Showing posts with label consumer. Show all posts
Showing posts with label consumer. Show all posts

Wednesday, March 30, 2011

ತ್ರಿಚಕ್ರ ಪ್ರಯಾಣಕ್ಕೆ ಗರೀಷ್ಟ ಎರಡು ಪಾಲು ಸಮಯ

ವಾರದ  ಹಿಂದೆ    ಕಥೆಗಾರ ವಸುದೇಂದ್ರರು  ನಮ್ಮಲ್ಲಿಗೆ ಬಂದಿದ್ದರು.  ಅವರೊಂದಿಗೆ ಮಾತನಾಡುತ್ತಾ  ತುಳಿಯುವುದರೊಂದಿಗೆ  ಈ  ಸಹಾಯಕ  ನೂಕುಬಲದ ಉಪಯುಕ್ತತೆ ವಿವರಿಸಿದೆ.  ಉದಾಹರಣೆಯಾಗಿ   ನಾನು  ಯಾವುದೇ  ಜಾಗದಿಂದ  ಪಟ್ಟಣದೊಳಗಿನ    ಇನ್ಯಾವುದೇ   ಜಾಗಕ್ಕೆ  ಕಾರು  ಅಥವಾ ಮೊಟರ್ ಸೈಕಲುಗಳಿಗೆ ಬೇಕಾಗುವ  ಸಮಯದ ಒಂದೂವರೆಯಿಂದ ಎರಡು ಪಾಲಿನಷ್ಟು  ಹೊತ್ತಿನಲ್ಲಿ  ನನ್ನ ಟ್ರೈಕಿನಲ್ಲಿ   ಹೋಗಲು ಸಾದ್ಯ  ಎಂದು  ಹೇಳಿದ್ದೆ.  ಅದರೆ  ಹೋಲಿಕೆ  ಹೆಚ್ಚಿನ ಪಾಲು  ಅಗಲವಾದ  ಎಂಬತ್ತು ಕಿಮಿ  ಸಾದ್ಯವಿರುವ   ಹೆದ್ದಾರಿಯಾದರೆ  ಮಾತ್ರ  ಅಸಂಬವ ಎಂದೂ  ಹೇಳಿದ್ದೆ.

ಅವರನ್ನು  ನನ್ನ  ಅಪ್ತ  ಗೆಳೆಯ ನಾರಾಯಣ  ಮೂರ್ತಿ  ಹದಿನೈದುವರೆ ಕಿಮಿ  ದೂರದ  ಮರಕಿಣಿಯಿಂದ  ಕರೆ ತಂದಿದ್ದರು.   ನಾರಾಯಣ  ಮೂರ್ತಿಗೆ  ಈ   ದೂರ ಕ್ರಮಿಸಲು ಸುಮಾರು  ಇಪ್ಪತೈದು ಮೂವತ್ತು ನಿಮಿಷ ಬೇಕಾಗುವುದಂತೆ.  ಮೊನ್ನೆ  ಟ್ರೈಕಿನಲ್ಲಿ ನಾನು  ನಲುವತ್ತೊಂಬತ್ತು ನಿಮಿಷಗಳಲ್ಲಿ  ನಮ್ಮ ಮನೆಯಿಂದ  ಅಲ್ಲಿಗೆ  ತಲಪಿದ್ದೆ.  ಉದ್ದಕ್ಕೂ ರಸ್ತೆ   ವಾಹನಗಳ  ಓಡಾಟಕ್ಕೆ  ಪೂರಕವಾಗಿತ್ತು.    ಹೊಂಡ ಗುಂಡಿಗಳ  ಮುಚ್ಚಿದರೂ  ಅದರ ಮೇಲೆ ಮಹಾಕಾಯ  ಹೊರಳದ  ಕಾರಣ   ಅಲ್ಲೆಲ್ಲ   ರಸ್ತೆ   ನನ್ನ  ತ್ರಿ ಚಕ್ರವನ್ನು ಎತ್ತೆತ್ತಿ  ಬಿಸಾಕುತಿತ್ತು.  ಆದರೂ  ಸುಮಾರು  ಹದಿನೆಂಟುವರೆ  ಕಿಮಿ  ವೇಗ   ಸಾದ್ಯವಾಗಿತ್ತು.  ಅರುವತ್ತು ಎಪ್ಪತ್ತು ಕಿಮಿ ವೇಗ ನಾರಾಯಣ ಮೂರ್ತಿ ಆಗಾಗ ಸಾದಿಸಿದರೂ  ಆ ಪ್ರಕಾರ   ದೂರ  ಕ್ರಮಿಸಿರುವುದಿಲ್ಲ. ಸಮಯ ಉಳಿಸಿರುವುದೂ  ಇಲ್ಲ.    ಹಾಗಾಗಿ  ಈ  ವಾಹನಗಳ      ವೇಗವೆಲ್ಲ   ನಮ್ಮ  ಮಂಕು ಮಾಡುತ್ತೆ.     


 ಈ  ಬಗೆಗೆ  ಇನ್ನೊಂದು  ಉದಾಹರಣೆ.    ಕಳೆದ  ಶುಕ್ರವಾರ ಮಂಗಳೂರಿಗೆ  ಹೋಗಿದ್ದೆ.  ಬಿ ಸಿ ರೋಡಿನಲ್ಲಿ  ಮೇಲುಸೇತುವೆ  [ಮೇಲ್ಕಾಣುವ  ಚಿತ್ರ ಸೇತುವೆ ಮೇಲಿನದು]  ಕೆಲಸ  ಅಪೂರ್ಣವಾದರೂ  ಹೋಗಲು  ಸಾದ್ಯವಿರುವ   ಕಾರಣ  ಕೆಟ್ಟ ರಸ್ತೆ ಹಾಗೂ  ವಾಹನ ದಟ್ಟನೆಯ  ಕಿರಿಕಿರಿಯಿಲ್ಲದೆ    ಅರಾಮವಾಗಿ  ದಾಟಲು  ಸಾದ್ಯವಾಯಿತು.  ವಾಪಾಸು  ಹೊರಡುವಾಗ  ನನ್ನ ಜಿಪಿಎಸ್  ಚಾಲನೆ  ಮಾಡಲು  ಮರೆತ  ಕಾರಣ  ಸುಮಾರು ಹತ್ತು ಕಿಮಿ  ಅದರಲ್ಲಿ  ದಾಖಲಾಗಲಿಲ್ಲ.  ಅಂತೂ    ದಿನದಲ್ಲಿ  ದಾಖಲಾದ  ಎಪ್ಪತ್ತ ಮೂರು ಕಿಮಿ  ಮೂರು ಘಂಟೆ ನಲುವತ್ತು  ನಿಮಿಷಗಳಲ್ಲಿ  ಕ್ರಮಿಸಿ   ಸರಾಸರಿ  ಇಪ್ಪತ್ತು ಕಿಮಿ  ಚಲಿಸಿದ್ದೆ.  ನನ್ನ ಗರೀಷ್ಟ  ವೇಗ   ಇಪ್ಪತ್ತೈದು ಕಿಮಿ   ಆದರೂ  ಒಟ್ಟಾರೆ   ಚಾಲನೆ  ಸಮಯ   ಎಂಬತ್ತರಲ್ಲಿ  ಸಾಗುವ   ದುಬಾರಿ    ಕಾರುಗಳ    ಎರಡ  ಪಾಲು  ಸಮಯವಷ್ಟೇ  ಬೇಕಾಗುತ್ತದೆ.   ನನ್ನದು  ತ್ರಿಚಕ್ರದ ಬದಲಿಗೆ   ದ್ವಿಚಕ್ರವಾದರೆ  ಇನ್ನೂ  ಕಡಿಮೆ ಸಮಯ ಸಾಕಾಗಬಹುದು.   ಮುಂದುವರಿದ  ದೇಶಗಳ  ಸನ್ನಿವೇಶ    ಅವಲೋಕಿಸಿದರೆ   ಸೈಕಲು  ಕಾರನ್ನು  ಸೋಲಿಸುವ  ಅಸಂಖ್ಯ  ಉದಾಹರಣೆಗಳು ದೊರಕುತ್ತದೆ.  ಅಲ್ಲಿ ನಮ್ಮಿಂದ ಹೆಚ್ಚು ವಾಹನ   ದಟ್ಟಣೆ    ಇರುವುದೂ  ಒಂದು ಕಾರಣ  ಇರಬಹುದು.  

Thursday, March 17, 2011

ಎಂಡೊ ತಯಾರಕರ ದೇಶ ಸೇವೆ ಮುಖವಾಡ

ಎಂಡೋಸಲ್ಫನ್   ತಯಾರಕರ  ಹೊಸ ವರಸೆ   ಗಾಬರಿಯಾಗುತ್ತದೆ.  ಅವರೀಗ  ಯುರೋಪಿನ   ವಿಷ ತಯಾರಕರು  ಎಂಡೋಸಲ್ಫನ್  ಬಹಿಷ್ಕಾರ  ಚಳುವಳಿಯ ಹಿಂದಿದ್ದಾರೆ ಎಂದು  ಆಪಾದಿಸುತ್ತಿದ್ದಾರೆ.   ಬಾರತದ  ತಯಾರಕರು   ಜೀವ  ಉಳಿಸುವ  ಔಷದಿಯಲ್ಲಿ  ಮೂಲವಸ್ತುಗಳ  ಹೆಸರಿನಲ್ಲಿ ತಯಾರಿಸಿ  ಕಡಿಮೆ  ಬೆಲೆಯಲ್ಲಿ ಮಾರಿದ್ದು  ಹಾಗೂ   ಸಮಾಜ    ಇವರಿಗೆ  ಬೆಂಬಲಿಸಿದ್ದು   ಈಗ   ಇತಿಹಾಸ.     ಈಗ  ಈ  ಕೀಟನಾಶಕ ವನ್ನೂ     generic ಅನ್ನೋ  ಮುಖವಾಡದ    ಹವಣಿಕೆಯಲ್ಲಿದ್ದಾರೆ.   ನಾವು ಕಡಿಮೆ  ಬೆಲೆಯಲ್ಲಿ ಎಂಡೋಸಲ್ಫನ್   ತಯಾರು ಮಾಡಿ ಮಾರುವುದು  ಬಾರತದ  ರೈತರ  ಉದ್ದಾರ  ಮಾಡುವುದನ್ನು    ಯುರೊಪಿಯನರು    ಸಹಿಸುತ್ತಿಲ್ಲ.  ನಾವು    ಬಾಗಿಲು  ಹಾಕಿದರೆ  ಯುರೋಪಿನ  ತಯಾರಕರು  ಇದಕ್ಕಿಂತ  ಹಲವು ಪಾಲು ದುಬಾರಿಯ  ಮಾಲುಗಳನ್ನು  ಬಾರತದ  ರೈತರು  ಅವಲಂಬಿಸಬೇಕಾಗುತ್ತದೆ. 

ನಾವಂತೂ  ಐವತ್ತೈದು ವರ್ಷಗಳಿಂದ  ಬಳಸುತ್ತಿರುವ  ಈ  ಕೀಟನಾಶಕವನ್ನು    ತಿಂದರೆ  ಈಗಲೂ  ಕೀಟಗಳು  ಸಾಯುತ್ತವೆ  ಎನ್ನುವ  ಭ್ರಮೆಯನ್ನು  ಉಳಿಸಿಕೊಂಡಿದ್ದೇವೆ.     ನಾನು  ವಾಸಿಸುವ  ಜಾಗದಿಂದ  ಕೇರಳದ   ಪಡ್ರೆ ಮತ್ತು  ಕರ್ನಾಟಕದ  ಕೊಕ್ಕಡ  ಎರಡೂ  ಮೂವತ್ತು ಕಿಮಿ ಒಳಗಿದೆ.  ಹಾಗಾಗಿ  ಇವರ ಮಾತಿಗೆ ಮರುಳಾಗುವುದು  ಕಷ್ಟವಾದರೂ  ಇದರಲ್ಲಿ ನಿಜ ಇರಬಹುದೋ  ಗೊಂದಲ  ಉಂಟುಮಾಡುತ್ತದೆ.  ಹಾಗೆ  ಈ  ಎಂಡೊ ವಿರೋದಿಗಳು ಕೊಕ್ಕಡ  ಮತ್ತು   ಪಡ್ರೆ ಹಾಗೂ  ಸುತ್ತಲಿನ  ಗ್ರಾಮಸ್ಥರೋ  ಯುರೋಪಿನ   ಗುಮ್ಮನೋ ??   ದೂರ  ಇರುವವರಿಗೆ   ಆಫ್ರಿಕದಲ್ಲಿ  ಎಂಬಂತೆ  ಇದೊಂದು  ಸುದ್ದಿಯಷ್ಟೇ

 ಈ  ದಿಕ್ಕು ತಪ್ಪಿಸುವ   ಆಂದೋಲನ  ಕೆಲವೊಮ್ಮೆ   ಪ್ರಯೋಜನ  ಕಾಣುತ್ತದೆ.  ಕೆಲವೊಮ್ಮೆ   ಪರಿಚಿತರೊಂದಿಗೆ   ಮಾತುಕತೆಯೇ  ನಮ್ಮ  ಆಲೋಚನಾಲಹರಿ   ಕೆಡಿಸುತ್ತದೆ.    ಕಳೆದ ಇಪ್ಪತ್ತೈದು    ವರ್ಷಗಳಿಂದ  ಸಾವಯುವ  ಜಪಿಸುತ್ತಿರುವ  ನಾನು ಒಂದು  ವರ್ಷ   ಕಳೆನಾಶಕ    ಉಪಯೋಗಿದ್ದೇನೆ.  ಆಗ   ಕೆಲಸದವರ  ಕೊರತೆಯ  ಜತೆಗೆ  ಅಡಿಕೆ  ತೋಟದ  ಕಳೆಯ   ಅಡಿಯಲ್ಲಿ ಅಡಗಿ ಕುಳಿತಿತ್ತು.    ಕೂಡಲೇ  ಕಳೆ  ತೆಗೆಯುವುದು  ಅನಿವಾರ್ಯವಾಗಿತ್ತು. 
  
ಹಲವು ವರ್ಷ  ಹಿಂದೆ    ಕೃಷಿಕರೊಬ್ಬರಿಗೆ  ಒಂದು ಹಳೆಯ  ಸಾಮಾನು ಒಂದರ ಮಾರಿದ್ದೆ.   ಕೃಷಿ  ಬಗೆಗೆ  ಮಾತಾಡುವಾಗ  ಶೆಟ್ರು   ಕಳೆನಾಶಕ  ಒಂದರ  ಗುಣಗಾನ  ಮಾಡಿದರು.  ವಿದ್ಯಾವಂತರಾದ  ಅವರು ಮೊದಲು ಮಹಾಪಟ್ಟಣದಲ್ಲಿ  ಉನ್ನತ ಹುದ್ದೆಯಲ್ಲಿದ್ದರು.    ಈ  ಹೊಸತಲೆಮಾರಿನ  ಕಳೆನಾಶಕದಲ್ಲಿ  ಬೇರೆ ಯಾವುದೇ  ಜೀವಿಗಳಿಗೆ  ತೊಂದರೆಯಿಲ್ಲವೆಂದು ಒತ್ತಿ ಹೇಳಿದರು.   ಅದನ್ನು ತಯಾರಿಸುವ  ಎಕ್ಸಲ್     ಕಂಪೇನಿಯೊಂದು    ಪಟ್ಟಣ  ಕೊಳಚೆಗೆ  ಹಾಕಿದರೆ   ಅದನ್ನು  ಬೇಗನೆ  ಕೊಳೆಯುವಂತೆ  ಮಾಡುವ  ವೇಗವರ್ದಕ  ತಯಾರಿಸಿದ್ದೇವೆ  ಎಂದು  ಹೇಳಿಕೊಳ್ಳುತ್ತಿತ್ತು.    ಈ  ಎಕ್ಸಲ್ ಕಂಪೇನಿ  ಎಂಡೊಸಲ್ಫನ್  ಸಹಾ  ತಯಾರಿಸುತ್ತದೆ.     ಹೀಗೆ  ಕಂಪೆನಿ   ಮತ್ತು  ಸಾಮುಗ್ರಿ  ಎರಡೂ  ಸೇರಿ   ನನ್ನ  ವಿವೇಚನೆಯಲ್ಲಿ   ಕಳೆನಾಶಕದ  ಬಗೆಗೆ   ಒಪ್ಪಿಗೆ  ಗಿಟ್ಟಿಸಿಕೊಂಡವು.  ನನ್ನಂತಹ  ವಿದ್ಯೆ  ಇದ್ದು  ಈ  ಕೃಷಿವ್ಯಾಪಾರಿ ಸಂಸ್ಥೆ  ಕುಯುಕ್ತಿ ಅರಿತವನೇ   ಹೊಂಡಕ್ಕೆ  ಬಿದ್ದರೆ,  ಅಮಾಯಕ  ಹಳ್ಳಿಗರು  ವರ್ಷಾನುಗಟ್ಟಲೆ   ಸುಲಭವಾಗಿ  ಮೋಸ ಹೊಂದುತ್ತಾರೆ.  ನಮ್ಮ  ವಿಜ್ನಾನಿಗಳು  ಅದಿಕಾರಿಗಳು  ರಾಜಕಾರಣಿಗಳು      ಈ  ಕಂಪೇನಿಗಳ  ಬೆಂಬಲಕ್ಕೆ  ನಿಲ್ಲುತ್ತಾರೆ.      

Sunday, March 13, 2011

ದುರ್ದಿನ ಕರೆ ಕೊಟ್ಟ ಡಾ ದೇವಿ ಶೆಟ್ರು

ಕಳೆದ  ವಾರ  ಬೆಂಗಳೂರಿನ ಆಸ್ಪತ್ರೆಯೊಂದರ  ಯಜಮಾನ   ಡಾ ದೇವಿ   ಶೆಟ್ಟಿ ಅವರು ಬಹಿರಂಗ ಪತ್ರ ಬರೆದರು.   ಆತ್ಮೀಯ  ಸಹಪಾಠಿ  ಗೆಳೆಯ ವೆಂಕಟೇಶ್  ಅವರು ಈ ಪತ್ರದ ಪ್ರತಿಯನ್ನು ನನಗೆ ರವಾನಿಸಿದರು.   ಪತ್ರದಲ್ಲಿ  ಹೃದಯವಂತ  ವೈದ್ಯರು    ಸರಕಾರಿ ತೇರಿಗೆ ಹೆಚ್ಚು ಮಾಡಿದರೆ   ತಮ್ಮಲ್ಲಿ ಬಂದ  ರೋಗಿಗಳಿಂದ  ಹೆಚ್ಚು ಹಣ   ಪಡಕೊಳ್ಳಬೇಕಾಗುತ್ತದೆ  ಎಂದು ಅಲವತ್ತು ಪಟ್ಟುಕೊಂಡರು.  ಹಾಗೆ  ಮಾರ್ಚು ೧೨ ರಂದು ರಾಜ್ ಭವನ್  ಚಲೋ  ಕರೆ ಕೊಟ್ಟರು.   ಆ  ದಿನವನ್ನು    ದುರವಸ್ಥೆ ದಿನ /ಬೇಗುದಿ ದಿನವೆಂದು  ಆಚರಿಸಲು  ಹೇಳಿದರು.      ರೋಗಿಗಳ ಬಗೆಗಿನ ಕಾಳಜಿ ಕಂಡು  ನನಗೆ ಕುಶಿಯಾಯಿತು  ಮತ್ತು ಮುನ್ನೂರ  ಐವತ್ತು ಕಿಮಿ ದೂರವಲ್ಲವಾದರೆ  ಖಂಡಿತ ಪಾಲ್ಗೊಳ್ಳುವ   ಅವರ  ಕೈ  ಬಲ ಪಡಿಸುವ   ಹುಮ್ಮಸ್ಸು  ಬಂತು.   ಡಾ. ಶೆಟ್ರು   ಪತ್ರಿಕೆಗಳಿಗೂ  ಈ ಪತ್ರ ರವಾನಿಸಿ  ಓದುಗರ  ಪತ್ರಗಳು  ಅಂಕಣದಲ್ಲಿ   ಪ್ರಕಟವಾಗುವಂತೆ ನೋಡಿಕೊಂಡರು.    ಆಮೇಲೆ  ?


 ಮರುದಿನ   ಅವರು ದೆಹಲಿಯಲ್ಲಿ    ವಿತ್ತ ಮಂತ್ರಿ ಪ್ರಣಬ್ ಮುಖರ್ಜಿಯನ್ನು ಬೇಟಿಯಾದದ್ದು   ಪತ್ರಿಕೆಗಳು  ಸುದ್ದಿಮಾಡಿವೆ.  ಆದರೆ   ಮಾತುಕತೆಯ  ಪರಿಣಾಮ ಮಾತ್ರ  ಹೊರಹಾಕಿಲ್ಲ.  ಇಂದು ಪತ್ರಿಕೆಗಳಲ್ಲಿ  ನಿನ್ನೆ ನಡೆದಿರಬಹುದಾದ   ಈ ರಾಜ್ ಭವನ್  ಚಲೋ ಕಾರ್ಯಕ್ರಮ  ಏನಾಯಿತು  ಎಂದು ಹುಡುಕಲು  ಏನೂ  ಸುಳಿವು ದೊರಕುತ್ತಿಲ್ಲ.  ಆಸ್ಪತ್ರೆ ಜಾಲತಾಣದ  ಮೊದಲ ಪುಟದಲ್ಲಿದ್ದ    ಅವರ   ಬಹಿರಂಗ ಪತ್ರವೂ    ಈಗ ನಾಪತ್ತೆ.    ಅಂತೂ  ಪ್ರತಿಭಟನೆ  ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು   ಹೊರಡದೆ ಇದ್ದುದು  ಒಳ್ಳೆದಾಯಿತು ಅನ್ನಿಸಿತು. 

ನಮಗೀಗ  ಮಾದ್ಯಮಗಳ ಹಾಗೂ  ಅಂತರ್ಜಾಲದ ಮೂಲಕ  ವರುಷದಲ್ಲಿ ನೂರಾರು    ಆಚರಣೆ ಪ್ರತಿಭಟನೆ  ಕರೆಗಳು  ಬರುತ್ತವೆ.  ಅಪ್ಪನ  ದಿನ, ಅಮ್ಮನ ದಿನ,. ಕೆಲಸಗಾರರ ದಿನ,  ದೇವರ  ಜನ್ಮ  ದಿನ, ಸ್ವಾತಂತ್ರ ದಿನ,  ದೀಪವಾರಿಸುವ ದಿನ, ಏನೂ  ಖರೀದಿಸದಿರುವುದು, ಪರಸ್ಪರ ಅಪ್ಪಿಕೊಳ್ಳುವುದು ........ ಇತ್ಯಾದಿ  ಇತ್ಯಾದಿ.  ಮೊನ್ನೆ  ಫೆಬ್ರವರಿ  ೧೪ ರಂದು  ಪೆಟ್ರೋಲ್ ಖರೀದಿ  ಮಾಡದಿರುವ ಕರೆ ಇತ್ತು.   ಇಂತಹ  ಆಚರಣೆಗಳಿಂದ     ಯಾವ  ಪ್ರಯೋಜನವೂ  ಇಲ್ಲ.  ಎಲ್ಲರೂ  ಹಿಂದಿನ ದಿನವೇ  ಬೇಕಾದಷ್ಟು  ದಾಸ್ತಾನು ಮಾಡಿಕೊಂಡಿರಬಹುದು.   ಅಂದು ಖಾಸಗಿ ವಾಹನ  ಉಪಯೋಗಿಸುವುದಿಲ್ಲ ಎಂದಿದ್ದರೂ  ಅರ್ಥವಿರುತಿತ್ತು.  ಅಂದ ಹಾಗೆ   ಬರುವ ತಿಂಗಳು ಎಪ್ರಿಲ್ ೨೨  ಭೂಮಿ ದಿನವಾಗಿ  ಆಚರಿಸಲಾಗುತ್ತದೆ.    ಅದಕ್ಕೀಗ  ದೇವಿ ಶೆಟ್ರ   ದುರ್ದಿನವೂ  ಸೆರ್ಪಡೆಯಾಗಿ ಕ್ರಮೇಣ  ಇನ್ಯಾವುದೋ   ಕಾರಣಕ್ಕೆ   ಮುಂದೆ  ಜನಪ್ರಿಯವಾಗಬಹುದು.  


ಕೆಲವು ಕರೆಗಳು ಮಜವಾಗಿಯೂ  ಇರುತ್ತದೆ.  ಅಂತಹದರಲ್ಲೊಂದು ಪಾಂಟ್ ದರಿಸದಿರುವ ಕರೆ. ಪ್ರಪಂಚದ ವಿವಿದ ಕಡೆಗಳಲ್ಲಿ ಸಾರ್ವಜನಿಕ  ಸ್ಥಳಗಳಲ್ಲಿ ಮತ್ತು   ಮೆಟ್ರೊ ರೈಲುಗಳಲ್ಲಿ  ಪಾಂಟ್ ದರಿಸದಿರುವ  ದಿನ   ಬೇರೆ ಬೇರೆಯಾಗಿಯೇ ಆಚರಿಸಲಾಗುತ್ತದೆ. ಉಳಿದೆಡೆ ಮೆ ತಿಂಗಳ ಮೊದಲ ಶುಕ್ರವಾರ ಪಾಂಟ್ ಹಾಕದಿರುವ ದಿನವಾದರೆ   ರೈಲುಗಳಲ್ಲಿ ಜನವರಿ  ೧೧  ರಂದು  ಆಚರಿಸಲಾಗುತ್ತದೆ.




ಮಾರ್ಚು ೧೨ ರಂದು  ದುರ್ದಿನ  ಆಚರಣೆ  ಬಗೆಗೆ   ಕರೆ ಕೊಟ್ಟ  ಡಾ|  ಶೆಟ್ರು  ಆಮೇಲೆ ಮರೆತು ಬಿಟ್ಟರೋ ಅನ್ನುವ    ಕಾರಣ  ಇದೆಲ್ಲ  ಬರೆಯೋಣ ಅನ್ನಿಸಿತು. 

Wednesday, August 05, 2009

ಹಣದುಬ್ಬರ ಬಾದಿಸದ ಅಮೇರಿಕ.

ಹಣದುಬ್ಬರ ಎನ್ನುವ ವಿಷ ನಮ್ಮ ಜೀವನವನ್ನು ಹಾಳುಮಾಡುತ್ತದೆ. ಹಣವು ಬೆಲೆ ಕಳಕೊಂಡಂತೆ ನಮಗೆ ನ್ಯಾಯವಾದ ಪ್ರತಿಫಲ ದೊರಕಿತೋ ಎನ್ನುವ ಗೊಂದಲ ಉಂಟುಮಾಡುತ್ತದೆ. ಜನರಲ್ಲಿ ಹೆಚ್ಚಿನ ಅಪೇಕ್ಷೆ ಮೂಡುತ್ತದೆ. ಉದ್ಯೋಗಿಗಳು ಮುಷ್ಕರ ಹೂಡುತ್ತಾರೆ. ಈ ರೀತಿ ರೂಪಾಯಿ ಬೆಲೆ ಕಳೆದುಕೊಳ್ಳಲು ನಮ್ಮಲ್ಲಿರುವ ಭ್ರಷ್ಟ ವ್ಯವಸ್ಥೆಯ ಚುಕ್ಕಾಣಿ ಹಿಡಿದ ಗಾಂಧಿ ಟೋಪಿಯ ಅಸಮರ್ಥ ರಾಜಕಾರಣಿಗಳೇ ಕಾರಣ.

ನಾನು ಅಮೇರಿಕದಲ್ಲಿ ಸೈಕಲಿಸುವಾಗ ಮೊದಲ ಹತ್ತು ದಿನಗಳಲ್ಲಿ ನಿರೀಕ್ಷಿತ ವೇಗದಲ್ಲಿಯೇ ಮುಂದುವರಿದಿದ್ದೆ. ಆಗ  ಪೆನ್ಸಿಲ್ವಾನಿಯಾ  ರಾಜ್ಯದಲ್ಲಿ   ಸಿಕ್ಕ ಸಾವಯುವ ಕೃಷಿಕರಾದ ಎರಿಕ್ ಆನ್ ದಂಪತಿಗಳಲ್ಲಿ ಒಂದು ವಾರ ಕಳೆದದ್ದು  ನಾನು ವೇಳಾಪಟ್ಟಿಯಲ್ಲಿ ಹಿಂದೆ ಬೀಳಲು ಕಾರಣವಾಯಿತು. ಅವರು ನೆರೆಯ ಆಮೀಷ   ಜನರೊಂದಿಗೆ ಉತ್ತಮ ಸಂಬಂದ ಹೊಂದಿದ್ದ ಕಾರಣ ದಿನ ಹೋದದ್ದೆ ಅರಿವಾಗಲಿಲ್ಲ.

ನನ್ನ ಅಬ್ಯಾಸ ಎಂದರೆ ಮುಂದಿರುವ ಸಮಸ್ಯೆಯನ್ನು ಮೊದಲು ಬ್ರೆಡ್ ತುಂಡುಮಾಡುವ ಹಾಗೆ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡುವುದು ಅಂದರೆ ಗುರಿಯನ್ನು ಹಂಚಿಹಾಕುವುದು. ನನ್ನ ಮುಂದಿರುವ ಪಯಣ ನ್ಯೂ ಯೊರ್ಕನಿಂದ ಲಾಸ್ ಎಂಜಲಸ್ ಪಟ್ಟಣಕ್ಕಿರುವ ಮೂರು ಸಾವಿರ ಚಿಲ್ಲರೆ ಮೈಲು ಬಾಗಿಸು ನನಗೆ ಲಭ್ಯವಿರುವ ನೂರು ದಿನ ಅಂದರೆ ಸರಾಸರಿ ದಿನಕ್ಕೆ ನಲುವತ್ತು ಮೈಲು ಕ್ರಮಿಸಲೇ ಬೇಕಾಗಿತ್ತು.

ಅಮೇರಿಕ ಸೇರುವ  ಮೊದಲೇ   ಲಾಸ್ ಎಂಜಲಸ್ ನಿಂದ ಹೊರಡುವ ವಿಮಾನದಲ್ಲಿ ಸ್ಥಳ ಕಾದಿರಿಸಲಾಗಿದ್ದು ನೂರು ದಿನಗಳಲ್ಲಿ ನಾನು ಅಮೇರಿಕ ಬಿಡಲೇ ಬೇಕಾಗಿತ್ತು. ಆಸಕ್ತಿ ಇರುವ ಏನನ್ನೂ ನೋಡದೆ ಬರೇ ಸೈಕಲಿಸುವುದರಲ್ಲಿ ನನಗೆ ಅರ್ಥ ಕಾಣಲಿಲ್ಲ. ಎರಿಕ್ ಸಹಾಯದಿಂದ ಎಲ್ಲ ಪರ್ಯಾಯಗಳ ಆಲೋಚಿಸಿ ಕೊನೆಗೆ ವಿಮಾ ಪಾಲಿಸಿಯಂತೆ ಖರೀದಿಸಿದ್ದು ಚಾಲನೆ ನಮಗೆ ಬಿಡಿ ಎನ್ನುವ ದ್ಯೇಯವಾಕ್ಯ ಹೊಂದಿರುವ ಗ್ರೆಹೌಂಡ್ ಕಂಪೇನಿ ಬಸ್ಸು ಟಿಕೇಟು. ಹಾಗೆ ಹಲವು ಬಾರಿ ಸೈಕಲು ಮತ್ತು ನಾನು ಬಸ್ಸೇರಿದ್ದು ಪರವಾಗಿಲ್ಲ ಇನ್ನು ಸೈಕಲಿಸಬಹುದು ಎಂದು ಅನಿಸಿದ ಕೂಡಲೇ ಬಸ್ಸಿಂದಿಳಿಯುತ್ತಿದ್ದೆ. ಆಗ ಅಂದರೆ 1985ರಲ್ಲಿ ನಾನು ಟಿಕೇಟಿಗೆ ಕೊಟ್ಟ ಒಟ್ಟು ಮೊತ್ತ 119 ಡಾಲರ್ ಗಳು.

ಹನ್ನೆರಡು ವರ್ಷ ಅನಂತರ ಹಳೆಯ ಗೆಳೆಯರ ಕಂಡು ಬರೋಣ ಎಂದು ಅಮೇರಿಕಕ್ಕೆ ಹಾರಿದೆ. ಆಗ ಪಶ್ಚಿಮ ಕರಾವಳಿಯಿಂದ ಪೂರ್ವ ಕರಾವಳಿಗೆ ನಾನು ಕೊಟ್ಟ ಹಣ 132 ಡಾಲರ್. ಈಗ ಪುನಹ ಹನ್ನೆರಡು ವರ್ಷಗಳಾಗಿದ್ದು ಕುತೂಹಲದಿಂದ ಪ್ರಯಾಣದ ದರದಲ್ಲಾಗಿರುವ ಬದಲಾವಣೆಯನ್ನು ಜಾಲದಲ್ಲಿ ನೋಡಿದೆ. ಇಂದು 2009ರಲ್ಲಿ ಅದೇ ಪ್ರಯಾಣಕ್ಕೆ ಗರೀಷ್ಟ ಇನ್ನೂರ ನಲುವತ್ತು ಡಾಲರ್. ಮುಂಗಡವಾಗಿ ಪಡಕೊಂಡ ಟಿಕೇಟಿಗೆ ಬಹಳ   ರಿಯಾಯತಿ ಇದ್ದರೂ ಈ ಬರಹದಲ್ಲಿ ನಾಲ್ಕು ಕಡೆಗಳಲ್ಲಿ ತೋರಿಸುವ ದರಗಳು ಅವುಗಳನ್ನು ಹೊರತು ಪಡಿಸಿದೆ.


ಎಪ್ಪತೈದು ವರ್ಷ ಹಿಂದೆ 1934ರಲ್ಲಿಯೇ ಇದು 32.5 ಡಾಲರ್ ಆಗಿತ್ತೆಂದು ಪತ್ರಿಕಾ ಪ್ರಕಟನೆ ಹೇಳುತ್ತದೆ. ಅಂದರೆ 75 ವರ್ಷದಲ್ಲಿ ಇದು ಬರೇ ಏಳು ಪಾಲು ಹೆಚ್ಚಾಗಿದೆ. ನಮಗೆಲ್ಲ ನಿಜಕ್ಕೂ ಆಶ್ಚರ್ಯಕರವಾದ ವಿಚಾರ.

