Showing posts with label communication. Show all posts
Showing posts with label communication. Show all posts

Tuesday, March 17, 2009

ಪತ್ರಿಕೆ ಎಂದರೆ ಕರಿ ಹಲಗೆ

ತಿಂಗಳ ಹಿಂದೆ ಅಡಿಕೆ ಪತ್ರಿಕೆ ಒಂದು ಪ್ರಶ್ನೆ ಹಾಕಿತ್ತು.   ಬ್ಲೋಗ್  ರೈತರಿಗೆ  ಗ್ರಾಮೀಣ ಜನರಿಗೆ  ಸಹಾಯಕವೇ ? ಆ  ಸಂಚಿಕೆಯ   ಸಂಪಾದಕೀಯ  ಹಾಗೂ  ಬರಹಗಳು   ಈ  ವಿಚಾರ  ಸಾಕಷ್ಟು   ಚರ್ಚೆ  ನಡೆಸಿದ್ದವು.    ಹೀಗೆ ಮಾದ್ಯಮ, ಸಂಪರ್ಕ, ಬ್ಲೋಗ್ ಇತ್ಯಾದಿಗಳು ಕಳೆದ ಒಂದು ತಿಂಗಳಿನಿಂದ ತಲೆ ತಿನ್ನುತ್ತಲೇ ಇರುವಾಗ    ಅಫ್ರಿಕದಿಂದ   ಒಂದು  ಯಶಸ್ವಿ ಪ್ರಯೋಗದ ಬಗೆಗೆ ಓದಿದೆ.  ಇದೊಂದು  ಕಂಪ್ಯುಟರ್  ಅವಲಂಬಿಸದ  ಬ್ಲೋಗ್.


ಮೇಲಿನ  ಚಿತ್ರದಲ್ಲಿ   ಅವರ  ಪತ್ರಿಕೆಯೊಂದಿಗೆ ಸಂಪಾದಕರು ನಿಂತಿದ್ದಾರೆ.  ಪಶ್ಚಿಮ ಆಫ್ರಿಕದಲ್ಲಿ ಪತ್ರಿಕೆ ಕೊಳ್ಳಲು ಚೈತನ್ಯವಿರದವರಿಗೆ ಅವರದೇ ಬಾಷೆಯಲ್ಲಿ ಸುದ್ದಿ ತಲಪಿಸುವ ಪ್ರಯತ್ನ ಈ Daily Talk ನಿತ್ಯ ಮಾತು. ಹಲವಾರು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆಯಂತೆ ಎನ್ನುವುದು ಈ ಮಾದರಿಯ ಬಗ್ಗೆ ಕುತೂಹಲ ಕೆರಳಿಸುತ್ತದೆ. ಚಾಪೆ ಕುರ್ಚಿ ಈಸಿಚೈರ್ ಎನ್ನುವ ನಮ್ಮ ಯಕ್ಷಗಾನ ಪ್ರದರ್ಶನದಂತೆ ತಳಕ್ಕೆ ಐದು, ಬದಿಯಲ್ಲಿ ಪ್ರಕಟಿಸಿದರೆ ಹತ್ತು ಮತ್ತು ಮುಖ್ಯ ಪುಟದಲ್ಲಿ ಇಪ್ಪತ್ತೈದು ನಮ್ಮ ಜಾಹಿರಾತು ದರಗಳು ಎನ್ನುವ ಈ ಪತ್ರಿಕೆಗೆ (?) ತೇಲುತ್ತಾ ಇರುವಷ್ಟು ಜಾಹಿರಾತು ಬೆಂಬಲವಿರುತ್ತದೆ.

ಸಂಪಾದಕ Alfred Sirleaf ಪಟ್ಟಣದ ಪ್ರಮುಖ ರಸ್ತೆಯಲ್ಲಿ ಕರಿಹಲಗೆಯಲ್ಲಿ ಬರೆಯುವ ಸುದ್ದಿಯೇ ಪತ್ರಿಕೆ. ವಿದ್ಯುತ್ ಅವಲಂಬನೆ ಇಲ್ಲದ ತೀರಾ ಸರಳವಾದ ವ್ಯವಸ್ತೆ. ಊರ ಪರಊರ ಗೆಳೆಯರು ಇವರ ಸಂಚಾರವಾಣಿಗೆ ಸುದ್ದಿಯನ್ನು ಕಳುಹಿಸುತ್ತಲೇ ಇರುತ್ತಾರೆ. ದಿನವೊಂದಕ್ಕೆ  ಆ  ದಾರಿಯಾಗಿ  ಓಡಾಡುವ   ಹತ್ತು ಸಾವಿರ ಜನ ಓದುಗರು. ಪತ್ರಿಕೆ ಓದುವವರೆಲ್ಲರೂ   ಅಕ್ಷರ ಜ್ನಾನ ಇರುವವರಲ್ಲ. ಈ ಅನಕ್ಷರಸ್ತರಿಗೆ ತಲಪಲು ಸಂಕೇತಗಳ ಚಿತ್ರಗಳ ಉಪಯೋಗ ದಾರಾಳ.

ನನಗೆ ಈ ವಿಚಾರ ಪ್ರಾಮುಖ್ಯ ಎನಿಸಲು ಇನ್ನೊಂದು ಕಾರಣವೆಂದರೆ ಪಕ್ಕದ Guinea Bissau ಎಂಬ ಹದಿನಾರು ಲಕ್ಷ ಜನಸಂಖ್ಯೆಯ ದೇಶದಲ್ಲಿ ಕಳೆದ ಮೂರು ತಿಂಗಳಿನಿಂದ ಪತ್ರಿಕೆಗಳಿಂದ ಸುದ್ದಿ ಪೊರೈಕೆ ಇಲ್ಲ. ದೇಶದ ಐದು ನಿಯತಕಾಲಿಕಗಳು ಮುದ್ರಣ ಕಾಗದ ಕೊರತೆಯಿಂದ ಮುಚ್ಚಿವೆ. ನಾವು ನೆದರ್ಲಾಂಡಿನಲ್ಲಿ ಖರೀದಿಸುತ್ತಿದ್ದ ಮಾಲು ಈಗ  ಅಲ್ಲಿನ  ಮಾರುಕಟ್ಟೆಯಲ್ಲಿ ಇಲ್ಲ. ಬೇರೆ ಮೂಲಗಳಿಂದ ಪಡೆಯಲು ನಮಗೆ ಆರ್ಥಿಕ ಚೈತನ್ಯವಿಲ್ಲ ಎನ್ನುತ್ತಾರೆ ಪತ್ರಿಕಾ ಮುದ್ರಕರು.

ಗೋಡೆ ಬರಹ ನಮಗೇನು ಹೊಸತಲ್ಲ. ವಿಟ್ಲದ ಅಡಿಕೆ ವ್ಯಾಪಾರಿಯೊಬ್ಬರು ರಸ್ತೆಗೆ ಕಾಣುವಂತೆಯೇ ಅಂಗಡಿಯ ಗೋಡೆಯಲ್ಲಿ   ಕರಿಬಣ್ಣ   ಬಳಿದು   ಅದರಲ್ಲಿ   ದಿನದ ಅಡಿಕೆ ಖರೀದಿ ದರ ಬರೆಯುತ್ತಿದ್ದರು. ಅಲ್ಲಿ ದಾಟುವಾಗ ಗೋಡೆಯ ಮೇಲೊಮ್ಮೆ ನಮ್ಮ ಕಣ್ಣುಗಳು ಹಾಯ್ದು ಮಾಹಿತಿಯನ್ನು ಹೀರಿಕೊಳ್ಳುತ್ತಿತ್ತು.  ಈಗ ಈ ಪ್ರಯೋಗ ನಿಂತಿದೆ.

ಇಂದು SMS ಅಗ್ಗವಾಗಿದೆ.   ಆದರೆ   ತಲಪುವ ಸಾದ್ಯತೆ ಮಾತ್ರ ೫೦:೫೦ ಅನ್ನಬಹುದು.   ಶಾಲೆಗೆ ಇಂದು ರಜೆ, ಹಳೆ ಅಡಿಕೆಗೆ ೧೦೩, ತರಕಾರಿ ಅಗ್ಗ- ಟೊಮೆಟೊ ಆರು, ಸೊಸೈಟಿಯಲ್ಲಿ ಸುಫಲ ಲಬ್ಯ  ಇಂತಹ ಸುದ್ದಿ ಹಾಗೂ ಎಚ್ಚರಿಸುವ SMS ಕಳಿಸುವ ವ್ಯವಸ್ಥೆ    ಪ್ರಾಯೋಗಿಕ  ಎನಿಸಲೂ   ಬಹುದು.

ಈ  ಮದ್ಯೆ ಊರ ಸುದ್ದಿ  ಹಂಚುವ   ವಿಚಾರವನ್ನು    ನಾನು  ನನ್ನ   ಇ-ಪತ್ರದಲ್ಲಿ  ಬರೆದ  ಗೆಳೆಯರಿಗೆ  ವಿವರಿಸಲು  ಒಂದು  ತಾತ್ಕಾಲಿಕ  ಮಾದರಿಯನ್ನು  ಸಿದ್ದಪಡಿಸಿದೆ.  ಹಲವಾರು   ಮಾಹಿತಿ  ಹಂಚುವ   ಸಾದ್ಯತೆಗಳು.  ಗೆಲ್ಲುವ  ಕುದುರೆಯನ್ನು  ಕಾಲವೇ    ನಿರ್ದರಿಸುವುದು.

