ ಶಿಫಾರಸ್ಸು ಪ್ರಥಮ   ವೀಸಾ ಪಡಕೊಳ್ಳಲು ಸಹಾಯವಾಗ ಬಹುದೆಂದು ನನಗಾಸೆ.

ಕಾಂಗ್ರೇಸು ಕಾರ್ಯಕರ್ತ ಗೆಳೆಯ ಪದ್ಮನಾಭ ರೈ ಅವರಲ್ಲಿ ನನ್ನ ಸಮಸ್ಯೆ ಹೇಳಿಕೊಂಡೆ. ಅವರು ಮರು ಮಾತಿಲ್ಲದೆ ಕರೆದೊಯ್ದರು ಪೂಜಾರಿಯವರ ಸನ್ನಿದಾನಕ್ಕೆ.

ಮಂಗಳೂರ ಸರ್ಕೀಟ್ ಹೌಸಿನಲ್ಲಿ ನಡೆಯುತ್ತಿದ್ದ ಪೂಜಾರಿಯವರ ಒಡ್ಡೋಲಗದಲ್ಲಿ ಸಾಲಾಗಿ ವಿವಿದ ಬಾಂಕುಗಳ ಹಿರಿಯ ಅಧಿಕಾರಿಗಳು ಕೂತಿದ್ದರು. ಮಂತ್ರಿಗಳ ಬೇಟಿಗೆ ಅಲ್ಲಿಗೆ ಹೋದ ಹೆಚ್ಚಿನವರು ಬಾಂಕು ಸಾಲ ಶಿಫಾರಸ್ಸಿಗಾಗಿ ಬಂದವರೆಂದು ಪ್ರತ್ಯೇಕ ಹೇಳಬೇಕಾಗಿಲ್ಲವಲ್ಲ. ಶ್ರೀ ಪೂಜಾರಿಯವರು ನನ್ನ ನಿವೇದನೆ  ಎರಡು ನಿಮಿಷ ಅಲಿಸಿದರು. ನಂತರ ಇದೆಲ್ಲ ದಂಡ. ಒಂದು ಒಳ್ಳೆ project ತಗೊಂಡು ಬಾ ಹತ್ತು ಲಕ್ಷ ಸಾಲ  ಕೊಡಿಸ್ತೀನಿ ಎಂದು ನನ್ನ ಬೀಳ್ಕೊಟ್ಟರು. ನನ್ನ ಆಸೆಗೆ ತಣ್ಣೀರು ಎರಚಿದಂತಾದರೂ ಅವರ ಕಾಳಜಿ ಕುಶಿಯಾಯಿತು.

ಸದಾ ರಾಜಕಾರಣ ಅಲೋಚಿಸುವ ಪೂಜಾರಿಯವರು  ನನ್ನ ಪ್ರವಾಸಕ್ಕೆ  ಬೆಂಬಲ  ಸೂಚಿಸಲಿಲ್ಲ.

ಚಿತ್ರ ಕೃಪೆ :ಶ್ರಿ ಹರೀಶ್ಚಂದ್ರ ಶೆಟ್ಟಿ

Friday, April 10, 2009

ಅಮಾಯಕ ಸರ್ದಾರ್ಜಿಗಳ ಕೊಲ್ಲಿಸಿದ ರಾಜೀವನ ಕಾಂಗ್ರೇಸ್

ಈಗ ಸರ್ದಾರ್ಜಿ ಪತ್ರಕರ್ತನೊಬ್ಬ ಪಚಿಗೆ ಬೂಟೆಸೆದ ಪರಿಣಾಮ ಟೈಟ್ಲರಿಗೆ ಟಿಕೇಟು ಇಲ್ಲ ಎನ್ನುವುದೇ ಸುದ್ದಿ. ಆದರೆ ಟೈಟ್ಲರ ಪ್ರಭೃತ್ತಿಗಳ ಮುಂದಾಳ್ತನದಲ್ಲಿ ಸಾವಿರಾರು ಸಿಖ್ ಜನರು ಸತ್ತದ್ದು ಮಾತ್ರವಲ್ಲ ಕಾಂಗ್ರೇಸ್ ಪಕ್ಷ ಇಂದಿರಾ ಗಾಂಧಿ ಕೊಲೆ ಪ್ರಕರಣದಲ್ಲಿ ಒಬ್ಬ ನಿರ್ದೋಷಿಯನ್ನು ನೇಣು ಹಾಕಿದ ಅಪವಾದವನ್ನೂ ಹೊತ್ತಿದೆ.

ದೆಹಲಿಯ ತಿಹಾರ್ ಜೈಲಿನಲ್ಲಿ ಉರುಳಿಗೆ ಕೊರಳೊಡ್ಡಿದ ಪ್ರಾಯುಶ: ಕೂನೆಯ ವ್ಯಕ್ತಿ ಹಿಂದುಳಿದ ಜಾತಿಯಿಂದ ಬಂದ ಕೆಹರ್ ಸಿಂಗ್ ಎನ್ನುವ ಅಮಾಯಕ. ಇಂದಿರಾ ಗಾಂಧಿಯ ಕೊಲೆಯ ನಂತರದ ನಾಲ್ಕು ದಿನಗಳಲ್ಲಿ ಕಾಂಗ್ರೇಸಿನ ಮೇಲುಚಾರಣೆಯಲ್ಲಿ ಸಿಕ್ಕರ ಮಾರಣ ಹೋಮ ನಡೆದಿತ್ತು. ದೊಡ್ಡ ಮರ ಉರುಳಿದಾಗ ಸಾಕಷ್ಟು ಅನಾಹುತವಾಗುವುದು ಎಂದ ಅಗ ಪಟ್ಟವೇರಿದ ಮೂರ್ಖ ರಾಜೀವ ನಿಯಂತ್ರಣಕ್ಕೆ ಮಿಲಿಟರಿ ಕರೆಸುವುದರ ಬದಲಾಗಿ ಗಲಭೆಗೆ ಮೌನ ಸಮ್ಮತಿ ವ್ಯಕ್ತ ಪಡಿಸಿದ್ದ.

ಕೆಹರ ಸಿಂಗನ ಮೇಲೆ ಕೊಲೆ ಯೋಜನೆಯಲ್ಲಿ ಪಾಲ್ಗೊಂಡಿದ್ದ ಎನ್ನುವುದಕ್ಕೆ ಖಚಿತ ರುಜುವಾತು ಇರಲೇ ಇಲ್ಲ. ಗುಂಡಿಕ್ಕಿದ ಬೆಯಂತ್  ಸಿಂಗರ ಪತ್ನಿ ಮತ್ತು ಕೇಹರ್ ಸಿಂಗ್ ಒಂದೇ ಗ್ರಾಮದವರು ಎನ್ನುವ ವಿಚಾರವೇ ಸಾಕಾಗಿತ್ತು ರಾಜೀವನ ಕೈಗೊಂಬೆ ನ್ಯಾಯಾಲಯಕ್ಕೆ.  ಪರಮೋಚ್ಚ   ನ್ಯಾಯಾಲಯದ  ಮಾಜಿ ವಕೀಲನೆಂಬ ಹೆಗ್ಗಳಿಕೆಯ ವೆಂಕಟರಮಣ ಎಂಬಾತ ಈ ಮರಣ ಶಾಸನಕ್ಕೆ ಹೆಬ್ಬೆಟ್ಟು ಒತ್ತಿಯೇ ಬಿಟ್ಟ.   ರಾಜೀವನ ರಾಜ್ಯಬಾರದಲ್ಲಿ ನಡೆದ ನ್ಯಾಯಾಂಗ ಕೈಗೊಂಡ ಕೊಲೆ ಎಂದರೂ ಸರಿ. ಅನಂತರ ತಿಹಾರ್ ಜೈಲಿನ ಒಳಗಡೆಯೇ  ಕೆಹರ ಸಿಂಗರ  ಅಂತಿಮ ಕ್ರಿಯೆಗಳನ್ನು ನೆರವೇರಿಸಲಾಗಿತ್ತು. ಬೂದಿಯನ್ನೂ ಅವರ ಸಂಬಂದಿಕರಿಗೆ ಕೊಡಲಿಲ್ಲ.
ಅಂದು  ಅತ್ಯದಿಕ  ಪ್ರಸಾರ  ಹೊಂದಿದ ವಾರ ಪತ್ರಿಕೆ   Illustrated Weekly ತನ್ನ 4 December 1988 ರ ಸಂಚಿಕೆಯಲ್ಲಿ ಈ ಪ್ರಕರಣವನ್ನು ವಿವರವಾಗಿ ಪ್ರಕಟಿಸಿತ್ತು. ತಿಂಗಳು ಕಳೆದು  ಜನವರಿ  ತಿಂಗಳಲ್ಲಿ   ಸತ್ವಂತ್  ಸಿಂಗರ  ಜತೆ   ಕೆಹರ್ ಸಿಂಗರನ್ನು ಗಲ್ಲಿಗೇರಿಸಿದರು. ಸಾರ್ವಜನಿಕ  ಅಬಿಪ್ರಾಯಕ್ಕೆ  ಯಾವ  ಬೆಲೆಯೂ  ದೊರಕಲಿಲ್ಲ. 

ಇಂದಿರಾ ಗಾಂಡಿಯನ್ನು [ ಅವರ ಮೂಲ ಪಾರ್ಸಿ ಹೆಸರು.   ಇಂದಿರಾ  ರಾಜಕೀಯ. ಲಾಭಕ್ಕಾಗಿ ಗಾಂಧಿ ಎಂದು ಬದಲಾಯಿಸಿಕೊಂಡರು] ಕೊಂದವರು ಸಿಖ್ ಜನ ಎನ್ನುವುದು ಸಾಕಾಗಿತ್ತು ಕಾಂಗ್ರೇಸಿನವರಿಗೆ  ಸಾವಿರಾರು  ಸಂಖ್ಯೆಯಲ್ಲಿ   ಆ ಜನಾಂಗದವರ ಕೊಲ್ಲಲು. ಬೆಯಂತ್ ಸಿಂಗರ ಪತ್ನಿಯ ಹಳ್ಳಿಯವ ಎನ್ನುವ ರುಜುವಾತು ಸಾಕಾಗಿತ್ತು ಕೆಹರ್ ಸಿಂಗರ ಗಲ್ಲಿಗೇರಿಸಲು.  ಇದು ಕಾಂಗ್ರೇಸ್ ರಾಜ್ಯಭಾರದಲ್ಲಿ    ನ್ಯಾಯಾಂಗದ   ವೈಖರಿ.

Tuesday, April 07, 2009

ವಿರೂಪಗೊಂಡ ಲೆನಿನ್ ಹಾಗೂ ಮಹಿಷಾಸುರ ವಿಗ್ರಹಗಳು

ಎಪ್ರಿಲ್ ಒಂದರ ಆಚರಣೆ ಎಂದರೆ ಅವರಿವರ ಮೂರ್ಖನನ್ನಾಗಿಸುವ ದಿನ. ಕೆಲವೊಮ್ಮೆ ತಮಾಷೆ ಮಾತ್ರವಲ್ಲ ಅತಿರೇಖಕ್ಕೂ ಹೋಗುವುದುಂಟು. ಮೊನ್ನೆ ರಶ್ಯದಲ್ಲಿ ನಡೆದ ಕಿತಾಪತಿ ನನ್ನ ಗಮನ ಸೆಳೆಯಿತು. ಇಂತಹ ಪೋಕರಿ ಕಿತಾಪತಿಗಳು ಅಲ್ಲಿ ಮಾಮೂಲಿಯಂತೆ. ನಮ್ಮಲ್ಲಿ ಹಳ್ಳಿಗಳಲ್ಲಿ ಇಂತಹ ಕಾರುಬಾರು ಶಿವರಾತ್ರಿಯಂದು ನಡೆಯುವುದು ಸಾಮಾನ್ಯ.


ಸೈಂಟ್ ಪೀಟರ್ಸ್ ಬರ್ಗ್ ಪಟ್ಟಣದ ಪುಂಡು ಹುಡುಗರು ಮುನ್ನೂರು ಗ್ರಾಂ ಸ್ಪೋಟಕವನ್ನು ಎಲ್ಲಿಂದಲೋ ಸಂಪಾದಿಸಿದರು. ಮುಖ್ಯ ರೈಲು ನಿಲ್ದಾಣದ ಪಕ್ಕದಲ್ಲಿರುವ ಉಕ್ಕಿನ ಲೆನಿನ್ ಪ್ರತಿಮೆಗೆ ಇದನ್ನು ಅಳವಡಿಸಿ ಬೆಳಗಿನ ಜಾವ ನಾಲ್ಕು ಘಂಟೆಗೆ ಸ್ಪೋಟಿಸಿ ಎಪ್ರಿಲ್ ಒಂದರ ಸ್ವಾಗತ ಕೋರಿದರು. ಅಂದು ಬೆಳಗ್ಗೆ ರೈಲು ನಿಲ್ದಾಣದ ಪ್ರಯಾಣಿಕರೆಲ್ಲ ಈ ತೂತಾದ ಹೊಸ ರೂಪದ ಲೆನಿನ್ ಪ್ರತಿಮೆಯನ್ನು ಕಂಡರು.

