Sunday, March 22, 2009

ಅಡಿಕೆ ಹಾಳೆಯ ಬಗೆಗೆ

ಮಾನ್ಯ  ಶ್ರೀವತ್ಸ ಜೋಷಿಯವರು  ಈ ವಾರದ ವಿಜಯ ಕರ್ನಾಟಕದ ಅಂಕಣವನ್ನು    ಅಡಿಕೆ ಹಾಳೆಯಲ್ಲೇ ಉಣಬಡಿಸಿದ್ದಾರೆ. ಒಂದಷ್ಟು ಕಡೆ ಅಡಿಕೆ ಹಾಳೆ ಹಿಡಿದುಕೊಂಡು ಓಡಾಡಿದ ನನ್ನನ್ನೂ ಉಲ್ಲೇಖಿಸಿದ್ದಾರೆ. Thank you, Mr Srivathsa Joshi.

http://www.vijaykarnatakaepaper.com/epaper/pdf/2009/03/22/20090322a_008101001.jpg

ಅಡಿಕೆ ಹಾಳೆಗೆ ವಿಶ್ವ ಮಟ್ಟದ ಪ್ರಚಾರ ಸಿಗುವುದು ಸ್ವಾಗತಾರ್ಹ. ಆದರೆ ಈಗ ಹೆಚ್ಚಿನ ಕೃಷಿಕರಿಗೆ ಇಂದಿನ ಕೂಲಿಯಾಳುಗಳ ಕೊರತೆಯಿಂದಾಗಿ ಹಾಳೆಯನ್ನು ಬಿಡಿ ಅಡಿಕೆಯನ್ನು ತೋಟದಿಂದ ಮನೆಗೆ ತರುವುದೇ ಸಾಹಸ.


ಅಡಿಕೆ ಕೊಯಿಲಾದ ನಂತರ ಕನಿಷ್ಟ ಮೂವತ್ತು ಬಿಸಿಲು ತೋರಿಸಿ ಒಳ ಹಾಕಿದರೆ ನಾವು ಗೆದ್ದಂತೆ. ಒಂದೆಡೆ ವಿಪರೀತ ಸೆಕೆಯೊಂದಿಗೆ ವಿದ್ಯುತ್ ಕಣ್ಣುಮುಚ್ಚಾಲೆ, ನೀರಿನ ಪರದಾಟ. ಈಗೆಲ್ಲ   ಸಂಜೆಗಾಗುವಾಗ ದೂರದಲ್ಲಿ ಗುಡುಗು ಕೇಳಿದರೆ ಅಂಗಳದಲ್ಲಿರುವ ಅಡಿಕೆ ನೆನಪಿಸಿಕೊಂಡ ನಮ್ಮ ಎದೆ ಬಡಿತ ಪಕ್ಕದಲ್ಲಿರುವವರಿಗೂ ಕೇಳಿಸುತ್ತದೆ. ನಮ್ಮಲ್ಲಂತೂ ಬಾಕಿಯಾದ ಕೆಲಸದ ರಾಶಿ ನೋಡುವಾಗ ಮೂರ್ಛೆ  ಹೋಗುವುದು ಮಾತ್ರ ಬಾಕಿ. Paralysis by analysis ಅಂತಾರಲ್ಲ ಹಾಗೆ.   ಹಾಳೆಯನ್ನೂ  ಸಹಾ   ಇದೇ  ಸಮಯದಲ್ಲಿ  ಶೇಖರಿಸಬೇಕು.  

ವ್ಯಾಪಾರ ವ್ಯವಹಾರದಲ್ಲಾದರೆ ಇಂತಹ ಸಮಸ್ಯೆಗೆ Queuing theory ಪರಿಹಾರ ಬೊಟ್ಟುಮಾಡುತ್ತದೆ. ಸರಳವಾದ ಉದಾಹರಣೆ ಎಂದರೆ ಒಂದು ಸರ್ವಸರಕು ಮಳಿಗೆಯಲ್ಲಿ ಪಟ್ಟಿ ಮಾಡಿಸಿ ಹಣಕೊಡುವಲ್ಲಿ ಸರತಿಯ ಸಾಲು. ಪ್ರತಿ ನಿಮಿಷಕ್ಕೆ ಎಷ್ಟು ಗಿರಾಕಿ ವ್ಯಾಪಾರ ಮುಗಿಸುತ್ತಾರೆ ಮತ್ತು ಒಬ್ಬ ಕಾರಕೂನ ಎಷ್ಟು ಗಿರಾಕಿಗಳ ನಿಬಾಯಿಸಬಲ್ಲ ಎನ್ನುವ ವಿಚಾರದಲ್ಲಿ ಉತ್ತರ ದೊರಕಿಸಿಕೊಂಡು ಬೇಕಾದಷ್ಟು ಕಾರಕೂನರ ನೇಮಿಸಿ ಅನಗತ್ಯ ಸರತಿಯ ಸಾಲು ಉದ್ದವಾಗುವುದನ್ನು ತಪ್ಪಿಸಲು ಸಹಕರಿಸುತ್ತದೆ. ಆದರೆ ನಮ್ಮಲ್ಲಿ ಉತ್ತರವಿದ್ದರೂ ಕೂಲಿಯಾಳುಗಳೇ ಕಾಣಿಸದಿದ್ದರೆ ………..

ಇಂದು ಅಡಿಕೆ ಹಾಳೆಗೆ ರೈತರಿಗೆ ಸಿಗುವ ಐವತ್ತು ಪೈಸೆ  ಪರಿಗಣಿಸಿದರೆ    ಸಿಮಿತ  ಸಂಖ್ಯೆಯಲ್ಲಿ    ಸಿಗುವ   ದುಬಾರಿ ಕೃಷಿ   ಕಾರ್ಮಿಕರಿಂದಾಗಿ ಹಾಗೂ ಹಾಳೆಯೊಂದಿಗೆ   ಜಮೀನಿನಿಂದ ಹೊರ ಕಳುಹಿಸುವ ಪೋಷಕಾಂಶಗಳಿಂದಾಗಿ  ಲಾಭದಾಯಕವಲ್ಲ. ರೈತರು ನಷ್ಟವಾದರೂ ದನ ಸಾಕುತ್ತಾರೆ ಟೊಮೆಟೊ ಬೆಳೆಯುತ್ತಾರೆ. ಹಾಗೆಯೇ ಇದೊಂದು ನಗದು ಹಣದ ಮೂಲ.

ಕೃಷಿಕನ  ಮಟ್ಟಿಗೆ    ಅಡಿಕೆ ಮರದ ಹಾಳೆಯೂ ತ್ಯಾಜ್ಯವಲ್ಲ. ಅಡಿಕೆ ಮರಕ್ಕೆ  ಅಗತ್ಯವಿರುವ   ಸಾಕಷ್ಟು ಪೋಶಕಾಂಶವನ್ನು  ಹೊಂದಿದೆ.   ಉಪಯೋಗದ ಬಗೆಗೆ ಶ್ರೀ ಜೋಷಿಯವರೂ ಬೆಳಕು ಚೆಲ್ಲಿದ್ದಾರೆ. ಯಾವ ತ್ಯಾಜ್ಯವನ್ನೂ ನಾವು ತೋಟದಿಂದ ಹೊರಗೆ ಸಾಗಿಸದಿದ್ದರೆ ಅಡಿಕೆ ಮರಕ್ಕೆ ಬೇರೆ ಗೊಬ್ಬರ ಉಣಿಸುವುದು ಬೇಡ. ನಮಗೆ ಪೂರ್ತಿ ತ್ಯಾಜ್ಯವನ್ನು ಬುಡಕ್ಕೆ ಹಾಕಲು ಸಾದ್ಯವಾಗುತ್ತಿಲ್ಲ. ಅದುದರಿಂದ ಗೊಬ್ಬರ ಅವಲಂಬನೆ ಅನಿವಾರ್ಯವಾಗುತ್ತದೆ.
ಶ್ರೀ ಜೋಷಿಯವರು   ಹಾರೈಸಿದಂತೆ  ಬರಾಕ್  ಒಬಾಮರ  ಮಕ್ಕಳು  ಜಾರುಬಂಡಿಯಲ್ಲಿ  ಆಡಲು  ನೂಡಲ್ಸ್  ತಿನ್ನಲು  ನಮ್ಮೂರಿನಿಂದ   ಹೋದ   ಅಡಿಕೆಹಾಳೆ ತಟ್ಟೆಯನ್ನೇ  ಉಪಯೋಗಿಸಲೆಂದು   ಆಶಿಸೋಣ.

5 comments:

jomon varghese said...

informative

Sushrutha Dodderi said...

ನಮ್ಮೂರಲ್ಲೂ ಮಾಡ್ತಿದೀವಿ ಈಗ ಹಾಳೆತಟ್ಟೆ.. ಹಾಗಾಗಿ ನಂದೂ ಹಾರೈಕೆ ಇದೆ. ;)

Govinda Nelyaru said...

ಪ್ರಿಯ ಜೋಮೋನ್
ನನ್ನ ಬರಹ ಓದಿದುದಕ್ಕೆ
ಮತ್ತೆ ಪ್ರೀತಿ ಇಟ್ಟು ಪ್ರತಿಕ್ರಿಯಿಸಿದ್ದಕ್ಕೆ
ವಂದನೆಗಳು
ಗೋವಿಂದ

Govinda Nelyaru said...

ಪ್ರಿಯ ಸುಶ್ರುತ
ಅಭಿಪ್ರಾಯಕ್ಕೆ ಕೃತಜ್ನತೆಗಳು
ಭಾರತದಿಂದ ಹೋದ ಹಾಳೆ ಬಾರತದೊಂದಿಗೆ ಗುರುತಿಸಿದರೆ ಚೆನ್ನ. ಆದರೆ ವ್ಯಾಪಾರಿ ಹಿತಾಸಕ್ತಿಗಳು south east asia ಎನ್ನುತ್ತಾರಲ್ಲ. ಈ ವಸ್ತುವಿಗೆ ಎಲ್ಲ ಕಡೆಯಿಂದ ಬೇಡಿಕೆ ಬರಲೆಂದು ಹಾರೈಸೋಣ.

ಗೋವಿಂದ

NATESH said...

interesting