Sunday, January 06, 2013

1890ರಲ್ಲಿ ವಿನ್ಯಾಸವಾದ ನಮ್ಮ ಸೈಕಲು ರಿಕ್ಷಾ


ಪ್ರಪಂಚದಲ್ಲಿ ಅತಿ   ಹೆಚ್ಚು  ಸೈಕಲು ರಿಕ್ಷಾ  ಇರುವ  ದೇಶ  ಬಾರತ.  ಹಾಗೆಯೇ  ಅತ್ಯಂತ  ಕಳಪೆ ಪುರಾತನ   ಗಾಡಿಗಳನ್ನೂ  ನೀವು  ಕಾಣಬಹುದು  ಬಾರತದಲ್ಲಿ  ಮಾತ್ರ.  ಶತಮಾನ  ಕಳೆದರೂ  ನಮ್ಮ  ದೇಶದ  ಸೈಕಲು  ರಿಕ್ಷಗಳು  ಏನೂ ಬದಲಾವಣೆ  ಹೊಂದಿಲ್ಲ  ಎನ್ನುವುದು ಬಹಳ  ಬೇಸರದ  ವಿಚಾರ. :-(    ಕೆಳಗಿನ  ಚಿತ್ರದಲ್ಲಿರುವ    ಸೈಕಲು  ಅಕ್ಷಲ್  1900 ದಿಂದ  ಹಿಂದಿನದು.


ಈ  ರಿಕ್ಷಗಳಲ್ಲಿ  ನಮ್ಮ  ರಸ್ತೆ   ಸಂಚಾರ  ಸನ್ನಿವೇಶದಲ್ಲಿ ಅನಿವಾರ್ಯ  ಅನಿಸುವ  ಅಡ್ಡಾದಿಡ್ಡಿ  ತಿರುಗಲು  ಸಾದ್ಯವೇ  ಇಲ್ಲ.  ತುಳಿದರೆ  ಎರಡೂ  ಚಕ್ರಗಳು  ಸಮಾನಂತರ  ಮುಂದಕ್ಕೆ  ಚಲಿಸುತ್ತವೆ.  ಹಾಗಾಗಿ  ಅಂತಹ  ಸನ್ನಿವೇಶದಲ್ಲಿ  ಇಳಿದು  ತಳ್ಳುವುದು  ಅನಿವಾರ್ಯವಾಗುತ್ತದೆ. ಇದರಿಂದಾಗಿ  ಚಾಲಕನಿಗೆ ಶ್ರಮ ಹಾಗೂ ರಸ್ತೆಯಲ್ಲಿರುವ   ಇತರರಿಗೆ  ತಡೆ ಉಂಟಾಗುತ್ತದೆ. 

ಪರದೇಶಗಳಲ್ಲಿ  ಚಾಲೂ  ಇರುವ  ಸೈಕಲು   ರಿಕ್ಷಗಳಲ್ಲಿ  differential   ಇರುತ್ತದೆ.  ಆಗ  ತುಳಿಯುವಾಗಳೂ  ಹಿಂದಿನ  ಚಕ್ರಗಳು  ಬೇರೆ  ಬೇರೆ ವೇಗದಲ್ಲಿ  ತಿರುಗಲು  ಸಾದ್ಯವಾಗುತ್ತದೆ.    ಇಂದು ನಾವು  ಕಾರು ಬಸ್ಸುಗಳಲ್ಲಿ  ನೋಡುವ  ಈ  ಬಿಡಿಬಾಗ  ಪ್ರಪ್ರಥಮವಾಗಿ     ಮೇಲಿನ  ಚಿತ್ರದಲ್ಲಿರುವಂತೆ   ತ್ರಿ ಚಕ್ರ   ಸೈಕಲುಗಳಿಗೆ  ವಿನ್ಯಾಸಗೊಂಡವು.  ಕ್ರಮೇಣ  ಕಾರು  ಲಾರಿ   ತಯಾರಕರಿಗೂ  ಇವರೇ  ಈ  ಬಿಡಿಬಾಗ  ಪೊರೈಸಲು  ಸುರುಮಾಡಿದರು.  ನಮ್ಮವರು  ಕಾರುಗಳ  ಬಿಡಿಬಾಗ  ತಂತ್ರಜ್ನಾನದಿಂದಲೇ  ಸುರುಮಾಡಿದ ಕಾರಣ  ಇನ್ನೂ  ಸರಳ ಸೈಕಲ್ ರಿಕ್ಷ  ಬಿಡಿಬಾಗ ತಯಾರಿಸಲೇ  ಇಲ್ಲ.  ನೇರವಾಗಿ  ಮೂರನೆಯ  ಕ್ಲಾಸಿಗೆ  ಸೇರಿದ  ಸನ್ನಿವೇಶ. :-(   ನಮ್ಮಲ್ಲಿ   ಇಂದಿಗೂ  ಇದರ  ತಯಾರಿಕೆ   ಪ್ರಸ್ತುತ.  


ಮತ್ತೊಂದು  ಅನಿವಾರ್ಯ  ಬಿಡಿಬಾಗ – ಗೇರುಗಳು.  ಎಂತಹ  ಚಡಾವಿನಲ್ಲೂ  ಚಾಲಕ  ಇಳಿದು ತಳ್ಳುವ      ಸನ್ನಿವೇಶವೇ   ಬರುವುದಿಲ್ಲ.  ಕೂತವರಿಗೂ       ಅವನಿಗೆ  ಹಿಂಸೆ  ಕೊಡುತ್ತೇವೆ  ಅನ್ನುವ  ಬಾವನೆ  ಉಂಟಾಗುವುದಿಲ್ಲ.   ಮೇಲೆ ಕಾಣಿಸಿದ  ಎರಡೂ  ಬಿಡಿಬಾಗಗಳನ್ನು  ಚಿತ್ರದಲ್ಲಿರುವಂತೆ  ಜತೆಯಾಗಿ  ಅಥವಾ  ಪ್ರತ್ಯೇಕವಾಗಿಯೂ   ಅಳವಡಿಸಲು ಸಾದ್ಯ. 


ಅಮೇರಿಕದ     ವಾಶಿಂಗ್ಟನ್ ಪಟ್ಟಣದಲ್ಲಿ  ಅದುನಿಕ  ಸೈಕಲು ರಿಕ್ಷಗಳಿವೆ.    63   ಕಿಲೊ  ತೂಕದ  ಐದೂವರೆ  ಅಡಿ ಎತ್ತರದ ಕುಳ್ಳಿ  ಸಮಾಜಶಾಸ್ತ್ರ  ವಿದ್ಯಾರ್ಥಿನಿ 275   ಕಿಲೊ ಒಟ್ಟು   ತೂಕದ  ಮೂವರು ದಾಂಡಿಗರನ್ನು ಕೂರಿಸಿ    ಅವಳ  ರಿಕ್ಷದಲ್ಲಿ ಏರುರಸ್ತೆಯಲ್ಲಿ  ಕರಕೊಂಡು  ಹೋಗುವಾಗ ಸಾಕಷ್ಟು  ಕುಹಕ  ಮಾತು ಕೇಳಿದ್ದರೂ  ಕೊನೆಗೆ ಇಳಿಯುವಾಗ  ದಾರಾಳ  ಬಕ್ಷೀಸು ಕೊಟ್ಟ ಕಥೆ  ಹೇಳುತ್ತಾರೆ       ಸಾರಾ ರಾಬರ್ಟ್ಸ್.    ನಾನು ಅವರನ್ನು   ಕರಕೊಂಡು ಹೋಗಬಲ್ಲೆ  ಎನ್ನುವ ವಿಚಾರ ಜನ   ಆಶ್ಚರ್ಯ ಪಡುತ್ತಾರೆ  ಎನ್ನುತ್ತಾಳೆ    ಸಾರಾ.    ಕ್ಷಮಿಸಿ.   ಮೇಲೆ ಕಾಣಿಸುವುದು ಆಸ್ಟಿನ್ ಪಟ್ಟಣದ  ಸೈಕಲು ರಿಕ್ಷಾದ ಸಂದರ್ಬಿಕ ಚಿತ್ರ.  ನಾ  ಬರೆದ  ಪತ್ರಕ್ಕೆ  ಮೇಲಿನ   ಲೇಖನ  ಬರೆದ ಬಾರತೀಯಳಾದ  ಸುಜಾತ  ಉತ್ತರಿಸಲೇ  ಇಲ್ಲ. :-(   ಆದರೆ  ಅವರ  ಇಂಗ್ಲೀಷ್ ಲೇಖನ  ಕೊಂಡಿ ಕ್ಲಿಕ್ಕಿಸಿ  ಮೂಲದಲ್ಲಿ ಓದಬಹುದು.  


ನೇಮಿಚಂದ್ರ  ಅವರನ್ನು ಹೊತ್ತ ಸೈಕಲು  ರಿಕ್ಷಾದ   ಚಾಲಕ ಮುರುಳಿ ನಾಗ್,  ಕರಗಪುರದಲ್ಲಿ  ಮೇಲು ಸೇತುವೆ ಬಂದಾಗ  ಇಳಿದು ತಳ್ಳಬೇಕಾಯಿತು.  ಕಾರಣ ಇಷ್ಟೇ.  ನಮ್ಮ  ಸೈಕಲು ರಿಕ್ಷ ಕಳೆದ ನೂರೂ  ಚಿಲ್ಲರೆ    ವರ್ಷಗಳಲ್ಲಿ ಯಾವ  ಮಾರ್ಪಾಡೂ  ಕಾಣಲಿಲ್ಲ.   ಅಮೇರಿಕ  ತಲಪಿದ  ತಕ್ಷಣ  ತಮ್ಮನ್ನು ಕರಗಪುರ    ಪಟ್ಟಣಕ್ಕೆ  ಕರೆದೊಯ್ಯುತ್ತಿದ್ದ  ಮುರುಳಿ ನಾಗನನ್ನು ಮರೆತು ಬಿಡುತ್ತಾರೆ  ನಮ್ಮ ಇಂಜಿನಿಯರುಗಳು.    ಮೇಲಾಗಿ  ಈ  ಸರಳ  ಸಾಮಾನು  ವಿನ್ಯಾಸಕ್ಕೆ  ಇಂಜಿನಿಯರುಗಳ  ಅವಶ್ಯಕಥೆ  ಇಲ್ಲ.  ತಮ್ಮದೇನಿದ್ದರೂ  ಹೆಚ್ಚು   ಕ್ಲಿಷ್ಟವಾದ  ಸಮಸ್ಯೆಗಳ ಮೇಲೆ  ಗಮನ.   ಎಮ್ ಡಿ  ಆದ  ಡಾಕ್ಟ್ರು  ಆಸ್ಪತ್ರೆಯಲ್ಲಿ   ರೋಗಿಗೆ  ಬಾಂಡೇಜು  ಹಾಕ್ತಾರಾ  ?? ಸೂಜಿ  ಚುಚ್ತಾರಾ  ?. ;)    


ಸದಾಸಂಗಳಲ್ಲಿ     ಸಹಾ  ಹಿಂದೆ  ಡಿಫೆರೆನ್ಶಿಯಲ್    ಅಳವಡಿಸಿಲ್ಲ.     ಅದುದರಿಂದ   ನೇರವಾಗಿ ಮುನ್ನುಗ್ಗುತ್ತದೆ.    ಆದರೆ  ಅದರ  ಓಡಾಟವೆಲ್ಲ  ಮಣ್ಣು  ಮರಳಿನಲ್ಲಿ  ಕೆಸರಿನಲ್ಲಿ    ಹೊರತು  ಗಟ್ಟಿ ನೆಲದಲ್ಲಿ  ಅಲ್ಲವೇ   ಅಲ್ಲ.   ಅಪರೂಪವಾಗಿ   ಡಾಮರು ರಸ್ತೆಯಂತಹ   ಗಟ್ಟಿ  ನೆಲದಲ್ಲಾದರೆ ಚಿತ್ರದಲ್ಲಿ ಕಾಣುವಂತೆ   ಅದರ  ಒಂದು ಚಕ್ರವನ್ನು  ನೆಲದಿಂದ  ಮೇಲೆತ್ತುವ   ಕಸರತ್ತು  ಅಬ್ಯಾಸ  ಮಾಡಿಕೊಂಡಿರುತ್ತೇವೆ.    ಆದರೆ  ಪಟ್ಟಣ್ದದೊಳಗೆ ಓಡಾಡುವ    ಈ   ಸೈಕಲು  ರಿಕ್ಷದಲ್ಲಿ  ಅದಕ್ಕೆ ಅವಕಾಶ  ಇಲ್ಲವಲ್ಲಾ . :-(



ಪಾಕಿಸ್ಥಾನದ  ಗಡಿಯಲ್ಲಿರುವ  ಫಜಿಲ್ಕಾ  ಪಟ್ಟಣದ  ಮುಖ್ಯ  ರಸ್ತೆಯಲ್ಲಿ   ಹಗಲಿಡೀ    ವಾಹನ  ಸಂಚಾರ  ಇಲ್ಲ.  ಸೈಕಲು ರಿಕ್ಷಾ    ಒಕೆ.  ಅಲ್ಲಿ  ಹಲವು  ರಿಕ್ಷಾ  ನಿಲ್ದಾಣಗಳಿವೆ.  ಅಲ್ಲಿನ   ಚಾಲಕರಲ್ಲಿ    ಮೊಬೈಲ್  ಹಾಗೂ  ಗುರುತು ಚೀಟಿ  ಉಂಟು.  ರಿಕ್ಷಾ  ನಿಲ್ದಾಣಕ್ಕೆ  ಪೋನಿಸಿದರೆ  ಸಾಕು  ಗಾಡಿ  ಬರುತ್ತದೆ  ಮನೆ ಬಾಗಿಲಿಗೆ. :-)  ಸೈಕಲು  ರಿಕ್ಷಾ ವಿಚಾರ    ಬಾರತದ  ಮಟ್ಟಿಗೆ  ಗಣನೀಯ  ಕೆಲಸವಾದುದು  ಫಜಿಲ್ಕಾ, ವಾರಣಾಶಿ  ಮತ್ತು  ಅಗರ್ತಾಲದಲ್ಲಿ  ಅನ್ನಬಹುದು.  ಆಲ್ಲೂ  ಚಾಲಕರಿಗೆ  ಸರಳ ರೀತಿಯಲ್ಲಿ  ಕೈಗೆಟಕುವ  ಶರ್ತಗಳಲ್ಲಿ   ರಿಕ್ಷಾ  ಪೊರೈಕೆಯಾಯಿತು ಅಂದರೆ  ಆರ್ಥಿಕ  ಬದಿಗೆ  ಗಮನ  ಹರಿಸಲಾಗಿದೆ  ವಿನಹ  ತಾಂತ್ರಿಕತೆಗೆ  ಅಲ್ಲ. 

ತಾಂತ್ರಿಕತೆ  ಮುಂದುವರಿಯದಿರಲು    ಮುಖ್ಯ  ಕಾರಣ    ಅವುಗಳ  ಚಲಾವಣೆ  ಮಾಡುವ  ಹೆಚ್ಚಿನ  ವ್ಯಕ್ತಿಗಳು  ಅದರ  ಯಜಮಾನರಲ್ಲ.  ಬೆಳಗ್ಗೆ  ಈಸ್ಕೊಂಡು  ಬಂದು ಸಂಜೆ  ಇಪ್ಪತ್ತು   ಮೂವತ್ತು   ರೂಪಾಯಿ  ಬಾಡಿಗೆ  ಕೊಡುವ  ವಲಸೆ ಕೆಲಸಗಾರರು.  ಹೊಟ್ಟೆಪಾಡಿಗಾಗಿ   ಬಹಳ  ದೂರದ  ಹಳ್ಳಿಯಿಂದ ಬಂದ  ಇವರಿಗೆ   ಪಟ್ಟಣಗಳಲ್ಲಿ  ಅಗತ್ಯವಿರುವ   ಬೇರೇನೂ  ಕೌಶಲ್ಯ  ಇರುವುದಿಲ್ಲ.  ಆದುದರಿಂದ  ಅವರು  ಮೊರೆಹೋಗುವ  ಕೆಲಸ – ರಿಕ್ಷಾ  ಚಾಲನೆ.  ಕೊಳ್ಳಲು  ಬಂಡವಾಳವೂ  ಬೇಡ.  ಮುಖ್ಯವಾಗಿ  ಬೇಕಾದ್ದು  ತುಳಿಯುವ  ತಾಕತ್ತು.  ಯಜಮಾನರಿಗೂ  ಪುನಹ  ಖರ್ಚು ಮಾಡಿ  ಅದನ್ನು  ಉನ್ನತ ಸ್ತಿತಿಗೇರಿಸುವುದು   ಅನಿವಾರ್ಯ  ಅನಿಸುವುದಿಲ್ಲ.  ಹಾಗೆ  ನಮ್ಮ  ದೇಶದಲ್ಲಿ   ಸ್ವಂತ   ತ್ರಿ ಚಕ್ರ  ಸೈಕಲು  ಉಪಯೋಗಿಸುವವರ  ಸಂಖ್ಯೆ  ನಗಣ್ಯ. ಇದನ್ನು  ಉತ್ತಮಗೊಳಿಸುವ  ಬದಲಿಗೆ ರಾಜಕಾರಣಿಗಳೂ  ಅಧಿಕಾರಿಗಳೂ  ವಾಹನ ಸಂಚಾರ ಸುಗಮಗೊಳಿಸುವ  ನೆಪವೊಡ್ಡಿ    ಸೈಕಲು ರಿಕ್ಷಾಗಳನ್ನು      ರಸ್ತೆಯಿಂದಲೇ    ಓಡಿಸಲು ಪ್ರಯತ್ನಿಸುವುದು  ಖೇದಕರ. :@


ಮೇಲೆ  ಕಾಣಿಸುವ  ಕರಪತ್ರ   ಸುಮಾರು ನೂರು  ವರ್ಷ  ಹಿಂದಿನದು.    ಏರುತಗ್ಗುಗಳಿರುವ  ನನ್ನ  ಊರಲ್ಲಿ  ಸೈಕಲು ರಿಕ್ಷಾಕ್ಕೆ  ಅವಕಾಶವಿಲ್ಲ.  ಅದುದರಿಂದ  ನಾನು   ಆಸಕ್ತಿ  ಇದ್ದರೂ   ವೈಯುಕ್ತಿಕವಾಗಿ    ಇದರ  ಬಗೆಗೆ  ಕೆಲಸ ಮಾಡುವಂತಿಲ್ಲ.    ಆರೋಗ್ಯ  ಸಮಸ್ಯೆಯೂ  ಇದೆಯನ್ನಿ. :-(  

ಈ  ಎರಡು ತಾಂತ್ರಿಕ  ಬದಲಾವಣೆಗೆ  ಹೆಚ್ಚೆಂದರೆ  ನಾಲ್ಕು ಐದು ಸಾವಿರ ರೂಪಾಯಿ  ಖರ್ಚಾಗಬಹುದು.  ಹದಿನೈದರ  ಬದಲು ಇಪ್ಪತ್ತು ಸಾವಿರ  ಅನ್ನಿ.    ಅಂತಹ  ಬದಲಾವಣೆಯಾದಲ್ಲಿ  ಮೇಲು ಸೇತುವೆ ಬಂದಾಗ    ಮುದುಕ  ಮುರುಳಿ ನಾಗ್  ಇಳಿದು  ತಳ್ಳಬೇಕಾಗಿಲ್ಲ. :-)   ಪಟ್ಟಣದ  ಇಕ್ಕಟ್ಟಿನ   ತಿರುವುಗಳಲ್ಲೂ  ಕೂತೇ  ಸುದಾರಿಸಬಹುದು.  ಉಳಿದ  ವಾಹನದವರಿಗೆ ತಡೆ ಉಂಟು ಮಾಡುವುದಿಲ್ಲ.    ಆಗ  ಪ್ರಯಾಣಿಕರಿಗೆ  ಮುಜುಗರವಾಗುವುದೂ  ಇಲ್ಲ.   ಶೋಷಣೆ   ಮಾಡಿದ  ಬಾವನೆಯೂ  ಉಂಟಾಗುವುದಿಲ್ಲ.    ಆರಾಮದಾಯಕ   ಸವಾರಿಯಿಂದಾಗಿ    ಹೆಚ್ಚಿದ    ವ್ಯವಹಾರ  ವರ್ಷದೊಳಗೆ ಈ ಐದು ಸಾವಿರ  ತುಂಬಿಕೊಡಬಹುದು. 


ಮೂರು  ಚಕ್ರದ    ಸೈಕಲ್    ಬರೇ  ಪ್ರಾಯಾಣಿಕರ  ಓಡಾಟಕ್ಕೆ    ಸಿಮಿತವಾಗಬೇಕಾಗಿಲ್ಲ.   ಆಸುಪಾಸಿನಲ್ಲಿ  ಸರಕು ಸಾಗಾಟಕ್ಕೂ  ದಾರಾಳವಾಗಿ  ಉಪಯೋಗಿಸಬಹುದು.  ಹಲವು ಮುಂದುವರಿದ ದೇಶಗಳಲ್ಲಿ ಯಶಸ್ವಿಯಾಗಿ  ಉಪಯೋಗವಾಗುತ್ತಿದೆ.  ದುಬಾರಿ  ಅಮದು ಇಂದನವ  ದಹಿಸುವ   ಬದಲಿಗೆ    ಪರಿಸರ ಸ್ನೇಹಿಯಾದ  ಈ ವಾಹನವ    ಉಪಯೋಗಿಸುವ  ಮನಸ್ಸು ಮಾಡ ಬೇಕಷ್ಟೇ. :-)  


Tuesday, December 18, 2012

ನಮಗೆ ಬಂದೂಕು ಸಂಸ್ಕೃತಿ ಬೇಕಾ ?


ಮೊನ್ನೆ  ಅಮೇರಿಕದ  ಶಾಲೆಯೊಂದರೆ  ಇಪ್ಪತ್ತು ಮಕ್ಕಳ ಮತ್ತು  ಆರು   ಟೀಚರುಗಳ  ಕಗ್ಗೊಲೆ ಪ್ರಕರಣ  ಓದುವಾಗ  ನೆನಪಾಯಿತು -  ಒಂದು  ಹಳೆಯ   ಸಂಬಾಷಣೆ.  ಅಮೇರಿಕದ   ಆತ್ಮೀಯ  ಗೆಳೆಯ    ಎರಿಕ್  ಕೇಳಿದ “ ಭಾರತಿಯರು ಅಮೇರಿಕನರ    ಬಗೆಗೆ  ಯಾವ ಅಬಿಪ್ರಾಯ  ಹೊಂದಿದ್ದಾರೆ ? “  ಈ  ಮಹರಾಯನಿಗೆ   ನನ್ನ  ಕೆಣಕುವ  ಹವ್ಯಾಸ.    ನಾನು  ನಗುತ್ತಾ ಉತ್ತರಿಸಿದೆ. “ ಎಲ್ಲರೂ  ಕೋವಿ    ಇಟ್ಟುಕೊಂಡಿರುತ್ತಾರೆ. ಕೆಲವರು  ಎರಡನ್ನು.”  ಆಗ  ಕೈಗಳನ್ನು   ಮೇಲೆತ್ತಿ  ಹೇಳಿದ  ಎರಿಕ್ ನೋಡಯ್ಯಾ  ನನ್ನಲ್ಲಿಲ್ಲ.  ಹಾಗಾದರೆ  ಎಲ್ಲ  ಅಮೇರಿಕದವರೂ  ಕೋವಿ ಇಟ್ಕೊಂಡಿರ್ತಾರೆ  ಅನ್ನುವುದು  ತಪ್ಪು  ಆಲೋಚನೆನಾ  ? 




ಅಲ್ಲ   ನಮಗೆ  ಆ  ಭಾವನೆ  ಬರುವುದು  ಸಹಜ.    ಯಾಕೆಂದರೆ   ಪ್ರತಿ ವರ್ಷ  ಅಮೇರಿಕದಲ್ಲಿ   ಮೂವತ್ತು  ಸಾವಿರಕ್ಕೂ  ಹೆಚ್ಚು ಜನ   ಗುಂಡು ಬಡಿದು  ಸಾಯುತ್ತಾರೆ.  ಅದರಲ್ಲಿ  ಬಹುಪಾಲು  ಸತ್ತವರಿಗೂ  ಗುಂಡಿಕ್ಕಿದವರಿಗೂ  ಪರಿಚಯನೇ  ಇರೋದಿಲ್ಲ.     ಮೊನ್ನೆ  ಅಮೇರಿಕ್ದಲ್ಲಿ   ಶಾಲಾ  ದಾಳಿಯ ದಿನವೇ   ದೇಶದ  ಇನ್ನೊಂದು ಬಾಗದಲ್ಲಿ  ಒಬ್ಬ      ಎಲ್ಲರನ್ನೂ  ಉಡಾಯಿಸ್ ಬಿಡ್ತೇನೆ  ಅಂತ   ಬೆದರಿಸಿದ್ದ.   ಈ    ಅರೆ ಹುಚ್ಚನನ್ನು  ಪೋಲಿಸರು ವಶಕ್ಕೆ  ತೆಗೆದುಕೊಂಡಾಗ     ೪೭  ಕೋವಿಗಳೂ  ಅಪಾರ  ಮದ್ದುಗುಂಡುಗಳೂ  ಅವನ ಮನೆಯಲ್ಲಿದ್ದವು.   ಅವನ  ಮನೆಯಲ್ಲಿ  ಸುಮಾರು  ನಮ್ಮ  ಹಣದಲ್ಲಿ ಹೇಳೊದಾದ್ರೆ  ಐವತ್ತೈದು ಲಕ್ಷ  ರೂಪಾಯಿ  ಮೌಲ್ಯದ   ಸ್ಪೋಟಕ    ಮಾಲು    ಅವನಲ್ಲಿತ್ತು. 

ಆ  ದೇಶದಲ್ಲಿ  ಕೋವಿ ಪರವಾದ  ಲಾಬಿ  ರಾಜಕೀಯವಾಗಿ   ಬಹಳ  ಶಕ್ತಿವಂತವಾಗಿದ್ದು  ಹೆಚ್ಚಿನ   ಬೆಂಬಲವಿದ್ದುದು   ಮೊನ್ನೆ  ಸೋತ  ಆನೆ  ಪಕ್ಷದವರದು.    ಏನಾದರೂ   ಗಲಾಟೆ ನಡೆದಾಗ  ಸಂಬಂದಿಸಿದವರ  ಟಿವಿ  ಚರ್ಚೆಗೆ  ಅಹ್ವಾನಿಸುವ  ಸಂಪ್ರದಾಯ  ನಮ್ಮಲ್ಲಿರುವಂತೆ  ಅಲ್ಲೂ  ಇದೆ.   ಹಾಗೆ  ಮೂವತ್ತ ಒಂದು   ಕೋವಿವಾದಿ    ರಾಜಕಾರಣಿಗಳಿಗೆ  ಅಹ್ವಾನ  ಹೋದರೂ  ಯಾರೂ  ಸ್ವೀಕರಿಸಲಿಲ್ಲ.   ಎಲ್ಲರೂ  ಮಾದ್ಯಮದಿಂದ  ಅಡಗಿದ್ದಾರೆ.   ಅಲ್ಲಿನ   ಪತ್ರಿಕೆಯೊಂದರಲ್ಲಿ   ಸುದ್ದಿ  ಮತ್ತು   ಕ್ರಿಸ್ ಮಸ್  ಪ್ರಯುಕ್ತ   ರೀಯಾಯತಿ     ಕೋವಿ  ಮಾರಾಟದ ಜಾಹಿರಾತು  ಸಲೀಸಾಗಿ ಅಕ್ಕಪಕ್ಕದಲ್ಲಿ ಹಾಕಿರುವುದನ್ನು  ನೋಡಬಹುದು.     ಒಬಾಮ  ಪಕ್ಷದ  ಹೆಚ್ಚಿನವರು    ಬೆಂಬಲಿಸುವ  ಕೋವಿ ವಿರೋದಿ  ಕಾನೂನು ಅಲ್ಲಿ  ಬೇಗದಲ್ಲಿ   ಜಾರಿಗೆ ಬರಲೆಂದು  ಆಶೀಸೋಣ.   ತಡವಾದರೆ  ಪುನಹ  ’ ಕೋವಿವಾದಿಗಳು  ’   ಒಗ್ಗಟ್ಟಾಗಿ   ಅವರದೇ    ಕೈ ಮೇಲಾಗುತ್ತದೆ.





ನಮ್ಮನೆಯಲ್ಲೂ   ಒಂದು ಕೋವಿ ಇತ್ತು.     ನನ್ನ  ಅಜ್ಜ   ಅಂದರೆ  ಅಪ್ಪನ  ಚಿಕ್ಕಪ್ಪ ೧೯೨೮ರಲ್ಲಿ  ಮದ್ರಾಸಿನಲ್ಲಿ ನಡೆದ  ಕಾಂಗ್ರೇಸ್  ಅಧಿವೇಶನಕ್ಕೆ  ಹೋಗಿದ್ದರು.  ಹೋದ  ನೆನಪಿಗೆ   ಎನಾದರೂ  ತರಬೇಕಲ್ಲ.    ಹಾಗೆ    ಬರುವಾಗ ತಂದದ್ದು ಒಂದು ಒಂಟಿ ನಳಿಗೆ  ಕೋವಿ.  ಮಕ್ಕಳಿಲ್ಲದೆ  ಅವರು  ತೀರಿಕೊಂಡಾಗ  ಅಜ್ಜಿ  ಅದನ್ನು ನನ್ನಪ್ಪನ  ವಶಕ್ಕೊಪ್ಪಿಸಿದರು.  ಪರಿಣಾಮವಾಗಿ     ನನ್ನಪ್ಪನೂ  ಕೋವಿ ಲೈಸೆನ್ಸ್ ದಾರರಾದರು.  

ನನ್ನ ಹುಚ್ಚಾಟ  ತಿರುಗಾಟವೆಲ್ಲ  ಮುಗಿದು ಮನೆಯಲ್ಲಿ ಕೃಷಿ ಸಹಾಯಕ್ಕೆ  ತೊಡಗಿಸಿಕೊಂಡಿದ್ದೆ.  ಆ ಸಮಯ  ಕೋವಿ ಪರವಾನಿಗೆ  ನವೀಕರಣ  ಸಮಯವಾಯಿತು.  ನನ್ನಲ್ಲಿ ಅಪ್ಪ  ಹೇಳಿದರು – ನನಗೆ ವಯಸ್ಸಾಯಿತು.   ಕೋವಿ ಲೈಸೆನ್ಸ್  ಇನ್ನು    ನಿನ್ನ ಹೆಸರಿಗೆ ಮಾಡುತ್ತೇನೆ.  ಅಗ  ನಾನು,   " ಅದರಲ್ಲಿ ನನಗೆ ನಂಬಿಕೆ ಇಲ್ಲ"ವೆಂದು  ಉತ್ತರಿಸಿದೆ.  ಅದಕ್ಕೆ  ಅವರು  -   ಪರವಾನಿಗೆ  ನವೀಕರಣ ಆಗದೆ ಮನೆಯಲ್ಲಿ ಇಟ್ಟುಕೊಳ್ಳುವಂತಿಲ್ಲ.  ಹಾಗಾಗಿ ಅದನ್ನು  ಪೋಲಿಸ್  ಠಾಣೆಯಲ್ಲಿ  ಇಡುತ್ತೇನೆ.  ಅದು ಸರಕಾರಕ್ಕಾಗಲಿ.  [ ಅಕಸ್ಮಾತ  ಬೇಕೆನಿಸಿದರೆ   ಲೈಸೆನ್ಸ್  ಮಾಡಿಸಿದ  ನಂತರ  ತರಬಹುದು.]     ನಾನು ಸಂತೋಷದಿಂದ  ಒಪ್ಪಿ  ಅಪ್ಪನನ್ನು   ವಿಟ್ಲದ    ಪೋಲಿಸ್ ಠಾಣೆಗೆ ಕರೆದುಕೊಂಡು   ಹೋದೆ.   “ನಣ  ಇಂದು  ನಿಕ್ ಳೆಗ್  “   ಅಂತ   ಹೇಳಿ  ಅವರು  ಅದನ್ನು  ಅಲ್ಲಿ  ಒಪ್ಪಿಸಿಬಂದರು.  ಇದು ಇಪ್ಪತ್ತು  ಇಪ್ಪತ್ತ  ನಾಲ್ಕು   ವರ್ಷ  ಹಿಂದಿನ  ಮಾತು. 

ಪುಣ್ಯಕ್ಕೆ  ಇದರ  ಮೇಲೆ  ಕಣ್ಣಿಟ್ಟಿದ್ದ  ಖರೀದಿಸುವ  ಆಸಕ್ತಿ ಇದ್ದ  ಯಾರಿಗೂ  ಇದರ  ಸುಳಿವು ಸಿಗಲಿಲ್ಲ.  ಅಕಸ್ಮಾತ್  ಗೊತ್ತಾದರೆ  ನಾವು  ತುಂಬಾ   ಒತ್ತಡಕ್ಕೆ  ಒಳಗಾಗುತ್ತಿದ್ದೆವು.  ಖಾಸಗಿ  ಸಂಗ್ರಹದಿಂದ  ಒಂದು  ಕೋವಿ  ಸರಕಾರಕ್ಕೆ  ಹೋದದ್ದು  ನನಗೆ ಸಂತಸದ  ವಿಚಾರವೇ.   

ಗೆಳೆಯ  ನಾರಾಯಣ  ಮೂರ್ತಿ  ಹೇಳಿದ ಒಂದು  ಕಥೆ   ನೆನಪಾಗುತ್ತದೆ.  ಹಿಂದೆ  ಕೋವಿ  ಇಟ್ಕೊಳ್ಳುವುದು  ನಿರ್ಬಂದ   ಇದ್ದ  ಮಹಾಯುದ್ದದ  ಸಮಯ.   ಹಾಗೆ  ಒಮ್ಮೆ ಪರವಾನಿಗೆ  ಇಲ್ಲದ  ಕೋವಿ  ಇರುವ ಗುಮಾನಿಯಲ್ಲಿ ಪೋಲಿಸರು ದಾಳಿ  ಒಂದು ಮನೆಗೆ  ಮಾಡಿದರು. ಇಡೀ ಮನೆ   ಜಾಲಾಡಿದರೂ   ಕೋವಿ ಸಿಗಲಿಲ್ಲ. ಮನೆಯಲ್ಲಿರುವ  ಪುಟ್ಟ  ಹುಡುಗನ ಪೋಲಿಸ  ಇನ್ ಸ್ಪೆಕ್ಟರ್   ಪುಸಲಾಯಿಸಿದರು.  ತಾವು  ಹುಡುಕುತ್ತಿರುವ  ಸಾಮಾನಿನ  ಆಕಾರ  ಹೇಳಿದರು.   ಹುಡುಗ  ಚುರುಕಾದ  “ ಟಪೋ  ಅನ್ನೋದಾ  ನೀವು ಹುಡುಕಿತ್ತಿರುವುದು.  ಅದು ನನಗೆ ಗೊತ್ತು “ ಎಂದು   ಮಾಡಿನ  ಮರೆಯಲ್ಲಿ ಅಡಗಿಸಿಟ್ಟಿದ್ದ  ಕೋವಿ  ತೋರಿಸಿದ.  ಆ ಹುಡುಗ  ಮುಂದೆ  ಊರ ಶಾಲೆ  ಮಾಸ್ತರ್ ಆದ  ನಂತರ  ಪುಂಡ ಹುಡುಗರ  ಬಾಯಲ್ಲಿ “  ಟಪೊ “ ಮಾಸ್ತರರಾದ.   

ದೆಹಲಿಯ  ಹೊರವಲಯದ  ಗಜಿಯಾಬಾದಿನಲ್ಲಿ   ಐದು ಸಾವಿರ ಕೋವಿ ಪೋಲಿಸರಲ್ಲಿ  ಇದ್ದರೆ  ಇಪ್ಪತ್ತು ಸಾವಿರ ಕೋವಿ ಲೈಸೆನ್ಸುದಾರರಲ್ಲಿಯೇ ಇದೆ   ಎನ್ನುತ್ತದೆ  ಇಂಗ್ಲೇಂಡಿನ ಪತ್ರಿಕೆಯ  ವರದಿ.    ಲೆಕ್ಕಕ್ಕೆ  ಸಿಗಗಿದುರುವುದು  ಎಷ್ಟೋ,  ಯಾರಿಗೂ  ಗೊತ್ತಿಲ್ಲ.. ನನ್ನಕ್ಕನ  ಮಗ  ಬಿಹಾರದ  ಕಾಲೇಜಿನ  ವಿದ್ಯಾರ್ಥಿಯಾಗಿರುವಾಗ  ಹೇಳುತ್ತಿದ್ದ.  "ಮಾವ,  ಅಲ್ಲೆಲ್ಲ  ’ ಕಟ್ಟಾ ’  ಊರಲ್ಲಿ ತಯಾರದ  ಪಿಸ್ಟೂಲ್  ಹೊಂದುವುದು  ಮಾಮೂಲಿ.   ಕೆಲವೊಮ್ಮೆ  ಹುಡುಗರು  ಶಾಲೆಗೂ  ತರುತ್ತಾರೆ. "

ಪೊಂಟಿ  ಚಡ್ಡಾ ಎನ್ನುವಾತ  ಉತ್ತರ  ಪ್ರದೇಶದ   ಮದ್ಯದ  ದೊರೆ.   ಅವನಿಗೆ ಹಲವು  ಕೋವಿಗಳ  ಪರವಾನಿಗೆ  ಇತ್ತು.     ಸಹೋದರನೊಂದಿಗೆ   ಪಾಲಿನ  ವಿಚಾರ  ಜಗಳ.  ಏನಾದರೂ  ಒಪ್ಪಂದಕ್ಕೆ  ಬರೋಣ  ಅಂತ  ಸೇರಿದರು,  ಇಬ್ಬರ  ಜತೆಯೂ   ದೊಡ್ಡ    ಬೆಂಗಾವಲು ಪಡೆ,    ಹಲವು  ಕೋವಿ ಹಿಡಕೊಂಡ  ರಕ್ಷಕರು.   ಮಾತುಕಥೆ  ಮದ್ಯೆ  ಯಾರೋ ಹಿತೈಶಿಗಳು [?]    ಮೊದಲ ಗುಂಡು ಹಾರಿಸಿ  ಗುಂಡು ಕಾಳಗ ಸುರುಮಾಡಿದರು.   ಗುಂಡಿನ  ಸದ್ದು ನಿಲ್ಲೊವಾಗ  ಪೊಂಟಿ  ಮತ್ತವನ  ಸಹೋದರ  ಇಬ್ಬರೂ  ಹೆಣವಾಗಿ ಮಲಗಿದ್ದರು. 





ನಮ್ಮಲ್ಲಿ  ಕೊಡವರಂತೆ    ಹಲವು ಜನಾಂಗಕ್ಕೆ   ಕೋವಿ ಎಂದರೆ  ಹೆಮ್ಮೆಯ ವಿಚಾರ.  ಅವರ ಕೈಯಿಂದ  ಕೋವಿ ಕಸಿದುಕೊಳ್ಳುವುದು ಕಷ್ಟ ಸಾದ್ಯ.     ಅತಿ  ಹೆಚ್ಚು  ನಾಗರಿಕರ  ಕೈಯಲಿ ಕೋವಿ  ಇರುವ  ಪಟ್ಟಿಯಲ್ಲಿ    ನಮ್ಮ  ದೇಶ  ಎರಡನೆ  ಸ್ಥಾನದಲ್ಲಿದೆಯಂತೆ   ಅಲ್ಲ  ಆಕ್ರಮ  ಕೋವಿಗಳ  ಸೇರಿಸಿದರೆ  ಮೊದಲನೆಯದೋ  ?    ನನ್ನ  ಗ್ರಾಮದಲ್ಲಿಯೇ  ಒಬ್ಬ   (ಕು)ಖ್ಯಾತ   ಅಕ್ರಮ  ಕೋವಿ  ತಯಾರಕನಿದ್ದಾನೆ.  ಅವನು ಹಲವು ಬಾರಿ  ಪೋಲಿಸರು ಹಿಡಿದರೂ   ವ್ಯಾಪಾರ ಲಾಬ  ಅವನನ್ನು  ಸಂಪೂರ್ಣ  ತ್ಯಜಿಸಲು ಬಿಡುವುದಿಲ್ಲ.  

ಸಂಪೂರ್ಣ ಕೋವಿ  ನಿವಾರಣೆ  ಸಾದ್ಯವಿಲ್ಲದ ವಿಚಾರ  ಬಿಡಿ.   ಆದರೂ  ನನ್ನದೊಂದು ಪ್ರಶ್ನೆ -  ನಮಗೆ ಬಂದೂಕು  ಸಂಸ್ಕೃತಿ  ಬೇಕಾ  ?   ನಾವು  ಮನೆಯಲ್ಲಿ  ಕೋವಿ ಇಟ್ಟುಕೊಳ್ಳಬೇಕಾ  ?  

Sunday, December 16, 2012

ಲಕ್ಷ ಜನರಿಗೆ ವಿದ್ಯುತ್ ಕೊಡುವ ಅಜ್ಜಿ ಕಥೆ


ಸೌರ  ವಿದ್ಯುತ್ ಅಥವ   ಪರಿಸರಪೂರಕ  ವಿದ್ಯುತ್  ಉತ್ಪಾದನೆ   ಎಲ್ಲ  ಕನಸಿನ  ಮಾತು, ಅಸಂಬದ್ದ  ಆಲೋಚನೆ   ಅದೆಲ್ಲ  ಆಗುವುದಿಲ್ಲ  ಹೋಗುವುದಿಲ್ಲ  ಎನ್ನುವ  ತರ್ಕ  ನಮ್ಮ  ಸಮಾಜದ   ಹೆಚ್ಚಿನ  ಪಾಲು  ಜನರದ್ದು.   ಆದರೆ  ಇವೆಲ್ಲ  ನಿಜವಾಗಿಸಿದ  ಕಂಪೇನಿ  ಜರ್ಮನಿಯಲ್ಲಿದೆ.   ಇದರ   ಮುಖ್ಯಸ್ಥೆ   ರಾಜದಾನಿಯಲ್ಲಿ ನೆಲೆಸಿಲ್ಲ , ದುಬಾರಿ ಕಾರಿನಲ್ಲಿ  ಓಡಾಡುವುದಿಲ್ಲ ,  ಎಮ್ ಬಿ ಎ  ಕಲಿತಿಲ್ಲ.      ಪ್ರಾಥಮಿಕ  ಶಾಲಾ  ಶಿಕ್ಷಕಿ  ಅಂದರೆ   ಗೊತ್ತಲ್ಲಾ  -     ಪುಟ್ಟ  ಮಕ್ಕಳಿಗೆ   ಅ  ಆ  ಇ ಈ …. ಕಲಿಸೋದು    ಅವರ  ಶೈಕ್ಷಣಿಕ  ಅರ್ಹತೆ.  ಮಕ್ಕಳ ಬವಿಷ್ಯದ  ಬಗೆಗಿನ  ಕಾಳಜಿ  ಐದು ಮಕ್ಕಳ   ಬೆಳೆಸುವುದರಲ್ಲೇ  ನಿರತಳಾಗಿದ್ದ  ಈ  ಮಹಿಳೆಯನ್ನು ಮನೆಯಿಂದ  ಹೊರಗೆಳೆಯಿತು. :rainbow 

ಚೆರ್ನೋಬಿಲ್  ಅಣುವಿದ್ಯುತ್ ಕೇಂದ್ರದಲ್ಲಿ  ಅಪಘಾತವಾಗದಿದ್ದರೆ   ಉರ್ಸುಲಾ    ಸ್ಲಾಡೆಕ್  ಈಗ  ಮೊಮ್ಮಕ್ಕಳ  ನೋಡಿಕೊಳ್ಳುತ್ತಾ  ಇದ್ದರು.  ಅಪಘಾತವಾದುದು  ಎರಡು ಸಾವಿರ  ಕಿಮಿ ದೂರವಾದರೂ  ವಿಕಿರಣ  ಇವರ  ಪರಿಸರದಲ್ಲೆಲ್ಲ  ಹರಡಿ ಬಿದ್ದಿತ್ತು.    ನನ್ನ  ಮಕ್ಕಳು  ಸೊಪ್ಪುತರಕಾರಿ  ತಿನ್ನಬಹುದೋ / ನಮ್ಮ  ಹಾಲು  ಕುಡಿಯಬಹುದೋ  ಇತ್ಯಾದಿ  ಯೋಚನಗೆ  ಕೂರುವಂತಾಯಿತು.   ಸರಕಾರ  ಹಾಲಿನ  ಹುಡಿ  ಉಪಯೋಗಕ್ಕೆ  ಸೂಚನೆಕೊಟ್ಟಿತ್ತು.   ಮನೆಯಲ್ಲಿ    ಐದು  ಮಕ್ಕಳಿದ್ದು    ಮುಂದೆ   ಅವರು  ಜೀವಿಸಲಿರುವ  ಪ್ರಪಂಚದ ಬಗೆಗೆ ಚಿಂತಿಸದೆ  ಇರಲು ಸಾದ್ಯವಾಗಲಿಲ್ಲ.   ಮೊದಲು   ಪ್ರಾಥಮಿಕ  ಶಾಲೆ  ಶಿಕ್ಷಕಿಯಾಗಿದ್ದ   ಸ್ಲಾಡೆಕ್,  ವೈದ್ಯರಾದ    ಅವಳ  ಗಂಡ  ಮತ್ತು   ಅದೇ ರೀತಿಯಲ್ಲಿ ಚಿಂತಿಸುವ   ಜನ  ಸೇರಿ   ಅಣುವಿದ್ಯುತ್  ವಿರೋದಿಸುವ  ಪೋಷಕರ  ತಂಡವನ್ನು  ಕಟ್ಟಿದರು.   



ಆ  ಕಾಲದಲ್ಲಿ  ಜರ್ಮನಿಯ  ವಿದ್ಯುತ್  ಬೇಡಿಕೆ  ಅಣು ವಿದ್ಯುತ್ ಹಾಗೂ  ಕಲ್ಲಿದ್ದಲ್ಲು  ಕೆಂದ್ರಗಳಿಂದ  ಪೊರೈಸಲಾಗುತಿತ್ತು.  ಪರ್ಯಾಯಗಳನ್ನು ಇವರು ಚಿಂತಿಸಲಾರಂಬಿಸಿದರು.   ನೆನಪಿರಲಿ.  ಇವರಿದ್ದುದ್ದು  ಪುಟ್ಟ  ಹಳ್ಳಿ -  ಒಟ್ಟು  ಜನಸಂಖ್ಯೆ  ಬರೇ   ಎರಡು ಸಾವಿರದ  ಮುನ್ನೂರು.  ತಮ್ಮ  ಊರಲ್ಲಿ ಹಲವು   ಸಣ್ಣ  ಪುಟ್ಟ   ಜಲವಿದ್ಯುತ್  ಕೆಂದ್ರಗಳು ನಿಷ್ಕ್ರೀಯವಾಗಿರುವುದರ  ಕಂಡರು.  ಊರ  ವಿದ್ಯುತ್   ಸರಬರಾಯಿ ಕಂಪೇನಿಗೆ   ಅದನ್ನು  ಪುನಶ್ಚೇತನದ ಬಗ್ಗೆ  ವಿನಂತಿಸಿದರೆ “  ನೀನು ಸುಮ್ನೆ  ಕೂತ್ಕೊಳ್ಳಮ್ಮ,  ವಿದ್ಯುತ್  ಬಗೆಗೆ   ನಿನಗೇನು ಗೊತ್ತು “ ಎಂಬ ಹೀಯಾಳಿಕೆ  ಕೇಳಿದರು. :(

ಆದರೆ ಇವರು ಸುಮ್ಮನೆ ಕೂರಲಿಲ್ಲ.   ಇಂದು ಹಿಂತಿರುಗಿ ನೋಡಿದರೆ    ಇವರು  ನಡೆದು ಬಂದ  ದಾರಿ  ಸುಗಮವಾಗಿತ್ತು  ಅನ್ನುವಂತಿಲ್ಲ.     ಸಾಕಷ್ಟು  ಕಲ್ಲು ಮುಳ್ಳಿನ   ಹೊಸ ದಾರಿ.  ವಿಘ್ನಗಳ  ಲೆಕ್ಕಿಸದೆ  ಮುನ್ನಡೆದರು.  ತಮ್ಮ  ತಂಡವ  ಮುನ್ನಡೆಸಿದರು.  ಎರಡು  ಬಾರಿ  ಪ್ರಜಾನಿರ್ಧಾರ  ನಡೆಯಿತು.  ಕೊನೆಗೂ  ಈ ಗುಂಪಿಗೆ  ಜಯವಾಯಿತು.     ಊರ  ವಿದ್ಯುತ್  ಕಂಪೇನಿ  ಕರಾರು ಮುಗಿದು   ಪುನರ್ನಕರಣ   ಸಮಯದಲ್ಲಿ    ತಮ್ಮ  ತಂಡದಿಂದ   ಕರಾರು  ಪಡಕೊಳ್ಳಲು ಅರ್ಜಿ  ಹಾಕಿದರು,   ದಕ್ಕಿಸಿಕೊಂಡರು. 



ತಮ್ಮ    ಊರಲ್ಲಿ   ಪರಿಸರಪೂರಕ ವಿದ್ಯುತ್    ಸರಬರಾಜು  ಎಂದಾಗ  ದೂರದ   ಊರಿನವರೂ  ಅವರಿಗೆ ಹೇಳಿದರು – ನಮ್ಗೂ  ನೀವೇ  ವಿದ್ಯುತ್ ಕೊಡಿ.  ಜರ್ಮನಿಯ  ಕಾನೂನಿನ ಪ್ರಕಾರ  ನಾವು ಸರಬರಾಜು ಕಂಪೇನಿ ಆಯ್ದುಕೊಳ್ಳಬಹುದು.  ಹಾಗೆ ಅದು  ಪುಟ್ಟ  ಹಳ್ಳಿಯ ಗಡಿ  ದಾಟಿ  ದೇಶವ್ಯಾಪ್ತಿ ಉದ್ಯಮವಾಗಿ ಬೆಲೆಯಿತು.   ದೂರದೂರಿನ  ಸೌರ  ಮತ್ತು ಇನ್ನಿತರ  ರಿನ್ಯೂವೆಬಲ್  ಶಕ್ತಿ  ತಯಾರಕರೂ  ಇವರಿಗೆ  ಮಾರಲು  ಒಪ್ಪಿದರು.   ಹಾಗೆ  ಇಂದು  ಒಂದೂ  ಕಾಲು   ಲಕ್ಷಕ್ಕೂ  ಮಿಕ್ಕಿ  ಇವರ  ಕಂಪೇನಿಯ  ಸಂತೃಪ್ತ  ಗ್ರಾಹಕರು. :)   ಹರಿಯುವ  ನೀರು,  ಬೀಸುವ  ಗಾಳಿ,  ಮನೆ  ಬಿಸಿ ಮಾಡುವ  ಇಂಜಿನು  ಹಾಗೂ  ಬೆಳಗುವ  ಸೂರ್ಯ  -    ಇವಷ್ಟೇ  ಕಂಪೇನಿ ಶಕ್ತಿ ಮೂಲಗಳು.   ಉಳಿದ     ಅಣು  ವಿದ್ಯುತ್   ಉಷ್ಣ ವಿದ್ಯುತ್   ಕಂಪೇನಿಗಳ  ಜತೆಯಲ್ಲಿ  ಮಾರುಕಟ್ಟೆಯಲ್ಲಿ   ಯಶಸ್ವಿಯಾಗಿ    ಸ್ಪರ್ಧಿಸುತ್ತಿದ್ದಾರೆ. 

ದಯಮಾಡಿ  ಈ  ಮೇಲಿನ      ವಾಕ್ಯಗಳನ್ನು  ನಮ್ಮಲ್ಲಿರುವ  ತಜ್ಞರು   ಓದಬಾರದಾಗಿ  ಕೋರಿಕೊಳ್ಳುತ್ತೇನೆ.  ಯಾಕೆಂದರೆ  ಅವರ  ತಲೆ  ಹಾಳಾಗುವುದು  ಬೇಡ. :@ 

ಮೊದಲು  ಚಳಿಗಾಲದಲ್ಲಿ ಮನೆಬಿಸಿ  ಮಾಡಲು  ಒಲೆ ಉರಿಸುತ್ತಾ  ಇದ್ದರು.    ಈಗ  ಪುಟ್ಟ  ಇಂಜಿನು ಬಳಸುತ್ತಾರೆ.  ಅದರಲ್ಲಿ  ತಯಾರಾದ  ವಿದ್ಯುತ್   ಅನ್ನು   ವಿದ್ಯುತ್ ಜಾಲಕ್ಕೆ  ಸೇರಿಸಿದರೆ,  ಹೊಗೆಯ  ನಿರುಪಯುಕ್ತವೆಂದು   ಪರಿಗಣಿಸುವ  ಶಾಖವಿದೆಯಲ್ಲ  ಅದು ಮನೆಯನ್ನು ಬಿಸಿ  ಮಾಡುತ್ತದೆ.    ಈ  ಬಗೆಗೆ  ನಾನು ತಿಂಗಳ  ಹಿಂದೆ   ಈ  ವಿಚಾರ     ಬರೆದಿದ್ದೆ. 


ಸಾದ್ಯವಾದಷ್ಟು  ಉಳಿಸಿ  
ಅಂದರೆ   ಅನಿವಾರ್ಯ  ಅನಿಸುವಷ್ಟೇ  ಬಳಸಿ.
ಸ್ಥಳೀಯವಾಗಿ ಉತ್ಪಾದಿಸಿ. 
ಉಳಿದುದನ್ನು ಜಾಲಕ್ಕೆ ರವಾನಿಸಿ.

ಎನ್ನುವ  ಘೋಷಣೆ  ಇವರ   ಕಂಪೇನಿಯದು.  ಏಳು ಜನ ಮೊಮ್ಮಕ್ಕಳು  ಅಜ್ಜಿಯ   ಸಮಯ  ಬೇಡುವುದಾದರೂ   ಇವರು  ಇನ್ನೂ  ಸಾಗಬೇಕಾದ   ಮುಂದಿನ  ದಾರಿ  ಬಗೆಗೆ   ಉತ್ಸಾಹಕವಾಗಿಯೇ  ಇದ್ದಾರೆ.  ಮುಂದಿನ ಎರಡು ವರ್ಷದಲ್ಲಿ ಹತ್ತು  ಲಕ್ಷ  ಗ್ರಾಹಕರ  ಗುರಿ  ಅಜ್ಜಮ್ಮ  ಅವರದ್ದು.  ಅವರಿಗೆ  ಜೈ   ಅನ್ನೋಣ. :tup 


ಕಾನೂನು  ಮಾಡುವ    ಮಟ್ಟಿಗೆ  ನಾವು  ಹಿಂದುಳಿದಿಲ್ಲ.    ನಮ್ಮಲ್ಲೂ  ಇದೆ -  ಕಾಂಪ್ಕೊ   ವಿದ್ಯುತ್  ಗಿರಿಗಿಟಿ  ಇರುವುದು  ಗದಗದಲ್ಲಿ . ಅಲ್ಲಿ ತಯಾರಾಗುವ ವಿದ್ಯುತ್  ಬಳಕೆಯಾಗುವುದು  ಪುತ್ತೂರಿನ   ಕಾರ್ಖಾನೆಯಲ್ಲಿ.   ಇದಕ್ಕೆ    ಸಾಗಾಣಿಕೆ  ವೆಚ್ಚ  ಮೆಸ್ಕೋಂ  ಪಡಕೊಳ್ಳುತ್ತದೆ.   ಆದರೆ  ಇದು ಜನಸಾಮನ್ಯರಿಗೆ ತಲಪುವ  ಮಟ್ಟದಲ್ಲಿಲ್ಲ.  ದೊಡ್ಡ  ಕಂಪೇನಿಗಳಿಂದ  ನಮ್ಮನ್ನು  ಆಳುವವರಿಗೆ    ಚೆಕ್  ಈಸ್ಕೊಳ್ಳೋದು  ಸುಲಭ.   ಬೇಕಾದರೆ  ಯೆಡ್ಡಿನ  ಕೇಳಿ.  :)       ಸಾಮಾನ್ಯ   ಜನರಿಗೆ ಬಾಯಿಉಪಚಾರ  ಸಾಕು.  


ಅಲ್ಲಿ     ಎಲ್ಲ    ವಿದ್ಯುತ್  ಬಳಕೆದಾರರು  ಕೊಡುವ  ಒಂದು  ಅಧಿಕ  ತೇರಿಗೆಯನ್ನು  ಈ  ಪರಿಸರ ಸ್ನೇಹಿ ಉತ್ಪಾದಕರಿಗೆ  ಹಂಚಲಾಗುತ್ತದೆ.   ಈ  ಲೆಕ್ಕಾಚಾರ  ಪಾರದರ್ಶಕವಾಗಿದ್ದು  ರಾಜಕಾರಣಿಗಳು  ಮೂಗು  ತೂರಿಸುವಂತಿಲ್ಲ,   ಕುತಂತ್ರ  ನಡೆಸುವಂತಿಲ್ಲ.        ಅವರಿಗೆ  ಸಾದ್ಯವಾಗೋದು  ನಮಗೇಕೆ    ಅಸಾದ್ಯ  ? ಯಾಕೆಂದರೆ,  ಮುಜುಗರ  ಆಗುತ್ತದೆ  ಹೇಳಲು  -   ಲಗಾಡಿ  ತೆಗೆಯಲು    ಅವರ   ಮದ್ಯೆ   ಎಲ್ಲವನ್ನೂ   ಮುಕ್ಕುವ. :@   ಅಲ್ಲಲ್ಲ -  ಸಮಾಜಕ್ಕೆ      ಅನುಗ್ರಹಿಸುವ   ಜನಪರ  ಹೋರಾಟಗಾರ   ಯೆಡ್ಡಿ  ಕರಂಟ್ ಲಾಜೆ   ಜೋಡಿ   ಇಲ್ಲ. ;)

ವಿಡಿಯೊ  ಬಲಬಾಗ  ಮುಚ್ಚಿರುವ    ಕಾರಣ      ಮೇಲಿನ  ವಿಡಿಯೊ ಯುಟ್ಯೂಬ್ ನಲ್ಲಿಯೇ  ನೋಡಲು  ಕೊಂಡಿ  

Friday, November 23, 2012

ಅಪರೂಪದ ಪರಿಸರವಾದಿ ಕಲಾವಿದೆ ಕೆನಡಾ ದೇಶದ ಪ್ರಾಂಕೆ ಜೇಮ್ಸ್


ಇತ್ತೀಚಿನ  ದಿನಗಳಲ್ಲಿ ನನ್ನ ಮೇಲೆ ಬಹಳ  ಪ್ರಬಾವ  ಬಿದ್ದಿರುವ   ವ್ಯಕ್ತಿಯೊಬ್ಬರು    ಎಂದರೆ    ಕಲಾವಿದೆ ಹಾಗೂ  ಪರಿಸರ ಹೋರಾಟಗಾರ್ತಿ  ಕೆನಡಾ ದೇಶದ ಫ್ರಾಂಕೆ  ಜೇಮ್ಸ್.    ಅವರ ಚಿತ್ರ  ಪ್ರಬಂದಗಳು  ಪರಿಸರಾಂದೋಲನಗಳು   ಅಧ್ಬುತ ಎನ್ನಬೇಕು.     ಸುಮಾರು  ಎರಡು ವರ್ಷಗಳಿಂದ  ಇವರ  ಚಟುವಟಿಕೆ  ಮೇಲೆ  ಗಮನವಿಟ್ಟಿರುವ  ನಾನು ಈಗ  ಅನಿಸಿಕೆ  ಹಂಚಿಕೊಳ್ಳುತ್ತ್ತಿದ್ದೇನೆ. 


ಕಾರು ಹೊಂದಿದ  ಕುಟುಂಬದಿಂದ  ಬದಲಾವಣೆಯಾಗುವಾಗ   ಏನೆಲ್ಲ  ಎದುರಿಸಬೇಕು  ಅನ್ನುವುದನ್ನು ಅವರ ಮಾತುಗಳಲ್ಲಿಯೇ  ಕೇಳಬೇಕು,  ಅಲ್ಲ   ಚಿತ್ರಕಥೆ  ಓದಬೇಕು.  ದೊಡ್ಡ  ಹಡಗಿನಂತಹ  ಕಾರು  ಅವರಲ್ಲಿತ್ತು. ಡೆವಿಡ್  ಸುಜುಕಿ  ಎಂಬ  ಪರಿಸರವಾದಿಯ  ಬಾಷಣ  ಕೇಳಿ ಮಾರಿಯೇ   ಬಿಟ್ಟರು .  ಹತ್ತಿರದಲ್ಲಿ  ದಿನಸಿ ಅಂಗಡಿ ಇತ್ತು. ನಡೆಯುವ  ಆಸಕ್ತಿ ಇತ್ತು.  ಒಬ್ಬೊಬ್ಬ  ಸಂಬಂದಿಕರ  ಪ್ರತಿಕ್ರಿಯೆಯೂ  ಬಿನ್ನವಾಗಿತ್ತು.  ಕಾರು ಇಲ್ಲವಾದ  ನಂತರ  ಮನೆ ಎದುರು ಕಾರು – ದಾರಿ  ಬೇಕಾ ?  ಬೇಡ.    ಆದರೆ  ಪಟ್ಟಣದ  ಕಾನೂನು ಪ್ರಕಾರ ಒಂದು ನಿವೇಶನದಲ್ಲಿ    ಒಂದು ಮರ ನೆಡಲು  ಮಾತ್ರ ಅವಕಾಶ. :(    ಹಲವು ಸಮಸ್ಯೆಗಳ  ಎದುರಿಸಿ   ಕೊನೆಗೂ   ಅಲ್ಲಿ ಹೂಗಿಡಗಳನ್ನು    ನೆಟ್ಟರು. ಕಾಂಕ್ರೀಟು  ಅಗೆದು ಹಾಕಿ  ನೀರು ಇಂಗುವಂತೆ  ಮಾಡಿದರು.   ಅವರ, ಅಂದರೆ   ಆ ದೇಶದವರ   ಕಾರು ಸಹಿತ ಜೀವನ  ನಮಗೆ  ಆಕರ್ಷಕವಾಗಿ ಕಂಡರೆ   ಕಾರು ರಹಿತ  ಜೀವನವೂ  ಮಾರ್ಗದರ್ಶಕ ಏಕಾಗಬಾರದು ? :tup


ಯಾವ  ವಿಚಾರವನ್ನೇ  ಆಗಲಿ  ತಮ್ಮ  ಕಲೆಯ  ಮೂಲಕ   ಪ್ರಚಾರಾಂದೋಲನ    ನಡೆಸುವ   ಫ್ರಾಂಕೆ  ಕೆನಡಾ ದೇಶಕ್ಕೆ  ಅಪಾರ  ತಲೆನೋವು ತರಿಸುವ  ವ್ಯಕ್ತಿಯಾಗಿ  ಹೊರಹೊಮ್ಮಿದ್ದಾರೆ.    ಹೌದಾ  ಪ್ರದಾನ ಮಂತ್ರಿಗಳೇ, ಮಲೀನತೆ  ತೇರಿಗೆ  ನಿಜಕ್ಕೂ  ದೇಶಕ್ಕೆ  ಹಾನಿಮಾಡುವುದೇ   ಎಂದು ಮುಗ್ದವಾಗಿ  ಪ್ರಶ್ನಿಸುತ್ತಾರೆ.  ನೀವು ಮಾತಾಡುತ್ತಿರುವ  ವಿಚಾರ  ಪರಿಣಾಮ   ನಿಮಗೆ ಚೆನ್ನಾಗಿ  ಗೊತ್ತಾ  ?     ಮುಂದೆ  ಹಿಮ ಕರಡಿ ಕಾಣೋದು  ಎರಡು ಡಾಲರ್ ನಾಣ್ಯದಲ್ಲಿ  ಮಾತ್ರವಾದರೆ   ನಮ್ಮ  ನಿಮ್ಮ  ಮಕ್ಕಳು  ಮೊಮ್ಮಕ್ಕಳು  ಏನು ಹೇಳಬಹುದು.  ಎಂದೂ  ಕೇಳುತ್ತಾರೆ.    ಈ  ಹಾರ್ಪರ್  ಮಹರಾಯ   ಬೆಂಗಳೂರಿಗೆ   ಬಂದಾಗ  ಇದನ್ನು  ಹಂಚಿಕೊಳ್ಳುವ  ಆಲೋಚನೆ ಬಂದರೂ  ತಕ್ಷಣ  ಇವೆಲ್ಲ   ಬರೆಯಲು  ಸಾದ್ಯವಾಗಲಿಲ್ಲ. :(     


ಅವರಿಗೆ  ಒಮ್ಮೆ  ಒಂದು ಒಬ್ಬ  ಅಪರಿಚಿತ  ವ್ಯಕ್ತಿಯಿಂದ ಒಂದು  ಇ ಪತ್ರ  ಬಂತು. “ ನಮಗಿಬ್ಬರಿಗೆ  ಒಂದು ಸಸ್ಯಹಾರಿ    ಊಟ ಕೊಡುವುದಾದರೆ  ನಾನು ನೀವುಸೂಚಿಸಿದ   ಸೇವಾ ಸಂಸ್ಥೆಗೆ  ಇನ್ನೂರು ಡಾಲರ್ ದಾನ  ಮಾಡುತ್ತೇನೆ “.   ಇನ್ನೂರು  ಡಾಲರಿನ  ಮೌಲ್ಯವೇಷ್ಟು ?  ಹುಡುಕಿದರು…..   ಇನ್ನೂರು  ಡಾಲರ್  ಎಂದರೆ  ಊರ  ಸೇವಾ   ಸಂಸ್ಥೆಯೊಂದು    ಎಪ್ಪತ್ತೇಳು  ಜನರಿಗೆ  ಕ್ರಿಸ್ಟ್ ಮಸ್ ಊಟ  ಕೊಡುವುದು  ಎಂದು  ಅರಿವಾದ  ನಂತರ  ಆ  ಅಪರಿಚಿತನಿಗೆ   ಒಪ್ಪಿಗೆ  ಹೋಯಿತು……..