ಇದನ್ನು ಓದಿದಾಗ ಮನಸ್ಸು ನಲುವತ್ತು ವರ್ಷ ಹಿಂದಕ್ಕೋಡಿತು. ಇದಕ್ಕೆ ಹೋಲುವಂತಹ ಕಿತಾಪತಿ ನನ್ನನ್ನು ಅತಿಯಾದ ಮುಜುಗರಕ್ಕೆ ಒಳಮಾಡಿತ್ತು. .
                                                                
ನಾನಾಗ ಮೈಸೂರಿನ ವಸತಿ ಶಾಲೆಯೊಂದರಲ್ಲಿ ಐದನೇಯ ತರಗತಿಯ ವಿಧ್ಯಾರ್ಥಿ. ನಮ್ಮನ್ನು ಸುತ್ತು ಮುತ್ತಲಿನ ಪ್ರವಾಸಕ್ಕೆ ಕರೆದೊಯ್ದಿದ್ದರು. ಚಾಮುಂಡಿ ಬೆಟ್ಟದಲ್ಲಿ ನಮ್ಮ ಬಸ್ಸು ಮಹಿಷಾಸುರ ವಿಗ್ರಹದ ಪಕ್ಕದಲ್ಲಿ ನಿಂತಿತ್ತು. ಆಗ ವಿಗ್ರಹದ ಸುತ್ತು ಆವರಣ ಬೇಲಿ ಇರಲಿಲ್ಲ. ಬಸ್ಸಿನ ಒಳಗಿನಿಂದ ವಿಗ್ರಹ ನಮ್ಮ ಕೈ ಎಟಕಿನಲ್ಲಿತ್ತು. ನಮ್ಮ ಪುಟ್ಟ ಹುಡುಗರು ಏನೋ ಸ್ವಲ್ಪ ಕೈಚಳಕ ತೋರಿಸಿದ್ದರು. ಉಳಿ ಸುತ್ತಿಗೆಯೇನೂ ನಮ್ಮಲ್ಲಿರಲಿಲ್ಲವಾದ ಕಾರಣ ಪರಮಾವದಿ ಎಂದರೆ ಬಣ್ಣ ಮಾಸಿರಬಹುದು ಹೊರತು ಶಾಶ್ವತ ಹಾನಿಯಾಗಲು ಸಾದ್ಯವಿಲ್ಲ.

ರಜೆಯಲ್ಲಿ ಊರಿಗೆ ಬಂದಾಗ ಸಂಬದಿಕರ ಮನೆಯಲ್ಲಿ ಸಮಪ್ರಾಯದ ಹುಡುಗನಲ್ಲಿ ಈ ಕಥೆ ಹೇಳಿದೆ. ಕಥೆ ದೂರದಲ್ಲಿದ್ದು ಕೇಳಿಸಿಕೊಂಡ ಹಿರಿಯ ಸಂಬಂದಿ दस नंबरि ಗೆ ಸ್ವಲ್ಪ sadism ಮನೋಭಾವ. ನನ್ನಿಂದ ತಲೆಯೇ ಕಡಿದಿದ್ದಾರೆ ಅನ್ನುವಂತಹ ಉತ್ರೇಷ್ಟೆಯ ಮಾತು ಹೊರಡಿಸಿದರು. ತಿಳಿವಳಿಕೆಯಿಲ್ಲದ ಹತ್ತು ವರ್ಷದ ನಾನು ಹಳ್ಳಕ್ಕೆ ಬಿದ್ದೆ. ನಂತರ ಎಲ್ಲರೂ ಸೇರಿ ಅವಮಾನಕರವಾಗಿ ಗೇಲಿ ಮಾಡಿದ್ದು ಮುಖಭಂಗ ಮಾಡಿದ್ದೂ ನನಗೆ ಎಂದೂ ಮರೆಯದ ಕೆಟ್ಟ ಅನುಭವ.

ಕೆಲವು ವರುಷಗಳ ನಂತರ ನಾನಾಗ ದ್ವಿ ಚಕ್ರ ಚಲಾವಣೆ ಸುರು ಮಾಡಿದ್ದೆ. ಅವರು ನನ್ನಲ್ಲಿ ಪಟ್ಟಣದಿಂದ ಬರುವಾಗ ಸಿಗರೇಟು ತರಲು ಹೇಳಿದ್ದರು. ಎರಡು ಮೂರು ಅಂಗಡಿಯಲ್ಲಿ ವಿಚಾರಿಸಿದರೂ ಅವರಿಗೆ ಬೇಕಾದ್ದು ಸಿಕ್ಕಿರಲಿಲ್ಲ. ಬಂದಾಕ್ಷಣ ನಿಮ್ಮ ಸಿಗರೇಟು ಸಿಗಲಿಲ್ಲವೆಂದು ಹೇಳಿ ಚೆನ್ನಾಗಿ ಉಗಿಸಿಕೊಂಡೆ. ಅವರ ಚಟಕ್ಕಾಗಿ ಮಕ್ಕಳಲ್ಲಿ ಸಿಗರೇಟು ತರಿಸುವುದು ತಪ್ಪೆಂದು ಅವರಿಗೆ ಅನಿಸಬೇಕಾಗಿತ್ತು. ಆಗ ಜತೆಯಲ್ಲಿದ್ದ ಪಶು ವೈದ್ಯರು ನನ್ನ ಸಹಾಯಕ್ಕೆ ದಾವಿಸಿ ಅವನು ಸಿಗರೇಟು ಸೇದುವುದಿಲ್ಲ ಎಂದಾಗ दस नंबरि ಮುಖ ಹುಳಿ ಹಿಂಡಿದಂತಾಗಿತ್ತು.

ನಾನು  ಹಲವು  ವರ್ಷಗಳಿಂದ  ಬೇಟಿ ಮಾಡದ   दस नंबरि ಈಗ ಸಿಗರೇಟು ಸೇದುವುದೂ ಇಲ್ಲವಂತೆ  ಮತ್ತು Number Ten ಗುರುತಿನ ಸಿಗರೇಟು ಮಾರುಕಟ್ಟೆಯಲ್ಲಿ ಸಿಗುವುದೂ ಇಲ್ಲ.

Sunday, April 05, 2009

ನಾನು ವೈದ್ಯರಲ್ಲಿ ಹೋಗಿದ್ದೆ.

ಮಂಗಳೂರಿನಲ್ಲಿ ಬೆನ್ನೆಲುಬು ತಜ್ನ ಡಾ ಮಹೇಶರು ಇದ್ದಾರೆ. ಹೋಗಿ ಕಾಣೆಂದು ನಮ್ಮವರ ಒತ್ತಡ. ಅಂತೂ ಕಳೆದ ತಿಂಗಳು ಹೋಗಿ ಬೇಟಿಯಾದೆ. ಹದಿನಾಲ್ಕು ವರ್ಷ ಅನಂತರ ತಜ್ನ ವೈದ್ಯರ ಪರೀಕ್ಷಾ ಮೇಜಿನ ಮೇಲೆ ಮಲಗಿದ್ದೆ. ಹೊಸ ತಂತ್ರಜ್ನಾನ ತರಬೇತಿಗಳಿಂದ ಡಾಕ್ಟರ್ ನನ್ನ ಸಮಸ್ಯೆ ಪರಿಹರಿಸಬಹುದೆಂದು ಕಾತರನಾಗಿದ್ದೆ. ನನ್ನ ಹಳೆಯ ದಾಖಲೆಗಳನ್ನೆಲ್ಲ moneyಪಾಲದ ಆಸ್ಪತ್ರೆ ತಿಂದು ಹಾಕಿದ ಕಾರಣ ಸಮಸ್ಯೆಯ ಹಿನ್ನೆಲೆ ಬಗೆಗೆ ಯಾವ ಸುಳಿವೂ ವೈದ್ಯರಿಗೆ ದೊರಕುವಂತಿರಲಿಲ್ಲ. ಹಾಗಾಗಿ MRI ಮಾಡಿಸಿಕೊಂಡು ಬರಲು ಸೂಚಿಸಿದರು.


ಹದಿನಾರು ವರ್ಷ ಹಿಂದೆ ಯಾಂತ್ರಿಕ – ನೇಲುವ- ರೆಕ್ಕೆಯಲ್ಲಿ ಹಕ್ಕಿಯಂತೆ ಹಾರುವಾಗ ಯಾಂತ್ರಿಕ ಸಮಸ್ಯೆ ಜತೆಗೆ ಮಾನಸಿಕ ಗೊಂದಲದಿಂದಾಗಿ ನೆಲಕ್ಕೆ ಅಪ್ಪಳಿಸಿದೆ. ಬೆನ್ನೆಲುಬಿನ ಕೆಳಗಿನ ಬಾಗ ಜಜ್ಜಿ ಹೋದಂತಾಗಿದೆ, ಉಶಾರಾಗುತ್ತಾನೆ ಎಂದರು ಮೊದಲು ಚಿಕಿತ್ಸೆ ನೀಡಿದ ಮಂಗಳೂರ ಎಲುಬು ತಜ್ನ ಡಾ ಶಾಂತಾರಾಮ ಶೆಟ್ಟಿ. ಮೂರು ವಾರವಾದರೂ ಗುಣವಾಗುವ ಚಿಹ್ನೆ ಕಾಣದೆ ನನ್ನ ಮಣಿಪಾಲಕ್ಕೆ ಕರೆದೊಯ್ದರು. ಅಲ್ಲಿ ಕೈಗೊಂಡ ಪರೀಕ್ಷೆಗಳು ಜಜ್ಜಿ ಹೋದುದರ ಖಚಿತಪಡಿಸಿದವು.


ಬೆನ್ನುಲುಬಿನ ಒಳಗೆ ಕೆಳತುದಿಯಲ್ಲಿರುವ ನರದ ಜಾಲಕ್ಕೆ ಲಾಟಿನ್ ಬಾಷೆಯಲ್ಲಿ cauda equina ಕುದುರೆ ಬಾಲ ಎಂದು ಕರೀತಾರೆ. ಒಂದಷ್ಟು ದಾರಗಳ ಮುಷ್ಟಿಯಲ್ಲಿ ಹಿಡಿದಂತೆ. ಈ ಕುದುರೆ ಬಾಲ ಜಜ್ಜಿ ಹೋದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ನನಗೆ ಈ ಜಾಗಕ್ಕೆ ಪೆಟ್ಟು ಬಿದ್ದು ದೇಹದ ಕೆಳಗಿನ ಬಾಗದ ನಿಯಂತ್ರಣದ wiring junction box ಪುಡಿ ಪುಡಿ.

ಇಂದಿನ ವೈದ್ಯಕೀಯ ಸಲಹೆ ಪ್ರಕಾರ ಸಮಸ್ಯೆ ಪರಿಹಾರಕ್ಕಾಗಿ ಹಾಗೂ ಶಾಶ್ವತ ಹಾನಿ ತಡೆಗಟ್ಟಲು ತಕ್ಷಣ ಶಸ್ತ್ರ ಚಿಕಿತ್ಸೆ ಮಾಡುವುದೇ ಉತ್ತಮ. ತಕ್ಷಣ ಚಿಕಿತ್ಸೆ ಲಬ್ಯವಾದರೂ ಸಮಸ್ಯೆ ಕೆಲವು ಮಟ್ಟಿಗೆ ಉಳಿದುಕೊಳ್ಳಬಹುದು. ತೊಡೆ ಮತ್ತು ಲೈಂಗಿಕ ಅಂಗಗಳ ಮರಗಟ್ಟುವಿಕೆ, ಕಾಲುಗಳ ಹಾಗೂ ಮಲಮೂತ್ರ ನಿಯಂತ್ರಣ ಕಳಕೊಳ್ಳುವುದು ಇವೆಲ್ಲ ಸಾಮಾನ್ಯ ಲಕ್ಷಣಗಳು ಎನ್ನುತ್ತದೆ ವೈದ್ಯಕೀಯ ಮಾಹಿತಿ ಪತ್ರಗಳು. ಪುಣ್ಯವಶಾತ್ ನನ್ನ ಸಮಸ್ಯೆಗಳು ಹೆಚ್ಚು ಗಂಬೀರವಾಗಿರಲಿಲ್ಲ.


ನಾಲ್ಕು ತಿಂಗಳು ಮಲಗಿ ನಂತರ ಎದ್ದು ಓಡಾಡಲು ಪ್ರಾರಂಬಿಸಿದೆ. ಅಷ್ಟರಲ್ಲಿ ಹೆಚ್ಚು ದೂರ ನಡೆಯುವುದು ಗುಡ್ಡವೇರುವುದು ಇತ್ಯಾದಿ ಸಿಮಿತವಾದರೂ ಮಲಮೂತ್ರನಿಯಂತ್ರಣ ಬಹಳಷ್ಟು ಚೇತರಿಸಿಕೊಂಡ ಕಾರಣ ನಿತ್ಯ ಓಡಾಟಕ್ಕೆ ಸಾದ್ಯವಾಯಿತು. ದೇಹದ ಬಹು ಬಾಗ ಸ್ಪರ್ಶಜ್ನಾವಿಲ್ಲವಾದರೆ ಬೆನ್ನು ಸದಾ ನೋಯುತಿತ್ತು. ಚಳಿ ಸೆಕೆ ಎರಡೂ ಸಹಿಸಲು ಕಷ್ಟವಾಗುತಿತ್ತು.

ಎರಡು ವರ್ಷ ಕಳೆಯುವಾಗ ವಿಪರೀತ ಬೆನ್ನು ಸೆಳಿತ ಪ್ರಾರಂಬ. ಸೂಜಿಯಲ್ಲಿ ಚುಚ್ಚುವ ಅನುಭವ. ಆ ಜಾಗವನ್ನು ಉಜ್ಜಿದರೂ ಪರಿಹಾರ ಶೂನ್ಯ. ಇಂತಹ ಅಪಘಾತದಲ್ಲಿ ನಂತರ ಚಿಗುರುವ ಸಮಸ್ಯೆ Syringomyelia ಅನ್ನುವ ಕಂಟಕ ನನ್ನನ್ನು ಬಾದಿಸುತಿತ್ತು. ಬೆನ್ನೊಳಗೆ ಸುಮಾರು ೩೫೦ ಮಿಲಿ ಲೀಟರ್ cerebrospinal fluid ದ್ರವ ಇರುವುದಂತೆ. ಇದರ ಚಲನೆಗೆ ಅಡ್ಡಿಯಾಗುವ cyst ಬೆಳವಣಿಗೆ ಉಂಟಾಗಿತ್ತು. ಈ cyst ಬೆಳವಣಿಕೆ ಬೆನ್ನುಲುಬು ಪುಡಿಯಾದವರಿಗೆ ಕ್ರಮೇಣ ಕಾಣಿಸಿಕೊಳ್ಳುವುದಿದೆಯಂತೆ. ಬೆನ್ನುಲುಬಿನೊಳಗಿನ ದ್ರವ ಉತ್ಪತ್ತಿ ಹಾಗೂ ಹೀರಿಕೊಳ್ಳುವ ಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಇದು ಬೆನ್ನೆಲುಬಿಗೆ ಹಲವು ರೀತಿಯ ಸೇವೆಗಳ ನಿರ್ವಹಿಸುತ್ತದೆ. ಅದರ ಸಂಚಾರಕ್ಕೆ ಸೂಕ್ತ ಚಿಕಿತ್ಸೆ ದೊರೆಯದೆ ಹೋದರೆ ಮರಣಾಂತಿಕವಾಗ ಬಹುದಾದ ತಡೆಯುಂಟಾಗಿತ್ತು. http://en.wikipedia.org/wiki/Syringomyelia


ಇದು ಶಾರ್ಟ್ ಸರ್ಕಿಟ್ ಆದಂತೆ ಎಂದು ಸರಳವಾಗಿ ವಿವರಿಸಿದ ನರ ಶಸ್ತ್ರಚಿಕಿತ್ಸಕ ಡಾ ರಾಜ ಬೆನ್ನೆಲುಬಿನೊಳಗೆ ದ್ರವ ಸಂಚಾರ ಸುಗಮವಾಗಲು ಒಂದು ಕೊಳವೆಯನ್ನು ತುರುಕಿಸಿದ್ದರು. ಆಗ ಬಾಧಿಸುತ್ತಿದ್ದ ಬೆನ್ನಿನಲ್ಲಿ ಸೂಜಿ ಚುಚ್ಚುವಂತಾದ ವಿಪರೀತ ನೋವಿಗೆ ತಕ್ಷಣ ಪರಿಹಾರ ದೊರಕಿತ್ತು.

ಮೊದಲು ಜಜ್ಜಿದಲ್ಲಿಯೇ ಕತ್ತರಿಸುತ್ತೇನೆ ಎಂದು ಹೇಳಿದವರು ಚಿಕಿತ್ಸೆ ಅನಂತರ ಅಲ್ಲಿ ಗಾಯ ಗುಣಮುಖವಾದ ಕಾರಣ ಮೇಲಿನ ಎಲುಬನ್ನು ಕತ್ತರಿಸಿದೆ ಎಂದಾಗ ನನಗೆ ಉಳಿದ ಸಮಸ್ಯೆಗಳಿಗೆ ಪರಿಹಾರ ಇಲ್ಲವಲ್ಲವೆಂದು ಬೇಸರ ನಿರಾಶೆ ಉಂಟಾಗಿತ್ತು.

ಬದಿಯಿಂದ ನೋಡಿದರೆ ಬೆನ್ನೆಲುಬು ಬಹುಮಹಡಿ ಕಾರ್ ಪಾರ್ಕಿನಂತೆ ಕಾಣುತ್ತದೆ. ಬೆನ್ನುಲುಬಿನಲ್ಲಿ ಒಂದರ ಮೇಲೊಂದು ಪೇರಿಸಿರುವಂತೆ ಕಾಣುವ 33 ಎಲುಬುಗಳಿವೆ. ಚೀಟಿ ಅಂಟಿಸದ ಕಾರಣ ದಾರಿ ತಪ್ಪುವುದು ಅಸಾದ್ಯವೇನಲ್ಲ. ಎಲ್ಲವು ಫಕ್ಕನೆ ಒಂದೇ ರೀತಿ ಕಾಣುವ ಕಾರಣ ಡಾ ರಾಜ ಅವರಿಗೆ ದಾರಿ ತಪ್ಪಿತೋ ? ಇರಲಾರದು ಅನ್ನಿಸುತ್ತದೆ ನನ್ನ ಚಿಕಿತ್ಸೆ ಮಾಡಿದ್ದು ಕೆಳಗಿನಿಂದ ಐದನೇಯ ಅಲ್ಲ ಅರನೇಯ ಮಹಡಿಯಲ್ಲಿ.

ಈ MRI ತೀರಾ ಕೆಟ್ಟ ಅನುಭವ.  ಬೆಂಚೊಂದರಲ್ಲಿ ಮಲಗಿಸಿ ಯಂತ್ರದ ಕೊಳವೆಯಾಕಾರದ ಬಾಗದೊಳಗೆ ತಳ್ಳುತ್ತಾರೆ. ಅಲುಗಾಡದೆ ಮುಕ್ಕಾಲು ಘಂಟೆ ಮಲಗಿರಬೇಕು.  ನನಗೆ ಹತ್ತು ನಿಮಿಷವೂ ಅಲುಗಾಡದೆ ಕೂರಲೂ ಮಲಗಲೂ ಸಾದ್ಯವಾಗುವುದಿಲ್ಲ. ರಾತ್ರಿ ಎಚ್ಚರವಾಗುವಾಗೆಲ್ಲ ಅಲುಗಾಡದೆ ಮಲಗಿದ ಕಾರಣ ವಿಪರೀತ ನೋವು. ಈ MRI ಯಂತ್ರ ಹೊರಡಿಸುವ ವಿಚಿತ್ರ ವಿಕಾರ ಕಿವಿಗುಟ್ಟುವ ಹಲವು ರೀತಿಯ ಶಬ್ದ ಮನಸ್ಸು ಕೇಂದ್ರಿಕರಿಸಲು ಸ್ವಲ್ಪ ಸಹಾಯ ಮಾಡಿತು.

ನನ್ನ MRI ಚಿತ್ರವನ್ನು ನೋಡಿದ ಡಾ ಮಹೇಶರು ಹದಿನಾಲ್ಕು ವರ್ಷದಿಂದ ನನ್ನ ಬೆನ್ನೆಲುಬಿನೊಳಗೆ ಕುಳಿತ ಕೊಳವೆ ಪೂರ್ತಿ ಬ್ಲೋಕ್ ಆಗಿದೆ ಎಂದಾಗ ನನಗೆ ಆಘಾತವಾಯಿತು. ಪಡ್ಚ   ಅನ್ನಿಸಿತು.    ನನ್ನ ಸೋದರತ್ತೆ ಗಂಡ ಹಿರಿಯ ವೈದ್ಯ ಡಾ ಗೋವಿಂದ ಭಟ್ ಅವರು ಆಗಲೇ ಈ ಕೊಳವೆ ಎಷ್ಟು ವರ್ಷ ಬಾಳುವಿಕೆ ಎನ್ನುವ ಪ್ರಶ್ನೆ ಹಾಕಿದ್ದರು. ಈಗ ಗುಜರಿಯಾಗಿದೆಯಂತೆ ಎಂದು ಹೇಳೋಣವೆಂದರೆ ಅವರು ನಮ್ಮೊಂದಿಗಿಲ್ಲ.

ಅಪಘಾತವಾದ ತಕ್ಷಣ ಶಸ್ತ್ರ ಚಿಕಿತ್ಸೆ ಮಾಡಬಹುದಾದ ಮಾಡಬೇಕಾದ case. ಈಗ ಏನು ಮಾಡುವಂತಿಲ್ಲ. ಮುಟ್ಟುವುದೂ ಅಪಾಯಕಾರಿಯಾಗಬಹುದೆಂದು ವಿವರಿಸಿ ವೈದ್ಯರು ನನ್ನ ಬೀಳ್ಕೊಟ್ಟರು. ಈ ತರುಣ ವೈದ್ಯರು ಆಂದು ನನಗೆ ಸಿಕ್ಕಿದ್ದರೆ ಅಥವಾ ನನ್ನ ಅಪಘಾತ ಕೆಲವು ವರ್ಷ ವಿಳಂಬಿಸಿದ್ದರೆ ಅನ್ನುವ ಅಲೋಚನೆ ಮನದಲ್ಲಿ ಮೂಡಿತು.

ಕಳ್ಳರ ಸಂತೆ ಕಥೆ ನೆನಪಾಯಿತು. ಕಥಾನಾಯಕ ಶುಂಠಿಯ ಪ್ರಿಯತಮೆ ಅವನಿಗಿಂತ ದೊಡ್ಡೋಳು. ಪರಿಹಾರವಾಗಿ ಒಂದು ವರ್ಷ ಕಾಯೋಣ ಆಗ ನಾನೊಂದು ವರ್ಷ ದೊಡ್ಡೋನಾಗ್ತೀನಿ. ನಂತರ ಮದುವೆಯಾಗೋಣ ಅಂದಿದ್ದ ಶುಂಠಿ.

Friday, April 03, 2009

ಮಳೆ ಕೊಯಿಲು ಅಮೇರಿಕದಲ್ಲಿ ಅಪರಾಧ

ಹೌದು. ಅಮೇರಿಕದಲ್ಲಿ ಕೆಲವು ರಾಜ್ಯಗಳಲ್ಲಿ ಮಳೆ ನೀರು ಕೊಯಿಲು ಕಾನೂನು ಬಾಹಿರ. ಹೊಳೆ ನೀರಿಗೆ ದೊಣ್ಣೆ ನಾಯಕ ಎನ್ನುವ ಅಮೇರಿಕದ ಕೆಲವು ರಾಜ್ಯಗಳ ಕಾನೂನುಗಳು ಭಲೇ ಮಜವಾಗಿದೆ. ಹಾಗಾಗಿ ಹಂಚಿಕೊಳ್ಳೋಣ ಅನ್ನಿಸಿತು


ಕೊಲರಾಡೊ ರಾಜ್ಯದಲ್ಲಿ ಪ್ರತಿ ಮಳೆಗೂ Kris Holstrom ಅಪರಾಧಿಯಾಗುತ್ತಾರೆ. ಕಾನೂನು ಉಲ್ಲಂಗಿಸಲು ಅವರು 200 ಲೀಟರ್ ಬಾರಲುಗಳನ್ನು ಉಪಯೋಗಿಸುತ್ತಾರೆ. ಈ ಪಾತ್ರೆಗಳಲ್ಲಿ ಹಿಡಿದ ಕರಗುವ ಹಿಮ ಹಾಗೂ ಮಳೆನೀರಿನಿಂದ ಅವರ ಪುಟ್ಟ ತರಕಾರಿ ತೋಟಕ್ಕೆ ನೀರಾವರಿ.

ಕ್ರಿಸ್ ಅವರು ಮಳೆಗೆ ಪಾತ್ರೆ ಹಿಡಿಯುವುದು ಜಗತ್ತಿನ ಹಲವೆಡೆ ಪರಿಸರವಾದಿಗಳು ಅನುಸರಿಸುತ್ತಿರುವ ಪ್ರಾಚೀನ ಸಂಪ್ರದಾಯ. ದೊರೆಯುವ ಮಳೆನೀರು ಮತ್ತು ಹಿಡಿಯುವ ಪಾತ್ರೆ ಅನುಸರಿಸಿ ಅವರವರ ಸಾಮರ್ಥ್ಯ ಅಗತ್ಯಗಳಿಗೆ ಹೊಂದಿಕೊಂಡು ಹಿಡಿಯುತ್ತಾರೆ. ಬಿಸಿಲಿಗೆ ಆವಿಯಾಗುವುವ ಅಡಚಣೆಯೊಂದಿಗೆ ಈ ತರ್ಲೆ ಸರಕಾರಿ ಕಾನೂನುಗಳು ತಡೆಯೊಡ್ಡುತ್ತವೆ.

ರಾಜ್ಯದ ಕಾನೂನು ಪ್ರಕಾರ ಮಳೆ ನೀರು ಅವರದಲ್ಲ. ನೂರು ವರ್ಷಗಳ ಹಿಂದೆ  ಹೊಳೆ ನೀರಿನ ಹಕ್ಕು ಹಂಚುವಾಗ ಪಡಕೊಂಡವರಿಗೆ ಸೇರಿದ್ದು. ಕ್ರಿಸ್ ಅವರಿಗೆ ರಾಜ್ಯದ ಕಾನೂನಿನ ಬಗೆಗೆ ಅವರಿಗೆ ಗುಮಾನಿ ಇತ್ತು. ಕಳೆದ ವರ್ಷ ಮಳೆ ನೀರು ಕೊಯಿಲಿನ ಪಾಠ ಮಾಡುವಾಗ ಸಂಬದ ಪಟ್ಟ ಅಧಿಕಾರಿಗಳ ಸಂಪರ್ಕಿಸಿ ಕೇಳಿದರು. ಮಳೆ ನೀರು ಕೊಯಿಲು ಈ ರಾಜ್ಯದಲ್ಲಿ ಕಾನೂನು ಬಾಹಿರ ಎನ್ನುವ ಉತ್ತರ ಸಿಕ್ಕಿದರೂ ಅವರಿಗೆ ದಂಡ ವಿಧಿಸುವ ಸಾದ್ಯತೆ ಇಲ್ಲವಂತೆ.

ಪ್ರಪಂಚದ ಎಲ್ಲೆಡೆ ಅಧಿಕಾರಿಗಳ ಧಿಮಾಕು ಒಂದೇ ತೆರನಾದುದು. ನೂರು ವರ್ಷ ಹಿಂದಿನ ಕಡತ ತೆಗೆಯುತ್ತಾರೆ. ಎಲ್ಲವೂ ಸಣ್ಣಮಟ್ಟಿನಲ್ಲಿಯೇ . ಪ್ರಾರಂಬ. ಪ್ರತಿ ಹನಿಯೂ ಅಮೂಲ್ಯ ಮತ್ತು ಕಣಿಯಿಂದ ತೋಡಿಗೆ, ತೋಡಿನಿಂದ ನದಿಗೆ ಎಂಬಂತೆ ನದಿಯ ಹರಿವಿಗೆ ಸಹಾಯಕ. ಒಬ್ಬರು ಮಳೆನೀರು ಹಿಡಿಯಲು ಸುರುವಿಟ್ಟರೆ ಇನ್ಯಾರಿಗೋ ಸೇರಿದ ಸೊತ್ತನ್ನು ಅಪಹರಿಸಿದಂತೆ ಅನ್ನುತ್ತಾರೆ ಅಲ್ಲಿನ ಸಂಬಂದ ಪಟ್ಟ ಅಧಿಕಾರಿಗಳು. ಕೊಲರಾಡೋ ರಾಜ್ಯದ ಅಧಿಕಾರಿಗಳ ಮಟ್ಟಿಗೆ ಸಂಗ್ರಹಿಸಿದ ಮಳೆ ನೀರು ಮಲೀನ ನೀರು. ಹುಲ್ಲು ಹಾಸು ಶೌಚಾಲಯದಲ್ಲಿ ಫ್ಲಶ್ ಮಾಡಲಷ್ಟೇ ಒಕೆ ಎನ್ನುವುದು ಅವರ ಹೇಳಿಕೆ.

ಕುಶಿಯ ವಿಚಾರ ಅಂದರೆ ಅಮೇರಿಕದಲ್ಲಿ ದೇವೆ ಗೌಡರಿಗೂ ನಮ್ಮಂತಹ ಜನಸಾಮಾನ್ಯರಿಗೂ ಒಂದೇ ಕಾನೂನು. ಅಲ್ಲಿನ ರಾಜ್ಯ ಮಟ್ಟದ ರಾಜಕಾರಣಿ ಶಾಸಕರಾದ ಕ್ರಿಸ್ ಹೋಮರ್ ಪರಿಸರ ಸ್ನೇಹಿ ಮನೆ ಕಟ್ಟಿದರು. ಪೂರ್ತಿ ಸೌರ ಶಕ್ತಿಯಲ್ಲಿ ನಿರ್ವಹಿಸುವ ಈ ಮನೆಯಲ್ಲಿ ಮಳೆ ನೀರು ಕೊಯಿಲು ಅಳವಡಿಸಲು ಸಾದ್ಯವಾಗಲಿಲ್ಲ. ಬಿದ್ದ ಮಳೆಯಲ್ಲಿ ಶೇಕಡಾ 97 ಇಂಗುತ್ತದೆ ಹೊರತು ಕಾಲುವೆಗೆ ಹರಿಯುವುದಿಲ್ಲ ಎನ್ನುವ ಮಾಹಿತಿಯೊಂದಿಗೆ ಕಳೆದ ವರ್ಷ ಮಳೆ ನೀರು ಕೊಯಿಲು ಕಾನೂನು   ರಾಜ್ಯದ ಶಾಸನ ಸಭೆಯಲ್ಲಿ  ಮಂಡಿಸಿದರೂ ಅನುಮೋಧನೆ ದೊರಕದೆ ಸೋತರು. ಈ ಸರಳ ವ್ಯವಸ್ಥೆ ಕಾನೂನು ಬಾಹಿರ ಎನ್ನಲು ಆಶ್ಚರ್ಯವಾಗುತ್ತದೆ ಎಂದವರು ಹೇಳುತ್ತಾರೆ.

ಅಂದ ಹಾಗೆ ಅಮೇರಿಕದ ಟೆಕ್ಸಾಸ್ ಪ್ರಾಂತ್ಯದಲ್ಲಿ ಒಬ್ಬರು ಮಳೆ ನೀರನ್ನು ಸಂಗ್ರಹಿಸಿ ಮೋಡದ ತಾಜಾ ಪಾನಿಯ ಎಂದು ಮಾರುತ್ತಾರಂತೆ. ಶ್ರೀ ರಿಚರ್ಡ್ ಅಮೇರಿಕದ ಪ್ರಥಮ ಮಳೆ ನೀರು ಬಾಟಲಿಗೆ ತುಂಬಿಸುವ ಮಾರಾಟಗಾರ.

http://www.truthout.org/031909EA

Wednesday, April 01, 2009

ನಮ್ಮೂರ ಗಾಂಪ ಸತ್ತ

ಮೊನ್ನೆ ನಮ್ಮ ಗ್ರಾಮದ ಗಣ್ಯ ವ್ಯಕ್ತಿ ಗಾಂಪ ಸತ್ತ ಸುದ್ದಿ ಬಂತು. ಮನುಷ್ಯನನ್ನೂ ಮರವನ್ನೂ ಖಚಿತವಾಗಿ ಅಳೆಯಲು ಸಾದ್ಯವಾಗುವುದು ಅಡ್ಡ ಬಿದ್ದಾಗಲೇ ಎನ್ನುವ ಮಾತು ನೆನಪಾಯಿತು. ಅವನ ನಡುವಳಿಕೆ ನೆನಪಾಗಿ ಜತೆಗೆ ಏನನ್ನು ತೆಗೋಂಡು ಹೋದ ಎಂದು ಕೇಳಲು ಮನಸ್ಸು ತವಕಿಸಿತು.

ಈ ರಾಜಕಾರಣಿಗಳು ತಮ್ಮ ಸ್ವಾರ್ಥ ಸಾಧನೆಗೆ ಅಕ್ರಮ ಸಕ್ರಮ ಎನ್ನುವ ಅದ್ಬುತ ಆಲೋಚನೆಯನ್ನು ಜಾರಿಗೆ ತಂದರು. ಎಲ್ಲ ಅಕ್ರಮಗಳಿಗೂ ಬೆಲೆ ನಿಗದಿಪಡಿಸಿದರು. ಒಂದಷ್ಟು ಸೋಮಾರಿಗಳು ಅವರಿವರ ಸೊತ್ತು ಎಗರಿಸುವುದೇ ಉದ್ಯೋಗ ಮಾಡಿಕೊಂಡು ಉಳಿದ ಗ್ರಾಮಸ್ಥರಿಗೆ ಮಾದರಿಯಾದರು. ಅದುದರಿಂದ ಜನ ಮುಗ್ದ ಹಳ್ಳಿಗರು ತಮಗೆ ಅರಿವಿಲ್ಲದೆಯೇ ಭ್ರಷ್ಟರಾದುದು ಇತಿಹಾಸ.

ತನಗೆ ಅಸರೆ ಕೊಟ್ಟವರ ಭೂಮಿಗೆ ಗುಟ್ಟಾಗಿ ಅರ್ಜಿ ಹಾಕಿದವರು ಹಳ್ಳಿಗಳಲ್ಲಿ ಹಲವು ಜನ. ಗಾಂಪ  ಇವರಿಗೊಂದು  ಮಾದರಿಯಾದ.  ಅಲ್ಲೊಂದು ಮಸೀದಿ ಕಟ್ಟುವ ಸುದ್ದಿ ಕೇಳಿದ ಕಾರಣ ಹಿಂದುಗಳಿಗೆಂದು ಉಳಿಸಲು ಅರ್ಜಿ ಹಾಕಿದೆ ಎಂದು ಗಾಂಪ ಹೇಳಿದರೆ ನಾವು ಅಲ್ಲಿ ಗೇರು ಬೀಜ ಇತ್ಯಾದಿ ಕಾಡುತ್ಪತ್ತಿ ಹಾಗೂ ಸೊಪ್ಪು ಸೌದೆಯನ್ನು ಸಂಗ್ರಹಿಸುತ್ತೇವೆ ಎಂದಳು ಅವನ ದರ್ಮಪತ್ನಿ.

ಗಳ ಎಣಿಸಿದ ಎಂದು ಉತ್ತರ ಕನ್ನಡದಲ್ಲೋದು ಗಾದೆ ಇದೆಯಂತೆ. ನಾನು ಕೇಳಿದ ಕಥೆ ಹೀಗಿದೆ. ಅತಿಥಿಯೊಬ್ಬ ಬಂದು ವಾರ ಕಳೆದರೂ ಹೊರಡುವ ಲಕ್ಷಣ ಕಾಣಲಿಲ್ಲ. ಮನೆ ಯಜಮಾನ ಕೊನೆಗೊಮ್ಮೆ ನೀವು ಯಾವಾಗ ಹೊರಡುವುದು ಎಂದಾಗ ಈ ಮನೆ ನನ್ನದು. ಹೊರಡುವ ಪ್ರಶ್ನೆ ಇಲ್ಲವಲ್ಲ ಎಂದು ಅತಿಥಿ ಉತ್ತರಿಸಿದ. ವಿಚಾರ ನ್ಯಾಯಾಲಯಕ್ಕೆ ಹೋಯಿತು. ಅತಿಥಿ ತನ್ನದೆಂದು ಹೇಳಿ ಮನೆಯ ಯಜಮಾನನಿಗೆ ಮನೆಯ ಛಾವಣಿಯ ಎದುರಿನ ಬದಿಯಲ್ಲಿ ಎಷ್ಟು ಗಳಗಳಿವೆಯೆಂದು ಸವಾಲು ಹಾಕಿದೆ. ಈ ಅತಿಥಿ ಮಲಗಿಕೊಂಡೇ ಗಳ ಎಣಿಸಿದ್ದ. ಮನೆಯಾತ ಅದು ತಾನೆ ಕಟ್ಟಿಸಿದ್ದ ಮನೆಯಾದರೂ ಅನಂತರ ಗಳ ಎಣಿಸುವ ಗೋಜಿಗೆ ಹೋಗಿರಲಿಲ್ಲವಂತೆ.

ಈಗ ಚುನಾವಣೆ ಘೋಷಣೆಯಾಗಿದೆ. ಸಮಾಜದ ಸೊತ್ತುಗಳನ್ನು   ವಶಪಡಿಸಿಕೊಳ್ಳುವ ಹೊಸ ಹೊಸ ಅಕ್ರಮ ಸಕ್ರಮ ಮಾರ್ಗಗಳ ಪಾಠ ರಾಜಕಾರಣಿಗಳು  ಹಳ್ಳಿಗರಿಗೆ ಮಾಡುತ್ತಾರೆ.  ವಿಷ ಬೀಜ  ಬಿತ್ತಿ  ಹುಲುಸಾದ  ಬೆಳೆ ತೆಗೆಯುತ್ತಾರೆ.   ಹೊಸ ತಲೆಮಾರಿನ     ಹಲವಾರು ಗಾಂಪರು ಹುಟ್ಟಿಕೊಳುತ್ತಾರೆ.