Sunday, June 15, 2008

ಸೌರ ವಿದ್ಯುತ್ ಅವಕಾಶಗಳು



ಹಿಮ್ಮೊಗ ಹರಿದೀತೆ ವಿದ್ಯುತ್ ? ಎನ್ನುವ ಆಲೋಚನೆ ತುಂಬಾ ಕುತೊಹಲದಾಯಕ. ಶ್ರಿ ನಾಗೇಶ ಹೆಗಡೆಯವರ ಅಡಿಕೆ ಫತ್ರಿಕೆ ಮೆ 2008 ಅಂಕಣ ಒದುತ್ತಾ ಕುಳಿತಿದ್ದೆ. ಮೇಲ್ನೋಟಕ್ಕೆ ಅಸಾದ್ಯ ಎನ್ನುವ ವಿಚಾರ ಮನಸ್ಸಿಗೆ ಬಂದರೂ ಅವಕಾಶಗಳ ಬಗ್ಗೆ ಕೆದಕುತ್ತಾ ಸಾಗಿದಂತೆ ಸಾದ್ಯತೆಗಳು ಸ್ಪಷ್ಟವಾಗುತ್ತಾ ಬಂತು.


ಹಿಂದೊಮ್ಮೆ ಸೈಕಲಿನೊಂದಿಗೆ ಪ್ರಪಂಚಕ್ಕೊಂದು ಸುತ್ತು ಬಂದಿರುವ ನನಗೆ ಈ ವಿಚಾರಗಳಲ್ಲಿ ಬಹಳ ಆಸಕ್ತಿ. ಸೌದೆಯಿಂದ ಅನಿಲ (wood gasifier ) ಪಡೆದು ಅದರಿಂದ ಪಂಪ್ ಚಾಲೂ ಮಾಡಿದ್ದೆ. ಕಳೆದ ಆರು ವರುಷಗಳಿಂದ ಅಸಂಪ್ರದಾಯಕ ಶಕ್ತಿ ಮೂಲಗಳಲ್ಲಿ ಒಂದಾದ ಸೌರ ವಿದ್ಯುತ್ ಬಗೆಗೆ ನನ್ನ ಪ್ರಯತ್ನಗಳು ಸಾಗುತ್ತಾ ಬಂದಿದೆ. ಇದೊಂದು ಪೂರ್ವ ಉದಾಹರಣೆಗಳು ದೊರಕದ ಸವೆಯದ ಹಾದಿಯಲ್ಲಿ ಒಬ್ಬಂಟಿ ಪಯಣ. ಅದುದರಿಂದ ನನ್ನ ಅನುಭವ ಅನಿಸಿಕೆ ಎರಡನ್ನೂ ಹಂಚಿಕೊಳ್ಳುತ್ತೇನೆ.



ಒಮ್ಮೆ ಹೊಸ ಕೊಳವೆ ಬಾವಿಗೆ ಸೌರ submersible ಪಂಪಿನ ವಿಚಾರಣೆಗೆ ಹೋಗಿದ್ದೆ. ಆಗ ಒಂದು ಮಾಮೂಲಿ surface ಪಂಪಿಗೆ ಸಬ್ಸಿಡಿ ಇದ್ದ ಕಾಲ. ಹಾಗಾಗಿ ಅಂಗಡಿಯವರು ಅಷ್ಟೊಂದು ಫಲಕಗಳು ಕಡಿಮೆ ಬೆಲೆಗೆ ಸಿಗುತ್ತದೆ. ಆಲೋಚನೆ ಮಾಡಿ ಎಂದು ಪುಸಲಾಯಿಸಿದರು. ಅಂದಿಗೆ ಹದಿನೆಂಟು ವರ್ಷ ಹಿಂದೆ ಸೈಕಲಿನಲ್ಲಿ ದೆಹಲಿಗೆ ಸಾಗುವಾಗ ಟಿಲೋನಿಯದಲ್ಲಿ ಸೌರ ವಿದ್ಯುತ್ ಬಳಸಿ ರಾತ್ರಿ ಶಾಲೆ ಕಾರ್ಯಾಚರಿಸುವುದನ್ನು ಕಂಡಿದ್ದೆ. ಆಗಲೇ ಈ ಸೌರ ವಿದ್ಯುತ್ ಉಪಯೋಗ ಬಗೆಗೆ ಮನದಲ್ಲಿ ಬಿತ್ತಿದ ಬೀಜ ಮೊಳಕೆಯೊಡೆಯಿತು. ನನಗೆ ಬೇಕಾದ ಪಂಪ್ ಅಲ್ಲವಾದರೂ ಇದನ್ನು ಬಳಸಬಹುದೆಂಬ ಅಲೋಚನೆಯಿಂದ ಒಪ್ಪಿದೆ.



ಹಾಗೆ 2002ರಲ್ಲಿ ಒಂದಷ್ಟು ಫಲಕಗಳೊಂದಿಗೆ ಒಂದು ಸೌರ ಶಕ್ತಿಯ ಪಂಪು ನಮ್ಮಲ್ಲಿಗೆ ಬಂತು. ಅಂದಿನಿಂದ ಇಂದಿನ ವರೆಗೆ ಸೌರ ವಿದ್ಯುತ್ ಗರಿಷ್ಟ ಉಪಯೋಗದ ಬಗೆಗೆ ಆರು ಇಂಚು ಮೇಲೆ ಸರಿದರೆ ಮೂರು ಇಂಚು ಕೆಳಗೆ ಜಾರುವುದು ಎನ್ನುವ ಕಪ್ಪೆಯಾಟ ನಿರಂತರವಾಗಿ ಸಾಗುತ್ತಲೇ ಇದೆ.



ಸೌರ ಫಲಕಗಳು ಸಿಕ್ಕ ಕೂಡಲೇ ಪಂಪಿನ ಜತೆ ರಾತ್ರಿ ಉರಿಸಲು ಕೆಲವು ಸೌರ ದೀಪಗಳನ್ನೂ ವಿಧ್ಯುತ್ ಕಡಿತದ ಸಮಯದಲ್ಲಿ ಮನೆಯಾಕೆಗೆ ಅಕ್ಕಿ ಅರೆಯಲು, ಮಕ್ಕಳಿಗೆ ಸಚಿನ್ ಚೆಂಡು ಬಾರಿಸುವುದರ ನೋಡಲು ಮತ್ತು ನನ್ನ ಗಣಕಯಂತ್ರ ಉಪಯೋಗಿಸುವಂತೆ ವ್ಯವಸ್ಥೆ ಮಾಡಿಕೊಂಡೆ. ಹಗಲು ಶಕ್ತಿಯ ಒಳಹರಿವಿಂದಾಗಿ inverter ಸಹಾ ಹೆಚ್ಚು ಕಾಲ ಉಪಯೋಗಿಸಲು ಸಾದ್ಯವಾಯಿತು. ಇಷ್ಟಾದ ನಂತರ ವ್ಯರ್ಥವಾಗುತ್ತಿರುವ ಉಳಿಕೆ ವಿದ್ಯುತ್ ಬಗೆಗೆ ನನ್ನ ಗಮನ ಹರಿಯಿತು. ನನ್ನ ಫಲಕದಲ್ಲಿ ಉತ್ಪತ್ತಿಯಾಗುತ್ತಿರುವ ವಿದ್ಯುತ್ತಿನ ಸಂಪೂರ್ಣ ಬಳಕೆ ಕನ್ನಡಿಯೊಳಗಿನ ಗಂಟು ಎಂಬ ವಿಚಾರ ಕ್ರಮೇಣ ಅರಿವಾಯಿತು.





ಯುರೋಪ್ ಅಮೇರಿಕದಲ್ಲಿರುವಂತೆ ಇಲ್ಲೂ ಬಿಸಿಲು ಇರುವಾಗ ಹೆಚ್ಚಿನ ವಿದ್ಯುತ್ ಜಾಲಕ್ಕೆ ಹಾಯಿಸಿ ರಾತ್ರಿ ಪಡಕೊಳ್ಳುವಂತಿದ್ದರೆ ಚೆನ್ನ. ಹಾಗೆ ಸಾದ್ಯವಾದರೆ ಮನೆಯಲ್ಲಿ ಉಳಿದ ಹೆಚ್ಚುವರಿ ಹಾಲು ನಾವು ಹಾಲಿನ ಸೊಸೈಟಿಗೆ ಹಾಕುವಂತೆ ಸರಳ ವ್ಯವಹಾರ. ನಮಗೆ ಬಾಟರಿಗಳಲ್ಲಿ ಶೇಖರಿಸುವ ಹಾಗೂ ಪರಿವರ್ತಿಸುವ ಉಪಕರಣಗಳು ಮುಂತಾದ ಅನಗತ್ಯ ದುಬಾರಿ ಖರ್ಚುಗಳು ತಪ್ಪುತ್ತದೆ ಹಾಗೂ ಲಬ್ಯವಿದ್ದರೂ ಅವುಗಳ ಗುಣಮಟ್ಟ ತೃಪ್ತಿದಾಯಕ ಎನ್ನುವಂತಿಲ್ಲ. ಆದರೆ ಜಾಲಕ್ಕೆ ವಿದ್ಯುತ್ ಹಾಯಿಸಲು ಎರಡು ಅಡಚಣೆಗಳು ನಮ್ಮ ಮುಂದಿವೆ.



ಅಪಾಯಕಾರಿ ಸನ್ನಿವೇಶಗಳ ತಪ್ಪಿಸಲು ಎನ್ನುವ ಕಾರಣಕ್ಕೆ ಜಾಲಕ್ಕೆ ವಿದ್ಯುತ್ ಹಾಯಿಸಬೇಕಾದರೆ ಯಾವಾಗಲು ವಿದ್ಯುತ್ ಇರಲೇಬೇಕು ಎಂಬುದು ಸ್ಪಷ್ಟ. ರಿಪೇರಿಗೆಂದು ನಿಲುಗಡೆ ಮಾಡಿದಾಗ ನಾವು ವಿದ್ಯುತ್ ಹಾಯಿಸಿದರೆ ಕೆಲಸಗಾರರ ಜೀವಕ್ಕೆ ಅಪಾಯ. ಆದರೆ ನಮ್ಮಲ್ಲಿ ಸೆಕೆಗಾಲದಲ್ಲಿ ವಿದ್ಯುತ್ ಬೇಡಿಕೆ ಹಾಗೂ ಸೌರಫಲಕದಲ್ಲಿ ಉತ್ಪನ್ನ ಎರಡೂ ಅದಿಕವಾಗಿರುವಾಗ ಹಳ್ಳಿ ಕಡೆ ವಿದ್ಯುತ್ ಕಡಿತ ಇರುತ್ತದೆ ಎನ್ನುವ ವಿಚಾರ ಜಾಲಕ್ಕೆ ನಮ್ಮಿಂದ ವಿದ್ಯುತ್ ಹಾಯಿಸುವುದು ಅಸಾದ್ಯವಾಗಿಸುತ್ತದೆ. . ನಾವು ಜಾಲಕ್ಕೆ ಹುಯ್ಯುವ ವಿದ್ಯುತ್ತಿನ ಪ್ರಮಾಣ ಜಾಲದ ಮಟ್ಟಿಗೆ ಅತ್ಯಲ್ಪ. ಅದುದರಿಂದ ಅದಕ್ಕಾಗಿ ಜಾಲದಲ್ಲಿ ವಿದ್ಯುತ್ ಹಾಯಿಸಿ ಎಂದು ಕೇಳಲು ಸಾದ್ಯವಿಲ್ಲ.



ಎರಡನೆಯ ಸಿಮಿತಗೊಳಿಸುವ ವಿಚಾರ ಎಂದರೆ ನಾವು ಕಳುಹಿಸುವ ವಿದ್ಯುತ್ ಶಕ್ತಿಯ ತರಂಗಗಳು ಜಾಲದ ತರಂಗಗಳಿಗೆ ಹೊಂದಾಣಿಕೆಯಾಗ ಬೇಕು. ಅಲ್ಲಿ phase difference ಇರಲೇಬಾರದು. ಇದರ ತಾಂತ್ರಿಕತೆಯ ಬಗೆಗೆ ಇನ್ನೂ ನನಗೆ ಖಚಿತ ಮಾಹಿತಿ ಲಬ್ಯವಿಲ್ಲ. ಪಶ್ಚಿಮದ ದೇಶಗಳಲ್ಲಿ ಇವು ಮಿತ ದರದಲ್ಲಿ ಸುಲಭವಾಗಿ ಮಾರುಕಟ್ಟೆಯಲ್ಲಿ ಸಿಗುತ್ತದೆ.



ಜರ್ಮನಿಯಲ್ಲಿ 1999ರಲ್ಲಿ ತಂದ ಕಾನೂನು ತಿದ್ದುಪಡಿ ಜಾಲಕ್ಕೆ ವಿದ್ಯುತ್ ಹಾಯಿಸುವುದಕ್ಕೆ ಸುಗಮವಾಗಿಸಿ ಇಂದು ಅಲ್ಲಿ ಎಲ್ಲೆಡೆ ವಿದ್ಯುತ್ ಮಟ್ಟಿಗೆ ಸ್ವಾವಲಂಬಿಗಳನ್ನು ಕಾಣಬಹುದು. ಇಂದು ಈ ಕೈಗಾರಿಕೆ ದೇಶದಲ್ಲಿ 2 ಲಕ್ಷ ಜನಕ್ಕೆ ಉದ್ಯೋಗ ಕಲ್ಪಿಸಿರುವುದು ಮಾತ್ರವಲ್ಲ ಒಟ್ಟು ದೇಶದ ವಿದ್ಯುತ್ ಉತ್ಪಾದನೆಯ ಶೇಕಡಾ ಹನ್ನೆರಡರಷ್ಟು ಹೀಗೆ ಜನಸಾಮಾನ್ಯರ ಸೌರ ಫಲಕಗಳು ಹಾಗೂ ಗಾಳಿ ಯಂತ್ರಗಳಿಂದಲೇ ತಯಾರಾಗುತ್ತಿದೆ. ಜಗತ್ತಿನ ಸೌರ ಹಾಗೂ ಪವನ ಶಕ್ತಿ ಉಪಕರಣಗಳ ತಯಾರಿಕೆಯಲ್ಲಿ ಶೇಕಡ 30 ರಷ್ಟು ಪಾಲು ಇಂದು ಜರ್ಮನಿ ಹೊಂದಿರುತ್ತದೆ. ಅಲ್ಲಿ ಇತರ ಮೂಲಗಳ ವಿದ್ಯುತ್ ಯುನಿಟ್ ಒಂದಕ್ಕೆ ರೂಪಾಯಿ 3 ಕ್ಕೆ ಜಾಲ ಪಡಕೊಂಡರೆ ಸೌರ ಹಾಗೂ ಪವನ ಶಕ್ತಿ ಮೂಲದ ವಿದ್ಯುತ್ತಿಗೆ ಈಗ ರೂಪಾಯಿ 6 ರಷ್ಟು ಬೆಂಬಲ ಬೆಲೆ ಇರುತ್ತದೆ. ಈ ಪ್ರೋತ್ಸಾಹಕ ಬೆಂಬಲ ಪ್ರತಿ ವರ್ಷವೂ ಕಡಿಮೆಯಾಗುತ್ತಿದ್ದು ಕೊನೆಗೊಮ್ಮೆ ಇತರ ವಿದ್ಯುತ್ ಮೂಲಗಳ ಜತೆ ಸ್ಪರ್ದಿಸಲು ಒತ್ತಡ ಇರುತ್ತದೆ.
ಡೆನ್ಮಾರ್ಕ್ ಶೇಕಡ 20 ರಷ್ಟು ವಿಧ್ಯುತ್ ಪವನಯಂತ್ರಗಳಿಂದ ಪಡಕೊಳ್ಳುತ್ತಿದ್ದು ಉಳಿದ ಕೊರತೆ ಬೀಳುವ ಬೇಡಿಕೆಯ ನಿರ್ವಹಣೆಗೆ ಅಕ್ಕ ಪಕ್ಕದ ದೇಶಗಳಿಂದ ಖರೀದಿಸುತ್ತದೆ. 1986 ಜೂನ್ ತಿಂಗಳಲ್ಲಿ ಒಂದು ರಾತ್ರಿಯ ಮಟ್ಟಿಗೆ ಸಮುದ್ರ ತೀರದಲ್ಲಿರುವ ಗಾಳಿಯಂತ್ರದಿಂದ ವಿದ್ಯುತ್ ತಯಾರಿಸುವ ಒಬ್ಬರು ರೈತರ ಅತಿಥಿಯಾಗಿದ್ದೆ. ಇಲ್ಲಿ ಪವನ ಶಕ್ತಿ ಕ್ಷೇತ್ರದಲ್ಲಿ ಎರಡು ಸಾವಿರಕ್ಕೂ ಮಿಕ್ಕಿ ಸಹಕಾರ ಸಂಸ್ಥೆಗಳು ಸಕ್ರಿಯವಾಗಿದ್ದು ಇಲ್ಲಿನ ಶೇಕಡ 85 ಜನಸಂಖ್ಯೆ ಅಂದರೆ ಒಂದೂವರೆ ಲಕ್ಷ ಕುಟುಂಬಗಳು ಸ್ವಂತ ಅಥವಾ ಪರೋಕ್ಷವಾಗಿ ಸಹಕಾರಿ ಸಂಸ್ಥೆಗಳ ಮೂಲಕ ಪವನಯಂತ್ರಗಳ ಹೊಂದಿದವರಾಗಿರುತ್ತಾರೆ. ಇಂದು ನಮ್ಮಲ್ಲೂ ಪ್ರಯತ್ನ ಪಟ್ಟರೆ ಈ ಮಾದರಿಗಳು ಸಾದ್ಯವೆಂದು ಹೇಳಬಹುದು.



ಅಮೇರಿಕದ ಕಾಲಿಪೋರ್ನಿಯದಲ್ಲಿ ಒಂದು ಸೌರಫಲಕಗಳ ಅಳವಡಿಸುವ ಸಂಸ್ಥೆ ನೀವು ದೂರವಾಣಿಯಲ್ಲಿ ಸೂಚನೆ ಕೊಟ್ಟ ಕ್ಷಣದಲ್ಲಿ ಕಾರ್ಯಮುಖವಾಗುತ್ತದೆ. ನಿಮ್ಮ ಮನೆಯ ಛಾವಣಿಯ ಗೂಗಲ್ ಉಪಗ್ರಹ ಚಿತ್ರವನ್ನು ನೋಡಿ ಅಲ್ಲಿ ಯಾವ ರೀತಿ ಮತ್ತು ಎಷ್ಟು ಫಲಕಗಳ ಅಳವಡಿಸಬಹುದೆಂಬ ಸ್ಪಷ್ಟ ಯೋಜನೆ ಅವರ ಕಛೇರಿಯಲ್ಲೇ ತಯಾರಾಗುತ್ತದೆ. ಅವರು ಸಂಪೂರ್ಣ ಮಾಹಿತಿಯೊಂದಿಗೆ ಬಂದು ನಿಮ್ಮೊಂದಿಗೆ ಸಂವಾದಕ್ಕೆ ಕೂರುತ್ತಾರೆ. ನಿಮ್ಮ ಸಂಶಯಗಳನ್ನೆಲ್ಲ ಪರಿಹರಿಸುತ್ತಾರೆ. ದೊಡ್ಡ ವ್ಯವಸ್ಥೆಯಾದರೆ ದೈನಿಂದಿನ ನಿರ್ವಹಣೆಯಲ್ಲೂ ಸಹಾಯ ಮಾಡುತ್ತಾರೆ. ಹೀಗೆ ಅಲ್ಲಿ ಇದೊಂದು ಬೆಳೆಯುತ್ತಿರುವ ಉದ್ಯಮ.



ನಮ್ಮ ಸರಕಾರ ನಮ್ಮಲ್ಲಿ ತಯಾರಾಗುವ ಆದರೆ ಹಿಡಿದಿರಿಸಿಕೊಳ್ಳಲು ಸಾದ್ಯವಾಗದೆ ನಷ್ಟವಾಗುವ ವಿದ್ಯುತ್ ಪಡಕೊಳ್ಳುವ ಕಾಲ ಇನ್ನೂ ಬಂದಿಲ್ಲ. ಹಾಗಾಗಿ ನಮ್ಮ ಮುಂದಿರುವ ಇತರ ಅವಕಾಶಗಳ ಪರಿಶೀಲನೆ ಮಾಡೋಣ.



ಪಂಪು 48 V ಅಪೇಕ್ಷಿಸಿದರೆ ನಮ್ಮ ಮಾಮೂಲಿ ಉಪಕರಣಗಳೆಲ್ಲವೂ 12 V ನವು. ನಮ್ಮಲ್ಲಿ 48V ಹಾಗೆಯೇ ಬಳಸಿದರೆ ಉಪಕರಣ ದುಬಾರಿ ಮತ್ತು ಎಲ್ಲ ಫಲಕವನ್ನು 12V ಕ್ಕೆ ಪರಿವರ್ತಿಸಿದರೆ ಬೆರಳ ಗಾತ್ರದ ದುಬಾರಿ ಸರಿಗೆಯಲ್ಲಿ ಹಾಯಿಸುವುದು ಅನಿವಾರ್ಯ ಎನ್ನುವ ದ್ವಂದ್ವಕ್ಕೆ ಒಳಗಾದೆ. ಹೀಗೆ ಒಮ್ಮೆ ಹೆಚ್ಚಿನ ಬಳಕೆಗೆ ಸಹಾಯವಾಗಲು ಒಂದು 48V invertor ಸಹಾ ಪಡಕೊಂಡೆ. ಅದು ಆನೆ ಗಾತ್ರದ ಕಾರಿನಲ್ಲಿ ಕೊತ್ತಂಬರಿ ಸೊಪ್ಪು ತರಲು ಹೋದದ್ದು ಎನ್ನುವಂತಾಯಿತು. ಕಡಿಮೆ ವಿದ್ಯುತ್ ಬಳಸುವ ಸಮಯದಲ್ಲಿ ಶಕ್ತಿಯ ಬಹು ಅಂಶ ಅದುವೇ ಕಬಳಿಸುತ್ತದೆ ಹಾಗೂ ನನ್ನ ಉಪಯೋಗಕ್ಕೆ ಸಿಗುವುದು ಕಡಿಮೆ ಎನ್ನುವ ವಿಚಾರ ಕ್ರಮೇಣ ಅನುಭವಕ್ಕೆ ಬಂತು. ಹಗಲ ಉಪಯೋಗಕ್ಕಿಂತ ರಾತ್ರಿ ನಾನು ಬಾಟರಿಯಲ್ಲಿ ತುಂಬಿಸಿಟ್ಟ ವಿದ್ಯುತ್ ಉಪಯೋಗದಲ್ಲಿ ಜಾಗ್ರತೆ ವಹಿಸಲೇ ಬೇಕು.



ನಮಗೆ ಬೇಕಾದಷ್ಟು ಶಕ್ತಿಯನ್ನು ಬಳಸಲು ಅನುಕೂಲವಾಗಲೆಂದು 12 ಯಾ 48 volt ಲಬ್ಯವಾಗುವಂತೆ dipole relay ಗಳನ್ನು ಸೌರ ಫಲಕದಲ್ಲಿ ಗೆಳೆಯ ಅಶೋಕ ಅಳವಡಿಸಿದ. ಸುಮಾರು ಒಂದು ವರುಷ ಅವುಗಳು ಶಕ್ತಿ ಪೊರೈಕೆ ವಿಚಾರ ಚೆನ್ನಾಗಿ ಕೆಲಸ ಮಾಡಿದವು ಅನಂತರ ಅವುಗಳ contacts ಸುಟ್ಟು ಹೋದಂತಾಗಿ ಕ್ಷಮತೆ ಕಳಕೊಂಡವು. ಅದುದರಿಂದ ನಾನು ಅವುಗಳನ್ನು ಕಳಚುವುದು ಅನಿವಾರ್ಯವಾಯಿತು.



ಸೌರ ಫಲಕಗಳಿಂದ ಬರುವ ವಿದ್ಯುತ್ ಶಕ್ತಿಯ ನಿಯಂತ್ರಣ ಬಹಳ ಅಗತ್ಯ. ತಯಾರಿ, ದಾಸ್ತಾನು ಮತ್ತು ಬೇಡಿಕೆಗಳ ಹೊಂದಾಣಿಕೆ ನಿರ್ವಹಿಸುವ ಈ charge controllers ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಇಲ್ಲವಾದರೆ ನಮ್ಮ ಬಾಟರಿ ಅತಿ ಹೆಚ್ಚು ಚಾರ್ಜ್ ಆಗಿ ಹಾಳಾಗಬಹುದು. ನಮ್ಮಲ್ಲಿ ಪುಟ್ಟ ಫಲಕಗಳಿಂದ ಬರುವ 12V ನಿಯಂತ್ರಣಕ್ಕೆ ಬೇಕಾದ ಉಪಕರಣ ಊರಲ್ಲಿಯೇ ದೊರಕುತ್ತದೆ. ಆದರೆ ಹೆಚ್ಚು ವಿಧ್ಯುತ್ (30 A) ಅಥವಾ ಹೆಚ್ಚು ವೊಲ್ಟೇಜ್ (48 V) ಎರಡಕ್ಕೂ ಮಾರಾಟಗಾರರಲ್ಲಿ ಸ್ಪಷ್ಟ ಉತ್ತರವಿಲ್ಲ. ಬೇಕಾದ ಬಿಡಿ ಬಾಗ ಲಬ್ಯವಿಲ್ಲ ಮತ್ತು ಯಾರಿಗೂ ಬಿನ್ನ ಹಾದಿಯಲ್ಲಿ ಸಾಗುವ ಆಸಕ್ತಿಯೂ ಇಲ್ಲ. ನನ್ನ ಬೇಡಿಕೆ ಮೇಲೆ ಬೆಂಗಳೂರಿನಲ್ಲಿ ತಯಾರಾದ ಒಂದು 48 V charge controller ಗುಣಮಟ್ಟ ಸಮದಾನಕರವಲ್ಲ.



ನಮ್ಮ ಉಳಿದ ಎಲ್ಲ ಉಪಕರಣಗಳ ಮಟ್ಟಿಗೆ ನಾನು ಸ್ವಾವಲಂಬಿ ಎನಿಸಿದರೂ ನಮ್ಮ ಬಾಟರಿ ಅವಲಂಬಿತ ಸೌರ ವ್ಯವಸ್ಥೆಯಲ್ಲಿ ರೆಫ್ರಿಜರೇಟರ್ ಬಳಸುವಂತಿಲ್ಲ. ಅದು ಇನ್ನೂ ಸರಕಾರಿ ವಿದ್ಯುತ್ ಉಪಯೋಗಿಸುತ್ತದೆ. ಹಗಲಿನಲ್ಲಿ ಅದೆರೆಡೆಗೆ ನಿಗಾ ವಹಿಸಿದರೆ ಸಾದ್ಯವಾದರೂ ಅದು ಪ್ರಾಯೋಗಿಕವಲ್ಲ. ಅಗಾಗಿ ನಿಂತು ನಡೆಯುವ ಈ ಯಂತ್ರ ಪ್ರಾರಂಬವಾಗುವಾಗ ಒಮ್ಮೆಗೆ ಹೆಚ್ಚು ಶಕ್ತಿಯನ್ನು ಬೇಡುವ ಕಾರಣ ಬಾಟರಿಯನ್ನು ಹಿಂಡಿದಂತಾಗಿ ಬಾಳ್ವಿಕೆ ಕಡಿಮೆಯಾಗುತ್ತದೆ.


ನಮ್ಮಲ್ಲಿ ವಿದ್ಯುತ್ ಉಳಿತಾಯದ CFL ಮತ್ತು LED ದೀಪಗಳು. ಎರಡೂ ದುಬಾರಿ ಮಾಲುಗಳು. ಒಂದು ವರ್ಷ ಖಾತರಿ ಎನ್ನುವ ಈ CFL ದೀಪಗಳ ಸರಾಸರಿ ಬಾಳ್ವಿಕೆ ಒಂದೂವರೆಯಿಂದ ಎರಡು ವರ್ಷಗಳು. ಅದುದರಿಂದ ಇವು ವಿದ್ಯುತ್ ಉಳಿಸಿದರೂ ಉಳಿಕೆ ಹಣದ ಒಂದಂಶ ಹೊಸ ದೀಪಗಳ ಖರೀದಿಗೆ ವಿನಿಯೋಗ. LED ದೀಪಗಳು ಬಹಳ ಹೆಚ್ಚು ಬಾಳ್ವಿಕೆ ಎಂದು ಹೇಳಲ್ಪಟ್ಟಿದೆ. ಇದನ್ನು ಇನ್ನೂ ಏನೂ ಹೇಳಲು ಸಾದ್ಯವಿಲ್ಲ. ಆದರೆ ಶಕ್ತಿಯ ಉಪಯೋಗ ಕನಿಷ್ಟ ಎನ್ನುವುದು ನಿರ್ವಿವಾದ. ಒಟ್ಟಿನಲ್ಲಿ ಉಳಿತಾಯದ ವಿಚಾರ ನಿರ್ಣಾಯಕವಾಗಿ ಹೇಳಲು ಕಷ್ಟ.


ನಾನು ಒಂಟಿಯಾಗಿ ಅನುಬವಿಸಿದ ವೈಫಲ್ಯಗಳ ಬಗೆಗೆ ಹಂಚಿಕೊಳ್ಳಲು ಈ ವಿಚಾರಗಳ ಬರೆದೆ. ಈ ವಿದ್ಯುತ್ ಹಿಮ್ಮೊಗ ಹರಿವು ಸಾದ್ಯತೆಗಳು ನನಗೆ ನಿಕಟ ಬವಿಷ್ಯದಲ್ಲಿ ಗೋಚರಿಸುವುದಿಲ್ಲ. ಕಾರ್ಯಗತವಾದರೆ ಸಮಾಜಕ್ಕೆ ಬಹಳ ಉಪಕಾರಿ. ಆದರೆ ನಮ್ಮ ಸರಕಾರಗಳ ಅಸ್ಪಷ್ಟ ದೋರಣೆಗಳಿಂದಾಗಿ ಯಾರೂ ಸಮಾಜಕ್ಕಾಗಿ ಹಣ ಮತ್ತು ಸಮಯ ವಿನಿಯೋಗಿಸುವುದು ಕಷ್ಟಸಾದ್ಯ.

Thursday, June 12, 2008

Bush Radio ದಿಕ್ಕು ತಪ್ಪಿಸಿದ್ದು

ಇತ್ತೀಚೆಗೆ ನಮ್ಮ ಬುಷ್ ರೆಡಿಯೊದಲ್ಲಿ ಬಾರತದ ಮದ್ಯಮ ವರ್ಗದ ಬಗೆಗೆ ಒಂದು ಉದ್ದಟತನದ ಮಾತು ಕೇಳಿ ಬಂತು. ಅದ್ಯಕ್ಷರಲ್ಲಿ ಆಹಾರದ ಬೆಲೆಯ ಬಗೆಗೆ ಪ್ರಶ್ನಿಸಿದಾಗ ಉಳಿದ ದೇಶಗಳಲ್ಲಿ ಜನ ಹೆಚ್ಚುತ್ತಿದ್ದಾರೆ. ಅವರು ಮದ್ಯಮ ವರ್ಗಕ್ಕೆ ಲಗ್ಗೆಯಿಡುತ್ತಿದ್ದಾರೆ. ಸ್ವಾಬಾವಿಕವಾಗಿ ಹೆಚ್ಚು ಆರೋಗ್ಯಪೂರ್ಣ ಅಹಾರ ಬಯಸುತ್ತಾರೆ ಎಂದು ಸಮಸ್ಯೆಯನ್ನು ಬಾರತೀಯರ ಮೇಲೆ ಹೇರಲು ಯತ್ನಿಸಿದರು. ಈ ರೀತಿ ದಿಕ್ಕು ತಪ್ಪಿಸುವ ಕೆಲಸದಲ್ಲಿ ಅಮೇರಿಕನರು ಬಾರಿ ಚುರುಕು ಚಲಾಕಿ.







ಆದರೆ ಬಾರತಿಯರು ಸುಮಾರು 2440 ಕಾಲರಿ ಆಹಾರ ಬಳಸಿದರೆ ಅಮೇರಿಕನರು ಸರಾಸರಿ 3770 ಕಾಲರಿ ಆಹಾರ ಬಳಸುತ್ತಾರೆ. ಇವರ ಆಹಾರದಲ್ಲಿ ಮಾಂಸಹಾರ ಹೆಚ್ಚಿರುವ ಕಾರಣ ಆಹಾರದ ಹೆಜ್ಜೆಯು ಬಹಳ ದೊಡ್ಡದು. ಒಳ್ಳೆ ತೋಳ ಕುರಿಮರಿ ಕಥೆ ಆಯಿತಲ್ಲ. ಇರಲಿ.



ಈ ವಾರ ಅಮೇರಿಕದ ಒಂದು ಜಾಲತಾಣವನ್ನು ಹುಡುಕಾಡುವಾಗ ಕೆಲವು ಕುತೂಹಲಕರಿ ವಿಚಾರ ಗಮನಕ್ಕೆ ಬಂತು. ಅಮೇರಿಕನರು ತಿನ್ನುವುದು ಮಾತ್ರ ಜಾಸ್ತಿಯಲ್ಲ, ಅದು ಅವರ ದೇಹದಲ್ಲಿ ಶೇಖರವಾಗುತ್ತಾ ಹೋಗುತ್ತದೆ. ಇದರ ಪರಿಣಾಮವಾಗಿ ಹಲವು ಅವ್ಯವಸ್ತೆಗಳು. ದೇಶದ ಪ್ರತಿಯೊಂದು ವ್ಯವಸ್ತೆಯೂ ಅತಿ ಬಾರದಿಂದಾಗಿ ಕುಸಿಯುತ್ತಿದೆ. ಕಂಬಿಯಲ್ಲಿ ಓಡಾಡುವ ಗಾಡಿ ನಿತ್ರಾಣಿಯಾದರೆ ದೋಣಿ ಮುಳುಗುತ್ತದೆ. ಎಲ್ಲವನ್ನೂ ಪುನ: ಕಟ್ಟುವ ಅನಿವಾರ್ಯತೆ.



America is literally collapsing under the strain of overweight citizens. Disneyland’s Small World ride, designed in the 1960s (when the average male park visitor weighed 175 pounds) is now being re-built to haul passengers weighing more than 200 pounds. In 2004, a Baltimore water taxi built to carry 25 adults weighing an average of 140 pounds sank because the combined weight of the boat’s 25 passengers was 700 pounds more than the vessel could handle.



ಅಷ್ಟು ಮಾತ್ರವಲ್ಲ ಈ ದೈತ್ಯ ದೇಹಿಗಳ ಶರೀರದಿಂದ ಹಿಂಡಲ್ಪಟ್ಟ ಕೊಬ್ಬು ಕಾರು ಓಡಿಸಲು ಇಂದನವನ್ನಾಗಿ ಉಪಯೋಗಿಸುತ್ತಾರಂತೆ. ನಮ್ಮಲ್ಲಿ ಇತ್ತೀಚಿನ ವರೆಗೆ ದಡೂತಿ ಶರೀರವೂ ಚಂದ ಮತ್ತು ಈ ಕೊಬ್ಬು ಆಹಾರ ಸಿಕ್ಕದಿರುವಾಗಕ್ಕೆ ಕಾದಿರಿಸಲ್ಪಟ್ಟ ಶಕ್ತಿಯೆಂದು ಪರಿಗಣಿಸಲ್ಪಟ್ಟಿತ್ತು.



If the concept of “flab gas” leaves you flabbergasted, prepare for a shock: researchers are already mining human fat for fuel. Miami’s Jackson Memorial Hospital reportedly has signed a deal to supply Norwegian entrepreneur Lauri Venoy with 3,000 gallons-per-week of liposuction leftovers harvested by its clinics. This biofat could produce 2,600 gallons of biodiesel, sufficient to fuel a Hummer for a year.

ತಿನ್ನುವುದರಲ್ಲೇ ಮಿತಿ ಪಡಿಸಿದರೆ ಹಲವು ಸಮಸ್ಯೆಗಳು ಪರಿಹಾರ. ಆದರೆ ..............



ಆಧಾರ:

http://www.commondreams.org/archive/2008/06/10/9518/







Wednesday, May 28, 2008

ಒಂದು ಕಾಫಿಯ ಕಥೆ

Switerland ನಲ್ಲಿ ಆಗ ಚಳಿಗಾಲ ಕೊನೆಗೊಂಡಿರಲಿಲ್ಲ. ಎಲ್ಲೆಲ್ಲೂ ಹಿಮ. ಜೀವಮಾನದಲ್ಲೇ ಮೊದಲ ಬಾರಿ ಹಿಮ ಕಂಡ ನನಗೆ ಹೊಸ ಅನುಬವ. ಪರ್ವತ ದಾರಿ ಹಿಮದಿಂದ ಮುಚ್ಚಿದ್ದ ಕಾರಣ ನಾನು ನನ್ನ ರಥ ಸಮೇತ ರೈಲಿನಲ್ಲಿ Gottardo ಊರು ತಲಪಿ Youth Hostel ನಲ್ಲಿ ಉಳಕೊಂಡೆ. ಸಂಪೂರ್ಣ ಸುರಂಗ ಮಾರ್ಗದ ಈ ರೈಲಿನ ಪ್ರಯಾಣಕ್ಕೆ ಹಾಸಲು - ನನಗೆ ೪.೯೫ ಶೀಲಿಂಗ್ ಮತ್ತು ಸೈಕಲಿಗೆ ಬರ್ತಿ ೫ ಶೀಲಿಂಗ್, ಅಂದರೆ ನನಗಿಂತ ಸೈಕಲಿಗೇ ಚೂರು ಜಾಸ್ತಿ. ಮರುದಿನ ಎದ್ದು ಅಲ್ಲಿ ಉಪಹಾರ ಮುಗಿಸಿ ನನ್ನಲ್ಲಿದ್ದ ಎಲ್ಲ ಬಟ್ಟೆ ನನ್ನ ಮೈಗೇರಿಸಿ ಹೊರಟೆ. ಮುಂದಿನ ದಾರಿ ಪೂರ್ತಿ ಇಳಿಜಾರು. ಪುಣ್ಯವಶಾತ್ ವಾಹನಗಳಿಗೆಲ್ಲ ಪ್ರತ್ಯೇಕ ರಸ್ತೆಯಾದ ಕಾರಣ ಈ ಮಾರ್ಗ ಪೂರ್ತಿ ನನಗೆ ಎಂಬಂತಿತ್ತು. ಸುಮಾರು ೨೦ ನಿಮಿಷ ಕಳೆಯುವಾಗ ಹಿಮದ ಪ್ರದೇಶ ಕಳೆದಿತ್ತು. ಅಲ್ಲೊಂದು ಊರು. ಚಳಿಯಲ್ಲಿ ದೇಹ ಮರಗಟ್ಟಿತ್ತು. ಬೆರಳಗಳು ಸಲಿಸಾಗಿ ಬಗ್ಗುತ್ತಿರಲಿಲ್ಲ. ಚಳಿಯಿಂದ ಒಮ್ಮೆ ಸುದಾರಿಸಿಕೊಳ್ಳುದು ಅನಿವಾರ್ಯ ಅನಿಸಿತು. ಪ್ರವಾಸಿಗೆ ಅಪರಿಚಿತ ಊರಿನಲ್ಲಿ ತೆರೆದಿರುವ ಬಾಗಿಲು ಹೋಟೆಲ್ ಮಾತ್ರ. ಚಳಿ ಎಂದು ಯಾರದೋ ಮನೆ ನುಗ್ಗುವಂತಿಲ್ಲ. ಪ್ರಯಾಸದಿಂದ ಕೈಚೀಲ ಮತ್ತು ಹೆಚ್ಚುವರಿ ಬಟ್ಟೆ ಕಳಚಿದೆ. ಅಷ್ಟರಲ್ಲಿ ಹುಡುಗಿಯೊಬ್ಬಳು ಬಂದು will you have a cup of coffee ಎಂದಾಗ ಸ್ವರ್ಗ ಕೈಗೆಟಕುವ ಅನುಭವ. It will be very nice ಎಂದೆ. ಹತ್ತು ನಿಮಿಷದಲ್ಲಿ ಪುಟ್ಟ ಲೋಟದಲ್ಲಿ ಹಾಲು ಸಕ್ಕರೆ ಹಾಕದ ಡಿಕಾಕ್ಷನ್ , ಹಾಲಿನ ಪುಟ್ಟ ಪೊಟ್ಟಣಗಳು ಮತ್ತು ಸಕ್ಕರೆ ಬಿಲ್ಲೆಗಳು ತಂದಿಟ್ಟಳು. ಕಾಫಿ ಕುಡಿದಾಗ ಬಿಲ್ ಬಂತು. ಆ ಕ್ಷಣದಲ್ಲಿ ನನಗನಿಸಿದ್ದು ಮೊದಲೇ ಬಿಲ್ ಬರುತ್ತಿದ್ದರೆ ಪ್ರಾಯುಶ: ಕಾಫಿ ಬೇಕಾಗುತ್ತಿರಲಿಲ್ಲ. ಬಿಲ್ ನೋಡಿ ಮೈ ಬಿಸಿಯಾಗುತಿತ್ತು. ಕಾಫಿ ಚಾ ಕುಡಿಯುವ ಹವ್ಯಾಸ ಇರದ ನಾನು ನನ್ನ ಇಡಿ ಒಂದು ವರುಷದ ಪ್ರವಾಸದಲ್ಲಿ ಒಮ್ಮೆ ಮಾತ್ರ ಕಾಫಿ ಹಣ ಕೊಟ್ಟು ಕುಡಿದದ್ದು. ಹಣ ತೆತ್ತು ಹೊಸ ಉತ್ಸಾಹದಿಂದ ಸೈಕಲ್ ಏರಿದೆ.

Thursday, May 22, 2008

ಮನೆಗೆ ಆದಾರವಾಗುವವನಿಗೆ ಶಾಪ ವಿಮೋಚನೆಯಿಲ್ಲ

ಶ್ರೀಪಾದ ಹೆಗಡೆಯವರ 2008 ಮಾರ್ಚ್ ತಿಂಗಳ ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಮನೆಯಲ್ಲುಳಿದವ ಹಿಂದುಳಿಯಬೇಕೆ ಸಕಾಲಿಕ ಹಾಗೂ ಅರ್ಥಪೂರ್ಣ. ಹಲವು ಮಜಲುಗಳನ್ನು ಒಳಗೊಂಡ ಬರಹ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಮನದಲ್ಲೇಳುವ ಪ್ರಶ್ನೆಗಳಿಗೆ ಪ್ರಾಯೋಗಿಕ ಪರಿಹಾರಗಳು ದೊರಕದೆ ನಮ್ಮನ್ನು ಮತ್ತಷ್ಟು ಗೊಂದಲಕ್ಕೆ ಈಡು ಮಾಡುತ್ತದೆ.

ಹಳ್ಳಿಯ ಬದುಕೆಂದರೆ ಕೃಷಿ ಮಾತ್ರವಲ್ಲ ನಮ್ಮ ಸಂಸ್ಕೃತಿ ಪರಂಪರೆಯೊಂದಿಗೆ ಹಾಸು ಹೊಕ್ಕಾದ ಜೀವನ ಪದ್ದತಿಯ ಅಳಿವು ಉಳಿವಿನ ಪ್ರಶ್ನೆಯಾಗಿರುತ್ತದೆ. ಬದಲಾವಣೆ ಜಗದ ನಿಯಮ ಎಂದರೂ ಕಳೆದ ಹತ್ತು ವರ್ಷಗಳಲ್ಲಿ ಹಿಂದೆಂದೂ ಕಂಡರಿಯದ ಊಹನಾತೀತ ಬದಲಾವಣೆ ಕಾಣುತ್ತಿದ್ದೇವೆ. ದಿನಕ್ಕೊಂದು ಕಾನೂನು ಎನ್ನುವಾಗ ಈ ದೀರ್ಘ ಕಾಲಮಿತಿಯ ವಿಚಾರಕ್ಕೆ ಸುಲಬವಾಗಿ ಉತ್ತರ ಕಂಡುಕೊಳ್ಳಲು ಕಷ್ಟಸಾದ್ಯ. ಮೊದಲಿಗೆ ವ್ಯಕ್ತಿಯೊಬ್ಬ ಯಾಕಾಗಿ ಮತ್ತು ಯಾರಿಗಾಗಿ ಹಳ್ಳಿಯಲ್ಲಿ ಉಳಿಯಬೇಕು ಎನ್ನುವುದರ ವಿಮರ್ಷೆ ಆಗಬೇಕು.

ಮನೆದೇವರಿಗೆ ತಮ್ಮ ಪರವಾಗಿ ಪೂಜೆ ಸಲ್ಲಿಸಲೋ ? ಕಣಿಲೆ ಉಪ್ಪಿನಕಾಯಿ ಪುನರ್ಪುಳಿ ಸಿಪ್ಪೆ ಕಾಲಕಾಲಕ್ಕೆ ಒದಗಿಸಲೋ ? ತಮ್ಮ ಸಂಸ್ಕೃತಿ ಪರಂಪರೆಗಳ ಜೀವಂತವಿರಿಸಿ ತಳಮಟ್ಟದ ಬೇರು ಉಳಿಸಿಕೊಳ್ಳಲು ಕೊಂಡಿಯಾಗಿರಲೋ ? ಹಳ್ಳಿ ಮನೆ ಒಂದು ಪ್ರವಾಸಿ ತಾಣವಾಗಿ ಕುಟುಂಬದವರಿಗೆ ಉಳಿಸಿಕೊಳ್ಳಲೋ ? ಒಟ್ಟಿನಲ್ಲಿ ಪಟ್ಟಣದಲ್ಲಿರುವವರ ಅನುಕೂಲಕ್ಕೆ ಮಾತ್ರವೋ ಅಥವಾ ನೈಜ ಕಾಳಜಿಯೋ ? ಎಲ್ಲರೂ ವ್ಯಕ್ತಿಗತವಾಗಿ ಕಾರ್ಯಮುಖರಾಗಿರುವಾಗ ಒಬ್ಬನನ್ನು ಮನೆತನಕ್ಕಾಗಿ ಸಮಾಜಕ್ಕಾಗಿ ಬಲಿ ಕೋಡಲು ಪ್ರರೇಪಿಸುವುದು ಸರಿಯಲ್ಲ.

ಪರಂಪರೆ ಉಳಿಯಲೇ ಬೇಕಾದರೆ ಸಮಾಜದ ದೋರಣೆ ಬದಲಾಗಬೇಕು. ಹಳ್ಳಿ ಮನೆ ವ್ಯವಸ್ಥೆಗೆ ಹೆಗಲು ಕೊಟ್ಟವನ ಪರೀಸ್ಥಿತಿ ಗಾಳಿಪಟಕ್ಕೆ ಆಕಾರ ಕೊಟ್ಟ ಕಡ್ಡಿಯಂತೆ ದೂರದಿಂದ ಗೋಚರಿಸದು. ಅದೇ ರೀತಿ ಇವನ ಪಾತ್ರವೂ ನೇಪಥ್ಯಕ್ಕೆ ಸರಿಯುವುದು ಬೇಸರದ ವಿಚಾರ. ಈ ಯುವಕ ಯುವತಿಯರ ಸಬಲಿಕರಣ ಇಂದಿನ ತುರ್ತು ಅಗತ್ಯ.

ಎಳೆಪ್ರಾಯದ ಅಲೆದಾಟದಲ್ಲಿ ಪ್ರಪಂಚದ ಹಲೆವೆಡೆ ಜನರ ಮನೋಬಾವ ಸಮೀಪದಿಂದ ನೋಡಲು ನನಗೆ ಅವಕಾಶವಿತ್ತು. ಪ್ರತಿಯೊಬ್ಬರ ಜೀವನದೃಷ್ಟಿ ದೋರಣೆಗಳು ಅವರು ಬೆಳೆದ ಹಾಗೂ ವಾಸಿಸುವ ಪರಿಸರವ ಹೊಂದಿಕೊಂಡು ರೂಪಿಸಲ್ಪಡುತ್ತದೆ. ಹಳ್ಳಿಯಲ್ಲಿರುವವರಿಗೆ ಕೂಡು ಕುಟುಂಬ ಸಹಜೀವಿಗಳೂ ಸೇರಿದಂತೆ ಸಮುಗ್ರ ದೃಷ್ಟಿ ಹೊಂದಿದ್ದರೆ ನಗರದಲ್ಲಿರುವವರ ಕಾಳಜಿ ಗಂಡ ಹೆಂಡತಿ ಮಕ್ಕಳಿಗೆ ಸಿಮಿತವಾಗಿರುತ್ತದೆ. ತನ್ನ ಇತಿಮಿತಿಯ ಅರಿವಿನಲ್ಲಿಯೇ ಸಾದ್ಯವಾದುದಕ್ಕೆ ತೃಪ್ತಿಪಟ್ಟುಕೊಂಡು ತನ್ನ ಮನೆಯವರ ಬಗೆಗೆ ಸುತ್ತಲಿನವರ ಬಗೆಗೆ ಕಾಳಜಿ ಇಟ್ಟು ಮನಶಾಂತಿ ನೆಮ್ಮದಿಯಿಂದ ಬಾಳಲು ಆಶಿಸುವ ರೈತ ಹುಡುಗ ಕೊನೆಗೆ ತನ್ನ ಪರೀಸ್ತಿತಿ ಅರಿತು ಕಂಗೆಡುತ್ತಾನೆ.

ಹಳ್ಳಿಗಳು ಖಾಲಿಯಾಗುತ್ತಿರುವುದು ನಮ್ಮಲ್ಲಿ ಮಾತ್ರವಲ್ಲ, ಅದೊಂದು ಜಾಗತಿಕ ಸಮಸ್ಯೆ. ಇಲ್ಲಿ ಮುಖ್ಯವಾಗಿ ಕೃಷಿ ಅವಲಂಬಿ ಕುಟುಂಬಗಳಲ್ಲಿ ಅಸ್ತಿ ಹಕ್ಕು ಅನ್ನುವ ಕಾನೂನು ಹಳ್ಳಿಯಲ್ಲಿ ಉಳಿಯುವವನನ್ನು ಬಹಳಷ್ಟು ಶೋಷಿಸುತ್ತದೆ. ಪರಿಣಾಮವಾಗಿ ಇಂದು ಯಾರೂ ಹಳ್ಳಿಯಲ್ಲಿ ಉಳಿಯಲು ಒಪ್ಪ್ಪುವುದಿಲ್ಲ. ಪಟ್ಟಣದಲ್ಲಿ ಇರುವ ಸೊತ್ತು ಹಳ್ಳಿಯ ಹಣದ ಮೂಲವಾದರೂ ವೈಯುಕ್ತಿಕ ಎನಿಸುತ್ತದೆ. ಹಳ್ಳಿಯಲ್ಲಿ ಎಲ್ಲರಿಗೂ ಸಮಪಾಲು ಎನ್ನುವ ದ್ವಿಮುಖ ದೋರಣೆ ಆಚರಣೆ ಕಾಣುತ್ತೇವೆ. ಬಂದುಗಳು ಬಂದಣಿಕೆಗಳಾಗಿ ಮೂಲ ಮನೆಯೇ ನಾಶವಾಗುವುದು ನಮ್ಮೆದುದುರು ಕಾಣುವ ವಿಚಾರ. ಹಳ್ಳಿಯಲ್ಲಿ ನೊಗ ಹೊತ್ತವನ ನಡುಪ್ರಾಯದ ಸಮಸ್ಯೆಗಳು ಸೂಕ್ಶ್ಮವಾಗಿ ಅವಲೋಕಿಸುತ್ತಿರುವ ನಂತರದ ಜನಾಂಗದವರಲ್ಲಿ ಬವಿಷ್ಯದ ಬಗೆಗೆ ಗಲಿಬಿಲಿ ಉಂಟು ಮಾಡುತ್ತದೆ.

ಅಮೇರಿಕದಲ್ಲಿ ಪದವಿಪೂರ್ವ ಶಿಕ್ಷಣ ಪೊರೈಸುವ ಸನ್ನಿವೇಶದಲ್ಲಿ ಶಿಕ್ಷಕ ರಕ್ಷಕ ಹಿತಚಿಂತಕರ ಅನೌಪಚಾರಿಕ ಸಲಹಾತ್ಮಕ ರಕ್ಷಣಾ ಜಾಲ ನಿರ್ಮಿಸಲ್ಪಡುತ್ತದೆ. ಎಲ್ಲರೂ ಸೇರಿ ಚರ್ಚಿಸುತ್ತಾರೆ. ಅದೊಂದು ಆ ವ್ಯಕ್ತಿಯ ಶ್ರೇಯೋಭಿವೃದ್ದಿಗೆ ಪೂರಕವಾಗುವ ಅನುಕರಣೀಯ ವಿದಾನ. ಇಲ್ಲಿ ಅನಿವಾರ್ಯವಾಗಿ ಮನೆಯಲ್ಲೊಂದು ಜನ ನೆಲೆನಿಲ್ಲಬೇಕು ಎಂದು ತೀರ್ಮಾನ ಕೈಗೊಳ್ಳುವ ಸಂದರ್ಬದಲ್ಲಿ ಎಲ್ಲರೂ ಹಿತಚಿಂತಕರೆಂದು ತೋರ್ಪಡಿಸುತ್ತಾ ಈ ಪೆದ್ದನನ್ನು ಮರಹತ್ತಿಸುತ್ತಾರೆ.

ಶ್ರೀಪಾದ ಹೆಗಡೆಯವರು ಹೇಳುವಂತೆ ಮದುವೆ ಮಾಡುವಾಗಲೇ ಅವರ ಹಕ್ಕಿನ ಇತ್ಯರ್ಥಮಾಡಿ ಕಳುಹಿಸ ಬೇಕಾದೀತೇನೊ ಅನ್ನುವ ವಿಚಾರ ಪ್ರಆಯೋಗಿಕವಲ್ಲ. ಅಸಹಾಯಕ ಅನಾಥ ಬಾವನೆ ಮನೆಮಾಡಿರುವಂತಹ ಮದುಮಗಳಲ್ಲಿ ಅವಳ ಸಂಪೂರ್ಣ ಹಕ್ಕು ಬರೆದು ಕೊಡುವಂತೆ ಹೇಳಲು ಯಾರಿಗೂ ಮನಸು ಬಾರದು. ಸ್ವಂತ ಸಹೋದರಿಯಿಂದ ಸಮಸ್ಯೆ ಬರಬಹುದೆಂಬ ದೂರಾಲೋಚನೆ ಯಾರಿಗೂ ಇರುವುದಿಲ್ಲ. ಅದೊಂದು ಬೇಲಿ ಹಾಕದ ನಿರ್ಲಕ್ಷಿತ ಗಡಿ. ಸಮಸ್ಯೆ ಬಂದಾಗ ಪರಿತಪಿಸುವುದೊಂದೇ ದಾರಿ.

ಅವಿಭಕ್ತ ಕುಟುಂಬದಲ್ಲಿ ಮನೆಯ ಯಜಮಾನ ಸತ್ತಾಗ ಅರ್ಥಾತ್ ಮಹಾಭಾರತ ಜರಗುತ್ತದೆ. ಅಧಿಕಾರ ಬದಲಾವಣೆ ಎಂದೂ ಶಾಂತಿಯುತವಾಗಿ ಸೌಹಾರ್ದತೆಯಲ್ಲಿ ಜರಗುವುದಿಲ್ಲ. ಹಲವೆಡೆ ಕುಟುಂಬದ ಯಜಮಾನನ ಒತ್ತಡಕ್ಕೆ ತಲೆ ಬಾಗಿ ಹಳ್ಳಿಗೆ ವಾಪಾಸಾದವ ನಂತರ ಜೀವನವಿದೀ ತನ್ನನ್ನು ಶಪಿಸಿಕೊಳ್ಳುವ ಪರೀಸ್ಥಿ ಉಂಟಾಗುತ್ತದೆ. ಯಜಮಾನರ ಸಾವಿಗೆ ಕಾದ ಜನ ಸಮಾನಾಸಕ್ತರ ವೇದಿಕೆ ನಿರ್ಮಿಸಿಕೊಳ್ಳುತ್ತಾರೆ. ಎಲ್ಲಾರೂ ಹಕ್ಕು ಸ್ಥಾಪನೆಗೆ ಮುಸುಕುಕಿನೊಳಗೆ ಹೋರಾಡಿ ಹೊಸ ಸಮೀಕರಣ ಏರ್ಪಡಿಸಿಕೊಳ್ಳುತ್ತಾರೆ. ಹಲವು ಸ್ವಾರ್ಥಿಗಳು ಹಿತಚಿಂತಕರೆನ್ನುವ ನೆಲೆಯಲ್ಲಿ ಈ ಚರ್ಚೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ತನ್ನು ನಡು ಪ್ರಾಯದ ವರೆಗಿನ ಆಯುಸ್ಸು ಕುಟುಂಬಕ್ಕಾಗಿ ತೇಯ್ದ ವ್ಯಕ್ತಿಗೆ ಒಂದೇ ಮತವಾಗಿ ಅಲ್ಪಸಂಖ್ಯಾತನಾಗುತ್ತನೆ. ಅವನಿಗೆ ಇತರ ಜೀವನವಕಾಶಗಳು ಮುಚ್ಚಿಕೊಂಡು ಅಳಿವು ಉಳಿವಿನ ಅನ್ನದ ಪ್ರಶ್ನೆಯಾಗುತ್ತದೆ. ಪಾಲುದಾರರು ಎನ್ನುವವರಿಗೆ ಸಿಕ್ಕರೆ ಪಾಯಸ ಅಷ್ಟೇ.

ಮನೆಯಲ್ಲಿ ನಡೆದು ಬಂದ ದಾಖಲೆಗಳ ಬಗೆಗೆ ಸ್ಪಷ್ಟ ದಾಖಲೆಗಳಿದ್ದರೂ ಅವು ಹೆಚ್ಚಾಗಿ ಪಟ್ಟಣದಲ್ಲಿರುವ ಬಹುಮತಕ್ಕೆ ಅನುಕೂಲವಲ್ಲದ ರೀತಿಯಲ್ಲಿರುವ ಕಾರಣ ಅವುಗಳು ಉಪಯೋಗಕ್ಕೆ ಬರುವುದಿಲ್ಲ. ಮೀಟರ್ ಲೆಕ್ಕ ದನಿಗೆ (ನಾವು ಹಣ ಕೊಡುವಾಗ ಮಾತ್ರ ) ಎಂದು ರಿಕ್ಷವಾಲರು ಹೇಳುವಂತಾಗುತ್ತದೆ.

ಮೊದಲೇ ಕಾನೂನು ರೀತ್ಯಾ ಒಪ್ಪಂದ ಮಾಡಿಕೊಳ್ಳೋಣ ಎಂದರೆ ಹಲವು ವ್ಯವಹಾರಿಕ ಹಾಗೂ ಕಾನೂನು ರೀತ್ಯಾ ತೊಡಕುಗಳು. ಕೃಷಿಕನಲ್ಲದ ವ್ಯಕ್ತಿ ದೇಶದ ಹಲವು ಬಾಗದಲ್ಲಿ ಕೃಷಿ ಬೂಮಿ ಖರೀದಿ ಮಾಡುವಂತಿಲ್ಲ. ಹಲವರಿಗೆ ತೇರಿಗೆ ಇತ್ಯಾದಿ ಪರೋಕ್ಷ ಅನುಕೂಲಕ್ಕೆ ಕೃಷಿ ಭೂಮಿ ಮೇಲೆ ಕಣ್ಣಿರುತ್ತದೆ. ಹಾಗಾಗಿ ಕೃಷಿಕ ಹಣೆಪಟ್ಟಿ ಕಳದುಕೊಳ್ಳಲು ಹಲವರು ತಯಾರು ಇರುವುದಿಲ್ಲ. ಪರಿಮಿತಿ ಕಾನೂನು ಹಲವು ಕಡೆ ಸಮಸ್ಯೆ ತಂದೊಡ್ಡುತ್ತದೆ.

ಅಳಿಯಕಟ್ಟು ಸಮಾಜದಲ್ಲಿ ಹುಡುಗರು ಹಳ್ಳಿಯಲ್ಲಿ ಉಳಿದರೂ ತಾನು ಇಲ್ಲಿಂದ ಬಿಟ್ಟು ಹೆಂಡತಿ ಮನೆಗೆ ಹೋಗುವವನೆಂಬ ಬಾವನೆಯಲ್ಲಿ ಕೃಷಿ ಅಭಿವೃದ್ದಿಯಲ್ಲಿ ಹೆಚ್ಚಿನ ಆಸಕ್ತಿ ತೋರದಿರುವುದುಂಟು. ಅದುದರಿಂದ ಎಲ್ಲರಿಗೂ ಸಮಪಾಲು ಶೇಷ ಮಾತ್ರ ತನಗುಳಿಯುವುದು ಎನ್ನುವ ಚಿಂತೆನೆ ಕೃಷಿ ಕುಟುಂಬದ ಹುಡುಗರನ್ನು ನಿರುತ್ಸಾಹಗೊಳಿಸಿದರೆ ಕನ್ಯಾಪಿತೃಗಳನ್ನು ಬೆದರಿಸುತ್ತದೆ. ಇಲ್ಲಿ ಸಮಾಜವನ್ನು ಸರಿದಾರಿಗೆ ತಂದರೆ ಮಾತ್ರ ಸಂಸ್ಕೃತಿ ಪರಂಪರೆಗಳು ಉಳಿದಾವು.

ಇವರಲ್ಲೂಟ ಅವರ ಪರ ಆಟ ಮಾಡುವ ಬಹಳ ಜನ ತಂದೆ ತಾಯಂದಿರು ನಮ್ಮಲ್ಲಿದ್ದಾರೆ. ಮೊನ್ನೆ ಅವನು ಪೇಟೆಯಿಂದ ಬರುವಾಗ ನಶ್ಯ ತರಲಿಲ್ಲ ಎನ್ನುವುದೇ ಮನೆಯಲ್ಲೊಂದು ಸಮಸ್ಯೆ ಹುಟ್ಟಿಸಲು ಸಾಕು. ಈ ರೀತಿ ಮನೆ ಒಡೆಯಲು ಸಂಪರ್ಕ ಕ್ರಾಂತಿ ಉಂಟು ಮಾಡಿದ ದೂರವಾಣಿ ತನ್ನದೇ ಕೊಡುಗೆ ಸಮರ್ಪಿಸುತ್ತದೆ. ಕಣ್ಣು ತಪ್ಪಿಸಿ ಮಾಡುವ ಈ ಕರೆಗಳಿಂದ ಕಾಡುವ ಅಪರಾದಿ ಪ್ರಜ್ನೆ ತಂದೆ ತಾಯಿಗೆ ಮನೆಯಲ್ಲಿರುವವನ ಮೇಲೆ ಅವನಿಗೆ ಅರಿವೇ ಇಲ್ಲದೆ ಸಿಟ್ಟು ಅಸಹನೆಗೆ ದಾರಿ ಮಾಡಿಕೊಡುತ್ತದೆ. ಪಟ್ಟಣದಲ್ಲಿರುವ ಮಕ್ಕಳ (ಅ) ನೈತಿಕ ಬಾಯಿ ಮಾತಿಗೆ ಸಿಮಿತವಾಗುವ ಬೆಂಬಲ ಸೌಹಾರ್ದತೆ ಕದಡಿ ವಾಪಾಸು ಬಾರದ ಸ್ಥಿತಿ ತಲಪಿಸುತ್ತದೆ. ಈ ಸಂಪರ್ಕದಿಂದ ಪ್ರಪಂಚದ ಯಾವುದೇ ಮೂಲೆಯಿಂದ ಕಿಡಿ ಹಚ್ಚಲು ಮತ್ತು ಉರಿಯುತ್ತಿರುವ ಬೆಂಕಿಗೆ ನಿರಂತರ ಇಂದನ ಪೊರೈಸಲು ಸಾದ್ಯವಾಗುತ್ತದೆ.

ಮಗ ಸೊಸೆ ಯಾ ಮಗಳು ಅಳಿಯನ ಜತೆ ಇರಬಹುದು. ಹಿರಿಯ ನಾಗರೀಕರಲ್ಲಿ ದೂರುಗಳು ಇದ್ದೇ ಇರುತ್ತವೆ. ಇವರ ತಕರಾರಿಗೆ ಕಿವಿಕೊಡಲು ಸಮಯಸಾದಕರು ಸುತ್ತುಮುತ್ತಲೂ ಇದ್ದು ತೆರೆಮರೆಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ದೂರದಲ್ಲಿರುವ ಮಕ್ಕಳು ತಪ್ಪು ಮಾಡುವುದಿಲ್ಲ ಎನಿಸುವ ಹಿರಿಯರಿಗೆ ಅವರ ಕೊಡುಗೆಯೂ ಶೂನ್ಯ ಎನ್ನುವುದು ಗೋಚರಿಸುವುದಿಲ್ಲ. ದೂರದಲ್ಲಿರುವವ ಸಂಶಯಾತೀತ ಎನಿಸಿಕೊಂಡರೆ ಸಮಸ್ಯೆಗೆ ಅಡಿಗಲ್ಲು ಹಾಕಿದಂತೆ.

ಮನೆಯಲ್ಲಿ ಉಳಿಯುವವನ ಬವಣೆ ತಪ್ಪಿಸಲು ಕಷ್ಟಸಾದ್ಯ. ಗ್ರಾಮೀಣ ಜನರ ನೋವುಗಳಿಗೆ ಪಟ್ಟಣಕೇಂದ್ರಿತ ಮಾದ್ಯಮದ ಹಾಗೂ ಸಮಾಜದ ಸ್ಪಂದನ ಬಹಳ ಕಡಿಮೆ. ಹಳ್ಳಿಮನೆ ವಿಚಾರಕ್ಕೆ ತಲೆಹಾಕುವ ಪ್ರತಿಯೊಬ್ಬನೂ ತನ್ನ ಕೊಡುಗೆಯೇನು ಎನ್ನುವುದರ ಬಗೆಗೆ ಆತ್ಮಶೋಧನೆ ಮಾಡಿಕೊಳ್ಳಬೇಕು. ಇತಿಹಾಸ ಅವಲೋಕಿಸಿದರೆ ಮುಂದುವರಿದ ದೇಶಗಳು ಈ ಹಂತ ದಾಟಿ ಬಂದಂತಿದೆ.
ಜಾರುದಾರಿಯಲ್ಲಿರುವ ಕೃಷಿಕ ಸಮಾಜ ಇನ್ನೂ ನಿರ್ಣಾಯಕ ಹಂತ ದಾಟಿಲ್ಲ. ಒಗ್ಗಟ್ಟಿನಲ್ಲಿ ಪ್ರಯತ್ನಿಸಿದರೆ ಪುನಶ್ಚೇತನ ಸಾದ್ಯವೆಂದು ಅನಿಸುತ್ತದೆ. ಎತ್ತು ಪ್ರಯತ್ನಿಸಿದರೆ ಸಾಲದು, ಹಸುವೂ ಸಹಕರಿಸಬೇಕು ಎನ್ನುವ ಆಂಗ್ಲ ಬಾಷೆಯಲ್ಲೊಂದು ಮಾತಿದೆ. ಬೂಮಿಯ ಫಲವತ್ತತೆ ಬಗೆಗೆ ಹೆಚ್ಚು ಪ್ರಾಮುಖ್ಯತೆ ಕೊಡುವ ಸಾವಯುವ ಕೃಷಿ ಪುಸ್ತಕಗಳಲ್ಲಿ ಈ ಮಾತು ಕಂಡುಬರುತ್ತದೆ.

ಹಳ್ಳಿಯ ಬದುಕು ಸಹನೀಯ ಆದಷ್ಟು ಮದುವೆ ಮಾರುಕಟ್ಟೆಯಲ್ಲಿ ಕೃಷಿಕನ ಮೌಲ್ಯ ಏರುತ್ತದೆ ಮತ್ತು ಪರಂಪರೆ ಉಳಿಯುವ ಸಾದ್ಯತೆ ಹೆಚ್ಚಾಗುತ್ತದೆ. ಅದಕ್ಕೆ ಸಮಾಜ ಬಾಂದವರಿಂದ ಸಹಾಯ ಬಾಯುಪಚಾರಕ್ಕೆ ಸಿಮಿತಗೊಳ್ಳದೆ ಪ್ರವಾಹದ ವಿರುದ್ದ ಈಜಲು ಪ್ರಶ್ನಾತೀತ ನೈತಿಕ ಬೆಂಬಲವಾಗಬೇಕು.

ಸಮಸ್ಯೆ ಪರಿಹಾರಕ್ಕೆ ಲಕ್ಷಣ ನೋಡಿ ಮದ್ದು ಅರೆದರೆ ಯಾವ ಪ್ರಯೋಜನವೂ ಇಲ್ಲ. ಮೂಲ ಕಾರಣ ಹುಡುಕಿ ಪರಿಹಾರೋಪಾಯ ಕೈಗೊಳ್ಳಬೇಕು. ಎಲ್ಲರೂ ನೀರೆರೆದರೆ ಗಡಿಗೆಯಲ್ಲಿ ಹಾಲು ತುಂಬುವುದು ಅಸಾದ್ಯ.

Wednesday, May 21, 2008

ನಾನೂ ಮತ ಹಾಕಿದೆ

ನಮ್ಮದು ಹೇಳಿ   ಕೇಳಿ  ಪ್ರಪಂಚದ  ಅತಿ  ದೊಡ್ಡ   ಪ್ರಜಾಪ್ರಬುತ್ವ.   
ಆದರೆ   ಈ  ವ್ಯವಸ್ಥೆಯನ್ನು    ನಿಜಕ್ಕೂ ಅರ್ಥಹೀನವಾಗುವ ರೀತಿ   
ನಮ್ಮನ್ನೊ  ಆಳುತ್ತಿರುವ      ಈ ರಾಜಕಾರಣಿಗಳು ಮಾಡಿ    ಬಿಟ್ಟಿದ್ದಾರೆ.   
ಈ ಸಲದ ಮತದಾನಕ್ಕೆ  ಸ್ವಲ್ಪ  ಮೊದಲು       ಯಾರೋ   ಒಬ್ಬರು  
ಅನಾಮಿಕ ಕಾನೂನು  ತಜ್ನರು       ಕ್ರಮ ಸಂಖ್ಯೆ ೪೯ ಓ ಎಂಬ
೧೯೬೧ ಚುನಾವಣಾ ಕಾನೂನಿನ ಅಂಶವನ್ನು   ಕಡತಗಳ  ಮದ್ಯೆಯಿಂದ  
ಅಗೆದು  ಹೊರ ತೆಗೆದರು.   ಇದರ ಪ್ರಕಾರ ನಮಗೆ  ಚುನಾವಣೆಗೆ  ನಿಂತಿರುವ    
ಎಲ್ಲ     ಅಬ್ಯರ್ಥಿಗಳ   
ತಿರಸ್ಕರಿಸುವ    ಹಕ್ಕು
  ಇರುತ್ತದೆ.   
ಹಿಂದೆ  ಯಾವ  ಚಿಹ್ನೆಗೂ ಮತ ಒತ್ತದಿದ್ದರೆ ಅದು  ಕುಲಗೆಟ್ಟ ಮತವೆಂದು
ಪರಿಗಣಿಸಲ್ಪಡುತಿತ್ತು.    ಈ  ವಿಚಾರ  ಜನಸಾಮಾನ್ಯರಿಗೆ  
ತಲಪಲು  ನಲುವತ್ತೈದು  ವರುಷ ಬೇಕಾದವು.    ಆಗ  ಮತದಾರನನ್ನು  
ಚುನಾವಣೆ  ಸಮಯ  ಹೊರತು  ಪಡಿಸಿ    ತೀರಾ  ಸಲೀಸಾಗಿ  ಕಾಣುವ  ನಮ್ಮ    
ರಾಜಕಾರಣಿಗಳಿಗೆ  ಬಿಸಿ  ಮುಟ್ಟಿಸುವ  ಅವಕಾಶ  ದೊರಕುತ್ತದೆ.   ಹೀಗೆ  ನಾನು  
ಈ   ಪ್ರಕಾರ  ಮತದಾನ ಮಾಡದೆಯೇ  ಮತದಾನ  ಮಾಡಿದೆ.  

ಮತದಾರನನ್ನು  ಸಂಪೂರ್ಣ    ಮರೆತು  ಈ  ಜನನಾಯಕರು  ಯಾ  
ಜನಸೇವಕರು    ತಮ್ಮ   ಸ್ವಾರ್ಥ   ಸಾದನೆಯಲ್ಲೇ   ತೊಡಗಿಕೊಂದಿರುತ್ತಾರೆ.  ಗಣಿ ದನಿಗಳಲಾರಿಗಳು  ರಾಜ್ಯದ  ಹೆದ್ದಾರಿಗಳ  ನಾಶಮಾಡುವಾಗಲಿ  ಕುಮಾರಸ್ವಾಮಿ  
ತನ್ನ  ಕ್ಷೇತ್ರಕ್ಕೆ  ಸಾವಿರ  ಕೋಟಿ  ಖರ್ಚು  ಮಾಡುವಾಗಲಿ  ಚಕಾರ  ಎತ್ತದ  
ಈ  ನಮ್ಮ  ಪ್ರತಿನಿಧಿಗಳು  ತಮ್ಮ  ಸಂಬಳಬತ್ತೆ  ಏರಿಸುವಾಗ   
ಕೈ ಎತ್ತುವ   ಸೇವೆ  ಸಲ್ಲಿಸುತ್ತಾರೆ.

 ನನಗೆ  ಮತವಿರುವುದು    ಸಾವಿರದ ಮುನ್ನೂರು  ಚಿಲ್ಲರೆ  ಮತವಿರುವ  ಹಾಗೂ  
ನಮ್ಮ  ಮನೆಯಿಂದ  ಆರು  ಕಿಲೋಮೀಟರ್  ದೂರವಿರುವ    ಒಕ್ಕೆತ್ತೂರು  ಶಾಲೆ  
ಮತದಾನಕೇಂದ್ರದಲ್ಲಿ.     
  ಸಂಜೆ  ನಾಲ್ಕಕ್ಕೆ  ಹೋದರೆ  ಸುಮಾರು  ೪೫ ನಿಮಿಷ  
ಕಾಯಬೇಕಾಯಿತು.  
  ನಾನೊಬ್ಬ  ಮತದಾನ  ಮಾಡಿದರೂ  ಯಂತ್ರದ  ಗುಂಡಿ  ಒತ್ತದೆ  
ಅವರ  ಖಡತದಲ್ಲಿ  ಒಂದರ  ಬದಲು  ಎರಡು  ರುಜು  ಹಾಕಿ  ಬಂದವನು.  ಅಲ್ಲಿದ್ದ     ಮತಕಟ್ಟೆ  ಅದಿಕಾರಿಗಳಿಗೆ  ನನ್ನಂತಹವರು   ಹೊಸತು.    ಅವರಿಗೆ  
ನನ್ನ  ಮಾತಿಗೆ  ಗಲಿಬಿಲಿ  ಉಂಟಾಗಿ  ಬೆರಳಿಗೆ ಗುರುತಿನ  ಶಾಯಿ  
ಲೇಪಿಸಲೇ  ಮರೆತು  ಹೋಯಿತು.

ಪುತ್ತೂರು  ವಿದಾನಸಭಾ  ಕ್ಷೇತ್ರದಲ್ಲಿ  ಒಕ್ಕೆತ್ತೂರು  ಕೇಂದ್ರ  ಕ್ರಮಾಂಕ  ಒಂದು.  
ಈ  ಕಡತದಲ್ಲಿ  ದಾಖಲಾಗಿರುವ  ಮತವನ್ನು  ಮೊತ್ತ  ಮೊದಲು  ಲೆಕ್ಕಕ್ಕೆ  
ತೆಗೆದುಕೊಳ್ಳುವ  ಕಾರಣ  ಪ್ರಾಯುಷ:   ಎಲ್ಲ  ಅಬ್ಯರ್ಥಿಗಳಿಗೆ  ವಿರೋದವಾಗುವ  
ನನ್ನ  ಮತ  ಮೊದಲು  ದಾಖಲಾಗುತ್ತದೆ.  ಎಣಿಕೆ  ಕೇಂದ್ರದಲ್ಲಿ  ಕುಳಿತ     ಎಲ್ಲರೂ  
ಈ  ವ್ಯಕ್ತಿಯನ್ನು     ಅವಲಕ್ಷಣ  ಎಂದು  ಉಗಿಯಲೂ  ಬಹುದು.  

ಈ  ಮತಗಳನ್ನು  ಹೇಗೆ  ಲೆಕ್ಕಕ್ಕೆ  ತೆಗೆದುಕೊಳ್ಳುತ್ತಾರೆ  ಎನ್ನುವುದು  
ಇನ್ನೂ  ಅಸ್ಪಷ್ಟ.  ಶೇಕಡಾ  ೫೦ ಕ್ಕಿಂತ  ಹೆಚ್ಚು  ಬಂದರೆ  ಮರು ಚುನಾವಣೆ  ಅಥವಾ    
ಗೆದ್ದ  ಹಾಗೂ  ಸೋತ  ಅಬ್ಯರ್ಥಿಗಳ  ನಡುವಿನ  ವ್ಯತ್ಯಾಸಕ್ಕಿಂತ  ಹೆಚ್ಚು  
ಬಂದರೆ   ಮರುಚುನಾವಣೆ  ಎನ್ನುವ  ವಿಚಾರ  ಮುಂದೆ     ನ್ಯಾಯಾಲಯದ  
ಕಟ್ಟೆಯಲ್ಲಿ  ತೀರ್ಮಾನ  ಆಗಬೇಕಾಗಬಹುದು.  ಅಂತೂ  ಗೊಂದಲಕ್ಕೆ  ಖಂಡಿತಾ  ಅವಕಾಶ.  

ಈ  ರೀತಿ  ಮತದಾನ  ಮಾಡಿದರೆ    ನಮ್ಮ    ಮತ  ಗುಟ್ಟಾಗಿ  ಉಳಿಯದೆ   
ಸಾರ್ವಜನಿಕ  ತಿಳುವಳಿಕೆಗೆ  ಒಳಪಟ್ಟಿರುವುದು  ಒಂದು  ಋಣಾತ್ಮಕ  ವಿಚಾರ.  
ಇದನ್ನು  ಮತದಾನ  ಯಂತ್ರದಲ್ಲಿ  ಅಳವಡಿಸಬೇಕೆಂಬ  ಕೂಗು  ಸರಕಾರ  ಹಾಗೂ  
ಉನ್ನತ  ಕೋರ್ಟಿಗೆ  ಇನ್ನೂ  ತಲಪಿಲ್ಲ.   ಮುಂದಿನ  ಮತದಾನಕ್ಕೆ  ಅಳವಡಿಸಬಹುದೇನೊ ?