Sunday, May 29, 2011

ಜನಹಿತ ಬಯಸದ ಬಾಟರಿ ಉದ್ಯಮ

ವಿಜ್ನಾನ ಹಾಗೂ ಕೈಗಾರಿಕೆಗಳು ಮನುಷ್ಯನ ಏಳಿಗೆಯೆಡೆಗೆ ಕೆಲಸ ಮಾಡುವುದೋ ? ತಮ್ಮ ಸ್ವಾರ್ಥ ಕಾಯ್ದು ಕೊಳ್ಳುವುದು ಮಾತ್ರವೋ ? ಕೆಲವೊಂದು ಉದಾಹರಣೆ ನೋಡುವಾಗ ತಮ್ಮ ಲಾಭಕ್ಕೆ ಮಾತ್ರ ಕೈಗಾರಿಕೆಗಳ ಗಮನವೆಂದು ಅನಿಸುತ್ತದೆ. ಅವುಗಳಲ್ಲೊಂದು ಈಗ ಹೆಚ್ಚು ಗಮನ ಸೆಳೆಯದ ಎಡಿಸನ್ ತನ್ನ ಕಾರಿಗೆ ಉಪಯೊಗಿಸಿದ ಕಬ್ಬಿಣ ನಿಕೆಲ್ ಪ್ಲೇಟಿನ ಬಾಟರಿ . ಆ ಬಾಟರಿ ಕಾರು ಚೆನ್ನಾಗಿ ಕೆಲಸ ಮಾಡಿದರೂ ಪೆಟ್ರೊಲ್ ವಾಹನ ಹೆಚ್ಚು ಲಾಬದಾಯಕ ಎಂದು ಪ್ರಚಾರ ಮಾಡಲಾಯಿತು.

೧೯೦೩ ರಿಂದ ೧೯೭೨ ರವರೆಗೆ ಎಪ್ಪತ್ತೊಂದು ವರ್ಷ ಯಶಸ್ವಿಯಾಗಿ ಬಾಟರಿ ತಯಾರು ಮಾಡಿದ ಅಮೇರಿಕದ ಎಡಿಸನ್ ಕಂಪೇನಿ ಇಂಗ್ಲೇಂಡಿನ ಎಕ್ಷೈಡ್ ಕಂಪೇನಿಗೆ ಮಾರಾಟವಾದ ಮೂರು ವರ್ಷಗಳಲ್ಲಿ ಬಾಟರಿ ತಯಾರಿ ನಿಲ್ಲಿಸಿತು. ಖರೀದಿಸಿದ ಕಂಪೇನಿಯ ಉದ್ದೇಶ ಬಾಟರಿ ತಯಾರು ಮಾಡುವುದಕ್ಕಾಗಿರಲಿಲ್ಲ – ತನ್ನ ಇತರ ಹಿತಾಸಕ್ತಿಗಳಿಗೆ ಪೂರಕವಾಗಿ ಕಂಪೇನಿಯ ಗುಳುಂ ಮಾಡಿದ್ದು.

ನೋಡಿ. ಸ್ವಾಮಿ, ಒಬ್ಬನಿಗೆ ಅವನ ಜೀವಿತಾವದಿಯಲ್ಲಿ ಒಂದೇ ಬಾಟರಿ ಮಾರುವುದು ಎಂದರೆ ಕೈಗಾರಿಕೆಗೆ ಅನ್ಯಾಯವಲ್ಲವೇ ? ಹೀಗಾದರೆ ಬಾಟರಿ ಕಂಪೇನಿ ಬದುಕುವುದಾದರೂ ಹೇಗೆ ? ಬಾಟರಿ ಕೈಗಾರಿಕೆಗೆ ಅಪಾರ ಲಾಭವಾಗುವುದಾದರೂ ಹೇಗೆ ? ಇಂದೀಗ ಈ ತಂತ್ರಜ್ನಾನದ ಬಾಟರಿಗಳ ಮಾಹಿತಿ ದೊರಕುವುದೂ ಸುಲಭವಲ್ಲ.

ಅಮೇರಿಕದಲ್ಲಿ ಹಲವು ಪಟ್ಟಣಗಳಲ್ಲಿದ್ದ ಟ್ರಾಮ್ ಕಂಪೇನಿಗಳನ್ನು ಖರೀದಿಸಿದ ಕಾರು ಉದ್ಯಮ ಕ್ರಮೇಣ ಅವನ್ನು ಕ್ರಮೇಣ ಹೊಸಕಿ ಹಾಕಿತು. ಪ್ರಯಾಣಿಕ ದರ ಏರಿಸಿ ಹಾಗೂ ಕಾರುಗಳಲ್ಲಿ ಹೋಗುವುದು ಹೊಸತನವೆಂಬ ಜಾಹಿರಾತು ಹರಿಸಿ ಟ್ರಾಮ್ ಗಳಿಂದ ಪ್ರಯಾಣಿಕರನ್ನು ಹೊರ ದೂಡಿದವು. ಆಗ ಅಲ್ಲಿನ ಪೇಟೆ ಜನ ಹೆಚ್ಚು ಕಾರುಗಳ ಕೊಳ್ಳುವುದು ಅವುಗಳಲ್ಲಿ ಸಂಚರಿಸುವುದು ಅನಿವಾರ್ಯವಾಯಿತು. ಅದೇ ರೀತಿ ಒಂದು ಬಾಟರಿ ಕಂಪೇನಿ ಪರಿಸರಪೂರಕ ಪರ್ಯಾಯವನ್ನು ಸಮಾಜಕ್ಕೆ ಇಲ್ಲವಾಗಿಸಿತು.

ಈ ಎಡಿಸನ್ ಬಾಟರಿಗಳಿಗೆ ಬಾಯಾರಿಕೆಯಾದರೂ ಮರಣಾಂತಿಕವಲ್ಲ. ಹಲವು ವರ್ಷಗಳ ಕಾಲ ಮೂಲೆಯಲ್ಲಿದ್ದ ಬಾಟರಿಗಳಿಗೆ ಯಶಸ್ವಿಯಾಗಿ ಜೀವದಾನ ಮಾಡಿದ ಉದಾಹರಣೆಗಳಿವೆ. ಇವುಗಳಿಗೆ ವೇಗವಾದ ಚಾರ್ಜಿಂಗ್, ಚಾರ್ಜು ಪೂರ್ತಿ ಖಾಲಿಯಾಗುವುದು ಹಾಗೂ ಅಸಿಡ್ ಖಾಲಿಯಾಗುವ ಸಮಸ್ಯೆಗಳಿಲ್ಲ. ಲೆಡ್ ಅಸಿಡ್ ನಂತೆ ಹಳೆ ಮತ್ತು ಹೊಸ ಬಾಟರಿಗಳ ಒಟ್ಟು ಸೇರಿಸುವುದೂ ಸಮಸ್ಯೆ ಅಲ್ಲವಾದ ಕಾರಣ ಹಣವಿದ್ದಂತೆ ಖರೀದಿಸಬಹುದು. ಒಮ್ಮೆಲೆ ಹಣ ಸುರಿಯಬೇಕಾಗಿಲ್ಲ. ಇವುಗಳ ಶೇಖರವಾಗಿರುವ ಶಕ್ತಿ ಪೂರ್ತಿ ಉಪಯೋಗಿಸಬಹುದು. ಲೆಡ್ ಅಸಿಡ್ ಚಾರ್ಜ್ ಸಂಪೂರ್ಣ ಖಾಲಿ ಮಾಡುವಂತಿಲ್ಲ.

ಇಂದು ಮಾಮೂಲಿ ಲೆಡ್ ಅಸಿಡ್ ಬಾಟರಿಯ ಮೂರು ಪಾಲು ಕ್ರಯವಾದರೂ ಹತ್ತು ಪಾಲು ಬಾಳ್ವಿಕೆ ಇರುವಾಗ ಪರವಾಗಿಲ್ಲ ಅನಿಸುತ್ತದೆ. ಹಲವೊಮ್ಮೆ ಇಡೀ ರಾತ್ರಿ ವಿದ್ಯುತ್ ವಿಫಲವಾದಾಗ ರಾತ್ರಿ ಹೋಗಿ ಬಾಟರಿ ಖಾಲಿಯೆಂದು ಕಿರಿಚಾಡುವ ಇನ್ವರ್ಟರ್ ಒಫ್ ಮಾಡಿದ್ದೇನೆ. ಇಲ್ಲವಾದರೆ ನನ್ನ ಸೌರ ಫಲಕಗಳಿಂದ ಶಕ್ತಿ ತುಂಬಿಕೊಳ್ಳುವ ಬಾಟರಿ ನಾಲ್ಕು ವರ್ಷವೂ ಬಾಳಲಿಕ್ಕಿಲ್ಲ. ನನ್ನಲ್ಲಿರುವ ಲೆಡ್ ಅಸಿಡ್ ಬಾಟರಿಗಳು ಅದರೊಳಗಿನ ಆಸಿಡ್ ಪೂರ್ತಿ ಅಲ್ಲವಾದರೂ ಗಣನೀಯವಾಗಿ ಖಾಲಿಯಾಗಿ ತಮ್ಮ ಆಯುಷ್ಯ ಕಡಿಮೆ ಮಾಡಿಕೊಂಡಿವೆ. ಆದರೆ ಇಂತಹ ಬಾಟರಿಯಲ್ಲಿ ಅಂತಹ ಹೆದರಿಕೆ ಇಲ್ಲ. ಪೂರಾ ಚಾರ್ಜು ಅಥವಾ ಆಸಿಡ್ ಖಾಲಿಯಾದರೂ ಬಾಳ್ವಿಕೆಯಲ್ಲಿ ಮೋಸವಿಲ್ಲ.

ಇಪ್ಪತೈದು ವರ್ಷ ಬಾಳುವ ಸೌರ ವಿದ್ಯುತ್ ಫಲಕಗಳ ಜತೆ ಈ ದೀರ್ಘಾಯುಷ್ಯದ ಬಾಟರಿ ಜೋಡಣೆಯಾಗಬೇಕಾಗಿತ್ತು. ಹಲವೆಡೆ ಹೊಸ ಬಾಟರಿಗೆ ಹಣ ಹಾಕಲು ಪರದಾಡುತ್ತಿರುವ ಜನ ಫಲಕಗಳನ್ನೇ ಮೂಲೆಪಾಲು ಮಾಡಿದ್ದಾರೆ. ಹೀಗಾಗಿ ತಾಂತ್ರಿಕ ಸಮಸ್ಯೆಗಳಿಂದಲ್ಲ, ವ್ಯಾಪಾರಿ ಸ್ವಾರ್ಥ ಕಾರಣಗಳಿಗೆ ಈ ಬಾಟರಿ ನಮಗೆ ದೊರಕುತ್ತಿಲ್ಲ ಅನಿಸುತ್ತದೆ.

ಇಪ್ಪತ್ತು ಸಾವಿರ ಕೋಟಿ ರೂಪಾಯಿಯ ವಾರ್ಷಿಕ ವ್ಯವಹಾರ ಮಾಡುವ ಬಾರತೀಯ ಬಾಟರಿ ಉದ್ಯಮ ನಮಗೆ ಲೆಡ್ ಅಸಿಡ್ ಬಾಟರಿಯನ್ನು ಕೊಡುವುದರಲ್ಲೇ ಆಸಕ್ತಿ ವಹಿಸುತ್ತದೆ. ನಾವೂ ತೃಪ್ತರಾಗಿದ್ದೇವೆ.

http://en.wikipedia.org/wiki/Nickel-iron_battery

http://www.nickel-iron-battery.com/

Saturday, May 21, 2011

ಮಲೆಯಾಳ ಮಾತೃಭೂಮಿಯಲ್ಲೊಂದು ಸಂದರ್ಶನ

ಮೊನ್ನೆ ಮಂಗಳವಾರ ೧೭ರಂದು ಬೆಳಗ್ಗೆ ನನಗೆ ಇದ್ದಕ್ಕಿದ್ದಂತೆ ಕೇರಳದಿಂದ ಇ-ಪತ್ರಗಳು ಬರಲು ಪ್ರಾರಂಬವಾಯಿತು. ಪಕ್ಕನೆ ಕಾರಣ ಗೊತ್ತಾಗಲಿಲ್ಲ. ಹೆಚ್ಚಿನವು ನಿನ್ನ ಬಗ್ಗೆ ನನ್ನ ಪೇಪರಿನಲ್ಲಿ ಓದಿದ್ದೆ. ಹೆಚ್ಚು ವಿವರ ತಿಳಿಸಿ ಎನ್ನುವ ಪತ್ರಗಳು. ಯಾವ ಪತ್ರಿಕೆ, ಯಾವಾಗ ಪ್ರಕಟನೆ ಎನ್ನುವ ವಿವರಗಳು ಎರಡು ಗೀಟಿನ ಪತ್ರಗಳಲ್ಲಿ ಒಂದರಲ್ಲೂ ಇರಲಿಲ್ಲ. ಮೊದಲು ಅದನ್ನು ಅಷ್ಟು ಗಂಬೀರವಾಗಿ ಪರಿಗಣಿಸದೆ ಅವನ್ನೆಲ್ಲ ಕಸದ ಬುಟ್ಟಿಗೆಸೆದೆ. ಆದರೆ ಇದೇ ಸಾರಾಂಶದ ಪತ್ರಗಳು ಮತ್ತೂ ಬಂದ ಕಾರಣ ಎಲ್ಲವನ್ನೂ ಪುನಹ ತೆಗೆದು ನೋಡಿ ಕಾರಣ ಊಹಿಸಿದೆ.

ಸರಿಯಾಗಿ ತಿಂಗಳ ಹಿಂದೆ ಅಂದರೆ ಎಪ್ರಿಲ್ ೧೭ರಂದು ಮಾತೃಭೂಮಿ ವರದಿಗಾರರು ಕಾಸರಗೋಡಿನಲ್ಲಿ ನನ್ನ ಬೇಟಿ ಮಾಡಿದ್ದರು. ಎಂಡೊ ಕಾರ್ಯಕ್ರಮದಲ್ಲಿ ಅವರನ್ನು ಡಾ ಶ್ರೀಪತಿ ಪರಿಚಯ ಮಾಡಿಕೊಟ್ಟಿದ್ದರು. ವರದಿಗಾರರಾದ ವಿನೋದ್ ನಾಲ್ಕೆಂಟು ಪ್ರಶ್ನೆ ಕೇಳಿ ತಕ್ಷಣ ಪೋಟೊಗ್ರಾಫರ್ ಒಬ್ಬರನ್ನು ಬರಮಾಡಿ ಚಿತ್ರ ತೆಗೆಸಿದರು. ನಾನು ನನ್ನಲ್ಲಿದ ಈ ವಾಹನದ ವೈಶಿಷ್ಟ ವಿವರಿಸುವ ಒಂದು ಕರಪತ್ರ ಕೊಟ್ಟೆ. ಅಕಸ್ಮಾತ್ ಹೆಚ್ಚಿನ ವಿವರ ಬೇಕಾದರೆ ಸಂಶಯಗಳಿದ್ದರೆ ಸಂಪರ್ಕಿಸಿ ಎಂದು ಹೇಳಿದೆ.

ಪತ್ರಿಕಾವರದಿ ಬಗೆಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ ನನ್ನ ಪ್ರಕಾರ ಮುಖ್ಯ ಅನಿಸುವ - ಮನುಷ್ಯ ಪ್ರಯತ್ನ ಹಾಗೂ ಯಂತ್ರ ಸಹಾಯ ಸಮ್ಮೀಳನವಾಗುವ ಏಕಮಾತ್ರ ವಾಹನ ಎಂದು ಯಾವ ಪತ್ರಿಕಾ ವರದಿಯಲ್ಲೂ ಇಂದಿನ ವರೆಗೆ ನನಗೆ ತಿಳಿದಂತೆ ಪ್ರಕಟವಾಗಿಲ್ಲ. ತಿಂಗಳು ಕಳೆಯುವಾಗ ನಾನು ಅದನ್ನು ಮರೆತು ಬಿಟ್ಟೆ. ಕೇರಳದಿಂದಲೇ ಹಲವಾರು ಪತ್ರ ಬಂದ ನಂತರ ಚುರುಕಾಯಿತು ಮನಸ್ಸು.

ವರದಿಗಾರರ ಸಂಪರ್ಕ ಕೋರಿ ಶ್ರೀಪಡ್ರೆಯವರಿಗೆ ನಾನು ಪತ್ರಿಸಿದೆ. ಶ್ರೀಪಡ್ರೆಯವರೂ ವರದಿಗಾರರಿಗೆ ಇ-ಪತ್ರಿಸಿದರು. ಅಂತೂ ಪ್ರಕಟವಾದ ಐದು ದಿನ ಕಳೆದು ಮಾತೃಭೂಮಿಯಲ್ಲಿರುವ ರಾಜೇಶ್ ನನಗೊಂದು ಪುಟ್ಟ ಚಿತ್ರಣ ಕಳುಹಿಸಿಕೊಟ್ಟರು. ಚಿತ್ರ ಸಣ್ಣದು. ನನಗೆ ಮಲೆಯಾಳ ಓದಲು ಬರುವುದಿಲ್ಲ. ಹಾಗಾಗಿ ಸಾಕು. ನಿಮಗೆ ಬರುವುದಾಗಿದ್ದರೆ ನಾನೇನು ಮಾಡುವಂತಿಲ್ಲ. ಅಂದು ನನ್ನ ಆಸಕ್ತಿ ಬದಿಗಿರಿಸಿ ಅವರೊಂದಿಗೆ ಮಾತನಾಡಿದ್ದೆ. ದಿನ ಪತ್ರಿಕೆ ಸಂಜೆಗಾಗುವಾಗ ಪೊಟ್ಟಣ ಕಟ್ಟಲು ಮಾತ್ರ ಉಪಯೋಗ ಅನ್ನುವಂತೆ ಸಂದರ್ಶನ ಮುಗಿದ ನಂತರ ನಮ್ಮ ಮಟ್ಟಿಗೆ ವರದಿಗಾರರ ವರ್ತನೆಯೂ ಅಷ್ಟೇ. ಈ ಚಿತ್ರ ದೊರಕಲು ಕಾರಣರಾದ ಶ್ರೀ ಪಡ್ರೆಯವರಿಗೆ ಕೃತಜ್ನತೆಗಳು. ಪ್ರಕಟವಾದ ವಿಚಾರ ಸಂಬಂದಿಸಿದ ವ್ಯಕ್ತಿಗೆ ತಿಳಿಸುವ ಸೌಜನ್ಯ ವರದಿಗಾರರಿಗಿದ್ದರೆ ಚೆನ್ನ.

Sunday, May 15, 2011

ಎಂಡೊ ನಿಷೇದ ತಾತ್ಕಾಲಿಕವಾದರೂ

ಎಂಡೊಸಲ್ಪನ್ ಹಂತಹಂತವಾಗಿ ನಿಷೇದವನ್ನು ಶ್ರೀಪಡ್ರೆಯವರೂ ಡಾ ರವೀಂದ್ರನಾಥ ಶಾನುಬೋಗರೂ ಸ್ವಾಗತಿಸಿ ನೈತಿಕ ವಿಜಯ ಎಂದರೂ ನನಗೆ ಮನಸ್ಸಿನ ಕಿರಿಕಿರಿ ಮುಂದುವರಿಯುತ್ತಲೇ ಇತ್ತು. ಆದರೆ ಮೊನ್ನೆ ಶುಕ್ರವಾರ ನಮ್ಮ ಉಚ್ಚ ನ್ಯಾಯಾಲಯ ಎಂಟು ವಾರದ ಮಟ್ಟಿಗೆ ಇದರ ತಯಾರಿ ಹಾಗೂ ಬಳಕೆ ನಿಷೇದಿಸಿದ್ದನ್ನು ಕೇಳುವಾಗ ಬಹಳ ಸಂತಸ ಉಂಟಾಗಿದೆ. ಇದು ಸಮಾಜಕ್ಕೆ ಎಚ್ಚೆತ್ತುಕೊಳ್ಳಲು ಚಾಟಿ ಏಟಿನಂತಾಯಿತು ಅನಿಸುತ್ತದೆ.

ಸಿಂಪರಣೆ ಪಡ್ರೆ ಹಾಗೂ ಕೊಕ್ಕಡ ಪ್ರದೇಶಗಳಿಗೆ ಸಿಮಿತವಾಗಿಲ್ಲ. ಹೇಗೆ ಬಳಸಿದರೂ ಚೆಲ್ಲಿದರೂ ವಿಷ ಅಂತಿಮವಾಗಿ ಮನುಷ್ಯರ ದೇಹವನ್ನು ಸೇರುತ್ತದೆ. ಕಾಸರಗೋಡಿನಲ್ಲಿ ಹದಿನೈದು ಕಿಮಿ ತೋಡಿನ ಅಕ್ಕಪಕ್ಕದ ಬಾವಿಗಳೆಲ್ಲ ಎಂಡೊಸಲ್ಫನ್ ಮಯ ಎಂದರೆ ಇದರ ಗಂಬೀರತೆ ಅರಿವಾಗಬೇಕು. ಹಾಗೆ ನಮ್ಮ ದೇಶವಿಡೀ ಹೊಲಸಾಗಿದೆ. ನಾವು ಬಳಸುವ ಆಹಾರ ಪದಾರ್ಥಗಳೆಲ್ಲ ವಿಷಮಯವೇ ಆಗಿದೆ. ಆದರೆ ಸಣ್ಣ ಪ್ರಮಾಣದಲ್ಲಾದ ಕಾರಣ ಸಮಸ್ಯೆ ಅರಿವು ನಮಗಾಗಿಲ್ಲ ಅಷ್ಟೇ. ಮಾತ್ರವಲ್ಲ ನಾವು ತರುವ ಹಣ್ಣು ಹಂಪಲು ಆಹಾರ ಪದಾರ್ಥಗಳೆಲ್ಲವೂ ವಿಷಮಯವಾದಾಗ ಕಾರಣ ಇಂತಹದ್ದು ಎಂದು ಬೊಟ್ಟು ಮಾಡಿ ತೋರಿಸುವುದು ಸಾದ್ಯವೇ ಇಲ್ಲ.

ನಾನು ವಾಸ್ತವ್ಯ ಇರುವುದು ಅನಂತಾಡಿ ಗ್ರಾಮ ಎನ್ನುವಾಗ ಗೊತ್ತು, ಗೊತ್ತು ಅಲ್ಲಿ ಭಾರಿ ತರಕಾರಿ ಬೆಳೆಯುತ್ತಾರೆ. ಲೀಟರ್ ಗಟ್ಟಲೆ ಔಷದಿ [?] ದಾಸ್ತಾನು ಮಾಡುತ್ತಾರೆ, ಸಿಂಪರಣೆ ಮಾಡುತ್ತಾರೆ ಎನ್ನುವಾಗ ಮುಜುಗರವಾಗುತ್ತದೆ. ನನ್ನದೇ ಗ್ರಾಮದ ಇನ್ನೊಂದು ಮೂಲೆಯಲ್ಲಿ ನಡೆಯುವ ಸಮಾಜದ ವಿರೋದಿ ಅನ್ಯಾಯಕ್ಕೆ ನಾನು ಏನು ಮಾಡುವಂತಿಲ್ಲ ಎನ್ನುವಾಗ ಬೇಸರವಾಗುತ್ತದೆ.

ಅದುದರಿಂದ ಹಾನಿಕರ ಕ್ರಿಮಿ ಕೀಟಗಳ ಜೀವನ ಚಕ್ರದ ಅರಿವು ರೈತರಿಗೆ ಮೂಡಿಸಬೇಕು. ಈಗ ಸಂಜೆ ಆಕಾಶದಲ್ಲಿ ಹಾರಬಹುದಾದ ಹಕ್ಕಿಗೆ ಬೆಳಗ್ಗೆಯೇ ಗುಂಡಿಕ್ಕುವ ಪ್ರವೃತ್ತಿಯೇ ಜೋರಾಗಿದೆ. ಇದರಿಂದಾಗಿ ಪರಿಸರ ಕುಲಷಿತವಾಗುವುದು ಹೊರತು ಯಾವುದೇ ಪ್ರಯೋಜನ ಇಲ್ಲ. ಕನಿಷ್ಟ ಶೇಕಡಾ ಎಪ್ಪತ್ತು ವಿಷ ಸಿಂಪರಣೆ ಅನಿವಾರ್ಯವಲ್ಲ. ಬೆಳೆ ಕಳಕೊಳ್ಳುವ ಬೆದರಿಕೆ, ಅದನ್ನು ಉಳಿಸಿಕೊಳ್ಳುವ ಅನಿವಾರ್ಯತೆ, ವಿಷದ ಬಗೆಗಿನ ಜೋರಾದ ಪ್ರಚಾರ ಎಲ್ಲವೂ ನಮ್ಮನ್ನು ಸಿಂಪರಣೆಗೆ ಪ್ರೇರಣೆ ಮಾಡುತ್ತದೆ.

ಹೀಗೊಂದು ಶುದ್ದ ಹುಚ್ಚು ಆಲೋಚನೆ. ಹಲವೊಮ್ಮೆ ಹುಚ್ಚು ಆಲೋಚನೆಗಳಲ್ಲಿ ಒಂದಿಷ್ಟು ಸತ್ಯ ಒಳಗೊಂಡಿರುತ್ತದೆ. ಇನ್ನೊಬ್ಬರಿಗೆ ಮುಂದಿನ ಹೆಜ್ಜೆ ಅನ್ವೇಶಣೆ ಸಾದ್ಯವಾಗುತ್ತದೆ. ನಾವು ಯಾವುದೇ ಅಂಟಿಬಯೋಟಿಕ್ ವೈದ್ಯರಿಂದ ಅಥವಾ ಅವರ ಚೀಟಿ ತೋರಿಸಿ ಮದ್ದಿನ ಅಂಗಡಿಯಿಂದ ತರಬಹುದು ಹೊರತು ನೇರವಾಗಿ ಖರೀದಿಸುವಂತಿಲ್ಲ. ಎಲ್ಲರೂ ಇದನ್ನು ಅನುಸರಿಸುತ್ತಾರೆ ಅನ್ನುವಂತಿಲ್ಲವಾದರೂ ಹೀಗೊಂದು ಕಾನೂನು ವ್ಯವಸ್ಥೆ ಜಾರಿಯಲ್ಲಿದೆ. ಅದೇ ರೀತಿ ಕೃಷಿ ಸಂಬಂದಿ ವಿಷಗಳಿಗೆ ಮೂಗು ದಾರ ಹಾಕಿದರೆ ?

ದಾಸ್ತಾನು ಮಾಡುವುದರ ವಿರುದ್ದ ರೈತರ ಮನ ಒಲಿಸಬೇಕಾದರೆ ಅನಿವಾರ್ಯ ಸಂದರ್ಬದಲ್ಲಿ ತಕ್ಷಣ ಪೊರೈಕೆ ಸಾದ್ಯವಾಗಬೇಕು. ಸದಾ ನೋವು ಅನುಬವಿಸುವ ರೋಗಿಗಳಿಗೆ ವೈದ್ಯರು ದಿನಕ್ಕೆ ಮೂರು ಮಾತ್ರೆ ಎನ್ನುವ ಬದಲು ರೋಗಿಯ ಕೈಯಲ್ಲೇ ನಿಯಂತ್ರಣ ಕೊಟ್ಟರೆ ಹೇಗೆ ? ನೋವು ನಿವಾರಕ ಔಷದಿಯನ್ನು ರಕ್ತಕ್ಕೆ ಸೇರಿಸುವ ನಿಯಂತ್ರಣ ರೋಗಿಯ ಕೈಯಲ್ಲೇ ಇದ್ದರೆ ನಿವಾರಕದ ಉಪಯೋಗ ಗಣನೀಯವಾಗಿ ಕಮ್ಮಿಯಾಗಿದೆಯಂತೆ.

ಹಾಗೆ ಬರಿಗಾಲ ವೈದ್ಯರಂತೆ ಬರಿಗಾಲ ಕೃಷಿ ತಜ್ನರನ್ನು ತಯಾರಿಸುವ ವ್ಯವಸ್ಥೆ ನಮ್ಮಲ್ಲಿ ಆಗಬೇಕು. ಇವರು ಊರೊಳಗೆ ಅಥವಾ ಆಸುಪಾಸಿನಲ್ಲಿ ಇರುವವರಾಗ ಬೇಕು. ಅವರಿಗೆ ಸರಕಾರ ಅಥವಾ ಸಮಾಜ ಅದಕ್ಕೊಂದು ಅರ್ಥಿಕ ಬೆಂಬಲ ಒದಗಿಸಬೇಕು. ಅವರು ಹಾನಿಗೊಳಗಾದ ಹೊಲಕ್ಕೆ ಬೇಟಿ ನೀಡಿ ಅಲ್ಲಿನ ಪರೀಸ್ಥಿತಿ ಕೂಲಂಕಶವಾಗಿ ಪರಿಶೀಲನೆ ನಡೆಸಬೇಕು. ಅಕಸ್ಮಾತ್ ಕೀಟ ಹಾವಳಿ ಬೀಕರವಾಗಿದ್ದರೆ ತಕ್ಷಣ ಪರಿಹಾರ ವಿಷದ ಪೊರೈಕೆಯಾಗಿ ಅಕ್ಕಪಕ್ಕದವರ ಸಹಾಯದಿಂದ ಸಿಂಪರಣೆ ಇತ್ಯಾದಿ ನಡೆಯಬೇಕು. ಬೆಂಕಿ ಹರಡದಂತೆ ನಾವು ನೆರೆಕರೆಯಲ್ಲಿ ಕೈ ಜೋಡಿಸುವುದಿಲ್ಲವೇ – ಹಾಗೆ.

ನಾನು ಎರಡು ತಿಂಗಳು ಹಿಂದೆ ಬರೆದ ಯುರೋಪಿನವರ ಎಂಡೊ ವಿರೋದಿ ಆಸಕ್ತಿ ಬಗೆಗೆ ಇಂದಿನ ಉದಯವಾಣಿ ಪುರವಣಿಯಲ್ಲಿ ಮೂರನೇಯ ಪುಟದ ಅವರ ಅಂಕಣದಲ್ಲಿ ಹಾ. ಮ. ಕನಕರವರೂ ಬರೆದಿದ್ದಾರೆ. ಇದೂ ಎಚ್ಚರಿಕೆ ವಹಿಸಬೇಕಾದ ವಿಚಾರ. ಅವರು ಅಂದರೆ ಯುರೋಪಿನ ಹಿತಾಸಕ್ತಿಗಳು ಗೆಲ್ಲುವುದು ನಮಗೆ ಮುಖ್ಯವಲ್ಲವಾದರೂ ವಿಷರಹಿತ ಪರಿಸರ ಆಹಾರ ನಮ್ಮ ಹಕ್ಕು. ನಾವೀಗ ಪರ್ಯಾಯ ವಿಷಗಳನ್ನಲ್ಲ, ವಿಷರಹಿತ ಪರಿಹಾರಗಳ ರೂಪಿಸಬೇಕು. ಕಳೆದ ನಲುವತ್ತು ವರ್ಷಗಳಿಂದ ನಾವು ಎಂಡೊ ತಯಾರಿಸುತ್ತೇವೆ ಬಳಸುತ್ತೇವೆ ಎನ್ನುವಾಗ ಇದರ ಪರ್ಯಾಯಗಳ ಇನ್ನೂ ತಯಾರಿಸಲು ಸಾದ್ಯವಾಗಿಲ್ಲ ಎನ್ನುವುದೂ ನಾಚಿಕೆಗೇಡು.

ಮೊನ್ನೆ ಉಚ್ಚ ನ್ಯಾಯಾಲಯದಲ್ಲಿ ನಡೆದ ವಾದಪ್ರತಿವಾದದ ತಿರುಳು Down to Earth ತಾಣದಲ್ಲಿದೆ. ಸರಕಾರಿ ವಕೀಲರು ನ್ಯಾಯಾದೀಶರ ಮಾತಿಗೆ ಉತ್ತರಿಸಲು ತಡವರಿಸುವುದು ಕುತೂಹಲಕರವಾಗಿದೆ. ಹಾಗೆ ರಪ್ತಿಗಾಗಿ ತಯಾರು ಮಾಡಲು ಅವಕಾಶ ಕೊಡಬೇಕು ಎಂದು ಬಿನ್ನವಿಸಿದ ತಯಾರಕರು ಬೇಡಿಕೆಯ ರುಜುವಾತು ಹಾಜರು ಪಡಿಸುವುದರಲ್ಲಿ ವಿಫಲರಾದರು.

http://www.downtoearth.org.in/node/33493

ಈ ಎಂಟುವಾರದ ತಾತ್ಕಾಲಿಕ ತಡೆ ಶಾಶ್ವತ ನಿರ್ಬಂದವಾಗಲೆಂದು ಹಾರೈಸೋಣ.

ಕೊನೆಮಾತು: ನಮ್ಮ ಬ್ಲೋಗುಗಳಲ್ಲಿರುವ ಪ್ರತಿಕ್ರಿಯೆ ಕಾಣೆಯಾಗಬಹುದೋ ? ಹೌದೆನಿಸುತ್ತದೆ. ಈ ಬ್ಲೋಗಿನ ಹಿಂದಿನ ಪುಟದಲ್ಲಿದ್ದ ಎರಡು ಪ್ರತಿಕ್ರಿಯೆ ಕಾರಣವಿಲ್ಲದೆ ಕಾಣೆಯಾಗಿದೆ. ನಾನು ಓದಿದ ಇತರ ಆಂಗ್ಲ ಬ್ಲೋಗುಗಳಲ್ಲಿಯೂ ಇದೇ ರೀತಿ ಕಾಣೆಯಾದ ಸೂಚನೆ ಕಾಣುತ್ತದೆ.

Wednesday, May 11, 2011

ಸುದ್ದಿಯಲ್ಲದ ಸುದ್ದಿ ಪುತ್ತೂರ ಸುದ್ದಿ ಬಿಡುಗಡೆಯಲ್ಲಿ

ಮೊನ್ನೆ ಸೋಮವಾರ ಮದ್ಯಾಹ್ನ ಪುತ್ತೂರು ಪೇಟೆಯಲ್ಲಿ ನನ್ನ ಪಾಡಿಗೆ ಟ್ರೈಕಿನಲ್ಲಿ ಸಾಗುತ್ತಿದ್ದೆ. ಪಕ್ಕದಲ್ಲಿ ಹೋಗುತ್ತಿದ್ದ ಮೊಸೈಕಲ್ ಸವಾರ ಮಾತನಾಡಿಸಿದರು. ಇಂತಹ ಸನ್ನಿವೇಶದಲ್ಲಿ ನಾನು ಒಂದು ಶಬ್ದದ ಉತ್ತರ ಮಾತ್ರ ಕೊಡುತ್ತೇನೆ. ಊರು ಮತ್ತು ಹೆಸರು ಕೇಳಿದವರು ಸ್ವಲ್ಪ ಜೋರಾಗಿ ಬೈಕ್ ಮುಂದಕ್ಕೆ ಓಡಿಸಿ ರಸ್ತೆಬದಿಯಲ್ಲಿ ನಿಂತು ಪೋಟೊ ಕ್ಲಿಕ್ಕಿಸಿದರು. ನಾನವರ ಮರೆತು ಬಿಟ್ಟೆ.



ಇಂದು ಪುತ್ತೂರಿನ ಸುದ್ದಿ ಬಿಡುಗಡೆಯಲ್ಲಿ ಮೂರನೇಯ ಪುಟದಲ್ಲಿ ನಿನ್ನ ಪೋಟೊ ಇದೆ. ಹೆಸರು ಮಾತ್ರ ನಿನ್ನ ಮಲೆಯಾಳಿ ಮಾಡಿದ್ದಾರೆ - ಗೋವಿಂದನ್ ಆಗಿದೆ ಎಂದು ಆತ್ಮೀಯ ಅನಿಲ್ ಸಂದೇಶ ರವಾನಿಸಿದ. ಹಾಗೆ ಪತ್ರಿಕೆ ಬಿಡಿಸಿ ನೋಡುವಾಗ ಮೊನ್ನೆ ಸೋಮವಾರ ತೆಗೆದ ಪೋಟೊ ಎಂದು ಖಚಿತವಾಯಿತು. ಊರ ಮಾಹಿತಿ ನಿಖರವಲ್ಲ. ಹೆದ್ದಾರಿಯಿಂದ ಹಳ್ಳಿರಸ್ತೆಗೆ ತಿರುಗುವುದು ನೇರಳಕಟ್ಟೆಯಲ್ಲಿ ಹೊರತು ನಾನು ಅಲ್ಲಿಯವನಲ್ಲ. ನಾನು ಕಳೆದ ಎಂಟು ತಿಂಗಳಲ್ಲಿ ಕನಿಷ್ಟ ಇಪ್ಪತ್ತು ಬಾರಿ ಟ್ರೈಕಿನಲ್ಲಿ ಪುತ್ತೂರಿಗೆ ಹೋಗಿದ್ದೇನೆ. ಇವರು ನಾನು ಪುತ್ತೂರಿನಲ್ಲಿ ಕಾಣಿಸಿದ್ದೇ ಪ್ರಥಮ ಅನ್ನುವ ರೀತಿ ಬರೆದಿದ್ದಾರೆ. ಅವರು ಪತ್ರಕರ್ತರಾಗಿದ್ದರೆ ಬದಿಯಲ್ಲಿ ನಿಲ್ಲಲು ವಿನಂತಿಸಿ ಆಗ ಹೆಸರು ಊರು ಕೇಳುವ ಸೌಜನ್ಯ ಇರಬೇಕಾಗಿತ್ತು ಹೊರತು ಮುಖ್ಯ ರಸ್ತೆಯಲ್ಲಿ ಬಸ್ ನಿಲ್ದಾಣದ ಸಮೀಪ ಹತ್ತು ಕಿಮಿ ವೇಗದಲ್ಲಿ ಅಕ್ಕಪಕ್ಕದಲ್ಲಿ ಸಾಗುವಾಗ ಖಂಡಿತಾ ಅಲ್ಲ.

ಎಂಡೋಸಲ್ಫನ್ ಸಿಂಪರಣೆಯಿಂದ ಸಮಸ್ಯೆಗೊಳಗಾದ ಜನರ ಬಗೆಗೆ ಇತ್ತೀಚೆಗೆ ಬಿ ಸಿ ರೋಡಿನಲ್ಲಿರುವ ಸುಂದರ್ ರಾವ್ ಹೇಳಿದರು - ಅವರು ನಮ್ಮ ನಿಮ್ಮ ಕಣ್ಣಿಗೆ ಬೀಳುವುದಿಲ್ಲ ಯಾಕೆಂದರೆ ಅವರು ಮನೆಯಿಂದ ಹೊರಡುವುದೇ ಇಲ್ಲ. ಹಾಗಾಗಿ ಪತ್ರಿಕೆಗಳಲ್ಲಿ ಸುದ್ದಿಯಾಗುವುದೇ ಇಲ್ಲ. ಹಾಗೆ ಆಗಾಗ ಪುತ್ತೂರಿಗೆ ಹೋಗುವವನನ್ನು ಇವರು ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಗಮನ ಸೆಳೆದರು ಎಂದು ಬರೆಯುವುದರ ನೋಡಲು ಬೇಸರವಾಗುತ್ತದೆ.