ಯುರೋಪಿನಲ್ಲಿ   ಅವರ    ಚಿತ್ರ ಪ್ರದರ್ಶನ   ಏರ್ಪಾಡಾಗಿತ್ತು.   ಸರಕಾರ  ಅದಕ್ಕೆ  ಅಡ್ಡಗಾಲು ಹಾಕಿತು. ಫ್ರಾಂಕೆ ಸುಮ್ಮನಿರಲಿಲ್ಲ.   ಮಾಹಿತಿ ಹಕ್ಕಿನಲ್ಲಿ  ಕಾರಣಕರ್ತರನ್ನು  ಗುರುತಿಸಿದರು.  ಆಗ  ಅವರಿಗೆ ಅರಿವಾಯಿತು - ಅವರು  ಕೆನಡಾ  ಸರಕಾರದ   ಕಪ್ಪು ಪಟ್ಟಿಯಲ್ಲಿದ್ದಾರೆ. :o   ಅದನ್ನು  ಅವರು ಎದುರಿಸಿದ   ಹಾಗೂ   ಊರ ಮದ್ಯದಲ್ಲಿ ಪ್ರದರ್ಶನ  ಏರ್ಪಡಿಸಿ    ಕೇಂದ್ರ ಸರಕಾರಕ್ಕೆ ಮುಜುಗರ ಉಂಟುಮಾಡಿದ ಪ್ರಸಂಗ  ಅವರ  ಚಿತ್ರ ಕಥೆಯಲ್ಲೇ  ಓದಿದರೆ ಚೆನ್ನ.    ತುಂಬಾ  ಚೆನ್ನಾಗಿದೆ. ;)  

ಭೂಮಿ ಬಿಸಿಏರುವಿಕೆಯ  ವಿಚಾರವೂ  ಒಂದು ನೋಡಲೇ  ಬೇಕಾದ  ಚಿತ್ರ ಪ್ರಬಂದ.    ಎಲ್ಲರೂ  ಹಾಲೆರೆಯುವಾಗ  ನಾನೊಬ್ಬ  ನೀರೆದರೆ........  ಅನ್ನುವ  ಬುದ್ದಿವಂತರ  ನಾಡು  ನಮ್ಮದು.  ಕೆಲವು  ಜನ  ಪ್ರಾಮಾಣಿಕ  ಆಸಕ್ತಿ   ಉಳಿಸಿಕೊಂಡವರೂ  ಇದ್ದಾರೆ.    ಆದರೂ     ಅಯ್ಯೋ. ನಾನು ಒಬ್ಬ ಏನು ಮಾಡಲು ಸಾದ್ಯ  ಎಂದು  ಸಾಮಾನ್ಯವಾಗಿ   ಸುಮ್ಮನಾಗುತ್ತೇವೆ. ಅದರ ವಿಚಾರದ  ಪ್ರಬಂದವೂ ಬಹಳ  ಚೆನ್ನಾಗಿದೆ.    ಎರಡೂ  ವಾಕ್ಯಗಳಲ್ಲಿ  ಸಂಬಂದಪಟ್ಟ      ಕೊಂಡಿ ಅಳವಡಿಸಿದ್ದೇನೆ.   ಹಲವು  ವಿಡಿಯೊ ಪ್ರಬಂದಗಳು ನೋಡಲು  ಚೆನ್ನಾಗಿವೆ.ಉದಾಹರಣೆ,  ಕಾಡಿನ  ಬಗೆಗೆ ಯಾರು  ಕಾಳಜಿ ವಹಿಸುತ್ತಾರೆ ?    ಪ್ರದಾನಿ  ಹಾರ್ಪರ್ ಏನನ್ನು ಅಂಜುತ್ತಾನೆ    ಇತ್ಯಾದಿ.     


ನನ್ನ  ಬ್ಲೊಗ್  ತೆರೆದಾಗೆಲ್ಲ    ಅವರನ್ನು  ನೆನಪಿಸಿಕೊಳ್ಳುತ್ತೇನೆ.  ಯಾಕೆಂದರೆ  ಪಕ್ಕಲ್ಲಿರುವ  co2 widget   ಪ್ರಾಂಕೆ   ಅವರ  ವಿನ್ಯಾಸ.   ಬಾರತದ ಬ್ಲೋಗುಗಳ  / ಜಾಲತಾಣಗಳ  ಹುಡುಕಿದರೆ   ಇದನ್ನು ಈ  ಹಳ್ಳಿಯಿಂದ ದಲ್ಲಿ ಮಾತ್ರ ಕಾಣಬಹುದಾಗಿದೆಯಂತೆ.   ನಾನು ಒಂದೂವರೆ  ವರ್ಷ  ಹಿಂದೆ ಕುದಿಯುತ್ತಿರುವ  ಪಾತ್ರೆಯಲ್ಲಿ  ಕಪ್ಪೆಗಳು  ನಾವು  ಎಂಬ  ತಲೆಬರಹದಡಿಯಲ್ಲಿ   ಈ  widget  ಹಾಕಿದ್ದೆ.       ಇಡೀ  ಬಾರತ ದೇಶದಲ್ಲಿ ಬಳಸುವವ  ಮಾತ್ರ   ನಾನೊಬ್ಬನೇ  ಅನ್ನುವಾಗ  ಹೆಮ್ಮೆಯಲ್ಲ  ಬಹಳ   ಬೇಸರವಾಗುತ್ತದೆ. :@     ಪಟ್ಟಿ  ಹುಡುಕಿದರೆ   ಇನ್ನೊಂದು ಬಳಕೆದಾರ  ಕಾಣಬಹುದಾದರೂ  ಅ    ಕೊಂಡಿ  ಕೆಲಸ ಮಾಡುವುದಿಲ್ಲ.   ಇದನ್ನು ಹೆಚ್ಚು ಜನ ಅವರ   ಬ್ಲೋಗುಗಳಲ್ಲಿ, ಜಾಲತಾಣದಲ್ಲಿ    ಬಳಸಲಿ ಮತ್ತು  ಈ  ವಿಚಾರಕ್ಕೆ   ಹೆಚ್ಚು   ಪ್ರಚಾರ   ಸಿಗಲೆಂದು     ಹಾರೈಸುತ್ತೇನೆ. :tup  ನಮ್ಮವರು  ಮೂಕಪುಟದಲ್ಲೂ  ಇಮೈಲಿನಲ್ಲೂ   ಸಿಕ್ಕಸಿಕ್ಕ  ಅಸಂಬದ್ದ  ಜೋಕುಗಳ   ಮಾಹಿತಿಗಳ  ಶೇರ್  ಮಾಡ್ತಾರೆ, ಆದರೆ  ಇಂತಹ  ಸಕಾರಾತ್ಮಕ   ದಾರಿಯಲ್ಲಿ ಹೆಜ್ಜೆ ಹಾಕುವುದು  ಭಾರಿ   ನಿಧಾನ. :(  

Tuesday, November 20, 2012

ಪ್ರೊ! ಸಾಹೇಬರ ಅಮುಲ್ ಮಾದರಿ ಸೌರ ವಿದ್ಯುತ್ ಜಾಲದ ಸುತ್ತಮುತ್ತ


 ಒಬ್ಬರು     ಪ್ರೊಫೆಸರ್ ಸಾಹೇಬರು  ಅಮುಲ್  ಮಾದರಿಯಲ್ಲಿ ಹಳ್ಳಿಗಳಲ್ಲಿ  ಸೌರ ವಿದ್ಯುತ್  ಸಾದ್ಯತೆಗಳ ವಿಚಾರ    ಹಿಂದು ಬಿಸಿ-ನೆಸ್ ಲೈನ್   ಪತ್ರಿಕೆಯಲ್ಲಿ   ಬರೆದುದು  ಸಂತಸದ  ಸಂಗತಿ.   ಆದರೆ  ಪಟ್ಟಣದಲ್ಲಿ ಕೂತ    ಅವರಿಗೆ  ಇದೊಂದು   ಕೆಲಸಕ್ಕೆ  ಬಾರದ  ಆಲೋಚನೆ  ಎಂದು ಅರಿವಾಗಿರಲಿಕ್ಕಿಲ್ಲ.   ನನ್ನ  ಅಬಿಪ್ರಾಯದಲ್ಲಿ ಇದೊಂದು   ಬೇಲೆ  ಇಜ್ಜಂದಿನ  ಆಚಾರಿ………  :O  ಕಾರಣ,    ಇದು  ಹಾಲಿನ  ಸೊಸೈಟಿಯಲ್ಲಿ ಹಾಲು  ಹುಯಿದಷ್ಟು  ಸರಳವಲ್ಲ.   ಪ್ರೊಫೆಸರ್  ಸಾಹೇಬರ  ತರ್ಕ  ಎರಡನೆ  ಪಾರದಲ್ಲಿಯೇ   ಕವಚಿಬಿದ್ದಿದೆ.  ಮೊದಲನೆಯ ಮಾತು -   ಇನ್ನೂ  ವಿದ್ಯುತ್    ಜಾಲ  ತಲಪದ  ಮನೆಗಳು  ಎಂದ  ಅವರು  ಹೆಚ್ಚಿನ ವಿದ್ಯುತ್  ಜಾಲಕ್ಕೆ  ಹರಿಸಬಹುದು  ಎಂದೂ  ಹೇಳುತ್ತಾರೆ.   ಆದರೆ ಜಾಲಕ್ಕೆ ಹರಿಸಲು  ಅಡ್ಡ  ಬರುವ  ತಾಂತ್ರಿಕ  ಸಮಸ್ಯೆ ಅವರ ಗಮನಕ್ಕೆ    ಬಂದಂತಿಲ್ಲ. 

ಇನ್ನೊಂದು  ಅಸಂಬದ್ದ ಆಲೋಚನೆ  ಕೇರಳಾ  ಸರಕಾರದ್ದು. ಅದು  ಹತ್ತು ಸಾವಿರ  ಸೌರ ವಿದ್ಯುತ್ ಘಟಕಗಳ  ಸ್ಥಾಪಿಸಲು ತಯಾರಾಗಿದೆ.   ಅವರಿಗೆ  ೧೫೦೦೦  ಜಾಲ-ಸಂಪರ್ಕ  ಘಟಕಗಳ  ಸ್ಥಾಪಿಸುವ  ಆಸಕ್ತಿಯೇನೊ  ಇತ್ತು.  ಆದರೆ  ಕೇಂದ್ರ  ಸರಕಾರ  ಸಬ್ಸಿಡಿ  ಕೊಡೋದು  ಜಾಲ ಸಂಪರ್ಕ ರಹಿತ  ಘಟಕಗಳಿಗೆ  ಮಾತ್ರ. :(    ಪತ್ರಿಕೆಯಲ್ಲಿ   ಒಂದರ ಕೆಳಗೆ ಇನ್ನೊಮ್ಮೆ -   ಎರಡು ಬಾರಿ  ಲೇಖನ ಪ್ರಕಟವಾದುದು    ನೋಡಿ, ದಯಮಾಡಿ ನಗಬೇಡಿ.  ಟೊಯಿಲೆಟ್  ಪೇಪರ್  ಪತ್ರ್ರಿಕೆಯಲ್ಲಿ   ಇಂತಹ   ಅಭಾಸಗಳು ಮಾಮೂಲಿ. :D    ವಿಷಯಕ್ಕೆ ಬರೋಣವಾಗಲಿ.   ಒಂದು ಲಕ್ಷ  ಇಪ್ಪತ್ತು ಸಾವಿರ  ರಾಜ್ಯ  ಕೇಂದ್ರ  ಸರಕಾರದ  ಸಬ್ಸಿಡಿ.  ಉಳಿದ ಒಂದು ಲಕ್ಷ   ಬಳಕೆದಾರ ಹಾಕಿದರಾಯಿತು.  ಈಗಾಗಲೇ  ನಾಲ್ಕು ಸಾವಿರ  ಅರ್ಜಿ  ಬಂದಿದೆ. 


