Sunday, July 13, 2008

ತಿರುಳು ಬಿಸಾಕಿ ಸಿಪ್ಪೆ ತಿನ್ನಿಸಿದರು

ಹವ್ಯಕ ಪತ್ರಿಕೆಯ 2008 ಫೆಬ್ರವರಿ ತಿಂಗಳಲ್ಲಿ   ಪ್ರಕಟವಾದ ಈ ಶತಮಾನದ ಕೊನೆಯಲ್ಲಿ ಹಳ್ಳಿಯಲ್ಲಿ ಹವ್ಯಕರು ಇಲ್ಲವಾದರೆ ? ಎನ್ನುವ ಲೇಖನಕ್ಕೆ ಪ್ರತಿಕ್ರಿಯೆ ಬರಹವನ್ನು ಬರೆದು ಸದ್ರಿ ಪತ್ರಿಕೆಗೆ ಕಳುಹಿಸಿದ್ದೆ.   ಉಳಿದರೆ  ಹಳ್ಳಿಯಲ್ಲಿ  ಮಾತ್ರ  ಎಂಬ  ಅರ್ಥದಲ್ಲಿ     ನಾನು ಪ್ರತಿಕ್ರಿಯೆ ಬರಹ ಬರೆದು ರವಾನಿಸಿ ಹದಿನೈದು ದಿನಗಳಾದರೂ ಯಾವ ಪ್ರತಿಕ್ರಿಯೆಯೂ ಇಲ್ಲದಿದಿರುವುದು ನೋಡಿ ಅವರಿಗೊಂದು ಒಂದು ನೆನಪೋಲೆ ಕಳುಹಿಸಿದೆ. ಅದರಲ್ಲೊಂದಷ್ಟು ಪೂರಕ ಮಾಹಿತಿ ಬರೆದಿದ್ದೆ. ನಂತರವೂ ಈ ಬಗ್ಗೆ ಅವರಿಂದ ಯಾವ ಉತ್ತರವೂ ಇಲ್ಲದ ಕಾರಣ ನನ್ನ ಬರಹ ಅವರ ಪ್ರಕಟಣಾ ಮಾನದಂಡಗಳಿಗೆ ಅನುಗುಣವಾಗಿಲ್ಲವೆಂದು ತಿಳಿದು ಇಡೀ ವಿಚಾರವನ್ನು ಮರೆತು ಬಿಟ್ಟಿದ್ದೆ.

ನಾಲ್ಕು ತಿಂಗಳು ಕಳೆದು ಅದು (?) ಹವ್ಯಕ ಪತ್ರಿಕೆಯ ಜುಲಾಯಿ ತಿಂಗಳ ಸಂಚಿಕೆಯಲ್ಲಿ ಪ್ರಕಟವಾದಾಗ ನಾನು ನಿಜಕ್ಕೂ ಮೈ ಪರಚಿಕೊಳ್ಳುವಂತಾಗಿದೆ. ಅದು ಪ್ರಕಟವಾದ ಲೇಖನಕ್ಕೆ ನನ್ನ ಪ್ರತಿಕ್ರಿಯೆ ಅನ್ನುವುದೇ ಉಲ್ಲೇಖವಿಲ್ಲ. ಪ್ರತಿಕ್ರಿಯೆ ಬರಹವು ಚರ್ಚಿತ ವಿಚಾರವನ್ನು ಮುಂದುವರಿಸಿಕೊಂಡು ಹೋಗುವ ಕಾರಣ ಇದರಲ್ಲಿ ಹಿನ್ನೆಲೆಗೆ ಹೆಚ್ಚು ಗಮನಕೊಡುವುದಿಲ್ಲ. ತಲೆಬರಹ ಹಾಗೂ ತಿರುಳು ಎರಡಕ್ಕೂ ಕತ್ತರಿಪ್ರಯೋಗವಾಗಿ ಸಂಪೂರ್ಣ ಬಿನ್ನ ರೂಪ ಪಡೆದು ಕೊನೆಗೆ ಉಳಿದದ್ದು ನನ್ನ ಕೆಲವು ಟಿಪ್ಪಣಿಗಳ ಪೋಣಿಸಿದ ಒಂದು ಸರಮಾಲೆಯಷ್ಟೇ. ವೈಯುಕ್ತಿಕವಾಗಿ ನನ್ನ ಪರಿಚಯವಿಲ್ಲದ ಕಾರಣ ಸಂಪಾದಕರಿಗೆ ಹದಿನೈದು ದಿನ ಅನಂತರ ಬರೆದ ನೆನಪೋಲೆಯ ಬಾಗವಾಗಿ ನನ್ನ ಹಿನ್ನೆಲೆ, ಪೂರಕ ಮಾಹಿತಿ ಹಾಗೂ ನಂತರ ಅಳಿಸಬೇಕಾದ ಕೊಂಡಿಗಳು ಪ್ರಕಟವಾಗಿ ಮುಖ್ಯ ವಿಚಾರವೇ ಮರೆಯಾಗಿದೆ. ಇದು ಹಣ್ಣಿನ ತಿರುಳನ್ನು ಬಿಸಾಡಿ ಬಿಟ್ಟು ಸಿಪ್ಪೆಯನ್ನು ಬಡಿಸಿದಂತಾಗಿದೆ.

ಈ ಸ್ವರೂಪದಲ್ಲಿ ಬರಹವೂ ಪ್ರಕಟನಾರ್ಹವೋ ? ಖಂಡಿತ ಅಲ್ಲ. ಕೊನೆಯ ವಾಕ್ಯಗಳಲ್ಲಂತೂ ಇರಬೇಕಾಗಿದ್ದ ಇಡೀ ಬರಹದ ಸಾರಾಂಶ ಕಾಣಲೇ ಇಲ್ಲ. ಬದಲಾಗಿ ವಿಚಾರ ವಿವರವಾಗಿ ಪ್ರಕಟಿಸಿದೆ ಹೋದರೆ ನಾನು ವಿವಾದಾಸ್ಪದ ಸ್ತ್ರೀ ಸ್ವಾತಂತ್ರ ವಿರೋದಿ ಎನ್ನುವ ಸಾದ್ಯತೆಗಳಿರುವ ಕಾರಣ ಬರೆಯದೆ ಬಿಟ್ಟಿದ್ದೇನೆ ಎನ್ನುವುದನ್ನು ಹಾಗೆಯೇ ಪ್ರಕಟಿಸಿದರು. ಇದೊಂದು ಬಹಳ ಬೇಜವಾಬ್ದಾರಿಯ ಲಕ್ಷಣ ಎನ್ನದೆ ವಿಧಿಯಿಲ್ಲ. ಪಕ್ಕದಲ್ಲಿರುವುದು ಪ್ರಕಟಿತ ಬರಹ ಮತ್ತು ನನ್ನ ಮೂಲ ಬರಹ ನಿಮ್ಮ ಮಗಳನ್ನು ಪದವೀದರ ಕೃಷಿಕನಿಗೆ ಕೊಡುವಿರಾ ? ವನ್ನು ಕೆಳಗಡೆ ಓದಬಹುದು.

ಒಂದು ಕಾಲದಲ್ಲಿ ಮಾದ್ಯಮಗಳಲ್ಲಿ ಬರುವ ವಿಚಾರಗಳು ನಂಬಲರ್ಹವಾಗಿತ್ತು.     ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳು ಹಾಗೂ ಟಿವಿ ಮಾದ್ಯಮಗಳು, ಮಾಲಿಕರಿಗೆ ಬೇಕಾದವರಿಗೆ ಹೆಚ್ಚು ಪ್ರಚಾರ, ಮಾಲಿಕರ ಸಹ ಒಡೆತನದಲ್ಲಿರುವ ಇತರೆ ಕಂಪೆನಿಗಳ ತಯಾರಿಕೆಗಳಿಗೆ ಒತ್ತು ನೀಡುವುದು, ಸಂಪಾದಕರಿಗೆ ಇಷ್ಟವಾದವರಿಗೆ ಅಥವಾ ಅವರ ಸಾಧನೆಗಳಿಗೆ ಹೆಚ್ಚು ಒತ್ತು ನೀಡುವುದು - ಹೀಗೆಲ್ಲ ಕಸರತ್ತು ಮಾಡಿ ಓದುಗ ದೊರೆಗೆ ಉಣಬಯಸುವುದು ತಂಗಳನ್ನ ಮಾತ್ರ. ಅಧ್ಯಯನಾ ಪ್ರವೃತ್ತಿಯ ಕೊರತೆಯೂ ಇಂದಿನ ಪತ್ರಿಕೋದ್ಯೋಗಿಗಳಲ್ಲಿ ಹೆಚ್ಚುತ್ತಿದ್ದು ಅವರ ಜ್ಞಾನದ ಮಟ್ಟ ಕುಸಿಯುತ್ತಿದೆ. ಅಸಂಬದ್ದ ಸುದ್ದಿಗಳು ನುಸುಳುವುದುಂಟು. ಹೀಗಾಗಿ ಪರ್ಯಾಯ ಪತ್ರಿಕೋದ್ಯಮ ಎನಿಸಿಕೊಳ್ಳುವ ಬ್ಲೊಗ್ ಪ್ರಪಂಚ ಪ್ರಸ್ತುತವಾಗುತ್ತದೆ.

 ಇತ್ತೀಚೆಗೆ   ಬಾರತದ ಎಲ್ಲ ಪತ್ರಿಕೆಗಳು ಕುತೂಹಲ ಕೆರಳಿಸಿರುವ ಬಾಚ್ ಬಂದನದಲ್ಲಿ ಬೆಸ್ತು ಬಿದ್ದಿರುವುದು ಪತ್ರಕರ್ತರ ಗುಣಮಟ್ಟದ ಕೊರತೆಗೆ ಕನ್ನಡಿ ಹಿಡಿದಂತೆ. ಒಮ್ಮೆ ಗೂಗ್ಲಿಂಗ್ ಮಾಡಿದರೆ ಸಾಕಿತ್ತು, ಇದರ ಒಳಗುಟ್ಟು ತಿಳಿಯುತಿತ್ತು. ಆದೊಂದು ಮಾಡುವುದನ್ನು ಬಿಟ್ಟು ಈ ವಿಚಾರವನ್ನು ಎಲ್ಲ ಪತ್ರಿಕೆಗಳೂ ತಮ್ಮದೇ ಆದ ಬದಲಾವಣೆ ಮಾಡಿ ಒಗ್ಗರಣೆ ಹಾಕಿ ಪ್ರಕಟಿಸಿದವು. ಅವೆಲ್ಲ ಸತ್ಯ ಸುದ್ದಿ, ಭಲೇ ಎನ್ನುವಂತಿತ್ತು.   ಪಕ್ಕದಲ್ಲಿರುವುದು  ಜೂನ್ 30ರ ವಿಜಯ ಕರ್ನಾಟಕದ ಛಾಯಾಪ್ರತಿ.   ಈ ಕಿತಾಪತಿಗೆ ಹಿಂದಿದ್ದ ಗೋವಾದ ಅಸಾಮಿಗಳಿಗೆ ಪತ್ರಿಕೆಗಳು ಇಷ್ಟಾನುಸಾರ ಸುದ್ದಿ ತಿರುಚುವ ವಿಚಾರಕ್ಕೆ ಗಮನ ಸೆಳೆಯುವುದೂ ಒಂದು ಉದ್ದೇಶವಾಗಿತ್ತು. ಕೊನೆಗವರು ಪ್ರಮುಖ ಆಂಗ್ಲ ಪತ್ರಿಕೆಗಳ ಮೂರ್ಖತನ ಸೂಚ್ಯಾಂಕವನ್ನೂ ಪ್ರಕಟಿಸಿದ್ದಾರೆ. ನಿಮ್ಮ ಅನುಕೂಲಕ್ಕೆ ಕೆಳಗಡೆ ಸಂಪರ್ಕ ಕೊಂಡಿ ಬರೆದಿದ್ದೇನೆ.



ಸುನಾಮಿ ಸಂಭವಿಸಿ ಒಂದೆರಡು ವಾರಗಳಲ್ಲಿ ಯಾರೊ ಒಬ್ಬ ಕಿಡಿಗೇಡಿ ಒಂದು ಕುಚೋದ್ಯ ನಡೆಸಿದ. ಅಮೇರಿಕಾದ ನಾಸಾ ಸಂಸ್ಥೆಯ ಜಾಲತಾಣದಿಂದ ಒಂದು ಚಂಡಮಾರುತದ ಉಪಗ್ರಹಚಿತ್ರವನ್ನು ಡೌನಲೋಡ್ ಮಾಡಿ ಅದನ್ನೇ ಸುನಾಮಿಯ ಉಪಗ್ರಹಚಿತ್ರ ಎಂದು ಕೆಲವರಿಗೆ ಇಮೈಲ್ ಮೂಲಕ ಕಳುಹಿಸಿದ. ಇದು ಇಮೈಲ್ ಮೂಲಕ ಜನರಿಂದ ಜನರಿಗೆ ದಾಟಿ ಕೊನೆಗೆ ಕೆಲವು ಪತ್ರಿಕೆಗಳ ಸಂಪಾದಕರುಗಳಿಗೂ ತಲುಪಿತು. ನಮ್ಮ ಪ್ರಮುಖ ಪತ್ರಿಕೆಗಳು ಇದು ಪೋಕರಿಗಳ ಕೆಲಸವೆಂದು ಅರ್ಥವಾಗದೆ ಅದನ್ನು ತನ್ನ ಮುಖಪುಟದಲ್ಲೇ ಪ್ರಕಟಿಸಿ ತಮ್ಮ ಅಜ್ನಾನವನ್ನು ಮೆರೆದವು. ಇಂತಹ ಅಭಾಸಗಳು ಹೆಚ್ಚು ಕಮ್ಮಿ ನಡೆಯುತ್ತಲೇ ಇರುತ್ತದೆ. ಸ್ವಾಮಿ ನೀವು ತಪ್ಪಿ ಬಿದ್ದಿದ್ದೀರಿ ಎಂದು ಪತ್ರಿಕೆಗಳಿಗೆ ಬರೆದರೆ ಸಂಪಾದಕರು ಅದನ್ನು ಪ್ರಕಟಿಸುವುದೇ ಇಲ್ಲ!

ನಮಗೇಕೆ ಈ ಬ್ಲೋಗ್ ಪ್ರಪಂಚ ಪ್ರಸ್ತುತ ಎನ್ನುವ ವಿಚಾರ ಮೊನ್ನೆಯಷ್ಟೆ ಒಬ್ಬರಿಗೆ ಬರೆದಿದ್ದೆ. ಸ್ವಾರ್ಥ ಹಿತಾಸಕ್ತಿಗೆ ತಮ್ಮನ್ನು ಮಾರಿಕೊಡ ಮುಖ್ಯ ಸುದ್ದಿ ವಾಹಿನಿಗೆ ಪರ್ಯಾಯವಾದ ಜನರ ಮದ್ಯೆ ಸಂಪರ್ಕಕ್ಕೆ ಮಾದ್ಯಮವೂ ಹೌದು. ಬ್ಲೋಗಿನಲ್ಲಾದರೆ ಹಂಚಲು ಅರ್ಹವಾದ ನಮ್ಮ ಅನಿಸಿಕೆಗಳು ವಿಷಯದ ಬಗ್ಗೆ ಏನನ್ನೂ ಅರಿಯದ ಉಪಸಂಪಾದಕನಿಂದ ಕಸದ ಬುಟ್ಟಿ ಸೇರುವ ಸಾದ್ಯತೆ ಇರುವುದಿಲ್ಲ. ಪತ್ರಿಕೆಗಳಂತೆ ಇಲ್ಲಿ ಜಾಗದ ಕೊರತೆ ಇಲ್ಲ. ಸಂಪಾದಕರ ಅಂಕುಶ ಕತ್ತರಿಗಳಿಲ್ಲ. ಬರೆಯಬೇಕೆನಿಸಿದ್ದನ್ನು ನೇರವಾಗಿ ಜಾಲತಾಣದಲ್ಲೇ ದಾಖಲಿಸುವುದರಿಂದ ಬರೆದು ಅದು ಪ್ರಕಟವಾಗುವ ಮಧ್ಯದ ಸಮಯ ಉಳಿತಾಯವಾಗುತ್ತದೆ. ತಿಂಗಳುಗಳು ಕಳೆದು ಅಂಗಛೇದನವಾದ ಲೇಖನ ಪ್ರಕಟವಾಗುವುದಲ್ಲ. ಬರಹಕ್ಕೆ ಸಂಬಂಧಿಸಿದಂತೆ ಛಾಯಾಚಿತ್ರಗಳಿದ್ದರೆ ಅವುಗಳನ್ನೂ ಜಾಲತಾಣಕ್ಕೆ ಸೇರಿಸಬಹುದು. ಈ ಮಾದ್ಯಮದಲ್ಲಿ ಮಾಹಿತಿನಿಯಂತ್ರಣ ಜನರ ಕೈಯಲ್ಲಿದ್ದು ಸಮಾಜಕ್ಕೆ ಹೆಚ್ಚು ಉಪಯುಕ್ತವೆನಿಸುವ ಸಾದ್ಯತೆ ಇದೆ. ಅದುದರಿಂದ ಎಲ್ಲರೂ ಪರಸ್ಪರ ಕೈಚಾಚಲು  ಪ್ರಯತ್ನಿಸೋಣ.

ಪತ್ರಕರ್ತರು ವಯೋವೃದ್ದ ಜರ್ಮನ್ ಅದಿಕಾರಿಯನ್ನು ಬಂದಿಸಿದ ರೋಚಕ ಕಥೆ ಓದಲು ಕೆಳಗಿರುವ ಕೊಂಡಿಗಳು

No comments: