Friday, July 08, 2011

ಕೆನಡಾದ ವಿಕಲಾಂಗ ಮಹಿಳೆ ಕೈ ಚಾಲನೆ ತ್ರಿ ಚಕ್ರದಲ್ಲಿ ಬಾರತ ಅಳೆದದ್ದು


ಕಳೆದ ವಾರ ನನ್ನ ಪ್ರೀತಿಯ ನಾಯಿ ರಾಜುವನ್ನು ಪಶುವೈದ್ಯರಲ್ಲಿ ಕರಕೊಂಡು ಹೋದಾಗ ಹಿಂದಿನ ಬ್ರಿಯಾನ್ ಬಗೆಗಿನ ಪುಟದ ಬಗ್ಗೆ ಎರಡು ಮಾತುಗಳ ಹೇಳಿದ್ದೆ. ಮಾತಾಡುತ್ತಿರುವಾಗ ಡಾ ಪ್ರಸನ್ನಕುಮಾರ್ ಅವರು ಬ್ರಿಯಾನ್ ವಿಲ್ಸನ್ ಅವರಿಗೆ ವಿದ್ಯುತ್ ಅಳವಡಿಕೆ ಗೊತ್ತಿಲ್ಲವೇನೊ ಅನ್ನುವ ಸಂಶಯ ವ್ಯಕ್ತ ಪಡಿಸಿದ್ದರು. ಅಂದಿನ ಹುಡುಕಾಟದಲ್ಲಿಯೇ ಸ್ಲೊವೆನಿಯ ದೇಶದ ಸೈಕಲು ತಾಣವೊಂದರಲ್ಲಿ ಬಾರತಕ್ಕೆ ಸಂಬಂದಿಸಿದ ಈ ಕೆಳಗಿನ ಸುಳಿವು ಸಿಕ್ಕಿತು. http://www.udobnoposvetu.si/

ಇದೊಂದು ಕೆನಡ ದೇಶದ ಅಪಘಾತಕ್ಕೊಳಗಾದ ಕಾರಣ ದೇಹ ಸೋತ ೩೨ ವರ್ಷದ ಮಹಿಳೆ ಮೊರ್ಗನ್ ಬ್ರೇಡಾ ಅವರು ವಿದ್ಯುತ್ ಸಹಾಯಕ ಅಳವಡಿಸಿದ ಕೈ ಸೈಕಲಿನಲ್ಲಿ ಬಾರತವನ್ನು ಅಳೆದ ಕಥೆ. ಇದು ಹಲವು ಕಾರಣಗಳಿಗೆ ಹೆಚ್ಚು ಬೆಳಕು ಚೆಲ್ಲಬೇಕಾಗಿತ್ತು. ಅಂಗವಿಕಲತೆ ಮೀರಿ ನಡೆವ ಹಾಗೂ ವಿದ್ಯುತ್ ಸಹಾಯ ಸಮರ್ಥವಾಗಿ ಬಳಸುವ ಅತ್ಯುತ್ತಮ ಮಾರ್ಗದರ್ಶಿ ನಮಗಾಗಬಲ್ಲದು. ಸೊಂಟದ ಕೆಳಗೆ ವಶವಿಲ್ಲದ ಮಹಿಳೆ ಗಂಟೆಗಟ್ಟಲೆ ಕುಳಿತು ಸೈಕಲು ಚಾಲನೆ ಮಾಡುವುದು ಅದ್ಬುತವೇ ಸರಿ.http://theableproject.com/blog/


ನಾನು ಈ ಗುಂಪು ಪ್ರವಾಸದ ಬಗೆಗೆ ಮೊದಲು ಓದಿದರೂ ಈ ತ್ರಿಚಕ್ರ ಚಾಲಕಿ ಬಗೆಗೆ ಆಗ ಸುಳಿವು ಗೋಚರಿಸಿರಲಿಲ್ಲ. ಏಳು ವಾರಗಳಲ್ಲಿ ಅಗ್ರಾದಿಂದ ಕನ್ಯಾಕುಮಾರಿ ತನಕ ಸುಮಾರು ನಾಲ್ಕು ಸಾವಿರ ಕಿಮಿ ಇವರು ತ್ರಿ ಚಕ್ರ ತಿರುಗಿಸಿದ್ದರು. ಅದರ ಬಾಗವಾಗಿ ನಾನು ಕಳೆದ ವರ್ಷ ಹೋದ ಹೊಸಪೇಟೆಯಿಂದ ಮೈಸೂರು ವರೆಗಿನ ರಸ್ತೆಯಲ್ಲಿಯೇ ಆದರೆ ವಿರುದ್ದ ದಿಕ್ಕಿನಲ್ಲಿ ಅವರು ಸಾಗಿದ್ದರು. ಗುಂಪು ಪ್ರವಾಸದ ಬಾಗಿಯಾದರೂ ಇವರಿಗೆ ವಿಶೇಷ ವ್ಯವಸ್ಥೆಗಳ ಮಾಡಲಾಗಿತ್ತಂತೆ. ವೈಯುಕ್ತಿಕ ಬೆಂಗಾವಲು ವಾಹನ ಮೋರ್ಗನ್ ಬ್ರೇಡಾ ಅವರನ್ನು ಅನುಸರಿಸುತ್ತಿತ್ತು. ಮುಂಬಯಿಯಲ್ಲಿ ೪೨ ತ್ರಿಚಕ್ರ ಸೈಕಲುಗಳ ಅಂಗವಿಕಲರಿಗೆ ದಾನ ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಇಂತಹ ನಿಯೊಜಿತ ಪ್ರವಾಸಗಳು ನಮ್ಮಲ್ಲಿ ಅಪರೂಪ. ಮುಂಚಿನ ಸಂಜೆಯೇ ಯಾತ್ರಿಗಳಿಗೆ ಮರುದಿನದ ದಾರಿ ಬಗೆಗೆ ಸ್ಪಷ್ಟ ಮಾಹಿತಿ ಕೊಡಲಾಗುತ್ತದೆ. ನಿರ್ಣಾಯಕ ತಿರುವುಗಳ ಬಗೆಗೆ ವಿವರಗಳು ಕೊಡುವುದು ಮಾತ್ರವಲ್ಲ, ರಸ್ತೆ ಬದಿಯ ಯಾವುದಾದರೂ ಮರಕ್ಕೋ ಕಂಬಕ್ಕೋ ಹಳದಿ ರಿಬ್ಬನ್ ಕಟ್ಟಿರುತ್ತಾರೆ. ಪ್ರವಾಸಿಗಳು ಏಕಾಂಗಿಯಾಗಿ ಅಥವ ಜತೆಗೂಡಿ ಸಾಗಬಹುದು. ನಡುದಿನಕ್ಕಾಗುವಾಗ ದಾರಿಯಲ್ಲಿ ಊಟದ ವಾಹನ ಇವರಿಗೆ ಕಾದಿರುತ್ತದೆ. ಹಾಗೆ ದಾರಿಯಲ್ಲಿ ಊರವರ ದೋಸ್ತಿ ಮಾಡಲು, ಡಬ್ಬಾ ಹೋಟೆಲ್ ನುಗ್ಗಲು ಎಲ್ಲಕ್ಕೂ ಈ ಸೈಕಲು ಸವಾರರು ಸ್ವತಂತ್ರರು.

ದಿನಕ್ಕೆ ಸುಮಾರು ೮೦ – ೧೦೦ ಕಿಮಿ ಪ್ರಯಾಣ. ಒಮ್ಮೆ ಅದು ೧೮೦ ಆದದ್ದೂ ಉಂಟಂತೆ. ನಾಲ್ಕು ಐದು ದಿನಗಳಿಗೊಮ್ಮೆ ಒಂದು ದಿನ ವಿಶ್ರಾಂತಿ. ಅಪಾಯಕರ ದಾರಿ ದಾಟಿಸಲು ವಾಹನ ವ್ಯವಸ್ಥೆ ಇದ್ದರೂ ಇವರ ಪ್ರವಾಸ ಯೋಜಿಸಿದವರೇ ಬಂಡಿಪುರದಲ್ಲಿ ಆನೆಯಲ್ಲಿ ತುಳಿಸಿಕೊಂಡು ಕೆಲವು ದಿನ ಆಸ್ಪತ್ರೆ ವಾಸ ಮಾಡಿದ್ದಾರೆ. ವೇಗವಾಗಿ ಸಾಗುವ ಕಾರಿನ ಹಾರ್ನ್ ಕೇಳಿ ಕೆರಳಿದ ಗಂಡಾನೆ ಇವರನ್ನು ಬಂದು ತುಳಿಯಿತಂತೆ. ಒಬ್ಬ ಕೆಟ್ಟ ಕಾರು ಚಾಲಕ ದೇಶದ ಮರ್ಯಾದೆಯನ್ನೇ ತೆಗೆದ ಅನ್ನೋಣ. http://is.gd/X6HSX8 ಮತ್ತು http://is.gd/pi3iDc ರಲ್ಲಿ ಈ ಘಟನೆ ವಿವರಗಳಿವೆ.

ಮೋರ್ಗನ್ ಬ್ರೇಡಾ ಅವರು ಬಾರತಕ್ಕೆ ಬಂದಿರುವುದು ಬರೇ ಪ್ರವಾಸಕ್ಕಲ್ಲ. ದೆಹಲಿಯ ವೈದ್ಯರೊಬ್ಬರ ಹತ್ತಿರ ಹೊಸ ಬಗೆಯ ಬೆನ್ನೆಲುಬು ಚಿಕಿತ್ಸೆಯನ್ನು ಪಡಕೊಳ್ಳಲು ಸಹಾ. ಈಗ ಬಹಳ ದುಬಾರಿಯಾದ ಸುಮಾರು ಇಪ್ಪತ್ತು ಲಕ್ಷ ರೂಪಾಯಿ ಖರ್ಚಾಗುವ ಚಿಕಿತ್ಸೆ ಯಶಸ್ವಿಯಾಗಿ ತನ್ನ ಕಾಲ ಮೇಲೆ ನಿಲ್ಲುವ ಅವರ ಗುರಿ ತಲಪಲು ಸಹಾಯಕವಾಗಲೆಂದು ಹಾರೈಸುತ್ತೇನೆ.

http://www.spinalcordinjuryzone.com/news/10431/riding-a-bike-with-her-hands


No comments: