Sunday, October 12, 2008

ಪವಾಡ ನಿರತ ಕ್ರೈಸ್ತ ಸಂತರೂ ದರ್ಮಗುರುಗಳೂ

ಅಲ್ಫಾನ್ಸೊಮ್ಮ ಅವರು ಅಂತೂ ಸಂತರಾಗಲಿದ್ದಾರೆ. ಸದ್ಯದಲ್ಲಿ ಲೋಕ ಸಭೆ ಚುನಾವಣೆ.  ಆಡಳಿತ  ನಡೆಸುತ್ತಿರುವ  ಕಾಂಗ್ರೇಸ್  ಪಕ್ಷದಿಂದ     ಕ್ರೈಸ್ತರ ಓಲೈಕೆ ವೇಗವರ್ದಿಸಲು    ಪ್ರಾರಂಬ.  ನಮ್ಮ ಜಾತ್ಯಾತೀತ ಸರಕಾರ ಅವರ ಹೆಸರಿನಲ್ಲೊಂದು ನಾಣ್ಯ ಬಿಡುಗಡೆ ಮಾಡುವ ಆಶ್ವಾಸನೆ. ಲೋಕಸಭೆ ಚುನಾವಣೆ ಅನಂತರದ ಬಿಡುಗಡೆ ನಿರ್ದಾರಿತ ದಿನ ಆಶ್ವಾಸನೆ   ಕೊಟ್ಟ   ಚಿದಂಬರಂ ಅದಿಕಾರದಲ್ಲಿರುವುದು ಸಂಶಯ.  ಅದೇನು  ಮುಖ್ಯ  ಅಲ್ಲ, ಬಿಡಿ. 

ಈಗ ಪತ್ರಿಕೆ ಬಿಡಿಸಿದರೆ ಅರುವತ್ತು ವರ್ಷ ಹಿಂದೆ ಸತ್ತ ಅಲ್ಫಾನ್ಸೊಮ್ಮನ ಸಂತ ಪದವಿಯದೇ ಕಥೆ. ಸಂತರೆನಿಸಬೇಕಾದರೆ ಪವಾಡ ನಡೆದಿರಬೇಕು. ಅದಕ್ಕೆ   ಪ್ರಾರ್ಥನೆ ಅನಂತರ ಅಂಗವಿಕಲ ಮಗು ನಡೆದಾಡಲು ಪ್ರಾರಂಬಿಸಿದ  ಘಟನೆ  ಮೂವತ್ತೈದು ವರ್ಷ ಹಿಂದೆ ನಡೆದಿದೆ ಎನ್ನಲಾದ ಒಂದು ಕಟ್ಟು ಕಥೆ ತಯಾರು. ಈ ಅಲ್ಫಾನ್ಸೊಮ್ಮ ಸತ್ತು ಇಪ್ಪತೈದು ವರ್ಷ ಕಳೆದ ನಂತರ ನಡೆಸಿದ ಪವಾಡ. ನಿಜಕ್ಕೂ ಅದ್ಬುತ.

ಈ   ಓಟದಲ್ಲಿ ಅಲ್ಫಾನ್ಸೊಮ್ಮ ಮೊದಲಿಗಳಾಗಿ ಇನ್ನೂ ಹಲವಾರು ಜನ  ಬಾರತದ  ಮೂಲದವರು   ಸಾಲಿನಲ್ಲಿದ್ದಾರಂತೆ.  ಪವಾಡಗಳ ಪಟ್ಟಿ ಭಲೇ ಮಜವಾಗಿದೆ. ಪಾದ್ರಿಯ ಗೋರಿಯಲ್ಲಿ ಪ್ರಾರ್ಥಿಸಿದ  ವ್ಯಕ್ತಿಯೊಬ್ಬನ   ಗಿಡ್ಡವಾಗಿದ್ದ ಎಡ ಕಾಲು ಬಲ ಕಾಲಿಗೆ ಸಮಾನವಾಗಿ ಬೆಳೆಯಿತಂತೆ. ತೆರೆಸಮ್ಮ ಒಂದು ರೋಗಿಯ ಕಾನ್ಸರ್ ನಿವಾರಿಸಿದ ಪ್ರತೀತಿ. ಆದರೆ ಒಮ್ಮೆ ತೆರೆಸಮ್ಮ ಇದ್ದ ವಿಮಾನ ಟಾಂಜಾನಿಯದಲ್ಲಿ    ಅಪಘಾತವಾಗಿ  ಸಹ ಪ್ರಯಾಣಿಕರಲ್ಲಿ   ಆರು ಜನ ಸತ್ತಿರುವುದು ಅವರು ಸಂತರಾಗುವುದಕ್ಕೆ ಬಾಧಕವಲ್ಲ.

ಮಂಗಳೂರಿನ ಹೆಸರಾಂತ ಕ್ರೈಸ್ತ ಅಸ್ಪತ್ರೆಯ ವೈದ್ಯರು ಇನ್ನು ಚಿಕಿತ್ಸೆ ನಿಶ್ಪ್ರಯೋಜಕವೆಂದು ಕಾನ್ಸರ್ ಪೀಡಿತ ಕ್ರೈಸ್ತ ಹೆಂಗಸನ್ನು ಸಾವನ್ನು ಕಾಯಲೆಂದು ಮನೆಗೆ ಕಳುಹಿಸಿದ್ದರು. ಕಾಸರಗೋಡಿನ  ತಜ್ನ   ವೈದ್ಯ ಡಾ. ಸತ್ಯಶಂಕರ್ ಅವರು ಕೊನೆ ಪ್ರಯತ್ನವೆಂದು ಗೋಮೂತ್ರ ಅರ್ಕ ಕೊಟ್ಟು ಕಾಯಿಲೆ ಗುಣಪಡಿಸಿದ ಸ್ಪಷ್ಟ ದಾಖಲೆಗಳಿವೆ. ಕ್ಷಮಿಸಿ. ಕ್ರೈಸ್ತರೇತರ ಪವಾಡ ಕ್ರೈಸ್ತ ಮತ ಒಪ್ಪುವುದಿಲ್ಲ.

ಇವೆಲ್ಲ ಬರೆಯಲು ಕಾರಣ ಇತ್ತೀಚೆಗೆ ಮಂಗಳೂರಿನ ಸುತ್ತ ಮುತ್ತ ಕೋಮು ಗಲಭೆ. ಯಾರು ಯಾರೋ ಬಂದರು.  ಬೆಂಗಳೂರಿನಿಂದ  ಬಂದರು,  ದೆಹಲಿಯಿಂದಲೂ ಬಂದರು.    ಛೇ ಛೇ ಎಂದರು. ಪತ್ರಿಕಾಗೋಷ್ಟಿ ನಡೆಸಿದರು. ಟಿವಿ ಕೆಮರಕ್ಕೂ ಮುಖ ಒಡ್ಡಿದರು. ಕ್ರಿಯೆಯನ್ನು  ಸಂಪೂರ್ಣ  ನಿರ್ಲಕ್ಷಿಸಿ ಪ್ರತಿಕ್ರಿಯೆ ಮೇಲೆ ಹೆಚ್ಚಿನ ಗಮನ ಹರಿಸಲಾಯಿತು.  ರೋಮಿನಲ್ಲೂ,   ಅಮೇರಿಕದಲ್ಲೂ  ಪ್ರತಿದ್ವನಿ  ಕೇಳಿಸಿತು. 


ತೆರೆಮರೆ ಅವಲೋಕಿಸುವುದಾದರೆ ಕ್ರೈಸ್ತ ದರ್ಮಗುರುಗಳ ನಿಷ್ಕ್ರೀಯತೆಯಿಂದಾಗಿ   ಪರೀಸ್ಥಿತಿ ಅಷ್ಟು ಗಂಬೀರವಾಯಿತು. ಅನಾವಶ್ಯಕ ಹುಲಿ ಬಂತು ಹುಲಿ ಎಂದು ಘಂಟೆ ಬಾರಿಸಿದರು.  ಜನ ಸೇರಿಸಿದ ಸಂದರ್ಬದಲ್ಲಿ  ಇವರು   ಹೊಣೆಗಾರಿಕೆಯಿಂದ ವರ್ತಿಸಲಿಲ್ಲ.   ಸಮಾಜಬಾಂದವರಿಗೆ ಸತ್ಯಸಂಗತಿ ತಿಳಿಯಪಡಿಸಿ ಜವಾಬ್ದಾರಿಯಿಂದ ವರ್ತಿಸುತ್ತಿದ್ದರೆ   ಮಂಗಳೂರಿನಲ್ಲಿ ಗಲಭೆ ನಡೆಯುತ್ತಲೇ ಇರಲಿಲ್ಲ. ಇದೊಂದು ಕ್ರೈಸ್ತ ರಾಜಕಾರಣ ಪ್ರಾಯೋಜಿತ ನಾಟಕ ಎಂದರೂ ಸೈ.

ನ್ಯೂ ಯೋರ್ಕ್ ನಲ್ಲಿ ಎರಡು ಕಟ್ಟಡಗಳಿಗೆ ವಿಮಾನ ಡಿಕ್ಕಿ ಹೊಡೆದ ನಂತರವೂ   ಅಲ್ಲಿನ  ದೊರೆ   ಬುಷ್ ಬಾಲವಾಡಿ ಮಕ್ಕಳಿಗೆ ಹೇಳುತ್ತಿದ್ದ ಕಥೆಯನ್ನು ಮುಂದುವರಿಸಿದಂತಿತ್ತು ಇವರ ವರ್ತನೆ.

ಹಿಂದೆ ನಮ್ಮ ಪುಡಿ ಕಾಂಗ್ರೇಸಿಗರು ಚುನಾವಣೆ ಗೆಲ್ಲಲು ಪ್ರತಿ ಸಲವೂ ಕೋಮು ಗಲಭೆಯಾಗಿ ಕೆಲವು ಬ್ಯಾರಿಗಳಾದರೂ ಸಾಯಬೇಕು  ಪೆಟ್ಟು   ತಿನ್ನಬೇಕು   ಎನ್ನುತ್ತಿದ್ದರು.   ಈಗ  ಅವರ  ವರ್ತನೆ   ಪೊರ್ಬುಗಳ     ಎತ್ತಿಕಟ್ಟುವಂತಿದೆ. ಈ  ರಾಜಕೀಯ   ಆಟವನ್ನು  ಕ್ರೈಸ್ತ ಸಮುದಾಯ  ಪ್ರತಿಭಟಿಸುವ ಬದಲು ಜತೆಯಲ್ಲಿ ಹೆಜ್ಜೆ ಹಾಕಿದೆ.   ಇದು  ಈ   ಪರಿಸರದಲ್ಲಿಯೇ  ವಾಸಿಸುವ   ಸಾಮಾನ್ಯ ಹಿಂದುಗಳಿಗೆ ನೋವು  ಮುಜುಗರ    ಉಂಟುಮಾಡುವುದೆಂದು ಅವರು ಅರಿಯಬೇಕಾಗಿತ್ತು.  .

ಭಾರತವು     ಕ್ರೈಸ್ತ     ಸಂತರು ನಡೆದಂತಹ ಪುಣ್ಯ ಬೂಮಿ.   ಮೇರಾ ಭಾರತ್ ಮಹಾನ್

Friday, October 10, 2008

ತೂಗುಸೇತುವೆ ಮಂಗಗಳಿಗಂತೆ

ಜಾಂಬೊ (ಕಿನ್ಯಾದ ಸ್ವಾಹಿಲಿ ಬಾಷೆಯಲ್ಲಿ ನಮಸ್ಕಾರ)

ಆಫ್ರಿಕದ ಕಿನ್ಯಾದಲ್ಲೊಂದು ಹೊಸ ಪ್ರಯೋಗ. ಮಂಗಗಳಿಗಾಗಿ ತೂಗುಸೇತುವೆ. ಹಿಂದೆ ರಾಮಾಯಣ ಕಾಲದಲ್ಲಿ ಹನುಮಂತ ಸಮುದ್ರವನ್ನು ಲಂಗಿಸಿದ್ದರೂ ಈಗಿನ ಕೋತಿಗಳಿಗೆ ಆ ಕೌಶಲ್ಯವಿಲ್ಲ.    ಕಾಡಿನಲ್ಲಿರುವ ರಸ್ತೆಗಳು ಪ್ರಾಣಿಗಳ ಸಂಚಾರಕ್ಕೊಂದು ಸವಾಲು. ಹೆಚ್ಚಿನ ಕಡೆ ಗಮನವಿಡಿ ಫಲಕಗಳು ಮಾತ್ರ ಕಂಡುಬರುತ್ತವೆ. ಪರಿಣಾಮ ಸಾವಿರಾರು ಪ್ರಾಣಿಗಳ ಸಾವು.

ತೂಗು ಸೇತುವೆ ಎಂದಾಕ್ಷಣ ನಮಗೆ ನೆನಪಾಗುವುದು ನೂರಾರು ಸೇತುವೆಗಳ ಸರದಾರ ಸುಳ್ಯದ ಗಿರೀಶ್ ಬಾರದ್ವಜರ ಹೆಸರು. ಇದು ಗಿರೀಶರ ಸೇತುವೆಯೂ ಅಲ್ಲ, ಹೊಳೆಯನ್ನು ದಾಟಲು ಹಳ್ಳಿಗರು ಉಪಯೋಗಿಸುವುದೂ ಅಲ್ಲ. ಕಿನ್ಯಾದಲ್ಲಿ ಬಹಳ ವಾಹನ ಸಂದಣಿ ಇರುವ ಹೆದ್ದಾರಿಯಲ್ಲಿ ಮಂಗಗಳ ಉಪಯೋಗಕ್ಕಾಗಿಯೇ ನಿರ್ಮಾಣವಾದ ಆಕಾಶ ಮಾರ್ಗ.

ಅಫ್ರಿಕದ ಪೂರ್ವ ಕರಾವಳಿಯಲ್ಲಿರುವ ಕಿನ್ಯಾ ದೇಶದ ಎರಡನೇಯ ಮುಖ್ಯ ಪಟ್ಟಣ ಮೊಂಬಸ. ಇದು ಪ್ರಮುಖ ಬಂದರು ಮತ್ತು ಪ್ರವಾಸಿ ತಾಣ. ಪಕ್ಕದಲ್ಲಿಯೇ ಡಿಯಾನಿ ಸಮುದ್ರ ತೀರ. ಅಲ್ಲಿ ಸಮುದ್ರ ತಟದಲ್ಲಿಯೇ ಹಲವಾರು ಹೋಟೇಲುಗಳಿದ್ದು ಪ್ರವಾಸೋದ್ಯಮ ಪ್ರಮುಖ ವ್ಯವಹಾರ. ಇಪ್ಪತ್ತ ನಾಲ್ಕು  ವರ್ಷ ಹಿಂದೆ     ವಿದ್ಯುತ್ ಗುತ್ತಿಗೆದಾರರ ಜತೆಗೆ ಕೆಲಸ ಮಾಡುತ್ತಿದ್ದ  ಗೆಳೆಯ ಶೇಖರ್ ಜತೆ ನಾನು ಈ ಪ್ರದೇಶಕ್ಕೆ ಬೇಟಿ ಇತ್ತಿದ್ದೆ.


ಕಿನ್ಯಾದ ಅತ್ಯಂತ ಸುಂದರ ಅಂಗೋಲನ್ ಕೊಲೊಬಸ್ ಮಂಗಗಳು ಈ ಕಾಡಿನಲ್ಲಿ ಮಾತ್ರ ಕಾಣ ಸಿಗುವಂತದ್ದು. ಈಗ ಇಲ್ಲಿ ಬರೇ ೩೦೦ ಮಂಗಗಳು ಉಳಿದುಕೊಂಡಿವೆ.    ಈ  ಅವನತಿಯ   ಅಂಚಿನಲ್ಲಿರುವ   ಮಂಗಗಳು ರಸ್ತೆ ದಾಟುವಾಗ ವಾಹನದಡಿಯಲ್ಲಿ ಸಿಲುಕಿ ಸಾಯುವುದು   ಅಲ್ಲಿನವರಿಗೆ ನುಂಗಲಾರದ ತುತ್ತು.   ಜನರಿಗೆ ಇವುಗಳ ಬಗೆಗೆ ಅರಿವು ಮೂಡಿಸುವುದು, ಅಲ್ಲಲ್ಲಿ ರಸ್ತೆ ಫಲಕ ಅಳವಡಿಕೆ – ಹೀಗೆ ಹಲವಾರು ಪ್ರಯೋಗಗಳ ನಂತರ ತಯಾರಾಯಿತು ಈ ಆಕಾಶ ಸೇತುವೆ ಯೋಜನೆ.

ಅಲ್ಲಿ ಮೊರು ಪ್ರಬೇದದ ಮಂಗಗಳು ಕಾಣಸಿಗುತ್ತವಂತೆ. ನಾಚಿಕೆ ಹಾಗೂ ಬೆದರು ಸ್ವಾಬಾವದ ಈ ಅಂಗೋಲನ್ ಕೊಲಬಸ್ ಮಂಗಗಳು ಮೊದಲು ಈ ಸೇತುವೆಗಳಿಂದ ದೂರವಿದ್ದವು. ಇತರ ಎರಡು ಜಾತಿಗಳ ಮಂಗಗಳು ಮೊದಲು ಕುತೂಹಲ ಮತ್ತು ಅಗತ್ಯಕ್ಕೆ ಈ ಸೇತುವೆ ಉಪಯೋಗಿಸಿದವು. ಕ್ರಮೇಣ ಇತರ ಮಂಗಗಳ ಮೇಲ್ಪಂಕ್ತಿ ಅನುಸರಿಸಿ ಈ ಆಕಾಶ ಸೇತುವೆಯ ಉಪಯೋಗಕ್ಕೆ ಕೊಲಬಸ್ ಮಂಗಗಳೂ ಸುರುಮಾಡಿದವು. ಈಗ ವಾಹನದಡಿಗೆ ಸಿಕ್ಕಿ ಸಾಯುವ ಮಂಗಗಳ ಸಂಖ್ಯೆ ನಗಣ್ಯ.    ಸುಮಾರು ಇಪ್ಪತ್ತು ಸಾವಿರ ರೂಪಾಯಿ   ಖರ್ಚಿನಲ್ಲಿ ಒಂದೇ ದಿನದಲ್ಲಿ ಸೇತುವೆ ತಯಾರು. ಈಗ ಅಲ್ಲಿ  ಇಂತಹ   ಇಪ್ಪತ್ತ ಮೂರು ಸೇತುವೆಗಳಿವೆಯಂತೆ.

ಎಲ್ಲ ಮಂಗಗಳೂ ಈ ಮಾದರಿ ಉಪಯೋಗಿಸುವುದಿಲ್ಲವಂತೆ. ಪಕ್ಕದ ದ್ವೀಪ ಜಾಂಜಿಬಾರಿನಲ್ಲಿ ಈ ಪ್ರಯೋಗ ಸಂಪೂರ್ಣ ವಿಫಲ. ಅಲ್ಲಿನ ಬಿನ್ನ ಉಪಜಾತಿಯ ಕೊಲೊಬಸ್ ಮಂಗಗಳು ಆಕಾಶ ಸೇತುವೆಗಳ ಉಪಯೋಗ ಕಲಿಯಲೇ ಇಲ್ಲ.  ಮಂಗಗಳಲ್ಲೂ ಪೆದ್ದು ಜಾತಿಯವು ಇದೆ ಎಂದಾಯಿತು.

Thursday, October 02, 2008

ಗೊಬ್ಬರದ ರಾಶಿಯಲ್ಲಿ ಕಾರ್ಯ ನಿರತ ಹಂದಿಗಳು

ಅಮೇರಿಕದಲ್ಲಿರುವ ಗೆಳೆಯ ಎರಿಕ್ ಬೇಸಾಯಕ್ಕಾಗಿ ಕುದುರೆಗಳ ಸಾಕುವ ಸಾವಯುವ ರೈತ. ಈ ಕುದುರೆ ಗೊಬ್ಬರದ ಕಂಪೋಸ್ಟ್ ರಾಶಿಯನ್ನು ಅಗಾಗ ತಿರುವಿ ಹಾಕುವ ಕೆಲಸವನ್ನು ಎರಡು ಹಂದಿಗಳಿಗೆ ವಹಿಸಿಕೊಟ್ಟಿದ್ದಾನೆ.  ಈ  ಕೆಲಸವನ್ನು ಅಲ್ಲಿನ ರೈತರು  ಸಾಮಾನ್ಯವಾಗಿ    ಇಂತಹ ಯಂತ್ರ ಮೂಲಕ ಮಾಡುತ್ತಾರೆ.


ಎರಿಕ್ ನಮ್ಮ ಸಬ್ಬಲಿನಂತಹ ಚೂಪಾದ ಉಪಕರಣದಲ್ಲಿ ಗೊಬ್ಬರದ ರಾಶಿಯಲ್ಲಿ ತೂತು ಮಾಡಿ ಅದರಲ್ಲಿ ಜೋಳದ ಕಾಳುಗಳ ಸುರಿಯುತ್ತಾನೆ. ಈ ಕಾಳುಗಳ ತಿನ್ನುವ ಆಸೆಯಲ್ಲಿ ಹಂದಿಗಳು ಇಡೀ ರಾಶಿಯನ್ನು ಅಡಿಮೇಲು ಮಾಡುತ್ತವೆ. ಈ ಮಾದರಿಯನ್ನು   ಸಲಾಟಿನ್ ಎಂಬ ರೈತನ ಅವಿಷ್ಕಾರ   ಎನ್ನುತ್ತಿದ್ದ ಎರಿಕ್.  ಕೆಲವು ಬಾರಿ    ನಾಲ್ಕು  ಅಡಿ  ಆಳದ  ವರೆಗೆ  ಅಗೆಯುವ  ಕಾರ್ಯನಿರತ  ಹಂದಿಗಳ  ಬಾಲ   ಮಾತ್ರ  ಗೋಚರಿಸುತ್ತದೆ   ಎನ್ನುವರು  ಸಲಾಟಿನ್. 

ನಾನೂ ಹಲವು ಸಲ ಹಂದಿ ಆವರಣ ಹೊಕ್ಕು ಈ ಜೋಳ ಕಾಳನ್ನು ಅಡಗಿಸುವ ಕೆಲಸ ಮಾಡಿದ್ದೇನೆ. ಹಂದಿಗಳ ವರ್ತನೆ ಹೆಚ್ಚೇನು ಅರಿಯದ ನನಗೆ ಅವು ನನ್ನಿಂದಲೇ ಕಸಿದುಕೊಳ್ಳುವುದೋ ಎನ್ನುವ ಸಂಶಯ. ನಾವು ತೂತು ಮಾಡಿ ಅಡಗಿಸಿ ಹೊರಬರುವ ವರೆಗೆ ತಾಳ್ಮೆಯಿಂದ ಕಾಯುವ ಹಂದಿಗಳು ನಂತರ ರಾಶಿ ಅಡಿಮೇಲು ಮಾಡುವ ಕೆಲಸಕ್ಕೆ ಸುರುಮಾಡುತ್ತವೆ.




ಅಲ್ಲಿ ತೀರಾ ಬಡವರಿಗೆಂದು ಸೂಪ್ ಕಿಚನ್ ಎನ್ನುವ ದರ್ಮಾರ್ಥ ಊಟ ಮತ್ತು ರಾತ್ರಿ ಉಳಿಯುವ ವ್ಯವಸ್ಥೆ ಚರ್ಚು ಮತ್ತು ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತವೆ. ಹಲವು ತಿಂಗಳು ಸಾಕಿದ ಈ ಹಂದಿಗಳನ್ನು ಎರಿಕ್ ಅವರಿಗೆ ದಾನ ಮಾಡುತ್ತಾನೆ. ಇವರಿಗೆ ಹಂದಿ ಸಾಕಣೆಯಲ್ಲಿ ಕೈಗೊಡಿಸುವ ಅಂಗಡಿಯೊಂದು ಹಂದಿಗಳಿಗೆ ಹಾಕಲೆಂದು ವಾಯಿದೆ ದಾಟಿದ ಹಾಲು ಇತ್ಯಾದಿಯನ್ನು ದರ್ಮಾರ್ಥವಾಗಿ ಕೊಡುತ್ತದೆ.

ಹಂದಿ ಸಾಕಣೆಯಲ್ಲಿ ಸಿಮೆಂಟು ನೆಲದ ಮೇಲೆ ಮತ್ತು ಗೊಬ್ಬರದ ಮೇಲೆ ಎರಡು ವಿದಾನಗಳನ್ನೂ ಅನುಸರಿಸುವವರಿದ್ದಾರೆ. ಯುರೋಪಿನ ಫಾರ್ಮು ಒಂದರಲ್ಲಿ ಸಿಕ್ಕ ಗೆಳೆಯ ಹೇಳಿದ ಮಾತು pig is the only animal that is born toilet trained ಕೇಳಿ ನನಗೆ   ಮೊದಲು   ಆಶ್ಚರ್ಯವಾಗಿತ್ತು.   ಬುದ್ದಿಯೂ ಚುರುಕು. ನಾವು ಗಲೀಜು ಪ್ರಾಣಿ ಎನ್ನುವ   ಹಂದಿ   ಸಿಮೆಂಟು ನೆಲದ ಮೇಲೆ ಸಾಕಿದರೆ ಆವರಣದ ಒಂದು ಮೂಲೆಯಲ್ಲಿ ಮಾತ್ರ ಗಲೀಜು ಮಾಡುತ್ತದೆ. ಸಾಕಣೆ ಸುಲಭ  ಎನ್ನುತ್ತಾರೆ  ಅನುಭವಿಗಳು.

ಈ ಸಲದ ಅಡಿಕೆಪತ್ರಿಕೆಯಲ್ಲಿ ಹಂದಿ ಹಾಗೂ ದನಗಳ ಸಾಕುವ ರೈತರ    ಬಗೆಗೆ ಲೇಖನ ಕಂಡಾಗ ಇವೆಲ್ಲ ನೆನಪಾಯಿತು. ಆದರೆ ಈಗ ಎಲ್ಲರೂ ದ್ರವರೂಪ  ಗೊಬ್ಬರ ತೋಟಕ್ಕೆ ಹರಿಸುವ ಕಾರಣ    ಈ ಮಾದರಿ ನಮಗೆ ಪ್ರಾಯೋಗಿಕವಲ್ಲ.

Wednesday, October 01, 2008

ನೀರ ನೆಮ್ಮದಿ ಕೊಡುವ ಮಳೆನೀರಿನ ಬ್ಯಾಂಕು

ಕುಡಿಯುವ ನೀರಿಗಾಗಿ ಒತ್ತಡ ಹಾಗೂ ಮಳೆ ನೀರು ಕೊಯಿಲಿನ ಆಸಕ್ತಿ ಎರಡೂ ಸೇರಿ ನಮ್ಮಲ್ಲೊಂದು ಮಳೆ ನೀರ ಶೇಖರಣೆ ಟಾಂಕ್ ಮೂರು ವರ್ಷ ಹಿಂದೆ ನಿರ್ಮಾಣವಾಯಿತು.


ನಮ್ಮಲ್ಲಿ ಮಳೆರಹಿತ ದಿನಗಳು ೨೨೦ ಮೀರುವುದಿಲ್ಲ. ನಮ್ಮ   ಕರಾವಳಿ  ಪ್ರದೇಶದ  ಒಂದು ಸಾಮಾನ್ಯ ಕುಟುಂಬಕ್ಕೆ ಹತ್ತರಿಂದ ಹದಿನೈದು ಸಾವಿರ ಲೀಟರ್ ನೀರಿನ ಟಾಂಕ್ ದಾರಾಳ ಸಾಕು. ಆದರೆ ಅಂದಿನ ಪರಿಸ್ಥಿತಿ ನಮ್ಮನ್ನು ನಲುವತ್ತು ಸಾವಿರ ಲೀಟರ್ ದಾಸ್ತಾನಿನ ಟಾಂಕಿಗೆ ಒತ್ತಡ ಹಾಕಿತು.


ಸೌರ  ವಿದ್ಯುತ್  ಚಾಲನೆಯನ್ನು  ಅಳವಿಡಿಸಿರುವ  ನಮ್ಮ   ವ್ಯವಸ್ಥೆಯಿಂದಾಗಿ ಮನೆ  ಬಳಕೆ  ನೀರಿನ  ಮತ್ತು  ಬೆಳಕಿನ  ಮಟ್ಟಿಗೆ  ನಾವು  ಸಂಪೂರ್ಣ  ಸ್ವಾವಲಂಬಿಗಳೆಂದರೂ  ಸರಿಯೇ.    ಈ ನಮ್ಮ ಅನುಭವಗಳ ಅಡಿಕೆ ಪತ್ರಿಕೆ ಅಕ್ಟೋಬರ್ ೨೦೦೮ ಸಂಚಿಕೆಯಲ್ಲಿ ಪ್ರಕಟಿಸಿದ್ದು   ಅದನ್ನು  ನಿಮ್ಮ    ಮುಂದಿಡುತ್ತಿದ್ದೇನೆ.