ಹೋಲಿಸಿ ನೋಡುವಾಗ 1967ರಲ್ಲಿ ನಾನು ಮೈಸೂರಿನ ವಸತಿ ಶಾಲೆಯಲ್ಲಿದ್ದಾಗ ನಮ್ಮೂರಿನಿಂದ ಮೈಸೂರಿಗೆ ದೊಡ್ಡವರಿಗೆ ಐದು ರೂಪಾಯಿ ಇದ್ದ ನೆನಪು. ಈಗ ಅರೆ ಸುಖಾಸಿನ ಬಸ್ಸಿನಲ್ಲಿ ಮೈಸೂರಿಗೆ  ಇನ್ನೂರು  ರೂಪಾಯಿ  ದಾಟಿದೆ. ಅಂದರೆ ನಲುವತ್ತೆರಡು ವರ್ಷದಲ್ಲಿ ನಲುವತ್ತು ಪಾಲು ಹೆಚ್ಚಳ. ದಿಕ್ಕು ತಪ್ಪಿಸುವ ಹೊಲಸು ರಾಜಕೀಯದಲ್ಲಿ ಸಮಾಜಕ್ಕೆ ಸೋಲು.

ಹೋಲಿಕೆಗೆ ಕನಿಷ್ಟ ವೇತನ ಇನ್ನೊಂದು ಉತ್ತಮ ಮಾನದಂಡ. ಅಮೇರಿಕದಲ್ಲಿ ಕಳೆದ ತಿಂಗಳು ಘಂಟೆಗೆ ಏಳು ಕಾಲು ಡಾಲರ್ ತಲಪಿದ ಕನಿಷ್ಟ ವೇತನ ಇಪ್ಪತ್ತ ನಾಲ್ಕು ವರ್ಷ ಹಿಂದೆ ನಾಲ್ಕು ಡಾಲರ್ ಆಗಿತ್ತು. ಅದರಲ್ಲೂ ಒಂದು ಡಾಲರ್ ನಲುವತ್ತು ಸೆಂಟ್ಸ್ ಕಳೆದ ಎರಡು ವರ್ಷಗಳಲ್ಲಿ ಏರಿದ್ದು. ನಮ್ಮಲ್ಲಿ ಇದೇ ಅವದಿಯಲ್ಲಿ ಕೆಲಸಗಾರರ ವೇತನ ಕನಿಷ್ಟ ಹತ್ತು ಪಟ್ಟು ಹೆಚ್ಚಿದೆ.

ಸಮಯ ಹೋದಂತೆ ನಮ್ಮ ರೂಪಾಯಿ ದುರ್ಬಲವಾಗುತ್ತಿದೆ ಎನ್ನುವುದಕ್ಕೆ ಇನ್ನೊಂದು ಉದಾಹರಣೆ.  ನಾನು ಅಂದು  ಪ್ರವಾಸ ಕೈಗೊಂಡಾಗ ನಮಗೆ ವಿದೇಶಿ ವಿನಿಮಯ 520 ಡಾಲರ್ ಸಿಕ್ಕಿತ್ತು. ಐದುನೂರು ಬಾಂಕಿನಲ್ಲಿ ಮತ್ತು ಇಪ್ಪತ್ತು ವಿಮಾನ ನಿಲ್ದಾಣದಲ್ಲಿ. ಆಗ ದರ ಸುಮಾರು ಹನ್ನೆರಡುವರೆ ರೂಪಾಯಿ ಇದ್ದು ಸ್ವಲ್ಪ ಹೆಚ್ಚಿಗೆ ವಿನಿಮಯವನ್ನು ಮುಂಬಯಿಯ ಕಡಲತೀರದ ಕೋಟೆ ಪ್ರದೇಶದ ಗೂಡಂಗಡಿಯಲ್ಲಿ   ಡಾಲರೊಂದಕ್ಕೆ    ಇಪ್ಪತ್ತು  ಪೈಸೆ  ಹೆಚ್ಚು  ಕೊಟ್ಟು    ಖರೀದಿಸಿದ್ದೆ.  ಇಪ್ಪತ್ತ ನಾಲ್ಕು ವರ್ಷ ಅನಂತರ ಇಂದು ಡಾಲರ್ ಎಂದರೆ ನಲವತ್ತೆಂಟು ರೂಪಾಯಿ.

Friday, June 05, 2009

ರಾಜ್ಯ ಗ್ರಾಹಕರ ವೇದಿಕೆಗೊಂದು ನಿಷ್ಪ್ರಯೋಜಕ ಯಾತ್ರೆ.

ನನ್ನ ರಿಲಿಯನ್ಸ್ ಫೋನಿನ ಸಮಸ್ಯೆ ತೀರಾ ಗೊಜಲಾಗಿತ್ತು. ನನ್ನ ದೂರವಾಣಿಯ ಸಮಸ್ಯೆಯನ್ನು ಅವರು ಕೊಟ್ಟ ಹಿಂಸೆಯನ್ನೂ ಮಂಗಳೂರಿನ ಗ್ರಾಹಕ  ನ್ಯಾಯಾಲಯ ಗುರುತಿಸಿದರೂ ಅವರಿಗೂ ಸಂಪೂರ್ಣ ಚಿತ್ರಣ ದೊರಕಿರಲಿಲ್ಲ. ಹೊಸ ಟವರ್ ಹಾಕಿದಾಗೆಲ್ಲ  ತಾಂತ್ರಿಕ  ಸಮಸ್ಯೆಗಳಿಂದಾಗಿ    ನನ್ನ ದೂರವಾಣಿ ಸ್ಥಬ್ದವಾಗುವುದನ್ನೂ ಅವರು ತಿಂಗಳುಗಟ್ಟಲೆ ಪರಿಹಾರ ಕೈಗೊಳ್ಳದಿರುವುದನ್ನೂ ಗುರುತಿಸಿತ್ತು. ಅದುದರಿಂದ ರಿಲಿಯನ್ಸ್  ಕಂಪೇನಿ  ಎರಡು ಸಾವಿರ ದಂಡ ಹಾಗೂ ಒಂದು ಸಾವಿರ ಕೋರ್ಟು ಖರ್ಚು ಕೊಡಬೇಕೆಂದು ತೀರ್ಮಾನಿಸಿತು.



ನನ್ನ ಹಣ ಇರುವಾಗಲೇ ರಿಲಿಯನ್ಸ್  ಕಂಪೇನಿ  ಉದ್ದೇಶಪೂರ್ವಕವಾಗಿ ಸಂಪರ್ಕ ಕಡಿತ ಮಾಡಿದ್ದನ್ನು ಗುರುತಿಸಿರಲಿಲ್ಲ. ಈ ಸಮಸ್ಯೆಗೆ   ಅವರ  ದೋಶಪೂರಿತ   ಕಂಪ್ಯೂಟರ್ ತಂತ್ರಾಂಶ   ಹಾಗೂ  ಹೊಣೆ ಅರಿಯದ   ಉದ್ಯೋಗಿಗಳೇ  ಕಾರಣ.   ಜುಲೈ ತಿಂಗಳಿನಲ್ಲೂ ಜತೆಗಿರುವ ಆಗಸ್ತ್ ಬಿಲ್ಲಿನಂತೆ ಕಟ್ಟಬೇಕಾದ ಮೊತ್ತ ಹಾಗೂ ಕೊನೆಯ ದಿನಾಂಕ ನಮೂದಿಸದ ಬಿಲ್ ಬಂದಿತ್ತು. ಕೊನೆಗೆ  ಇದ್ದಕ್ಕಿದ್ದಂತೆಯೇ  148 ರೂಪಾಯಿ ಕಟ್ಟಿ ಎಂದು ದೂರವಾಣಿ ಅದೇಶ ಮಾತ್ರವಲ್ಲ  ನನ್ನ   ಸಂಪರ್ಕವನ್ನು    ಕತ್ತರಿಸಿಯೇ ಬಿಟ್ಟರು.  ನಾನು  ಬಾಕಿ  ಉಳಿಸಿಕೊಂಡಿಲ್ಲವೆಂದು  ಸ್ಪಷ್ಟವಾಗಿಯೇ   ಹೇಳಿದ್ದೆ.   ನಾನು 200 ರೂಪಾಯಿ ಕಟ್ಟಿದ ನಂತರ ಸಂಪರ್ಕ ಸರಿಪಡಿಸಿದರು.  ಯಾವುದೇ ರೀತಿ  ಲೆಕ್ಕ  ಮಾಡಿದರೂ  ಈ  148 ರೂಪಾಯಿ  ಒಪ್ಪುವಂತಿರಲಿಲ್ಲ.




ಈ  ಉದ್ದೇಶಪೂರ್ವಕ  ಸಂಪರ್ಕ   ಕಡಿತದ  ರುಜುವಾತಾಗಿ     ರಿಲಿಯನ್ಸ್  ಕಂಪೇನಿ  ಕಳುಹಿಸಿದ  SMS  ದಾಖಲಿಸಿದ  ವಿಡಿಯೋ ಅಂದರೆ ಹೆಚ್ಚಿನ ಸಾಕ್ಷಿ ಸಮೇತ ಬೆಂಗಳೂರಿನಲ್ಲಿರುವ ರಾಜ್ಯ ವೇದಿಕೆಗೆ ಮೇಲ್ಮನವಿ ಸಲ್ಲಿಸಿದೆ. ಮಂಗಳೂರಿನಲ್ಲಿ ತೀರ್ಪಿನ ಕಾಪಿ ಸಿಗುವಾಗಲೇ ವಿಳಂಬ.  ತೀರ್ಪು  ಅಂತರ್ಜಾಲದಲ್ಲಿ  ಲಭ್ಯವಾಗುವಾಗಲೇ  ಇಪ್ಪತ್ತು  ದಿನ  ಕಳೆದಿತ್ತು.    ಜತೆಗೆ ನಾನಿರುವ ಹಳ್ಳಿಯಿಂದ ಮಂಗಳೂರಿಗೆ ಹೋಗಲು ಸಮಸ್ಯೆ. ಈ ವಿಳಂಬವನ್ನು ಕ್ಷಮಿಸಿ ನನ್ನ ಮೇಲ್ಮನವಿ ಪರಿಗಣಿಸಲು ಕೋರಿ ಅರ್ಜಿ ಹಾಕಿದ್ದೆ. ಅರ್ಜಿ ಹಾಕಿದ ನಂತರ ಸಿಕ್ಕ ಸ್ನೇಹಿತರು ರಾಜ್ಯ ಗ್ರಾಹಕ   ವೇದಿಕೆಯ ಬರೇ ಕಳಪೆ ಫಲಿತಾಂಶವನ್ನು ತಿಳಿಸಿದರೂ ನಾನು ಅಶಾವಾದಿಯಾಗಿದ್ದೆ.

ಮೇಲ್ಮನವಿಗೆ 69 ದಿನ ವಿಳಂಬವಾದ ನಿಮ್ಮ ಅರ್ಜಿ ಪರಿಗಣಿಸಲು ಸಾದ್ಯವಿಲ್ಲ.  ನಿಮಗೆ ಸಿಕ್ಕ  ಪರಿಹಾರ ಸಾಕೆಂದು ತೀರ್ಮಾನಿಸಿದ್ದೇವೆ.  ಎಂದು  ತೀರ್ಪಿನ ಪ್ರತಿ   ನನಗೆ  ಇತ್ತೀಚೆಗೆ   ದೊರಕಿತು. ಉದ್ದೇಶಪೂರ್ವ ಕಡಿತವು  ತಾಂತ್ರಿಕ ತೊಂದರೆಯಿಂದ ಬಿನ್ನ  ಎಂದು  ರಾಜ್ಯ ವೇದಿಕೆಗೆ ಅರ್ಥವಾಗಲಿಲ್ಲ.     ಜಿಲ್ಲಾ ವೇದಿಕೆಯಲ್ಲಿ ನಿಮಗೆ ದೊರೆತ ಪರಿಹಾರ ನ್ಯಾಯಬದ್ದವಾಗಿರುವ ಕಾರಣ ಪುನಹ ಪರಿಶೀಲನೆ ಅಗತ್ಯವಿಲ್ಲ ಎಂದು ಮಾರ್ಚು 5 ರಂದು ನ್ಯಾಯಮೂರ್ತಿ ಚಂದ್ರಶೇಖರಯ್ಯನವರ ಅದ್ಯಕ್ಷತೆಯ ಪೀಠ ಕೊಟ್ಟ  ತೀರ್ಪಿನ ಕಾಪಿ 72 ದಿನ ವಿಳಂಬವಾಗಿ ಅಂಚೆಗೆ ಹಾಕಲ್ಪಟ್ಟಿತು.
 

ತಮಾಷೆ ಎಂದರೆ ಆ ಲಕೋಟೆಯಲ್ಲಿ ಮುದ್ರಿಸಲ್ಪಟ್ಟ ದ್ಯೇಯವಾಕ್ಯ  ನನಗೆ  ಇದನ್ನು  ಓದಿ  ಹೇಗೆ ಪ್ರತಿಕ್ರಿಯಿಸುವುದೆಂದು ಅರ್ಥವಾಗುತ್ತಿಲ್ಲ. .


ನಮ್ಮ ಹಕ್ಕುಗಳ ಕಾಯಬೇಕಾದವರೇ ನಿರ್ಲಕ್ಷಿಸಿದರೆ ಯಾರಲ್ಲಿ ಹೇಳುವುದು ? ಈಗ ನಾನು ರಾಜ್ಯ ಗ್ರಾಹಕ ವೇದಿಕೆಯ   ಕಾರ್ಯ  ವೈಖಿರಿ  ಪ್ರತಿಭಟಿಸಲೋ ಅಲ್ಲ ಮೂಲ ಸಮಸ್ಯೆ ರಿಲಿಯನ್ಸ್ ಬಗ್ಗೆ ದೆಹಲಿಯಲ್ಲಿರುವ ಗ್ರಾಹಕ ರಾಷ್ಟ್ರೀಯ ವೇದಿಕೆಯ ಸಂಪರ್ಕಿಸಲೋ ಅನ್ನುವ ಗೊಂದಲದಲ್ಲಿದ್ದೇನೆ. ಆದರೆ ಇಷ್ಟು ಹಣ ದಂಡ ಮಾಡಿದ್ದು ಸಾಕು ಎನ್ನುವ ಹಿತೈಷಿಗಳ ಮಾತನ್ನೂ ಮೀರುವಂತಿಲ್ಲ.

ಈಗ ಬಂದ ಸುದ್ದಿ ಪ್ರಕಾರ ನ್ಯಾಯಮೂರ್ತಿ ಚಂದ್ರಶೇಖರಯ್ಯ ನಿವೃತ್ತಿಯಾಗಿದಾರೆ. ಹೊಸತಾಗಿ ನ್ಯಾಯಮೂರ್ತಿ ಕೆ. ರಾಮಣ್ಣ ಅವರು ನೇಮಕಗೊಂಡಿದ್ದಾರೆ. ಅಂತೂ ಗ್ರಾಹಕರು ಬಚಾವ್ ಅನಿಸಿತು. 17,130 ರಲ್ಲಿ 16,710 ಸಮಸ್ಯೆಗಳ ಪರಿಹರಿಸಿದ್ದೇವೆ ಅಂದರೆ ಶೇಕಡಾ 97 ಅನ್ನುತ್ತಾರೆ ನಿವೃತ್ತಿಯ ದಿನ ನ್ಯಾಯಮೂರ್ತಿ ಚಂದ್ರಶೇಖರಯ್ಯ. ಎಲ್ಲವನ್ನೂ ನನ್ನ ಕಡತ ವಿಲೆವಾರಿ ಮಾಡಿದಂತೆ ಮಾಡಿದ್ದಾರೆ ಅಂತಾದರೆ  ....................  ಇಂತಹ ತೀರ್ಪುಗಳಿಂದ ರಿಲಯನ್ಸ್ ನಂತಹ   ಕಂಪೇನಿಗಳು ಕೋಟಿಗಟ್ಟಲೆ   ಬಾಚಿ ಮೂರು ಸಾವಿರ ಪರಿಹಾರ ಕೊಟ್ಟು ನಿರಾಂತಕವಾಗಿರುತ್ತದೆ.

ಗ್ರಾಹಕ ನ್ಯಾಯಾಲಯ ಈ   ರೀತಿಯ  ದೋರಣೆ ಹೊಂದಿದ್ದರೆ  ನಾವು  ಗ್ರಾಹಕ  ನ್ಯಾಯಾಲಯ ಬಾಗಿಲು  ತಟ್ಟುವುದೇ  ಮೂರ್ಖತನವಾಗುತ್ತದೆ.    ನ್ಯಾಯ  ಬಹಳ  ದುಬಾರಿಯೆನಿಸುತ್ತದೆ.   ಈ ಬಗೆಗೆ   ನಾವು  ಮಾಡುವ  ಖರ್ಚಿನ  ಶೇಕಡ ಹದಿನೈದು   ಸಹಾ  ತುಂಬಿ ಕೊಡದ   ಇವರ  ಚಿಲ್ಲರೆ  ಪರಿಹಾರ ಯಾವ  ಪ್ರಯೋಜನವೂ  ಇಲ್ಲ.  ಇದರಿಂದ  ಜನರಿಗೆ  ತಪ್ಪು  ಸಂದೇಶ  ರವಾನೆಯಾಗುತ್ತದೆಯೆಂದು  ಅವರು  ಅರ್ಥ ಮಾಡಿಕೊಳ್ಳಬೇಕು.   ಬಿಡಿ.  ಅವರಿಗೆ  ಸರಕಾರದಿಂದ  ಸಂಬಳ  ಬರುತ್ತದೆ.
 