ನೀರು ಹರಿಯುವ  ಕಾಲುವೆ  ಮೇಲೆ  ಸೌರ ಫಲಕಗಳ  ಸ್ಥಾಪಿಸಿರುವ   ಗುಜರಾತಿನ   ಹಲವು  ಸೌರ  ವಿದ್ಯುತ್   ಯೋಜನೆಗಳು   ಹೆಚ್ಚು ಅರ್ಥಪೂರ್ಣ.   ಹೊಸ  ಯೋಜನೆಯೊಂದರ ಪ್ರಕಾರ   ಕಟ್ಟಡದ ಯಜಮಾನ  ಚಾವಣಿಯನ್ನು  ಬಾಡಿಗೆಗೆ  ಅಥವಾ  ಪಾಲುಗಾರಿಕೆ ನೆಲೆಯಲ್ಲಿ   ಯೋಜನಾಕರ್ತರಿಗೆ  ಕೊಡುತ್ತಾನೆ.  ಅದರಲ್ಲಿ ತಯಾರಾದ  ವಿದ್ಯುತ್   ಪೂರ್ತಿ  ಜಾಲಕ್ಕೆ  ಹರಿಯುವ  ಬಗೆಗೆ  ರಾಜ್ಯ   ಸರಕಾರ  ಒಪ್ಪಂದ ಮಾಡಿಕೊಳ್ಳುತ್ತದೆ.  ಎಲ್ಲವೂ  ರಾಜಕೀಯಮಯವಾದ  ನಮ್ಮ ದೇಶದಲ್ಲಿ    ನರೆಂದ್ರ ಮೋಡಿ  ಸಾಧನೆ  ವಿರೋಧ  ಕಾಂಗ್ರೆಸ್  ಪಕ್ಷಕ್ಕೆ  ಸಮದಾನ  ಇಲ್ಲ.  ಮೋಡಿ  ಕೊಡಲೊಪ್ಪುವ  ವಿದ್ಯುತ್  ತಿರಸ್ಕಾರ  - ಕತ್ತಲಲ್ಲಿ ಕೂರಲೂ  ತಯಾರು. ;)  





ಗೆಳೆಯ  ದಿನಕರ್  ಹೇಳುವ  ಪ್ರಕಾರ  ಈಗ  ನೂರಾರು   ಫಲಕಗಳು ಬೆಳ್ತಂಗಡಿ ತಾಲೂಕಿನಲ್ಲಿಯೇ  ಮೂಲೆಗೆ ಬಿದ್ದಿದೆ.  ಬಾಟರಿ  ಆಯುಷ್ಯ  ಮುಗೀತು. ಒಮ್ಮೆಲೆ  ಅಷ್ಟು  ಹಣ   ಹಾಕುವುದು ಕಷ್ಟ /  ಅಷ್ಟು ಪ್ರಯೋಜನ  ಇಲ್ಲ. ವಿದ್ಯುತ್  ಅಗ್ಗ. ಇತ್ಯಾದಿ ಆಲೋಚನೆಗಳು  ಈ  ಫಲಕಗಳ  ಮೂಲೆಗುಂಪಾಗಿಸಿವೆ.  :(  ಮೇಲ್ಕಂಡ   ಯೋಜನೆಯ  ಫಲಕದ ಗತಿಯೂ  ಅದೇ  ಆಗುತ್ತದೆ.  ಮೂರು  ವರ್ಷದಲ್ಲಿ ತಯಾರಾಗೊ  ವಿದ್ಯುತ್   ಸುಮಾರು  ಅದರ ಅಂದರೆ  ಫಲಕದ ತಯಾರಿಕೆಗೆ ಖರ್ಚಾಗಿರುತ್ತದೆ.  ಅದೂ  ಪೂರ್ಣ  ಉಪಯೋಗ  ಪಡಕೊಂಡರೆ  ಮಾತ್ರ. :@   ಸಾಮಾನ್ಯವಾಗಿ ಹೇಳುವುದಾದರೆ  ಐದು ಆರು ವರ್ಷ  ಕೆಲಸ ಮಾಡಲೇ  ಬೇಕು.




ಇವರು ಹೇಳೊದು  ಒಂದು  ವಿಚಾರ  ನಾನು   ಒಪ್ಪುವುದಿಲ್ಲ. ಮನೆ ಮೇಲೆ  ಇಟ್ಟರಾಯಿತು. ಅದರ ಪಾಡಿಗೆ  ಅದು ಕೆಲಸ ಮಾಡುತ್ತಲೇ  ಇರುತ್ತದೆ.    ಕಾರಣ    ಸೂರ್ಯದೇವನ  ಹಿಂಬಾಲಿಸುವ   ಫಲಕಗಳು ಶೇಕಡ ೪೦ ರಷ್ಟು ಹೆಚ್ಚು  ಶಕ್ತಿ  ಹಿಡಿದು ಕೊಡು ತ್ತದೆ.   ನಮ್ಮಲ್ಲಿ  ಸಂಬಳ  ಅಗ್ಗವಾದುದರಿಂದ  ನಾವು ಈ ವಿಚಾರ  ಮುಂದುವರಿದ ದೇಶಗಳ  ಅನುಸರಿಸಬೇಕಾಗಿಲ್ಲ.  

ಸೌರ  ಪಲಕಗಳೆಂದರೆ  ಅದರಲ್ಲಿ  ಹಲವು  ಪುಟ್ಟ  ಸರ್ಕೀಟುಗಳ  ಸಾಲಾಗಿ ಜೋಡಿಸಿರುತ್ತಾರೆ.       ಸೌರ  ಪಲಕಗಳಿಗೆ  ನೆರಳು ಬೀಳಲೇ   ಬಾರದು.  ಬಿದ್ದರೆ  ಎರಡು ರೀತಿಯ ಹಾನಿ ಯುಂಟಾಗುತ್ತದೆ.   ತಾತ್ಕಾಲಿಕ  ಹಾನಿ ಎಂದರೆ     ೩೬ ತುಂಡುಗಳಲ್ಲಿ  ಒಂದು ತುಂಡಿಗೆ  ಎಲೆ ಬಿದ್ದು  ನೆರಳಾದರೂ   ಆ  ಇಡೀ  ಫಲಕದ  ಒಟ್ಟು  ವಿದ್ಯುತ್ ಉತ್ಪಾದನೆ  ಅರ್ಧಕ್ಕರ್ಧ    ಕುಸಿಯುತ್ತದೆ. :(      ಎರಡನೆಯದಾಗಿ     ಫಲಕದ  ಒಳಗಿನ  ವೈರಿಂಗ್  ಅಂದರೆ  ಪುಟ್ಟ  ತುಂಡುಗಳ   ಜೋಡಿಸಿದ ಜಾಗ  ಬಿಸಿಯಾಗಿ   ಶಾಶ್ವತ  ಹಾನಿ ಉಂಟು ಮಾಡುತ್ತದೆ. :@      ಹಾಗಾಗಿ  ಹೆಚ್ಚು  ಫಲಕಗಳಿದ್ದರೆ    ಚಡ್ಡಿ ಹಾಕಿದ  ತುಕ್ರನನ್ನು  ಫಲಕಗಳ   ಸೂರ್ಯದೇವನ ಹಿಂಬಾಲಿಸಿ  ದಿನಕ್ಕೆ ನಾಲ್ಕು  ಬಾರಿ  ತಿರುಗಿಸಲು ನೇಮಿಸುವುದು  ಉತ್ತಮ.  ತುಕ್ರನಿಗೆ  ಬೇಕಾದರೆ   chief  operation officer   ಅಂಗಿಗೆ  ಸಿಕ್ಕಿಸುವ    ನಾಮಫಲಕ ಕೊಡೋಣ.

ಇಂತಹ  ದೊಡ್ಡ   ಘಟಕಗಳೆಂದರೆ   ಸಾಮಾನ್ಯವಾಗಿ ಏನು ಮಾಡ್ತಾರೆ  ಎಂದರೆ  ಫಲಕದ ಅಡಿಯಲ್ಲೊಂದು ಪುಟ್ಟ  ಮೊಟರ್ ಹಾಕಿ ಬಿಡ್ತಾರೆ.  ಅದಕ್ಕಾಗಿ  ಪ್ರತ್ಯೆಕ  ವೈರಿಂಗ್……..   ಎಸಿ ರೂಮಿನಲ್ಲಿ  ಸೂಟ್  ಹಾಕಿದವನೊಬ್ಬ   ನಿಯಂತ್ರಿಸುತ್ತಾನೆ.  ಫಲಕದ  ಮೊಟರು ಹಾಗೂ  ಸೂಟಿನವನ  ಎಸಿ ಎರಡೂ  ಸುಮಾರು    ವಿದ್ಯುತ್  ತಿಂದುಹಾಕುತ್ತದೆ.   ತುಕ್ರ ಚೋಮರಿಗೆ  ಸಿಕ್ಕರೂ   ಸಿಗೋದು  ಗೇಟು ಕಾಯುವ  ಕೆಲಸ ಮಾತ್ರ. :(  


ಕಾನೂನು ಪ್ರಕಾರ  ವಿತರಣಾ  ಜಾಲಗಳು   ಇಂತಹ  ವಿದ್ಯುತ್  ಒಂದಂಶ  ತೆಗೆದುಕೊಳ್ಳಬೇಕು.  ನಮ್ಮಲ್ಲಿ     ಗುಣಮಟ್ಟದ  ವಿದ್ಯುತ್  ಅಥವಾ  ದರ್ಮಾರ್ಥ  ವಿದ್ಯುತ್  ಇವುಗಳ  ಆಯ್ಕೆ  ಜನಸಾಮಾನ್ಯರಿಗಿಲ್ಲ.   ಪ್ರೊಫೆಸ್ಸರ್  ಸಾಹೇಬರು  ಹೇಳುವಂತೆ  ಮನೆಗೆ ಸಂಪರ್ಕ  ಕೊಟ್ಟ  ಸರಿಗೆಯಲ್ಲಿ  ವಾಪಾಸು ಕಳುಹಿಸಲೂ  ಬಹುದು.   ಹಾಲು  ಡೈರಿಯವರು ಕಾಲು ಲೀಟರ್  ಸಹಾ ಕೊಂಡಂತೆ   ಯಶಸ್ವಿ  ಉದಾಹರಣೆಗಳೂ  ನಮ್ಮ ಮುಂದಿವೆ. 



ಜರ್ಮನಿಯಲ್ಲಿ  ಇಂದು ಸುಮಾರು ಶೇಕಡ  ಮೂವತ್ತರಷ್ಟು,    ಸೌರ ವಿದ್ಯುತ್, ಗಾಳಿ ಯಂತ್ರ,  ಹರಿಯುವ ನೀರಿನ  ಟರ್ಬೈನ್ ಇತ್ಯಾದಿಗಳಿಂದ  ತಯಾರಾಗುತ್ತದೆ.   ಅದಕ್ಕೆ  ಸ್ವಲ್ಪ ಹೆಚ್ಚು ಬೆಲೆಗೆ  ವಿತರಣಾ  ಜಾಲ ಖರೀದಿಸುತ್ತದೆ.  ಆ ಪ್ರಿಮಿಯಂ  ಹಣವನ್ನು ಬಳಕೆದಾರರ  ಮೇಲೆ  ಹಂಚಿ ಹಾಕುವ  ಪಾರದರ್ಶಕ  ವ್ಯವಸ್ಥೆ ಇರುತ್ತದೆ. ರಾಜಕಾರಣಿಗಳಿಗೆ  ಅಧಿಕಾರಿಗಳಿಗೆ ಮೂಗು ತೂರಿಸುವ   ಹಾಗೂ  ಕುರ್ಚಿಗೆ ಅನುಸಾರವಾಗಿ  ದೋಚುವ  ಸಾದ್ಯತೆ  ಇಲ್ಲವೆ   ಇಲ್ಲ.  ಆದರೆ  ಯೆಡ್ಡಿ  ಅಂಥವರು  ರಾಜಕಾರಣದಲ್ಲಿರುವಾಗ  ದರ್ಮಾರ್ಥ ವಿದ್ಯುತ್  ಸರಿ ಎನ್ನುವಾಗ   ನಮ್ಮ  ದೇಶದ ಶಕ್ತಿ ಜಾಲ  ಉದ್ದಾರವಾಗೋಲ್ಲ.


ಕೊ ಜೆನೆರೆಶನ್  ಬಾರಿ  ಹೊಸ ವಿಚಾರವೇನೂ  ಅಲ್ಲ.  ನಮ್ಮ  ಸಕ್ಕರೆ ಕಾರ್ಖಾನೆಗಳಲ್ಲಿ   ಕಬ್ಬಿನ ಸಿಪ್ಪೆ   ಬಳಸಿ ಕಬ್ಬಿನ ಹಾಲು  ಕುದಿಸುತ್ತಾರೆ.  ಉಳಿಕೆ  ಉಷ್ಣದಲ್ಲಿ  ವಿದ್ಯುತ್ ತಯಾರಾಗುತ್ತದೆ.   ಅದೇ  ರೀತಿ  ಉಕ್ಕಿನ  ತಯಾರಿಕೆಯಲ್ಲೂ  ವಿದ್ಯುತ್  ಲಭಿಸುತ್ತದೆ.   ಇವರೆಲ್ಲ    ತಮ್ಮ ಬಳಕೆಗೆ  ಆಗಿ ಮಿಕ್ಕಿದ್ದನ್ನು  ಜಾಲಕ್ಕೆ  ಹರಿಸುತ್ತಾರೆ.   ಹೆಚ್ಚಾಗಿ ಹೊರ ರಾಜ್ಯಗಳಲ್ಲಿ  ಮಾರಾಟ  ಮಾಡುತ್ತಾರೆ.  ಕಾರಣ,   ನಮ್ಮ   ರಾಜ್ಯದ   ವಿದ್ಯುತ್ ಮಂತ್ರಿ (ಣಿ)    ಬಾವಿ ತೋಡಲು  ಹೊರಡುವುದು  ಬೆಂಕಿ ಬಿದ್ದಾಗಲೇ. :O





ಸಣ್ಣ  ಮಟ್ಟಿನಲ್ಲಿ   ಶಾಖ     ಮತ್ತು ವಿದ್ಯುತ್    ಜತೆಯಾಗಿ  ಪಡಕೊಳ್ಳುವುದು ಇತ್ತೀಚಿನ  ಪರಿಕಲ್ಪನೆ.  ಸಾಮಾನ್ಯವಾಗಿ ನಮ್ಮ  ವಾಹನಗಳಲ್ಲಿ   ಅಥವಾ  ಯಾವುದೆ  ಅಂತರ್ದಹನ  ಇಂಜಿನನಲ್ಲಿ   ಇಂದನದ  ಶೇಕಡ  ೨೦  ಚಾಲನೆಗೆ ಉಪಯೋಗವಾದರೆ ಉಳಿದ  ಬಾಗ   ಶಾಖವಾಗಿ ನಷ್ಟವಾಗುತ್ತದೆ.  ಇದನ್ನು  ಬಳಸಿಕೊಂಡ  ಈ  ತತ್ವ  ಇಂದನದ  ಶೇಕಡಾ  ಎಂಬತ್ತರಿಂದ  ತೊಂಬತ್ತರಷ್ಟು   ಶಕ್ತಿ ಬಳಸಿಕೊಳ್ಳುತ್ತವೆ.    ಜರ್ಮನಿಯಲ್ಲಿ   ಅವರು  ಇದಕ್ಕೆ   ಹೆಚ್ಚಾಗಿ  ಬಳಸುವುದು  ನೈಸರ್ಗಿಕ  ಅನಿಲ.  ಈಗ   ಹೊಂಡ  ಕಂಪೇನಿ  ಇದಕ್ಕೆ  ಸೂಕ್ತವಾದ   ಪುಟ್ಟ  ಯಂತ್ರಗಳ  ತಯಾರಿಸುತ್ತದೆ.  

ನಮ್ಮಲ್ಲಿ ರಾತ್ರಿ  ಚಳಿಗೆ  ಕಟ್ಟಿಗೆ  ಉರಿಸುತ್ತೇವೆಲ್ಲಾ  !   ಅದನ್ನು   ಆಮ್ಲಜನಕ   ನಿಯಂತ್ರಿತ    ವಾತಾವರಣದಲ್ಲಿ ಹೊತ್ತಿಸಿದರೆ  ಪ್ರೊಡ್ಯುಸರ್  ಅನಿಲವಾಗುತ್ತದೆ.   ನಮ್ಮಲ್ಲಿಯೂ   ಹಾಸನ, ಚಿಕ್ಕಮಗಳೂರು   ಮಡಿಕೇರಿಯಂತಹ ಚಳಿ ಪ್ರದೇಶಗಳಲ್ಲಿ  ಖಂಡಿತ  ಸಾದ್ಯ.    ಆಗ  ಇಂದನದ ಹೆಚ್ಚಿನ  ಬಾಗ  ಕಸಕಡ್ಡಿ ಪೊರೈಸುತ್ತದೆ.   ಮೂರು  ಕಿಲೊ ಸೌದೆ  ಒಂದು ಲಿಟರ್  ಡಿಸಲ್  ಉಳಿತಾಯ  ಸಾದ್ಯ.   ಹಾಗೆ  ದಾರಾಳ    ಬಯೋಗಾಸ್  ಇದ್ದಲ್ಲಿ  ಅದೂ  ಉಪಯೋಗಿಸಬಹುದು.   ಮೂರು  ಕಡೆಗಳಲ್ಲಿ  ಲಭಿಸುವ  ಶಾಖ  ಉಪಯೋಗಿಸಿ    ರೂಮು  ಬಿಸಿಮಾಡಬಹುದು  /  ನೀರು  ಬಿಸಿಮಾಡಬಹುದು.       


ನಮ್ಮ  ಜಾಲಗಳು  ದ್ವಿಮುಖ  ವಿದ್ಯುತ್   ಹರಿವಿಗೆ  ಅನುಗುಣವಾಗಿಲ್ಲ.   ಆದರೆ     ಸಣ್ಣ  ಮಟ್ಟಿನ ವಿದ್ಯುತ್ ಒಳಹರಿವು    ತಾಂತ್ರಿಕ  ಸಮಸ್ಯೆಗಳ  ಉಂಟು ಮಾಡದು.  ಅದು ಅದೇ  ಆಸುಪಾಸಿನಲ್ಲಿ ಖರ್ಚಾಗಿ ಹೋಗುತ್ತದೆ.  ಪರಿವರ್ತಕ  ವರೆಗೆ  ಮುಟ್ಟುವುದೇ  ಇಲ್ಲ.   ಕಾರಣ  ಅದು  ಅತ್ಯಂತ ಹೆಚ್ಚು  ವಿದ್ಯುತ್  ಬಳಸುವ ಸಮಯ.

ನೀರು  ಬಿಸಿ  ಮಾಡಲು   ಸೌರ ಫಲಕಗಳಿಗೆ ಸರಕಾರ  ಸಹಾಯದನ ಕೊಡುತ್ತವೆ.  ಕಾರಣ  -  ನೀರು  ಬಿಸಿ ಮಾಡುವುದು ಹೆಚ್ಚಾಗಿ ಬೆಳಗಿನ  ಜಾವ.  ಆಗ  ಎಲ್ಲ  ಮನೆಯಲ್ಲೂ  ಹೀಟಿಂಗ್  ಕಾಯಿಲುಗಳು  ಒನ್ ಆದಾಗ   ಜಾಲಕ್ಕೆ  ವಿಪರೀತ  ಒತ್ತಡ ಬೀಳುತ್ತದೆ.    ಅದನ್ನು ತಪ್ಪಿಸುವ  ದೂರಾಲೋಚನೆ   ಇದರ ಹಿಂದಿದೆ.    ಸಬ್ಸಿಡಿ  ಕೊಡೋದು  ಬಿಸಿ   ನೀರ  ವ್ಯವಸ್ಥೆಯಂತೆ   ವಿದ್ಯುತ್     ವ್ಯವಸ್ಥೆ   ಸ್ಥಾಪಿಸಲು  ಆಗಬಾರದು.   ಆದು  ಈಗ    ಹಲವಾರು  ಗುಡ್ಡಗಳಲ್ಲಿ   ಕೆಲಸಕ್ಕೆ ಬಾರದ ಗಿರಿಗಿಟಿ  ಸ್ಥಾಪಿಸಿದಂತಾಗುತ್ತದೆ.   ನಾವು  ಜಾಲಕ್ಕೆ ಕೊಡುವ  ವಿದ್ಯುತ್ತಿಗೆ  ನ್ಯಾಯ  ಬೆಲೆ ದೊರಕಬೇಕು. 

Peaking generators  ಅಂದರೆ  ವಿದ್ಯುತ್  ಉಪಯೋಗ  ವಿಪರೀತವಾದಾಗ  ನಡೆಯುವ   ಉತ್ಪಾದನಾ  ಕೆಂದ್ರಗಳು ಸಾಮಾನ್ಯವಾಗಿ   ಗ್ಯಾಸಿನಿಂದ ನಡೆಯುತ್ತವೆ.   ಅತಿ ಅಗತ್ಯವೆನಿಸಿದಾಗ  ಅದನ್ನು  ನಡೆಸುತ್ತಾರೆ.  ಹಗಲಿನಲ್ಲಿ ಹಳ್ಳಿಗಳಲ್ಲಿ ಫಾನ್  ಪಟ್ಟಣಗಳಲ್ಲಿ  ಎಸಿ  ಗರಿಷ್ಟ  ಉಪಯೋಗದ ಸಮಯ  ಸೌರ ಫಲಕಗಳ  ಉತ್ಪಾದನೆಯೂ   ಹೆಚ್ಚಿನ ಪ್ರಮಾಣದಲ್ಲಿರುತ್ತದೆ.   ಅದುದರಿಂದ  ಅವು ಸ್ವಾಭಾವಿಕವಾಗಿ  peak load ನಿರ್ವಹಿಸಲು  ಸಲೀಸು ಮಾಡಿಕೊಡುತ್ತದೆ.  ಅದುದರಿಂದ  ಅದಕ್ಕೆ  ಉತ್ತಮ  ದರ  ಕೊಡೋದು  ಬುದ್ದಿವಂತಿಕೆಯೇ  ಆಗುತ್ತದೆ. :)
      
ಈಗ  ಎರಡು ವರ್ಷಗಳಲ್ಲಿ  microinvertors ಎಂಬ ಹೊಸ ಉತ್ಪನ್ನ   ಅಮೇರಿಕದ   ಮಾರುಕಟ್ಟೆಗೆ ಬಂದಿದೆ  ಎನ್ನುವುದೂ  ಈ ಬರಹಕ್ಕೆ  ಒಂದು ಕಾರಣ.  ಪ್ರತಿ  ಫಲಕಕ್ಕೆ  ಸಿಕ್ಕಿಸುವಂತಹ  ಪುಟ್ಟ  ಪರಿವರ್ತಕ.  ಅದನ್ನು ನಂತರ  ನೇರ ನಮ್ಮ ಮನೆ  ವಿದ್ಯುತ್  ಪ್ಲಗ್ಗಿಗೂ  ಸಿಕ್ಕಿಸಬಹುದು  ಎನ್ನುವಷ್ಟು  ಸರಳ.     ಆದರೆ  ಅದು  110 V, 60 HZ.   ನಮ್ಮಲ್ಲಿ  ಜಾಲ  ಇರೋದು  220 V 50 Hz.  ಅದುದರಿಂದ ನಮ್ಮಲ್ಲಿ ಹಾಗೆಯೇ ಉಪಯೋಗಿಸುವಂತಿಲ್ಲ.  ಎರಡು ಮೂರು    ವರ್ಷದಿಂದ  ಅವರಿಗೆ ಪತ್ರ ಬರೆಯುತ್ತಲೇ ಇದ್ದೇನೆ, ನಮಗಾಗುವ  ಸಾಮಾನು  ತಯಾರಾಗುವಾಗ  ಹೇಳಿ.     ಅದರ ಹಿಂದಿರುವ  ಒಬ್ಬರು  ರಘು  ಬೇಲೂರು   ನಮ್ಮವರು   ನಾನಿವರೊಂದಿಗೆ  ಪತ್ರವ್ಯವಹಾರ ನಡೆಸಿಲ್ಲವಾದರೂ  ಅವರಿಗೆ   ಊರ ನೆನಪಿದ್ದರೆ ?  ತನ್ನ  ಕೊಡುಗೆ  ಇರಲೆಂದು  ಅನಿಸಿದರೆ  ?   ಏನೊ  ಒಂದು ಆಸೆ. 

ಈಗ  ರಾತ್ರಿನಾ ?   ಹಾಗಾದರೆ  ಮುಂದಿನ ಕೊಂಡಿಗಳ    ಕ್ಲಿಕ್ಕಿಸಿ.   ಅಮೇರಿಕದ     ಕಲಿಫೊರ್ನಿಯದಲ್ಲಿ ಒಬ್ಬರ ಮನೆಯಲ್ಲಿ ಅಳವಡಿಸಿದ  ಫಲಕಗಳಲ್ಲಿ  ವಿದ್ಯುತ್  ಎಷ್ಟು  ತಯಾರಾಗುತ್ತದೆ  ವಿವರವಾಗಿ   ನೋಡ ಬಹುದು.  ಕೊಂಡಿ   ಒಂದು  ಮತ್ತು  ಕೊಂಡಿ    ಎರಡು.   ಅವರು  ಫಲಕಗಳ  ಹಾಕಿದ  ಕಥೆ  ಇಲ್ಲಿದೆ.