Saturday, December 26, 2009

ತವರು ಅರಸಿದ ನಮ್ಮ ಕಾಡಿನ ಹುಲಿ ಮತ್ತು ಪ್ರಪಂಚದ ಅನಾಥ ಹುಲಿಗಳು.

ಇಂದಿನ ಕನ್ನಡ ಪ್ರಭ ಪತ್ರಿಕೆಯಲ್ಲಿ ತವರನ್ನರಸಿ ೪೦೦ ಕಿಮಿ ಹುಲಿಯಾನ ತಲೆಬರಹ ಕುತೂಹಲಕರವಾಗಿತ್ತು. ಕಾಡು ಗುಡ್ಡ ಜನವಸತಿ ಪ್ರದೇಶ ಹಾಗೂ ನದಿಗಳನ್ನು ಈ ಹುಲಿರಾಯ ಆರಾಮವಾಗಿ ದಾಟಿ ನಾಲ್ಕು ನೂರು ಕಿಮಿ ಬಂದಿದ್ದ. ನಮ್ಮ ದೇಶದಲ್ಲಿ ಅಧಿಕಾರಿಗಳ ರಾಜಕಾರಣಿಗಳ ಪೆದ್ದುತನಕ್ಕೆ ಕೆಳಗಿನ ಲಿಮಿಟ್ ಇಲ್ಲವೆನ್ನುವುದಕ್ಕೆ ಇದೊಂದು ಸಾಕ್ಷಿ.   ಮದ್ರಾಸಿನ ಅನಾಥಾಶ್ರಮದಲ್ಲಿರುವ  ಮಕ್ಕಳು  ನೋಡಲು ಚಂದ ಇಲ್ಲ. ಹಾಗಾಗಿ ಚಂದಾಗಿರುವ ಕೊಳಗೇರಿಯಲ್ಲಿರುವ ಮಕ್ಕಳನ್ನು ಅಪಹರಿಸಿ ಪರದೇಶಕ್ಕೆ ರಪ್ತು ಮಾಡುವ ಒಂದು ಜಾಲದ ಬಗೆಗೆ ಹಿಂದೆ ಬರೆದಿದ್ದೆ. ಅಂತೆಯೇ ಎಲ್ಲವೂ ಸರಿಯಾಗಿದ್ದ ಒಂದು ಹುಲಿಯನ್ನು ಅಪರಿಚಿತ ಪ್ರದೇಶಕ್ಕೆ ಕೊಂಡುಹೋಗಿಬಿಡುವ ವರ್ತನೆಯ ಔಚಿತ್ಯ ಪ್ರಶ್ನಿಸುವಂತಾಗಿದೆ.

ಎಪ್ಪತ್ತರ ದಶಕದಲ್ಲಿ ೧೨೦೦ ಹುಲಿಗಳು ಮಾತ್ರ ಬಾರತದ ಕಾಡುಗಳಲ್ಲಿ ಉಳಿದುಕೊಂಡಿದ್ದವು. ಇಪ್ಪತ್ತು ವರ್ಷದಲ್ಲಿ ಅದು ೩೫೦೦ ಕ್ಕೇರಿದರೂ ನಂತರದ ಇಪ್ಪತ್ತು ವರ್ಷಗಳಲ್ಲಿ ಬಹಳಷ್ಟು ಕುಸಿದಿದೆ. ೨೦೦೮ರ ಹುಲಿಗಣತಿ ಪ್ರಕಾರ ಬರೇ ೧೪೧೧ ಹುಲಿಗಳು ಉಳಿದುಕೊಂಡಿವೆ. ಇದರಲ್ಲಿ ಕೃತಕವಾಗಿ ನಿರ್ಮಿಸಲ್ಪಟ್ಟ ಕಾಲಿನ ಅಚ್ಚುಗಳೂ ಸೇರಿವೆ. ಕೆಲವು ರಕ್ಷಿತಾರಣ್ಯದಲ್ಲಿ (?) ಸಂಪೂರ್ಣ ಕಾಣೆಯಾಗಿದೆ. ಹುಲಿಗಳು ಬೇಟೆಗಾರರಿಗೆ ಆಹುತಿಯಾಗುವುದು ಅಧಿಕಾರಿಗಳ ನಿರ್ವಹಣಾ ವೈಫಲ್ಯ ಹೊರತು ನೈಸರ್ಗಿಕ ಕಾರಣಗಳಲ್ಲ.


ಈಗ ಬಾರತ, ಚೀನಾ ಮತ್ತು ಸೈಬೀರಿಯಾದಲ್ಲಿ ಹುಲಿಗಳು ನಿರ್ನಾಮವಾಗುತ್ತಿದ್ದರೆ ಅಮೇರಿಕದಲ್ಲಿ ಅದೊಂದು ಬಹು ಬೇಡಿಕೆಯ ಅಹಂಕಾರದ, ಪ್ರತಿಷ್ಠೆಯ ವಸ್ತುವಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಇಂದು ಅಮೇರಿಕದಲ್ಲಿ ಹನ್ನೆರಡು ಸಾವಿರ ಹುಲಿಗಳಿವೆ.. ಆದರೆ ಇಡೀ ಜಗತ್ತಿನ ಕಾಡುಗಳಲ್ಲಿ ಹುಡುಕಿದರೆ ಇದರ ಅರ್ಧದಷ್ಟೂ ಇಲ್ಲ. ಇಪ್ಪತೈದು ಸಾವಿರ ರೂಪಾಯಿ ಕೊಟ್ಟರೆ ಕಿತ್ತಳೆ ಬಣ್ಣದ ಹುಲಿ ಮರಿಯನ್ನು ಖರೀದಿಸಬಹುದು. ಹೌದು. ಅಮೇರಿಕದ ಟೆಕ್ಸಾಸ್ ಪ್ರಾಂತ್ಯದಲ್ಲಿ ಹುಲಿ ಮರಿ ಖರೀದಿ ಕಾನೂನುಬದ್ದವಾಗಿರುತ್ತದೆ.

ಅಮೇರಿಕದಲ್ಲಿ ಹೇಗೆ ಇಷ್ಟೋಂದು ಹುಲಿಗಳು ಎನ್ನುವ ಪ್ರಶ್ನೆ ಸ್ವಾಭಾವಿಕ. ಅಲ್ಲಿ ಇತ್ತೀಚಿನ ವರೆಗೆ
ಹುಲಿ ಮರಿ ವ್ಯವಹಾರ ಲಾಭದಾಯಕ. ವರ್ಷಕ್ಕೆ ಎರಡು ಬಾರಿ ಎಂಟು ಮರಿ ಹಾಕುವ ಹುಲಿಮರಿಗಳು - ಬಿಳಿ ಬಣ್ಣವಾದರೆ ಸಾಕಿದವನಿಗೆ ಮೂವತ್ತು ಲಕ್ಷ ರೂಪಾಯಿ ತರಬಲ್ಲದು. ಈ ಹುಲಿಮರಿಗಳನ್ನು ದೇಶಾದ್ಯಂತ ಪ್ರದರ್ಶನಕ್ಕೆ ಕೊಂಡು ಹೋಗುವ ಚಿಕ್ಕ ಪುಟ್ಟ ಸಂಸ್ಥೆಗಳಿವೆ. ಹುಲಿಮರಿಯೊಂದಿಗೆ ಅಂದರೆ ಅದನ್ನು ಅಪ್ಪಿಕೊಳ್ಳುವ ಬಾವಚಿತ್ರಕ್ಕೆ ಕೇವಲ ಒಂದು ಸಾವಿರ ರೂಪಾಯಿ. ಅಲ್ಲಿನ ಕಾನೂನು ಪ್ರಕಾರ ಆರು ತಿಂಗಳಿಂದ ಹೆಚ್ಚು ಪ್ರಾಯದ ಮರಿಗಳನ್ನು ಇದಕ್ಕೆ ಉಪಯೋಗಿಸುವಂತಿಲ್ಲ. ಅವು ಮನುಷ್ಯರಿಗೆ ಅಪಾಯಕಾರಿಯಾಗಬಹುದು. ಆಗ ಈ ಸಾವಿರಾರು ಜನರೊಂದಿಗೆ ಪೋಟೊ ತೆಗಿಸಿಕೊಂಡ ಮರಿ ಹುಲಿಯನ್ನು ಬಿಸಾಕಿ ಇನ್ನೊಂದು ಪುಟ್ಟ ಮರಿಯನ್ನು ಪಡಕೊಳ್ಳುತ್ತಾರೆ. ಟೆಕ್ಸಾಸಿನಲ್ಲಿ ಸುಮಾರು ಇಪ್ಪತ್ತು ಜನ ಇಂತಹ ದೊಂಬರಾಟದವರಿದ್ದಾರೆ.

