Sunday, June 21, 2009

ಸ್ವದೇಶಿ ಪರದೇಶಿ ವಿಮಾನಯಾನ ಸಂಸ್ಥ ಅಧಿಕಾರಿಗಳ ಬಿನ್ನ ವರ್ತನೆ.


ಏರ್ ಇಂಡಿಯಾದಲ್ಲಿ ಹಣದ ಇಕ್ಕಟ್ಟು. ಹಿರಿಯ ಅಧಿಕಾರಿಗಳು ಜುಲೈ ತಿಂಗಳ ಸಂಬಳ ತ್ಯಾಗಕ್ಕೆ ತಯಾರಾಗಿ ಎಂದಿದೆ ಆಡಳಿತ. ಹಾಗೆ ನೆನಪಾಯಿತು ಒಂದು ಈ ಸಂಸ್ಥೆಯ ಹಿರಿಯ ಅಧಿಕಾರಿಯೊಂದಿಗೆ ಸಂವಾದ - ಒಂದು ಹಳೆಯ ಅನುಭವ.

ನನ್ನ ಸೈಕಲ್ ಪ್ರವಾಸದ ಅಂಗ
ವಾಗಿ ಬೇರೆ ಬೇರೆ ವಿಮಾನ ಸಂಸ್ಥೆಗಳ ಇಬ್ಬರು ಅಧಿಕಾರಿಗಳಲ್ಲಿ ಮಾತನಾಡಿದ್ದೆ. ಇಬ್ಬರಲ್ಲೂ ಒಂದೇ ಬಗೆಯ ಕೋರಿಕೆ ಮಾಡಿದ್ದೆ. ಇಬ್ಬರೂ ಬಹಳ ಬಿನ್ನವಾಗಿ ವರ್ತಿಸಿದ್ದರು. Air Indiaದ ಹಿರಿಯ ಅಧಿಕಾರಿ ನಕಾರಾತ್ಮಕವಾಗಿ ವರ್ತಿಸಿದ್ದರೆ ಇನ್ನೊಂದರ China Airlinesನ ಕಿರಿಯ ಅಧಿಕಾರಿ ನನ್ನ ಅಗತ್ಯಕ್ಕೆ ಸ್ಪಂದಿಸಿದ್ದರು. ನಮ್ಮ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಸರಕಾರಿ ಕಛೇರಿಯಂತೆ ಕೆಲಸಮಾಡುತ್ತದೆ ಅಂದರೂ ಸರಿ.

ವಿಮಾನ ಪ್ರಯಾಣ ಟಿಕೇಟು ದ್ವಿಮುಖಯಾನವಾದರೆ ಅಗ್ಗ. ಆದರೆ ಹೋದ ದಾರಿಯಲ್ಲಿಂದಲೇ ಬರಬೇಕೆಂಬ ನಿರ್ಬಂದ. ತ್ರಿಕೋನಾಕಾರದ ಪಯಣವಾದರೆ ಪೂರ್ವ ನಿರ್ದೇಶಿತ ದಾರಿಯಲ್ಲಿಯೇ ಪಯಣ. ವಿಮಾನದಿಂದ ಇಳಿದಲ್ಲಿಂದಲೇ ಹತ್ತಬೇಕು. ಜತೆಗೆ ಹೊರಹೋಗುವ ಅಥವಾ ಊರು ತಲಪುವ ಟಿಕೇಟು ತೋರಿಸದಿದ್ದರೆ ಯಾವ ದೇಶದವರೂ ನಮ್ಮನ್ನು ಒಳಕ್ಕೆ ಬಿಡುವುದಿಲ್ಲ. ಹೀಗೆ ವಾಪಾಸು ಬರುವ ಟಿಕೇಟು ಅನಿವಾರ್ಯ. ಎಲ್ಲ ದೇಶದವರಿಗೂ ಈ ವ್ಯಕ್ತಿ ನಮ್ಮಲ್ಲಿ ಉಳಕೊಳ್ಳುತ್ತಾನೋ ಅನ್ನುವ ಸಂಶಯ. ಹೀಗೆಲ್ಲ ಸಮಸ್ಯೆಗಳು.

ಸ್ವಾಮಿ. ನಾನು ಆಫ್ರಿಕದಿಂದ ಯುರೋಪಿಗೆ ಸೈಕಲಿನಲ್ಲಿ ಪ್ರವಾಸ ಮಾಡುವವನಿದ್ದೇನೆ. ನಾನು ವಿಮಾನದಿಂದ ಇಳಿದಲ್ಲಿಯೇ ಪುನಹ ಹತ್ತುವುದಿಲ್ಲವಾದುದರಿಂದ ಮಾರುಕಟ್ಟೆಯಲ್ಲಿರುವ ಯಾವ ಮಾಮೂಲಿ ಕೊಡುಗೆಗಳೂ ನನಗೆ ಹೊಂದುವುದಿಲ್ಲ. ಹಾಗಾಗಿ ಬಾರತದಿಂದ ಆಫ್ರಿಕಕ್ಕೂ ವಾಪಾಸು ಯೂರೊಪಿನಿಂದ ಬಾರತಕ್ಕೂ ಬರುವಂತಹ ಟಿಕೇಟು ಅವಕಾಶ ಮಾಡಿಕೊಡಬೇಕು ಎಂದು ನನ್ನ ಬಿನ್ನಹ Air India ಸಾರ್ವಜನಿಕ ಸಂಪರ್ಕಾದಿಕಾರಿ ಬರ್ಗಾವೋಂಕರ್ ಅವರಲ್ಲಿ ಅವರ ಏಳನೇಯ ಅಂತಸ್ತಿನಲ್ಲಿರುವ ಕಛೇರಿಯಲ್ಲಿ ಅರಿಕೆ ಮಾಡಿಕೊಂಡೆ.

ನನ್ನ ಬಜೇಟು ಮೀರಿದೆ, ಕೆಲಸ ಹೋಗಬಹುದು ಏನೆಲ್ಲ ಅಸಂಬದ್ದ ಅರ್ಥಹೀನ ಮಾತುಗಳನ್ನು ಅ ಹಿರಿಯ ಅಧಿಕಾರಿ ಹೇಳಿದ.

ನಾನು ದರ್ಮಾರ್ಥ ಕೊಡುಗೆ ಅಪೇಕ್ಷಿಸುತ್ತಿಲ್ಲ. ಪ್ರಯಾಣಕ್ಕಾಗುವ ಹಣ ಕೊಡುತ್ತೇನೆ. ವಾಪಾಸು ಬರುವಾಗ ನನಗೆ ಇನ್ನೊಂದು ಸ್ಥಳದಿಂದ ಹತ್ತುವ ಅವಕಾಶ ಮಾತ್ರ ನಾನು ಅಪೇಕ್ಷಿಸುವುದು. ಏನು ಹೇಳಿದರೂ ಅರ್ಥವಾಗುವ ಸ್ಥಿತಿಯಲ್ಲಿ ಅವರಿರಲಿಲ್ಲ.

 
ಮೇಲಾಗಿ ಸಂಪರ್ಕಕ್ಕೆ ಬಂದವರಿಗೆ ನಾನು ಹಂಚುವ ನನ್ನ ಪುಟ್ಟ ವಿಳಾಸ ಚೀಟಿಯಲ್ಲಿ ನಿಮ್ಮ ಸಹಾಯವನ್ನು ಸೂಚಿಸುವೆ ಎಂದೂ ಹೇಳಿದೆ. ಕೊನೆಗೆ ಬಂದ ದಾರಿಗೆ ಸುಂಕವಿಲ್ಲವೆಂದು ಹೊರಬಂದೆ. ಕೆಳಬಂದಾಗ ನನಗೆ ಅ ಕಛೇರಿಗೆ ದಾರಿ ತೋರಿಸಿದವರು ಹೇಳಿದರು. There are many wrong people at wrong places in Air India.

ಈಜಿಪ್ಟ್ ಎರ್ ಸಂಸ್ಥೆಯ ಎಜನ್ಸಿಯವರು ನನಗೆ ಮುಂಬಯಿ ನೈರೋಬಿ ಲಂಡನ್ ಮುಂಬಯಿ ತ್ರಿಕೋನ ಪ್ರಯಾಣ ಟಿಕೇಟು ಒದಗಿಸಿದರು. ತಮಾಷೆ ಎಂದರೆ ಮೊದಲ ಎರಡು ಹಂತ ಅಂದರೆ ಮುಂಬಯಿ ನೈರೊಬಿ ಮತ್ತು ನೈರೋಬಿ ಲಂಡನ್ ಮಾರ್ಗದಲ್ಲಿ ಅವರ ವಿಮಾನ ಹಾರುತ್ತಿರಲಿಲ್ಲ. ಹಾಗೆ ನೈರೋಬಿಗೆ ಕೆನ್ಯಾ ವಿಮಾನದಲ್ಲಿ ಹಾರುತ್ತಿಯಾ ಅಲ್ಲ ಎರ್ ಇಂಡಿಯಾದಲ್ಲೋ ಎಂದು ಅವರು ಕೇಳಿದಾಗ ಕೆನ್ಯಾ ವಿಮಾನವೇ ಇರಲೆಂದು ಹೇಳಿದೆ. ಅಷ್ಟರ ಮಟ್ಟಿಗೆ ಏರ್ ಇಂಡಿಯ ಬಗೆಗೆ ಜುಗುಪ್ಸೆ ಉಂಟಾಗಿತ್ತು.

ಟೋಕಿಯೊವಿನ ಹಾನೆಡ ನಿಲ್ದಾಣದಲ್ಲಿ ಇಳಿದಾಕ್ಷಣ ಅಲ್ಲಿರುವ ಚೀನಾ (ಟೈವಾನ್) ವಿಮಾನಯಾನ ಸಂಸ್ಥೆಯ ಕಛೇರಿಗೆ ನುಗ್ಗಿದೆ. ಅಲ್ಲಿ ಅಧಿಕಾರಿಯೊಬ್ಬರು ಸಹಾಯಕಿಯೊಂದಿಗೆ ಇದ್ದರು. ಇಬ್ಬರಿಗೂ ಇಂಗ್ಲೀಷ್ ಜ್ನಾನ ಅಷ್ಟಕಷ್ಟೇ. ನಾನು ಇಲ್ಲಿಂದ 900 ಕಿಮಿ ದೂರದ ಮಟ್ಸುಯಾಮಕ್ಕೆ ಸೈಕಲಿಸಲಿದ್ದೇನೆ. ವಾಪಾಸು ಇಲ್ಲಿಗೆ ಬರುವ ಬದಲಿಗೆ ಅಲ್ಲಿಗೆ ಹತ್ತಿರವಿರುವ ಫುಕೋಕದಲ್ಲಿ ವಿಮಾನ ಏರಲು ಅವಕಾಶ ಮಾಡಿಕೊಡಬೇಕು ಎಂದು ಕೇಳಿಕೊಂಡೆ.

ಅವರು ಮೊದಲು ಸಾದ್ಯವಿಲ್ಲ ನಿನ್ನಲ್ಲಿರುವುದು ಯಾವುದೇ ಬದಲಾವಣೆಗೆ ಅಸ್ಪದವಿಲ್ಲದಿರುವ ಕಡೇ ದರ್ಜೆ ITX ಟೀಕೇಟು ಎಂದರೂ ನಂತರ ನನ್ನ ಸಮಸ್ಯೆ ಅರ್ಥ ಮಾಡಿಕೊಂಡರು.  ಯಾವುದೇ  ದಾಕ್ಷಿಣ್ಯಕ್ಕೆ  ಒಳಪಡದಿದ್ದರೂ  ನನ್ನ ಕೇಳಿಕೆ ಪ್ರಕಾರ ಅಸ್ಪದವನ್ನಿತ್ತರು. ಹಾಗೆ   ಸಾವಿರ  ಕಿಮಿ ಸೈಕಲಿಸುವುದು ಉಳಿತಾಯವಾದ   ನಾನು ಫುಕೋಕ ಪಟ್ಟಣದಿಂದ ಇಪ್ಪತ್ತು ದಿನಗಳ ಅನಂತರ ಹಾರಿ ಪ್ರಯಾಣ ಮುಂದುವರಿಸಿದೆ.

ಸಂಬಳ ಕೊಡಲು ಇವರಲ್ಲಿ ಯಾಕೆ ದುಡ್ಡಿಲ್ಲವೆಂದು ಕಲ್ಪಿಸಿಕೊಳ್ಳಲು ಸಾದ್ಯವಾಗುತ್ತದೆ. ಕಳಪೆ ಸೇವೆ ಅನ್ನಬೇಕಾಗುತ್ತದೆ.  



No comments: