Showing posts with label Adventure. Show all posts
Showing posts with label Adventure. Show all posts

Thursday, March 03, 2011

ಸೈಕಲ್ ಮೇಲಿನ ಸ್ಕೌಟ್ ಮಕ್ಕಳ ಪಟಲಾಂನಲ್ಲಿ ನಾನೂ ಒಬ್ಬ

೨ ಮಾರ್ಚ್  ಬುದವಾರ  ಪುತ್ತೂರಿನ  ಸ್ಕೌಟ್   ಮತ್ತು ಗೈಡ್ಸ್  ಪರಿಸರ  ಜಾಗ್ರತಿ  ಸೈಕಲ್ ಜಾಥಾ  ಹಮ್ಮಿಕೊಂಡಿತ್ತು.  ಸ್ಕೌಟ್ ಸದಸ್ಯನಾದ    ಸುನಿಲ ಹೋಗುವವನಿದ್ದ. ನಾನೂ   ಅವನೊಂದಿಗೆ   ಸೇರಿಕೊಂಡೆ.   ಪುತ್ತೂರು  ಆಸುಪಾಸಿನ  ವಿವಿದ ಶಾಲೆಗಳ   ಸುಮಾರು ಎಪ್ಪತ್ತೈದು    ಮಕ್ಕಳು  ಸೈಕಲಿನಲ್ಲಿದ್ದರು.  ಹತ್ತು ಮಕ್ಕಳ  ಬೀದಿ ನಾಟಕ ತಂಡವೊಂದು  ನಮ್ಮ ಜತೆಗಿತ್ತು.  ಅಂತೂ  ಒಂಬತ್ತು ಕಾಲು   ಘಂಟೆಗೆ  ನಮ್ಮ ಸೈಕಲ್ ಸಾಲು ಪುತ್ತೂರು  ಮಹಾಲಿಂಗೇಶ್ವರ  ದೇವಸ್ಥಾನದ  ಎದುರಿನಿಂದ  ಹೊರಟಿತು.

ಕೆಮ್ಮಾಯಿಯಲ್ಲಿ   ಬಿದಿರಿನ ಉಪಯೋಗದ ಬಗೆಗೊಂದು  ಕಿರು ರೂಪಕ   ಆಡಿ ತೋರಿಸಿದ ನಂತರ  ತಂಡ ಸ್ವಲ್ಪ ಮುಂದಕ್ಕೆ   ಎಡಕ್ಕೆ ಸೇಡಿಯಾಪು   ರಸ್ತೆಯಲ್ಲಿ  ಮುಂದುವರಿಯಿತು.  ಸೇಡಿಯಾಪು ತಿರುವಿನಲ್ಲೊಂದು  ಅವಲಕ್ಕಿ ಕಿತ್ತಳೆ  ಬಾಟಲಿ ಪಾನಿಯ   ಹಂಚೋಣ.   ಎರಡೇ ಕಿಮಿ ಮುಂದೆ ರಸ್ತೆ ಪಕ್ಕದ ಮನೆಯ ಆವರಣದಲ್ಲಿ  ತಿಂಡಿ.  ಬಿಸಿಯಾದ ದೋಸೆ ಚಟ್ನಿ ಸಾಂಬಾರ್  ಮತ್ತು  ರಾಗಿ ಮಾಲ್ಟ್  ಮಕ್ಕಳಿಗೆ ಹೊಸ ಚೈತನ್ಯ   ದೊರಕಿಸಿದರೂ  ಕಡಿದಾದ ಸುಮಾರು ೧೦೦ ಮೀಟರ್ ಇಳಿವು ಅನಂತರ  ಏರು ನಮ್ಮ ಮುಂದಿದ್ದವು. ಆದರೂ  ಮಕ್ಕಳು ನಾ ಹೆದರಿದಂತೆ   ಸೋಲಲಿಲ್ಲ.   ಅದು ನನಗೆ  ಸಂಬಂದಿಕರ ಮನೆಯಾದುದರಿಂದ  ಬಾಟರಿಗೆ  ವಿದ್ಯುತ್ ಚಾರ್ಜು ಬೋನಸ್. 

ರಾಷ್ಟ್ರೀಯ   ಹೆದ್ದಾರಿ  ನಮಗೆ ಸಿಕ್ಕಿದ್ದು ಒಂದೇ  ಕಿಮಿ.  ಪುನಹ ಏರಿಳಿವು ರಸ್ತೆ.  ಕಡೆಶಿವಾಲಯ ಊರಲ್ಲೊಂದು  ಬೀದಿ ನಾಟಕವಾಗಿ  ಹೊಳೆ ಬದಿಯ ದೇವಸ್ಥಾನಕ್ಕೆ   ಸೈಕಲು ಸಾಲು ಮುಂದುವರಿಯಿತು.  ಹನ್ನೆರಡು  ಐವತ್ತೈದಕ್ಕೆ  ದೇವಸ್ಥಾನದ  ಹಾಲ್  ತಲಪುವಾಗ  ಊಟಕ್ಕೆ  ಬಾಳೆ ಹಾಕುತ್ತಿದ್ದರು.  ಬರ್ಜರಿ ಪಾಯಸ ಸಮೇತ   ಊಟ ಸಿಕ್ಕಿತು.  ನಂತರ  ಸ್ವಲ್ಪ ಹೊತ್ತು ಮಕ್ಕಳ ಕಾರ್ಯಕ್ರಮ  ಮತ್ತು  ಅನಂತರ ಮಕ್ಕಳಿಗೆ ಹೊಳೆಬದಿಯಲ್ಲಿ  ನೀರಾಟ.  ಜತೆಯಲ್ಲಿ ಸಾಗಿದ  ಮಾಷ್ಟ್ರುಗಳು  ಮಕ್ಕಳನ್ನು  ನಿಗದಿತ ಸಮಯಕ್ಕೆ  ನೀರಿನಿಂದ ಹೊರಕ್ಕೆಳೆದರು. 

ಒಂದು   ಪಾನಕ ಸೇವನೆ   ಅನಂತರ  ಮೂರುವರೆ ಘಂಟೆಗೆ   ಮಕ್ಕಳೆಲ್ಲ   ಸೈಕಲ್ ಏರಿದರು.  ಗಡಿಬಿಡಿಯಲ್ಲಿ ನನಗೆ  ಜಿಪಿಎಸ್  ಸ್ವಿಚ್ ಹಾಕಲು ಮರೆತು  ಒಂದೂವರೆ    ಕಿಮಿ ದಾಖಲೆ  ಅಲಭ್ಯ.     ವಾಪಾಸು ಬರುವಾಗ  ಗಡಿಯಾರ  ಪೆರ್ನೆ ದಾಟುವ ಸುಮಾರು ಮೂರು ಕಿಮಿ  ಹೆಚ್ಚು ಕಮ್ಮಿ  ಇಳಿಜಾರಾದ  ರಾಷ್ಟ್ರೀಯ   ಹೆದ್ದಾರಿ. ನಂತರ  ಮುಖ್ಯಸ್ಥರು  ಹೊರಡುವಾಗ  ಮೈಕಿನಲ್ಲಿ   ಹೇಳಿದಂತೆ   ಹೋಗುವಾಗ ಇಳಿದಲ್ಲಿ ಹತ್ತುವುದು  ಮತ್ತು ಹತ್ತಿದಲ್ಲಿ  ಇಳಿಯುವುದು.  ಬರುವಾಗ   ಒಂದು ಕಡಿದಾದ  ಅಪಾಯಕಾರಿ ಅನಿಸುವ ಸ್ವಲ್ಪ ದೂರ  ಇಳಿಯಲು ಸಿಕ್ಕಿದ್ದು ಅನಂತರದ  ದೀರ್ಘ  ಏರು  ಎಲ್ಲ ಮಕ್ಕಳನ್ನೂ  ಸುಸ್ತಾಗಿಸಿತು.  ಗುಡ್ಡದ ತುದಿಯಲ್ಲಿ ಬನ್  ಮತ್ತು  ಬಚ್ಚಂಗಾಯಿ  ಹೋಳುಗಳು  ಕಾಯುತ್ತಿತ್ತು.    ಎಲ್ಲ ಕಡೆಗಳಲ್ಲೂ  ಬಹು ದೂರದ ವರೆಗೆ  ಕಾಣುತ್ತಿದ್ದು  ನೋಟ ಸವಿಯುವ ಮನಸ್ಥಿತಿ  ಮಕ್ಕಳಲ್ಲಿ ಇರಲಿಲ್ಲ. ಘಂಟೆ ಸುಮಾರು ಐದಾಗಿತ್ತು.





ಅನಂತರ  ಬನ್ನೂರು ರಸ್ತೆಯಾಗಿ  ಪುತ್ತೂರಿಗೆ  ತಲಪುವಾಗ   ಸಮಯ ಸಂಜೆ  ಆರಾಗಿತ್ತು.   ಪುತ್ತೂರು   ಹೊರವಲಯದಿಂದ   ನಂತರ  ಒಳರಸ್ತೆಮೂಲಕ   ಪುನಹ  ದೇವಸ್ಥಾನದ ಎದುರಿನ  ಮೈದಾನಕ್ಕೆ. ಬೆಳಗ್ಗಿನ  ಮುಖ್ಯ  ರಸ್ತೆಯಾದರೆ  ಈ ಎಪ್ಪತ್ತೈದು  ಸವಾರರಿಗೆ  ಸಂಜೆಯ ವಾಹನ ದಟ್ಟಣೆಯ  ಮದ್ಯೆ   ದಾರಿ ತೋರಿಸಲು    ಕಷ್ಟವಾಗುತಿತ್ತು. 
    
ಏರಿಳಿತ  ಕೂಡಿದ  ರಸ್ತೆಗಳಲ್ಲಿ   ಹೆಚ್ಚಿನ  ಸೈಕಲುಗಳು  ಗೇರುರಹಿತವಾಗಿದ್ದೂ  ಮಕ್ಕಳಿಗೆ  ಹೆಚ್ಚು  ಕಷ್ಟವಾಗಿತ್ತು.    ನಮಗೆ  ಸವಾಲಾಗಿದ್ದ  ರಸ್ತೆಯಲ್ಲಿ  ಮೇಲಿನ  ಚಿತ್ರವೊಂದರಲ್ಲಿ    ಕಾಣುವ   ವೈಷ್ಣವಿ   ಎಂಬ ಪ್ರಾಥಮಿಕ  ಶಾಲೆಯ  ಬಾಲಕಿಯೊಬ್ಬಳ  ಸಾಧನೆ ಮೆಚ್ಚುವಂತದ್ದಾಗಿತ್ತು.      ಸುಮಾರು  ಮೂವತ್ತೆಂಟು ಕಿಮಿ  ಒಟ್ಟು  ದೂರವೆಂದು ನಾನು  ದಾಖಲಿಸಿದರೂ    ರಸ್ತೆಯ   ಸನ್ನಿವೇಶ  ಗಮನಿಸುವಾಗ  ಮಕ್ಕಳು  ಅದಕ್ಕಿಂತ ತುಂಬಾ ಹೆಚ್ಚಿನ   ದೂರ  ಸೈಕಲಿಸಿದ   ಶ್ರಮ ಪಟ್ಟಿದ್ದಾರೆ. 


ವಾಪಾಸು  ಮನೆ ಸೇರಲು  ಬಾಟರಿ ಸಾಕೋ ? ಸಂಶಯದಲ್ಲಿ ಶಂಕರಣ್ಣನ  ಕಾರ್ಯಾಗಾರ  ನುಗ್ಗಿದೆ.  ಅರ್ದ ಘಂಟೆ ಚಾರ್ಜು ಬರೋಬರಿ   ಅನಿಸಿ  ಹೊರಡುವಾಗ  ಕಗ್ಗತ್ತಲು. ಸಮಯ  ಏಳೂವರೆ.  ತಲೆಗೊಂದು  ಹೆಡ್ ಲಾಂಪ್ ಏರಿಸಿ  ಅಲ್ಲಿಂದ  ಹೊರಟೆ.  ಕೆಲವು  ಹೊಂಡಕ್ಕೆ ಚಕ್ರವಿಳಿಸಿದರೂ    ಹೆಚ್ಚಿನ ಪಾಲು  ಹೆದ್ದಾರಿಯಲ್ಲಿ ಉಳಿದ ವಾಹನದ  ದೀಪ ನನಗೆ ದಾರಿ ತೋರಿಸಿತು.   ಸಮಸ್ಯೆಯಾದುದು ವಾತಾವರಣದಲ್ಲಿನ   ಹನಿ ಮತ್ತು ದೂಳು ಮಿಶ್ರಣವನ್ನು  ನನ್ನ   ತಲೆ ಮೇಲಿನಿಂದ  ಹೊರಡುವ  ಎಲ್ಇಡಿ ಬೆಳಕು ಕೋಲು  ಕೇಂದ್ರಿಕರಿಸಿ  ಅದೊಂದು ಪರದೆಯಂತಾಗಿತ್ತು.  ಶುಭ್ರ  ಎಲ್ಇಡಿ   ಬಿಳಿಗಿಂತ  ಅರಿಶಿನ ಮಿಶ್ರಣದ ಬೆಳಕೂ ಹೆಚ್ಚು ಚೆನ್ನಾಗಿ  ರಸ್ತೆ ತೋರಿಸುತ್ತದೆ.  ನಮ್ಮ  ಮನೆಯ ಒಳ ರಸ್ತೆಯನ್ನು  ತಲಪುವಾಗ  ಅಲ್ಲಿ ವಾಹನ ಸಂಚಾರದಿಂದ  ದೂಳು ಏಳದ ಕಾರಣ  ಸ್ಪಷ್ಟವಾಗಿ ಕಾಣಲು ಪ್ರಾರಂಬವಾಯಿತು.  


ಅಂತೂ  ಹಗಲು  ಬೇಕಾಗುವ  ಸಮಯದಲ್ಲಿಯೇ   ರಾತ್ರಿಯ ಅಸ್ಪಷ್ಟ  ಬೆಳಕಿನಲ್ಲಿಯೂ    ಪ್ರಯಾಣಿಸಿದ್ದೆ.   ಜನಸಂಚಾರ ಕಡಿಮೆಯಾಗಿ ಶಿವರಾತ್ರಿ  ಕಿತಾಪತಿಗಳು ಪ್ರಾರಂಬವಾಗುವ ಮೊದಲೇ  ಮನೆಗೆ ತಲಪಿದ್ದೆ.     ನಾನು  ಇಂದು   ಸುಮಾರು  ೭೦ ಕಿಮಿ ಸೈಕಲಿಸಲು  ನಾಲ್ಕು ಘಂಟೆ  ತೆಗೆದುಕೊಂಡಿದ್ದೆ.  ೮೫೦ ವಾಟ್ಸ್ ವಿದ್ಯುತ್ ಬಳಕೆಯಾಗಿತ್ತು. ಕೆಟ್ಟ ರಸ್ತೆ ಮತ್ತು  ಮಕ್ಕಳ  ದಾರಿಗಡ್ಡವಾಗದಂತೆ  ಜಾಗರೂಕತೆ  ಸ್ವಲ್ಪ ಹೆಚ್ಚು  ವಿದ್ಯುತ್ ಬಳಕೆಗೆ ಕಾರಣವಾಯಿತು.  
  
ಈ  ಕಾರ್ಯಕ್ರಮವನ್ನು ಮಂಗಳೂರಿನ  ವಾರ್ತಾ ಬಾರತಿ ಮತ್ತು   ಪುತ್ತೂರಿನ  ಸುದ್ದಿ  ಬಿಡುಗಡೆ  ಕನ್ನಡ ದಿನ ಪತ್ರಿಕೆಗಳು   ಪ್ರಕಟಿಸಿವೆ.  ಸುದ್ದಿ ಬಿಡುಗಡೆಯ  ಮುಖಪುಟದ   ಮತ್ತು  ಮುಂದುವರಿದ ಬಾಗ ನೋಡಲು  ಇಲ್ಲಿ  ಮತ್ತು ಇಲ್ಲಿ  ಚಿಟಿಕೆ ಹೊಡೆಯಿರಿ.   ಮೇಲೆ ಕಾಣುವ   ವಾರ್ತಾ  ಬಾರತಿಯ  ಸುದ್ದಿಚಿತ್ರವನ್ನು ಮೂಲದಲ್ಲಿ ನೋಡಲು 
http://vbepaper.com/epapermain.aspx   ತೆರೆದ ನಂತರ    ಮೂರನೇಯ  ಪುಟಕ್ಕೆ  ಸಾಗಿ. 

Tuesday, December 01, 2009

ಕಡಲ ತಡಿಯಲ್ಲಿ ಐವತ್ತು ಕಿಮಿ ಸವಾರಿ

ರೋಹಿತ್ ರಾವ್ ಅವರು ಬಂದ ಕೂಡಲೇ ತಂಡದ ಮುಖಂಡತ್ವ ವಹಿಸಿಕೊಂಡರು. ಸದಾಸಂ ಸಾರಥಿ ಅನಿಲನಿಗೆ ಮಾಡು ಬೇಡಗಳ ವಿವರಿಸಿ ನಿರಂತರ ಸಂಚಾರವಾಣಿ ಸಂಪರ್ಕದಲ್ಲಿರುತ್ತೇನೆ ಮತ್ತು ಏನು ಸಂಶಯ ಇದ್ದರೂ ನನ್ನನ್ನು ವಿಚಾರಿಸು ಎಂದು ಸ್ಪಷ್ಟ ಪಡಿಸಿದರು. ಸ್ಥಳ ಗುರುತಿಸುವ ವಿಧಾನ ಅಂದರೆ ಯಾವುದು landmark ಹೌದು ಮತ್ತು ಯಾವುದು ಅಲ್ಲ ಎನ್ನುವುದರ ವ್ಯತ್ಯಾಸ ವಿವರಿಸಿದರು.

ಕೆಲವು ಕಡೆಗಳಲ್ಲಿ ನಮಗೆ ಜತೆಯಲ್ಲಿ ಸಾಗಲು ಸಾದ್ಯವಿಲ್ಲ ಎನ್ನುವ ಕಾರಣಕ್ಕೆ ಹದಿನಾರರ ಹಿರಿಯ ಮಗ ಅನಿಲ ಪ್ರಥಮ ಚಾಲಕ ಎಂದು ಮೊದಲೇ ನಿರ್ದರಿಸಿದ್ದೆ. ಸಂಪರ್ಕ ಸಾದ್ಯತೆಯ ನೆಲೆಯಲ್ಲಿ ಎಲ್ಲೆಲ್ಲಿ ಯಾರು ಗಾಡಿ ಓಡಿಸುವುದು ಎಂದು ಮುಂಚೆಯೇ ತೀರ್ಮಾನಿಸಿದ್ದೆ. ಆದರೆ ಹನ್ನೆರಡರ ಕಿರಿಯ ಸುನಿಲ ಹೊಟ್ಟೆ ಸಮಸ್ಯೆಯಿಂದಾಗಿ ನಿಗದಿತ ದೂರವನ್ನು ಕ್ರಮಿಸಲಿಲ್ಲ. ಇದರಿಂದಾಗಿ ಪ್ರಯಾಣದ ಸಿಂಹಪಾಲು ಅನಿಲ ಚಲಾಯಿಸಿದ ಮತ್ತು ರೋಹಿತರ ಪುಟ್ಟ ಮಗ ಅಭಿನವ ಅವನಿಗೆ ಜತೆಗಾರನಾಗಿದ್ದ. ರೋಹಿತರ ಬಾಷೆಯಲ್ಲಿ ಅಭಿಗೆ ಕಾಂಗರೂ ಸವಾರಿ.

ಅನಿಲನಿಗೆ ಅನಿರೀಕ್ಷಿತವಾಗಿ ಎದುರಾದದ್ದು ನೆಲ ಬಾಂಬುಗಳು. ಈ ನೆಲಬಾಂಬುಗಳ ಸಿಡಿಸುತ್ತಾ ಸಾಗಿದ ನಮ್ಮ ಸರದಾರ. ಅಲ್ಲಿ ಶೌಚಾಲಯ ವ್ಯವಸ್ತೆ ಇಲ್ಲದೆ ಸಮುದ್ರದ ಬದಿಯಲ್ಲಿ ಕುಕ್ಕರುಗಾಲಿನಲ್ಲಿ ಕೂರುವುದು ಸಾಮಾನ್ಯ. ಈ ಸುಳಿವು ರೋಹಿತ್ ನನಗೆ ವಾರದ ಮೊದಲೇ ಹೇಳಿದ್ದರು ಮತ್ತು ನಾನು ಅನಿಲನಿಗೆ ಪೂರ್ವ ಸೂಚನೆ ಕೊಟ್ಟಿದ್ದೆ. ಅವನು ಅದನ್ನು ಗಂಬೀರವಾಗಿ ಪರಿಗಣಿಸಿರಲಿಲ್ಲ.

ಪಣಂಬೂರಿನಲ್ಲಿ ೭೫೦ ಮೀಟರ್ ಕಡಲ ತೀರ ಖಾಸಗಿ ಸಂಸ್ಥೆ ನಿರ್ವಹಣೆಯಾದುದರಿಂದ ಸ್ವಚ್ಚವಾಗಿತ್ತು. ಅದನ್ನು ನೋಡಿದ ನಮ್ಮ ಸಾರಥಿ ಅನಿಲ ಉದ್ದಕ್ಕೂ ಈ ರೀತಿ ಸ್ವಚ್ಚ ಇರುವುದೆಂದು ಬಾವಿಸಿ ವೇಗ ಹೆಚ್ಚಿಸಿಕೊಂಡಿರಬೇಕು. ನಿಧಾನವಾಗಿ ಹೋಗುತ್ತಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಸ್ವಚ್ಚವಾದ ಸ್ಥಳ ಕೊನೆಗೊಳ್ಳುವಾಗ ಇವನಿಗೆ ಗ್ರಹಿಕೆಗೆ ಬರಲು ವಿಳಂಬವಾಯಿತು.



ಎರಡು ಕಿಮಿ ಮುಂದೆ ಚಿತ್ರಾಪುರದಲ್ಲಿ ರೋಹಿತರ ಗೆಳೆಯ ಯತೀಶ್ ಬೈಕಂಪಾಡಿ ಅವನನ್ನು ತಡೆಗಟ್ಟಿ ಒಳಗೆ ಕರೆಸಿದರು. ಅಲ್ಲಿ ಇವನು ಮೊದಲು ಕೇಳಿದ್ದೇ ಕೈ ಮೈ ತೊಳೆದುಕೊಳ್ಳಲು ನೀರು. ನೆರೆದವರಲ್ಲಿ ಒಬ್ಬರು ಛೀ ಪೀ ಎಂದಾಗ ಇವನು ಮತ್ತೂ ಕಂಗಾಲು. ಅಂತೂ ಗಂಧದ ಸಾಬೂನು ಹಾಕಿ ಚೆನ್ನಾಗಿ ತೊಳೆದುಕೊಂಡು ದುರ್ಗಂಧದಿಂದ ಪಾರಾದ. ಆಶ್ಚರ್ಯಕರವೆನಿಸುವಂತೆ ಮುಂದೆ ಕುಳಿತಿದ್ದ ಅಭಿಗೆ ಸ್ವಲ್ಪವೂ ಸಿಂಪರಣೆ ಆಗದಿರುವುದು ನಮಗೆ ಅನುಕೂಲವಾಯಿತು.

ಚಿತ್ರಾಪುರದಲ್ಲಿ ಕಡಲ ತೀರ ಸ್ವಚ್ಚಗೊಳಿಸುವ ಕರ ಸೇವೆ ನಡೆಯುತ್ತಿತ್ತು. ಹಾಗೆ ಅವರಿಗೆಂದು ಏರ್ಪಾಡಾದ ಅವಲಕ್ಕಿ ಸಜ್ಜಿಗೆ ಚಾ ನಮಗೂ ಸಮರಾಧನೆಯಾಯಿತು. ಸದಾಸಂ ಸವಾರಿ ಕಂಡ ಊರವರು ಮುಂದಿನ ದಾರಿಯ ಬಗೆಗೆ ಖಚಿತ ಮಾಹಿತಿ ಇತ್ತರು. ಅಭಿವೃದ್ದಿ ಕಾರ್ಯಗಳು ಕಡಲ ತೀರದ ರಸ್ತೆ ಹಾಗೂ ಸಮುದ್ರಕ್ಕೆ ಕಲ್ಲು ಹಾಕುವ ಕೆಲಸ ನಿರಂತರವಾಗಿ ನಡೆಯುತ್ತಿರುವ ಕಾರಣ ರೋಹಿತ್ ಆರು ತಿಂಗಳು ಹಿಂದಿನ ಕಣ್ಣಾರೆ ಕಂಡ ಮಾಹಿತಿ ಹಳೆಯ ಸುದ್ದಿಯಾಗುತ್ತದೆ.
 
ಸುರತ್ಕಲ್ ದೀಪಸ್ತಂಬ ಬಳಿಯಲ್ಲಿ ಸಮುದ್ರ ತೀರದಲ್ಲಿ ಪೂರಾ ಕಲ್ಲು. ತೀರದಿಂದ ಮೇಲಕ್ಕೆ ಬಂದು ಸುತ್ತು ಬಳಸಿ ಮರಳ ತೀರಕ್ಕೆ ವಾಪಾಸು. ಸದಾಸಂ ಸಾಗಲು ಸ್ಪಷ್ಟ ನಿರ್ದೇಶನ ಕೊಟ್ಟ ರೋಹಿತ್ ಮುಂದಿನ ಬೇಟಿಯ ಜಾಗಕ್ಕೆ ದಾವಿಸುತ್ತಿದ್ದರು. ನಾನು ಬಸ್ಸಿನಲ್ಲಿ ಬಂದಿಳಿದ ಗೆಳೆಯ ಅನಿಲ್ ಕುಮಾರರ ರಸ್ತೆ ಬದಿಯಿಂದ ಕರಕೊಂಡು ಶರತ್ ಬಾರಿನ ಹತ್ತಿರ ಸಾಗುವ ರಸ್ತೆಯಲ್ಲಿ ಸಸಿಹಿತ್ಲು ಸಮೀಪದ ಸಮುದ್ರ ತೀರಕ್ಕೆ ಹೋದೆ. ತಡವಾಗಿಯಾದರೂ ಅನಿಲಕುಮಾರ್ ನಮ್ಮ ತಂಡ ಸೇರಿಕೊಂಡದ್ದು ಬಹಳ ಉಪಕಾರವಾಯಿತು. ಮುಂದೆ ಸಂಜೆ ವರೆಗೆ ವಾನ್ ಓಡಿಸುವುದೂ ಪೋಟೊ ತೆಗೆಯುವುದೂ ಅವರು ಮಾಡಿದರು.




ಸದಾಸಂನಲ್ಲಿ ಸಾಗುವ ಅನಿಲ ಅಭಿಗೆ ಕಡಲ ತೀರದ ನೇರದಾರಿ. ಅನುಸರಿಸುವ ನಾವು ಸುತ್ತು ಬಳಸಿ ಕೆಲವೊಮ್ಮೆ ಗುಡ್ಡ ಹತ್ತಿ ಇಳಿದು ಸಾಗುವಾಗ ಅವರು ಮೊದಲೇ ಗಮ್ಯ ಸ್ಥಾನ ತಲಪಿರುತ್ತಾರೆ. ಒಂದಷ್ಟು ದೂರ ಸದಾಸಂ ಸಾಗುವ ವರೆಗೆ ಪೊಟೊ ತೆಗೆಯುತ್ತಿದ್ದು ನಂತರ ಕಾರಿಗೆ ಹಿಂತಿರುಗಿ ಓಡಿ ಬಂದು ಕೆಮರ ಜೋಪಾನವಾಗಿ ತೆಗೆದಿರಿಸಿ ಕಾರು ಓಡಿಸುವ ರೋಹಿತ್ ಒಮ್ಮೆಲೆ ಎರಡು ಮೂರು ಕೆಲಸಗಳಲ್ಲಿ ಮಗ್ನರಾಗಿರುತ್ತಿದ್ದರು. ಇದೆಲ್ಲಾ ಮಾಡುವುದಲ್ಲದೆ ಅಲ್ಲಲ್ಲಿ ಹಕ್ಕಿಗಳ ಚಿತ್ರವನ್ನೂ ಸೆರೆ ಹಿಡಿಯುತ್ತಿದ್ದರು.

ಮದ್ಯಾಹ್ನ ವರೆಗೆ ನಮ್ಮ ಜತೆಯಲ್ಲಿದ್ದ ಮೊಟರ್ ಸೈಕಲಿನಲ್ಲಿ ಬಂದ ನಿಬಿಶ್ ಇಲ್ಲಿ ಬಹಳ ಸಹಾಯಮಾಡಿದರು. ಅಂತೂ ಗಡಿಬಿಡಿಯಲ್ಲಿ ಕಡಲತೀರಕ್ಕೆ ತಲಪುವಾಗ ನಮಗೆ ಸದಾಸಂ ಸವಾರರು ಮುಂದೆ ಸಾಗಿದ್ದಾರೋ ಅಲ್ಲ ಇನ್ನೂ ಹಿಂದಿನಿಂದ ಬರುತ್ತಿದ್ದಾರೋ ಎನ್ನುವ ಗೊಂದಲ ಎದುರಾಗುತಿತ್ತು. ಕೆಲವು ಕಡೆಗಳಲ್ಲಿ ಸಮುದ್ರಕೊರೆತಕ್ಕೆ ಕಲ್ಲು ಹಾಕಿದ ಕಾರಣ ರಸ್ತೆಯಿಂದ ಗೋಚರಿಸುವುದಿಲ್ಲ.

ಸಸಿಹಿತ್ಲು ಮುಂದಿನ ಸುಮಾರು ಆರು ಕಿಮಿ ಉದ್ದಕ್ಕೂ ರಸ್ತೆ ಕಡಲ ತೀರದಲ್ಲಿಯೇ ಸಾಗುತ್ತದೆ. ಅನಂತರ ಸುನಿಲ ಸವಾರಿಗೆ ಕುಳಿತ. ಮುಂದಿನ ದಾರಿಯಲ್ಲಿ ಸಾಗುವಾಗ ಹೆಚ್ಚು ಕಮ್ಮಿ ನಮ್ಮ ಕಣ್ಣೆದುರೇ ಇದ್ದ ಅನ್ನಬಹುದು. ಅಂತೂ ಸುಮಾರು ಹನ್ನೆರಡುವರೆಗೆ ಮೂಲ್ಕಿ ಅಳಿವೆ ಬಾಗಿಲಿಗೆ ತಲಪಿದೆವು.



ಶಾಂಬವಿ ಮತ್ತು ನಂದಿನಿ ನದಿಗಳು ಜತೆಯಾಗಿ ಸಮುದ್ರ ಸೇರುವ ಈ ಜಾಗ ಬಹಳ ಚೆನ್ನಾಗಿದೆ. ಹೆಜಮಾಡಿ ಕೋಡಿ, ಕೊಳಚಿಕಂಬಳ ಮತ್ತು ಚಿತ್ರಾಪು ದ್ವೀಪ ನಮ್ಮ ಎದುರಿಗಿತ್ತು. ಸುನಿಲನಿಗೆ ಸಮುದ್ರದಲ್ಲಿ ಡಾಲ್ಫಿನ್ ಅಲ್ಲಿ ಕಂಡದ್ದು ಬಹಳ ಸಂತಸವಾಯಿತು. ಅಗಾಗ ಪಕ್ಷಿ ವೀಕ್ಷಣೆಗೆ ಹೊಳೆಯಾಚೆಯ ಚಿತ್ರಾಪುವಿಗೆ ಬರುವ ರೋಹಿತ್ ಅವರಿಗೆ ಇದು ಬಹಳ ಪರಿಚಿತ ಪ್ರದೇಶ. ನಮಗೆ ವಿವಿದ ಸಮಯದಲ್ಲಿ ಬರುವ ಹಕ್ಕಿಗಳ ಹಾಗೂ ಅವುಗಳ ವರ್ತನೆಯ ಬಗ್ಗೆ ಮಾಹಿತಿ ಕೊಟ್ಟರು. ಅಲ್ಲಿ ಮುಕ್ಕಾಲು ಘಂಟೆ ಕಳೆದದ್ದೇ ನಮಗೆ ಗೋತ್ತಾಗಲಿಲ್ಲ.





ಮೂಲ್ಕಿಯಲ್ಲಿ ನದಿ ದಾಟುವ ಬಗೆಗೆ ಬಾರಿ ಜಿಜ್ನಾಸೆಯಲ್ಲಿದ್ದೆ. ಯೋಚನೆ ಬೇಡ ನನ್ನನ್ನು ಹಿಂಬಾಲಿಸು ಎಂದ ರೋಹಿತ್ ನೇರವಾಗಿ ರಾಷ್ಟ್ರೀಯ ಹೆದ್ದಾರಿ ೧೭ರಲ್ಲಿ ಕಾರು ಓಡಿಸಿದರು. ಮದ್ಯದಲ್ಲಿ ಅನಿಲ ಸದಾಸಂನಲ್ಲಿದ್ದು ನಾನು ಮತ್ತು ಅನಿಲ್ ಕುಮಾರ್ ವಾನಿನಲ್ಲಿ ಹಿಂಬಾಲಿಸಿದೆವು. ಕೆಲವೆಡೆ ಹೋಂಡ ಗುಂಡಿ ತುಂಬಿದ ರಾಜ ರಸ್ತೆ ವಾಹನಗಳಿಗಿಂತ ಸದಾಸಂಗೆ ಹೆಚ್ಚು ಸೂಕ್ತವೆನಿಸುವಂತಿತ್ತು. ಮೂಲ್ಕಿ ಊರ ಮದ್ಯೆ ನಮ್ಮ ಮೆರವಣಿಗೆ ಊಟಕ್ಕೆಂದು ಹೋಟೆಲ್ ಪಕ್ಕದಲ್ಲಿ ನಿಂತಿತು.


ಸದಾ ರೋಹಿತರ ಕಾರನ್ನು ಹಿಂಬಾಲಿಸುತ್ತಿದ್ದ ಸದಾಸಂ ಫಕ್ಕನೆ ಎದುರಲ್ಲಿರುವವರಿಗೆ ಗೋಚರವಾಗುತ್ತಿರಲಿಲ್ಲ. ದಾಟಿದ ತಕ್ಷಣ ಇದ್ಯಾವ ಕರ್ಕಶ ಶಬ್ದ ಎಂದು ಜನರು ತಿರುಗಿ ನೋಡುವಾಗ ಅನಿರೀಕ್ಷಿತವಾಗಿ ಅಪರೂಪವೆನಿಸುವ ಆಕಾರದ ಸದಾಸಂ ಗೋಚರವಾಗುತ್ತದೆ. ಆಗ ಬಾಯಿ ಬಿಟ್ಟು ನೋಡುವ ಅವರ ಅಶ್ಚರ್ಯದ ನೋಟ ನನಗೂ ನಾನಿದ್ದ ವಾಹನ ಚಾಲನೆ ಮಾಡುತ್ತಿದ್ದ ಅನಿಲ್ ಕುಮಾರರಿಗೂ ಒಳ್ಳೆಯ ಮನರಂಜನೆಯಾಗಿತ್ತು.



ಉಳಿದ ಇಬ್ಬರು ಚಾಲಕರಂತೆ ಅನಿಲನೂ ಅವನ ವಾಹನದ ಕೀಲಿಕೈ ಹಿಡಿದುಕೊಂಡು ಹೊಟೇಲಿನೊಳಗೆ ಹೋದ. ನೆನಪಾಯಿತು - ಮೂವತ್ತೈದು ವರ್ಷ ಹಿಂದೆ ನಾನು ಮೊದಲು ನಮ್ಮ ಹಳ್ಳಿಯ ಪಕ್ಕದ ಪಟ್ಟಣಕ್ಕೆ ಕೊಂಡು ಹೋದ  ಮೊದಲ  ವಾಹನ ಹಿಂಬಾಲಕ ಗಾಡಿ ಒಳಗೊಂಡ ನಮ್ಮ ಪವರ್ ಟಿಲ್ಲರ್.  ನೂರು ಲೀಟರ್ ಡೀಸಲ್ ತರಲು ಟಿಲ್ಲರ್ ತಗೊಂಡು ಹೋಗಲು ಅಪ್ಪನ ಒಪ್ಪಿಗೆ ಪಡಕೊಂಡಿದ್ದೆ. ಅಂದು ವಾಹನ ಚಾಲನೆ ಪರವಾನಿಗೆ ಪಡಕೊಳ್ಳಲು ನನಗೆ ಪ್ರಾಯ ಆಗಿರಲಿಲ್ಲ.  ಅನಿಲನಿಗೂ ಈಗ  ಇತರ ವಾಹನ ಪರವಾನಿಗೆ ಪಡಕೊಳ್ಳಲು ಪ್ರಾಯ ಆಗಲಿಲ್ಲ.

ನಮಗೆ ಮೊದಲ ನೋಟಕ್ಕೆ ಮರಳಿನಲ್ಲಿ ಸಾಮ್ಯತೆ ಕಂಡರೂ ಸಮೀಪದಿಂದ ನೋಡುವಾಗ ವ್ಯತ್ಯಾಸ ಗುರುತಿಸಲು ಸಾದ್ಯವಾಗುತ್ತದೆ. ಒದ್ದೆ ಮರಳಾಗಲಿ ಒಣ ಮರಳಾಗಲಿ ತುಲನೆ ಮಾಡುವಾಗ ಚಕ್ರಕ್ಕೆ ಕೊಡುವ ಹಿಡಿತದಲ್ಲಿ ಬಹಳ ವ್ಯತ್ಯಾಸ ಇರುತ್ತದೆ. ಅದುದರಿಂದ ನಮ್ಮ ಸಮಯಸೂಚಿ ಪೂರಾ ಅಡಿಮೇಲಾಯಿತು. ಚಕ್ರಕ್ಕೆ ಹಿಡಿತ ಸಿಗದೆ ಹುಗಿಯುತ್ತಾ ನಿದಾನವಾಗಿ ಸಾಗುವುದು ಹಲವು ಕಡೆಗಳಲ್ಲಾಯಿತು.

ಬಿಸಿಲಿನ ಹೊಡೆತ ಬಹಳ ಇರುತ್ತದೆ ಎಂದು ರೋಹಿತ್ ಸೂಚನೆ ಮೊದಲೇ ಕೊಟ್ಟ ಕಾರಣ sunscreen lotion ತಗೊಂಡು ಹೋಗಿದ್ದೆವು. ಮೂವರು ಮಕ್ಕಳು ಅದನ್ನು ಹಚ್ಚಿಕೊಂಡು ಚರ್ಮ ಬೆಂದು ಹೋಗುವುದರ ತಪ್ಪಿಸಿಕೊಂಡರು. ನಾವು ನಿರಂತರವಾಗಿ ಬಿಸಿಲಿನಲ್ಲಿ ಇಲ್ಲದ ಕಾರಣ ನಮಗೆ ಹಚ್ಚಿಕೊಳ್ಳದಿರುವುದು ತೊಂದರೆಯಾಗಲಿಲ್ಲ.

ಸದಾಸಂ ಬಿಡಿಬಾಗಗಳ ಬಗ್ಗೆ ಬಹಳ ಕಾಳಜಿ ವಹಿಸಿದ್ದೆ. ಭಾನುವಾರ ಎಂದರೆ ಯಾವ ಬಿಡಿಬಾಗ ಅಂಗಡಿಯೂ ತೆರೆದಿರುವುದಿಲ್ಲ. ಸಾಮಾನ್ಯವಾಗಿ ಬದಲಾಯಿಸುವ ಎಲ್ಲ ಸಾಮಾನುಗಳ ಪಟ್ಟಿ ಮಾಡಿ ಒಯ್ದಿದ್ದೆ. ಚಕ್ರ ಮೇಲೆ ಎರಚುವ ಮರಳು ಚೈನ್ ಕೊರೆಯುವ ಕಾರಣ ಒಂದು ಚೈನ್ ಮಾತ್ರವಲ್ಲ ಹೆಚ್ಚುವರಿ ಲಿಂಕ್ ಸಹಾ ನನ್ನಲ್ಲಿತ್ತು. ಆದರೆ CD unit ಹೊರತು ಪಡಿಸಿ ಯಾವ ಬಾಗವೂ ಕೈಕೊಡಲಿಲ್ಲ. ಅದೂ ಸಹಾ ಮುಂಚಿನ ದಿನದ ಸ್ನಾನದಿಂದಾಗಿ ಇರಬಹುದು ಅನ್ನಿಸುತ್ತದೆ. ಯಾಕೆಂದರೆ ವಿಫಲವಾದ ಬಿಡಿ ಬಾಗ ಈಗ ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ.




ಭರತದ ಸಮಯವಾದುದರಿಂದ ಎರಡು ಜಾಗಗಳಲ್ಲಿ ಏರಿನಿಂತ ನೀರು ನಮಗೆ ದಾರಿಗಡ್ಡವಾಯಿತು. ಪಡುಬಿದ್ರೆ ಸಮೀಪ ವಾಪಾಸು ಹೆದ್ದಾರಿಗೆ ಬರದೆ ವಿದಿಯಿರಲಿಲ್ಲ. ಉಚ್ಚಿಲ ಸಮೀಪದಲ್ಲಿ ಪಕ್ಕದಲ್ಲಿರುವ ರಸ್ತೆಗೆ ಏರಿ ದಾಟಲು ಸಾದ್ಯವಾಯಿತು. ಗೂಗಲ್ ಚಿತ್ರವನ್ನು ಅನುಸರಿಸಿ ಕಣ್ಮುಚ್ಚಿ ಬರುವಂತಿಲ್ಲ ಅನ್ನುವುದಕ್ಕೆ ಇದೊಂದು ಉದಾಹರಣೆ. ಭಟ್ಕಳ ಸಮೀಪದ ಗೂಗಲ್ ಚಿತ್ರದಲ್ಲಿ ಸದಾ ಮೋಡ ಹಾಗೂ ಮೋಡದ ನೆರಳು ಕಾಣುತ್ತದೆ ಅನ್ನೋದು ಬೇರೆ ವಿಚಾರ.
 
ಸಂಜೆ ನಾಲ್ಕೂವರೆಗೆ ಕಾಪು ದೀಪಸ್ಥಂಬ ತಲಪಿದರು ಅನಿಲ್ ಮತ್ತು ಅಭಿ. ಅಲ್ಲಿ ಸುಂದರ ಮರಳ ಶಿಲ್ಪ ಮಾಡಿದ್ದರು. ಕಾಪುವಿನಲ್ಲಿ ದೀಪಸ್ಥಂಬ ದಾಟಿದ ನಂತರ ಗೂಗಲ್ ಚಿತ್ರ ಒಂದು ತೋಡು ದಾಟಲು ಸಂಕ ತೋರಿಸುತ್ತದೆ. ಆದರೆ ಅದನ್ನು ಸಮೀಪಿಸಲು ದಾರಿ ಉಂಟೊ ಅನ್ನುವುದು ನನಗೆ ಅಲ್ಲಿಗೆ ತಲಪುವ ತನಕವೂ ಸಂಶಯ ಇತ್ತು. ಆದರೆ ತೊಂದರೆ ಉಂಟಾಗಲಿಲ್ಲ. ಸದಾಸಮ್ ಮತ್ತು ಜತೆ ವಾಹನಗಳು ಸಂಕ ಸಲೀಸಾಗಿ ದಾಟಿದವು. ಅನಂತರ ಹೊಯಿಗೆಯಲ್ಲಿ ಹೋಗುವವನನ್ನು ಬೀಳ್ಕೊಟ್ಟೆವು.

ಗುಡುಗು ಮಿಂಚು ಮಳೆಯ ಲಕ್ಷಣಗಳು ಜೋರಾಗುತ್ತಾ ಇತ್ತು. ಅನಿಲ ಒದ್ದೆಯಾಗಲು ಅಷ್ಟೊಂದು ಆಸಕ್ತಿ ತೋರಿಸಲಿಲ್ಲ. ನಮ್ಮ ಒತ್ತಡಕ್ಕೆ ಮುಂದುವರಿಯಲು ಒಪ್ಪಿದ. ಸ್ವಲ್ಪ ದೂರ ಅನಂತರ ನಮ್ಮ ಮುಂದಿನ ಭೇಟಿಯಲ್ಲಿ ನಾನು ಅವನನ್ನು ಇಳಿಸಿ ಸವಾರಿಗೆ ಸದಾಸಂ ಏರಿದೆ. ಎರಡು ಕಿಮಿ ಮುಂದೆ ತಂಡದವರನ್ನು ನನಗೆ ಸಿಕ್ಕಲು ಹೇಳಿದೆ.

ಐವತ್ತಡಿ ಅಡಿ ಸಾಗುವುದರೊಳಗೆ ಬಂದ ಬೃಹತ್ ತೆರೆ ನನ್ನನ್ನು ಸೊಂಟದ ವರೆಗೂ ಸದಾಸಂನ್ನು ಸಂಪೂರ್ಣವಾಗಿ ತೋಯಿಸಿತು. ಎಲ್ಲಿಯೊ ವಾಹನದ ವಿದ್ಯುತ್ ಜಾಲದಲ್ಲಿ ಅವ್ಯವಸ್ಥೆ ಉಂಟು ಮಾಡಿತು. ಯಂತ್ರ ಸ್ಥಬ್ದವಾಯಿತು. ಅಲ್ಲಿನ ವರೆಗೆ ಸದಾಸಂ ಚಾಲಕ ಸದಾ ಸಂಚಾರವಾಣಿ ಇಟ್ಟುಕೊಂಡಿದ್ದರೆ ಇಲ್ಲಿ ನನ್ನ ಜತೆಯಲ್ಲಿ ಮಾತ್ರ ಅದು ಇರಲಿಲ್ಲ. ಹಾಗಾಗಿ ನನಗೆ ತಂಡದವರ ಸಂಪರ್ಕಿಸಲು ಕಷ್ಟವಾಯಿತು. ಎರಡೂ ಬದಿ ನೀರಿನ ಮದ್ಯೆ ಅಲ್ಲಿದ್ದದ್ದು ಒಂದೇ ಹಾದಿ. ಕೊನೆಗೆ ದಾರಿಯಲ್ಲಿ ಹೋಗುತ್ತಿರುವ ಒಂದು ರಿಕ್ಷವನ್ನು ನಿಲ್ಲಿಸಿ ಪಾಚಿ ಬಣ್ಣದ ಒಮ್ನಿಗೆ ಸಂದೇಶ ಕಳುಹಿಸಲು ಯತ್ನಿಸಿದೆ.

ನಾನು ಮನೆಯಿಂದ ಹೊರಡುವಾಗ ಸಿದ್ದ ಪಡಿಸಿದ ವೇಳಾಪಟ್ಟಿಯಲ್ಲಿ ಸಂಜೆ ಐದೂವರೆಗೆ ಸದಾಸಂ ವಾಹನಕ್ಕೆ ಹೇರುವುದಾಗಿತ್ತು. ಮನೆಗೆ ವಾಪಾಸು ಬರಲು ಕನಿಷ್ಟ ಮೂರು ಘಂಟೆ ಬೇಕೆಂದು ತೀರ್ಮಾನಿಸಿದ್ದೆ. ಆದರೆ ನಾನು ಸದಾಸಂ ಏರಿದಾಗಲೇ ಘಂಟೆ ಐದಾಗಿತ್ತು.

ಮುಂದೆ ಹೋದವರು ಸ್ವಲ್ಪ ಸಮಯ ಕಾದು ಅನಂತರ ವಾಪಾಸು ಬಂದರು. ನಾನು ಅಷ್ಟರೊಳಗೆ ಊರ ಹುಡುಗರ ಸಹಾಯದಿಂದ ನನ್ನ ಕುದುರೆಯನ್ನು ರಸ್ತೆ ಬದಿಗೆ ತಂದಿರಿಸಿದ್ದೆ. ಮಳೆ ಜೋರಾಗಿತ್ತು. ನಾವೆಲ್ಲ ಒದ್ದೆಯಾಗಿದ್ದೆವು. ಸದಾಸಂ ಎತ್ತಿ ಒಮ್ನಿಯೊಳಗಿಟ್ಟೆವು. ಹೆದ್ದಾರಿ ತಲಪುವಾಗ ಗುಡುಗು ಸಿಡಿಲು ಮಳೆ. ವಾಪಾಸು ಬರುವಾಗಲೂ ಮುಡಿಪು ದಾರಿಯಾಗಿ ಬಂದೆ. ಬಸ್ಸಿನಲ್ಲಿ ಬಂದ ಇಬ್ಬರು ಅನಿಲರು ಊರು ಮುಟ್ಟುವಾಗ ನಾನೂ ತಲಪಿದೆ. ಅಂತೂ ರಾತ್ರಿ ಒಂಬತ್ತುವರೆಗೆ ಮನೆ ಸೇರಿದೆವು.

ಮರುದಿನ ಮಧ್ಯಾಹ್ನ ನೋಡುವಾಗ ಪೈಂಟ್ ಮಾಸಿದ ಜಾಗದಲ್ಲಿ ತುಕ್ಕು ಹಿಡಿಯಲು ಪ್ರಾರಂಬವಾಗಿತ್ತು. ಅಂದು ಸಂಪತ್ ಚೆನ್ನಾಗಿ ತೊಳೆದ ಕಾರಣ ಉಪ್ಪು ನೀರಿನ ಲೇಪನ ಅಳಿಸಿಹೋಯಿತು.

Friday, November 27, 2009

ಕಡಲ ತೀರದ ಸದಾಸಂ ಪ್ರವಾಸಕ್ಕೆ ತಯಾರಿ

ಒಮ್ಮೆ ಕಡಲ ತೀರಕ್ಕೆ ಸದಾಸಂ ತೆಗೆದುಕೊಂಡು ಹೋದ ನಂತರ ಮುಂದಿನ ಸವಾಲಿಗೆ ವಿಕಿಮಾಪಿಯ ಭೂಪಟದಲ್ಲಿ ಅವಕಾಶ ಹುಡುಕುತ್ತಿದ್ದೆ. ಪಣಂಬೂರಿನ ಬಂದರು ದಾಟಿದರೆ ಮೂಲ್ಕಿಯಲ್ಲಿ ಮಾತ್ರ ಅಡಚಣೆ. ನಂದಿನಿ ಶಾಂಬವಿ ನದಿಗಳು ಜತೆಯಾಗಿ ಸಮುದ್ರ ಸೇರುವ ಮೂಲ್ಕಿ ಅಳಿವೆ ಬಾಗಿಲನ್ನು ದೋಣಿಯಲ್ಲಿ ದಾಟಲು ಸಾದ್ಯವಾದರೆ ಮುಂದೆ ಮಲ್ಪೆ ವರೆಗೆ ತೊಂದರೆಯಿಲ್ಲ     ಸುಮಾರು ಐವತ್ತು ಕಿಲೋಮೀಟರ್  ಸವಾರಿಗೆ  ಸಿಗುತ್ತದೆ.  ಹೆದ್ದಾರಿಯಲ್ಲಿ ನಮಗೆ ಸಿಗುವ ಹಲವು ನದಿಗಳು ಜತೆ ಸೇರಿ ಮೂಲ್ಕಿ ಮಲ್ಪೆಯಲ್ಲಿ ಸಮುದ್ರ ಸೇರುತ್ತದೆ. ಹಾಗಾದರೆ ಈ ತೀರದಲ್ಲಿ ಮಕ್ಕಳೊಂದಿಗೆ ಹೋದರೆ ಎಂದು ಕನಸು ಕಟ್ಟಲು ಪ್ರಾರಂಬ. ದೈಹಿಕವಾಗಿ ದುರ್ಬಲನಾದ ನನಗೆ ಪಕ್ಕದ ಮನೆಯ ಅನಿಲ್ ಕುಮಾರ್ ಮೇಲುಸ್ತುವಾರಿಯಾಗಿ ಬಂದರೆ ಸಹಾಯವಾದೀತು ಎಂದು ಅಲೋಚಿಸಿದೆ. .

ನಮ್ಮಲ್ಲಿ ಇಂತಹ ಪ್ರಯಾಣಗಳ ರೂಪಿಸುವುದು ಸುಲಭವಲ್ಲ. ಇದೊಂದು ಸವೆಯದ ದಾರಿ. ಅದುದರಿಂದ ಜಾಗ್ರತೆಯಿಂದ ಮುಟ್ಟಿಮುಟ್ಟಿ ಸಾಗಬೇಕಾಯಿತು. ಗಡಿ ಪ್ರದೇಶದಿಂದ ಹಾಗೂ ಕಡಲತೀರದಿಂದ ಇನ್ನೂರು ಕಿಮಿ ವರೆಗೆ ನಿರ್ಬಂದಿತ ಪ್ರದೇಶವೆಂದು ಪರಿಗಣನೆ. ಇತ್ತೀಚಿನ ವರೆಗೆ ಭೂಪಟ ಸಂಪಾದಿಸುವುದು ಸಾಹಸದ ವಿಚಾರವಾಗಿತ್ತು. ಆರೋಹಣ ಪರ್ವತಾರೋಹಿಗಳ ತಂಡಕ್ಕಾಗಿ ಅಶೋಕವರ್ಧನರು   ಒಂದು ಸರಕಾರಿ ಭೂಪಟ ಪಡಕೊಳ್ಳಲು ಮಾಡಿದ ಪ್ರಯತ್ನಗಳು ದಾಖಲಾರ್ಹ. ಈಗ ಆಕಾಶ ಚಿತ್ರ ಲಬ್ಯವಾಗುವ ಕಾರಣ ಪರವಾಗಿಲ್ಲ.

ಈ ಪ್ರವಾಸಕ್ಕೆ ಅಡಿಪಾಯ ಹಾಕಲು ಘಂಟೆಗಟ್ಟಲೆ ಕಂಪ್ಯುಟರ್ ಮುಂದೆ ವಿಕಿಮಾಪಿಯ ನೋಡುತ್ತಾ ಕೂತಿದ್ದೇನೆ. ಕ್ರಮ ಬದ್ದವಾಗಿ ಕೆಲಸ ಮಾಡಲು ಚಿತ್ರಗಳಿಗೆ ಕ್ರಮಾಂಕ ಕೊಡುವುದರಲ್ಲಿ ಜಾಗ್ರತೆ ಬೇಕು. ನಡುವೆ ಅಂತರ ಉಳಿಯದಂತೆ ಒಂದರ ಕೊನೆಯಿಂದ ಮತ್ತೊಂದರ ಪ್ರಾರಂಬ ಅನ್ನುವಂತೆ ವ್ಯವಸ್ತೆಗೊಳಿಸಿದೆ. ಮೊದಲು ಗೂಗಲ್ ಭೂಪಟಕ್ಕೆ ಒಂದು ಎರಡು ಎಂದು ಕ್ರಮಾಂಕ ಕೊಟ್ಟೆ. ಕಂಪ್ಯುಟರ್ ಗುರುತಿಸುವಾಗ 1,10,11,12,13,....19,2,20,21,22.... ಎನ್ನುವಂತಹ ಸಮಸ್ಯೆ ಎದುರಾಯಿತು. ಅಲ್ಲಿ ಎರಡು ಬಾರಿ ಎಡವಿದ ನಂತರ ಕೊನೆಗೆ ಸ್ಥಳದ ಅಕ್ಷಾಂಶವ ಅನುಸರಿಸಿ ಉದಾಹರಣೆಗೆ ಅಕ್ಷಾಂಶ ೧೩.೩೪೫೬ ದ ನಕ್ಷೆಗೆ ೧೩೩೪೫೬ ಎಂಬ ಸಂಖ್ಯೆ ಕೊಟ್ಟ ನಂತರ ಕೆಲಸ ಸಲೀಸು. ಈ ಪ್ರವಾಸಕ್ಕಾಗಿ ನೂರಾರು ಚಿತ್ರಗಳ ನಕಲು ಮಾಡಿಕೊಂಡಿದ್ದೇನೆ.

ಎಲ್ಲೆಲ್ಲಿ ಕಡಲತೀರದಲ್ಲಿ ರಸ್ತೆ ಉಂಟು ಎನ್ನುವುದನ್ನು ಗುರುತಿಸುವುದು ಮುಂದಿನ ಹೆಜ್ಜೆ. ಅನುಭವ ಕೊರತೆಯಿಂದಾಗಿ ಮಕ್ಕಳನ್ನು ಒಬ್ಬಂಟಿಯಾಗಿ ಬಹು ದೂರ ಕಳಿಸುವಂತಿರಲಿಲ್ಲ. ಕಡಲ ತೀರದಲ್ಲಿಯೇ ರಸ್ತೆ ಇದ್ದರೆ ಚಿಕ್ಕವ ಸುನಿಲ ಸ್ವಲ್ಪ ದೂರವಾದರೆ ದೊಡ್ಡವ ಅನಿಲ ಎಂದು ತೀರ್ಮಾನಿಸಿದೆ. ಜತೆಯಲ್ಲಿ ಸಾಗುವ ಸಹಾಯಕ ವಾಹನ ಒಮ್ನಿಯನ್ನು ಆತ್ಮೀಯರಾದ ಅನಿಲ್ ಕುಮಾರ ಓಡಿಸುವುದಕ್ಕೆ ಒಪ್ಪಿದ ಕಾರಣ ನನಗೆ   ಯೋಜನೆ ರೂಪಿಸಲು ಸಹಾಯವಾಯಿತು.




ಇಂತಹ ಪ್ರವಾಸಕ್ಕೆ GPS ಸಲಕರಣೆ ಬಹಳ ಉಪಕಾರಿ. ಈ ಬಗೆಗೆ ವರುಷದ ಹಿಂದೆ ಬ್ಲೋಗ್ ಬರಹ ಬರೆದಿದ್ದೆ.  ಜಿಪಿಎಸ್
ಉಪಯೋಗಿಸುತ್ತಿರುವ ಶಿರಸಿಯ ಬಾಲು ಹೆಗ್ಡೆಯವರಲ್ಲಿ ಇ-ಪತ್ರ ಮೂಲಕ ವಿಚಾರಿಸಿದೆ. ಹೊರದೇಶದಲ್ಲಿದ್ದ ಅವರು ತಕ್ಷಣ ಉತ್ತರಿಸಿದರೂ ಬೆಂಗಳೂರಿನಿಂದ ತರಿಸುವುದು ಸುಲಭವಲ್ಲ ಮತ್ತು ಒಂದು ಮಳೆಗೆ ಒಂದು ಕೊಡೆ ಕೊಂಡಂತಾಗುವುದೋ ಎನ್ನುವ ಗೊಂದಲದಲ್ಲಿ ಈ ಪ್ರವಾಸದ ಮಟ್ಟಿಗೆ ಅದರ ಆಸೆ ಬಿಟ್ಟೆ. ಅರ್ಥಹೀನ ತೇರಿಗೆಯಿಂದಾಗಿ ನಮಗೆ ತೀರಾ ದುಬಾರಿಯೆನಿಸುವ ಉಪಕರಣ.  ಗುಜರಾತಿನಲ್ಲಿ ಕಳೆದ ವರ್ಷ ಇಬ್ಬರು ಜಿಪಿಎಸ್ ಉಪಯೋಗಿಸಿ ನಮ್ಮ ಅರ್ಥಹೀನ ಕಾನೂನುಗಳಿಗೆ ಸಿಲುಕಿ ಜೈಲುವಾಸ ಅನುಬವಿಸಿದ್ದಾರೆ.  

ಮೂಲ್ಕಿಯಲ್ಲಿ ಹೊಳೆ ದಾಟಲು ಸಾದ್ಯವಾಗುವುದಾದರೆ ಪಣಂಬೂರಿನಿಂದ ಇಲ್ಲವಾದರೆ ಪ್ರಾರಂಬ ಬಪ್ಪನಾಡಿನಲ್ಲಿ ಹೊಳೆಯ ಆಚೆ ಕಡೆಯಿಂದ ಎಂದು ನಿರ್ದರಿಸಿದ್ದೆ. ಸದಾಸಂ ಎರಡು ಬಾರಿ ವ್ಯಾನಿಗೆ ಹಾಕಿ ತೆಗೆಯುವುದು ಶ್ರಮದಾಯಕ. ನಾನು ದೈಹಿಕವಾಗಿ ದುರ್ಬಲನಾದುದರಿಂದ ನನಗೆ ಈ ಹೆಚ್ಚಿನ ಶ್ರಮದಾಯಕ ಕೆಲಸ ಎಳೆದು ಹಾಕಿಕೊಳ್ಳಲು ಆಸಕ್ತಿ ಇರಲಿಲ್ಲ.

ಹೊಳೆದಾಟುವ ಬಗ್ಗೆ ವಿಚಾರಿಸುತ್ತಿರುವಾಗ ಅಶೋಕವರ್ಧನರು ರೋಹಿತ್ ರಾವ್ ಅವರ ಸಂಚಾರವಾಣಿ ಸಂಖ್ಯೆ ಕೊಟ್ಟು ಅವರಲ್ಲಿ ವಿಚಾರಿಸು ಎಂದರು. ರೋಹಿತರು ಎರಡು ಬಾರಿ ನೂರ ಐವತ್ತಕ್ಕೂ ಮಿಕ್ಕಿ ಸ್ಕೌಟ್ ಮಕ್ಕಳ ಸೈನ್ಯವನ್ನು ಮಂಗಳೂರಿನಿಂದ ಮಲ್ಪೆ ತನಕ ಕಾಲ್ನಡುಗೆಯಲ್ಲಿ ಮುನ್ನಡೆಸಿದ ಅನುಭವ ಇರುವಂತಹವರು. ಬೇಟಿಯಾದಾಗ ರೊಹಿತ್ ಅವರು ಸಹಕರಿಸಲು ಒಪ್ಪಿಕೊಂಡರು ಮಾತ್ರವಲ್ಲ ಅಂದು ಕೆಮರ ಹಾಗೂ ಜಿಪಿಎಸ್ ಸಮೇತ ಹಾಜರಿರುತ್ತೇನೆ ಅಂದರು.

ಮೊದಲು ಈ ಪ್ರವಾಸದ ವಿಚಾರ ಹೆಚ್ಚು ಗೆಳೆಯರಲ್ಲಿ ಹಂಚಿಕೊಳ್ಳಲಿಲ್ಲ. ಸಿಮಿತ ಆರೊಗ್ಯದ ಕಾರಣ ನನಗೆ ಗಮನವಿಟ್ಟು ಕಾರ್ಯ ನಿರ್ವಹಿಸಲು ಬಹಳ ಕಷ್ಟವಾಗುತ್ತದೆ. ಅದುದರಿಂದ ಜನರ ಸಂತೆಯಲ್ಲಿ ಗಮನ ಕೈಕೊಡುವುದರ ಇಷ್ಟಪಡುವುದಿಲ್ಲ. ಯಂತ್ರ ಹಾಗೂ ಮಕ್ಕಳ ಮೇಲೆ ಸಂಪೂರ್ಣ ಗಮನವಿಡಲು ನನ್ನ ತಯಾರಿ ಕೆಲವರಿಗೆ ಮಾತ್ರ ತಿಳಿಸಿದ್ದೆ.

ಸಮುದ್ರತೀರದಲ್ಲಿ ಸವಾರಿ ಮಾಡುವಾಗ ತೆರೆಗಳು ತೇವಗೊಳಿಸಿದ ಮರಳಿನಲ್ಲಿ ಸವಾರಿ ಉತ್ತಮ. ಅಲ್ಲಿ ಚಕ್ರಕ್ಕೆ ಗಟ್ಟಿ ತಳ ಸಿಕ್ಕುವ ಕಾರಣ ಸವಾರಿ ಸುಲಭ ಹಾಗೂ ವೇಗವಾಗಿ ಸಾಗಬಹುದು. ಇಂದನ ಖರ್ಚು ಕಡಿಮೆ. ಒದ್ದೆ ಮರಳಿನಲ್ಲಿ ಸವಾರಿ ಸುಲಭ ಎನ್ನುವುದು ಎಲ್ಲಾ ಸಮುದ್ರ ತೀರದಲ್ಲಿ ಸೈಕಲಿಸಿದವರಿಗೂ ತಿಳಿದ ವಿಚಾರ. ಆದರೆ ನಿರಂತರವಾಗಿ ತೆರೆಗಳ ಮೇಲೆ ವಾರೆ ಕಣ್ಣಿಡುತ್ತಾ ಇರಬೇಕಾಗುತ್ತದೆ. ನನ್ನ ತಯಾರಿ ಎಂದರೆ ಸಾದ್ಯವಾದಷ್ಟು comprehensive ಆಗಿ ಚಿಂತಿಸುತ್ತೇನೆ. ಹಾಗೆ ಮಕ್ಕಳಿಗೆ ರಕ್ಷಣಾ ಕವಚ life jacket ಬೇಕಾ ? ಎನ್ನುವ ಪ್ರಶ್ನೆ ಉಂಟಾಗಿತ್ತು. ಬೇಡ, ಅಗತ್ಯವಿಲ್ಲ ಎಂದರು ರೋಹಿತ್. ಈ ತೆರೆಗಳ ಮೇಲೆ ಕಣ್ಣಿಡುವ ವಿಚಾರದಲ್ಲಿ ಕೊನೆ ಹಂತದಲ್ಲಿ ಸೋತವನು ನಾನೇ.

ಸದಾಸಂ ಚೈನಿಗೆ ಕಳೆದ ಸಲ ಕಡಲ ತೀರಕ್ಕೆ ಹೋಗಿ ಬಂದ ನಂತರ ಶಂಕರಣ್ಣನ ಕಾರ್ ವೀಲ್ಸ್ ನಲ್ಲಿ ಡೀಸಲ್ ಸ್ನಾನ ಮಾಡಿಸಿ ಅನಂತರ ಒತ್ತಡದ ಗಾಳಿ ಹಿಡಿದು ಒಣಗಿಸಿದ್ದೆವು. ಈ ಸಲ ಹೋಗುವ ಮೊದಲು ಏನು ಮಾಡಲಿ ಎಂದಾಗ ಎಣ್ಣೆ ಲೇಪನೆ ಬೇಡ ಎಂದರು ಶಂಕರಣ್ಣ. ಅದನ್ನು ಬಿಗಿ ಪಡಿಸುವ ಬಗೆಗೆ ಮೋಹನರಲ್ಲಿ ಮಾತನಾಡುವಾಗ ಸದ್ಯಕ್ಕೆ ಹೀಗೆ ಇರಲಿ, ಮರಳು ಸಂದಿನಲ್ಲಿ ಸೇರಿ ಬಿಗಿಯಾಗಬಹುದು ಎಂದವರು ಹೇಳಿದರು. ದಂಡಯಾತ್ರೆ ಮರುದಿನ ಸದಾಸಂ ಚಕ್ರಗಳನ್ನು ಎತ್ತಿ ನೋಡುವಾಗ ಚೈನ್ ಬಹಳ ಬಿಗಿಯಾದದ್ದು ಕಂಡು ಬಂತು. ಮೊದಲು ಹೆಚ್ಚು ಬಿಗಿಪಡಿಸಿದ್ದರೆ ತುಂಡಾಗುವ ಸಾದ್ಯತೆ ಇದ್ದಿರಬಹುದು.

ಪ್ರವಾಸಕ್ಕೆ ದಿನ ನಿಶ್ಚಯಿಸುವಾಗ ಮರುದಿನ ಮಕ್ಕಳಿಗೆ ರಜೆ ಇರಬೇಕು ಎಂದು ತೀರ್ಮಾನಿಸಿದ್ದೆ. ಹಾಗೆ ೨೮ರ ಬಕ್ರಿದ್ ರಜಾ ದಿನ ಹೋದರೆ ಮರುದಿನ ರವಿವಾರ ಮಕ್ಕಳಿಗೆ  ಶಾಲೆಗೆ ರಜೆ ಮಾಡದೆ   ಸುದಾರಿಸಿಕೊಳ್ಳಲು ಸಾದ್ಯವೆಂದು ಆಲೋಚನೆಯಾಗಿತ್ತು. ಮುಸ್ಲಿಮರ ಹಬ್ಬದ ರಜೆ ಯಾವತ್ತೂ ಅನಿಶ್ಚಿತ. ಚಂದ್ರ ಕಾಣಬೇಕು....... ಈ ಮದ್ಯೆ ಅಶೋಕವರ್ಧನರು ಒಂದು ಕಾರ್ಯಕ್ರಮದ ಸುಳಿವು ಕೊಟ್ಟಾಗ ನಮ್ಮ ಪ್ರವಾಸ ಹಿಂದೂಡಲ್ಪಟ್ಟಿತು. ೨೨ರಂದು ಹೋಗಿ ಬಂದರೆ ಮರುದಿನ ಮಕ್ಕಳಿಗೆ ಷಷ್ಠಿ ರಜೆ ಇತ್ತು  ಅನ್ನುವ ಕಾರಣದಿಂದ  ೨೨ ರವಿವಾರದಂದೇ  ಹೊರಟೆವು.   ಕೊನೆಗೆ ಬಕ್ರಿದ್ ಲೆಕ್ಕದ ಮಕ್ಕಳ ರಜೆಯೂ ಒಂದು ದಿನ ಹಿಂದೂಡಲ್ಪಟ್ಟು ಅಕಸ್ಮಾತ್ ನಾವು ೨೮ ರಂದು ನಿಗದಿ ಪಡಿಸಿದ್ದರೆ ಸಮಯ ಹೊಂದಾಣಿಕೆಯಾಗದೆ ರದ್ದಾಗುವ ಸಾದ್ಯತೆ ಇತ್ತು.

ರೋಹಿತ್ ಅವರು ಬೆಳಗ್ಗೆ ಬೇಗ ಪ್ರಾರಂಬಿಸುವ ಅನಿವಾರ್ಯತೆ ಒತ್ತಿ ಹೇಳಿದ್ದರು. ಬಿಸಿಲಿನ ಹೊಡೆತಕ್ಕೆ ನಾವು ತತ್ತರಿಸುವ ಕಾರಣ ಬಿಸಿಲೇರುವ ಮೊದಲೇ ಸುರುಮಾಡುವುದು ಮಾತ್ರವಲ್ಲ ಸಾಕಷ್ಟು ಕ್ರಮಿಸ ಬೇಕು ಎಂದಿದ್ದರು. ಹಾಗೆ ಬೆಳಗ್ಗೆ ನಾಲ್ಕು ಮುಕ್ಕಾಲಿಗೆ ಮನೆಯಿಂದ ಹೊರಟೆವು. ನೇರ ಮಂಗಳೂರಿನ ದಾರಿ ಹೊಂಡಗುಂಡಿ ತುಂಬಿದ ಕಾರಣ ಹತ್ತು ಕಿಮಿ ಹೆಚ್ಚಿನ ಮುಡಿಪು ಮೂಲಕದ ಬಳಸು ದಾರಿಯಲ್ಲಿ ಸಾಗಿದೆವು. ನಮ್ಮಲ್ಲಿಂದ ಸುಮಾರು ಅರುವತ್ತು ಕಿಮಿ ದೂರದ ಕೂಳೂರು ಮುಟ್ಟಿ ರೋಹಿತರಿಗೆ ಸಂದೇಶ ಕಳುಹಿಸಿದೆ. ಈಗ  ಹೋಟೇಲಿನಲ್ಲಿದ್ದೇವೆ. ಇಪ್ಪತ್ತು ನಿಮಿಷದಲ್ಲಿ ಕಡಲ ತೀರದಲ್ಲಿರುತ್ತೇವೆ.

ನನಗೆ ರೋಹಿತರು ಬರುವ ಮೊದಲೇ ಸದಾಸಂ ಇಳಿಸಿ ಚಾಲನೆ ಮಾಡುವ ತವಕ. ಸ್ವಲ್ಪ diversion ಇದ್ದರೂ ನನ್ನ ಏಕಾಗ್ರತೆ ಬಂಗವಾಗುವ ಕಾರಣ  ಅವರೆಲ್ಲ ಸೇರುವ ಮೊದಲೇ   ಸಂಪೂರ್ಣ ಗಮನವಿಟ್ಟು ಸದಾಸಂ ಪ್ರಯಾಣಕ್ಕೆ ಅಣಿಗೊಳಿಸುವುದು  ಉತ್ತಮ ಅಂದುಕೊಂಡಿದ್ದೆ. ಪಣಂಬೂರು ಕಡಲತೀರದ ವಾಹನ   ನಿಲುಗಡೆ ಪ್ರದೇಶದಲ್ಲಿ ಇದನ್ನು ಇಳಿಸಿದೆವು.

ಹಿಂದಿನ ಸಂಜೆ ವಾಹನಕ್ಕೆ ಏರಿಸುವ ಮೊದಲು ಸ್ವಲ್ಪ ನೀರು ಹಾಕಿ ತೊಳೆದದ್ದು ಸಮಸ್ಯೆ ಉಂಟುಮಾಡಿತು. ಚಾಲನೆ ಸಾದ್ಯವಾದರೂ ಎಂಜಿನ್ ತುಂಬಾ ಎಗರಾಡುತಿತ್ತು. ರೋಹಿತರ ಗೆಳೆಯ ನಿಬಿಶರು ತಂತ್ರಜ್ನರ ಸಂಪರ್ಕಿಸಿದರು. ಅವರು ಬಂದವರೇ ಎರಡೇ ನಿಮಿಷದಲ್ಲಿ CD Unit ತೊಂದರೆ ಎಂದರು. ನಾನು ಹಿಡಿದುಕೊಂಡು ಹೋದ ಬಿಡಿಬಾಗಗಳಲ್ಲಿ ಇದು ಸಹಾ ಇದ್ದ ಕಾರಣ ತಕ್ಷಣ ಬದಲಾಯಿಸಿ ಸಮಸ್ಯೆ ಪರಿಹರಿಸಿಕೊಂಡೆವು. ತಂತ್ರಜ್ನರು ಶುಲ್ಕ ಪಡಕೊಳ್ಳಲು ಒಪ್ಪದೆ ತಮ್ಮ ಬುಲ್ಲೆಟ್ ಹತ್ತಿ ಹೊರಟುಹೋದರು.



Tuesday, November 10, 2009

ಐವರು ಮೊಟರ್ ಸೈಕಲಿನಲ್ಲಿ ಅರುಣಾಚಲ ಪ್ರದೇಶಕ್ಕೆ

 

ಮೊನ್ನೆ ಅಂತರ್ಜಾಲದಲ್ಲಿ ಅರುಣಾಚಲ ಪ್ರದೇಶದಲ್ಲಿ ಮೋಟರ್ ಸೈಕಲ್ ಪ್ರವಾಸದ ಬಗೆಗೆ ಅಮೇರಿಕದಲ್ಲಿ ವಿಡಿಯೋ ಪ್ರದರ್ಶನ ಎಂದು ಸುಳಿವು ಕಂಡು ಆಶ್ಚರ್ಯ ಸಂತಸ ಎರಡೂ ಆಯಿತು. ಅಪರಿಚಿತ ಊರುಗಳಲ್ಲಿ ದೀರ್ಘ ಪ್ರವಾಸ ಎಂದರೆ ನಾವು ಬಹಳಷ್ಟು ತಯಾರಿ ಮಾಡಬೇಕಾಗುತ್ತದೆ. ರಸ್ತೆ ಇಲ್ಲದ ಪ್ರದೇಶದಲ್ಲಿ ಬೆಂಗಾವಲು ವಾಹನ ಇಲ್ಲದ ಕನಿಷ್ಟ ತಯಾರಿಯೊಂದಿಗೆ ಸಂದರ್ಭಕ್ಕೆ ಒಗ್ಗಿಕೊಳ್ಳುವ ಕಥೆ ಊಹನೆಯಲ್ಲಿಯೇ ತುಂಬಾ ಕುಶಿ ಕೊಡುತ್ತದೆ. ನನ್ನ ಪ್ರವಾಸವೂ ಇದೇ ದೋರಣೆಯಲ್ಲಿ ಸಾಗಿತ್ತು.

ಒಮ್ಮೆ ಏಕಾಂಗಿಯಾಗಿ ಲಡಾಕಿಗೆ ಮತ್ತು ಐದು ಜನರ ಪಟಲಾಂ ಕಟ್ಟಿಕೊಂಡು ಅರುಣಾಚಲ ಪ್ರದೇಶದಲ್ಲಿ ರಸ್ತೆಯೇ ಇಲ್ಲದ ಪ್ರದೇಶಗಳಲ್ಲಿ ಮೊಟರ್ ಸೈಕಲ್ ಪ್ರವಾಸ ಮಾಡಿದ ತುಣುಕುಗಳು ಇಲ್ಲಿವೆ.   ಹಿಂದೆ ಪ್ರವಾಸ ಮಾಡಿದವರ ಕಥೆಗಳು ಓದುವಾಗ ನಮಗೆ ಎದುರಾಗಬಹುದಾದ ಸನ್ನಿವೇಶಗಳ ಸುಳಿವು ಕೊಡುತ್ತದೆ. ನಮ್ಮ ಸಮಾಜದಲ್ಲಿ ಬಿನ್ನ ಹಾದಿಯಲ್ಲಿ ನಡೆಯುವ ಚಿಂತನೆಯೇ ಬಹಳ ಕಡಿಮೆ. ಹಲವು ನನ್ನ ಪ್ರಾಯದವರು ಆರಾಮ ಕುರ್ಚಿಯ ಪ್ರವಾಸದಲ್ಲಿಯೇ ತೃಪ್ತರಾಗಿದ್ದರು. ನಾನು ಇಂದಿಗೂ ಇಂತಹ ಕಥೆಗಳ ಇಷ್ಟಪಡುತ್ತೇನೆ.




ನಮ್ಮಲ್ಲಿ ಕಾಶ್ಮೀರಕ್ಕೆ ಮೊಟರ್ ಸೈಕಲಿನಲ್ಲಿ ಹೋಗಿ ಬಂದವರು ಬಹಳ ಜನ ಇದ್ದಾರೆ. ಲಡಾಕಿನಲ್ಲಿ ಪ್ರಪಂಚದ ಅತ್ಯಂತ ಎತ್ತರದ ದಾರಿ ಎನ್ನುವ ಫಲಕದ ಎದುರು ಪೋಟೊ ತೆಗೆದುಕೊಳ್ಳುವುದು ನಮ್ಮವರ ಅತಿ ಮುಖ್ಯ ಗುರಿಯಾಗಿತ್ತು. ಆದರೆ ಈ ವ್ಯಕ್ತಿ ಒಬ್ಬಂಟಿಯಾಗಿ ಹೆಣ ಬಾರದ ಕೆಮರಾ ಹೊತ್ತುಕೊಂಡು ಹೋಗಿ ತಂದ ಚಿತ್ರಗಳು ಅದ್ಬುತವಾಗಿವೆ. ಎಲ್ಲವೂ ಅವರೇ ಆದಾಗ ಶುದ್ದ ಮರಕೋತಿಯಾಟ ನಡೆಯುತ್ತದೆ. ಕೆಮರವನ್ನು ಇಟ್ಟು ಹಿಂದಕ್ಕೆ ಹೋಗಿ ಅದರ ಎದುರು ಸವಾರಿ ಮಾಡಿ ಪುನಹ ಹೋಗಿ ಕೆಮರ ಹಿಡಿದುಕೊಂಡು ಬರಬೇಕು.  ಇವರ ಡೇರೆ ಬಿಡಿಸುವುದು ಮಡಚವುದು ನೋಡುವಾಗ ನನಗೆ ನನ್ನ ಪ್ರವಾಸದ ನೆನಪಾಗುತ್ತದೆ. ಇದೊಂದು ಡಿವಿಡಿ ಜಾಹಿರಾತು ಆದರೂ ಕೆಲವು ಚಿತ್ರಗಳು ತುಂಬಾ ಚೆನ್ನಾಗಿವೆ. ಹಲವು ಪ್ರಶಸ್ತಿಗಳನ್ನು ಈ ವಿಡಿಯೋ ಗಿಟ್ಟಿಸಿಕೊಂಡಿದೆ.