ಇಪ್ಪತೈದು ವರ್ಷ ಹಿಂದೆ ಬೆಂಗಳೂರಿನಲ್ಲೊಂದು ಸಂಚಾರಿ ಪೋಲಿಸರಿಂದ ನನ್ನ ಮೇಲೊಂದು ಚಿಲ್ಲರೆ ಕೇಸ್. ಆಗ ಒಬ್ಬ ಸಹೃದಯಿ ಪೋಲಿಸ್ ಪೇದೆ ಹೇಳಿದ ಮಾತು  – ನ್ಯಾಯಾಲಯ ತೀರ್ಮಾನಿಸಿದ ದಂಡವನ್ನು  ತೆಪ್ಪಗೆ ಕಟ್ಟಿ  ಹೋಗಿ. ನೀವು ತಪ್ಪು  ಮಾಡದೆಯೇ  ಇರಬಹುದು.  ಹಾಗೆಂದು  Contest ಮಾಡಿದರೆ ನಮಗೇನು ಕಷ್ಟವಿಲ್ಲ. ಸರಕಾರ ನಮ್ಮ ಓಡಾಟಕ್ಕೆ ಸಂಬಳ ಕೊಡುತ್ತದೆ. ನೀವು  ಮಾತ್ರ  ಜೇಬಿನಿಂದ   ನಿಮ್ಮ  ಹಣ   ಖರ್ಚು ಮಾಡಬೇಕು.

Thursday, June 04, 2009

ಏನಿದು, ವಾಸ್ತವ ನೀರು ?


ನೀರು ಸರಕು ಉತ್ಪಾದನೆಗೆ ಅನಿವಾರ್ಯ ಕಚ್ಚಾವಸ್ತು. ಕೈಗಾರಿಕೆಯ ಯಾ ಕೃಷಿಯ ಉತ್ಪನ್ನ ತಯಾರಾಗಲು ಬೇಕಾಗುವ ಒಟ್ಟು ನೀರನ್ನು ವಾಸ್ತವ ನೀರು ಎನ್ನುತ್ತಾರೆ. ಉದಾಹರಣೆಗೆ, ಒಂದು ಕಿಲೋ ಅಕ್ಕಿ ಬೆಳೆಸಲು ಸುಮಾರು ಎರಡು ಸಾವಿರದ ಏಳು ನೂರು ಲೀಟರ್ ನೀರು ಖರ್ಚಾಗುತ್ತದೆ. ಇದೆಲ್ಲವೂ ನೇರ ಕಣ್ಣಿಗೆ ಕಾಣುವುದಿಲ್ಲ.

ಪ್ರತಿಯೊಂದು ವ್ಯವಹಾರವೂ ನೀರನ್ನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉಪಯೋಗಿಸುತ್ತದೆ. ಒಂದು ಲೀಟರ್ ಪಾನೀಯ, ಸೋಡ, ಹಾಲು ಯಾ ಮದ್ಯ ತಯಾರಿಗೆ ಉತ್ಪಾದನಾ ಸ್ಥಳದಲ್ಲಿ ಮೂರುನಾಲ್ಕು ಲೀಟರ್ ನೀರು ಮಾತ್ರ ಸಾಕು ಅನಿಸಬಹುದು. ಆದರೆ ಅದರ ಕಚ್ಚಾವಸ್ತುಗಳಿಗೆ - ಉದಾ: ಸಕ್ಕರೆಗೆ ಕಬ್ಬು ಬೆಳೆಸಲು ಬಹಳಷ್ಟು ನೀರು ಬೇಕಲ್ಲಾ? ಅದೇ ರೀತಿ ಬಟ್ಟೆ ಉದ್ಯಮಕ್ಕೆ ಬೇಕಾದ ಹತ್ತಿ ಬೆಳೆಯಲು ತುಂಬ ನೀರು ಅಗತ್ಯ.

 ನೀರ ಹೆಜ್ಜೆ ಎನ್ನುವುದು ಒಬ್ಬ ವ್ಯಕ್ತಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉಪಯೋಗಿಸುವ ನೀರಿನ ಪ್ರಮಾಣದ ಅಳತೆಗೋಲು. ನೇರ ಬಳಸಿದ ಹಾಗೂ ದಿನಾವಶ್ಯ ವಸ್ತುಗಳ ಉತ್ಪಾದನೆಗೆ ತಗಲಿದ ನೀರಿನ ಒಟ್ಟು ಮೊತ್ತ. ಧಾರಾಳ ನೀರು ಬಳಸಿದವನ ನೀರ ಹೆಜ್ಜೆ ದೊಡ್ಡದು. ಪಾತ್ರೆ ತೊಳೆದ ನೀರನ್ನು ತರಕಾರಿ ಗಿಡಕ್ಕೆ ಉಣಿಸುವ ಗೃಹಿಣಿಯ ನೀರ ಹೆಜ್ಜೆ ಚಿಕ್ಕದು.

ನಮ್ಮ ಮನೆಯ ನಾಲ್ಕು ಜನ ದಿನಕ್ಕೆ ೭೦೦ ಲೀಟರ್ ನೀರು ಬಳಸುತ್ತೇವೆ. ಆದರೆ ಪರೋಕ್ಷ ಉಪಯೋಗ ಇದರ ಬಹುಪಟ್ಟು. ಒಂದು ಲೋಟ ಚಹಾಕ್ಕೆ ಒಂದು ಲೋಟ ನೀರಷ್ಟೇ ಸಾಕು ಎನ್ನುವುದು ತಪ್ಪು ಕಲ್ಪನೆ. ಇದರ ಹಿಂದೆ ೧೪೦ ಲೀಟರ್ ನೀರು ಬಳಕೆ ಆಗಿರುತ್ತದೆ ಎನ್ನುತ್ತಾರೆ ತಜ್ಞರು. ಚಹಾ ಬೆಳೆಸಿ ಸಂಸ್ಕರಿಸಿ ಪೊಟ್ಟಣ ಕಟ್ಟಿ ನಮ್ಮಲ್ಲಿಗೆ ತಲಪಿಸುವಾಗ ಅಷ್ಟು ನೀರು ಖರ್ಚು ಆಗುತ್ತದೆಯಂತೆ. ಹೀಗೆ ಬೆಳಗಿನ  ಚಾ ಕುಡಿದಾಗಲೇ  ನಮ್ಮ ಪರೋಕ್ಷ ಬಳಕೆ ನೇರ ಬಳಕೆಯನ್ನು  ಮೀರತೊಡಗುತ್ತದೆ.

ಇತ್ತೀಚೆಗೆ  ಫಿನ್ ಲಾಂಡಿನ  ಒಂದು  ಆಹಾರೋತ್ಪನ್ನ  ಸಂಸ್ಥೆ   ತನ್ನ  ಪೊಟ್ಟಣದಲ್ಲಿ  ಪರೋಕ್ಷವಾಗಿ  ಉಪಯೋಗಿಸಲ್ಪಟ್ಟ  ವಾಸ್ತವ   ನೀರಿನ ಪ್ರಮಾಣವನ್ನು  ನಮೂದಿಸಲು  ಪ್ರಾರಂಬಿಸಿದೆ. ಆಹಾರದಲ್ಲಿರುವ  ಪೋಷಕಾಂಶಗಳ  ಪ್ರಮಾಣವನ್ನು  ಪೊಟ್ಟಣದ  ಮೇಲೆ    ನಮೂದಿಸುವ  ಪರಿಪಾಠ  ಅಲ್ಲಿ   ಈಗಾಗಲೇ  ಜಾರಿಯಲ್ಲಿದೆ.     ಇದೊಂದು   ನೀರಿನ  ಪರೋಕ್ಷ ಉಪಯೋಗವನ್ನು    ಗುರುತಿಸುವ  ಒಂದು  ಸಕಾರಾತ್ಮಕ  ಹೆಜ್ಜೆ.



ವಾಸ್ತವ ನೀರಿನ ಈ ಪರಿಕಲ್ಪನೆಯನ್ನು ಲಂಡನಿನ ಪ್ರೊ ಜಾನ್ ಅಂತೋನಿ ಆಲನ್ ೧೯೯೩ರಲ್ಲಿ ಚಹಾದ ಉದಾಹರಣೆಯೊಂದಿಗೆ ಮಂಡಿಸಿದರು. ಇದಕ್ಕೆ ಅವರಿಗೆ ಕಳೆದ ವರ್ಷ ಸ್ಟಾಕ್ಹೋಮ್ ನೀರಿನ ಪ್ರಶಸ್ತಿ ಕೊಟ್ಟರು. ಎಪ್ಪತ್ತೈದು ಲಕ್ಷ ರೂಪಾಯಿ ನಗದನ್ನೂ ಹೊಂದಿದ ಇದು ನೀರಿಗೆ ಸಂಬಂಧಪಟ್ಟ ಅತಿ ದೊಡ್ಡ ಬಹುಮಾನ.

ಜಲಲಭ್ಯತೆ ಹೆಚ್ಚು ಇರುವ ಜಾಗಗಳಲ್ಲಿ ಅವಶ್ಯಕತೆಯೂ ಹೆಚ್ಚಿರಬೇಕೆಂದಿಲ್ಲ. ಬರಪೀಡಿತ ದೇಶ ಹೆಚ್ಚು ನೀರು ಬೇಡುವ ಬೆಳೆಗಳನ್ನು ಆಮದಿಸಿಕೊಳ್ಳಬಹುದು. ತನ್ನ ನೀರಿನ ಸಂಪತ್ತಿನ ಮೇಲಿನ ಒತ್ತಡ ಕಡಿಮೆ ಮಾಡುವ ಈ ಹೆಜ್ಜೆಯನ್ನು ವಾಸ್ತವ ನೀರಿನ ಅಮದು ಎನ್ನಬಹುದು.

ಜನ ಬಳಸುವ ನೀರಿನಲ್ಲಿ ಸಿಂಹಪಾಲು ಅಹಾರ ಉತ್ಪಾದನೆಗೆ ಮೀಸಲು. ಆಹಾರ ಭದ್ರತೆ ವಿಚಾರದಲ್ಲಿ ನೀರು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಇಂದು ನೀರಿಗಾಗಿ ಕಚ್ಚಾಡುವ ಬದಲು ಗಡಿಯಾಚೆಗೆ ಆಹಾರದ ಸಾಗಾಟ ಈ ಕೊರತೆಯನ್ನು ಬಹುಪಾಲು ತುಂಬಲು ಸಾಧ್ಯ ಎನ್ನುವುದು ಜನರ ಅರಿವಿಗೆ ಬಾರದ ವಿಚಾರ.

ಜಾಗತಿಕ ಆಹಾರ ಸಾಗಾಟ ಪರೋಕ್ಷವಾಗಿ ಜಲಸಮೃದ್ಧ ಹಾಗೂ ಕೊರತೆ ಪ್ರದೇಶಗಳ ಸೂಚನೆ ಕೊಡುತ್ತದೆ. ಆಹಾರ ಸಾಗಾಟವೆಂದರೆ ನೀರು ಸಾಗಿಸಿದಂತೆಯೇ. ಇದರಿಂದಾಗಿ ಇಂದು ಹಲವು ಒಣಪ್ರದೇಶದ ಜನರಿಗೆ ಉಣ್ಣಲು ಸಾಧ್ಯವಾಗುತ್ತದೆ. ಈಗೀಗ ಕೊಡುವವರಿಗಿಂತ ಪಡಕೊಳ್ಳುವವರ ಪ್ರಮಾಣ ತುಂಬಾ ಹೆಚ್ಚಿದೆ. ಈ ಸಮತೋಲನ ತಪ್ಪುತ್ತಿರುವುದು ಕಳವಳಕಾರಿ.

ಪ್ರತಿ ಕಿಲೋ ಅಕ್ಕಿ ಮತ್ತು ಗೋಧಿ ರಪ್ತು ಎಂದರೆ ಅನುಕ್ರಮವಾಗಿ ೨೭೦೦ ಮತ್ತು ೧೨೦೦ ಲೀಟರ್ ನೀರಿನ ನಿರ್ಯಾತವೇ. ಅಕ್ಕಿ ಮತ್ತು ಗೋಧಿ ಹೆಚ್ಚು ನೀರು ಬಳಸುವ ಬೆಳೆಗಳಾಗಿದ್ದು ರೈತರು ಪುಕ್ಕಟೆ ವಿದ್ಯುತ್ ಬಳಸಿ ಸಾವಿರ ಅಡಿ ಆಳದಲ್ಲಿರುವ ಅಂತರ್ಜಲ ಅತಿಯಾಗಿ ಬಳಸುತ್ತಿದ್ದಾರೆ. ಇಂದು ಪಂಜಾಬಿಗೆ ದೇಶಕ್ಕೆ ಆಹಾರ ಬೆಳೆಸುವುದಕ್ಕೆ ತನ್ನ ನೈಸರ್ಗಿಕ ಸಂಪನ್ಮೂಲ ಬಲಿಯಾಗಿದೆ ಎನ್ನುವ ಅರಿವು ಮೂಡುತ್ತಿದೆ.

ಒರಿಸ್ಸಾದಲ್ಲಿ ಭೀಕರ ಬರಗಾಲದಿಂದ ಜನ ಸಾಯುತ್ತಿರುವಾಗಲೂ ೮೦೦ ಮಿ.ಮೀ. ಮಳೆಯಾಗಿತ್ತು. ತಲಾ ೩೩೦ ಕಿಲೊ ಆಹಾರ ಕಾಳಹಂದಿ ಜಿಲ್ಲೆಯಲ್ಲೇ ಬೆಳೆದಿದ್ದರು. (ದೇಶದ ತಲಾ ಸರಾಸರಿ ಆಹಾರೋತ್ಪನ್ನ ೨೦೦ ಕಿಲೋ) ಆದರೆ ಉತ್ಪಾದನೆಯ ಬಹುಪಾಲನ್ನು ಸರಕಾರ ಹಾಗೂ ವ್ಯಾಪಾರಿಗಳು ಸೇರಿ ರಫ್ತು ಮಾಡಿದ್ದರು. ಸ್ಥಳೀಯ ಅಗತ್ಯದ ಕಾಲುಭಾಗವಷ್ಟೇ ಅಲ್ಲಿ ಉಳಿದಿತ್ತು. ಇದೊಂದು ವಾಸ್ತವ ನೀರು ರಫ್ತಿನ ಕಹಿ ಉದಾಹರಣೆ.

ಕಾಲಿಗೆ ಚಪ್ಪಲಿ ಹಾಕುವ ಬದಲು ರಸ್ತೆಗೆ ಚರ್ಮ ಹೊದೆಸುವ ಚಂದಮಾಮದ ಕಥೆಯಂತಹವು ನಮ್ಮಲ್ಲಿ ಸಾಕಷ್ಟು ನಡೆಯುತ್ತವೆ. ಗಂಗಾನದಿಯ ನೀರು ತರುವುದೂ ಅವುಗಳಲ್ಲೊಂದು. ಒಂದು ನೀರ ಪಾತ್ರದಿಂದ ಇನ್ನೊಂದಕ್ಕೆ ಸಾಗಿಸುವುದರ ಬದಲು ಬೆಳೆ ಸಾಗಾಣಿಕೆ ಸುಲಭ ಎಂದು ತಜ್ಞರು ಬೊಟ್ಟು ಮಾಡುತ್ತಾರೆ. ಆದರೂ ಈ ಬೃಹತ್ ಯೋಜನೆಗಳ ಆಸೆ ಜನಮನದಿಂದ ಮರೆಯಾಗಿಲ್ಲ.

ಪ್ರತಿ ಕಿಲೋ ಬೆಳೆಯಲು ಬೇಕಾಗುವ ನೀರು (ಲೀ.ಗಳಲ್ಲಿ)

ಬಟಾಟೆ ೧೬೦
ಹಾಲು ೯೦೦
ಗೋಧಿ ೧೨೦೦
ಕೋಳಿ ಮಾಂಸ ೨೮೦೦
ಹಂದಿ ಮಾಂಸ ೫೯೦೦
ದನದ ಮಾಂಸ ೧೬೦೦೦

ಸ್ಥೂಲ ಲೆಕ್ಕಾಚಾರ ಪ್ರಕಾರ ಒಂದು ಕಿಲೋ ಅಡಿಕೆಗೆ ಕನಿಷ್ಟ ೨೫೦೦ ಲೀಟರ್ ಬಳಸುತ್ತೇವೆ. . ನೀರ ಹೆಜ್ಜೆಯ ಅರಿವು ಜಾಗ್ರತ ಮನಸ್ಸಿಗೆ ಕಾರಣವಾಗಿ ಅನಾವಶ್ಯಕ ಪೋಲು ನಿಲ್ಲಿಸಬಹುದು.

ಚೀನಾದ ಪ್ರತಿ ಪ್ರಜೆ ವರ್ಷಕ್ಕೆ ೭೭೫ ಸಾವಿರ ಲೀಟರ್ ನೀರು ಉಪಯೋಗಿಸಿದರೆ ಅದರಲ್ಲಿ ಶೇಕಡಾ ೩ ನೀರ ಹೆಜ್ಜೆ ಮಾತ್ರ ದೇಶದ ಹೊರಗೆ. ಆದರೆ ಜಪಾನೀಯರ ವರ್ಷದ ತಲಾ ೧೧೦೦ ಸಾವಿರ ಲೀಟರಿನಲ್ಲಿ ಶೇಕಡ ೬೦ ನೀರ ಹೆಜ್ಜೆ ದೇಶದ ಹೊರಗಿದೆ. ಅದರಲ್ಲಿ  ಬಹುಪಾಲು ಗೋಮಾಂಸದ ರೂಪದಲ್ಲಿ  ಜಪಾನಿಗೆ   ಅಮದಾಗುತ್ತದೆ.  

ಅಮೆರಿಕದ ಪ್ರಜೆ ಮಾಂಸಾಹಾರ ಬಿಟ್ಟು ಸಂಪೂರ್ಣ ಸಸ್ಯಾಹಾರಿಯಾದಲ್ಲಿ ಜಾಗತಿಕ ಮಟ್ಟದಲ್ಲಿ ಪ್ರತಿದಿನ ೨೫೦೦ ಲೀಟರ್ ನೀರು ಉಳಿತಾಯ ಆಗಬಹುದಂತೆ. ಮಾಂಸಾಹಾರಪ್ರಧಾನವಾದ ಅವರ ಅಹಾರದ ಪ್ರಮಾಣ ಮತ್ತು ನೀರ ಹೆಜ್ಜೆ ಎರಡೂ ದೊಡ್ಡದು.

ನೀರು ಧಾರಾಳ ಇರುವಲ್ಲಿ ಹೆಚ್ಚು ನೀರು ಬಯಸುವ ಬೆಳೆ, ಕೈಗಾರಿಕಾ ಉತ್ಪನ್ನ ತಯಾರಿಯನ್ನು ಬೆಂಬಲಿಸಿ ಅವುಗಳನ್ನು ನೀರು ಕೊರತೆಯ ಪ್ರದೇಶಗಳಿಗೆ ಸಾಗಿಸಬಹುದು. ಇದರಿಂದ ಪ್ರಾಂತೀಯ/ ರಾಷ್ಟ್ರೀಯ ಶಾಂತಿಪಾಲನೆಗೆ ಸಹಾಯವಾಗಬಹುದು.

ಅಲ್ಲಿಂದ ಇಲ್ಲಿಂದ ಕತ್ತರಿಸಿದ ಚಿತ್ರಗಳ ಹೊರತುಪಡಿಸಿದ ಈ ಬರಹದ  ಹೆಚ್ಚಿನ  ಭಾಗ  ಜೂನ್  ೨೦೦೯ರ ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Friday, April 03, 2009

ಮಳೆ ಕೊಯಿಲು ಅಮೇರಿಕದಲ್ಲಿ ಅಪರಾಧ

ಹೌದು. ಅಮೇರಿಕದಲ್ಲಿ ಕೆಲವು ರಾಜ್ಯಗಳಲ್ಲಿ ಮಳೆ ನೀರು ಕೊಯಿಲು ಕಾನೂನು ಬಾಹಿರ. ಹೊಳೆ ನೀರಿಗೆ ದೊಣ್ಣೆ ನಾಯಕ ಎನ್ನುವ ಅಮೇರಿಕದ ಕೆಲವು ರಾಜ್ಯಗಳ ಕಾನೂನುಗಳು ಭಲೇ ಮಜವಾಗಿದೆ. ಹಾಗಾಗಿ ಹಂಚಿಕೊಳ್ಳೋಣ ಅನ್ನಿಸಿತು


ಕೊಲರಾಡೊ ರಾಜ್ಯದಲ್ಲಿ ಪ್ರತಿ ಮಳೆಗೂ Kris Holstrom ಅಪರಾಧಿಯಾಗುತ್ತಾರೆ. ಕಾನೂನು ಉಲ್ಲಂಗಿಸಲು ಅವರು 200 ಲೀಟರ್ ಬಾರಲುಗಳನ್ನು ಉಪಯೋಗಿಸುತ್ತಾರೆ. ಈ ಪಾತ್ರೆಗಳಲ್ಲಿ ಹಿಡಿದ ಕರಗುವ ಹಿಮ ಹಾಗೂ ಮಳೆನೀರಿನಿಂದ ಅವರ ಪುಟ್ಟ ತರಕಾರಿ ತೋಟಕ್ಕೆ ನೀರಾವರಿ.

ಕ್ರಿಸ್ ಅವರು ಮಳೆಗೆ ಪಾತ್ರೆ ಹಿಡಿಯುವುದು ಜಗತ್ತಿನ ಹಲವೆಡೆ ಪರಿಸರವಾದಿಗಳು ಅನುಸರಿಸುತ್ತಿರುವ ಪ್ರಾಚೀನ ಸಂಪ್ರದಾಯ. ದೊರೆಯುವ ಮಳೆನೀರು ಮತ್ತು ಹಿಡಿಯುವ ಪಾತ್ರೆ ಅನುಸರಿಸಿ ಅವರವರ ಸಾಮರ್ಥ್ಯ ಅಗತ್ಯಗಳಿಗೆ ಹೊಂದಿಕೊಂಡು ಹಿಡಿಯುತ್ತಾರೆ. ಬಿಸಿಲಿಗೆ ಆವಿಯಾಗುವುವ ಅಡಚಣೆಯೊಂದಿಗೆ ಈ ತರ್ಲೆ ಸರಕಾರಿ ಕಾನೂನುಗಳು ತಡೆಯೊಡ್ಡುತ್ತವೆ.

ರಾಜ್ಯದ ಕಾನೂನು ಪ್ರಕಾರ ಮಳೆ ನೀರು ಅವರದಲ್ಲ. ನೂರು ವರ್ಷಗಳ ಹಿಂದೆ  ಹೊಳೆ ನೀರಿನ ಹಕ್ಕು ಹಂಚುವಾಗ ಪಡಕೊಂಡವರಿಗೆ ಸೇರಿದ್ದು. ಕ್ರಿಸ್ ಅವರಿಗೆ ರಾಜ್ಯದ ಕಾನೂನಿನ ಬಗೆಗೆ ಅವರಿಗೆ ಗುಮಾನಿ ಇತ್ತು. ಕಳೆದ ವರ್ಷ ಮಳೆ ನೀರು ಕೊಯಿಲಿನ ಪಾಠ ಮಾಡುವಾಗ ಸಂಬದ ಪಟ್ಟ ಅಧಿಕಾರಿಗಳ ಸಂಪರ್ಕಿಸಿ ಕೇಳಿದರು. ಮಳೆ ನೀರು ಕೊಯಿಲು ಈ ರಾಜ್ಯದಲ್ಲಿ ಕಾನೂನು ಬಾಹಿರ ಎನ್ನುವ ಉತ್ತರ ಸಿಕ್ಕಿದರೂ ಅವರಿಗೆ ದಂಡ ವಿಧಿಸುವ ಸಾದ್ಯತೆ ಇಲ್ಲವಂತೆ.

ಪ್ರಪಂಚದ ಎಲ್ಲೆಡೆ ಅಧಿಕಾರಿಗಳ ಧಿಮಾಕು ಒಂದೇ ತೆರನಾದುದು. ನೂರು ವರ್ಷ ಹಿಂದಿನ ಕಡತ ತೆಗೆಯುತ್ತಾರೆ. ಎಲ್ಲವೂ ಸಣ್ಣಮಟ್ಟಿನಲ್ಲಿಯೇ . ಪ್ರಾರಂಬ. ಪ್ರತಿ ಹನಿಯೂ ಅಮೂಲ್ಯ ಮತ್ತು ಕಣಿಯಿಂದ ತೋಡಿಗೆ, ತೋಡಿನಿಂದ ನದಿಗೆ ಎಂಬಂತೆ ನದಿಯ ಹರಿವಿಗೆ ಸಹಾಯಕ. ಒಬ್ಬರು ಮಳೆನೀರು ಹಿಡಿಯಲು ಸುರುವಿಟ್ಟರೆ ಇನ್ಯಾರಿಗೋ ಸೇರಿದ ಸೊತ್ತನ್ನು ಅಪಹರಿಸಿದಂತೆ ಅನ್ನುತ್ತಾರೆ ಅಲ್ಲಿನ ಸಂಬಂದ ಪಟ್ಟ ಅಧಿಕಾರಿಗಳು. ಕೊಲರಾಡೋ ರಾಜ್ಯದ ಅಧಿಕಾರಿಗಳ ಮಟ್ಟಿಗೆ ಸಂಗ್ರಹಿಸಿದ ಮಳೆ ನೀರು ಮಲೀನ ನೀರು. ಹುಲ್ಲು ಹಾಸು ಶೌಚಾಲಯದಲ್ಲಿ ಫ್ಲಶ್ ಮಾಡಲಷ್ಟೇ ಒಕೆ ಎನ್ನುವುದು ಅವರ ಹೇಳಿಕೆ.

ಕುಶಿಯ ವಿಚಾರ ಅಂದರೆ ಅಮೇರಿಕದಲ್ಲಿ ದೇವೆ ಗೌಡರಿಗೂ ನಮ್ಮಂತಹ ಜನಸಾಮಾನ್ಯರಿಗೂ ಒಂದೇ ಕಾನೂನು. ಅಲ್ಲಿನ ರಾಜ್ಯ ಮಟ್ಟದ ರಾಜಕಾರಣಿ ಶಾಸಕರಾದ ಕ್ರಿಸ್ ಹೋಮರ್ ಪರಿಸರ ಸ್ನೇಹಿ ಮನೆ ಕಟ್ಟಿದರು. ಪೂರ್ತಿ ಸೌರ ಶಕ್ತಿಯಲ್ಲಿ ನಿರ್ವಹಿಸುವ ಈ ಮನೆಯಲ್ಲಿ ಮಳೆ ನೀರು ಕೊಯಿಲು ಅಳವಡಿಸಲು ಸಾದ್ಯವಾಗಲಿಲ್ಲ. ಬಿದ್ದ ಮಳೆಯಲ್ಲಿ ಶೇಕಡಾ 97 ಇಂಗುತ್ತದೆ ಹೊರತು ಕಾಲುವೆಗೆ ಹರಿಯುವುದಿಲ್ಲ ಎನ್ನುವ ಮಾಹಿತಿಯೊಂದಿಗೆ ಕಳೆದ ವರ್ಷ ಮಳೆ ನೀರು ಕೊಯಿಲು ಕಾನೂನು   ರಾಜ್ಯದ ಶಾಸನ ಸಭೆಯಲ್ಲಿ  ಮಂಡಿಸಿದರೂ ಅನುಮೋಧನೆ ದೊರಕದೆ ಸೋತರು. ಈ ಸರಳ ವ್ಯವಸ್ಥೆ ಕಾನೂನು ಬಾಹಿರ ಎನ್ನಲು ಆಶ್ಚರ್ಯವಾಗುತ್ತದೆ ಎಂದವರು ಹೇಳುತ್ತಾರೆ.

ಅಂದ ಹಾಗೆ ಅಮೇರಿಕದ ಟೆಕ್ಸಾಸ್ ಪ್ರಾಂತ್ಯದಲ್ಲಿ ಒಬ್ಬರು ಮಳೆ ನೀರನ್ನು ಸಂಗ್ರಹಿಸಿ ಮೋಡದ ತಾಜಾ ಪಾನಿಯ ಎಂದು ಮಾರುತ್ತಾರಂತೆ. ಶ್ರೀ ರಿಚರ್ಡ್ ಅಮೇರಿಕದ ಪ್ರಥಮ ಮಳೆ ನೀರು ಬಾಟಲಿಗೆ ತುಂಬಿಸುವ ಮಾರಾಟಗಾರ.

http://www.truthout.org/031909EA

Sunday, March 22, 2009

ಅಡಿಕೆ ಹಾಳೆಯ ಬಗೆಗೆ

ಮಾನ್ಯ  ಶ್ರೀವತ್ಸ ಜೋಷಿಯವರು  ಈ ವಾರದ ವಿಜಯ ಕರ್ನಾಟಕದ ಅಂಕಣವನ್ನು    ಅಡಿಕೆ ಹಾಳೆಯಲ್ಲೇ ಉಣಬಡಿಸಿದ್ದಾರೆ. ಒಂದಷ್ಟು ಕಡೆ ಅಡಿಕೆ ಹಾಳೆ ಹಿಡಿದುಕೊಂಡು ಓಡಾಡಿದ ನನ್ನನ್ನೂ ಉಲ್ಲೇಖಿಸಿದ್ದಾರೆ. Thank you, Mr Srivathsa Joshi.

http://www.vijaykarnatakaepaper.com/epaper/pdf/2009/03/22/20090322a_008101001.jpg

ಅಡಿಕೆ ಹಾಳೆಗೆ ವಿಶ್ವ ಮಟ್ಟದ ಪ್ರಚಾರ ಸಿಗುವುದು ಸ್ವಾಗತಾರ್ಹ. ಆದರೆ ಈಗ ಹೆಚ್ಚಿನ ಕೃಷಿಕರಿಗೆ ಇಂದಿನ ಕೂಲಿಯಾಳುಗಳ ಕೊರತೆಯಿಂದಾಗಿ ಹಾಳೆಯನ್ನು ಬಿಡಿ ಅಡಿಕೆಯನ್ನು ತೋಟದಿಂದ ಮನೆಗೆ ತರುವುದೇ ಸಾಹಸ.


ಅಡಿಕೆ ಕೊಯಿಲಾದ ನಂತರ ಕನಿಷ್ಟ ಮೂವತ್ತು ಬಿಸಿಲು ತೋರಿಸಿ ಒಳ ಹಾಕಿದರೆ ನಾವು ಗೆದ್ದಂತೆ. ಒಂದೆಡೆ ವಿಪರೀತ ಸೆಕೆಯೊಂದಿಗೆ ವಿದ್ಯುತ್ ಕಣ್ಣುಮುಚ್ಚಾಲೆ, ನೀರಿನ ಪರದಾಟ. ಈಗೆಲ್ಲ   ಸಂಜೆಗಾಗುವಾಗ ದೂರದಲ್ಲಿ ಗುಡುಗು ಕೇಳಿದರೆ ಅಂಗಳದಲ್ಲಿರುವ ಅಡಿಕೆ ನೆನಪಿಸಿಕೊಂಡ ನಮ್ಮ ಎದೆ ಬಡಿತ ಪಕ್ಕದಲ್ಲಿರುವವರಿಗೂ ಕೇಳಿಸುತ್ತದೆ. ನಮ್ಮಲ್ಲಂತೂ ಬಾಕಿಯಾದ ಕೆಲಸದ ರಾಶಿ ನೋಡುವಾಗ ಮೂರ್ಛೆ  ಹೋಗುವುದು ಮಾತ್ರ ಬಾಕಿ. Paralysis by analysis ಅಂತಾರಲ್ಲ ಹಾಗೆ.   ಹಾಳೆಯನ್ನೂ  ಸಹಾ   ಇದೇ  ಸಮಯದಲ್ಲಿ  ಶೇಖರಿಸಬೇಕು.  

ವ್ಯಾಪಾರ ವ್ಯವಹಾರದಲ್ಲಾದರೆ ಇಂತಹ ಸಮಸ್ಯೆಗೆ Queuing theory ಪರಿಹಾರ ಬೊಟ್ಟುಮಾಡುತ್ತದೆ. ಸರಳವಾದ ಉದಾಹರಣೆ ಎಂದರೆ ಒಂದು ಸರ್ವಸರಕು ಮಳಿಗೆಯಲ್ಲಿ ಪಟ್ಟಿ ಮಾಡಿಸಿ ಹಣಕೊಡುವಲ್ಲಿ ಸರತಿಯ ಸಾಲು. ಪ್ರತಿ ನಿಮಿಷಕ್ಕೆ ಎಷ್ಟು ಗಿರಾಕಿ ವ್ಯಾಪಾರ ಮುಗಿಸುತ್ತಾರೆ ಮತ್ತು ಒಬ್ಬ ಕಾರಕೂನ ಎಷ್ಟು ಗಿರಾಕಿಗಳ ನಿಬಾಯಿಸಬಲ್ಲ ಎನ್ನುವ ವಿಚಾರದಲ್ಲಿ ಉತ್ತರ ದೊರಕಿಸಿಕೊಂಡು ಬೇಕಾದಷ್ಟು ಕಾರಕೂನರ ನೇಮಿಸಿ ಅನಗತ್ಯ ಸರತಿಯ ಸಾಲು ಉದ್ದವಾಗುವುದನ್ನು ತಪ್ಪಿಸಲು ಸಹಕರಿಸುತ್ತದೆ. ಆದರೆ ನಮ್ಮಲ್ಲಿ ಉತ್ತರವಿದ್ದರೂ ಕೂಲಿಯಾಳುಗಳೇ ಕಾಣಿಸದಿದ್ದರೆ ………..

ಇಂದು ಅಡಿಕೆ ಹಾಳೆಗೆ ರೈತರಿಗೆ ಸಿಗುವ ಐವತ್ತು ಪೈಸೆ  ಪರಿಗಣಿಸಿದರೆ    ಸಿಮಿತ  ಸಂಖ್ಯೆಯಲ್ಲಿ    ಸಿಗುವ   ದುಬಾರಿ ಕೃಷಿ   ಕಾರ್ಮಿಕರಿಂದಾಗಿ ಹಾಗೂ ಹಾಳೆಯೊಂದಿಗೆ   ಜಮೀನಿನಿಂದ ಹೊರ ಕಳುಹಿಸುವ ಪೋಷಕಾಂಶಗಳಿಂದಾಗಿ  ಲಾಭದಾಯಕವಲ್ಲ. ರೈತರು ನಷ್ಟವಾದರೂ ದನ ಸಾಕುತ್ತಾರೆ ಟೊಮೆಟೊ ಬೆಳೆಯುತ್ತಾರೆ. ಹಾಗೆಯೇ ಇದೊಂದು ನಗದು ಹಣದ ಮೂಲ.

ಕೃಷಿಕನ  ಮಟ್ಟಿಗೆ    ಅಡಿಕೆ ಮರದ ಹಾಳೆಯೂ ತ್ಯಾಜ್ಯವಲ್ಲ. ಅಡಿಕೆ ಮರಕ್ಕೆ  ಅಗತ್ಯವಿರುವ   ಸಾಕಷ್ಟು ಪೋಶಕಾಂಶವನ್ನು  ಹೊಂದಿದೆ.   ಉಪಯೋಗದ ಬಗೆಗೆ ಶ್ರೀ ಜೋಷಿಯವರೂ ಬೆಳಕು ಚೆಲ್ಲಿದ್ದಾರೆ. ಯಾವ ತ್ಯಾಜ್ಯವನ್ನೂ ನಾವು ತೋಟದಿಂದ ಹೊರಗೆ ಸಾಗಿಸದಿದ್ದರೆ ಅಡಿಕೆ ಮರಕ್ಕೆ ಬೇರೆ ಗೊಬ್ಬರ ಉಣಿಸುವುದು ಬೇಡ. ನಮಗೆ ಪೂರ್ತಿ ತ್ಯಾಜ್ಯವನ್ನು ಬುಡಕ್ಕೆ ಹಾಕಲು ಸಾದ್ಯವಾಗುತ್ತಿಲ್ಲ. ಅದುದರಿಂದ ಗೊಬ್ಬರ ಅವಲಂಬನೆ ಅನಿವಾರ್ಯವಾಗುತ್ತದೆ.
ಶ್ರೀ ಜೋಷಿಯವರು   ಹಾರೈಸಿದಂತೆ  ಬರಾಕ್  ಒಬಾಮರ  ಮಕ್ಕಳು  ಜಾರುಬಂಡಿಯಲ್ಲಿ  ಆಡಲು  ನೂಡಲ್ಸ್  ತಿನ್ನಲು  ನಮ್ಮೂರಿನಿಂದ   ಹೋದ   ಅಡಿಕೆಹಾಳೆ ತಟ್ಟೆಯನ್ನೇ  ಉಪಯೋಗಿಸಲೆಂದು   ಆಶಿಸೋಣ.

Tuesday, March 17, 2009

ಪತ್ರಿಕೆ ಎಂದರೆ ಕರಿ ಹಲಗೆ

ತಿಂಗಳ ಹಿಂದೆ ಅಡಿಕೆ ಪತ್ರಿಕೆ ಒಂದು ಪ್ರಶ್ನೆ ಹಾಕಿತ್ತು.   ಬ್ಲೋಗ್  ರೈತರಿಗೆ  ಗ್ರಾಮೀಣ ಜನರಿಗೆ  ಸಹಾಯಕವೇ ? ಆ  ಸಂಚಿಕೆಯ   ಸಂಪಾದಕೀಯ  ಹಾಗೂ  ಬರಹಗಳು   ಈ  ವಿಚಾರ  ಸಾಕಷ್ಟು   ಚರ್ಚೆ  ನಡೆಸಿದ್ದವು.    ಹೀಗೆ ಮಾದ್ಯಮ, ಸಂಪರ್ಕ, ಬ್ಲೋಗ್ ಇತ್ಯಾದಿಗಳು ಕಳೆದ ಒಂದು ತಿಂಗಳಿನಿಂದ ತಲೆ ತಿನ್ನುತ್ತಲೇ ಇರುವಾಗ    ಅಫ್ರಿಕದಿಂದ   ಒಂದು  ಯಶಸ್ವಿ ಪ್ರಯೋಗದ ಬಗೆಗೆ ಓದಿದೆ.  ಇದೊಂದು  ಕಂಪ್ಯುಟರ್  ಅವಲಂಬಿಸದ  ಬ್ಲೋಗ್.


ಮೇಲಿನ  ಚಿತ್ರದಲ್ಲಿ   ಅವರ  ಪತ್ರಿಕೆಯೊಂದಿಗೆ ಸಂಪಾದಕರು ನಿಂತಿದ್ದಾರೆ.  ಪಶ್ಚಿಮ ಆಫ್ರಿಕದಲ್ಲಿ ಪತ್ರಿಕೆ ಕೊಳ್ಳಲು ಚೈತನ್ಯವಿರದವರಿಗೆ ಅವರದೇ ಬಾಷೆಯಲ್ಲಿ ಸುದ್ದಿ ತಲಪಿಸುವ ಪ್ರಯತ್ನ ಈ Daily Talk ನಿತ್ಯ ಮಾತು. ಹಲವಾರು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆಯಂತೆ ಎನ್ನುವುದು ಈ ಮಾದರಿಯ ಬಗ್ಗೆ ಕುತೂಹಲ ಕೆರಳಿಸುತ್ತದೆ. ಚಾಪೆ ಕುರ್ಚಿ ಈಸಿಚೈರ್ ಎನ್ನುವ ನಮ್ಮ ಯಕ್ಷಗಾನ ಪ್ರದರ್ಶನದಂತೆ ತಳಕ್ಕೆ ಐದು, ಬದಿಯಲ್ಲಿ ಪ್ರಕಟಿಸಿದರೆ ಹತ್ತು ಮತ್ತು ಮುಖ್ಯ ಪುಟದಲ್ಲಿ ಇಪ್ಪತ್ತೈದು ನಮ್ಮ ಜಾಹಿರಾತು ದರಗಳು ಎನ್ನುವ ಈ ಪತ್ರಿಕೆಗೆ (?) ತೇಲುತ್ತಾ ಇರುವಷ್ಟು ಜಾಹಿರಾತು ಬೆಂಬಲವಿರುತ್ತದೆ.

ಸಂಪಾದಕ Alfred Sirleaf ಪಟ್ಟಣದ ಪ್ರಮುಖ ರಸ್ತೆಯಲ್ಲಿ ಕರಿಹಲಗೆಯಲ್ಲಿ ಬರೆಯುವ ಸುದ್ದಿಯೇ ಪತ್ರಿಕೆ. ವಿದ್ಯುತ್ ಅವಲಂಬನೆ ಇಲ್ಲದ ತೀರಾ ಸರಳವಾದ ವ್ಯವಸ್ತೆ. ಊರ ಪರಊರ ಗೆಳೆಯರು ಇವರ ಸಂಚಾರವಾಣಿಗೆ ಸುದ್ದಿಯನ್ನು ಕಳುಹಿಸುತ್ತಲೇ ಇರುತ್ತಾರೆ. ದಿನವೊಂದಕ್ಕೆ  ಆ  ದಾರಿಯಾಗಿ  ಓಡಾಡುವ   ಹತ್ತು ಸಾವಿರ ಜನ ಓದುಗರು. ಪತ್ರಿಕೆ ಓದುವವರೆಲ್ಲರೂ   ಅಕ್ಷರ ಜ್ನಾನ ಇರುವವರಲ್ಲ. ಈ ಅನಕ್ಷರಸ್ತರಿಗೆ ತಲಪಲು ಸಂಕೇತಗಳ ಚಿತ್ರಗಳ ಉಪಯೋಗ ದಾರಾಳ.

ನನಗೆ ಈ ವಿಚಾರ ಪ್ರಾಮುಖ್ಯ ಎನಿಸಲು ಇನ್ನೊಂದು ಕಾರಣವೆಂದರೆ ಪಕ್ಕದ Guinea Bissau ಎಂಬ ಹದಿನಾರು ಲಕ್ಷ ಜನಸಂಖ್ಯೆಯ ದೇಶದಲ್ಲಿ ಕಳೆದ ಮೂರು ತಿಂಗಳಿನಿಂದ ಪತ್ರಿಕೆಗಳಿಂದ ಸುದ್ದಿ ಪೊರೈಕೆ ಇಲ್ಲ. ದೇಶದ ಐದು ನಿಯತಕಾಲಿಕಗಳು ಮುದ್ರಣ ಕಾಗದ ಕೊರತೆಯಿಂದ ಮುಚ್ಚಿವೆ. ನಾವು ನೆದರ್ಲಾಂಡಿನಲ್ಲಿ ಖರೀದಿಸುತ್ತಿದ್ದ ಮಾಲು ಈಗ  ಅಲ್ಲಿನ  ಮಾರುಕಟ್ಟೆಯಲ್ಲಿ ಇಲ್ಲ. ಬೇರೆ ಮೂಲಗಳಿಂದ ಪಡೆಯಲು ನಮಗೆ ಆರ್ಥಿಕ ಚೈತನ್ಯವಿಲ್ಲ ಎನ್ನುತ್ತಾರೆ ಪತ್ರಿಕಾ ಮುದ್ರಕರು.

ಗೋಡೆ ಬರಹ ನಮಗೇನು ಹೊಸತಲ್ಲ. ವಿಟ್ಲದ ಅಡಿಕೆ ವ್ಯಾಪಾರಿಯೊಬ್ಬರು ರಸ್ತೆಗೆ ಕಾಣುವಂತೆಯೇ ಅಂಗಡಿಯ ಗೋಡೆಯಲ್ಲಿ   ಕರಿಬಣ್ಣ   ಬಳಿದು   ಅದರಲ್ಲಿ   ದಿನದ ಅಡಿಕೆ ಖರೀದಿ ದರ ಬರೆಯುತ್ತಿದ್ದರು. ಅಲ್ಲಿ ದಾಟುವಾಗ ಗೋಡೆಯ ಮೇಲೊಮ್ಮೆ ನಮ್ಮ ಕಣ್ಣುಗಳು ಹಾಯ್ದು ಮಾಹಿತಿಯನ್ನು ಹೀರಿಕೊಳ್ಳುತ್ತಿತ್ತು.  ಈಗ ಈ ಪ್ರಯೋಗ ನಿಂತಿದೆ.

ಇಂದು SMS ಅಗ್ಗವಾಗಿದೆ.   ಆದರೆ   ತಲಪುವ ಸಾದ್ಯತೆ ಮಾತ್ರ ೫೦:೫೦ ಅನ್ನಬಹುದು.   ಶಾಲೆಗೆ ಇಂದು ರಜೆ, ಹಳೆ ಅಡಿಕೆಗೆ ೧೦೩, ತರಕಾರಿ ಅಗ್ಗ- ಟೊಮೆಟೊ ಆರು, ಸೊಸೈಟಿಯಲ್ಲಿ ಸುಫಲ ಲಬ್ಯ  ಇಂತಹ ಸುದ್ದಿ ಹಾಗೂ ಎಚ್ಚರಿಸುವ SMS ಕಳಿಸುವ ವ್ಯವಸ್ಥೆ    ಪ್ರಾಯೋಗಿಕ  ಎನಿಸಲೂ   ಬಹುದು.

ಈ  ಮದ್ಯೆ ಊರ ಸುದ್ದಿ  ಹಂಚುವ   ವಿಚಾರವನ್ನು    ನಾನು  ನನ್ನ   ಇ-ಪತ್ರದಲ್ಲಿ  ಬರೆದ  ಗೆಳೆಯರಿಗೆ  ವಿವರಿಸಲು  ಒಂದು  ತಾತ್ಕಾಲಿಕ  ಮಾದರಿಯನ್ನು  ಸಿದ್ದಪಡಿಸಿದೆ.  ಹಲವಾರು   ಮಾಹಿತಿ  ಹಂಚುವ   ಸಾದ್ಯತೆಗಳು.  ಗೆಲ್ಲುವ  ಕುದುರೆಯನ್ನು  ಕಾಲವೇ    ನಿರ್ದರಿಸುವುದು.

Wednesday, December 10, 2008

ಅಂತೂ ಕೈಗೆ ಸಿಕ್ಕಿತು ನ್ಯಾಯಾಲಯ ತೀರ್ಪು

ರಿಲಿಯನ್ಸ್ ಸ್ಥಾವರವಾಣಿಯ ಕಳಪೆ ಗುಣಮಟ್ಟದ ಸೇವೆಗೆ ಅವರನ್ನು ಗ್ರಾಹಕ ನ್ಯಾಯಾಲಯಕ್ಕೆ ಒಯ್ದ ಸಂಗತಿ ಮೊದಲು ಬರೆದಿದ್ದೆ. ಕೊನೆಗೂ ಗ್ರಾಹಕ ನ್ಯಾಯಾಲಯದಿಂದ ನವೆಂಬರ್ ೧೪ ರಂದು ತೀರ್ಪು ಕೊಡಲ್ಪಟ್ಟಿತು. ಅನಂತರ ಇಪ್ಪತ್ತು ದಿನಗಳು ಕಳೆದು ಅಂತರ್ಜಾಲದಲ್ಲಿ ಲಬ್ಯವಾಯಿತು. ಇಲ್ಲಿದೆ ಸಂಪರ್ಕ ಕೊಂಡಿ.

http://cms.nic.in/ncdrcrep/judgement/18542167-07--14.11.08.htm

ಈ ಹೋರಾಟದ ಬಗೆಗೆ ಬರೆಯುವುದಾದರೆ ನಾನು ಈ ಬಗ್ಗೆ ಹತ್ತಕ್ಕೂ ಹೆಚ್ಚು ಬಾರಿ ನನ್ನ ಮನೆಯಿಂದ   ೫೦ ಕಿಮಿ ದೂರಲ್ಲಿರುವ  ಮಂಗಳೂರಿಗೆ ಹೋಗುವುದು ಅಗತ್ಯವಾಗಿತ್ತು. ನನ್ನ ಆರೋಗ್ಯದ ಬಗೆಗೆ ಅವರು ಅಲ್ಲಗಳೆಯಲು ಜಿಲ್ಲಾ ಆರೋಗ್ಯದಿಕಾರಿಗಳ ಪ್ರಮಾಣ ಪತ್ರ ಒದಗಿಸಿದ್ದೇನೆ. ಅವರು ನನ್ನ ದೂರುಗಳಿಗೆ ಸ್ಪಂದಿಸಲಿಲ್ಲ ಎನ್ನುವುದಕ್ಕೂ ಸಾಕಷ್ಟು ರುಜುವಾತು ಒದಗಿಸಿದ್ದೇನೆ. ಹತ್ತ್ತಕ್ಕೂ ಹೆಚ್ಚು e mail ಪಡಿಯಚ್ಚುಗಳು. ಅಸಂಖ್ಯ ದೂರವಾಣಿ ಕರೆಗಳು. ಇವೆಲ್ಲವೂ ಖರ್ಚಿನ ಬಾಬುಗಳು. ಕೊನೆಗೆ ಪರಿಹಾರದ ಮೊತ್ತ ನಾನು ಮಾಡಿದ ಖರ್ಚಿನ ಅರ್ಧ ಭಾಗವನ್ನೂ ತುಂಬಿ ಕೊಡದಿರುವುದು ವಿಷಾದನೀಯ.

ಕೆಲವೊಮ್ಮೆ ಪರಿಹಾರ ತೃಪ್ತಿಕರ ಎನಿಸುವುದಿಲ್ಲ. ತಪ್ಪು ರುಜುವಾತು ಪಡಿಸಿದಲ್ಲಿ ಕೂಡ ಸರಿಯಾದ ಪರಿಹಾರ ದೊರಕುವುದಿಲ್ಲ ಎಂದರೆ ಗ್ರಾಹಕರು ಏಕೆ ನ್ಯಾಯಾಲಯಕ್ಕೆ ಹೋಗುತ್ತಾರೆ ? ಇದು ಎಂತಹ ಸಂದೇಶ ರವಾನಿಸುತ್ತದೆ. ಯೋಚಿಸಿದರೆ ಈ ಗ್ರಾಹಕ ನ್ಯಾಯಾಲಯಕ್ಕೆ ದೂರು ಒಯ್ಯುವುದು ಎಂದರೆ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದಂತೆ. ಸೇವಾ ನ್ಯೂನತೆ ಸರಿಪಡಿಸಿಕೊಳ್ಳುವ ಒತ್ತಡ ಸದಾ ಸೇವೆ ಕೊಡುವವರ ಮೇಲಿರಬೇಕು. ಇಲ್ಲವಾದರೆ ಅವರು ನಡೆದದ್ದೇ ದಾರಿ.

ಲಕ್ಷಕ್ಕೊಬ್ಬ  ಗ್ರಾಹಕರು  ಇವರನ್ನು   ನ್ಯಾಯಾಲಯಕ್ಕೆ   ಕರೆದೊಯ್ಯುವುದು. ಮುಖ್ಯ  ಕಾರಣ  ರುಜುವಾತು ಸಂಗ್ರಹ   ಕಷ್ಟ.   ಅಲ್ಲೂ    ಬರೇ ಪುಡಿಗಾಸು ಪರಿಹಾರ ಕೊಡುವುದಾದರೆ ಆ ಕಂಪೇನಿಗಳಿಗೆ ತಿದ್ದಿಕೊಳ್ಳುವ ಅಗತ್ಯವೇ ಇರುವುದಿಲ್ಲ. ದೂರವಾಣಿ ಬಳಕೆದಾರ ಅಪೇಕ್ಷಿಸದ ಹಾಗೂ ಉಪಯೋಗಿಸದ ಸೇವೆಗೆ ಉದಾಹರಣೆ ಸಂಗೀತದ ಕಾಲ್ ಟ್ಯೂನ್ ಜೋತಿಷ್ಯ ಶಾಸ್ತ್ರ ಕ್ರಿಕೆಟು ಸುದ್ದಿ ಇತ್ಯಾದಿಗಳಿಗೆ ಹಣ ವರ್ಗಾವಣೆಯಾಗುವುದು ಸಾಮಾನ್ಯ ಎಂಬಂತಾಗಿದೆ. ಸಲೀಸಾಗಿ ಇಂತ ಕ್ಷೌರಕ್ಕೆ  ಕುಳ್ಳಿರುಸುತ್ತಾರೆ.   ನಂತರ ಇದರಿಂದ ಪಾರಾಗುವ ಬಗೆಗೆ ಅವರ ಗ್ರಾಹಕ ಸೇವಾ ಸಿಬಂದಿಗಳಲ್ಲೂ ಸ್ಪಷ್ಟ ಉತ್ತರವಿರುವುದಿಲ್ಲ.

ನಾವು ದಿನವೊಂದರಲ್ಲಿ ಕಾಣುವ ಅನ್ಯಾಯ ಅನಾಚಾರದ ಬೆನ್ನಟ್ಟಲು ಈ ಜೀವಮಾನವೇ ಸಾಲದು. ನಮ್ಮ ಹಳ್ಳಿ ರಸ್ತೆಯಲ್ಲಿ ಕೇರಳಕ್ಕೆ ಕಾನೂನು ಬಾಹಿರವಾಗಿ ಮರಳು ಸಾಗಿಸುವ ಲಾರಿಗಳು ಪುನಃ ಪ್ರತ್ಯಕ್ಷವಾಗಿವೆ. ಯಾರೂ ಮಾತನಾಡುತ್ತಿಲ್ಲ. ದೆಹಲಿಯಿಂದ ಬಂದ ಕೋಟಿ ರೂಪಾಯಿ ನುಂಗಿದ ನಮ್ಮ ಹಳ್ಳಿ ರಸ್ತೆಯಲ್ಲಿ ಆರು ತಿಂಗಳಲ್ಲೇ  ಹೊಂಡಗಳು ಕಾಣಲು ಪ್ರಾರಂಬವಾಗಿವೆ. ಎಲ್ಲರೂ ಸುಮ್ಮನಿದ್ದಾರೆ. ನಾಲ್ಕಾರು ಬಿಎಸೆನೆಲ್ ಟವರ್ ಗಳು ಹತ್ತು ಕಿಮಿಯೊಳಗಿದ್ದು ಒಮ್ಮೊಮ್ಮೆ ನಿಲುಕುವುದಾದರೂ ನಮ್ಮ ಮೊಬೈಲ್ ತರಂಗ ಸೂಚನೆ ದಿನದ ಹೆಚ್ಚಿನ ಬಾಗ ತೋರಿಸುವುದು ಶೂನ್ಯ. ಪಟ್ಟಣದ ಅಂಗಡಿಗೆ ಹೋದರೆ ಅಲ್ಲಿ ಕಂಪ್ಯುಟರ್ ಬಳಸಿ ಹೊಸ ರೀತಿಯ ಟೋಪಿ ಹಾಕಿಸ್ಕೊಳ್ಳುವ ಅವಕಾಶ. ಎಲ್ಲ ತೇರಿಗೆಗಳು ಸೇರಿದ ಮಾರಾಟ ದರಕ್ಕೆ ವಾಟ್ ಸೇರಿಸುವುದು ಮೇಲ್ನೋಟಕ್ಕೆ ನಮಗೆ ಗೊತ್ತಾಗದ ವಿಚಾರ.

ಶ್ರೀ ಶಿವರಾಮ ಕಾರಂತರು ಹೇಳಿದಂತೆ ಸಾಮಾನು ಕದ್ದರೂ ಕಳ್ಳ ಸಮಯ ಕದ್ದರೂ ಕಳ್ಳ. ಹೀಗೆ ಸೇವಾ ನ್ಯೂನತೆ ಮತ್ತು ಭ್ರಷ್ಟಾಚಾರ ಎರಡೂ ಸಮಾಜಕ್ಕೆ ದ್ರೋಹವೇ.     ಈ   ತರಹದ  ಹೋರಾಟ  ಎಂದರೆ  ಒಂದು  ರೀತಿಯಲ್ಲಿ  ಪ್ರವಾಹದ  ವಿರುದ್ದ  ಈಜುವುದು.  ಬೇರೆ   ಕೆಲಸ  ಇಲ್ಲವೇ  ಎಂಬ  ಮೂದಲಿಕೆ  ಕೇಳಲು  ನಾವು ತಯಾರಿರಬೇಕಾಗುತ್ತದೆ.   ಎಲ್ಲರೂ ಅವರಿವರು ಸರಿ ಮಾಡಲೆಂದು ಪ್ರತಿಭಟಿಸಲೆಂದು ಕಾಯುತ್ತಾರೆ. ಇದು ಬೆಕ್ಕಿಗೆ ಗಂಟೆ ಯಾರು ಕಟ್ಟುವುದು ಎನ್ನುವಂತಹ ಸಮಸ್ಯೆ.

Friday, November 21, 2008

ಗ್ರಾಹಕ ನ್ಯಾಯಾಲಯದಲ್ಲಿ ಉಗಿಸಿಕೊಂಡ ರಿಲಿಯನ್ಸ್ ಪೋನ್

ಅಂತೂ ಗೆದ್ದದ್ದು ನಾವೇ. ಇತ್ತೀಚೆಗೆ ನಾನೊಂದು ಕದನದಲ್ಲಿ ತೊಡಗಿಸಿಕೊಂಡಿದ್ದೆ.ಕಳಪೆ ಗುಣಮಟ್ಟದ ಸೇವೆಗೆ ರಿಲಿಯನ್ಸ್ ದೂರಸಂಪರ್ಕ ಸಂಸ್ಥೆಯನ್ನು ಗ್ರಾಹಕ ನ್ಯಾಯಾಲಯಕ್ಕೆ ಅನಿವಾರ್ಯವಾಗಿ ಎಳೆಯಬೇಕಾಯಿತು.  ಮೂರು ತಿಂಗಳಿನಿಂದ ವಾಯಿದೆಯಾಗುತ್ತಿದ್ದ  ತೀರ್ಪು ಕೊನೆಗೂ  ಹೊರಬಂದಿದೆ.


ನನ್ನ ಮನೆಯ ದೂರವಾಣಿ ಕಾಡಿನ ಮದ್ಯೆ ಸರಿಗೆ ಬರುವ ಕಾರಣ ಅಗಾಗ ಹಾಳಾಗುತಿತ್ತು. ನನ್ನ ದೈಹಿಕ ಸಮಸ್ಯೆ ಹಾಗೂ ಹಳ್ಳಿಯಲ್ಲಿ ವಾಸವಾಗಿರುವ ಕಾರಣ ನಂಬಲರ್ಹ ಇನ್ನೊಂದು ದೂರವಾಣಿ ತುರ್ತು ಅಗತ್ಯಕ್ಕೆ ಇರಲಿ ಎಂದು ರಿಲಿಯನ್ಸ್ ಸ್ಥಾವರವಾಣಿ ಪಡಕೊಂಡೆ.

ರಿಲಿಯನ್ಸ್ ದೂರವಾಣಿಯದು ಅತ್ಯಾದುನಿಕ ಸಂಪೂರ್ಣ ಯಂತ್ರವೇ ನಿಯಂತ್ರಿಸುವ ಜಾಲ. ಎರಡು ತಿಂಗಳ ಉತ್ತಮ ಸೇವೆ. ಒಮ್ಮೆ ತೆರ ಬೇಕಾದ ಮೊತ್ತ  ಮತ್ತು ಹಣ ಕಟ್ಟಲು ಕೊನೆಯ ದಿನಾಂಕ ಎರಡನ್ನೂ ನಮೂದಿಸದ ಬಿಲ್ ನನ್ನ ಕೈಸೇರಿತು. ಬಿಲ್ಲಿನ ಮೊತ್ತಕ್ಕಿಂತ ಹೆಚ್ಚು ನನ್ನ ಹಣ ಅವರಲ್ಲಿದ್ದ ಕಾರಣ ನಾನು ಸುಮ್ಮನಿದ್ದೆ.

ಹತ್ತು ದಿನ ಕಳೆದು . ರಿಲಿಯನ್ಸ್ ಕಛೇರಿಯಿಂದ ಹಣ ಕಟ್ಟಲು ಆದೇಶಿಸುವ ಹಾಗೂ ಸಂಪರ್ಕ ಕಡಿತ ಸೂಚಿಸುವ ಕರೆಗಳನ್ನು ಮಾಡಿದರು. ಆಗ ನಾನು ನನ್ನ ಹಣ ನಿಮ್ಮಲ್ಲುಂಟು. ಯಾವುದೇ ಬಾಕಿ ಇಲ್ಲ. ದಯವಿಟ್ಟು ಕಡಿತಮಾಡಬೇಡಿ. ಅಗತ್ಯವಿದ್ದರೆ ಪಟ್ಟಣಕ್ಕೆ ಹೋದಾಗ ಖಂಡಿತ ಕಟ್ಟುತ್ತೇನೆ ಎಂದು ಪರಿಪರಿಯಾಗಿ ವಿನಂತಿಸಿದೆ. ಆದರೂ ಸಂಪರ್ಕ ಕಡಿತಗೊಂಡಿತು. ಒಂದು ವಾರ ಬಳಿಕ ಹಣ ಕಟ್ಟಿ ಸಂಪರ್ಕಕ್ಕೆ ಜೀವ ತುಂಬಿದೆ.

ತೆರೆಮರೆಯಲ್ಲಿ ಆದದ್ದೇನು ಅಂದರೆ ನನ್ನ ಹಣ ಮತ್ತು ಜೀವಾವದಿ ಅವದಿ ಅರ್ಜಿ ಬಾಕಿಯಿಟ್ಟು ಬಿಲ್ ಮಾಡಿದ್ದು. ಅನಂತರ ಆ ಅರ್ಜಿಯನ್ನು ಅಂಗೀಕರಿಸಿ ಹಣ ವರ್ಗಾಯಿಸಿದಾಗ ನನ್ನ ಖಾತೆಯಲ್ಲಿ ಕನಿಷ್ಟ ಠೇವಣಿಯಲ್ಲಿ ಕೊರತೆ ಕಂಪ್ಯುಟರಿಗೆ ಕಂಡಂತಾಯಿತು. ಸಂಪರ್ಕ ಕಡಿಯುವಾಗಲೂ ನನ್ನ ಖಾತೆಯಲ್ಲಿ ಹಣ ಕೊರತೆ ಇರಲಿಲ್ಲ. ಆದರೂ ಯಂತ್ರಕ್ಕೆ ಒದಗಿಸಿದ ಮಾನದಂಡಗಳ ಅನುಸರಿಸಿ ಅದು ನನ್ನ ಬಾಕಿದಾರ ಎಂದು ಪರಿಗಣಿಸಿ ಸಂಪರ್ಕಕ್ಕೆ ಕತ್ತರಿ ಪ್ರಯೋಗವಾಯಿತು.

ಕಛೇರಿಗಳಲ್ಲಿ ಗ್ರಾಹಕ ಸಂಪರ್ಕ ಸ್ಥಾನಗಳಲ್ಲಿ ಒರಟು ವರ್ತನೆಯ ಬೇಜವಾಬ್ದಾರಿ ವ್ಯಕ್ತಿಗಳ ನೇಮಿಸುತ್ತಿರುವುದೂ ಸಮಸ್ಯೆಗೆ ಕಾರಣಗಳಲ್ಲೊಂದು.  ಗೆಳೆಯ   ದಿನಕರ್ ಹೇಳುವಂತೆ ಹಲವರಿಗೆ ಅವರ ಚೆಲುವಿಗೆ ಕೆಲಸ ಸಿಕ್ಕಿರುತ್ತದೆ ಹೊರತು ವ್ಯವಹಾರಿಕ ಕುಶಲತೆಗೆ ಅಲ್ಲ. ಬಾಲ ನೋಡಿ ಕುದುರೆ ಕೊಂಡುಕೊಂಡಂತೆ.  ಪರಿಣಾಮ ನಾವು ಪಡ್ಚ ಆಗುವುದು.

ಕಂಪ್ಯುಟರ್ ಕಕ್ಕುವ ಮಾಹಿತಿಯನ್ನು ವಿಷ್ಲೇಸಿಸುವ ಸಾಮರ್ಥ್ಯ ಇವರಿಗೆ ಇಲ್ಲದೆ ತೊಂದರೆ ಉಳಿದುಕೊಳ್ಳುತ್ತದೆ. ಡಾಕ್ಟ್ರೆ ನಾನಿನ್ನೂ ಸತ್ತಿಲ್ಲ, ಬದುಕಿದ್ದೇನೆ ಎನ್ನುವ ರೋಗಿಯ ಮಾತಿಗೆ ನೀನು ಬದುಕಿದ್ದಿ ಅಂತ ನಾನು ಹೇಳಬೇಕು ಎಂದು ಡಾಕ್ಟ್ರು ಹೇಳಿದಂತೆ ಇವರ ಪ್ರತಿಕ್ರಿಯೆ.  ಕಂಪ್ಯುಟರ್ ತಂತ್ರಾಂಶ ಬರೆಯುವಾಗ ಹಾಗೂ ಮಾಹಿತಿ ಉಣಿಸುವಾಗ ಬಹಳ ಜಾಗ್ರತೆ ವಹಿಸಿರುತ್ತಾರೆ. ಸಂಬಾವ್ಯ ಅಡಚಣೆಗಳನ್ನೆಲ್ಲ ಊಹಿಸಿ ಪರಿಹಾರ ರೂಪಿಸಿರುತ್ತಾರೆ. ಆದರೂ ಕೆಲವು ತಪ್ಪುಗಳು ನುಸುಳುತ್ತವೆ. ಜವಾಬ್ದಾರಿ ಕುರ್ಚಿಯಲ್ಲಿರುವವರಿಗೆ ಗೊತ್ತಾದರೆ ಇಂತಹ ಸಮಸ್ಯಯ ಜಾಡು ಹಿಡಿದು ಹಿಂಬಾಲಿಸಿ ಸರಿಪಡಿಸುತ್ತಾರೆ. . ತಕ್ಷಣ ತಮ್ಮ ಹಿರಿಯ ಅದಿಕಾರಿಗಳ ಸಂಪರ್ಕಿಸುವಂತಹ ಪರ್ಯಾಯೊಪಾಯಗಳ ಕೈಗೊಳ್ಳುವ ಬದಲು ಗ್ರಾಹಕರನ್ನು ರೇಗುವುದು ಸುಲಭದ ದಾರಿ.

ವಾರಕ್ಕೊಮ್ಮೆ ಇ-ಮೈಲ್ ನೆನಪೋಲೆ ರವಾನಿಸುತ್ತಿದ್ದೆ. ಪ್ರತಿ ಸಲ ದೂರು ದಾಖಲಾದಾಗಲೂ ಸ್ವಿಕೃತ ಉತ್ತರದೊಂದಿಗೆ ಕ್ರಮ ಸಂಖ್ಯೆ ಸಿಗುತ್ತಿತ್ತು. ಜತೆಯಲ್ಲಿ ನಮ್ಮ ತಂತ್ರಜ್ನರು ನಿಮ್ಮ ಸಮಸ್ಯೆ ವಿಚಾರದಲ್ಲಿ ಕಾರ್ಯನಿರತರಾಗಿದ್ದಾರೆ ಎನ್ನುವ ಸಮಜಾಯಿಷಿ. ಒಮ್ಮೆ ನಿಮ್ಮ ತಂತ್ರಜ್ನರು ಮಂಗಳೂರಿನಿಂದ ತೆವಳಿಕೊಂಡು ಬಂದರೂ ಈಗಾಗಲೇ ತಲಪಬೇಕಾಗಿತ್ತು ಎನ್ನುವ ನನ್ನ ಪತ್ರಕ್ಕೂ ಸಿಕ್ಕಿದ್ದು ಕ್ರಮ ಸಂಖ್ಯೆ ಮಾತ್ರ.

ನಿಸ್ತಂತು ದೂರವಾಣಿ ಸಂಪರ್ಕ ನಿರ್ದಿಷ್ಟ ವಿಳಾಸಕ್ಕೆಂದು ಕೊಡಲ್ಪಡುತ್ತದೆ. ಅದನ್ನು ತಾಲೂಕಿನೊಳಗೆ ಜಾಗ ಬದಲಾಯಿಸಿದರೂ ಸಮಸ್ಯೆ ಇಲ್ಲ. ಕಂಪೇನಿಯವರು ಆಚೆ ಈಚೆ ತಾಲೂಕಿನಲ್ಲಿ ಹೊಸ ಹೊಸ ಹೆಚ್ಚು ಶಕ್ತಿಯುತವಾದ ಟವರ್ ಹಾಕಿದಾಗ ನನ್ನ ದೂರವಾಣಿ ಸ್ಥಬ್ದವಾಗುತಿತ್ತು. ಸರಿಪಡಿಸಲು ಸರಳ ವಿಷಯವಾದ ನನ್ನ ದೂರವಾಣಿಗೆ ಹೊಸ ಸಂಖ್ಯೆ ಕೊಡಲು ಹಲವು ಬಾರಿ ದೊರು ಕೊಟ್ಟರೂ ಸಹಾ   ಎರಡು ಸಲವೂ  ಒಂದೂವರೆ ತಿಂಗಳು ತೆಗೆದುಕೊಂಡು ಸತಾಯಿಸಿದಾಗ ನಾನು ತಾಳ್ಮೆ ಕಳಕೊಂಡೆ. ಹೀಗೆ ಮುನ್ನೂರು ದಿನದಲ್ಲಿ ನೂರು ದಿನಕ್ಕೊ ಹೆಚ್ಚು ಸೇವೆ ವಂಚಿತ ಗ್ರಾಹಕನಾಗಿ ನಾನು ಕಾನೂನಿಗೆ ಶರಣಾದೆ.

ದಾಖಲೆಗಳ ಸಮೇತ ನ್ಯಾಯವಾದಿ ಶ್ರಿ ದರ್ಬೆ ಈಶ್ವರ ಭಟ್ಟರು ನನ್ನ ಪರವಾಗಿ ಸಮರ್ಥವಾಗಿ ವಾದಿಸಿದರು ಹಾಗೂ ನ್ಯಾಯಾಲಯ ನಾನು ಹಾಜರುಪಡಿಸಿದ ದಾಖಲೆಗಳ ಪರಿಶೀಲಿಸಿ ನಮ್ಮ   ವಾದವನ್ನು ಪುರಸ್ಕರಿಸಿತು. ಇಷ್ಟೆಲ್ಲ  ಆದರೂ  ನನಗೆ  ಸಿಕ್ಕಿದ್ದು  ಜುಜುಬಿ  ಪರಿಹಾರ.        ಈಗ    ಶಸ್ತ್ರ ಕ್ರಿಯೆ   ಯಶಸ್ವಿ  ಮತ್ತು  ರೋಗಿ  ಸತ್ತ  ಎನ್ನುವ  ಅನುಭವ.

ದಕ್ಷಿಣ  ಕನ್ನಡ   ಜಿಲ್ಲಾ ಗ್ರಾಹಕ ವೇದಿಕೆ    ಈ ರಿಲಯನ್ಸ್ ಸಂಸ್ಥೆಯ ಸೇವಾ ನ್ಯೊನತೆಗಾಗಿ ಎರಡು  ಸಾವಿರ   ರೊಪಾಯಿ ಪರಿಹಾರ ಒಂದು  ಸಾವಿರ     ರೂಪಾಯಿ ನ್ಯಾಯಾಲಯ ವೆಚ್ಚ ನೀಡುವಂತೆ ತೀರ್ಪು ನೀಡಿತು.    ಹೆಚ್ಚಿನ  ವಿವರಗಳು  ಇನ್ನೂ  ಅಲಭ್ಯ.  ನಾನು  ಇದಕ್ಕೆ  ಮಾಡಿದ  ಒದ್ದಾಟ   ಹಾಗೂ  ನನ್ನ  ಅಭಿಪ್ರಾಯ    ಇನ್ನೊಮ್ಮೆ  ಬರೆಯುವೆ.

ಟೆಲಿಫೋನ್ ವಿಚಾರದಲ್ಲಿ ತಿಂಗಳುಗಟ್ಟಲೆ ಸತಾಯಿಸಿದಂತಹ ನನ್ನ ಅನುಭವಕ್ಕೆ ಹೋಲುವಂತಹ ಕಥೆ ಇಂಗ್ಲೇಂಡಿನಿಂದಲೂ ಬಂದಿದೆ. ಮನೆಯವರಿಗೆ ಸ್ಟ್ರೋಕ್ ಆದ ಕ್ಷಣದಲ್ಲೇ ಗ್ರಾಮೀಣ ಪ್ರದೇಶದ ಆ ದೂರವಾಣಿ ಸಂಪರ್ಕ ಕತ್ತರಿಸಲ್ಪಟ್ಟಿದೆ. ವಿಷಯ ಅರಿತ ದೂರದಲ್ಲಿರುವ ಮಗಳಿಂದ ದೂರವಾಣಿ ಕಛೇರಿಗೆ ಹಲವಾರು ಕರೆಗಳು. ಒಂದಂತೂ 80 ನಿಮಿಷದ ದೀರ್ಘ ಹಾಗೂ ನಿಷ್ಪ್ರಯೋಜಕ ಸಂಬಾಷಣೆ. ಅಂತೂ 40 ಘಂಟೆಗಳ ಅನಂತರ ಸಂಪರ್ಕ. ಅನಂತರ ಗುಣಮುಖಗೊಳ್ಳುತ್ತಿದ್ದ ರೋಗಿಗೆ ತಪ್ಪೊಪ್ಪಿಗೆಗಳ ಸುರಿಮಳೆ. ಗ್ರಾಹಕರ ಬಗೆಗಿನ ಕಾಳಜಿ ಹೆಚ್ಚಿರುವ ಇಂಗ್ಲೇಂಡಿನಲ್ಲಿ ಹೀಗಾದರೆ ನಮ್ಮಲ್ಲಿ ??? ನಾನು ಹೇಳಲಿಚ್ಚಿಸಿದ ಈ ಗ್ರಾಹಕ ಮತ್ತು ಸೇವೆ ಪೊರೈಸುವವರ ನಡುವಿನ ವಿಚಾರವನ್ನು ಇಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ವಿವರಗಳಿಗೆ ಇಲ್ಲಿ  ಕ್ಲಿಕ್ಕಿಸಿ.

ಎರಡೆರಡ್ಲಿ ನಾಲ್ಕು ಎನ್ನುವ ಲೆಕ್ಕದಲ್ಲಿ ಕಂಪ್ಯುಟರ್ ತಪ್ಪುವುದಿಲ್ಲ. ಕಂಪ್ಯುಟರ್ ಕೊಡ ತಪ್ಪಿ ಬೀಳಬಹುದೆನ್ನುವ ನನ್ನ ಅನುಭವಗಳಲ್ಲಿ ಸಮಸ್ಯೆ ಇರುವುದು ತಂತ್ರಾಂಶದಲ್ಲಿರುವ ಅಂದಿನ ವರೆಗೆ ಗುರುತಿಸಲ್ಪಡದ ಹುಳುಕು. ಮುಂದೆ ಕಂಪ್ಯುಟರ್ ಅವಲಂಬನೆ ಹೆಚ್ಚಿದಂತೆ ಇಂತಹ ತೊಂದರೆ ಆಗಾಗ ಮರುಕಳಿಸಬಹುದು. ಮಾಮೂಲಿ ರೀತಿಯ ಸಮಸ್ಯೆಗಳ ನಿವಾರಣೆಗೆ ನಿರ್ದಿಷ್ಟ ವ್ಯವಸ್ತೆ ಚೆನ್ನಾಗಿ ಕೆಲಸ ಮಾಡುತ್ತದೆ. ಈ ರೀತಿ ಅನಿರೀಕ್ಷಿತವಾಗಿ ತಲೆ ಚಚ್ಚಿಕೊಳ್ಳುವಂತಹ ಸಮಸ್ಯೆಗಳು ಎದುರಾಗಬಹುದೆಂಬ ತಿಳುವಳಿಕೆ ನಮ್ಮಲ್ಲಿದ್ದರೆ ಪರಿಹಾರ ಕಾಣುವುದು ಸುಲಬವೆನ್ನುವ ನೆಲೆಯಲ್ಲಿ ಈ ಬರಹ ಬರೆದಿದ್ದೇನೆ.

ದೂರವಾಣಿ  ದೈತ್ಯನೊಂದಿಗೆ   ನಡೆದ    ಈ  ಹೋರಾಟಕ್ಕೆ    ನಮ್ಮ   ಕುಟುಂಬ ವೈದ್ಯರಾದ   ಡಾ| ಕೆ. ಜಿ. ಭಟ್ ಅವರು ಕೊಟ್ಟ   ಮಾರ್ಗದರ್ಶನ   ನೈತಿಕ  ಬೆಂಬಲವನ್ನೂ  ಸ್ಮರಿಸಿಕೊಳ್ಳುತ್ತೇನೆ.     . ಈ ಅನುಭವ ನಿಮಗೂ ಆಗಬಹುದು ಎನ್ನುವ ವಿಚಾರ ನೆನಪಿರಲಿ.

Wednesday, October 01, 2008

ನೀರ ನೆಮ್ಮದಿ ಕೊಡುವ ಮಳೆನೀರಿನ ಬ್ಯಾಂಕು

ಕುಡಿಯುವ ನೀರಿಗಾಗಿ ಒತ್ತಡ ಹಾಗೂ ಮಳೆ ನೀರು ಕೊಯಿಲಿನ ಆಸಕ್ತಿ ಎರಡೂ ಸೇರಿ ನಮ್ಮಲ್ಲೊಂದು ಮಳೆ ನೀರ ಶೇಖರಣೆ ಟಾಂಕ್ ಮೂರು ವರ್ಷ ಹಿಂದೆ ನಿರ್ಮಾಣವಾಯಿತು.


ನಮ್ಮಲ್ಲಿ ಮಳೆರಹಿತ ದಿನಗಳು ೨೨೦ ಮೀರುವುದಿಲ್ಲ. ನಮ್ಮ   ಕರಾವಳಿ  ಪ್ರದೇಶದ  ಒಂದು ಸಾಮಾನ್ಯ ಕುಟುಂಬಕ್ಕೆ ಹತ್ತರಿಂದ ಹದಿನೈದು ಸಾವಿರ ಲೀಟರ್ ನೀರಿನ ಟಾಂಕ್ ದಾರಾಳ ಸಾಕು. ಆದರೆ ಅಂದಿನ ಪರಿಸ್ಥಿತಿ ನಮ್ಮನ್ನು ನಲುವತ್ತು ಸಾವಿರ ಲೀಟರ್ ದಾಸ್ತಾನಿನ ಟಾಂಕಿಗೆ ಒತ್ತಡ ಹಾಕಿತು.


ಸೌರ  ವಿದ್ಯುತ್  ಚಾಲನೆಯನ್ನು  ಅಳವಿಡಿಸಿರುವ  ನಮ್ಮ   ವ್ಯವಸ್ಥೆಯಿಂದಾಗಿ ಮನೆ  ಬಳಕೆ  ನೀರಿನ  ಮತ್ತು  ಬೆಳಕಿನ  ಮಟ್ಟಿಗೆ  ನಾವು  ಸಂಪೂರ್ಣ  ಸ್ವಾವಲಂಬಿಗಳೆಂದರೂ  ಸರಿಯೇ.    ಈ ನಮ್ಮ ಅನುಭವಗಳ ಅಡಿಕೆ ಪತ್ರಿಕೆ ಅಕ್ಟೋಬರ್ ೨೦೦೮ ಸಂಚಿಕೆಯಲ್ಲಿ ಪ್ರಕಟಿಸಿದ್ದು   ಅದನ್ನು  ನಿಮ್ಮ    ಮುಂದಿಡುತ್ತಿದ್ದೇನೆ.

Wednesday, September 24, 2008

ಹೀಗೊಂದು ಸೌರ ಶಕ್ತಿ ಚಾಲಿತ ಶೀತಕ



 ಸೌರಶಾಖವನ್ನೇಕೆ   ನಮ್ಮ   ಶೀತಕ   ಅನುಸರಿಸ ಬಾರದೆನ್ನುವ ಯೋಚನೆ ನನಗೆ ಮೊದಲು ಬಂದಿತ್ತು.  ಸೀಮೆ ಎಣ್ಣೆ ದೀಪ ಉರಿಸಿ ತಂಪಾಗಿಸುವ ಪುರಾತನ ಕಾಲದ ಫ್ರಿಡ್ಜ್ ಗಳು ಬಹಳ ಹಿಂದೆ ನೋಡಿದ್ದೆ. ಸುಮಾರು ನಲುವತ್ತು ವರ್ಷ ಹಿಂದೆ ಯಂತ್ರ ಚಾಲಿತ ಫ್ರಿಡ್ಜ್ ಗಳು ಬರುವ ವರೆಗೆ ಅವುಗಳು ಜನಪ್ರಿಯವಾಗಿದ್ದವು. ಕ್ರಮೇಣ ಅವುಗಳ ತಯಾರಿ ನಿಂತು ಅವುಗಳೆಲ್ಲ ಮೂಲೆ ಪಾಲಾದವು.

ಇದರ  ತಂತ್ರಜ್ನಾನ   ಹೊಸತಲ್ಲ.  ಇಂದಿನ    ಫ್ರಿಡ್ಜುಗಳು  ತುಂಬಾ  ವಿದ್ಯುತ್  ಅಪೇಕ್ಷಿಸುವ  ಯಂತ್ರಾವಲಂಬಿಯಾಗಿದೆ.  ಯಂತ್ರದ  ಮೂಲಕ  ಒತ್ತಡ  ಹೆಚ್ಚಿಸುವ  ಬದಲಿಗೆ  ಶಾಖ ಮೂಲಕ  ಹೆಚ್ಚಿಸುವ  ಕ್ರಿಯೆ  ಸರಳ.   ನೂರು  ವರ್ಷ ಹಿಂದೆ  ಅಗ್ಗದ  ಪೆಟ್ರೋಲ್   ವಿದ್ಯುತ್  ವಾಹನ  ಅವಿಶ್ಕಾರ  ತಡೆಗಟ್ಟಿದಂತೆ  ನಲುವತ್ತು  ವರ್ಷ    ಹಿಂದೆ  ಅಗ್ಗದ  ವಿದ್ಯುತ್  ಈ  ಸರಳ  ಶೀತಕಗಳನ್ನು  ಮಾರುಕಟ್ಟೆಯಿಂದ  ಓಡಿಸಿತು  ಅನ್ನಬಹುದು. 

ಇತ್ತೀಚೆಗೆ    ಅಮೇರಿಕದ ಸಾನ್ ಜೋಸ್ ವಿಶ್ವವಿದ್ಯಾಲಯದ ಚುರುಕು ಮೆದುಳುಗಳೆಲ್ಲ ಸೇರಿ ಇಂತಹ ಸೂರ್ಯನ ಶಾಖ ಬಳಸಿ ಮಂಜುಗಡ್ಡೆ ತಯಾರಿಸುವ ಯಂತ್ರ ರೂಪಿಸುವುದರಲ್ಲಿ ಸಫಲರಾಗಿದ್ದಾರೆ. ಯಾವುದೇ ಚಲಿಸುವ ಬಾಗಗಳಿಲ್ಲದ ಅದು ಬರೇ ಒಂದು ರಸಾಯನಿಕ ಕ್ರಿಯೆಯಲ್ಲಿ ಮಂಜುಗಡ್ಡೆ ಉತ್ಪಾದನೆ ಮಾಡುತ್ತದೆ.

ಉಬ್ಬಿನ ಪ್ರತಿಫಲಿಸುವ ಹಲಗೆಯನ್ನು ಉಪಯೋಗಿಸಿ ಬೆಳಕು ಮತ್ತು ಶಾಖವನ್ನು ಕೊಳವೆ ಮೇಲೆ ಕೇಂದ್ರೀಕರಿಸುವುದರಿಂದ ಇದರಲ್ಲಿ ತುಂಬಿಸಿರುವ ದ್ರಾವಣ ಅನಿಲ ರೂಪಕ್ಕೆ ಪರಿವರ್ತನೆಯಾಗುತ್ತದೆ. ಸೂರ್ಯ ಮುಳುಗಿದ ನಂತರ ಒತ್ತಡದ ವ್ಯತ್ಯಾಸದಿಂದಾಗಿ ಈ ಅನಿಲ ರೂಪ ವಿಪರೀತ ಶಾಖವನ್ನು ಕಳಕೊಳ್ಳುವ ಮೂಲಕ ತಣ್ಣಗಾಗಿಸಿ ಇದರಲ್ಲಿ ಸುಮಾರು ಆರು  ಕಿಲೊ ಐಸ್ ತಯಾರಾಗುತ್ತದೆ. ಈ ದ್ರವ  ತಣ್ಣಗಾಗುವಾಗ   ೧೦೪  ಡಿಗ್ರಿ ಫಾರಿನ್ ಹೀಟ್ ಅಂದರೆ ಸುಮಾರು ೪೦ ಡಿಗ್ರಿ ಸೆಂಟಿಗ್ರೇಡ್ ದಾಟಿದ ನಂತರ  ವೇಗವಾಗಿ ಶಾಖವನ್ನು ಕಳಕೊಳ್ಳುವ ಕಾರಣ ಇದು ಉಷ್ಣವಲಯದಲ್ಲೂ ಕೆಲಸ ಮಾಡಲು ಸಾದ್ಯ. ಯಾವುದೇ ಚಲಿಸುವ ಬಾಗಗಳಿಲ್ಲದ ಕಾರಣ ಹಾಳಾಗುವ ಸಾದ್ಯತೆಗಳು ಅತ್ಯಲ್ಪ.   ಪೈಪು ತೂತಾಗದಂತೆ ನೋಡಿಕೊಂಡರೆ ಸೈ.


ಮನೆಯಲ್ಲಿ ಆಹಾರ ಪದಾರ್ಥಗಳ ಮತ್ತು ವೈದ್ಯಕೀಯ ಲಸಿಕೆಗಳ ಮದ್ದುಗಳ ಬಹುಕಾಲ ಇಟ್ಟುಕೊಳ್ಳಲು ಇದು ಸಹಾಯ ಆಗಬಹುದು. ವಿದ್ಯುತ್ ಶಕ್ತಿ ಲಬ್ಯವಾಗದ ಸ್ಥಳಗಳಲ್ಲೂ ಇದು ಚೆನ್ನಾಗಿ ಕೆಲಸ ಮಾಡಬಲ್ಲದು. ನಮ್ಮಲ್ಲಿರುವಂತೆ ದಿನಕ್ಕೆ ಎಂಟು ಘಂಟೆ ವಿದ್ಯುತ್ ಕಡಿತ ಇರುವಲ್ಲಿಗೂ   ಬಹಳ   ಉಪಯುಕ್ತ.    ವಿಪರ್ಯಾಸ ಎಂದರೆ ನಮ್ಮಂತೆ ಹಳ್ಳಿಗರ ಮನೆಯಲ್ಲಿ ಅತಿ ಹೆಚ್ಚು ವಿದ್ಯುತ್ ಬಳಸುವುದು ಶೀತಕವೇ.   ಇದಿಲ್ಲವಾದರೆ  ನಾವು  ಮನೆ ಬಳಕೆ    ವಿದ್ಯುತ್  ಮಟ್ಟಿಗೆ   ಸ್ವಾವಲಂಬಿಗಳು.