Wednesday, December 10, 2008

ಅಂತೂ ಕೈಗೆ ಸಿಕ್ಕಿತು ನ್ಯಾಯಾಲಯ ತೀರ್ಪು

ರಿಲಿಯನ್ಸ್ ಸ್ಥಾವರವಾಣಿಯ ಕಳಪೆ ಗುಣಮಟ್ಟದ ಸೇವೆಗೆ ಅವರನ್ನು ಗ್ರಾಹಕ ನ್ಯಾಯಾಲಯಕ್ಕೆ ಒಯ್ದ ಸಂಗತಿ ಮೊದಲು ಬರೆದಿದ್ದೆ. ಕೊನೆಗೂ ಗ್ರಾಹಕ ನ್ಯಾಯಾಲಯದಿಂದ ನವೆಂಬರ್ ೧೪ ರಂದು ತೀರ್ಪು ಕೊಡಲ್ಪಟ್ಟಿತು. ಅನಂತರ ಇಪ್ಪತ್ತು ದಿನಗಳು ಕಳೆದು ಅಂತರ್ಜಾಲದಲ್ಲಿ ಲಬ್ಯವಾಯಿತು. ಇಲ್ಲಿದೆ ಸಂಪರ್ಕ ಕೊಂಡಿ.

http://cms.nic.in/ncdrcrep/judgement/18542167-07--14.11.08.htm

ಈ ಹೋರಾಟದ ಬಗೆಗೆ ಬರೆಯುವುದಾದರೆ ನಾನು ಈ ಬಗ್ಗೆ ಹತ್ತಕ್ಕೂ ಹೆಚ್ಚು ಬಾರಿ ನನ್ನ ಮನೆಯಿಂದ   ೫೦ ಕಿಮಿ ದೂರಲ್ಲಿರುವ  ಮಂಗಳೂರಿಗೆ ಹೋಗುವುದು ಅಗತ್ಯವಾಗಿತ್ತು. ನನ್ನ ಆರೋಗ್ಯದ ಬಗೆಗೆ ಅವರು ಅಲ್ಲಗಳೆಯಲು ಜಿಲ್ಲಾ ಆರೋಗ್ಯದಿಕಾರಿಗಳ ಪ್ರಮಾಣ ಪತ್ರ ಒದಗಿಸಿದ್ದೇನೆ. ಅವರು ನನ್ನ ದೂರುಗಳಿಗೆ ಸ್ಪಂದಿಸಲಿಲ್ಲ ಎನ್ನುವುದಕ್ಕೂ ಸಾಕಷ್ಟು ರುಜುವಾತು ಒದಗಿಸಿದ್ದೇನೆ. ಹತ್ತ್ತಕ್ಕೂ ಹೆಚ್ಚು e mail ಪಡಿಯಚ್ಚುಗಳು. ಅಸಂಖ್ಯ ದೂರವಾಣಿ ಕರೆಗಳು. ಇವೆಲ್ಲವೂ ಖರ್ಚಿನ ಬಾಬುಗಳು. ಕೊನೆಗೆ ಪರಿಹಾರದ ಮೊತ್ತ ನಾನು ಮಾಡಿದ ಖರ್ಚಿನ ಅರ್ಧ ಭಾಗವನ್ನೂ ತುಂಬಿ ಕೊಡದಿರುವುದು ವಿಷಾದನೀಯ.

ಕೆಲವೊಮ್ಮೆ ಪರಿಹಾರ ತೃಪ್ತಿಕರ ಎನಿಸುವುದಿಲ್ಲ. ತಪ್ಪು ರುಜುವಾತು ಪಡಿಸಿದಲ್ಲಿ ಕೂಡ ಸರಿಯಾದ ಪರಿಹಾರ ದೊರಕುವುದಿಲ್ಲ ಎಂದರೆ ಗ್ರಾಹಕರು ಏಕೆ ನ್ಯಾಯಾಲಯಕ್ಕೆ ಹೋಗುತ್ತಾರೆ ? ಇದು ಎಂತಹ ಸಂದೇಶ ರವಾನಿಸುತ್ತದೆ. ಯೋಚಿಸಿದರೆ ಈ ಗ್ರಾಹಕ ನ್ಯಾಯಾಲಯಕ್ಕೆ ದೂರು ಒಯ್ಯುವುದು ಎಂದರೆ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದಂತೆ. ಸೇವಾ ನ್ಯೂನತೆ ಸರಿಪಡಿಸಿಕೊಳ್ಳುವ ಒತ್ತಡ ಸದಾ ಸೇವೆ ಕೊಡುವವರ ಮೇಲಿರಬೇಕು. ಇಲ್ಲವಾದರೆ ಅವರು ನಡೆದದ್ದೇ ದಾರಿ.

ಲಕ್ಷಕ್ಕೊಬ್ಬ  ಗ್ರಾಹಕರು  ಇವರನ್ನು   ನ್ಯಾಯಾಲಯಕ್ಕೆ   ಕರೆದೊಯ್ಯುವುದು. ಮುಖ್ಯ  ಕಾರಣ  ರುಜುವಾತು ಸಂಗ್ರಹ   ಕಷ್ಟ.   ಅಲ್ಲೂ    ಬರೇ ಪುಡಿಗಾಸು ಪರಿಹಾರ ಕೊಡುವುದಾದರೆ ಆ ಕಂಪೇನಿಗಳಿಗೆ ತಿದ್ದಿಕೊಳ್ಳುವ ಅಗತ್ಯವೇ ಇರುವುದಿಲ್ಲ. ದೂರವಾಣಿ ಬಳಕೆದಾರ ಅಪೇಕ್ಷಿಸದ ಹಾಗೂ ಉಪಯೋಗಿಸದ ಸೇವೆಗೆ ಉದಾಹರಣೆ ಸಂಗೀತದ ಕಾಲ್ ಟ್ಯೂನ್ ಜೋತಿಷ್ಯ ಶಾಸ್ತ್ರ ಕ್ರಿಕೆಟು ಸುದ್ದಿ ಇತ್ಯಾದಿಗಳಿಗೆ ಹಣ ವರ್ಗಾವಣೆಯಾಗುವುದು ಸಾಮಾನ್ಯ ಎಂಬಂತಾಗಿದೆ. ಸಲೀಸಾಗಿ ಇಂತ ಕ್ಷೌರಕ್ಕೆ  ಕುಳ್ಳಿರುಸುತ್ತಾರೆ.   ನಂತರ ಇದರಿಂದ ಪಾರಾಗುವ ಬಗೆಗೆ ಅವರ ಗ್ರಾಹಕ ಸೇವಾ ಸಿಬಂದಿಗಳಲ್ಲೂ ಸ್ಪಷ್ಟ ಉತ್ತರವಿರುವುದಿಲ್ಲ.

ನಾವು ದಿನವೊಂದರಲ್ಲಿ ಕಾಣುವ ಅನ್ಯಾಯ ಅನಾಚಾರದ ಬೆನ್ನಟ್ಟಲು ಈ ಜೀವಮಾನವೇ ಸಾಲದು. ನಮ್ಮ ಹಳ್ಳಿ ರಸ್ತೆಯಲ್ಲಿ ಕೇರಳಕ್ಕೆ ಕಾನೂನು ಬಾಹಿರವಾಗಿ ಮರಳು ಸಾಗಿಸುವ ಲಾರಿಗಳು ಪುನಃ ಪ್ರತ್ಯಕ್ಷವಾಗಿವೆ. ಯಾರೂ ಮಾತನಾಡುತ್ತಿಲ್ಲ. ದೆಹಲಿಯಿಂದ ಬಂದ ಕೋಟಿ ರೂಪಾಯಿ ನುಂಗಿದ ನಮ್ಮ ಹಳ್ಳಿ ರಸ್ತೆಯಲ್ಲಿ ಆರು ತಿಂಗಳಲ್ಲೇ  ಹೊಂಡಗಳು ಕಾಣಲು ಪ್ರಾರಂಬವಾಗಿವೆ. ಎಲ್ಲರೂ ಸುಮ್ಮನಿದ್ದಾರೆ. ನಾಲ್ಕಾರು ಬಿಎಸೆನೆಲ್ ಟವರ್ ಗಳು ಹತ್ತು ಕಿಮಿಯೊಳಗಿದ್ದು ಒಮ್ಮೊಮ್ಮೆ ನಿಲುಕುವುದಾದರೂ ನಮ್ಮ ಮೊಬೈಲ್ ತರಂಗ ಸೂಚನೆ ದಿನದ ಹೆಚ್ಚಿನ ಬಾಗ ತೋರಿಸುವುದು ಶೂನ್ಯ. ಪಟ್ಟಣದ ಅಂಗಡಿಗೆ ಹೋದರೆ ಅಲ್ಲಿ ಕಂಪ್ಯುಟರ್ ಬಳಸಿ ಹೊಸ ರೀತಿಯ ಟೋಪಿ ಹಾಕಿಸ್ಕೊಳ್ಳುವ ಅವಕಾಶ. ಎಲ್ಲ ತೇರಿಗೆಗಳು ಸೇರಿದ ಮಾರಾಟ ದರಕ್ಕೆ ವಾಟ್ ಸೇರಿಸುವುದು ಮೇಲ್ನೋಟಕ್ಕೆ ನಮಗೆ ಗೊತ್ತಾಗದ ವಿಚಾರ.

ಶ್ರೀ ಶಿವರಾಮ ಕಾರಂತರು ಹೇಳಿದಂತೆ ಸಾಮಾನು ಕದ್ದರೂ ಕಳ್ಳ ಸಮಯ ಕದ್ದರೂ ಕಳ್ಳ. ಹೀಗೆ ಸೇವಾ ನ್ಯೂನತೆ ಮತ್ತು ಭ್ರಷ್ಟಾಚಾರ ಎರಡೂ ಸಮಾಜಕ್ಕೆ ದ್ರೋಹವೇ.     ಈ   ತರಹದ  ಹೋರಾಟ  ಎಂದರೆ  ಒಂದು  ರೀತಿಯಲ್ಲಿ  ಪ್ರವಾಹದ  ವಿರುದ್ದ  ಈಜುವುದು.  ಬೇರೆ   ಕೆಲಸ  ಇಲ್ಲವೇ  ಎಂಬ  ಮೂದಲಿಕೆ  ಕೇಳಲು  ನಾವು ತಯಾರಿರಬೇಕಾಗುತ್ತದೆ.   ಎಲ್ಲರೂ ಅವರಿವರು ಸರಿ ಮಾಡಲೆಂದು ಪ್ರತಿಭಟಿಸಲೆಂದು ಕಾಯುತ್ತಾರೆ. ಇದು ಬೆಕ್ಕಿಗೆ ಗಂಟೆ ಯಾರು ಕಟ್ಟುವುದು ಎನ್ನುವಂತಹ ಸಮಸ್ಯೆ.

Wednesday, October 01, 2008

ನೀರ ನೆಮ್ಮದಿ ಕೊಡುವ ಮಳೆನೀರಿನ ಬ್ಯಾಂಕು

ಕುಡಿಯುವ ನೀರಿಗಾಗಿ ಒತ್ತಡ ಹಾಗೂ ಮಳೆ ನೀರು ಕೊಯಿಲಿನ ಆಸಕ್ತಿ ಎರಡೂ ಸೇರಿ ನಮ್ಮಲ್ಲೊಂದು ಮಳೆ ನೀರ ಶೇಖರಣೆ ಟಾಂಕ್ ಮೂರು ವರ್ಷ ಹಿಂದೆ ನಿರ್ಮಾಣವಾಯಿತು.


ನಮ್ಮಲ್ಲಿ ಮಳೆರಹಿತ ದಿನಗಳು ೨೨೦ ಮೀರುವುದಿಲ್ಲ. ನಮ್ಮ   ಕರಾವಳಿ  ಪ್ರದೇಶದ  ಒಂದು ಸಾಮಾನ್ಯ ಕುಟುಂಬಕ್ಕೆ ಹತ್ತರಿಂದ ಹದಿನೈದು ಸಾವಿರ ಲೀಟರ್ ನೀರಿನ ಟಾಂಕ್ ದಾರಾಳ ಸಾಕು. ಆದರೆ ಅಂದಿನ ಪರಿಸ್ಥಿತಿ ನಮ್ಮನ್ನು ನಲುವತ್ತು ಸಾವಿರ ಲೀಟರ್ ದಾಸ್ತಾನಿನ ಟಾಂಕಿಗೆ ಒತ್ತಡ ಹಾಕಿತು.


ಸೌರ  ವಿದ್ಯುತ್  ಚಾಲನೆಯನ್ನು  ಅಳವಿಡಿಸಿರುವ  ನಮ್ಮ   ವ್ಯವಸ್ಥೆಯಿಂದಾಗಿ ಮನೆ  ಬಳಕೆ  ನೀರಿನ  ಮತ್ತು  ಬೆಳಕಿನ  ಮಟ್ಟಿಗೆ  ನಾವು  ಸಂಪೂರ್ಣ  ಸ್ವಾವಲಂಬಿಗಳೆಂದರೂ  ಸರಿಯೇ.    ಈ ನಮ್ಮ ಅನುಭವಗಳ ಅಡಿಕೆ ಪತ್ರಿಕೆ ಅಕ್ಟೋಬರ್ ೨೦೦೮ ಸಂಚಿಕೆಯಲ್ಲಿ ಪ್ರಕಟಿಸಿದ್ದು   ಅದನ್ನು  ನಿಮ್ಮ    ಮುಂದಿಡುತ್ತಿದ್ದೇನೆ.

Tuesday, July 22, 2008

ಪ್ರವಾಸಿಯ ಸಂಪರ್ಕ ಅವಕಾಶ

ಅಂದು ಪ್ರಪಂಚಕ್ಕೊಂದು ಸುತ್ತು ಸೈಕಲಿಸುವಾಗ ನನಗೆ ಸಂಪರ್ಕ ಅವಕಾಶಗಳು ಬಹಳ ಕಡಿಮೆಯಿತ್ತು. ಮನೆಯವರೊಡನೆ ಆಗಾಗ ಪತ್ರಗಳು ವಿನಿಮಯವಾದರೂ ಊರ ಪತ್ರಗಳಲ್ಲಿ ಬರೇ ಹಳೆಯ ಸುದ್ದಿಗಳೇ ತುಂಬಿರುತಿತ್ತು ಎಂದರೂ ಸರಿ. ನಾನು ಹೋಗುವ ದಾರಿ ವೀಸಾ ಸಿಕ್ಕಿ ನಿರ್ದಾರಿತವಾದ ತಕ್ಷಣ ನನ್ನಪ್ಪನಿಗೆ ಪತ್ರಿಸಿ ಆಯಾ ಊರಿನ ವಿಳಾಸ ಮತ್ತು ತಲಪುವ ದಿನ ತಿಳಿಸುತ್ತಿದ್ದೆ. ಅವರು ಮುಂದಾಗಿ ಬರೆದ ಪತ್ರ ಆ ಊರಿನಲ್ಲಿ ನನಗೆ ಕಾಯುತ್ತಿತ್ತು. ಮೊದಲಾಗಿ ಸಂಪರ್ಕಿಸಿದ ಸ್ಥಳೀಯರು ಇದ್ದರೆ ಸುಲಭ. ಇಲ್ಲವಾದರೆ ಗುರುತು ಹಾಜಿರು ಪಡಿಸಿ ಆ ಊರಿನ ನಿರ್ದಿಷ್ಟ ಅಂಚೆ ಕಛೇರಿ ಅಥವಾ ಅಮೇರಿಕನ್ ಎಕ್ಷ್ ಪ್ರೆಸ್ಸ್ ಪ್ರವಾಸಿ ಹಣದ ಕಛೇರಿಗಳನ್ನು ಅವಲಂಬಿಸುತ್ತಿದ್ದೆ. ಅದು ಹಕ್ಕಿಗೆ ಗುಂಡು ಇಡುವಂತೆ ಮುಂದಾಗಿ ತಲಪಿದರೆ ಮಾತ್ರ ನನಗೆ ದೊರಕುವುದು. ಅಂತೂ ಹೆಚ್ಚಿನ ಪತ್ರ ಬರೆದು ಮೂರು ನಾಲ್ಕು ವಾರ ಕಳೆದು ನಾನು ಓದುತ್ತಿದ್ದೆ.

ಹೊರಹೋಗುವಾಗ ಒಂದಷ್ಟು ಹದಿನೈದು ಪೈಸೆಯ ಅಂಚೆ ಕಾಗದ ಒಯ್ದಿದ್ದೆ. ರಾಯಬಾರಿ ಕಛೇರಿಗಳ ಸಿಬಂದಿಗೆ ಒಂದು ಸೌಲಬ್ಯ ಇರುತ್ತದೆ -ಸರಕಾರಿ ಟಪಾಲಿನೊಟ್ಟಿಗೆ ಅವರ ವೈಯುಕ್ತಿಕ ಪತ್ರಗಳ ಬಾರತಕ್ಕೆ ರವಾನೆ. ಇದರ ಸುಳಿವು ಸಿಕ್ಕ ನಾನು ಹಲವು ಸಲ ಊರಿಗೆ ರಾಯಬಾರಿ ಕಛೇರಿಗಳ ಮೂಲಕ ಸರಕಾರಿ ಅದಿಕೃತ ಚೀಲದಲ್ಲಿ ರವಾನಿಸಿದ್ದುಂಟು. ಅದನ್ನು ವಿದೇಶಿ ಸಚಿವಾಲಯದ ಸಿಬ್ಬಂದಿ ದೆಹಲಿಯಲ್ಲಿ ಅಂಚೆಗೆ ಹಾಕುತ್ತಾರೆ. ಆದರೆ ಮಾಮೂಲಿ ಪ್ರವಾಸಿ ಊರುಗಳ ರಾಯಬಾರಿ ಕಛೇರಿಗಳಲ್ಲಿ ಅದಿಕಾರ ದರ್ಪ ತೋರಿಸಿ ಇದಕ್ಕೆ ನಿರಾಕರಿಸುವವರೂ ಇರುತ್ತಾರೆ. .

ಅಮೇರಿಕದ ಗ್ರಾಮೀಣ ಪ್ರದೇಶದಲ್ಲಿ ಪತ್ರವನ್ನು ಅಂಚೆಗೆ ಹಾಕುವುದೊಂದು ಸಾಹಸ. ಅಲ್ಲಿ ಸಾರ್ವಜನಿಕ ಅಂಚೆ ಪೆಟ್ಟಿಗೆಗಳು ಕಡಿಮೆ. ಪ್ರತಿ ಮನೆಯ ಮುಂದೆ ಅವರವರ ವೈಯುಕ್ತಿಕ ಅಂಚೆ ಪೆಟ್ಟಿಗೆಯಿದ್ದು ಅಂಚೆಯಾಳು ಬಂದು ಇವರಿಗಿರುವ ಪತ್ರಗಳ ಹಾಕಿ ಅದರಲ್ಲಿರುವ ಪತ್ರಗಳ ಪಡಕೊಂಡು ಮುಂದೆ ಹೋಗುತ್ತಾರೆ. ನಾನು ಹಾಗೆ ಯಾರದೋ ಪೆಟ್ಟಿಗೆಯಲ್ಲಿ ಹಾಕಿದರೆ ಅಂಚೆಯಾಳಿನ ಬದಲು ಮನೆಯವರ ಕೈಗೆ ಸಿಕ್ಕರೆ ಅದನ್ನು ಎಸೆದು ಬಿಟ್ಟಾರೆಂದು ಅಳುಕು. ಹಾಗೆ ದೂರ ದೂರದಲ್ಲಿರುವ ಅಂಚೆಪೆಟ್ಟಿಗೆಯ ಹುಡುಕಾಟ ಅನಿವಾರ್ಯ.


ಹಲವು ಜನ ನನ್ನ ಅತಿಥೇಯರು ನಾನು ದಾಟಿ ಮುಂದೆಹೋದ ಅನಂತರ ನಮ್ಮ ಮನೆಗೆ ಪತ್ರಿಸಿದ್ದಾರೆ. ನಿಮ್ಮ ಹುಡುಗ ನಮ್ಮಲ್ಲಿದ್ದು ಈಗ ಮುಂದೆ ಹೋಗಿದ್ದಾನೆ. ಅವನ ಅರೋಗ್ಯ ಒಕೆ. ಅಗತ್ಯವಿದ್ದರೆ ನಮ್ಮ ಸಹಾಯ ಲಬ್ಯ ಎಂದು ಅವನಿಗೆ ಗೊತ್ತು. ಆದರೆ ಅವನಿಗೆ ನಮ್ಮ ಸಹಾಯವಿಲ್ಲದೆ ನಿಬಾಯಿಸಲು ಸಾದ್ಯವೆಂದು ನಮಗೆ ವಿಶ್ವಾಸವಿದೆ ಎನ್ನುವ ಪತ್ರ ನಮ್ಮ ಮನೆಯವರಿಗೆ ಕೊಟ್ಟ ದೈರ್ಯ ಅಪಾರ. ಕೆಲವು ಕಡೆ ಅತಿಥೇಯರು ನನ್ನಲ್ಲಿ ಬೇಕಾದರೆ ನಮ್ಮಲ್ಲಿಂದ ನಿನ್ನ ಮನೆಗೆ ಫೋನಿಸು ಎನ್ನುವ ದಾರಾಳತನ ತೋರಿದರೂ ನಿಮ್ಮ ಕೊಡುಗೆಗೆ ದನ್ಯವಾದ ಆದರೆ ನಮ್ಮ ಮನೆಯಲ್ಲಿ ಫೋನಿಲ್ಲ ಎಂದು ನಯವಾಗಿ ತಿರಸ್ಕರಿಸಬೇಕಾಗಿತ್ತು.

ಊರಲ್ಲಿ ಹಲವಾರು ಗೆಳೆಯರು ನನ್ನ ಕಳಿಸಿಕೊಡುವುದಕ್ಕೆ ಸಹಾಯ ಮಾಡಿದ್ದರು. ಅವರಿಗೂ ಆಗಾಗ ಪತ್ರಿಸಲು ಯೋಚಿಸುತ್ತಿದ್ದೆ. ಅಂಚೆ ವೆಚ್ಚ ದುಬಾರಿ ಎನ್ನುವುದು ತಡೆಯಾಗಿತ್ತು. ಆಗ ಒಂದು ಸಾಮೂಹಿಕ ಪತ್ರ ತಯಾರು ಮಾಡಿ ಅದನ್ನು   ಕ್ಷೆರಾಕ್ಷ್   ಮಾಡಿಸಿ      ಎಲ್ಲಕ್ಕೂ ಕೊನೆಗೂ ಮೊದಲಿಗೂ ವೈಯುಕ್ತಿಕವಾಗಿ  ನಾಲ್ಕು  ಮಾತು  ಮತ್ತು   ವಿಳಾಸ   ಗೀಚಿ ಒಟ್ಟಿಗೆ ಊರಿಗೆ ಪಾರ್ಸೆಲ್ ಕಳುಹಿಸುತ್ತಿದ್ದೆ. ನಮ್ಮಪ್ಪ ಅದಕ್ಕೆ ಆಂಚೆ ಚೀಟಿ ಅಂಟಿಸಿ ಅಂಚೆಗೆ ಹಾಕುತ್ತಿದ್ದರು. ಇಂದಾದರೆ ಬ್ಲೋಗ್ ಬರೆದರೆ ಸಾಕಿತ್ತು.   ಪಿಜ್ಜಾ  ತಿಂದದ್ದು    ಜೀರ್ಣವಾಗುವಾಷ್ಟರಲ್ಲಿ  ಸುದ್ದಿ  ಎಲ್ಲರಿಗೂ  ತಿಳಿಯಲು  ಸಾದ್ಯ.    ಇದರಿಂದ ಸಾಕಷ್ಟು ಪ್ರಚಾರ ಹಾಗೂ ಅಗತ್ಯದ ಸಹಾಯ ಲಬಿಸುತಿತ್ತು.


ಇಪ್ಪತ್ತು ವರ್ಷ ಹಿಂದಿನದಕ್ಕೂ ಇಂದಿಗೂ ಹೋಲಿಸಿದರೆ ಸಂಪರ್ಕ ವಿಚಾರದಲ್ಲಿ ಜಗತ್ತು ಬಹಳಷ್ಟು ಮುಂದುವರಿದಿದೆ. ಈಗ ಒಂದು ಕಮೆರಾ, ಲಾಪ್ ಟೋಪ್ ಮತ್ತು ಮೊಬೈಲ್ ಫೋನ್ ಇದ್ದರೆ ಪ್ರಪಂಚದ ಹೆಚ್ಚಿನ ಜಾಗಗಳಿಂದ ನಿರಂತರ ಪತ್ರ ವ್ಯವಹಾರ ಮಾತ್ರವಲ್ಲ ಮಾತನಾಡಲು ಹಾಗೂ ಪೊಟೊ ಕಳಿಸಲು ಸಾದ್ಯ. . ಹೆಚ್ಚಿನ ಎಲ್ಲ ದೇಶಗಳ ಸಿಮ್ ಬಾರತದಲ್ಲೇ ಸಿಗುತ್ತದೆ. ಅದುದರಿಂದ ಸಂಪರ್ಕಕ್ಕೆ ಇಲ್ಲೆಯೇ ಅಡಿಪಾಯ ಹಾಕಬಹುದು. ಆದರೆ ಬಾರತದಲ್ಲಿಯೇ ಉಳಿದೆಡೆಯ ಕೆಲವು ಸಿಮ್ ಕಾಶ್ಮೀರದಲ್ಲಿ ಕೆಲಸ ಮಾಡುವುದಿಲ್ಲ ಎನ್ನುವ ರೀತಿಯ ಪರಿಮಿತಿಯ ಸುಳಿವುಗಳಿಗೆ ನಾವು ಕಣ್ಣಿಡಬೇಕಾಗುತ್ತದೆ.

ಸೈಕಲು ಪ್ರವಾಸಿಗೆ ಪುಟ್ಟದಾದರೂ ಕಂಪ್ಯುಟರ್ ಹೊರುವುದು ಕಷ್ಟ ಮತ್ತು ಅಪಾಯಕಾರಿ. ಆಗ ಸಹಾಯಕ್ಕೆ ಬರುವಂತಹ ಸೈಬರ್ ಕೇಫ್ ಈಗ ಹೆಚ್ಚಿನ ಎಲ್ಲ ದೇಶಗಳಲ್ಲೂ ಕಾಣಸಿಗುತ್ತದಂತೆ. ಚೀನಾದಲ್ಲಿ ಸೈಬರ್ ಕೇಫ್ ಕಿಬೋರ್ಡ ಎಷ್ಟು ಗಲೀಜೆಂದರೆ ಗ್ಲೌಸ್ ಹಾಕ್ಕೊಳ್ಳೋದು ಉತ್ತಮ ಎನ್ನುತ್ತದೆ ಪ್ರವಾಸಿ ಮಾಹಿತಿ. ಆದರೂ ಸೌಲಬ್ಯಗಳು ಸಿಗುತ್ತವೆ ಎನ್ನುವುದು ಬದಲಾವಣೆಯ ಲಕ್ಷಣ. ಸೈಕಲ್ ಪ್ರವಾಸ ಎಂದರೆ ತುಳಿಯುವುದು ಅಗತ್ಯವಾದರೂ ಉಳಿದ ವಿಚಾರಗಳು ಬಹಳ ಮುಂದುರಿದುದು ಸಂತಸದ ವಿಚಾರ.