Sunday, July 13, 2008

ತಿರುಳು ಬಿಸಾಕಿ ಸಿಪ್ಪೆ ತಿನ್ನಿಸಿದರು

ಹವ್ಯಕ ಪತ್ರಿಕೆಯ 2008 ಫೆಬ್ರವರಿ ತಿಂಗಳಲ್ಲಿ   ಪ್ರಕಟವಾದ ಈ ಶತಮಾನದ ಕೊನೆಯಲ್ಲಿ ಹಳ್ಳಿಯಲ್ಲಿ ಹವ್ಯಕರು ಇಲ್ಲವಾದರೆ ? ಎನ್ನುವ ಲೇಖನಕ್ಕೆ ಪ್ರತಿಕ್ರಿಯೆ ಬರಹವನ್ನು ಬರೆದು ಸದ್ರಿ ಪತ್ರಿಕೆಗೆ ಕಳುಹಿಸಿದ್ದೆ.   ಉಳಿದರೆ  ಹಳ್ಳಿಯಲ್ಲಿ  ಮಾತ್ರ  ಎಂಬ  ಅರ್ಥದಲ್ಲಿ     ನಾನು ಪ್ರತಿಕ್ರಿಯೆ ಬರಹ ಬರೆದು ರವಾನಿಸಿ ಹದಿನೈದು ದಿನಗಳಾದರೂ ಯಾವ ಪ್ರತಿಕ್ರಿಯೆಯೂ ಇಲ್ಲದಿದಿರುವುದು ನೋಡಿ ಅವರಿಗೊಂದು ಒಂದು ನೆನಪೋಲೆ ಕಳುಹಿಸಿದೆ. ಅದರಲ್ಲೊಂದಷ್ಟು ಪೂರಕ ಮಾಹಿತಿ ಬರೆದಿದ್ದೆ. ನಂತರವೂ ಈ ಬಗ್ಗೆ ಅವರಿಂದ ಯಾವ ಉತ್ತರವೂ ಇಲ್ಲದ ಕಾರಣ ನನ್ನ ಬರಹ ಅವರ ಪ್ರಕಟಣಾ ಮಾನದಂಡಗಳಿಗೆ ಅನುಗುಣವಾಗಿಲ್ಲವೆಂದು ತಿಳಿದು ಇಡೀ ವಿಚಾರವನ್ನು ಮರೆತು ಬಿಟ್ಟಿದ್ದೆ.

ನಾಲ್ಕು ತಿಂಗಳು ಕಳೆದು ಅದು (?) ಹವ್ಯಕ ಪತ್ರಿಕೆಯ ಜುಲಾಯಿ ತಿಂಗಳ ಸಂಚಿಕೆಯಲ್ಲಿ ಪ್ರಕಟವಾದಾಗ ನಾನು ನಿಜಕ್ಕೂ ಮೈ ಪರಚಿಕೊಳ್ಳುವಂತಾಗಿದೆ. ಅದು ಪ್ರಕಟವಾದ ಲೇಖನಕ್ಕೆ ನನ್ನ ಪ್ರತಿಕ್ರಿಯೆ ಅನ್ನುವುದೇ ಉಲ್ಲೇಖವಿಲ್ಲ. ಪ್ರತಿಕ್ರಿಯೆ ಬರಹವು ಚರ್ಚಿತ ವಿಚಾರವನ್ನು ಮುಂದುವರಿಸಿಕೊಂಡು ಹೋಗುವ ಕಾರಣ ಇದರಲ್ಲಿ ಹಿನ್ನೆಲೆಗೆ ಹೆಚ್ಚು ಗಮನಕೊಡುವುದಿಲ್ಲ. ತಲೆಬರಹ ಹಾಗೂ ತಿರುಳು ಎರಡಕ್ಕೂ ಕತ್ತರಿಪ್ರಯೋಗವಾಗಿ ಸಂಪೂರ್ಣ ಬಿನ್ನ ರೂಪ ಪಡೆದು ಕೊನೆಗೆ ಉಳಿದದ್ದು ನನ್ನ ಕೆಲವು ಟಿಪ್ಪಣಿಗಳ ಪೋಣಿಸಿದ ಒಂದು ಸರಮಾಲೆಯಷ್ಟೇ. ವೈಯುಕ್ತಿಕವಾಗಿ ನನ್ನ ಪರಿಚಯವಿಲ್ಲದ ಕಾರಣ ಸಂಪಾದಕರಿಗೆ ಹದಿನೈದು ದಿನ ಅನಂತರ ಬರೆದ ನೆನಪೋಲೆಯ ಬಾಗವಾಗಿ ನನ್ನ ಹಿನ್ನೆಲೆ, ಪೂರಕ ಮಾಹಿತಿ ಹಾಗೂ ನಂತರ ಅಳಿಸಬೇಕಾದ ಕೊಂಡಿಗಳು ಪ್ರಕಟವಾಗಿ ಮುಖ್ಯ ವಿಚಾರವೇ ಮರೆಯಾಗಿದೆ. ಇದು ಹಣ್ಣಿನ ತಿರುಳನ್ನು ಬಿಸಾಡಿ ಬಿಟ್ಟು ಸಿಪ್ಪೆಯನ್ನು ಬಡಿಸಿದಂತಾಗಿದೆ.

ಈ ಸ್ವರೂಪದಲ್ಲಿ ಬರಹವೂ ಪ್ರಕಟನಾರ್ಹವೋ ? ಖಂಡಿತ ಅಲ್ಲ. ಕೊನೆಯ ವಾಕ್ಯಗಳಲ್ಲಂತೂ ಇರಬೇಕಾಗಿದ್ದ ಇಡೀ ಬರಹದ ಸಾರಾಂಶ ಕಾಣಲೇ ಇಲ್ಲ. ಬದಲಾಗಿ ವಿಚಾರ ವಿವರವಾಗಿ ಪ್ರಕಟಿಸಿದೆ ಹೋದರೆ ನಾನು ವಿವಾದಾಸ್ಪದ ಸ್ತ್ರೀ ಸ್ವಾತಂತ್ರ ವಿರೋದಿ ಎನ್ನುವ ಸಾದ್ಯತೆಗಳಿರುವ ಕಾರಣ ಬರೆಯದೆ ಬಿಟ್ಟಿದ್ದೇನೆ ಎನ್ನುವುದನ್ನು ಹಾಗೆಯೇ ಪ್ರಕಟಿಸಿದರು. ಇದೊಂದು ಬಹಳ ಬೇಜವಾಬ್ದಾರಿಯ ಲಕ್ಷಣ ಎನ್ನದೆ ವಿಧಿಯಿಲ್ಲ. ಪಕ್ಕದಲ್ಲಿರುವುದು ಪ್ರಕಟಿತ ಬರಹ ಮತ್ತು ನನ್ನ ಮೂಲ ಬರಹ ನಿಮ್ಮ ಮಗಳನ್ನು ಪದವೀದರ ಕೃಷಿಕನಿಗೆ ಕೊಡುವಿರಾ ? ವನ್ನು ಕೆಳಗಡೆ ಓದಬಹುದು.

ಒಂದು ಕಾಲದಲ್ಲಿ ಮಾದ್ಯಮಗಳಲ್ಲಿ ಬರುವ ವಿಚಾರಗಳು ನಂಬಲರ್ಹವಾಗಿತ್ತು.     ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳು ಹಾಗೂ ಟಿವಿ ಮಾದ್ಯಮಗಳು, ಮಾಲಿಕರಿಗೆ ಬೇಕಾದವರಿಗೆ ಹೆಚ್ಚು ಪ್ರಚಾರ, ಮಾಲಿಕರ ಸಹ ಒಡೆತನದಲ್ಲಿರುವ ಇತರೆ ಕಂಪೆನಿಗಳ ತಯಾರಿಕೆಗಳಿಗೆ ಒತ್ತು ನೀಡುವುದು, ಸಂಪಾದಕರಿಗೆ ಇಷ್ಟವಾದವರಿಗೆ ಅಥವಾ ಅವರ ಸಾಧನೆಗಳಿಗೆ ಹೆಚ್ಚು ಒತ್ತು ನೀಡುವುದು - ಹೀಗೆಲ್ಲ ಕಸರತ್ತು ಮಾಡಿ ಓದುಗ ದೊರೆಗೆ ಉಣಬಯಸುವುದು ತಂಗಳನ್ನ ಮಾತ್ರ. ಅಧ್ಯಯನಾ ಪ್ರವೃತ್ತಿಯ ಕೊರತೆಯೂ ಇಂದಿನ ಪತ್ರಿಕೋದ್ಯೋಗಿಗಳಲ್ಲಿ ಹೆಚ್ಚುತ್ತಿದ್ದು ಅವರ ಜ್ಞಾನದ ಮಟ್ಟ ಕುಸಿಯುತ್ತಿದೆ. ಅಸಂಬದ್ದ ಸುದ್ದಿಗಳು ನುಸುಳುವುದುಂಟು. ಹೀಗಾಗಿ ಪರ್ಯಾಯ ಪತ್ರಿಕೋದ್ಯಮ ಎನಿಸಿಕೊಳ್ಳುವ ಬ್ಲೊಗ್ ಪ್ರಪಂಚ ಪ್ರಸ್ತುತವಾಗುತ್ತದೆ.

 ಇತ್ತೀಚೆಗೆ   ಬಾರತದ ಎಲ್ಲ ಪತ್ರಿಕೆಗಳು ಕುತೂಹಲ ಕೆರಳಿಸಿರುವ ಬಾಚ್ ಬಂದನದಲ್ಲಿ ಬೆಸ್ತು ಬಿದ್ದಿರುವುದು ಪತ್ರಕರ್ತರ ಗುಣಮಟ್ಟದ ಕೊರತೆಗೆ ಕನ್ನಡಿ ಹಿಡಿದಂತೆ. ಒಮ್ಮೆ ಗೂಗ್ಲಿಂಗ್ ಮಾಡಿದರೆ ಸಾಕಿತ್ತು, ಇದರ ಒಳಗುಟ್ಟು ತಿಳಿಯುತಿತ್ತು. ಆದೊಂದು ಮಾಡುವುದನ್ನು ಬಿಟ್ಟು ಈ ವಿಚಾರವನ್ನು ಎಲ್ಲ ಪತ್ರಿಕೆಗಳೂ ತಮ್ಮದೇ ಆದ ಬದಲಾವಣೆ ಮಾಡಿ ಒಗ್ಗರಣೆ ಹಾಕಿ ಪ್ರಕಟಿಸಿದವು. ಅವೆಲ್ಲ ಸತ್ಯ ಸುದ್ದಿ, ಭಲೇ ಎನ್ನುವಂತಿತ್ತು.   ಪಕ್ಕದಲ್ಲಿರುವುದು  ಜೂನ್ 30ರ ವಿಜಯ ಕರ್ನಾಟಕದ ಛಾಯಾಪ್ರತಿ.   ಈ ಕಿತಾಪತಿಗೆ ಹಿಂದಿದ್ದ ಗೋವಾದ ಅಸಾಮಿಗಳಿಗೆ ಪತ್ರಿಕೆಗಳು ಇಷ್ಟಾನುಸಾರ ಸುದ್ದಿ ತಿರುಚುವ ವಿಚಾರಕ್ಕೆ ಗಮನ ಸೆಳೆಯುವುದೂ ಒಂದು ಉದ್ದೇಶವಾಗಿತ್ತು. ಕೊನೆಗವರು ಪ್ರಮುಖ ಆಂಗ್ಲ ಪತ್ರಿಕೆಗಳ ಮೂರ್ಖತನ ಸೂಚ್ಯಾಂಕವನ್ನೂ ಪ್ರಕಟಿಸಿದ್ದಾರೆ. ನಿಮ್ಮ ಅನುಕೂಲಕ್ಕೆ ಕೆಳಗಡೆ ಸಂಪರ್ಕ ಕೊಂಡಿ ಬರೆದಿದ್ದೇನೆ.



ಸುನಾಮಿ ಸಂಭವಿಸಿ ಒಂದೆರಡು ವಾರಗಳಲ್ಲಿ ಯಾರೊ ಒಬ್ಬ ಕಿಡಿಗೇಡಿ ಒಂದು ಕುಚೋದ್ಯ ನಡೆಸಿದ. ಅಮೇರಿಕಾದ ನಾಸಾ ಸಂಸ್ಥೆಯ ಜಾಲತಾಣದಿಂದ ಒಂದು ಚಂಡಮಾರುತದ ಉಪಗ್ರಹಚಿತ್ರವನ್ನು ಡೌನಲೋಡ್ ಮಾಡಿ ಅದನ್ನೇ ಸುನಾಮಿಯ ಉಪಗ್ರಹಚಿತ್ರ ಎಂದು ಕೆಲವರಿಗೆ ಇಮೈಲ್ ಮೂಲಕ ಕಳುಹಿಸಿದ. ಇದು ಇಮೈಲ್ ಮೂಲಕ ಜನರಿಂದ ಜನರಿಗೆ ದಾಟಿ ಕೊನೆಗೆ ಕೆಲವು ಪತ್ರಿಕೆಗಳ ಸಂಪಾದಕರುಗಳಿಗೂ ತಲುಪಿತು. ನಮ್ಮ ಪ್ರಮುಖ ಪತ್ರಿಕೆಗಳು ಇದು ಪೋಕರಿಗಳ ಕೆಲಸವೆಂದು ಅರ್ಥವಾಗದೆ ಅದನ್ನು ತನ್ನ ಮುಖಪುಟದಲ್ಲೇ ಪ್ರಕಟಿಸಿ ತಮ್ಮ ಅಜ್ನಾನವನ್ನು ಮೆರೆದವು. ಇಂತಹ ಅಭಾಸಗಳು ಹೆಚ್ಚು ಕಮ್ಮಿ ನಡೆಯುತ್ತಲೇ ಇರುತ್ತದೆ. ಸ್ವಾಮಿ ನೀವು ತಪ್ಪಿ ಬಿದ್ದಿದ್ದೀರಿ ಎಂದು ಪತ್ರಿಕೆಗಳಿಗೆ ಬರೆದರೆ ಸಂಪಾದಕರು ಅದನ್ನು ಪ್ರಕಟಿಸುವುದೇ ಇಲ್ಲ!

ನಮಗೇಕೆ ಈ ಬ್ಲೋಗ್ ಪ್ರಪಂಚ ಪ್ರಸ್ತುತ ಎನ್ನುವ ವಿಚಾರ ಮೊನ್ನೆಯಷ್ಟೆ ಒಬ್ಬರಿಗೆ ಬರೆದಿದ್ದೆ. ಸ್ವಾರ್ಥ ಹಿತಾಸಕ್ತಿಗೆ ತಮ್ಮನ್ನು ಮಾರಿಕೊಡ ಮುಖ್ಯ ಸುದ್ದಿ ವಾಹಿನಿಗೆ ಪರ್ಯಾಯವಾದ ಜನರ ಮದ್ಯೆ ಸಂಪರ್ಕಕ್ಕೆ ಮಾದ್ಯಮವೂ ಹೌದು. ಬ್ಲೋಗಿನಲ್ಲಾದರೆ ಹಂಚಲು ಅರ್ಹವಾದ ನಮ್ಮ ಅನಿಸಿಕೆಗಳು ವಿಷಯದ ಬಗ್ಗೆ ಏನನ್ನೂ ಅರಿಯದ ಉಪಸಂಪಾದಕನಿಂದ ಕಸದ ಬುಟ್ಟಿ ಸೇರುವ ಸಾದ್ಯತೆ ಇರುವುದಿಲ್ಲ. ಪತ್ರಿಕೆಗಳಂತೆ ಇಲ್ಲಿ ಜಾಗದ ಕೊರತೆ ಇಲ್ಲ. ಸಂಪಾದಕರ ಅಂಕುಶ ಕತ್ತರಿಗಳಿಲ್ಲ. ಬರೆಯಬೇಕೆನಿಸಿದ್ದನ್ನು ನೇರವಾಗಿ ಜಾಲತಾಣದಲ್ಲೇ ದಾಖಲಿಸುವುದರಿಂದ ಬರೆದು ಅದು ಪ್ರಕಟವಾಗುವ ಮಧ್ಯದ ಸಮಯ ಉಳಿತಾಯವಾಗುತ್ತದೆ. ತಿಂಗಳುಗಳು ಕಳೆದು ಅಂಗಛೇದನವಾದ ಲೇಖನ ಪ್ರಕಟವಾಗುವುದಲ್ಲ. ಬರಹಕ್ಕೆ ಸಂಬಂಧಿಸಿದಂತೆ ಛಾಯಾಚಿತ್ರಗಳಿದ್ದರೆ ಅವುಗಳನ್ನೂ ಜಾಲತಾಣಕ್ಕೆ ಸೇರಿಸಬಹುದು. ಈ ಮಾದ್ಯಮದಲ್ಲಿ ಮಾಹಿತಿನಿಯಂತ್ರಣ ಜನರ ಕೈಯಲ್ಲಿದ್ದು ಸಮಾಜಕ್ಕೆ ಹೆಚ್ಚು ಉಪಯುಕ್ತವೆನಿಸುವ ಸಾದ್ಯತೆ ಇದೆ. ಅದುದರಿಂದ ಎಲ್ಲರೂ ಪರಸ್ಪರ ಕೈಚಾಚಲು  ಪ್ರಯತ್ನಿಸೋಣ.

ಪತ್ರಕರ್ತರು ವಯೋವೃದ್ದ ಜರ್ಮನ್ ಅದಿಕಾರಿಯನ್ನು ಬಂದಿಸಿದ ರೋಚಕ ಕಥೆ ಓದಲು ಕೆಳಗಿರುವ ಕೊಂಡಿಗಳು

Friday, July 11, 2008

ಮಾನವ ಚಾಲಿತ ಎಲ್ಲೆಡೆ ಸಾಗುವ ಗಾಡಿ

ಸ್ವಾವಲಂಬನೆ  ನೆಲೆಯಲ್ಲಿ  ನಾನು  ಸೈಕಲನ್ನು   ಪ್ರೀತಿಸಿದರೂ  ಇಂದಿನ  ದೈಹಿಕ  ದುರ್ಬಲತೆಯಿಂದ    ಸೈಕಲಿನಲ್ಲಿ  ಕೂರುವಂತಿಲ್ಲ.   ಹಾಗೆಯೇ  ಪೆಟ್ರೋಲ್  ಬಳಸುವ  ಸದಾಸಂ ನಿತ್ಯವೂ  ಉಪಯೋಗಿಸುವುದು  ಅನಿವಾರ್ಯವಾಗಿದೆ. ಇವೆರಡನ್ನೂ    ಜತೆಗೂಡಿಸಿದಂತಹ   ಒಂದು ಕುತೂಹಲಕರವಾದ  ವಾಹನ  ಜರ್ಮನಿಯಲ್ಲಿ  ಅನ್ವೇಷಣೆ  ಮಾಡಿದ್ದಾರೆ.

ಇದೊಂದು ಜರ್ಮನಿಯಲ್ಲಿ ತಯಾರಾದ ನಾಲ್ಕು ಚಕ್ರಕ್ಕೂ ಚಾಲನೆ ಇರುವ ಎಲ್ಲೆಡೆ ಸಾಗಲು ಸಾದ್ಯವಾಗುವಂತಹ ಗಾಡಿ. ಒಂದು ದೊಡ್ಡ ವಸ್ತು ಪ್ರದರ್ಶನದಲ್ಲಿ ಇದರನ್ನು ತೋರಿಸಿದರೂ ದೊಡ್ದ ಮಟ್ಟದ ತಯಾರಿ ದೂರ ಇರುವಂತಿದೆ. ಅಲ್ಲಿ ಒಬ್ಬ ವೃತ್ತಿಪರ ಸೈಕಲಿಗ ಓಡಿಸಿದ ಕಾರಣ ಜನಸಾಮಾನ್ಯರಿಗೆ ಇದನ್ನು ತುಳಿಯಲು ಸಾದ್ಯವೋ ಅನ್ನುವುದು ಇನ್ನೂ ನಿಗೂಡ. ಅವರ ಸಾದನೆ ಮಾತ್ರ ಖಂಡಿತ ಮೆಚ್ಚುವಂತದ್ದು.

ಖಾಯಂ ಆಗಿ ನಾಲ್ಕು ಚಕ್ರಕ್ಕೂ ಚಾಲನೆ, ಹೈಡ್ರಾಲಿಕ್ ಬ್ರೇಕು ಮತ್ತು ಅತ್ಯುತ್ತಮ ಮಟ್ಟದ ಸೈಕಲ್ ಗೇರುಗಳ ಒಳಗೊಂಡ ಈ ವಾಹನದ ಬೆಲೆ ಬಹಳ ದುಬಾರಿಯಾಗಿರುವ ಎಲ್ಲ ಲಕ್ಷಣಗಳಿರುವ ಕಾರಣ ನಾವು   ಕನಸು ಕಾಣಬಹುದಾಷ್ಟೇ.


ನಾನು ಚೀನಾದಿಂದ ಸದಾಸಂ ತರಿಸುವ ಮೊದಲು ಇದಕ್ಕೆ ಹೋಲಿಕೆಯುಳ್ಳ ಆದರೆ ಪುಟ್ಟ ಇಂಜಿನ್ ಅಳವಡಿಸಿದ ಒಂದು ಸರಳ Go-kart ಇಲ್ಲಿ ತಯಾರಿಸುವ ಬಗ್ಗೆ ಬಹಳ ಯೋಚಿಸಿದ್ದೆ. ಆದರೆ ಯಾರೂ ನನ್ನಷ್ಟು ಆಸಕ್ತಿ ತೋರಿಸದ ಕಾರಣ ಆಲೋಚನೆ ಬಿಡಬೇಕಾಯಿತು. ಈಗ ಗಾಡಿಯ ಬಗೆಗೆ ಪ್ರಾಯೋಜಿಕ ಪರೀಕ್ಷೆಗಳೂ ನಡೆದಿಲ್ಲ. ಉಪಯುಕ್ತ ಎನಿಸುವುದಾದರೆ ಇದೇ ಮಾದರಿಯ ಸರಳ ವಾಹನ ನಮ್ಮಲ್ಲಿ ತಯಾರಿಸಲು ಖಂಡಿತ ಸಾದ್ಯ.


ವಿವರಗಳಿಗೆ

http://www.treehugger.com/files/2008/06/four-wheel-drive-bicycle.php

ಅಲ್ಲೂ  ಉಂಟು   ಸದಾಸಂ 

Wednesday, July 09, 2008

ಸದಾಸಂ ಮಾರಾಟ

ನನಗೆ ಉಪಯೋಗಿಸಲು ಬೇಕಾದದ್ದು ಒಂದು ಸದಾಸಂ. ಇನ್ನೇನು ತರಿಸಲು ಹಣ ಕಳುಹಿಸುವುದು ಎನ್ನುವ ಕೊನೆ ಹಂತದ ಸನ್ನಿವೇಶದಲ್ಲಿ ಅವರು ಹಾಕಿದ ಬಾಂಬು ನಮ್ಮಲ್ಲಿ ಚಿಲ್ಲರೆ ವ್ಯಾಪಾರ ಇಲ್ಲ. ಇವರಿಂದ ಬೇಡ ಎಂದು ನಾನು ಕಾಲು ಹಿಂದೆ ಇಟ್ಟರೆ ನನಗೆ ಅದೇ ವರ್ಷದ ಮಳೆಗಾಲದಲ್ಲಿ ಸದಾಸಂ ಉಪಯೋಗ ಮಾಡಿನೋಡಲು ಅಸಾದ್ಯ.

ಸೋಲುತ್ತಿರುವ ದೇಹದಿಂದಾಗಿ ಮಳೆಗಾಲದಲ್ಲಿ ತೋಟಕ್ಕೆ ಹೋಗುವುದು ಕೃಷಿಕನಾಗಿ ಉಳಿಯುವುದರ ಪ್ರಶ್ನೆಯಾಗುತ್ತಲಿತ್ತು. ಗುಣ ದೋಷಗಳನ್ನೆಲ್ಲ ಅವಲೋಕಿಸಿ ಅವರಿಗೆ ಹಣ ಕಳುಹಿಸಿದೆ. ಐದು ಯಂತ್ರಗಳು ನಮ್ಮ ಅಂಗಳದಲ್ಲಿ ಬಂದಿಳಿದವು. ನನಗೆ ಒಂದು ಉಪಯೋಗಕ್ಕೂ ಮತ್ತೊಂದು ಅಗತ್ಯವಾದರೆ ಬಿಡಿ ಬಾಗಗಳಿಗೂ ಇಟ್ಟುಕೊಳ್ಳುವ ಆಲೋಚನೆ ಮಾಡಿದೆ. ಉಳಿದವುಗಳ ಅವುಗಳ ಬಗ್ಗೆ ಅರಿವಿದ್ದ ಹಾಗೂ ಅಗತ್ಯವಿದ್ದವರು ಸಿಕ್ಕರೆ ಕೊಡುವುದೆಂದು ತೀರ್ಮಾನಿಸಿದೆ.

ಚೀನಾ ಮಾಲು. ಹೇಗುಂಟೋ ? ಪ್ರಶ್ನೆಗಳು ನಮ್ಮ ಎದುರಾಗುತ್ತವೆ. ಇದರ ಬಗೆಗೆ ಯಾರೂ ನನ್ನನ್ನು ದೂರುವುದು ನನಗೆ ಬೇಕಿರಲಿಲ್ಲ. ಹಾಗಾಗಿ ಗುಣಮಟ್ಟ ಬಗ್ಗೆ ನನಗೆ ಖಾತರಿಯಾದ ನಂತರವೇ ಮಾರಾಟ ಎಂದು ನಾನು ತೀರ್ಮಾನಿಸಿದ್ದೆ. ಈಗ ಹನ್ನೊಂದು ತಿಂಗಳ ಉಪಯೋಗ ನನಗೆ ಇದರ ಗುಣಮಟ್ಟದ ಬಗ್ಗೆ ದೈರ್ಯ ಕೊಟ್ಟಿದೆ. ಸಾಮಾನ್ಯ ಬದಲಿಸುವಂತಹ ಎಲ್ಲ ಸಾಮಾನುಗಳು ನಮ್ಮ ದ್ವಿ-ಚಕ್ರ ವಾಹನಗಳ ಬಿಡಿ ಬಾಗಗಳು ಹೊಂದುತ್ತವೆ.

ಬಾಯಾರಿದವನಿಗೆ ನೀರಿನ ರುಚಿ ಎಂಬಂತೆ ನನ್ನಂತಹ ವ್ಯಕ್ತಿಗಳಿಗೆ ನನ್ನ ಮೊದಲ ಅಧ್ಯತೆ. ಇವು ನಮ್ಮ ದೇಶದಲ್ಲಿ ತಯಾರಾಗುವುದಿಲ್ಲ. ವ್ಯಾಪಾರಿಗಳು ಹೇಳಿದ್ದೇ ಕ್ರಯ. ಒಂದೆರಡು ವಾಹನಗಳ ಪರದೇಶದಿಂದ ತರಿಸುವುದು ನಿಜಕ್ಕೂ ತಲೆಹರಟೆ ಕೆಲಸ. ನನಗೆ ಹೃದಯ ಚಿಕಿತ್ಸೆ ಆಗಿದೆ, ತೋಟಕ್ಕೆ ಹೋಗಲು ಸಾದ್ಯವಾಗುತ್ತಿಲ್ಲ ಎಂದೊಬ್ಬರು ಪರರಾಜ್ಯದಿಂದ ಪತ್ರಿಸಿದ್ದರು. ಅವರಿಗೆ ಸೂಕ್ತ ಸಲಹೆ ಸೂಚನೆಗಳನ್ನಿತ್ತೆ. ಅದುದರಿಂದ ನನ್ನಂತವರು ಸಂಪರ್ಕಿಸಿದರೆ ಅವರಿಗಾಗಿ ಉಳಿಯಲಿ ಎನ್ನುವ ನೆಲೆಯಲ್ಲಿ ಮಾರಾಟಕ್ಕೆ ಹೆಚ್ಚು ಆಸಕ್ತಿ ವಹಿಸುತ್ತಿಲ್ಲ.

ಹಾಗೆಂದು ಇವುಗಳಿಗೆ ಇರಬಹುದಾದ ಮಾರುಕಟ್ಟೆ ಬಹಳ ಸಿಮಿತವಾದುದು. ತಿಂಗಳಿಗೆ ಹತ್ತಾರು ಮಾರುವಂತಹ ವಾಹನ ಇದಲ್ಲ. ಪರಿಸರಕ್ಕೆ ಹಾನಿ ಮಾಡುವ ವಾಹನಗಳು ಸಾಮಾನ್ಯವಾಗಿ ನನಗೆ ಸಮ್ಮತವಲ್ಲವಾದರೂ ಇವು ಅಂಗವಿಲಕರ ಗಾಲಿ ಕುರ್ಚಿಯ ತರಗತಿಗೆ ಸೇರುವಂತಹದ್ದು ಎನ್ನುವ ಸಮದಾನ.


ವಾರಂಟಿ, ಕಸ್ಟಮರ್ ಸಪೋರ್ಟ್ ಎಂದು ತಲೆಕೆಡಿಸಿಕೊಳ್ಳಲು ನನಗೆ ಅಸಕ್ತಿಯಾಗಲಿ ಸಮಯವಾಗಲಿ ಇಲ್ಲ. ನಮ್ಮ ತೋಟಕ್ಕೆ ಹೋಗಲು ಕಷ್ಟ ಪಡುವವ ಇದನೆಲ್ಲ ಎಳೆದಾಕಿಕೊಳ್ಳುವ ಉಸಾಬರಿ ನನಗೇತಕೆ ?













ನನ್ನ ದೋರಣೆ ಅನಿಸಿಕೆಗಳ ರೀತಿಯಲ್ಲಿಯೇ ಈ ವ್ಯಂಗ್ಯ ಚಿತ್ರ ಕಂಡು ಅನಿಸಿಕೆ ಹಾಗೂ ಚಿತ್ರ ಎರಡನ್ನೂ ಹಂಚಿಕೊಳ್ಳುತ್ತಿದ್ದೇನೆ.

ಕೊನೆ ಮಾತು : ತಲೆಬರಹವೇ ಒಗಟಿನಂತಿದೆ ಎಂದು ಹೇಳಿಸಿಕೊಂಡ ನಂತರ ಈ ವಿವರಣೆ. ಇಂಗ್ಲೀಷಿನಲ್ಲಿ ATV ಯೆಂದು ಕರೆಸಿಕೊಳ್ಳುವ ವಾಹನಕ್ಕೆ ಹೆಸರು ಸದಾಸಂ ಸಕಲ ದಾರಿ ಸಂಚಾರಿ ಎಂಬ ಕನ್ನಡದ ನಾಮಕರಣ ಶ್ರೀಪಡ್ರೆಯವರು ಟಂಕಿಸಿದ್ದು.

ಅಲ್ಲೂ  ಉಂಟು:  ಸದಾಸಂ

Sunday, July 06, 2008

ನಿಮ್ಮ ಮಗಳನ್ನು ಪದವೀದರ ಕೃಷಿಕನಿಗೆ ಕೊಡುವಿರಾ ?

ಬೆಂಗಳೂರಿನಿಂದ ಪ್ರಕಟವಾಗುವ ಹವ್ಯಕ ಪತ್ರಿಕೆಯ 2008 ಫೆಬ್ರವರಿ ತಿಂಗಳ್ಲಿ ಪ್ರಕಟವಾದ ಈ ಶತಮಾನದ ಕೊನೆಯಲ್ಲಿ ಹಳ್ಳಿಯಲ್ಲಿ ಹವ್ಯಕರು ಇಲ್ಲವಾದರೆ ? ಎನ್ನುವ ಲೇಖನಕ್ಕೆ ಇದು ಪ್ರತಿಕ್ರಿಯೆ ಬರಹ. ಅಡಿಕೆ ಪತ್ರಿಕೆಯ ಅದುವೇ ಸಮಯ ಪ್ರಕಟವಾದ ಹಿರಿಯ ಹವ್ಯಕರಿಂದ ಬರೆಯಲ್ಪಟ್ಟ ಲೇಖನದಲ್ಲೂ ಇಲ್ಲೂ ಹಲವಾರು ಸಮಾನ ಅಂಶಗಳಿರುವ ಕಾರಣ ನನ್ನ ಪ್ರತಿಕ್ರಿಯೆಯಲ್ಲೂ ಕೆಲವಂಶ ನನ್ನ ಮೆ 22 ರ ಬ್ಲೋಗ್ ಮನೆಗೆ ಆಧಾರವಾಗಿರುವವನಿಗೆ ಶಾಪವಿಮೋಚನೆಯಿಲ್ಲ ಬರಹದಲ್ಲೂ ಕಾಣಬಹುದು.

ಹಳ್ಳಿಯಲ್ಲಿರುವ ಹೆಚ್ಚಿನ ಹವ್ಯಕರು ಕೃಷಿ ಅವಲಂಬಿತರು. ಬಹು ಪಾಲು ಜನ ಅನಿರೀಕ್ಷಿತ ಕ್ಷಣದಲ್ಲಿ ಆಸ್ತಿ ಪಾಲಿನ ವಿಚಾರದಲ್ಲಿ ಹೊಡೆತ ತಿಂದವರು. ಹಾಗಾಗಿ ಕೃಷಿಕರ ಅನಿಸಿಕೆಗಳ ಬಗ್ಗೆ ಪಟ್ಟಿ ಮಾಡುತ್ತಾ ಸಾಗುವೆ.

ಪ್ರತಿ ದಿನವೂ ಎಂಬಂತೆ ಹಳ್ಳಿಯಲ್ಲಿರುವ ಆಸ್ತಿ ಮಾರಿ ಪಟ್ಟಣ ಸೇರುತ್ತಿರುವ ಹವ್ಯಕರ ಸಂಖ್ಯೆ ಹಾಗೂ ಹಳ್ಳಿಗಳಲ್ಲಿ ಏರುತ್ತಿರುವ ಮದುವೆಯಾಗದ ಹುಡುಗರ ಸಂಖ್ಯೆ ಕಂಡು ನಾನು ಉಲ್ಲೇಖಿಸಿದ ಲೇಖನ ರೂಪುಗೊಂಡಿರಬಹುದು. ಇಂದು ನಿಜವಾಗಿ ನಮ್ಮ ಮುಂದಿರುವ ಪ್ರಶ್ನೆ -ಹವ್ಯಕರು ಒಂದು ಸಮಾಜವಾಗಿ ಉಳಿಯುವರೋ ? ನಶಿಸುವರೋ ? ಎನ್ನುವುದು ಹೆಚ್ಚು ಸಮಂಜಸ ಹೊರತು ಹಳ್ಳಿಯಲ್ಲಿ ಅನ್ನುವುದು ಅಪ್ರಸ್ತುತ ಎಂದು ನನಗೆ ಅನ್ನಿಸುತ್ತದೆ. ಒಂದು ಲೆಕ್ಕದಲ್ಲಿ ಕೆಲವು ದಶಕಗಳಲ್ಲಿ ಜನಸಾಗರದ ಮದ್ಯೆ ಪ್ರತ್ಯೇಕತೆ ಸಂಪೂರ್ಣ ಕಳಕೊಂಡ ಹವ್ಯಕರ ಸ್ಥಿತಿ ಅವಿಲಿನಲ್ಲಿರುವ ತರಕಾರಿಯಂತೆ ಅಗಲೂ ಬಹುದು.

ಹಳ್ಳಿಯಲ್ಲಿರುವ ಹುಡುಗರಿಗೆ ಮದುವೆಯಿಲ್ಲ ಎನ್ನುವ ಬಹುಕಾಲದ ಹೇಳಿಕೆ ಕಂಡು ರೋಸಿ ಹೋಗಿ ಈ ಪ್ರತಿಕ್ರಿಯೆ. ನೈಜ ಸಮಸ್ಯೆಯ ಅರಿಯುವ ಗೊಡವೆಗೆ ಹೋಗದೆ ಒಂದೇ ಮುಖದ ಹಲವು ಲೇಖನಗಳು ಪ್ರಕಟವಾಗಿವೆ. ಇದಕ್ಕೆ ನಮ್ಮ ಸಮಾಜದ ಊರ ಹೊರಗಿರುವ ಸಂಬಂದಿಗಳು ಪ್ರಮುಖ ಕಾರಣ ಎನ್ನುವುದು ನಂಬಲು ಸಾದ್ಯವಾಗದ ಕಟು ಸತ್ಯ. ಕುಟುಂಬದ ಸಂಪನ್ಮೂಲಗಳು ಬಹುಕಾಲದಿಂದ ಪಟ್ಟಣಾಬಿಮುಖವಾಗಿ ಚಲಿಸುತ್ತಿವೆಯಾದರೂ ಪರೀಸ್ಥಿತಿ ಇಷ್ಟು ಕೆಟ್ಟದಾಗಿರಲಿಲ್ಲ. ಈಗ ಹಳ್ಳಿವಾಸಿಗೆ ಉಳಿದವರ ಸೇವೆ ಮಾಡಿ ಮಾಡಿ ಲಂಗೋಟಿ ಉಳಿಸಿಕೊಳ್ಳಲು ಪರದಾಡುವ ಪರೀಸ್ಥಿತಿ.

ಲೇಖನದಲ್ಲಿ ಚರ್ಚಿಸಿದಂತೆ ಸಹಪಂಕ್ತಿ ಸಮಾಜದಿಂದ ಹುಡುಗಿಯನ್ನು ತರುವುದು ಸಮಸ್ಯೆ ಬಗೆ ಹರಿಸದು. ಇದರಿಂದ ಕೊಳುಯುತ್ತಿರುವ ಸಮಾಜಕ್ಕೆ ಸುಗಂದ ಪೂಸಿದಂತಾಗುವುದು ಅಷ್ಟೆ. ಮಾದ್ವರಿಗೆ ತಾವು ಹವೀಕರಿಂದ ಬಿನ್ನ ಅನ್ನುವ ಬಾವನೆ ಇರುವಾಗ ಹಲವಾರು ಹೊಸ ಬಗೆಯ ಸಮಸ್ಯೆಗಳು ಖಂಡಿತಾ ಈ ನವ ದಂಪತಿಗಳನ್ನು ಬಾದಿಸುತ್ತದೆ. ಅವನಿಗೆ ಸಹಪಂಕ್ತಿ ಸಮಾಜದ ಹೆಣ್ಣು ತರುವ ಎಂದು ಇತರರಿಗೆ ಹೇಳಲು ಹಕ್ಕಿದೆ ಎಂದು ನನಗನ್ನಿಸುವುದಿಲ್ಲ. ಹಾಗೆಂದು ನಾನು ಅಂತರ್ಜಾತಿ ವಿವಾಹದ ವಿರೋದಿಯೇನಲ್ಲ. ಆದರೆ ಏನೂ ತ್ಯಾಗ ಮಾಡದ ಇತರರಿಗಾಗಿ ಒಬ್ಬ ವ್ಯಕ್ತಿ ಮನೆಯ ಉಳಿವಿಗಾಗಿ ಎನ್ನುವ ನೆಪದಲ್ಲಿ ಬಲಿಪಶುವಾಗುವುದು ನನಗೆ ಸಮ್ಮತವಲ್ಲ. ಅಷ್ಟಕ್ಕೂ ಇತರ ಸಮುದಾಯದಿಂದ ಮದುವೆಯಾಗಿ ಹಳ್ಳಿಯಲ್ಲಿ ಸಾದಿಸುವುದು ಏನು ?? ಮತ್ತು ಯಾರಿಗಾಗಿ ?? ಎನ್ನುವ ಪ್ರಶ್ನೆಗಳನ್ನು ಹಾಕಿಕೊಳ್ಳಬೇಕಾಗುತ್ತದೆ.

ಪರಂಪರೆ ಉಳಿಯ ಬೇಕಾದರೆ ಸಮಾಜದ ದೋರಣೆ ಬದಲಾಗಬೇಕು ಹೊರತು ಇನ್ನೊಂದು ತಲೆಮಾರಿನ ಹುಡುಗರನ್ನು ಹರಿಕೆ ಕುರಿ ಮಾಡುವುದರಲ್ಲಿ ಅರ್ಥವಿಲ್ಲ. ಸಾಮಾಜಿಕ ಬದ್ದತೆ ಇರುವ ಎಳೆಯ ವಯಸ್ಸಿನವರ ದ್ವನಿ ಬಲೀಷ್ಟವಾದಾಗ ನಿರ್ಣಾಯಕ ಶಕ್ತಿಗಳು ಇವರ ಸಮಸ್ಯೆ ಅಲಿಸುವಾಗ ಸಮಸ್ಯೆ ಪರಿಹಾರವಾಗಬಹುದು. ಈ ಯುವಕ ಯುವತಿಯರ ಸಬಲಿಕರಣ ಇಂದಿನ ತುರ್ತು ಅಗತ್ಯ ಹೊರತು ಇತರ ಸಮಾಜದ ಹುಡುಗಿಯನ್ನು ತರುವುದಲ್ಲ.

ಮನೆ ದೆವರು ಊರ ದೇವಸ್ಥಾನ ಸಂಸ್ಕೃತಿ ಪರಂಪರೆ ಬಗೆಗೆ ಬೊಗಳೆ ಬಿಡುವ ಜನರು ಕಾರ್ಯಕ್ರಮದಲ್ಲಿ ಉತ್ಸವ ಮೂರ್ತಿಗಳಾಗಿ ಕಂಗೊಳಿಸುತ್ತರೆ. ಬದ್ದತೆ ವರ್ತನೆಯಲ್ಲಿರಬೇಕು ಹೊರತು ತೋರ್ಪಡಿಕೆಯಲ್ಲಿ ಅಲ್ಲ. ಇಲ್ಲಿರುವವನಿಗೆ ಅತ್ಮಗೌರವ ಅಡವಿಡುವ ಪರೀಸ್ಥಿತಿ. ತರವಾಡು ಮನೆಗೆ ಆದಾರವಾಗಿದ್ದಾನೆ ಎಂದು ಅಬಿಮಾನದ ಬದಲು ಮೂದಲಿಕೆ ಕೇಳುವ ಅವನ ಜೀವನ ನರಕ.

ಅಲ್ಲಲ್ಲಿ ಹುಟ್ಟಿಕೊಳ್ಳುತ್ತಿರುವ ಸ್ವಯಂ ಘೋಷಿತ ದೈವಿ ಶಕ್ತಿಗಳು ಸಹಾ ನಮ್ಮ ಹವ್ಯಕ ಸಂಸ್ಕೃತಿಗೆ ಪರಂಪರೆಗೆ ಮಾರಕ. ಆಕರ್ಷಕವಾಗಿ ಹೊರ ನೋಟ ಹೊಂದಿದ ಆದರೆ ಸಾಂಪ್ರದಾಯಕ ಶಿಷ್ಯ ವರ್ಗ ಇಲ್ಲದ ಇವು ತಮ್ಮ ಪ್ರಬಾವ ಹೆಚ್ಚಿಸಿಕೊಳ್ಳಲು ಹಲವಾರು ಆಟಗಳನ್ನು ಆಡುತ್ತವೆ. ಕ್ರೈಸ್ತ ಮತ್ತು ಇಸ್ಲಾಂ ಮತ ಪ್ರಚಾರಕರಿಗೆ ಬಿನ್ನವಲ್ಲದ ಇವುಗಳ predatory ದೋರಣೆ ನಮ್ಮ ಗುರು ಪೀಠಕ್ಕೆ ಮಾತ್ರವಲ್ಲ ಸಂಸ್ಕೃತಿ ಪರಂಪರೆಗೂ ಮಾರಕ. ಮನೆಯಲ್ಲಿರುವವಳಿಗಿಂತ ಇವಳೇ ಹೆಚ್ಚು ಅಕರ್ಷಕ ಎಂದು ಬಾವಿಸಿದಂತಾಗುತ್ತಿದೆ ನಮ್ಮವರ ವರ್ತನೆ.


ಕೆಲವು ಸಮಯದ ಹಿಂದೆ ವಿಶ್ವವಿದ್ಯಾನಿಲಯದ ಸಂಶೋದನ ವಿಧ್ಯಾರ್ಥಿಯೊಬ್ಬರು ವಂಶಶಾಹಿಗಳ ಬಗೆಗೆ ಅಧ್ಯಯನ ಮಾಡಲು ಹವ್ಯಕರನ್ನು ಆಯ್ದುಕೊಂಡಿಇದ್ದರು. ಕಾರಣ ಹವ್ಯಕರಲ್ಲಿ ಸಂಕರವಾದುದು ಕಡಿಮೆ. ಆದರೆ ಇನ್ನು ಮುಂದೆ ಹವ್ಯಕ ಜನಾಂಗ ಉಳಿಯ ಬೇಕಾದರೆ ಹಳ್ಳಿಯಲ್ಲಿ ಬೇರುಮಟ್ಟದಲ್ಲಿ ಪ್ರಯತ್ನಿಸಿದರೆ ಮಾತ್ರ ಸಾದ್ಯ. ಪಟ್ಟಣಗಳಲ್ಲಿ ಹವ್ಯಕೇತರ ಜತೆ ನಡೆಯುವ ಮದುವೆ ಪ್ರಮಾಣ ಶೇಕಡವಾರು ಹೆಚ್ಚುತ್ತಲಿದೆ. ಹೆಚ್ಚಿನ ವಿಧ್ಯಾಬ್ಯಾಸ ಮತ್ತು ಉನ್ನತ ಉಧ್ಯೋಗ ಇವೆರಡೂ ಇಂದಿನ ಜನಾಂಗದ ಯುವಜನರನ್ನು ಹವ್ಯಕ ಸಮಾಜದಿಂದ ದೂರ ಮಾಡುತ್ತಿವೆ. ಸಹ ಉಧ್ಯೋಗಿಗಳ ಸಹಪಾಠಿಗಳ ನಡುವೆ ನಡೆಯುವ ಮದುವೆ ಹೆಚ್ಚುತ್ತಲಿದೆ. ಅದುದರಿಂದ ಹೊಸ ಗಾಳಿ ಬೀಸದ ಹಳ್ಳಿಗಳಲ್ಲಿ ಮಾತ್ರ ಕೆಲವು ಹವ್ಯಕ ಕುಟುಂಬಗಳು ಈ ಶತಮಾನದ ನಡುವಿನಲ್ಲಿ ಕಾಣಸಿಗಬಹುದು.

ಹವಾಮಾನ ಬೆಳೆ ಬೆಲೆ ಕೂಲಿಯಾಳುಗಳ ತೊಳಲಾಡುತ್ತಿರುವ ರೈತ ಸುದ್ದಿಯಾಗುವುದೇ ಇಲ್ಲ. ರೈತನಾದವನು ರಾತ್ರಿ ವಿಧ್ಯುತ್ ಕಾಯುತ್ತಾ ನಿಶಾಚರನಾದರೆ ಪಟ್ಟಣದಲ್ಲಿರುವ ಪಾಲುದಾರ ಈ ವರ್ಷ ಮನೆಯಿಂದ ಎಷ್ಟು ಕೀಳಬಹುದೆಂದು ಕನಸು ಕಾಣುತ್ತಾ ಸುಖ ನಿದ್ರೆಯಲ್ಲಿರುತ್ತಾನೆ. ನಾಲ್ಕುಎಕ್ರೆ ಅಡಿಕೆತೋಟವ್ದವನಿಗಿಂತ ಪಟ್ಟಣದಲ್ಲಿ ನಾಲ್ಕು ಚಕ್ರದ ಆಮ್ಲೇಟು ಗಾಡಿಯವ ಚೆನ್ನಾಗಿ ಜೀವನ ನಡೆಸುತ್ತಾನೆ. ಮಕ್ಕಳನ್ನು ಪಾರ್ಕಿಗೆ ಹೇಂಡತಿಯನ್ನು ಸಿನೆಮಕ್ಕೆ ಕರೆದೊಯ್ಯಲು ಅವನಿಗೆ ಬಿಡುವು ಇರುತ್ತದೆ. ಕೃಷಿಯೆಂದರೆ ಹೈನುಗಾರಿಕೆಯೆಂದರೆ ಬಿಡುವಿನ ಕಲ್ಪನೆಯಿರದ ನಿರಂತರ ಒತ್ತಡದ ಉದ್ಯೋಗ. ಪಟ್ಟಣದಲ್ಲಿರುವ ಸಂಬಂದಿಗಳು ಹೆಚ್ಚು ಸಹಕರಿಸಿದರೆ ಹಳ್ಳಿಯಲ್ಲಿರುವವನ ಜೀವನ ಉತ್ತಮವಾಗಿರಲು ಸಾದ್ಯ.

ಹಳ್ಳಿಯಲ್ಲಿರುವವನ ಮಕ್ಕಳಿಗೆ ಪಟ್ಟಣದ ಮಕ್ಕಳ ಜೀವನ ಅವಕಾಶಗಳು ತೆರೆದುಕೊಳ್ಳುವುದಿಲ್ಲ. ಸಂಬಂದಿಕರ ಮಾತ್ರವಲ್ಲ ಮನೆಮಂದಿಯ ಅಬಿಮಾನದ ಕಣ್ಣೆಲ್ಲ ಊರ ಹೊರಗಿರುವವನ ಮತ್ತು ಅವನ ಮಕ್ಕಳ ಮೇಲೆ ಎಂಬ ವಿಚಾರದಿಂದ ಹಳ್ಳಿಯಲ್ಲಿವವನಿಗೆ ಬಂದನದಲ್ಲಿರುವ ಅನುಭವ. ಅದುದರಿಂದ ಮಕ್ಕಳ ವಿದ್ಯಬ್ಯಾಸದ ಮತ್ತು ಅವರು ವಾಪಾಸು ಹಳ್ಳಿಗೆ ಹಿಂತಿರುಗದ ನೆಪದಲ್ಲಿ ಬಹುಪಾಲು ಜನ ಹವ್ಯಕರು ಮುಂದೆಯೂ ಪಟ್ಟಣ ಸೇರಲಿದ್ದಾರೆ. ಒಂದು ಲೆಕ್ಕದಲ್ಲಿ ಹಳ್ಳಿಯಲ್ಲಿರುವುದರ ವಿರುದ್ದ ಎಲ್ಲರೂ ಮತ ಚಲಾಯಿಸುತ್ತಿದ್ದಾರೆ. ಹೆಚ್ಚು ಜನ ಪಟ್ಟಣ ಸೇರಿದಂತೆ ಪ್ರತ್ಯೇಕತೆ ಉಳಿಸಿಕೊಳ್ಳುವ ಸಾದ್ಯತೆ ಕ್ಷೀಣಿಸುತ್ತದೆ. ಜಾತಿಯೊಳಗಿನ ಬಾವನಾತ್ಮಕ ಸಂಬಂದಗಳು ಸಡಿಲವಾಗುತ್ತಾ ಹೋಗುತ್ತದೆ.

ಸಾಮಾನ್ಯವಾಗಿ ಹಳ್ಳಿಮನೆಯಲ್ಲಿ ಜರಗುವ ನಿರ್ಣಾಯಕ ಸಭೆಯಲ್ಲಿ ಸಮಸ್ಯೆಗಳ ಹೆಚ್ಚು ಅರಿವು ಇರುವ ಹಳ್ಳಿ ಮನೆಯ ಉಸ್ತುವಾರಿಯ ಸ್ಥಾನ ಕಾಫಿ ಚಾ ಸರಬರಾಜು ಮಾಡಿ ಮೂಲೆಯಲ್ಲಿ ಕೈ ತಟ್ಟಿ ನಿಲ್ಲುವುದಾಗಿರುತ್ತದೆ. ಬೆಂಗಳೂರಿನಲ್ಲಿರುವವರ ಅಮೇರಿಕದಲ್ಲಿರುವವರ ಬದಲಾಗಿ ಮನೆಯ ಉಸ್ತುವಾರಿಯ ಅದ್ಯಕ್ಷತೆಯಲ್ಲೇ ಈ ಸಭೆಗಳು ನಡೆಯ ಬೇಕು. ಆಗ ನಮ್ಮ ಸಮಾಜದ ಚೇತರಿಕೆ ಸಾದ್ಯ.

ನಿಜ ಹೇಳಿ ನೀವು ನಿಮ್ಮ ಮಗಳನ್ನು ಹಳ್ಳಿಯಲ್ಲಿರುವ ಕೂಡು ಕುಟುಂಬದ ಆಸ್ತಿ ನೋಡಿಕೊಳ್ಳುತ್ತಿರುವ ಪದವೀದರ ಕೃಷಿಕನಿಗೆ ಕೊಡುವಿರಾ ? ಹವ್ಯಕ ಸಮಾಜ ಉಳಿಯಲು ನಿಮ್ಮ ಪಾಲಿನ ಅಳಿಲು ಸೇವೆಗೆ ತಯಾರಿದ್ದಿರೋ ?





`

Wednesday, July 02, 2008

George W Bush ಸ್ಮರಣಾರ್ತ

ಅಮೇರಿಕದಲ್ಲೊಂದು ಬರ್ಜರಿ ಗುಂಡು ಪಾರ್ಟಿ. ಅಲ್ಲಿ ನಡೆದ ಚರ್ಚೆ ಮತ್ತು ತೀರ್ಮಾನದ ಮುಖ್ಯಾಂಶಗಳು ಈ ರೀತಿಯಾಗಿವೆ. ಬುಷ್ ಸಾಹೇಬರು ಸದ್ಯದಲ್ಲ್ಲಿ ಮಾಜಿಯಾಗುತ್ತಾರೆ. ದೇಶವನ್ನು ಲಗಾಡಿ ತೆಗೆಯಲು ಅವರ ಸಾದನೆ ನಿಜಕ್ಕೂ ಅದ್ಬುತ. ಅಸ್ತಿತ್ವದಲ್ಲಿ ಇಲ್ಲದ ಅಪಾಯಕಾರಿ ಅಸ್ತ್ರಗಳ ಹುಡುಕಿಕೊಂಡು ಅವರ ವೈಯುಕ್ತಿಕ ಸ್ವಾರ್ಥಕ್ಕಾಗಿ ಇರಾಕಿಗೆ ಸೇನೆ ಕಳುಹಿಸಿದ್ದಾರೆ. ಸೈನ್ಯ ಇರಾಕಿಗೆ ಹುಡುಕಲು ಹೋದದ್ದು ಅಪಾಯಕಾರಿ ಅಸ್ತ್ರಗಳನ್ನಲ್ಲ, ಅಲ್ಲಿನ ತೈಲ ಸಂಪತ್ತಿನ ವಶ ಪಡಿಸಿಕೊಳ್ಳುವುದಕ್ಕೆ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಪರಿಣಾಮವಾಗಿ ತೈಲ ಬೆಲೆ ನಾಲ್ಕು ಪಟ್ಟು ಏರಿದ್ದು ಹಾಗೂ ನಾಲ್ಕು ಸಾವಿರ ಅಮೇರಿಕದ ಸೈನಿಕರು ಅಲ್ಲಿ ಸತ್ತಿರುವುದು ನಮಗೆ ಜೀರ್ಣಿಸಿಕೊಳ್ಳಲು ಸಾದ್ಯವಾಗುತ್ತಿಲ್ಲ. ಅದರೆ ನಾಲ್ಕು ಲಕ್ಷ ಇರಾಕಿನ ಜನ ಸತ್ತರೂ ಅದು ಚರ್ಚಾಸ್ಪದ ವಿಚಾರವೇ ಅಲ್ಲ. ಜಾಗತಿಕ ಪರಿಸರಕ್ಕೆ ಮತ್ತು ಸಮಾಜಕ್ಕೆ ಬುಷ್ ಮಾಡಿದ ಹಾನಿ ಅಪರಿಮಿತ. ಹೀಗೆಲ್ಲ ಗುಂಡು ಪಾರ್ಟಿಯಲ್ಲಿ ಚರ್ಚೆಯಾಗಿ ಮಂಡನೆಯಾದ ಒಂದು ಕ್ರಾಂತಿಕಾರಿ ಪ್ರಸ್ತಾಪಕ್ಕೆ ನೆರೆದವರಿಂದ ಬಾರಿ ಬೆಂಬಲ ವ್ಯಕ್ತವಾಯಿತು. ಪ್ರಸ್ತಾಪ : ಊರ ಕೊಳಚೆ ನೀರಿನ ನಿರ್ಮಲಿಕರಣ ಕೇಂದ್ರಕ್ಕೆ ಬುಷ್ ಸಾಹೇಬರ ಹೆಸರಿಟ್ಟರೆ ಹೇಗೆ ??

ಪ್ರತಿಯೊಂದು ದೇಶದಲ್ಲಿ ಪ್ರಾತಸ್ಮರಣೀಯರನ್ನು ಗೌರವಿಸುವುದು ಸಂಪ್ರದಾಯ. ನಮ್ಮಲ್ಲಿ ಇಂದಿರಾ ಗಾಂದಿ, ನೆಹರು, ರಾಜೀವ ಗಾಂದಿಯವರ ಹೆಸರನ್ನು ರಸ್ತೆಗೆ, ವಿಮಾನ ನಿಲ್ದಾಣಕ್ಕೆ ಮತ್ತು ಆಸ್ಪತ್ರೆಗೆ ಇಟ್ಟಂತೆ ಅಮೇರಿಕದಲ್ಲೂ ಹಲವಾರು ಚಾರಿತ್ರಿಕ ಹಾಗೂ ಮುಖ್ಯ ಜಾಗಗಳಿಗೆ ಸೈನಿಕರ, ಮಾಜಿ ರಾಷ್ಟ್ರಾದ್ಯಕ್ಷರ, ವಿಜ್ನಾನಿಗಳ ಹೀಗೆ ಖ್ಯಾತನಾಮರುಗಳ ಹೆಸರುಗಳನ್ನು ಇಟ್ಟಿದ್ದಾರೆ. ಮಾಜಿ ಅದ್ಯಕ್ಷರಾದ ಲಿಂಕನ್ ಮತ್ತು ಕೆನಡಿ ಇವರಲ್ಲಿ ಪ್ರಮುಖರು. ಹಾಗೆಯೇ ಈ ಹೊಲಸು ಶುದ್ದಿಕರಣ ಕೇಂದ್ರಕ್ಕೆ ಬುಷ್ ಹೆಸರು.
ತಕ್ಷಣ ಕಾರ್ಯೋನ್ಮುಖರಾಗಿ ಅದಕ್ಕೊಂದು ನಿರ್ವಾಹಕ ಸಮಿತಿ ಏರ್ಪಟ್ಟು ಸಹಿ ಸಂಗ್ರಹಣೆ ಪ್ರಾರಂಬಿಸಿದರು. ಇದರೀಂದಾಗಿ ಖರ್ಚು ಹೆಚ್ಚೇನು ಇಲ್ಲ, ಬರೇ ಫಲಕಗಳಲ್ಲಿ ಹೆಸರು ಬದಲಾಯಿಸಿದರಾಯಿತು ಎನ್ನುವುದು ಈ ಸಮಿತಿ ಹೇಳಿಕೆ. ಜನಾಬಿಪ್ರಾಯ ಸಂಗ್ರಹ ಕೈಗೊಳ್ಳಲಿಕ್ಕೆ 7168 ಸಹಿಗಳು ಅವಶ್ಯವಾಗಿದ್ದು ಈಗಾಗಲೇ 10070 ಸಹಿಗಳನ್ನು ಸಂಗ್ರಹ ಮಾಡಿರುವರಂತೆ. ಈ ಅಭಿಯಾನ ಮುಂದುವರಿಯುತ್ತಲಿದ್ದು ಜುಲೈ 7 ರ ವರೆಗೆ ಸಹಿ ಸಂಗ್ರಹ ಅನಂತರ ಅದನ್ನು ಪೌರಾಡಳಿತಕ್ಕೆ ಒಪ್ಪಿಸಲಾಗುತ್ತದೆ. ಮತದಾನ ಅದಿಕಾರಿಗಳು ಆ ಸಹಿಗಳನ್ನು ನೈಜತೆಯ ಬಗ್ಗೆ ಪರಿಶೀಲನೆ ನಡೆಸಿ ಅವುಗಳಲ್ಲಿ 7168 ಸಹಿಗಳು ಸಾಚಾ ಆದಲ್ಲಿ ನವೆಂಬರ್ ತಿಂಗಳಲ್ಲಿ ಪ್ರಜಾಬಿಪ್ರಾಯ ಸಂಗ್ರಹಕ್ಕೆ ತೀರ್ಮಾನ ಕೈಗೊಳ್ಳುತ್ತಾರೆ. ಅದ್ಯಕ್ಷೀಯ ಚುನಾವಾಣೆ ಜತೆಯಲ್ಲಿಯೇ ಪರ ಯಾ ವಿರೋದ ಎನ್ನುವ ಮತಪತ್ರದೊಂದಿಗೆ ಈ ವಿಚಾರ ಜನರ ಮಂದಿಡಲಾಗುತ್ತದೆ. ಈ ಪ್ರದೇಶದಲ್ಲಿ ಬುಷ್ ವಿರೋದಿ ಪಕ್ಷಕ್ಕೆ ಹೆಚ್ಚಿನ ಬೆಂಬಲವಿರುವ ಕಾರಣ ಈ ಪ್ರಸ್ತಾಪ ಮತಗಟ್ಟೆಯಲ್ಲಿ ಗೆಲ್ಲುವ ಸಾದ್ಯತೆ ಇದೆಯಂತೆ. ಇದೊಂದು ಅಮೇರಿಕದಲ್ಲಿ ಪ್ರಜಾಪ್ರಬುತ್ವ ಕೆಲಸ ಮಾಡುವ ಉತ್ತಮ ಉದಾಹರಣೆ.


ಬುಷ್ ಹಿಂಬಾಲಕರು ಈ ಅವಮಾನಕರ (?) ಹೆಜ್ಜೆ ಬಗ್ಗೆ ಕೆಂಗಣ್ಣು ಬೀರುತ್ತಿದ್ದರೆ ವಿರೋದಿಗಳಲ್ಲೂ ಒಮ್ಮತವಿಲ್ಲ. ಕೆಲವರು ಈ ವ್ಯಕ್ತಿ ಶಾಶ್ವತ ಸ್ಮಾರಕಕ್ಕೆ ಯೋಗ್ಯನಲ್ಲವೆಂದೂ ಇನ್ನೂ ಕೆಲವರು ಅವನ ಹೆಸರು ಹಾಕಿದರೆ ಕೊಳಚೆ ಕೆಂದ್ರಕ್ಕೆ ಅವಮಾನ ಎಂದೂ ಹೇಳುತ್ತಿದ್ದಾರೆ. ಇದು ಜನರ ಅಬಿಪ್ರಾಯಕ್ಕೆ ಮುನ್ನಣೆ ಅಮೇರಿಕದಲ್ಲಿ ಮಾತ್ರ ಸಾದ್ಯ. ನಮ್ಮಲ್ಲೂ ಈ ರೀತಿ ಜನರ ಅಬಿಪ್ರಾಯ ಸಂಗ್ರಹಕ್ಕೆ ಅವಕಾಶವಿದ್ದರೆ ಬೆಂಗಳೂರಿನ ಕೊಳಚೆ ಸಂಗ್ರಹ ಕೇಂದ್ರವನ್ನು ಮಾಜಿ ಮಂತ್ರಿ ರೇವಣ್ಣನವರ ಅಪ್ಪ ಶ್ರೀ ದೇವೆಗೌಡರ ಹೆಸರು ಇಡುವ ಬಗ್ಗೆ ಆಲೋಚನೆ ಮಾಡಬಹುದಾಗಿತ್ತು. ಇಂದಿನ ಮಟ್ಟಿಗೆ ಅವರೇ ಅತ್ಯಂತ ಯೋಗ್ಯ ವ್ಯಕ್ತಿ.

ಯಾವುದಕ್ಕೂ ನವೆಂಬರ್ ತಿಂಗಳ ಮತದಾನ ನಿರ್ಣಾಯಕ. ನಿರ್ಣಯಕ್ಕೆ ಒಪ್ಪಿಗೆ ಲಬಿಸಿದರೆ ಬುಷ್ ಮಾಜಿ ಅದ್ಯಕ್ಷರಾಗುವಾಗಲೇ ಈ ಹೊಸ ಹೆಸರು ಜಾರಿಗೆ ಬರುತ್ತದೆ. ಕಾರ್ಯಕ್ರಮಕ್ಕೆ ನಿಮಗೆ ಸ್ವತಹ ಪಾಲ್ಗೊಳ್ಳಲು ಸಾದ್ಯವಿಲ್ಲವಾದರೆ ಶೌಚಾಲಯದಲ್ಲಿ ಒಮ್ಮೆ flush ಮಾಡಿದರೂ ಅದು ಚಪ್ಪಾಳೆ ತಟ್ಟಿದಂತೆಯೇ. ಅಂತೂ ಬರುವ ಜನವರಿ ಅನಂತರ ನೀವು ಅಮೇರಿಕದ ಸಾನ್ ಫ್ರಾನ್ಸಿಸ್ಕೊ ನಗರದಲ್ಲಿ ಶೌಚಾಲಯ ಉಪಯೋಗಿಸಿದರೆ ಅದು ನೇರವಾಗಿ ಬುಷ್ ಸ್ಮಾರಕ ಕೊಳಚೆ ಕೇಂದ್ರಕ್ಕೆ ಹೋಗುವ ಸಾದ್ಯತೆ ಉಜ್ವಲವಾಗಿರುತ್ತದೆ.


ಈ ಕೆಳ ಕಾಣುವ ಕೊಂಡಿ ಸಮಿತಿಯ ಅದಿಕೃತ ತಾಣ :