ಕ್ರಿಸ್ಮಸ್ ಹಬ್ಬಕ್ಕೆ ಮಕ್ಕಳಿಗೆ ಪುಟಾಮಿ ಬೆಕ್ಕಿನ ಮರಿ ಎನ್ನುವ ಚಟ ಇಂದು ಹುಲಿಮರಿ ಎನ್ನುವ ವರೆಗೆ ತಲಪಿದೆ. ನಿಜ, ಪುಟಾಣಿ ಹುಲಿ ಮರಿಗಳು ಚಂದ ಕಾಣುತ್ತವೆ. ಆದರೆ ೩೦೦ ಕಿಲೊ ತೂಗಿ ದಿನಕ್ಕೆ ಹತ್ತು ಕಿಲೊ ಆಹಾರ ಅಂದರೆ ಮಾಂಸ ಅಪೇಕ್ಷಿಸುವಾಗ ಯಜಮಾನ ಸುಸ್ತಾಗುತ್ತಾನೆ. ಇಂದು ಮೃಗಾಲಯಗಳು ಹುಲಿಯನ್ನು ದಾನ ಮಾಡುತ್ತೇನೆ ಎಂದರೆ no thanks ಎನ್ನುತ್ತಿವೆ. ಬೇಡವಾದ ಹುಲಿಗಳು ನೆಲಮಾಳಿಗೆಯಲ್ಲಿ ಕಟ್ಟಿ ಹಾಕಲ್ಪಟ್ಟಿವೆ, ಪುಟ್ಟಬೋನಿನಲ್ಲಿ ಸೊರಗುತ್ತಿವೆ, ರಸ್ತೆಯಲ್ಲಿ ಅಡ್ಡಾಡುತ್ತಿವೆ. ವಾಹನದ ಅಡಿಗೆ ಸಿಕ್ಕ ಹುಲಿಗಳ ಉದಾಹರಣೆ ಇದೆ.

ಪದ್ಯಹೇಳುತ್ತಿದ್ದ ದೀ| ಮೈಕಲ್ ಜಾಕ್ಸನ್ ಗುದ್ದುಗಾರ ಮೈಕ್ ಟೈಸನ್ ಇವರೆಲ್ಲ ಹುಲಿ ಒಡೆಯರಾಗಿದ್ದವರು. ಕೆಲವು ವರ್ಷ ಹಿಂದೆ ಟಾರ್ಜನ್ ಪಾತ್ರದ ನಟನ ಹುಲಿ ತಪ್ಪಿಸಿಕೊಂಡು ಇಪ್ಪತ್ತಾರು ಗಂಟೆ ಸತಾಯಿಸಿ ಕೊನೆಗೆ ಗುಂಡಿಗೆ ಎದೆಯೊಡ್ಡಿತು. ಹಲವು ಮಾದಕ ವಸ್ತು ಕಳ್ಳಸಾಗಾಣಿಕೆಗಾರರಿಗೆ ಹುಲಿಗಳೇ ಕಾವಲು ನಾಯಿಗಳು. ಅಂತಹ ಕಳ್ಳಸಾಗಾಣಿಕೆದಾರರಿಂದ ಜಪ್ತಿಯಾದ ಹುಲಿ ಸಿಂಹ ಮತ್ತು ಕರಡಿ ಮರಿಗಳು ಜತೆಯಾಗಿಯೇ ಬೆಳೆದವು.  ಒಂದೇ ಆವರಣದಲ್ಲಿ ವಾಸಿಸುವ ಎಂಟು ವರ್ಷದ ಈ ತ್ರಿಮೂರ್ತಿಗಳು ಭಾರಿ ದೋಸ್ತಿಗಳು.





ಅಮೇರಿಕದಲ್ಲಿ ಈ ಅನಾಥ ಪ್ರಾಣಿಗಳ ಸಾಕಲು ಹಲವು ಖಾಸಗಿ ಅಭಯದಾಮಗಳಿವೆ. ಇದೊಂದು ರೀತಿಯಲ್ಲಿ ವೃದ್ದಾಶ್ರಮಗಳೆನ್ನಬಹುದು. ಅವು ಬದುಕಿರುವ ವರೆಗೆ ಸಾಕುತ್ತಾರೆ. ಕೊಲ್ಲುವುದಿಲ್ಲ, ಮರಿ ಹಾಕಿಸುವುದಿಲ್ಲ, ಖರೀದಿ ಮಾರಾಟ ಯಾವುದೂ ಅಲ್ಲಿ ನಡೆಯುವುದಿಲ್ಲ. ಇಂತಹ ಒಂದು ಅಭಯದಾಮದವರು   ನಾವು ವರ್ಷಕ್ಕೆ ೧೫೦ ಕ್ಕೂ ಮಿಕ್ಕಿ ಪ್ರಾಣಿಗಳ ತಿರಸ್ಕರಿಸುತ್ತೇವೆ. ಪ್ರಾಣಿಗಳ ಜತೆಗೆ ಅದನ್ನು ಪ್ರೀತಿಯಿಂದ ಸಾಕಿದವರ ಧನ ಸಹಾಯ ಅಪೇಕ್ಷಿಸುತ್ತೇವೆ ಅಂತಹ ಪ್ರಾಣಿಗಳ ಅವುಗಳ ಕೊನೆಗಾಲದ ವರೆಗೆ ಸಾಕುತ್ತೇವೆ ಎನ್ನುತ್ತಾರೆ.

ಬಿಳಿ ಹುಲಿ ಮರಿಗೆ ಬೇಡಿಕೆ ಹೆಚ್ಚು. ಎಲ್ಲವೂ ಸುಮಾರು ಐವತ್ತು ವರ್ಷ ಹಿಂದೆ ಅಮೇರಿಕಕ್ಕೆ ತಂದ ಬಿಳಿ ಹುಲಿಯೊಂದರ ಸಂತತಿ. ಹತ್ತಿರದ ಸಂಬಂಧದಲ್ಲೇ ಬೆಳೆಸಿದ ಸಂಬಂಧ ಎನ್ನುವ ಇವುಗಳಿಗೆ ಅನುವಂಶಿಕ ಆರೋಗ್ಯ ಸಮಸ್ಯೆಗಳು ಹೆಚ್ಚು. ಮೆಳ್ಳೆಗಣ್ಣಿನ ಚಿತ್ರದಲ್ಲಿರುವ ಬಿಳಿ ಹುಲಿಯೂ ಅನುವಂಶಿಕ ತೊಂದರೆಗಳ ಅನುಭವಿಸುತ್ತದೆ. ಕುರುಡುತನ, ಕಿಡ್ನಿ ಸಮಸ್ಯೆ ಇತ್ಯಾದಿ ಸಾಮಾನ್ಯವಾಗುತ್ತಿದೆಯಂತೆ. ಆನುವಂಶಿಕ ತೊಂದರೆ ಇರಬಹುದಾದ ಈ ಹುಲಿಗಳಲ್ಲಿ ಮರಿ ಹಾಕಿಸುವಂತಿಲ್ಲ. ಮನುಷ್ಯನ ಹೆದರಿಕೆ ಇರದ ಮತ್ತು ಕಾಡಿನ ನಡುವಳಿಕೆ ಅರಿಯದ ಇವುಗಳನ್ನು ಸಂಪೂರ್ಣ ಕಾಡು ಪ್ರಾಣಿಯನ್ನಾಗಿ ಮಾಡುವುದು ಕಷ್ಟ. ಆದರೆ ಕೊಟ್ಯಾಂತರ ರೂಪಾಯಿ ಖರ್ಚು ಮಾಡಿ ಸ್ಥಳಾಂತರ ಮಾಡುವ ಬದಲು ಪ್ರವಾಸಿಗಳಿಗೆ ತೋರಿಸಲು ಇವುಗಳು ಸಾಕು. ಆಹಾರ ಹಾಕುತ್ತಾ ಇದ್ದರಾಯಿತು.





ಪರದೇಶದಿಂದ ತಂದು ಸಾಕುವುದು ಹೊಸ ವಿಚಾರವಲ್ಲ. ಈಗ ಬನ್ನೇರುಘಟ್ಟ ಉದ್ಯಾನದಲ್ಲಿರುವ ಹುಲಿಗಳೆಲ್ಲವೂ ಯುರೊಪಿನಲ್ಲಿ ಸಾಕುಪ್ರಾಣಿಗಳಾಗಿದ್ದವು. ಅದೇ ರೀತಿಯಲ್ಲಿ ಪನ್ನ ಪಾರ್ಕಿನಲ್ಲಿ ಹುಲಿಗಳು ನೀರ್ನಾಮ ಹೊಂದಿದ್ದರೆ ಒಂದು ತನ್ನದೇ ತಿರುಗಾಟದ ವಲಯ ಹೊಂದಿದ್ದ ಹುಲಿಯನ್ನು ಹಿಡಿದು ಇನ್ನೊಂದು ಕಡೆ ಬಿಡುವುದರ ಬದಲು ಬಿಸಾಕು ದರದಲ್ಲಿ ಅಮೇರಿಕದಲ್ಲಿ ಸಿಗುವ ಅನಾಥ ಹುಲಿಯನ್ನು ಅಲ್ಲಿ ಬಿಡಬಹುದಾಗಿತ್ತು. ಅಂದರೆ ಒಂದು ಉದ್ಯಾನವನದಿಂದ ಇನ್ನೊಂದಕ್ಕೆ ಸ್ಥಳಾಂತರಿಸುವ ಬದಲು ಅಮೇರಿಕದಿಂದ ಅನಾಥ ಹುಲಿಗಳನ್ನು ತಂದು ಬಿಟ್ಟರೆ ಉತ್ತಮ ಪರಿಹಾರವಾಗಬಹುದು. ಒಂದುವರೆ ಕೋಟಿ ಎರಡು ಹುಲಿಗಳ ಸ್ಥಳಾಂತರಕ್ಕೆ ಖರ್ಚು ಮಾಡುವ ಸರಕಾರ ಈ ಅನಾಥ ಹುಲಿಗಳ ತರಿಸಿ ಸಾಕಬಹುದು.


ಬಾರತ ಹಾಗೂ ಇನ್ನಿತರ ಚೀನಾದ ಆಸುಪಾಸಿನ ದೇಶಗಳಿಗೆ ಈ ಅನಾಥ ಹುಲಿಗಳ ಸ್ಥಳಾಂತರಗೊಳಿಸಿದರೆ ಕಾಡಿನಲ್ಲಿರುವ ಹುಲಿಗಳು ಉಳಿಯಬಹುದು. ಹುಲಿ ಕಳ್ಳಸಾಗಾಣಿಕೆಯ ಮೂಲವೇ ಚೀನಾದಲ್ಲಿರುವ ಅಪಾರ ಬೇಡಿಕೆ. ಏಕಚಕ್ರಾಪುರದವರು ಬಕಾಸುರನೊಂದಿಗೆ ಮಾಡಿಕೊಂಡ ಒಪ್ಪಂದದಂತೆ ನಮ್ಮ ಹುಲಿಕಳ್ಳರಿಗೂ ವರ್ಷಕ್ಕೆ ನಾಲ್ಕು ಕೊಡುತ್ತೇವೆ ಅನ್ನಬಹುದು. ಮತದಾರರಾದ ಅವರೂ ಬದುಕಬೇಕಲ್ಲಾ |  ಜೈರಾಮ  ಎಲ್ಲಿದ್ದಿಯಾ  ಮಹರಾಯ ?   ನಮ್ಮಲ್ಲಿ  ಹುಲಿ ಕೊಂದವರಿಗೆ   ಕಾನೂನು ಒಳಪಡುವುದಕ್ಕೆ ಶಿಕ್ಷೆಯಾಗುವುದಕ್ಕೆ ಜಾತಿ ಪ್ರಶ್ನೆ ಎದುರಾಗುತ್ತದೆ.

ಮೂರು ತಿಂಗಳ ಹಿಂದೆ ನಮ್ಮ ಪರಿಸರ ಸಚಿವರು ಹುಲಿ ಸಂತತಿ ರಕ್ಷಣೆಯ ಮಹತ್ವವನ್ನು ಜಾಗತಿಕ ಮಟ್ಟದಲ್ಲಿ ಸಾರುವ ಉದ್ದೇಶದಿಂದ 2010ನೇ ಇಸವಿಯನ್ನು ಭಾರತ ಅಂತರರಾಷ್ಟ್ರೀಯ ಹುಲಿ ವರ್ಷವಾಗಿ ಆಚರಿಸಲಿದೆ ಎಂದು ಅಪ್ಪಣೆ ಕೊಡಿಸಿದ್ದಾರೆ. ಮುಂದಿನ ವರ್ಷ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ವರ್ಷಾಚರಣೆಗೆ ವಿದ್ಯುಕ್ತ ಚಾಲನೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಅದೇ ವರ್ಷ ನವೆಂಬರ್ನಲ್ಲಿ ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ಕಾರ್ಯಕ್ರಮ ಸಮಾರೋಪಗೊಳ್ಳಲಿದೆ. ವಿಶ್ವದ ಶೇ60ರಷ್ಟು ಹುಲಿಗಳು ಭಾರತದಲ್ಲಿದ್ದು ವರ್ಷಾಚರಣೆಗೆ ಭಾರತದ ನಾಯಕತ್ವವೇ ಸಮಂಜಸ ಎಂದು ಜೈರಾಂ ರಮೇಶ್ ತಿಳಿಸಿದ್ದಾರೆ. ಹುಲಿ ಸಂರಕ್ಷಣೆಗೆ ಭಾರತ ಕೈಗೊಂಡಷ್ಟು ಕ್ರಮಗಳನ್ನು ಬೇರಾವುದೇ ದೇಶ ಕೈಗೊಂಡಿಲ್ಲ ಎಂದು ರಾಜಕಾರಣಿ ರಮೇಶ್ ತಿಳಿಸಿದ್ದಾರೆ.

ಪ್ರಾಣಿಗಳಲ್ಲಿ ದಾರಿ ಹುಡುಕುವ ಸಾಮರ್ಥ್ಯ ಅಪಾರ. ಅರುವತ್ತು ವರ್ಷ ಹಿಂದಿನ ನನ್ನ ಹಿರಿಯರ ಅನುಭವ. ಆಗ ನನ್ನ ತಂದೆ ಪಟ್ಟಣದಲ್ಲಿ ವಕೀಲರಾಗಿ ಕೆಲಸಮಾಡುತ್ತಿದ್ದರು. ಪಟ್ಟಣದಲಿರುವ ಅವರ ವಸತಿಗೆ ಒಂದು ಹಾಲು ಕರೆಯುವ ಎಮ್ಮೆ ಹಳ್ಳಿಮನೆಯಿಂದ ತರುತ್ತಿದ್ದರು. ಅದು ಬತ್ತಿದ ನಂತರ ಮತ್ತೊಂದು ಎಮ್ಮೆ ತರುತ್ತಿದ್ದರಂತೆ. ಒಮ್ಮೆ ಹಳ್ಳಿಮನೆಯಲ್ಲಿ ಮೇಯಲು ಬಿಟ್ಟ ಮುಂಚಿನ ದಿನ ಹಳ್ಳಿಗೆ ಬಂದ ಎಮ್ಮೆ ಸಂಗಾತಿಗಳನ್ನೆಲ್ಲ ಕರಕೊಂಡು ಮೂವತ್ತು ಕಿಮಿ ದೂರದ ಪಟ್ಟಣಕ್ಕೆ ಬಂದಾಗ ಪಟ್ಟಣದ ಮನೆಯಲ್ಲಿ ಅವನ್ನು ಕಟ್ಟಿಹಾಕಲು ಹಗ್ಗವಿಲ್ಲ, ಹಾಲು ಕರೆಯಲು ಪಾತ್ರೆಯಿಲ್ಲ. ಹಳ್ಳಿಯಲ್ಲಿ ಬೆಳಗಿನ ಚಾ ಕುಡಿಯಲೂ ಸಹಾ ಹಾಲಿಲ್ಲ ಎನ್ನುವ ಸನ್ನಿವೇಶವಾಗಿತ್ತಂತೆ.



Tuesday, December 01, 2009

ಕಡಲ ತಡಿಯಲ್ಲಿ ಐವತ್ತು ಕಿಮಿ ಸವಾರಿ

ರೋಹಿತ್ ರಾವ್ ಅವರು ಬಂದ ಕೂಡಲೇ ತಂಡದ ಮುಖಂಡತ್ವ ವಹಿಸಿಕೊಂಡರು. ಸದಾಸಂ ಸಾರಥಿ ಅನಿಲನಿಗೆ ಮಾಡು ಬೇಡಗಳ ವಿವರಿಸಿ ನಿರಂತರ ಸಂಚಾರವಾಣಿ ಸಂಪರ್ಕದಲ್ಲಿರುತ್ತೇನೆ ಮತ್ತು ಏನು ಸಂಶಯ ಇದ್ದರೂ ನನ್ನನ್ನು ವಿಚಾರಿಸು ಎಂದು ಸ್ಪಷ್ಟ ಪಡಿಸಿದರು. ಸ್ಥಳ ಗುರುತಿಸುವ ವಿಧಾನ ಅಂದರೆ ಯಾವುದು landmark ಹೌದು ಮತ್ತು ಯಾವುದು ಅಲ್ಲ ಎನ್ನುವುದರ ವ್ಯತ್ಯಾಸ ವಿವರಿಸಿದರು.

ಕೆಲವು ಕಡೆಗಳಲ್ಲಿ ನಮಗೆ ಜತೆಯಲ್ಲಿ ಸಾಗಲು ಸಾದ್ಯವಿಲ್ಲ ಎನ್ನುವ ಕಾರಣಕ್ಕೆ ಹದಿನಾರರ ಹಿರಿಯ ಮಗ ಅನಿಲ ಪ್ರಥಮ ಚಾಲಕ ಎಂದು ಮೊದಲೇ ನಿರ್ದರಿಸಿದ್ದೆ. ಸಂಪರ್ಕ ಸಾದ್ಯತೆಯ ನೆಲೆಯಲ್ಲಿ ಎಲ್ಲೆಲ್ಲಿ ಯಾರು ಗಾಡಿ ಓಡಿಸುವುದು ಎಂದು ಮುಂಚೆಯೇ ತೀರ್ಮಾನಿಸಿದ್ದೆ. ಆದರೆ ಹನ್ನೆರಡರ ಕಿರಿಯ ಸುನಿಲ ಹೊಟ್ಟೆ ಸಮಸ್ಯೆಯಿಂದಾಗಿ ನಿಗದಿತ ದೂರವನ್ನು ಕ್ರಮಿಸಲಿಲ್ಲ. ಇದರಿಂದಾಗಿ ಪ್ರಯಾಣದ ಸಿಂಹಪಾಲು ಅನಿಲ ಚಲಾಯಿಸಿದ ಮತ್ತು ರೋಹಿತರ ಪುಟ್ಟ ಮಗ ಅಭಿನವ ಅವನಿಗೆ ಜತೆಗಾರನಾಗಿದ್ದ. ರೋಹಿತರ ಬಾಷೆಯಲ್ಲಿ ಅಭಿಗೆ ಕಾಂಗರೂ ಸವಾರಿ.

ಅನಿಲನಿಗೆ ಅನಿರೀಕ್ಷಿತವಾಗಿ ಎದುರಾದದ್ದು ನೆಲ ಬಾಂಬುಗಳು. ಈ ನೆಲಬಾಂಬುಗಳ ಸಿಡಿಸುತ್ತಾ ಸಾಗಿದ ನಮ್ಮ ಸರದಾರ. ಅಲ್ಲಿ ಶೌಚಾಲಯ ವ್ಯವಸ್ತೆ ಇಲ್ಲದೆ ಸಮುದ್ರದ ಬದಿಯಲ್ಲಿ ಕುಕ್ಕರುಗಾಲಿನಲ್ಲಿ ಕೂರುವುದು ಸಾಮಾನ್ಯ. ಈ ಸುಳಿವು ರೋಹಿತ್ ನನಗೆ ವಾರದ ಮೊದಲೇ ಹೇಳಿದ್ದರು ಮತ್ತು ನಾನು ಅನಿಲನಿಗೆ ಪೂರ್ವ ಸೂಚನೆ ಕೊಟ್ಟಿದ್ದೆ. ಅವನು ಅದನ್ನು ಗಂಬೀರವಾಗಿ ಪರಿಗಣಿಸಿರಲಿಲ್ಲ.

ಪಣಂಬೂರಿನಲ್ಲಿ ೭೫೦ ಮೀಟರ್ ಕಡಲ ತೀರ ಖಾಸಗಿ ಸಂಸ್ಥೆ ನಿರ್ವಹಣೆಯಾದುದರಿಂದ ಸ್ವಚ್ಚವಾಗಿತ್ತು. ಅದನ್ನು ನೋಡಿದ ನಮ್ಮ ಸಾರಥಿ ಅನಿಲ ಉದ್ದಕ್ಕೂ ಈ ರೀತಿ ಸ್ವಚ್ಚ ಇರುವುದೆಂದು ಬಾವಿಸಿ ವೇಗ ಹೆಚ್ಚಿಸಿಕೊಂಡಿರಬೇಕು. ನಿಧಾನವಾಗಿ ಹೋಗುತ್ತಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಸ್ವಚ್ಚವಾದ ಸ್ಥಳ ಕೊನೆಗೊಳ್ಳುವಾಗ ಇವನಿಗೆ ಗ್ರಹಿಕೆಗೆ ಬರಲು ವಿಳಂಬವಾಯಿತು.



ಎರಡು ಕಿಮಿ ಮುಂದೆ ಚಿತ್ರಾಪುರದಲ್ಲಿ ರೋಹಿತರ ಗೆಳೆಯ ಯತೀಶ್ ಬೈಕಂಪಾಡಿ ಅವನನ್ನು ತಡೆಗಟ್ಟಿ ಒಳಗೆ ಕರೆಸಿದರು. ಅಲ್ಲಿ ಇವನು ಮೊದಲು ಕೇಳಿದ್ದೇ ಕೈ ಮೈ ತೊಳೆದುಕೊಳ್ಳಲು ನೀರು. ನೆರೆದವರಲ್ಲಿ ಒಬ್ಬರು ಛೀ ಪೀ ಎಂದಾಗ ಇವನು ಮತ್ತೂ ಕಂಗಾಲು. ಅಂತೂ ಗಂಧದ ಸಾಬೂನು ಹಾಕಿ ಚೆನ್ನಾಗಿ ತೊಳೆದುಕೊಂಡು ದುರ್ಗಂಧದಿಂದ ಪಾರಾದ. ಆಶ್ಚರ್ಯಕರವೆನಿಸುವಂತೆ ಮುಂದೆ ಕುಳಿತಿದ್ದ ಅಭಿಗೆ ಸ್ವಲ್ಪವೂ ಸಿಂಪರಣೆ ಆಗದಿರುವುದು ನಮಗೆ ಅನುಕೂಲವಾಯಿತು.

ಚಿತ್ರಾಪುರದಲ್ಲಿ ಕಡಲ ತೀರ ಸ್ವಚ್ಚಗೊಳಿಸುವ ಕರ ಸೇವೆ ನಡೆಯುತ್ತಿತ್ತು. ಹಾಗೆ ಅವರಿಗೆಂದು ಏರ್ಪಾಡಾದ ಅವಲಕ್ಕಿ ಸಜ್ಜಿಗೆ ಚಾ ನಮಗೂ ಸಮರಾಧನೆಯಾಯಿತು. ಸದಾಸಂ ಸವಾರಿ ಕಂಡ ಊರವರು ಮುಂದಿನ ದಾರಿಯ ಬಗೆಗೆ ಖಚಿತ ಮಾಹಿತಿ ಇತ್ತರು. ಅಭಿವೃದ್ದಿ ಕಾರ್ಯಗಳು ಕಡಲ ತೀರದ ರಸ್ತೆ ಹಾಗೂ ಸಮುದ್ರಕ್ಕೆ ಕಲ್ಲು ಹಾಕುವ ಕೆಲಸ ನಿರಂತರವಾಗಿ ನಡೆಯುತ್ತಿರುವ ಕಾರಣ ರೋಹಿತ್ ಆರು ತಿಂಗಳು ಹಿಂದಿನ ಕಣ್ಣಾರೆ ಕಂಡ ಮಾಹಿತಿ ಹಳೆಯ ಸುದ್ದಿಯಾಗುತ್ತದೆ.
 
ಸುರತ್ಕಲ್ ದೀಪಸ್ತಂಬ ಬಳಿಯಲ್ಲಿ ಸಮುದ್ರ ತೀರದಲ್ಲಿ ಪೂರಾ ಕಲ್ಲು. ತೀರದಿಂದ ಮೇಲಕ್ಕೆ ಬಂದು ಸುತ್ತು ಬಳಸಿ ಮರಳ ತೀರಕ್ಕೆ ವಾಪಾಸು. ಸದಾಸಂ ಸಾಗಲು ಸ್ಪಷ್ಟ ನಿರ್ದೇಶನ ಕೊಟ್ಟ ರೋಹಿತ್ ಮುಂದಿನ ಬೇಟಿಯ ಜಾಗಕ್ಕೆ ದಾವಿಸುತ್ತಿದ್ದರು. ನಾನು ಬಸ್ಸಿನಲ್ಲಿ ಬಂದಿಳಿದ ಗೆಳೆಯ ಅನಿಲ್ ಕುಮಾರರ ರಸ್ತೆ ಬದಿಯಿಂದ ಕರಕೊಂಡು ಶರತ್ ಬಾರಿನ ಹತ್ತಿರ ಸಾಗುವ ರಸ್ತೆಯಲ್ಲಿ ಸಸಿಹಿತ್ಲು ಸಮೀಪದ ಸಮುದ್ರ ತೀರಕ್ಕೆ ಹೋದೆ. ತಡವಾಗಿಯಾದರೂ ಅನಿಲಕುಮಾರ್ ನಮ್ಮ ತಂಡ ಸೇರಿಕೊಂಡದ್ದು ಬಹಳ ಉಪಕಾರವಾಯಿತು. ಮುಂದೆ ಸಂಜೆ ವರೆಗೆ ವಾನ್ ಓಡಿಸುವುದೂ ಪೋಟೊ ತೆಗೆಯುವುದೂ ಅವರು ಮಾಡಿದರು.




ಸದಾಸಂನಲ್ಲಿ ಸಾಗುವ ಅನಿಲ ಅಭಿಗೆ ಕಡಲ ತೀರದ ನೇರದಾರಿ. ಅನುಸರಿಸುವ ನಾವು ಸುತ್ತು ಬಳಸಿ ಕೆಲವೊಮ್ಮೆ ಗುಡ್ಡ ಹತ್ತಿ ಇಳಿದು ಸಾಗುವಾಗ ಅವರು ಮೊದಲೇ ಗಮ್ಯ ಸ್ಥಾನ ತಲಪಿರುತ್ತಾರೆ. ಒಂದಷ್ಟು ದೂರ ಸದಾಸಂ ಸಾಗುವ ವರೆಗೆ ಪೊಟೊ ತೆಗೆಯುತ್ತಿದ್ದು ನಂತರ ಕಾರಿಗೆ ಹಿಂತಿರುಗಿ ಓಡಿ ಬಂದು ಕೆಮರ ಜೋಪಾನವಾಗಿ ತೆಗೆದಿರಿಸಿ ಕಾರು ಓಡಿಸುವ ರೋಹಿತ್ ಒಮ್ಮೆಲೆ ಎರಡು ಮೂರು ಕೆಲಸಗಳಲ್ಲಿ ಮಗ್ನರಾಗಿರುತ್ತಿದ್ದರು. ಇದೆಲ್ಲಾ ಮಾಡುವುದಲ್ಲದೆ ಅಲ್ಲಲ್ಲಿ ಹಕ್ಕಿಗಳ ಚಿತ್ರವನ್ನೂ ಸೆರೆ ಹಿಡಿಯುತ್ತಿದ್ದರು.

ಮದ್ಯಾಹ್ನ ವರೆಗೆ ನಮ್ಮ ಜತೆಯಲ್ಲಿದ್ದ ಮೊಟರ್ ಸೈಕಲಿನಲ್ಲಿ ಬಂದ ನಿಬಿಶ್ ಇಲ್ಲಿ ಬಹಳ ಸಹಾಯಮಾಡಿದರು. ಅಂತೂ ಗಡಿಬಿಡಿಯಲ್ಲಿ ಕಡಲತೀರಕ್ಕೆ ತಲಪುವಾಗ ನಮಗೆ ಸದಾಸಂ ಸವಾರರು ಮುಂದೆ ಸಾಗಿದ್ದಾರೋ ಅಲ್ಲ ಇನ್ನೂ ಹಿಂದಿನಿಂದ ಬರುತ್ತಿದ್ದಾರೋ ಎನ್ನುವ ಗೊಂದಲ ಎದುರಾಗುತಿತ್ತು. ಕೆಲವು ಕಡೆಗಳಲ್ಲಿ ಸಮುದ್ರಕೊರೆತಕ್ಕೆ ಕಲ್ಲು ಹಾಕಿದ ಕಾರಣ ರಸ್ತೆಯಿಂದ ಗೋಚರಿಸುವುದಿಲ್ಲ.

ಸಸಿಹಿತ್ಲು ಮುಂದಿನ ಸುಮಾರು ಆರು ಕಿಮಿ ಉದ್ದಕ್ಕೂ ರಸ್ತೆ ಕಡಲ ತೀರದಲ್ಲಿಯೇ ಸಾಗುತ್ತದೆ. ಅನಂತರ ಸುನಿಲ ಸವಾರಿಗೆ ಕುಳಿತ. ಮುಂದಿನ ದಾರಿಯಲ್ಲಿ ಸಾಗುವಾಗ ಹೆಚ್ಚು ಕಮ್ಮಿ ನಮ್ಮ ಕಣ್ಣೆದುರೇ ಇದ್ದ ಅನ್ನಬಹುದು. ಅಂತೂ ಸುಮಾರು ಹನ್ನೆರಡುವರೆಗೆ ಮೂಲ್ಕಿ ಅಳಿವೆ ಬಾಗಿಲಿಗೆ ತಲಪಿದೆವು.



ಶಾಂಬವಿ ಮತ್ತು ನಂದಿನಿ ನದಿಗಳು ಜತೆಯಾಗಿ ಸಮುದ್ರ ಸೇರುವ ಈ ಜಾಗ ಬಹಳ ಚೆನ್ನಾಗಿದೆ. ಹೆಜಮಾಡಿ ಕೋಡಿ, ಕೊಳಚಿಕಂಬಳ ಮತ್ತು ಚಿತ್ರಾಪು ದ್ವೀಪ ನಮ್ಮ ಎದುರಿಗಿತ್ತು. ಸುನಿಲನಿಗೆ ಸಮುದ್ರದಲ್ಲಿ ಡಾಲ್ಫಿನ್ ಅಲ್ಲಿ ಕಂಡದ್ದು ಬಹಳ ಸಂತಸವಾಯಿತು. ಅಗಾಗ ಪಕ್ಷಿ ವೀಕ್ಷಣೆಗೆ ಹೊಳೆಯಾಚೆಯ ಚಿತ್ರಾಪುವಿಗೆ ಬರುವ ರೋಹಿತ್ ಅವರಿಗೆ ಇದು ಬಹಳ ಪರಿಚಿತ ಪ್ರದೇಶ. ನಮಗೆ ವಿವಿದ ಸಮಯದಲ್ಲಿ ಬರುವ ಹಕ್ಕಿಗಳ ಹಾಗೂ ಅವುಗಳ ವರ್ತನೆಯ ಬಗ್ಗೆ ಮಾಹಿತಿ ಕೊಟ್ಟರು. ಅಲ್ಲಿ ಮುಕ್ಕಾಲು ಘಂಟೆ ಕಳೆದದ್ದೇ ನಮಗೆ ಗೋತ್ತಾಗಲಿಲ್ಲ.





ಮೂಲ್ಕಿಯಲ್ಲಿ ನದಿ ದಾಟುವ ಬಗೆಗೆ ಬಾರಿ ಜಿಜ್ನಾಸೆಯಲ್ಲಿದ್ದೆ. ಯೋಚನೆ ಬೇಡ ನನ್ನನ್ನು ಹಿಂಬಾಲಿಸು ಎಂದ ರೋಹಿತ್ ನೇರವಾಗಿ ರಾಷ್ಟ್ರೀಯ ಹೆದ್ದಾರಿ ೧೭ರಲ್ಲಿ ಕಾರು ಓಡಿಸಿದರು. ಮದ್ಯದಲ್ಲಿ ಅನಿಲ ಸದಾಸಂನಲ್ಲಿದ್ದು ನಾನು ಮತ್ತು ಅನಿಲ್ ಕುಮಾರ್ ವಾನಿನಲ್ಲಿ ಹಿಂಬಾಲಿಸಿದೆವು. ಕೆಲವೆಡೆ ಹೋಂಡ ಗುಂಡಿ ತುಂಬಿದ ರಾಜ ರಸ್ತೆ ವಾಹನಗಳಿಗಿಂತ ಸದಾಸಂಗೆ ಹೆಚ್ಚು ಸೂಕ್ತವೆನಿಸುವಂತಿತ್ತು. ಮೂಲ್ಕಿ ಊರ ಮದ್ಯೆ ನಮ್ಮ ಮೆರವಣಿಗೆ ಊಟಕ್ಕೆಂದು ಹೋಟೆಲ್ ಪಕ್ಕದಲ್ಲಿ ನಿಂತಿತು.


ಸದಾ ರೋಹಿತರ ಕಾರನ್ನು ಹಿಂಬಾಲಿಸುತ್ತಿದ್ದ ಸದಾಸಂ ಫಕ್ಕನೆ ಎದುರಲ್ಲಿರುವವರಿಗೆ ಗೋಚರವಾಗುತ್ತಿರಲಿಲ್ಲ. ದಾಟಿದ ತಕ್ಷಣ ಇದ್ಯಾವ ಕರ್ಕಶ ಶಬ್ದ ಎಂದು ಜನರು ತಿರುಗಿ ನೋಡುವಾಗ ಅನಿರೀಕ್ಷಿತವಾಗಿ ಅಪರೂಪವೆನಿಸುವ ಆಕಾರದ ಸದಾಸಂ ಗೋಚರವಾಗುತ್ತದೆ. ಆಗ ಬಾಯಿ ಬಿಟ್ಟು ನೋಡುವ ಅವರ ಅಶ್ಚರ್ಯದ ನೋಟ ನನಗೂ ನಾನಿದ್ದ ವಾಹನ ಚಾಲನೆ ಮಾಡುತ್ತಿದ್ದ ಅನಿಲ್ ಕುಮಾರರಿಗೂ ಒಳ್ಳೆಯ ಮನರಂಜನೆಯಾಗಿತ್ತು.



ಉಳಿದ ಇಬ್ಬರು ಚಾಲಕರಂತೆ ಅನಿಲನೂ ಅವನ ವಾಹನದ ಕೀಲಿಕೈ ಹಿಡಿದುಕೊಂಡು ಹೊಟೇಲಿನೊಳಗೆ ಹೋದ. ನೆನಪಾಯಿತು - ಮೂವತ್ತೈದು ವರ್ಷ ಹಿಂದೆ ನಾನು ಮೊದಲು ನಮ್ಮ ಹಳ್ಳಿಯ ಪಕ್ಕದ ಪಟ್ಟಣಕ್ಕೆ ಕೊಂಡು ಹೋದ  ಮೊದಲ  ವಾಹನ ಹಿಂಬಾಲಕ ಗಾಡಿ ಒಳಗೊಂಡ ನಮ್ಮ ಪವರ್ ಟಿಲ್ಲರ್.  ನೂರು ಲೀಟರ್ ಡೀಸಲ್ ತರಲು ಟಿಲ್ಲರ್ ತಗೊಂಡು ಹೋಗಲು ಅಪ್ಪನ ಒಪ್ಪಿಗೆ ಪಡಕೊಂಡಿದ್ದೆ. ಅಂದು ವಾಹನ ಚಾಲನೆ ಪರವಾನಿಗೆ ಪಡಕೊಳ್ಳಲು ನನಗೆ ಪ್ರಾಯ ಆಗಿರಲಿಲ್ಲ.  ಅನಿಲನಿಗೂ ಈಗ  ಇತರ ವಾಹನ ಪರವಾನಿಗೆ ಪಡಕೊಳ್ಳಲು ಪ್ರಾಯ ಆಗಲಿಲ್ಲ.

ನಮಗೆ ಮೊದಲ ನೋಟಕ್ಕೆ ಮರಳಿನಲ್ಲಿ ಸಾಮ್ಯತೆ ಕಂಡರೂ ಸಮೀಪದಿಂದ ನೋಡುವಾಗ ವ್ಯತ್ಯಾಸ ಗುರುತಿಸಲು ಸಾದ್ಯವಾಗುತ್ತದೆ. ಒದ್ದೆ ಮರಳಾಗಲಿ ಒಣ ಮರಳಾಗಲಿ ತುಲನೆ ಮಾಡುವಾಗ ಚಕ್ರಕ್ಕೆ ಕೊಡುವ ಹಿಡಿತದಲ್ಲಿ ಬಹಳ ವ್ಯತ್ಯಾಸ ಇರುತ್ತದೆ. ಅದುದರಿಂದ ನಮ್ಮ ಸಮಯಸೂಚಿ ಪೂರಾ ಅಡಿಮೇಲಾಯಿತು. ಚಕ್ರಕ್ಕೆ ಹಿಡಿತ ಸಿಗದೆ ಹುಗಿಯುತ್ತಾ ನಿದಾನವಾಗಿ ಸಾಗುವುದು ಹಲವು ಕಡೆಗಳಲ್ಲಾಯಿತು.

ಬಿಸಿಲಿನ ಹೊಡೆತ ಬಹಳ ಇರುತ್ತದೆ ಎಂದು ರೋಹಿತ್ ಸೂಚನೆ ಮೊದಲೇ ಕೊಟ್ಟ ಕಾರಣ sunscreen lotion ತಗೊಂಡು ಹೋಗಿದ್ದೆವು. ಮೂವರು ಮಕ್ಕಳು ಅದನ್ನು ಹಚ್ಚಿಕೊಂಡು ಚರ್ಮ ಬೆಂದು ಹೋಗುವುದರ ತಪ್ಪಿಸಿಕೊಂಡರು. ನಾವು ನಿರಂತರವಾಗಿ ಬಿಸಿಲಿನಲ್ಲಿ ಇಲ್ಲದ ಕಾರಣ ನಮಗೆ ಹಚ್ಚಿಕೊಳ್ಳದಿರುವುದು ತೊಂದರೆಯಾಗಲಿಲ್ಲ.

ಸದಾಸಂ ಬಿಡಿಬಾಗಗಳ ಬಗ್ಗೆ ಬಹಳ ಕಾಳಜಿ ವಹಿಸಿದ್ದೆ. ಭಾನುವಾರ ಎಂದರೆ ಯಾವ ಬಿಡಿಬಾಗ ಅಂಗಡಿಯೂ ತೆರೆದಿರುವುದಿಲ್ಲ. ಸಾಮಾನ್ಯವಾಗಿ ಬದಲಾಯಿಸುವ ಎಲ್ಲ ಸಾಮಾನುಗಳ ಪಟ್ಟಿ ಮಾಡಿ ಒಯ್ದಿದ್ದೆ. ಚಕ್ರ ಮೇಲೆ ಎರಚುವ ಮರಳು ಚೈನ್ ಕೊರೆಯುವ ಕಾರಣ ಒಂದು ಚೈನ್ ಮಾತ್ರವಲ್ಲ ಹೆಚ್ಚುವರಿ ಲಿಂಕ್ ಸಹಾ ನನ್ನಲ್ಲಿತ್ತು. ಆದರೆ CD unit ಹೊರತು ಪಡಿಸಿ ಯಾವ ಬಾಗವೂ ಕೈಕೊಡಲಿಲ್ಲ. ಅದೂ ಸಹಾ ಮುಂಚಿನ ದಿನದ ಸ್ನಾನದಿಂದಾಗಿ ಇರಬಹುದು ಅನ್ನಿಸುತ್ತದೆ. ಯಾಕೆಂದರೆ ವಿಫಲವಾದ ಬಿಡಿ ಬಾಗ ಈಗ ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ.




ಭರತದ ಸಮಯವಾದುದರಿಂದ ಎರಡು ಜಾಗಗಳಲ್ಲಿ ಏರಿನಿಂತ ನೀರು ನಮಗೆ ದಾರಿಗಡ್ಡವಾಯಿತು. ಪಡುಬಿದ್ರೆ ಸಮೀಪ ವಾಪಾಸು ಹೆದ್ದಾರಿಗೆ ಬರದೆ ವಿದಿಯಿರಲಿಲ್ಲ. ಉಚ್ಚಿಲ ಸಮೀಪದಲ್ಲಿ ಪಕ್ಕದಲ್ಲಿರುವ ರಸ್ತೆಗೆ ಏರಿ ದಾಟಲು ಸಾದ್ಯವಾಯಿತು. ಗೂಗಲ್ ಚಿತ್ರವನ್ನು ಅನುಸರಿಸಿ ಕಣ್ಮುಚ್ಚಿ ಬರುವಂತಿಲ್ಲ ಅನ್ನುವುದಕ್ಕೆ ಇದೊಂದು ಉದಾಹರಣೆ. ಭಟ್ಕಳ ಸಮೀಪದ ಗೂಗಲ್ ಚಿತ್ರದಲ್ಲಿ ಸದಾ ಮೋಡ ಹಾಗೂ ಮೋಡದ ನೆರಳು ಕಾಣುತ್ತದೆ ಅನ್ನೋದು ಬೇರೆ ವಿಚಾರ.
 
ಸಂಜೆ ನಾಲ್ಕೂವರೆಗೆ ಕಾಪು ದೀಪಸ್ಥಂಬ ತಲಪಿದರು ಅನಿಲ್ ಮತ್ತು ಅಭಿ. ಅಲ್ಲಿ ಸುಂದರ ಮರಳ ಶಿಲ್ಪ ಮಾಡಿದ್ದರು. ಕಾಪುವಿನಲ್ಲಿ ದೀಪಸ್ಥಂಬ ದಾಟಿದ ನಂತರ ಗೂಗಲ್ ಚಿತ್ರ ಒಂದು ತೋಡು ದಾಟಲು ಸಂಕ ತೋರಿಸುತ್ತದೆ. ಆದರೆ ಅದನ್ನು ಸಮೀಪಿಸಲು ದಾರಿ ಉಂಟೊ ಅನ್ನುವುದು ನನಗೆ ಅಲ್ಲಿಗೆ ತಲಪುವ ತನಕವೂ ಸಂಶಯ ಇತ್ತು. ಆದರೆ ತೊಂದರೆ ಉಂಟಾಗಲಿಲ್ಲ. ಸದಾಸಮ್ ಮತ್ತು ಜತೆ ವಾಹನಗಳು ಸಂಕ ಸಲೀಸಾಗಿ ದಾಟಿದವು. ಅನಂತರ ಹೊಯಿಗೆಯಲ್ಲಿ ಹೋಗುವವನನ್ನು ಬೀಳ್ಕೊಟ್ಟೆವು.

ಗುಡುಗು ಮಿಂಚು ಮಳೆಯ ಲಕ್ಷಣಗಳು ಜೋರಾಗುತ್ತಾ ಇತ್ತು. ಅನಿಲ ಒದ್ದೆಯಾಗಲು ಅಷ್ಟೊಂದು ಆಸಕ್ತಿ ತೋರಿಸಲಿಲ್ಲ. ನಮ್ಮ ಒತ್ತಡಕ್ಕೆ ಮುಂದುವರಿಯಲು ಒಪ್ಪಿದ. ಸ್ವಲ್ಪ ದೂರ ಅನಂತರ ನಮ್ಮ ಮುಂದಿನ ಭೇಟಿಯಲ್ಲಿ ನಾನು ಅವನನ್ನು ಇಳಿಸಿ ಸವಾರಿಗೆ ಸದಾಸಂ ಏರಿದೆ. ಎರಡು ಕಿಮಿ ಮುಂದೆ ತಂಡದವರನ್ನು ನನಗೆ ಸಿಕ್ಕಲು ಹೇಳಿದೆ.

ಐವತ್ತಡಿ ಅಡಿ ಸಾಗುವುದರೊಳಗೆ ಬಂದ ಬೃಹತ್ ತೆರೆ ನನ್ನನ್ನು ಸೊಂಟದ ವರೆಗೂ ಸದಾಸಂನ್ನು ಸಂಪೂರ್ಣವಾಗಿ ತೋಯಿಸಿತು. ಎಲ್ಲಿಯೊ ವಾಹನದ ವಿದ್ಯುತ್ ಜಾಲದಲ್ಲಿ ಅವ್ಯವಸ್ಥೆ ಉಂಟು ಮಾಡಿತು. ಯಂತ್ರ ಸ್ಥಬ್ದವಾಯಿತು. ಅಲ್ಲಿನ ವರೆಗೆ ಸದಾಸಂ ಚಾಲಕ ಸದಾ ಸಂಚಾರವಾಣಿ ಇಟ್ಟುಕೊಂಡಿದ್ದರೆ ಇಲ್ಲಿ ನನ್ನ ಜತೆಯಲ್ಲಿ ಮಾತ್ರ ಅದು ಇರಲಿಲ್ಲ. ಹಾಗಾಗಿ ನನಗೆ ತಂಡದವರ ಸಂಪರ್ಕಿಸಲು ಕಷ್ಟವಾಯಿತು. ಎರಡೂ ಬದಿ ನೀರಿನ ಮದ್ಯೆ ಅಲ್ಲಿದ್ದದ್ದು ಒಂದೇ ಹಾದಿ. ಕೊನೆಗೆ ದಾರಿಯಲ್ಲಿ ಹೋಗುತ್ತಿರುವ ಒಂದು ರಿಕ್ಷವನ್ನು ನಿಲ್ಲಿಸಿ ಪಾಚಿ ಬಣ್ಣದ ಒಮ್ನಿಗೆ ಸಂದೇಶ ಕಳುಹಿಸಲು ಯತ್ನಿಸಿದೆ.

ನಾನು ಮನೆಯಿಂದ ಹೊರಡುವಾಗ ಸಿದ್ದ ಪಡಿಸಿದ ವೇಳಾಪಟ್ಟಿಯಲ್ಲಿ ಸಂಜೆ ಐದೂವರೆಗೆ ಸದಾಸಂ ವಾಹನಕ್ಕೆ ಹೇರುವುದಾಗಿತ್ತು. ಮನೆಗೆ ವಾಪಾಸು ಬರಲು ಕನಿಷ್ಟ ಮೂರು ಘಂಟೆ ಬೇಕೆಂದು ತೀರ್ಮಾನಿಸಿದ್ದೆ. ಆದರೆ ನಾನು ಸದಾಸಂ ಏರಿದಾಗಲೇ ಘಂಟೆ ಐದಾಗಿತ್ತು.

ಮುಂದೆ ಹೋದವರು ಸ್ವಲ್ಪ ಸಮಯ ಕಾದು ಅನಂತರ ವಾಪಾಸು ಬಂದರು. ನಾನು ಅಷ್ಟರೊಳಗೆ ಊರ ಹುಡುಗರ ಸಹಾಯದಿಂದ ನನ್ನ ಕುದುರೆಯನ್ನು ರಸ್ತೆ ಬದಿಗೆ ತಂದಿರಿಸಿದ್ದೆ. ಮಳೆ ಜೋರಾಗಿತ್ತು. ನಾವೆಲ್ಲ ಒದ್ದೆಯಾಗಿದ್ದೆವು. ಸದಾಸಂ ಎತ್ತಿ ಒಮ್ನಿಯೊಳಗಿಟ್ಟೆವು. ಹೆದ್ದಾರಿ ತಲಪುವಾಗ ಗುಡುಗು ಸಿಡಿಲು ಮಳೆ. ವಾಪಾಸು ಬರುವಾಗಲೂ ಮುಡಿಪು ದಾರಿಯಾಗಿ ಬಂದೆ. ಬಸ್ಸಿನಲ್ಲಿ ಬಂದ ಇಬ್ಬರು ಅನಿಲರು ಊರು ಮುಟ್ಟುವಾಗ ನಾನೂ ತಲಪಿದೆ. ಅಂತೂ ರಾತ್ರಿ ಒಂಬತ್ತುವರೆಗೆ ಮನೆ ಸೇರಿದೆವು.

ಮರುದಿನ ಮಧ್ಯಾಹ್ನ ನೋಡುವಾಗ ಪೈಂಟ್ ಮಾಸಿದ ಜಾಗದಲ್ಲಿ ತುಕ್ಕು ಹಿಡಿಯಲು ಪ್ರಾರಂಬವಾಗಿತ್ತು. ಅಂದು ಸಂಪತ್ ಚೆನ್ನಾಗಿ ತೊಳೆದ ಕಾರಣ ಉಪ್ಪು ನೀರಿನ ಲೇಪನ ಅಳಿಸಿಹೋಯಿತು.